ಆರ್.ಸಿ.ಬಿ ವಿಜಯೋತ್ಸವದ ವೇಳೆ ಕಾಲ್ತುಳಿತದ ಎಫೆಕ್ಟ್, ಚಿನ್ನಸ್ವಾಮಿ ಕ್ರೀಡಾಂಗಣದಿಂದ ಅಂತರಾಷ್ಟ್ರೀಯ ಪಂದ್ಯಗಳು ಸ್ಥಳಾಂತರ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಕಪ್ ಗೆದ್ದ ಸಂಭ್ರಮದಲ್ಲಿ ಮಿಂದೆದ್ದಿತ್ತು ಅಭಿಮಾನಿ ಗಣ. ಆದರೆ ಆ ಸಂಭ್ರಮ ಹೆಚ್ಚು ಹೊತ್ತು ಉಳಿಯಲಿಲ್ಲ. 18 ವರ್ಷಗಳಿಂದ ಕಾಯುತ್ತಿದ್ದ ಕಪ್ ಸಂಭ್ರಮ ಕೇವಲ 18 ಗಂಟೆಗಳೊಳಗೆ ಮಾಯವಾಗಿತ್ತು. ಕಾರಣ, ಆರ್.ಸಿ.ಬಿ ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಭಾಗದಲ್ಲಿ ನಡೆದ ಕಾಲ್ತುಳಿತ. ಭೀಕರ ಕಾಲ್ತುಳಿತದಲ್ಲಿ 11 ಮಂದಿ ಆರ್.ಸಿ.ಬಿ ಅಭಿಮಾನಿಗಳು ಪ್ರಾಣ ಕಳೆದುಕೊಂಡಿದ್ದರು.
ಆ ದುರ್ಘಟನೆಯ ನೇರ ಪರಿಣಾಮ ಇದೀಗ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ ತಟ್ಟಿದೆ. ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಭಾರತ ಎ ಹಾಗೂ ದಕ್ಷಿಣ ಆಫ್ರಿಕಾ ಎ ತಂಡಗಳ ನಡುವಿನ 3 ಪಂದ್ಯಗಳ ಏಕದಿನ ಸರಣಿಯನ್ನು ಬೆಂಗಳೂರಿನಿಂದ ರಾಜ್’ಕೋಟ್’ಗೆ ಬಿಸಿಸಿಐ ಸ್ಥಳಾಂತರ ಮಾಡಿದೆ.

ಈ ಹಿಂದಿನ ವೇಳಾಪಟ್ಟಿಯ ಪ್ರಕಾರ ಭಾರತ ಎ ಹಾಗೂ ದಕ್ಷಿಣ ಆಫ್ರಿಕಾ ಎ ತಂಡಗಳ ಮಧ್ಯೆ ನವೆಂಬರ್ 13, 16 ಹಾಗೂ 19ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಏಕದಿನ ಪಂದ್ಯಗಳು ನಡೆಯಬೇಕಿದ್ದವು. ಆದರೆ ಆರ್.ಸಿ.ಬಿ ವಿಜಯೋತ್ಸವದ ಸಂದರ್ಭದಲ್ಲಿ ನಡೆದ ಕಾಲ್ತುಳಿತದ ಘಟನೆಯ ನಂತರ ಈ ಪಂದ್ಯಗಳನ್ನು ರಾಜ್’ಕೋಟ್’ಗೆ ಸ್ಥಳಾಂತರ ಮಾಡಲಾಗಿದೆ.


ಆದರೆ ಭಾರತ ಎ ಮತ್ತು ದಕ್ಷಿಣ ಆಫ್ರಿಕಾ ಎ ತಂಡಗಳ ಮಧ್ಯೆ ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ ಮೈದಾನದಲ್ಲಿ ನಡೆಯಲಿರುವ ಎರಡು ದ್ವಿದಿನ ಪಂದ್ಯಗಳ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಈ ಎರಡು ಪಂದ್ಯಗಳು ನಿಗದಿಯಂತೆ ಬೆಂಗಳೂರಿನಲ್ಲೇ ನಡೆಯಲಿವೆ. ಆದರೆ ಅವಘಡಕ್ಕೆ ಸಾಕ್ಷಿಯಾದ ಚಿನ್ನಸ್ವಾಮಿ ಕ್ರೀಡಾಂಗಣದ ಪಂದ್ಯಗಳ ಆತಿಥ್ಯವನ್ನು ರಾಜ್ಯ ಕ್ರಿಕೆಟ್ ಸಂಸ್ಥೆಯಿಂದ ಬಿಸಿಸಿಐ ಕಸಿದುಕೊಂಡಿದೆ.