Categories
ಉಡುಪಿ ಜಿಲ್ಲಾ ಟೆನ್ನಿಸ್ಬಾಲ್ ಕ್ರಿಕೆಟ್ ಸ್ಪೋರ್ಟ್ಸ್

ಪಡುಕೋಣೆಯಲ್ಲಿ ಪ್ರಪ್ರಥಮ ಬಾರಿಗೆ ನಡೆಯುತ್ತಿದೆ ರಾಷ್ಟ್ರ ಮಟ್ಟದ ವಾಲಿಬಾಲ್ ಹಾಗೂ ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಕೂಟ…!

ಪಡುಕೋಣೆಯ *ಗ್ರೆಗರಿ ಪ್ರೌಢಶಾಲಾ* ಮೈದಾನ ನಾಳೆಯಿಂದ ಮೂರು ದಿನ *(ಮಾರ್ಚ್ 24 ಶುಕ್ರವಾರ – 26 ಭಾನುವಾರ*)ಒಂದು ಅಪರೂಪದ ಕ್ರೀಡಾಕೂಟಕ್ಕೆ ಸಾಕ್ಷಿಯಾಗಲಿದೆ.
ಈ ಹಿಂದೆ ಹತ್ತಾರು ಸಮಾಜಮುಖಿ ಕ್ರೀಡಾಕೂಟಗಳನ್ನು ನಡೆಸಿಕೊಂಡು ಬಂದಿರುವಂತಹ ಈ ಭಾಗದ ಹೆಮ್ಮೆಯ ಸಂಸ್ಥೆಯಾದ *ಪಡುಕೋಣೆ ಎಜುಕೇಶನ್ & ಸ್ಪೋರ್ಟ್ಸ್ ಪ್ರಮೋಟರ್ಸ್* ಇವರು ಈ ಹೊನಲು ಬೆಳಕಿನ ವಾಲಿಬಾಲ್ ಹಾಗೂ ಕ್ರಿಕೆಟ್ ಪಂದ್ಯಕೂಟವನ್ನು ಆಯೋಜಿಸುತ್ತಿದ್ದಾರೆ…*ದಿ.ಪ್ರಭು ಅರ್ಥರ್ ಪಿರೇರಾ* ಸ್ಮರಣಾರ್ಥ ಮೊದಲು ನಡೆಯುವ ವಾಲಿಬಾಲ್ ಟೂರ್ನಮೆಂಟಿನಲ್ಲಿ
*ಅಶ್ವಲ್ ರೈ(ಸೀನಿಯರ್ ಇಂಡಿಯಾ)*
*ಪಂಕಜ್ ಶರ್ಮಾ (ಸೀನಿಯರ್ ಇಂಡಿಯಾ)*
*ರತೀಶ್ (ಸೀನಿಯರ್ ಇಂಡಿಯಾ)*
*ಕಾರ್ತಿಕ್ ಮಧು (ಸೀನಿಯರ್ ಇಂಡಿಯಾ)*
*ಅನೂಪ್ ಡಿ ಕೋಷ್ಟಾ (ಸೀನಿಯರ್ ಇಂಡಿಯಾ)*
*ಮನೋಜ್ (ಸೀನಿಯರ್ ಇಂಡಿಯಾ)*
*ನಿಖಿಲ್ ಗೌಡ (ಇಂಡಿಯನ್ ಆರ್ಮಿ)*
*ರೈಸನ್ ರೆಬ್ಬೆಲ್ಲೋ (ಕರ್ನಾಟಕ ಸ್ಟೇಟ್)*
*ಪ್ರಮೋದ್ ಹೆಗ್ಡೆ ಚಿನ್ನ*
*ನವೀನ್ ಕಾಂಚನ್*
*ಹರಿಪ್ರಸಾದ್ ಚೋಟು (ಇಂಡಿಯನ್ ಜೂನಿಯರ್)*
*ರಾಕಿ*
ಮುಂತಾದ ರಾಜ್ಯ,ರಾಷ್ಟ್ರ,ಅಂತಾರಾಷ್ಟ್ರೀಯ ಮಟ್ಟದ ವಾಲಿಬಾಲ್ ಆಟಗಾರರು ಭಾಗವಹಿಸುತ್ತಿರುವುದು ನಮ್ಮೂರಿನ ಕ್ರೀಡಾಭಿಮಾನಿಗಳು ಹೆಮ್ಮೆ ಪಡುವಂತಹ ವಿಚಾರ…
ಜೊತೆಗೆ ಗತಕಾಲ ವೈಭವ ಸಾರುವ *ದಿ.ಸುರೇಶ್ ಡಿ ಪಡುಕೋಣೆ* ಇವರ ಕನಸಿನ ಕೂಸಾದ *ಅಪ್ಪೋಲೋ* ಮಾದರಿಯ  ಕ್ರಿಕೆಟ್ ಪಂದ್ಯಕೂಟದಲ್ಲಿ ಕೂಡ *ರಾಜ್ಯ,ರಾಷ್ಟ್ರ,ಮಟ್ಟದ* ಆಟಗಾರರಿಗೆ ಭಾಗವಹಿಸಲು ಮುಕ್ತ ಅವಕಾಶ ನೀಡಿದ್ದು ಇವರುಗಳು ಕ್ರೀಡಾಭಿಮಾನಿಗಳಿಗೆ ರಸಾದೌತಣ ಉಣಬಡಿಸುವುದರಲ್ಲಿ ಅನುಮಾನವಿಲ್ಲ…!
ನಮ್ಮೂರ ಮಹಾನ್ ಕ್ರೀಡಾ ಪ್ರೋತ್ಸಾಹಕರಾಗಿದ್ದ *ದಿ.ಸುರೇಶ್ ಡಿ ಪಡುಕೋಣೆ ಹಾಗೂ ದಿ.ಪ್ರಭು ಅರ್ಥರ್ ಪಿರೇರಾ* ಇವರ ಸ್ಮರಣಾರ್ಥ ನಡೆಯುವ ಈ ಮೂರು ದಿನದ ಕ್ರೀಡಾ ಮಹೋತ್ಸವ ಕಣ್ತುಂಬಿಕೊಳ್ಳಲು ನೀವು ಬರಲೇಬೇಕು….ನಿಮ್ಮವರನ್ನು ಕರೆತರಲೇಬೇಕು…ಯಾಕೆಂದರೆ ಮತ್ತೆ ಮತ್ತೆ ಇಂತಹ ಅದ್ಬುತ ಆಯೋಜನೆಯ ಕ್ರೀಡಾಕೂಟ ಕಾಣಸಿಗದು…!
*ಮರೆಯದಿರಿ ಮಾರ್ಚ್ 24 ಶುಕ್ರವಾರ ಸಂಜೆ 7 ರಿಂದ*
*ಸ್ಥಳ – ಗ್ರೆಗರಿ ಪ್ರೌಢಶಾಲಾ ಮೈದಾನ ಪಡುಕೋಣೆ*
*-ಎಮ್ ಪಿ ಬೆಳ್ಳಾಡಿ*
Categories
ಸ್ಪೋರ್ಟ್ಸ್

ಸರ್ವತೋಮುಖ ಅಭಿವೃದ್ಧಿಗೆ ಕ್ರೀಡೆ ಅವಶ್ಯ-ಎನ್.ಶಶಿಕುಮಾರ್ ಐ.ಪಿ.ಎಸ್

ಮಂಗಳೂರು: ಪಠ್ಯ ಚಟುವಟಿಕೆಗಳು ಜೀವನಕ್ಕೆ ಎಷ್ಟು ಮೌಲ್ಯಗಳನ್ನು ತಿಳಿಸಿ ಕೊಡುತ್ತದೆಯೋ ಅಷ್ಟೇ ಮಹತ್ವವನ್ನು ಕ್ರೀಡೆಗಳೂ ತಿಳಿಸುತ್ತದೆ.ವ್ಯಕ್ತಿತ್ವ ಬೆಳವಣಿಗೆಗೆ   ಮುಖ್ಯ ಪಾತ್ರ ವಹಿಸುವ ಕಬಡ್ಡಿಯಿಂದ ಸರ್ವತೋಮುಖ ಅಭಿವೃದ್ದಿ ಸಾಧ್ಯ.
ಅಷ್ಟೇ ಅಲ್ಲದೇ ಕಬಡ್ಡಿ ಪಂದ್ಯಾಟಕ್ಕೆ ನಡೆಸಿದ ಪೂರ್ವ ತಯಾರಿ ಇತರರಿಗೂ ಮಾದರಿ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರಾಗಿರುವ ಎನ್ ಶಶಿಕುಮಾರ್ ಐ.ಪಿ.ಎಸ್ ಶ್ಲಾಘನೆ ವ್ಯಕ್ತಪಡಿಸಿದರು. ಮಣೇಲ್ ಶ್ರೀನಿವಾಸ್ ನಾಯಕ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಬೊಂದೇಲ್ ಇಲ್ಲಿ ನಡೆಯುತ್ತಿರುವ ಮಣೇಲ್ ಶ್ರೀನಿವಾಸ್ ನಾಯಕ ಸ್ಮಾರಕ ಅಂತರ್ ಕಾಲೇಜು ಪದವಿ ಮಟ್ಟದ ಪುರುಷ ಹಾಗೂ ಮಹಿಳೆಯರ ಕಬಡ್ಡಿ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
      ಗೌರವ ಅತಿಥಿಗಳಾಗಿ ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ನಿರ್ದೇಶಕರಾಗಿರುವ ಡಾ. ಜೆರಾಲ್ಡ್ ಸಂತೋಷ್ ಡಿ’ ಸೋಜಾ ಮಾತನಾಡಿ  ಆಟದಲ್ಲಿ  ಸೋಲು ಗೆಲುವು ಸರ್ವೇ ಸಾಮಾನ್ಯ.ಸೋಲು ಗೆಲುವು ಎರಡನ್ನೂ ಸಮಾನವಾಗಿ ಸ್ವೀಕರಿಸುವ ಮನೋಭಾವ  ಬಹು ಮುಖ್ಯ.ದೈಹಿಕ ಕ್ಷಮತೆಯ ಈ ಆಟಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು ಎಂದರು.
       ವೇದಿಕೆಯಲ್ಲಿ  ವುಮೆನ್ಸ್ ನ್ಯಾಷನಲ್ ಎಜುಕೇಷನ್ ಸೊಸೈಟಿಯ ಅಧ್ಯಕ್ಷರಾಗಿರುವ ಮಣೇಲ್ ಅಣ್ಣಪ್ಪ ನಾಯಕ್,ಮಣೇಲ್ ಶ್ರೀನಿವಾಸ್ ನಾಯಕ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ನ ಸಂಚಾಲಕರಾಗಿರುವ ಜೀವನ್ ದಾಸ್ ನಾರಾಯಣ್, ವಿದ್ಯಾಸಂಸ್ಥೆಯ ಆಡಳಿತ ನಿರ್ದೇಶಕರಾಗಿರುವ ಡಾ.ಮೋಲಿ.ಎಸ್.ಚೌಧರಿ, ಉಪನ್ಯಾಸಕ ಸಂಯೋಜಕರಾಗಿರುವ ಡಾ.ರೀಮಾ ಆಗ್ನೆಸ್ ಫ್ರ್ಯಾಂಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
        ವಿದ್ಯಾರ್ಥಿನಿ  ಕು. ಅವಂತಿಕಾ ಪ್ರಾರ್ಥಿಸಿ,ವಿದ್ಯಾಸಂಸ್ಥೆಯ ಆಡಳಿತ ನಿರ್ದೇಶಕರಾಗಿರುವ ಡಾ.ಮೋಲಿ.ಎಸ್ ಚೌಧರಿ ಸ್ವಾಗತಿಸಿದರು.ಕಾಲೇಜಿನ ಉಪನ್ಯಾಸಕರಾಗಿರುವ ಶ್ರೀಮತಿ ನಂದಿತಾ ಸುನಿಲ್  ಕಾರ್ಯಕ್ರಮ ನಿರೂಪಿಸಿದರು.
Categories
ಸ್ಪೋರ್ಟ್ಸ್

ಹಿಟ್ಲರನ ಅಹಂಕಾರ ಮುರಿದ ನೀಗ್ರೋ ಜೆಸ್ಸಿ ಓವೆನ್ಸ್ !

45 ನಿಮಿಷಗಳಲ್ಲಿ ಐದು ಅಥ್ಲೆಟಿಕ್ ವಿಶ್ವದಾಖಲೆ ಆತನು ಮಾಡಿ ಮುಗಿಸಿದ್ದ! 
——————————————————-
1936 ಬರ್ಲಿನ್ ಒಲಿಂಪಿಕ್ಸ್ ಕೂಟ ಆರಂಭ ಆಗಿತ್ತು! 
ಹಿಟ್ಲರನ ಸರ್ವಾಧಿಕಾರದ ಶಿಖರ ಬಿಂದುವಿನ ಕಾಲ ಅದು!  ಅಮೇರಿಕಾವನ್ನು ನಖಶಿಖಾಂತ ದ್ವೇಷ ಮಾಡುತ್ತಿದ್ದ ಹಿಟ್ಲರ್ ಆ ಕೂಟದಲ್ಲಿ ಅಮೆರಿಕಾಕ್ಕೆ ಒಂದೇ ಒಂದು ಪದಕವು ಕೂಡ  ದೊರೆಯಬಾರದು ಎಂದು ಯೋಜನೆಯನ್ನು ಮಾಡಿದ್ದ!
ಅಮೆರಿಕಾದ ಕ್ರೀಡಾಪಟುಗಳಿಗೆ ಯಾವ ಕನಿಷ್ಠತಮ ಕ್ರೀಡಾ ಸೌಲಭ್ಯಗಳನ್ನು ನೀಡಿರಲಿಲ್ಲ! ಅವರಿಗೆ ತೊಂದರೆಯಾಗಲಿ  ಎಂದು ನಿಬಿಡ ವೇಳಾಪಟ್ಟಿಯನ್ನು ಮಾಡಿಸಿದ್ದ. ಅವರಿಗೆ ಸರಿಯಾದ ಆಹಾರವನ್ನು ಕೊಡಲಿಲ್ಲ. ಅಮೆರಿಕಾದ ಹೆಚ್ಚಿನ ಕ್ರೀಡಾಪಟುಗಳು ಶೂಸ್ ಕೂಡ ಇಲ್ಲದೆ ಬರಿಗಾಲಲ್ಲಿ, ಹಸಿದ ಹೊಟ್ಟೆಯಲ್ಲಿ ಓಡಬೇಕಾಯಿತು!
ಹಿಟ್ಲರನ ಅಹಂಕಾರ ಮುರಿಯಲು ಎಂಬಂತೆ ಆ ನೀಗ್ರೋ ಅಲ್ಲಿಗೆ ಬಂದಿದ್ದ! 
——————————————————-
ಆತನ ಹೆಸರು ಜೆಸ್ಸಿ ಓವೆನ್ಸ್. ಬಡತನದ ಬೆಂಕಿಯಲ್ಲಿಯೇ ಬೆಂದವನು. ಆತನ ಹೆತ್ತವರಿಗೆ ಹತ್ತು ಮಕ್ಕಳು. ಈತನೇ ಕಿರಿಯನು. ವರ್ಣದ್ವೇಷದ  ಪರಾಕಾಷ್ಟೆಯ ಕಾಲ ಅದು. ಆತನ ಅಜ್ಜ, ಅಪ್ಪ ಎಲ್ಲರೂ ಗುಲಾಮರೇ ಆಗಿದ್ದವರು! ಜೆಸ್ಸಿಯು  ಯೌವ್ವನಕ್ಕೆ ಕಾಲಿಡುವ ಮೊದಲೇ ಧಾನ್ಯಗಳ ಕ್ವಿಂಟಾಲ್ ತೂಕದ ಮೂಟೆಗಳನ್ನು ಹೊತ್ತು ಹೊಟ್ಟೆಪಾಡು ಮಾಡುತ್ತಿದ್ದ!
ಆದರೆ ಆತನಿಗೆ ಓಡುವುದು ಅಂದರೆ ಭಾರೀ ಪ್ರೀತಿ. ಒಬ್ಬ ಕ್ರೀಡಾಪಟುವಿಗೆ ಬೇಕಾದ ಉಕ್ಕಿನ ಮಾಂಸಖಂಡಗಳು, ಉದ್ದವಾದ ಕಾಲುಗಳು ಆತನಿಗೆ ಇದ್ದವು. ಅಂತಹ ಜೆಸ್ಸಿ ಓವೆನ್ಸ್ ಹಿಟ್ಲರನ ಅಹಂಕಾರ ಮುರಿಯಲೋ ಎಂಬಂತೆ ಅಮೆರಿಕಾದಿಂದ ಹಡಗನ್ನು ಏರಿ ಬರ್ಲಿನ್ ಒಲಿಂಪಿಕ್ಸನ  ಮೈದಾನಕ್ಕೆ ಬಂದಿದ್ದ,  ಬರಿಗಾಲಲ್ಲಿ ಓಡುವ ಸಂಕಲ್ಪದ ಜೊತೆಗೆ!
ಆದರೆ ಅವನಿಗೆ ಅಡಿಡಾಸ್ ಶೂ ಕಂಪೆನಿಯು ಒಂದು ಜೊತೆ ಸ್ಪೋರ್ಟ್ಸ್ ಶೂಗಳನ್ನು ಕೊಟ್ಟು ತನ್ನ ರಾಯಭಾರಿ ಆಗಿ ಘೋಷಣೆ ಮಾಡಿತು. ಹಾಗೆ ರಾಯಭಾರಿ ಆಗಿ ಆಯ್ಕೆ ಆದ ಜಗತ್ತಿನ ಮೊದಲ ಕರಿಯ ಕ್ರೀಡಾಪಟು ಜೆಸ್ಸಿ!
ಆತ ಆಗಲೇ ವಿಶ್ವ ಚಾಂಪಿಯನ್ ಆಗಿದ್ದ! 
———————————–
ಕೇವಲ ಒಂದು ವರ್ಷದ ಹಿಂದೆ ಅಂದರೆ 1935ರ ಇಸವಿಯ ಮೇ 25ರಂದು ಮಿಚಿಗನ್ ನಗರದಲ್ಲಿ ನಡೆದ ವಿಶ್ವಮಟ್ಟದ ಕ್ರೀಡಾಕೂಟದಲ್ಲಿ ಆತನು ಕೇವಲ 45 ನಿಮಿಷಗಳ ಸಣ್ಣ  ಅವಧಿಯಲ್ಲಿ ಐದು ವಿಶ್ವದಾಖಲೆಗಳನ್ನು  ಮಾಡಿ ಕೀರ್ತಿಯ ಶಿಖರವನ್ನು ತಲುಪಿದ್ದ! ಅದರ ಜೊತೆಗೆ ಒಂದು ವಿಶ್ವದಾಖಲೆ ಕೂಡ ಅವನು ಸರಿಗಟ್ಟಿದ್ದನು. ಈ ರೀತಿಯ ಸಾಧನೆಯನ್ನು ಜಗತ್ತಿನಲ್ಲಿ ಬೇರೆ ಯಾವ ಕ್ರೀಡಾಪಟುವೂ ಅದುವರೆಗೆ ಮಾಡಿರಲಿಲ್ಲ!  ಆದ್ದರಿಂದ ಒಲಿಂಪಿಕ್ಸ್ ಕೂಟವು ಆರಂಭ ಆಗುವ ಮೊದಲೇ ಆತ ‘ವಿಶ್ವದಾಖಲೆಯ ವೀರ’ ಎಂದು ಪ್ರಚಾರ ಪಡೆದಿದ್ದ!
ಆದ್ದರಿಂದ ಅವನನ್ನು ನೋಡಲು ಬರ್ಲಿನ್ ನಗರದ ಒಲಿಂಪಿಕ್ ಕ್ರೀಡಾಂಗಣದಲ್ಲಿ 80,000 ಜನರು ಕಿಕ್ಕಿರಿದು ಸೇರಿದ್ದರು! ಇಡೀ ಕ್ರೀಡಾಂಗಣದಲ್ಲಿ ಜೆಸ್ಸಿ ಜೆಸ್ಸಿ…….. ಎಂಬ ಉದ್ಘೋಷವು ಸಮುದ್ರದ ಅಲೆಗಳ ಹಾಗೆ ಅನುರಣನ ಆಗುತ್ತಿತ್ತು.
ಓವರ್ ಟು ಬರ್ಲಿನ್! 
——————————
1936ರ ಆಗಸ್ಟ್ 3ರಂದು ಬರ್ಲಿನ್ ಮೈದಾನದಲ್ಲಿ ಪ್ರೇಕ್ಷಕರ ಚಪ್ಪಾಳೆಗಳ ಸುರಿಮಳೆಯ ನಡುವೆ ಜೆಸ್ಸಿ ಟ್ರಾಕ್ ಪ್ರವೇಶ ಮಾಡಿದ್ದನು. ಅದು ನೂರು ಮೀಟರ್ ಇವೆಂಟ್. 10.3 ಸೆಕೆಂಡ್ಸ್ ಟೈಮಿಂಗ್ಸ್ ಮೂಲಕ ಆತ ಚಿನ್ನದ ಪದಕವನ್ನು ಗೆದ್ದಾಗಿತ್ತು!
ಮರುದಿನ ಆತ ಲಾಂಗ್ ಜಂಪ್ ಹಾರಬೇಕಾಗಿತ್ತು. ಕಾಲಿಗೆ ಶಕ್ತಿ ಉಡುಗಿದ ಹಾಗೆ ಆಗಿತ್ತು. ಆತ್ಮವಿಶ್ವಾಸವು ಕುಸಿದು ಹೋಗಿತ್ತು. ಆಗ ಅದೇ ಹಿಟ್ಲರನ ಜರ್ಮನಿಯ ಇನ್ನೊಬ್ಬ ಲಾಂಗ್ ಜಂಪರ್, ಲೂಝ್ ಲಾಂಗ್ ಅಂತ ಅವನ ಹೆಸರು, ಜೆಸ್ಸಿಯ ನೆರವಿಗೆ ಬರುತ್ತಾನೆ. ಆತನ ತಪ್ಪುಗಳನ್ನು ಗುರುತು ಮಾಡಿಕೊಡುತ್ತಾನೆ. ಧೈರ್ಯ ತುಂಬಿಸುತ್ತಾನೆ. ಆಗ ಧೈರ್ಯ ತುಂಬಿಕೊಂಡ ಜೆಸ್ಸಿ 26 ಅಡಿ 5 ಇಂಚು ದೂರಕ್ಕೆ ಹಾರಿ ಎರಡನೇ ಚಿನ್ನದ ಪದಕ ಪಡೆದನು!
ಆಗ ಇದೇ ಅಮೆರಿಕಾದ ಕರಿಯ ಆಟಗಾರ ಮತ್ತು ಅದೇ ಹಿಟ್ಲರನ ಜರ್ಮನಿಯ ಬಿಳಿಯ ಆಟಗಾರರು ಪರಸ್ಪರ ಆಲಿಂಗನವನ್ನು  ಮಾಡಿಕೊಂಡು ಅಭಿನಂದಿಸಿಕೊಂಡಾಗ  ಹಿಟ್ಲರ್ ಅದನ್ನು ನೋಡಲಿಕ್ಕೆ ಆಗದೆ ಗ್ಯಾಲರಿಯಿಂದ ಎದ್ದು ಹೋದ ಅನ್ನುತ್ತದೆ ಇತಿಹಾಸ!
ಆಗಸ್ಟ್ 5-1936 ಮೂರನೇ ಚಿನ್ನ!
———————————–
ಮೂರನೇ ಚಿನ್ನಕ್ಕಾಗಿ ಆತ 200 ಮೀಟರ್ ದೂರವನ್ನು  ಓಡಿದಾಗ ಮತ್ತೆ ವಿಶ್ವದಾಖಲೆ ನಿರ್ಮಾಣ ಆಯಿತು. ಚಿನ್ನದ ಪದಕ ಕೊರಳಲ್ಲಿ ಕೂತಿತು! ಅದು 20.7 ಸೆಕೆಂಡ್ ಪಕ್ಕಾ ಟೈಮಿಂಗ್ಸ್!
ಆಗಸ್ಟ್ ಒಂಬತ್ತರಂದು ನಾಲ್ಕನೇ ಚಿನ್ನಕ್ಕಾಗಿ ಆತ ತನ್ನ ದೇಶ  ಅಮೆರಿಕಾದ 4×100 ಮೀಟರ್ ರಿಲೆ ತಂಡವನ್ನು ಲೀಡ್ ಮಾಡಬೇಕಾಯಿತು. ಅಲ್ಲಿ ಕೂಡ ಚಿನ್ನದ ಪದಕ ಅವನಿಗೆ  ದೊರೆಯಿತು!
ಜೆಸ್ಸಿ ಓವೆನ್ಸ್ ಇತಿಹಾಸ ಬರೆದಿದ್ದ! 
———————————–
ಅದುವರೆಗೆ ಯಾವ ಕ್ರೀಡಾಪಟು ಕೂಡ ಒಂದೇ ಒಲಿಂಪಿಕ್ ಕ್ರೀಡಾಕೂಟದ ಟ್ರಾಕ್ ಇವೆಂಟಿನಲ್ಲಿ ಒಟ್ಟು ನಾಲ್ಕು ಚಿನ್ನದ ಪದಕಗಳನ್ನು ಪಡೆದಿರಲಿಲ್ಲ! ಬರ್ಲಿನ್ ಒಲಿಂಪಿಕ್ಸ್ ಆತನ ಮಹೋನ್ನತ ಸಾಧನೆಗೆ ಸಾಕ್ಷಿ ಆಯಿತು. ಅದರ ಜೊತೆಗೆ ಸರ್ವಾಧಿಕಾರಿ ಹಿಟ್ಲರನ ಅಹಂಕಾರ ನಾಶವಾಗಿತ್ತು!
ಆ ಒಲಿಂಪಿಕ್ಸ್ ದಾಖಲೆಯು ಮುಂದಿನ 48 ವರ್ಷಗಳ ಕಾಲ ಅಬಾಧಿತ ಆಗಿತ್ತು ಎಂದರೆ ಜೆಸ್ಸಿ ಸಾಧನೆಯ ಎತ್ತರ ನಮಗೆ ಗೊತ್ತಾದೀತು. 1984ರ ಒಲಿಂಪಿಕ್ಸ್ ಕೂಟದಲ್ಲಿ ಅದೇ ಅಮೆರಿಕಾದ ಮತ್ತೋರ್ವ ಕರಿಯ ಓಟಗಾರ ಕಾರ್ಲ್ ಲೂಯಿಸ್ ನಾಲ್ಕು ಚಿನ್ನದ ಪದಕಗಳನ್ನು ಗೆದ್ದು ಜೆಸ್ಸಿಯ ಸಾಧನೆಯನ್ನು ಸರಿಗಟ್ಟುತ್ತಾನೆ.
1999ರಲ್ಲಿ ಬಿಬಿಸಿಯು ನಡೆಸಿದ ಜಾಗತಿಕ ಸಮೀಕ್ಷೆಯಲ್ಲಿ ಜೆಸ್ಸಿ ‘ಶತಮಾನದ ಆರು ಮಹೋನ್ನತ ಕ್ರೀಡಾಪಟುಗಳ’ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಪಡೆಯುತ್ತಾನೆ! ಅಮೆರಿಕಾ ಆತನಿಗೆ ‘ನ್ಯಾಷನಲ್ ಹೀರೋ’ ಎಂಬ ಗೌರವ ನೀಡಿತು. ಆತನ ಸಾಧನೆಯ ಮೇಲೆ ಹಾಲಿವುಡ್ ಸಿನೆಮಾಗಳು ಬಂದವು. ಹೀಗೆ ಜೆಸ್ಸಿ ಓವೆನ್ಸ್ ಬದುಕಿದ್ದಾಗಲೇ ದಂತಕತೆ ಆಗಿ ಬಿಟ್ಟ!
ಇದೆಲ್ಲದರ ಜೊತೆಗೆ 1936ರ ಒಲಿಂಪಿಕ್ಸ್  ಕೂಟದಲ್ಲಿ  ಹಿಟ್ಲರನ ಸೊಕ್ಕನ್ನು ಮುರಿದ ಕಾರಣಕ್ಕೆ ಆತನು ಜಗತ್ತಿನ ಕಣ್ಮಣಿ ಆಗಿದ್ದನು!
Categories
ಸ್ಪೋರ್ಟ್ಸ್

ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಜೀವನ ಕೌಶಲ್ಯ ವೃದ್ಧಿ”-ಗೌತಮ್ ಶೆಟ್ಟಿ ಟೊರ್ಪೆಡೋಸ್

ಉಡುಪಿ-“ಕ್ರೀಡೆಯಲ್ಲಿ ಭಾಗವಹಿಸುವುದರಿಂದ
ಸೋಲು-ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುವ ಸಾಮರ್ಥ್ಯ ಹಾಗೂ ಆತ್ಮಸ್ಥೈರ್ಯ ಹೆಚ್ಚಿ ಜೀವನ ಕೌಶಲ್ಯ ವೃದ್ಧಿಯಾಗುತ್ತದೆ.ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಕಡೆಗಳಲ್ಲಿ ಲೀಗ್ ಪ್ರಾರಂಭವಾಗಿದ್ದು,ಕ್ರೀಡಾಪಟುಗಳಿಗೆ ಕ್ರೀಡೆಯ ಮೂಲಕ ವೃತ್ತಿಗೂ ಹೆಚ್ಚಿನ ಸಹಕಾರಿಯಾಗಲಿದೆ”
ಎಂದು ಉಡುಪಿ ಜಿಲ್ಲಾ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಹಾಗೂ ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ನ ಛೇರ್ಮನ್ ಗೌತಮ್ ಶೆಟ್ಟಿ ತಿಳಿಸಿದರು.
ಇವರು ಅಕ್ಟೋಬರ್ 21 ಶುಕ್ರವಾರ ಉಡುಪಿಯ ಕನ್ನರ್ಪಾಡಿಯ ಸೈಂಟ್ ಮೇರೀಸ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ನಲ್ಲಿ ನಡೆದ ವಾರ್ಷಿಕ ಕ್ರೀಡಾಕೂಟದ ಉದ್ಘಾಟನೆ ನೆರವೇರಿಸಿ,ಕ್ರೀಡಾಪಟುಗಳನ್ನುದ್ದೇಶಿಸಿ ಮಾತನಾಡಿದರು.
ಈ ಸಂದರ್ಭ ಮುಖ್ಯ ಅತಿಥಿಗಳಾಗಿ  ಸಂಚಾಲಕರಾದ ರೆವರೆಂಡ್ ಫಾದರ್ ಚಾರ್ಲ್ಸ್ ಮೆನೇಜಸ್,ಪ್ರಾಂಶುಪಾಲ ರಾದ ರೆವರೆಂಡ್ ಫಾದರ್ ಜಾನ್ಸನ್ ಸೀಕ್ವೇರಾ,
ಉಪಾಧ್ಯಕ್ಷ ಬೋನಿಫಸ್ ಡಿಸೋಜಾ,ಶ್ರೀಮತಿ ಬೆನೆಡಿಕ್ಟಾ ಫೆರ್ನಾಂಡಿಸ್,ಚರ್ಚ್ ಆಡಳಿತ ಮಂಡಳಿ ಕಾರ್ಯದರ್ಶಿ ಮತ್ತು ಉಪ ಪ್ರಾಂಶುಪಾಲರಾದ ಶ್ರೀಮತಿ ರೀಟಾ ಕ್ವಾಡ್ರಸ್ ಉಪಸ್ಥಿತರಿದ್ದರು.ದೈಹಿಕ ನಿರ್ದೇಶಕ ಜೆರಾಲ್ಡ್
ಪಿಂಟೋ ಸ್ವಾಗತಿಸಿದರು.
Categories
ಸ್ಪೋರ್ಟ್ಸ್

ಎಂಕುಲ್ ಫ್ರೆಂಡ್ಸ್ ಕಲಾವಿದರು(ರಿ)ಹಿರಿಯಡಕ ಆಶ್ರಯದಲ್ಲಿ ವಾಲಿಬಾಲ್ ಪಂದ್ಯಾಕೂಟ-ಇಂಡಿಪೆಂಡೆನ್ಸ್ ಟ್ರೋಫಿ-2022

ಹಿರಿಯಡಕ- ಎಂಕುಲ್ ಫ್ರೆಂಡ್ಸ್‌ ಕಲಾವಿದರು (ರಿ.) ಹಿರಿಯಡಕ, ಉಡುಪಿ ಜಿಲ್ಲೆ ಇವರ ಆಶ್ರಯದಲ್ಲಿ ದೇಶದ ಎಪ್ಪತ್ತೈದನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ೧೯ ರ ವಯೋಮಿತಿಯ ಮತ್ತು ಉಡುಪಿ ಜಿಲ್ಲಾ ವ್ಯಾಪ್ತಿಯ ಗ್ರಾಮೀಣ ಮಟ್ಟದ ಪುರುಷರ ವಾಲಿಬಾಲ್ ಪಂದ್ಯಾಕೂಟ ನಡೆಯಲಿದೆ.
ಈ ಪಂದ್ಯಾಕೂಟವನ್ನು ಇಂಡಿಪೆಂಡೆನ್ಸ್ ಟ್ರೋಫಿ – ೨೦೨೨ ಎನ್ನುವ ನಾಮಾಂಕಿತದ ಮೇಲೆ ನಡೆಸಲಾಗುತ್ತಿದೆ. ದಿನಾಂಕ ೧೫-೦೮-೨೦೨೨ನೇ ಸೋಮವಾರ ಹಿರಿಯಡಕ ಸಮೀಪದ ಕೋಟ್ನಕಟ್ಟೆ ಮೈದಾನದಲ್ಲಿ ಈ ವ್ಯವಸ್ಥಿತ ಪಂದ್ಯಾವಳಿ ನಡೆಯಲಿದೆ.
ಪಂದ್ಯಾಕೂಟದ ವಿಜಯೀ ತಂಡಕ್ಕೆ ೫,೫೫೫ ನಗದು ಜೊತೆಗಾಗಿ ಟ್ರೋಫಿ ನೀಡಿ ಗೌರವಿಸಲಾಗುತ್ತದೆ. ರನ್ನರ್ಸ್ ಅಪ್ ತಂಡಕ್ಕೆ ೩,೩೩೩ ನಗದು ಮತ್ತು ಟ್ರೋಫಿ ನೀಡಲಾಗುತ್ತದೆ. ಬಹಳಷ್ಟು ವೈಯಕ್ತಿಕ ಬಹುಮಾನಗಳನ್ನು ನೀಡಲಾಗುತ್ತಿರುವ ಈ ವ್ಯವಸ್ಥಿತ ಪಂದ್ಯಾವಳಿಗೆ ಕ್ರೀಡಾಭಿಮಾನಿಗಳಿಗೆ ಆದರದ ಸ್ವಾಗತವನ್ನು ಬಯಸುತ್ತಿದೆ,
ಎಂಕುಲ್ ಫ್ರೆಂಡ್ಸ್‌ ಕಲಾವಿದರು (ರಿ.) ಹಿರಿಯಡಕ
Categories
ಸ್ಪೋರ್ಟ್ಸ್

ಕೊರಳಲ್ಲಿ ಚಿನ್ನದ ಪದಕ ಇದ್ದರೂ ಆಕೆಯ ಕಣ್ಣು ಯಾರನ್ನೋ ಹುಡುಕುತ್ತಿತ್ತು!

ಮೊನ್ನೆ ಆದಿತ್ಯವಾರದಂದು ಲಂಡನ್ನಿನ ಬರ್ಮಿಂಗ್ಹ್ಯಾಮ್  ನಗರದಲ್ಲಿ ನಡೆದ ಕಾಮನವೆಲ್ತ್ ಗೇಮ್ಸನ ಬಾಕ್ಸಿಂಗ್ ವಿಭಾಗದ ಪದಕ ಪ್ರದಾನ ಕಾರ್ಯಕ್ರಮವು ಒಂದು ಭಾವುಕ ಕ್ಷಣಕ್ಕೆ ಸಾಕ್ಷಿ ಆಯಿತು!
ಆಕೆ ನೀತು ಗಂಘಾಸ್. ವಯಸ್ಸು 21. ಭಾರತದ ಬಾಕ್ಸಿಂಗನ ನವೋದಿತ ತಾರೆ. ಇದು ಆಕೆಯ ಮೊದಲ ಕಾಮನವೆಲ್ತ್ ಗೇಮ್ಸ್ ಆಗಿತ್ತು. ಆಕೆಯನ್ನು ಈಗಲೆ ಜನರು ಬಾಕ್ಸಿಂಗ್ ಲೆಜೆಂಡ್ ಮೇರಿ ಕೋಮ್ ಜೊತೆ ಹೋಲಿಕೆ ಮಾಡಲು ತೊಡಗಿದ್ದರು.
ಕೊರಳಲ್ಲಿ ಚಿನ್ನದ ಪದಕವನ್ನು ತೋಡಿಸಿದಾಗ ಭಾರತದ ತ್ರಿವರ್ಣ ಧ್ವಜ ಮೇಲೇರುವ ಕ್ಷಣ, ಬ್ಯುಗಲ್ ರಾಷ್ಟ್ರಗೀತೆ ಜನಗಣಮನವನ್ನು ನುಡಿಸುವಾಗ ಆಕೆಯ ಕಣ್ಣಲ್ಲಿ ಗಂಗಾ ಭಾಗೀರಥಿ ಎಲ್ಲವೂ ಸುರಿಯಿತು. ಆದರೂ ಆಕೆಯ ಕಣ್ಣು ಯಾರನ್ನೋ ಹುಡುಕುತ್ತಿತ್ತು!
ಹೌದು, ಅವಳು ಹುಡುಕುತ್ತ ಇದ್ದದ್ದು ಅವಳ ಪ್ರೀತಿಯ ಅಪ್ಪನನ್ನು! ಅವರ ಹೆಸರು ಜೈ ಭಗವಾನ್. ಹರ್ಯಾಣ ಸರಕಾರಿ ಇಲಾಖೆಯಲ್ಲಿ ಒಬ್ಬ ಸಾಮಾನ್ಯ ನೌಕರ ಆಗಿದ್ದ ಅವರು ತನ್ನ ಮಗಳ ಸಾಧನೆಗೆ ಒತ್ತಾಸೆ ಆಗಿ ನಿಂತವರು. ಕಳೆದ ಮೂರು ವರ್ಷಗಳಿಂದ ಅವರು ವೇತನವಿಲ್ಲದ ರಜೆ ಹಾಕಿ ಮಗಳ ಜೊತೆಗೆ ಓಡಾಟ ಮಾಡುತ್ತಿದ್ದರು! ಮಗಳ ಕೋಚಿಂಗ್, ಆಹಾರ, ಪ್ರಯಾಣ ಎಲ್ಲ ಉಸ್ತುವಾರಿ ಕೂಡ ಅವರದ್ದೇ! ಬೆಳಿಗ್ಗೆ ನಾಲ್ಕು ಗಂಟೆಗೆ ಎದ್ದು ಮಗಳ ಜೊತೆ ಬಾಕ್ಸಿಂಗ್ ರಿಂಗ್ಸಗೆ ಬರುವ ಅಪ್ಪ ಮಧ್ಯರಾತ್ರಿ ಆದರೂ ಮಲಗುತ್ತಲೆ ಇರಲಿಲ್ಲ!
ಕೊರಳಲ್ಲಿ ಚಿನ್ನದ ಪದಕವನ್ನು ಧರಿಸಿ ಆಕೆ ವಿಜಯದ  ವೇದಿಕೆಯಿಂದ ಓಡಿ ಬಂದು ಸ್ಟೇಡಿಯಂ ಮೂಲೆಯಲ್ಲಿ ಮೈ ಮುದುರಿಕೊಂಡು ನಿಂತ ತನ್ನ ಅಪ್ಪನನ್ನು ಗಾಢವಾಗಿ ಅಪ್ಪಿಕೊಂಡಳು. ಇಬ್ಬರೂ ಬ್ಲಾಸ್ಟ್ ಆಗಿದ್ದರು! ಅಪ್ಪನಿಗೂ ಕಣ್ಣೀರು ನಿಯಂತ್ರಣ ಮಾಡುವುದು ಕಷ್ಟ ಆಗ್ತಿತ್ತು.
ರಿಂಗ್ಸಲ್ಲಿ ಸಿಂಹದ ಹಾಗೆ ಎರಗಿ ಹೋಗುವ ನೀತು ಹೊರಗೆ ಬಂದಾಗ ಮೆತ್ತನೆ ಮಾತಾಡುತ್ತಾಳೆ. ಅಪ್ಪನ ಮುಗ್ಧ ಮಗಳು ಆಗಿ ಬಿಡುತ್ತಾಳೆ. ಜನರು ಅವಳ ಆಟದ ಖದರು ನೋಡಿ ‘ಗಬ್ಬರ್ ಶೇರ್ನಿ’ ಎಂಬ ಅಡ್ಡ ಹೆಸರಿನಿಂದ ಕರೆಯುತ್ತಿದ್ದರು. ಅವಳು ಅಗ್ರೆಸ್ಸಿವ್ ಬಾಕ್ಸರ್. ಅಲ್ಲಿಂದ ಹೊರಗೆ ಬಂದಾಗ ಇನ್ನೋಸೆಂಟ್ ಮಗಳು!
ಮೂರು ವರ್ಷಗಳಿಂದ ವೇತನವೆ ಇಲ್ಲದ ಅಪ್ಪ ಮನೆಯ ಖರ್ಚಿಗೆ, ಮಗಳ ಕೋಚಿಂಗಗೆ, ವಿದೇಶಗಳ  ಪ್ರಯಾಣಕ್ಕೆ, ಆಹಾರಕ್ಕೆ, ಕ್ರೀಡಾ ಸಾಮಗ್ರಿಗೆ ಇತ್ಯಾದಿಗೆ ಎಲ್ಲಿಂದ ದುಡ್ಡು ಹೊಂದಿಸುತ್ತ ಇದ್ದರು ಅನ್ನುವುದೇ ಮಗಳಿಗೆ ಆಶ್ಚರ್ಯ! ಮಗಳು ಹಸಿದಾಗ ಅಪ್ಪ ಎಲ್ಲಿಂದಲೋ ದುಬಾರಿ ಆಹಾರ ತಂದು ಮಗಳಿಗೆ ತುತ್ತು ಕೊಡುತ್ತಿದ್ದರು. ನನ್ನ ಊಟ ಆಗಿದೆ ಮಗಳೆ, ನೀನು ಊಟ ಮಾಡು ಎಂದು ತಿನ್ನಿಸುತ್ತಿದ್ದರು. ಅಪ್ಪನ ಊಟ ಆಗಿಲ್ಲ ಎಂದು ಮಗಳಿಗೆ ತುಂಬಾ ತಡವಾಗಿ ಗೊತ್ತಾಗುತ್ತಿತ್ತು!
ಕಳೆದ ಆರು ವರ್ಷಗಳಲ್ಲಿ ಆಕೆ ಹತ್ತಾರು ದೇಶ ಸುತ್ತಾಡುವ ಪ್ರಸಂಗ ಬಂದಾಗ ಆಕೆಯ ನೆರಳಾಗಿ ಓಡಾಟ ಮಾಡಿದ್ದು ಅದೇ ಅಪ್ಪ! ಅವರಿಗೆ ಬಾಕ್ಸಿಂಗ್ ಪಟ್ಟುಗಳು ಗೊತ್ತಾಗುತ್ತ ಇರಲಿಲ್ಲ. ಆದರೂ ರಿಂಗ್ಸ್ ಹೊರಗೆ ನಿಂತು ಜೋರಾಗಿ ಕೂಗಿ ಸಪೋರ್ಟ್ ಮಾಡುತ್ತಿದ್ದರು. ಮಗಳಿಗೆ ರಿಂಗ್ಸಲ್ಲಿ ಗಾಯ ಆದಾಗ ಅವರ ಜೀವವೇ ಹಾರಿ ಹೋಗುತ್ತಿತ್ತು.
“ರಿಂಗ್ಸ್ ಒಳಗೆ ಚಿರತೆಯ ಹಾಗೆ ಓಡಾಡುವ ನನಗೆ ಜಗತ್ತು  ಎಲ್ಲವೂ ಮರೆತುಹೋಗುತ್ತಿತ್ತು. ಆದರೆ ನನಗೆ ಯಾವಾಗ ಏನು ಬೇಕು ಅನ್ನುವುದು ನನಗಿಂತ ಮೊದಲೇ ಅಪ್ಪನಿಗೆ ಗೊತ್ತಿರುತ್ತಿತ್ತು! ಅವರ ಸಪೋರ್ಟ್ ಇಲ್ಲ ಅಂದರೆ ನಾನಿಷ್ಟು ಎತ್ತರಕ್ಕೆ ಏರಲು ಸಾಧ್ಯವೇ ಇರಲಿಲ್ಲ” ಎಂದಾಕೆ ಹೇಳುವಾಗ ಅಪ್ಪ ಜೈ ಭಗವಾನ್ ಎದೆ ಉಬ್ಬಿಸಿ ನಿಂತಿದ್ದರು.
ತನ್ನ ಕೊರಳ ಚಿನ್ನದ ಪದಕವನ್ನು ಆಕೆ ತೆಗೆದು ತನ್ನ ಅಪ್ಪನ ಕೊರಳಿಗೆ ಹಾಕಿ ಅಪ್ಪನ ಕಣ್ಣೀರು ಒರೆಸಿದ್ದಳು. ಅಪ್ಪ ಅವಳ ನೆತ್ತಿಯ ಮೇಲೆ ಹೂ ಮುತ್ತು ಸುರಿದು ಜಗತ್ತನ್ನೇ ಮರೆತು  ನಿಂತಿದ್ದರು!
ಅವರ ಜೀವಮಾನದ ಬಹು ದೊಡ್ಡ  ಕನಸು ಅಂದು ನಿಜವಾಗಿತ್ತು.
                              ರಾಜೇಂದ್ರ ಭಟ್.ಕೆ
Categories
ಸ್ಪೋರ್ಟ್ಸ್

ವೆಂಕಟರಮಣ ಪಿತ್ರೋಡಿ-ಆಜಾದಿ ಕೀ ಅಮೃತ್ ಮಹೋತ್ಸವ- ಕ್ರೀಡಾಕೂಟ ಉದ್ಘಾಟನೆ

ಉದ್ಯಾವರ-75 ನೇ ಸ್ವಾತಂತ್ರ್ಯ ದಿನಾಚರಣೆ(ಆಜಾದಿ ಕೀ ಅಮೃತ್ ಮಹೋತ್ಸವ) ಪ್ರಯುಕ್ತ ,ಪಿತ್ರೋಡಿ ಶ್ರೀ ವೆಂಕಟರಮಣ ಭಜನಾ ಮಂದಿರ,ವೆಂಕಟರಮಣ ಸ್ಪೋರ್ಟ್ಸ್&ಕಲ್ಚರಲ್ ಕ್ಲಬ್(ರಿ)ಪಿತ್ರೋಡಿ ಮತ್ತು ಮಹಿಳಾ ಮಂಡಳಿ ಇವರ ಜಂಟಿ ಆಶ್ರಯದಲ್ಲಿ ಮಂಗಳವಾರ ಕ್ರೀಡಾಕೂಟ ಜರುಗಿತು.
 
ಭಜನಾ ಮಂದಿರದ ಅಧ್ಯಕ್ಷ ಗಂಗಾಧರ ಕರ್ಕೇರ ಮತ್ತು ವೆಂಕಟರಮಣ ಸ್ಪೋರ್ಟ್ಸ್& ಕಲ್ಚರಲ್ ಕ್ಲಬ್ ನ ಅಧ್ಯಕ್ಷ ನವೀನ್ ಸಾಲ್ಯಾನ್ ಜಂಟಿಯಾಗಿ ಚಾಲನೆಯನ್ನು ನೀಡಿದರು.ಆಯ್ದ ವಿವಿಧ ವಿಭಾಗಗಳಲ್ಲಿ ನಡೆದ ಕ್ರೀಡಾಕೂಟದಲ್ಲಿ 100ಕ್ಕೂ ಹೆಚ್ಚಿನ ಮಕ್ಕಳು ಭಾಗವಹಿಸಿದರು.
 
ಈ ಸಂದರ್ಭ ಮಹಿಳಾ ವಿಭಾಗದ ಅಧ್ಯಕ್ಷೆ ಭಾರತೀ ಚಂದ್ರ ಬಂಗೇರ,ಮಾಜಿ ಅಧ್ಯಕ್ಷೆ ರಾಜೀವಿ ಉಮೇಶ್ ಕರ್ಕೇರ,ಭಜನಾ ಮಂದಿರದ ಕಾರ್ಯದರ್ಶಿ ವಸಂತ್ ಸಾಲ್ಯಾನ್,ವೆಂಕಟರಮಣ ಸಂಸ್ಥೆಯ
ಉಪಾಧ್ಯಕ್ಷ ವಿಜಯ್ ಕೋಟ್ಯಾನ್,
ಕಾರ್ಯದರ್ಶಿ ಪ್ರವೀಣ್ ಕುಮಾರ್ ಪಿತ್ರೋಡಿ,ಉಮೇಶ್ ಕರ್ಕೇರ,
ಉಮಾನಾಥ ಕರ್ಕೇರ,ಲೋಕೇಶ್ ಸುವರ್ಣ,ನಾಗೇಶ್ ತಿಂಗಳಾಯ,ಮೋಹಿನಿ,ಸಬಿತಾ,ಪೂರ್ಣಿಮಾ,ರೇಖಾ
ಕರ್ಕೇರ,ಸಂಗೀತ ಮತ್ತಿತರರು ಉಪಸ್ಥಿತರಿದ್ದರು
Categories
ಸ್ಪೋರ್ಟ್ಸ್

ಕಾಮನ್‌ವೆಲ್ತ್ ಕ್ರೀಡಾ ಕೂಟದಲ್ಲಿ ಪಿವಿ ಸಿಂಧು ಅವರ ಅದ್ಭುತ ಆಟವನ್ನು ನೋಡಿದ ಆಸ್ಟ್ರೇಲಿಯಾದ ಹೆಸರಾಂತ ಕ್ರಿಕೆಟಿಗ ಡೇವಿಡ್ ವಾರ್ನರ್‌ ತಮ್ಮ ಇನ್‌ಸ್ಟಾಗ್ರಾಮ್‌ ಅಕೌಂಟ್ ನಲ್ಲಿ ಸಿಂಧು ಅವರ ಫೋಟೊವನ್ನು ಹಾಕಿ ಶುಭಾಶಯ ಕೋರಿದ್ದಾರೆ…!!

ಕಾಮನ್​ವೆಲ್ತ್​ನಲ್ಲಿ ಚಿನ್ನದ ಪದಕ ಸ್ವೀಕರಿಸಿದ ಸಿಂಧು ಅವರ ಫೋಟೋವನ್ನು ವಾರ್ನರ್ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಮತ್ತು ಅದರ ಅಡಿಯಲ್ಲಿ ಶೀರ್ಷಿಕೆಯನ್ನು ನೀಡಿ ಸಿಂಧುವನ್ನು ಹೊಗಳಿದ್ದಾರೆ.
ಆಸ್ಟ್ರೇಲಿಯಾದ ಡ್ಯಾಶಿಂಗ್ ಓಪನರ್ ಡೇವಿಡ್ ವಾರ್ನರ್ (David Warner) ಸಾಮಾಜಿಕ ಜಾಲತಾಣಗಳಲ್ಲಿ ನಿತ್ಯ ತುಂಬಾ ಸಕ್ರಿಯರಾಗಿದ್ದಾರೆ. ಅದರಲ್ಲೂ ಭಾರತೀಯರೆಂದರೆ ವಾರ್ನರ್ ಅಚ್ಚುಮೆಚ್ಚು ಈ ಆಭಿಮಾನದಿಂದಲೆ ಅವರು ತಮ್ಮ Instagram ಖಾತೆಯಲ್ಲಿ ವೀಡಿಯೊಗಳು ಮತ್ತು ಟ್ವೀಟ್‌ಗಳ ಮೂಲಕ ಮೈದಾನದ ಹೊರಗೆ ಅಭಿಮಾನಿಗಳನ್ನು ರಂಜಿಸುತ್ತಿತ್ತಾರೆ. ವಾರ್ನರ್ ಆಸ್ಟ್ರೇಲಿಯಾದಲ್ಲಿ ಮಾತ್ರವಲ್ಲದೆ ಕ್ರಿಕೆಟ್ ಆಡುವ ಪ್ರಪಂಚದ ಇತರ ದೇಶಗಳಲ್ಲಿಯೂ ಅಭಿಮಾನಿಗಳ ಬಳಗವನ್ನು  ಹೊಂದಿದ್ದಾರೆ. ಐಪಿಎಲ್‌ನಿಂದಾಗಿ ವಾರ್ನರ್‌ಗೆ ಭಾರತದಲ್ಲೂ ಲಕ್ಷಾಂತರ ಮಂದಿ ಅಭಿಮಾನಿಗಳನ್ನು ಹೊಂದಿದ್ದಾರೆ. ಇತ್ತೀಚೆಗೆ ಮತ್ತೆ ವಾರ್ನರ್ ತಮ್ಮ ಪೋಸ್ಟ್ ಒಂದರಿಂದ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಹೌದು, ಈ ಬಾರಿ ಅವರ ಪೋಸ್ಟ್​ ಭಾತೀಯರ ಮೆಚ್ಚುಗೆಗೆ ಪಾತ್ರವಾಗಿದೆ.  ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಆಟಗಾರರು ಉತ್ತಮ ಪ್ರದರ್ಶನ ನೀಡಿದ್ದಾರೆ. ಒಲಿಂಪಿಕ್ ಪದಕ ವಿಜೇತ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು (PV Sindhu) ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ  ಚಿನ್ನದ ಪದಕವನ್ನೂ ಗೆದ್ದಿದ್ದಾರೆ. ಪದಕ ಸ್ವೀಕರಿಸಿದ ಸಿಂಧು ಅವರ ಫೋಟೋವನ್ನು ವಾರ್ನರ್ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಮತ್ತು ಅದರ ಅಡಿಯಲ್ಲಿ ಶೀರ್ಷಿಕೆಯನ್ನು ನೀಡಿ ಸಿಂಧುವನ್ನು ಹೊಗಳಿದ್ದಾರೆ.
ಪಿ.ವಿ ಸಿಂಧು ಫೋಟೋ ಹಂಚಿಕೊಂಡ ವಾರ್ನರ್​:
 ಇತ್ತೀಚೆಗೆ ಭಾರತೀಯ ಹಾಡುಗಳಿಗೆ, ರೀಲ್ಸ್ ಗಳನ್ನು ಮಾಡುವ ಮೂಲಕ ಲಕ್ಷಾಂತರ ಅಭಿಮಾನಿಗಳ ಜೋತೆಗೆ ಸಖತ್ ಚರ್ಚೆಯಲ್ಲಿರುತ್ತಿದ್ದು ಆಸೀಸ್​ನ ಡೇವಿಡ್​ ವಾರ್ನರ್​ ಇದೀಗ ಮತ್ತೊಂದು ಪೋಸ್ಟ್ ಮಾಡುವ ಮೂಲಕ ಭಾರತೀಯರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅವರು ಈ ಬಾರಿ  ಕಾಮನ್​ವೆಲ್ತ್ 2022ರಲ್ಲಿ ಚಿನ್ನ ಗೆದ್ದ ಭಾರತೀಯ ಆಟಗಾರ್ತಿಯಾದ ಪಿ.ವಿ ಸಿಂಧು ಅವರ ಫೋಟೋವನ್ನು ಹಂಚಿಕೊಂಡು ಶುಭಾಷಯವನ್ನು ಕೋರಿದ್ದಾರೆ. ಅಲ್ಲದೇ ‘ವೆಲ್​ ಡನ್​ ಪಿವಿ ಸಿಂಧು. ಅದ್ಭುತವಾದ ಪ್ರದರ್ಶನ‘ ಎಂದು ಬರೆದುಕೊಂಡಿದ್ದಾರೆ
ವಾರ್ನರ್ ಅವರ ಈ ಇನ್‌ಸ್ಟಾಗ್ರಾಮ್ ಪೋಸ್ಟ್ ಇದುವರೆಗೆ ಐದೂವರೆ ಲಕ್ಷ ಲೈಕ್‌ಗಳನ್ನು ಪಡೆದಿದೆ. ಅಷ್ಟೇ ಅಲ್ಲ, ಡೇವಿಡ್ ಪತ್ನಿ ಕ್ಯಾಂಡಿಸ್ ವಾರ್ನನ್ ಕೂಡ ಕಮೆಂಟ್ ಮಾಡಿ ‘ವೆರಿ ನೈಸ್’ ಎಂದಿದ್ದಾರೆ.
Categories
ಸ್ಪೋರ್ಟ್ಸ್

ಕಾಮನ್‌ವೆಲ್ತ್‌ ನಲ್ಲಿ ಚೊಚ್ಚಲ ಚಿನ್ನದ ಪದಕ ಗೆದ್ದು ಸಾಧನೆಗೈದ ಪಿವಿ ಸಿಂಧು

ಭಾರತದ ಸ್ಟಾರ್ ಆಟಗಾರ್ತಿ ಎರಡು ಬಾರಿ ಒಲಿಂಪಿಕ್‌ ಕೂಟದಲ್ಲಿ ಪದಕ ವಿಜೇತೆ ಪಿವಿ ಸಿಂಧು ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ತಮ್ಮ ಮೊದಲ ಚಿನ್ನದ ಪದಕವನ್ನು ಕೊರಳಿಗೇರಿಸಿಕೊಂಡು ತಮ್ಮ ಗುರಿಯನ್ನು ಸಾಧಿಸಿದ್ದಾರೆ.
ಮಹಿಳಾ ಸಿಂಗಲ್ಸ್‌ನ ಫೈನಲ್‌ನಲ್ಲಿ ಸಿಂಧು ಕೆನಡಾದ ಮಿಚೆಲ್ ಲಿ ಅವರನ್ನು 21-15, 21-13 ಅಂತರದಿಂದ ನೇರ ಸೆಟ್‌ಗಳಿಂದ ಸೋಲಿಸಿ ಚಿನ್ನದ ಪದಕವನ್ನು ಸುಲಭವಾಗಿ ಗೆದ್ದು ತಮ್ಮ ಮುಡಿಗೆರಿಸಿಕೊಂಡರು.
ಭಾನುವಾರ ನಡೆದಂತಹ ಸೆಮಿಫೈನಲ್‌ ಪಂದ್ಯದಲ್ಲಿ ಸಿಂಧು,  ಸಿಂಗಾಪುರದ ಯೆವೊ ಜಿಯಾ ಮಿನ್ ವಿರುದ್ಧ 21-19, 21-17 ಅಂತರದಲಿ 49 ನಿಮಿಷಗಳಲ್ಲೇ ಗೆಲುವು ದಾಖಲಿಸಿ ಫೈನಲ್‌ ಹಂತಕ್ಕೆ ತಲುಪಿದ್ದರು  ಈ ಮೂಲಕ ಕಾಮನ್‌ವೆಲ್ತ್ ನಲ್ಲಿ ಸತತ 2ನೇ ಆವೃತ್ತಿಯಲ್ಲಿ ಫೈನಲ್‌ಗೇರಿದರು. ಕಳೆದ ಆವೃತ್ತಿಯ ಫೈನಲ್‌ನಲ್ಲಿ ಸಿಂಧು ನಮ್ಮ ದೇಶದವರೆ ಅದ ಸೈನಾ ನೆಹ್ವಾಲ್ ವಿರುದ್ಧ ಸೋತು ಬೆಳ್ಳಿಗೆ ತೃಪ್ತಿಪಟ್ಟಿದ್ದರು.
*ಕಾಮನ್ ವೆಲ್ತ್  ಕ್ರೀಡಾ ಕೂಟದಲ್ಲಿ ಬ್ಯಾಡ್ಮಿಂಟನ್, ಟಿಟಿಯಲ್ಲಿ ಚಿನ್ನ ಗೆದ್ದು, ಹಾಕಿಯಲ್ಲಿ ಬೆಳ್ಳಿ ಗೆದ್ದ ಭಾರತ*
 ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಬ್ಯಾಡ್ಮಿಂಟನ್ ನಲ್ಲಿ ಮಹಿಳೆಯರ ಮತ್ತು ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಚಿನ್ನ ಪಡೆದ ಭಾರತ ಪುರುಷರ ಡಬಲ್ಸ್ ನಲ್ಲೂ ಬಂಗಾರ ಪದಕ ಕೊರಳಿಗೇರಿಸಿಕೊಂಡಿದೆ. ಜೊತೆಗೆ ಟೇಬಲ್ ಟೆನಿಸ್ ನಲ್ಲಿ ಭಾರತದ ಶರತ್ ಕಮಲ್ ಸಿಂಗಲ್ಸ್ ನಲ್ಲೂ ಚಿನ್ನ ಗೆದ್ದಿದ್ದಾರೆ.
ಶರತ್ ಕಮಲ್-ಜ್ಞಾನಶೇಖರನ್‍ ಜೋಡಿ ಡಬಲ್ಸ್ ನಲ್ಲಿ ಕೂಡ ಚಿನ್ನ ಗೆದ್ದು ಭಾರತೀಯರು ಹೆಮ್ಮೆ ಪಡುವಂತೆ ಆಡಿದ್ದಾರೆ.
ಸಿಂಗಲ್ಸ್ ವಿಭಾಗದಲ್ಲೂ ಶರತ್ ಫೈನಲ್ ಗೆದ್ದು ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಇನ್ನು, ಬ್ಯಾಡ್ಮಿಂಟನ್ ನಲ್ಲಿ ಪಿ.ವಿ. ಸಿಂಧು, ಲಕ್ಷ್ಯ ಸೇನ್ ಬಳಿಕ ಪುರುಷರ ಡಬಲ್ಸ್ ನಲ್ಲಿ ಚಿರಾಗ್ ಶೆಟ್ಟಿ-ಸಾತ್ವಿಕ್ ಜೋಡಿ ಫೈನಲ್ ಗೆದ್ದು ಚಿನ್ನದ ಪದಕ ತಮ್ಮದಾಗಿಸಿಕೊಂಡು ಚಿನ್ನದ ಬೇಟೆಯನ್ನು ಭರ್ಜರಿಯಾಗಿ ಮಾಡಿದ್ದರು.
ಆದರೆ ಪುರುಷರ ಹಾಕಿ ಫೈನಲ್ ನಲ್ಲಿ ಭಾರತ ನಿರಾಸೆ ಅನುಭವಿಸಿದೆ ಎನ್ನುವುದಕ್ಕಿಂತ  ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿ ತಾನೇ ತಲೆಬಾಗಿ ನಿರಾಯಾಸವಾಗಿ ಭಾರತ 0-7 ಅಂತರದಿಂದ ಸೋತು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದೆ.
ಒಟ್ಟಾರೆ ಕಾಮನ್‌ವೆಲ್ತ್ ಗೇಮ್ಸ್ ನ ಮುಕ್ತಾಯದ ದಿನದಂದು  ಭಾರತ ನಾಲ್ಕು ಚಿನ್ನದ ಪದಕಗಳೊಂದಿಗೆ ಅಂಕಪಟ್ಟಿಯಲ್ಲಿ ಒಟ್ಟು 22 ಚಿನ್ನ, 16 ಬೆಳ್ಳಿ ಮತ್ತು 23 ಕಂಚಿನ ಪದಕದೊಂದಿಗೆ 61 ಪದಕ ಗೆದ್ದು ಈ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಪದಕದ ಪಟ್ಟಿಯಲ್ಲಿ ನಾಲ್ಕನೇ ಸ್ಥಾನವನ್ನು ಅಲಂಕರಿಸಿ ವಿದಾಯ ಹೇಳಿತು.
ಒಟ್ಟಿನಲ್ಲಿ ಈ ಬಾರಿ ಭಾರತೀಯ ಕ್ರೀಡಾ ಪಟುಗಳು ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ ತಮ್ಮ ಸಾಮಾರ್ಥ್ಯವನ್ನು ಪ್ರದರ್ಶಿಸುವ ಮುಖಾಂತರ 21 ಚಿನ್ನದ ಪದಕ ಸೇರಿ ಒಟ್ಟು 61 ಪದಕವನ್ನು ಗೆದ್ದು ನಮ್ಮ ದೇಶದ ಹಿರಿಮೆಯನ್ನು ಹೆಚ್ಚಿಸಿದ್ದಾರೆ ಕೆಲವೊಂದು  ಕ್ರೀಡೆಗಳಲ್ಲಿ ಕೂದಲೆಳೆ ಅಂತರದಲ್ಲಿ ಪದಕದಿಂದ ವಂಚಿತರಾಗಿದ್ದಾರೆ.
ಅದೇನೇ ಇರಲಿ ಈ ಸಾಲಿನ ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ 61 ಪದಕಗಳನ್ನು ಗೆದ್ದು ಪದಕದ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿ ಕಂಗೊಳಿಸಿದ್ದು ಭಾರತೀಯರಿಗೆ ಹೆಮ್ಮೆಯ ವಿಷಯವೆ.
Categories
ಸ್ಪೋರ್ಟ್ಸ್

ರಾಷ್ಟ್ರೀಯ ಖೋ ಖೋ ಆಟಗಾರ ತೀರ್ಥಹಳ್ಳಿಯ ಹೆಮ್ಮೆಯ ಕ್ರೀಡಾ ಪಟು ವಿನಯ್ ಇನ್ನಿಲ್ಲ…!!

ವಿನಯ್ ಖೋ ಖೋ ಆಟದ ಅದ್ಭುತ ಆಟಗಾರ ಎನ್ನುವುದರಲ್ಲಿ ಎರಡು ಮಾತಿಲ್ಲ ಇವರು ತಮ್ಮ ಶ್ರೇಷ್ಠ ಆಟದಿಂದಲೆ ಭಾರತ ಖೋ ಖೋ ತಂಡವನ್ನು ಪ್ರತಿನಿಧಿಸಿ ರಾಜ್ಯಕ್ಕೆ ಕೀರ್ತಿ ತಂದಿದ್ದರು.
ಆದರೆ ವಿಧಿ ಆಟದ ಮುಂದೆ ಎಲ್ಲಾ ಆಟವು ಶೂನ್ಯ ಎನ್ನುವುದು ವಿನಯ್ ಅವರ ಅನಿರೀಕ್ಷಿತ ಸಾವಿನಿಂದ ಸಾಭಿತಾಗಿದೆ.
ಖೋ ಖೋ ಆಟಗಾರ ವಿನಯ್ ಇತ್ತೀಚೆಗೆ ಜ್ವರದಿಂದ ಬಳಲುತಿದ್ದರು ತೀರ್ಥಹಳ್ಳಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದ ಕಾರಣ ಇವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆಷ್ಟೋತ್ತಿಗಾಗಲೆ ವಿನಯ್ ಅವರಿಗೆ
– ಜ್ವರ ಮೆದುಳಿಗೆ ತಗುಲಿ ಸಾವು ಬದುಕಿನೊಡನೆ ಹೊರಾಡುತ್ತಿದ್ದರು ಇಂದು ಪ್ರತಿಭಾನ್ವಿತ ಖೋ ಖೋ ಆಟಗಾರ ವಿನಯ್ ವಿಧಿಯ ಆರ್ಭಟದ ಆಟದ ಎದುರು ಮಣಿಪಾಲದ ಆಸ್ಪತ್ರೆಯಲ್ಲಿ ಉಸಿರು ಚೆಲ್ಲಿ ತಮ್ಮ ಬದುಕಿಗೆ ಅಂತ್ಯವಾಡಿ ಹೊಗಿದ್ದಾರೆ
 ತೀರ್ಥಹಳ್ಳಿ ತಾಲೂಕಲ್ಲಿ ನೀರವ ಮೌನ ಅವರಿಸಿದೆ
 ರಾಷ್ಟ್ರೀಯ ಖೋ ಖೋ ಆಟಗಾರರಾಗಿದ್ದ ವಿನಯ್ ಭಾರತ ತಂಡವನ್ನು ಪ್ರತಿನಿಧಿಸಿದ್ದರು.  ವಿನಯ್ ಅವರಿಗೆ ತೀವ್ರ ಜ್ವರ ಮೆದುಳಿಗೆ ಏರಿ ಇತ್ತೀಚೆಗೆ ಮಣಿಪಾಲ ಆಸ್ಪತ್ರೆಯಲ್ಲಿ ಕಳೆದ ಏಳೆಂಟು ದಿನಗಳಿಂದ ದಾಖಲಾಗಿದ್ದರು  ತೀವ್ರವಾದ ಜ್ವರ ಇವರನ್ನು ಮೇಲೆಳಲು ಬಿಡಲಿಲ್ಲ  ಬಾಳಿ ಬದುಕಬೇಕಾಗಿದ್ದ ಯುವಕ ನಡುಹಾದಿಯಲ್ಲೆ ಬದುಕಿನ ಕೋಟಾ ಮುಗಿಸಿ ಹೊಗಿದ್ದು ಮಾತ್ರ ನಂಬಲು ಸಾಧ್ಯವಿಲ್ಲ..!
ವಿನಯ್ ಇನ್ನೂ ಮೂವತ್ತಮೂರರ ಹರಯ ಬಾಳಿ ಬದುಕಬೇಕಾಗಿದ್ದ ಯುವ ಕ್ರೀಡಾಪಟು ವಿನಯ್ ಸಾವಿನಂಚಿಗೆ ಸರಿದದ್ದು ದುರಂತವೆ ಹೌದು.
ವಿನಯ್ ವಿದ್ಯಾರ್ಥಿಯಾಗಿದ್ದಾಗಲೇ ಉತ್ತಮ ಖೋ ಖೋ ಕ್ರೀಡಾಪಟುವಾಗಿದ್ದರು ವಿನಯ್ ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರ ಮಟ್ಟವನ್ನು ಖೋ ಖೋ ಕ್ರೀಡೆಯಲ್ಲಿ ಪ್ರತಿನಿಧಿಸಿ ಹುಟ್ಟೂರು ತೀರ್ಥಹಳ್ಳಿಯ ಜೋತೆಗೆ ರಾಜ್ಯಕ್ಕೂ ಕೀರ್ತಿ ತಂದಿದ್ದರು.
ಬೆಂಗಳೂರಿನಲ್ಲಿ ಉದ್ಯೋಗಲ್ಲಿದ್ದ ವಿನಯ್ ಕರೋನಾ ಬಳಿಕ ತೀರ್ಥಹಳ್ಳಿಯಲ್ಲಿದ್ದರು. ಇವರ ಮನೆ ತೀರ್ಥಹಳ್ಳಿ ಪಟ್ಟಣದ ಸೀಬಿನಕೆರೆಯಲ್ಲಿದೆ   ಕಳೆದ ವರ್ಷ ವಿನಯ್ ತಂದೆ ಹೂವಪ್ಪ ಗೌಡರು ಸಾವಿಗೀಡಾಗಿದ್ದು ಇದೀಗ ಮನೆಯ ಪ್ರೀತಿಯ ಕಿರಿಮಗ ವಿನಯ್ ಅವರ ದೀಡಿರ್ ಸಾವು ಇಡೀ ಕುಟುಂಬವನ್ನು ದುಃಖದ ಒಡಲಿಗೆ ನೂಕಿದೆ.
ಮದುವೆಯಾಗಿ ಎರಡು ವರ್ಷವಾಗಿದ್ದು ವಿನಯ್ ಗೆ ಎಂಟು ತಿಂಗಳ ಹೆಣ್ಣು ಮಗುವಿದೆ.
ಶಿವಮೊಗ್ಗ ಮತ್ತು ತೀರ್ಥಹಳ್ಳಿಯಲ್ಲಿ ಅಪಾರ ಸ್ನೇಹಿತ ಬಳಗವನ್ನು  ಹೊಂದಿರುವ ವಿನಯ್ ಸಾವಿನ ಸುದ್ದಿ ಕೇಳಿ ಸಂಪೂರ್ಣ ತೀರ್ಥಹಳ್ಳಿಯಲ್ಲಿ ಸೂತಕದ ಛಾಯೆ ಅವರಿಸಿದೆ.
*ಮಲೆನಾಡಿನ ಹೆಮ್ಮೆಯ ಕ್ರೀಡಾ ಪ್ರತಿಭೆ ಇನ್ನೂ ನೆನಪು ಮಾತ್ರ..*
ವಿನಯ್ ತನ್ನ ಉತ್ತಮ ಆಟದಿಂದಲೆ ತೀರ್ಥಹಳ್ಳಿಯಿಂದ ಕ್ರೀಡಾ ಕ್ಷೇತ್ರದಲ್ಲಿ ಭಾರತ ಮಟ್ಟಕ್ಕೆ ಬೆಳೆದು ನಿಂತಿದ್ದರು ಅವರ ಅದ್ಭುತವಾದ ಖೋ ಖೋ ಆಟದಿಂದಲೆ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡು ಸ್ಟಾರ್ ಆಟಗಾರನಾಗಿ  ಮಿಂಚಿದ್ದರು.
ತೀರ್ಥಹಳ್ಳಿಯ ಏಕಲವ್ಯ ಸ್ಪೋರ್ಟ್ಸ್ ಕ್ಲಬ್ ಹಾಗೂ ಕರ್ನಾಟಕವನ್ನು ಪ್ರತಿನಿಧಿಸಿ 2 ಬಾರಿ ರನ್ನರ್ ಆಗಿದ್ದರು. ವಿನಯ್ ಅವರ ಸಾಧನೆಗಾಗಿ ಕರ್ನಾಟಕ ಸರ್ಕಾರ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವ ನೀಡಿತ್ತು. ಇನ್ನೂ ವಿನಯ್ ನೆನಪು ಮಾತ್ರ ಇವರು ತಮ್ಮ ಕುಟುಂಬದ ಜೋತೆಗೆ ಅಪಾರ ಸ್ನೇಹಿತರ ಬಳಗವನ್ನು ಬಿಟ್ಟು  ಅಗಲಿದ್ದಾರೆ. ಮೃತ ವಿನಯ್ ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ