Categories
ಕ್ರಿಕೆಟ್ ಯಶೋಗಾಥೆ

ಚುಟುಕು ಕ್ರಿಕೆಟಿನ ‘ಕಪ್ಪು ವಜ್ರ’ ನಿಕೋಲಸ್ ಪೂರನ್

ನಿಕೋಲಸ್ ಅಂದರೆನೆ ಫೈಟಿಂಗ್ ಸ್ಪಿರಿಟ್! 
———————————————
ನಿನ್ನೆ ಮೊಹಮದ್ ಶಮಿ ಎಂಬ ಅದ್ಭುತ ಕ್ರಿಕೆಟರ್ ಬಗ್ಗೆ ನಾನು ಬರೆದ ಲೇಖನ ಸಾವಿರಾರು ಜನ ಓದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇವತ್ತು ಇನ್ನೊಬ್ಬ ಸ್ಟಾರ್ ಕ್ರಿಕೆಟರನ ಹೋರಾಟದ ಬದುಕಿನ ಬಗ್ಗೆ ನಾನು ಬರೆಯಬೇಕು. ಆತ ಇಂದು ದೌರ್ಭಾಗ್ಯದ ಮೂಟೆಯೇ ಆಗಿರುವ ವೆಸ್ಟ್ ಇಂಡೀಸ್ ತಂಡದ ಸ್ಟಾರ್ ಬ್ಯಾಟರ್, ಪಾರ್ಟ್ ಟೈಮ್ ಕ್ಯಾಪ್ಟನ್, ಅನೂಹ್ಯ ಬೌಲರ್, ವಿಕೆಟ್ ಕೀಪರ್, ಅಕ್ರೋಬ್ಯಾಟಿಕ್ ಸ್ಕಿಲ್ ಇರುವ ಫೀಲ್ಡರ್…. ಹೀಗೆ ಎಲ್ಲವೂ! ಕಳೆದ ಹಲವಾರು ವರ್ಷಗಳಿಂದ ಐಪಿಎಲ್ ಕ್ರಿಕೆಟ್ ನೋಡುತ್ತಿರುವ ನೀವು ಆತನ ಅದ್ಭುತ ಪರ್ಫಾರ್ಮೆನ್ಸ್ ಖಂಡಿತವಾಗಿ ನೋಡಿರುತ್ತೀರಿ.
ನಿಕೋಲಸ್ ಪೂರನ್ ಎಂಬ ಚುಟುಕು ಕ್ರಿಕೆಟಿನ ಕಪ್ಪು ವಜ್ರ. 
——————————————
ತನ್ನ ಸಾಹಸದ ಆಕ್ರೊಬ್ಯಾಟಿಕ್ ಫೀಲ್ಡಿಂಗ್ ಸಾಮರ್ಥ್ಯದ ಮೂಲಕ, ಬ್ಯಾಟಿಂಗನಲ್ಲಿ ಸಿಕ್ಸರುಗಳ ಮತ್ತು ಬೌಂಡರಿಗಳ ಸುರಿಮಳೆಯ ಮೂಲಕ, ಅದ್ಭುತವಾದ ಹೀರೋಯಿಕ್ ಇನ್ನಿಂಗ್ಸಗಳ ಮೂಲಕ ಆತನು ಜಗತ್ತಿನ ಕ್ರಿಕೆಟ್ ಪ್ರೇಮಿಗಳನ್ನು ತುದಿಗಾಲಿನಲ್ಲಿ ನಿಲ್ಲಿಸಿದ್ದು ಖಂಡಿತವಾಗಿಯೂ ಸುಳ್ಳಲ್ಲ. ಆತನ ಫೀಲ್ದಿಂಗ್ ಬಗ್ಗೆ ಸಚಿನ್ ಹೇಳಿದ ಮಾತುಗಳು ನನಗೆ ನೆನಪಿವೆ – ಇಂತಹ ಸಾಹಸವನ್ನು ನಾನು ಇದುವರೆಗೆ ಕ್ರಿಕೆಟ್ ಕಣದಲ್ಲಿ ನೋಡಿದ್ದೇ ಇಲ್ಲ!
ಇಂದು ದಿವಾಳಿತನದ ಅಂಚಿನಲ್ಲಿರುವ ವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡನ ಬಗ್ಗೆ ನಾನು ಏನು ಹೇಳಲಿ? ಒಂದು ಕಾಲದ ವಿಶ್ವಚಾಂಪಿಯನ್ ಟೀಮ್ ಈ ಬಾರಿ ವಿಶ್ವಕಪ್ಪಿಗೆ ಆಯ್ಕೆ ಆಗಿಲ್ಲ ಎನ್ನುವ ದುರಂತ ಕಣ್ಣ ಮುಂದೆ ಇದೆ. ಅಲ್ಲಿ ಪ್ರತಿಭೆಗಳಿಗೆ  ಬೆಲೆಯೇ ಇಲ್ಲ. ಟೆಸ್ಟ್ ಪಂದ್ಯಗಳು ಇಲ್ಲವೇ ಇಲ್ಲ! ಇತ್ತೀಚಿನ ಯಾವ ಐಸಿಸಿ ಕೂಟದಲ್ಲಿ ಕೂಡ ಅವರ ಸಾಧನೆ ಇಲ್ಲ! ಅಲ್ಲಿ ಇರುವ ಸ್ಟಾರ್ ಆಟಗಾರರು ಬೇರೆ ದೇಶಗಳ ಲೀಗ್ ಪಂದ್ಯಾವಳಿಗಳನ್ನು ಹುಡುಕಿಕೊಂಡು ವಲಸೆ ಹೋಗುತ್ತಿದ್ದಾರೆ.
ಅವಕಾಶಗಳ ಹುಡುಕಾಟದಲ್ಲಿ ಮಹಾವಲಸೆ.
———————————————
ಇದರಿಂದಾಗಿ ತನ್ನ ಪ್ರತಿಭೆಗೆ ಬೆಂಬಲವು ದೊರೆಯದೆ ನಿಕೋಲಸ್ ಜಗತ್ತಿನ ಬೇರೆ ಬೇರೆ ದೇಶಗಳ ಚುಟುಕು ಕ್ರಿಕೆಟ್ ಲೀಗಗಳಲ್ಲಿ ಆಡಬೇಕಾದದ್ದು ನಿಜವಾಗಿಯು ದುರಂತ! ಆತ ನಿಜವಾಗಿಯೂ ತುಂಬಾನೇ ಪ್ರತಿಭಾವಂತ. ಟ್ರಿನಿಡಾಡ್ ಆತನ ಕರ್ಮಭೂಮಿ. ತನ್ನ ಬಾಲ್ಯದಿಂದಲೂ ಕ್ರಿಕೆಟ್ ಬಿಟ್ಟರೆ ಆತನಿಗೆ ಬೇರೆ ಜಗತ್ತು ಇಲ್ಲ. ಬ್ರಿಯಾನ್ ಲಾರಾ, ಕ್ರಿಸ್ ಗೇಲ್, ವಿವಿಯನ್  ರಿಚರ್ಡ್ಸ್ ಇವರ ಆಟವು ಅವನಿಗೆ ಪ್ರೇರಣೆ.
ಶಾಲೆಗೆ  ಹೋಗುವುದನ್ನು ಮರೆತು ಹಗಲು ರಾತ್ರಿ ಎನ್ನದೆ ಕ್ರಿಕೆಟ್ ತರಬೇತಿಯಲ್ಲಿ ಮುಳುಗಿ ಬಿಡುತ್ತಿದ್ದ ನಿಕೋಲಸ್. ದಿನವೂ  ಸಿಕ್ಕಾಪಟ್ಟೆ ಬೆವರು ಹರಿಸುತ್ತಿದ್ದ. ಲೆಫ್ಟ್ ಹ್ಯಾಂಡ್ ಬ್ಯಾಟ್ಸಮನ್ ಆಗಿದ್ದ ಆತ ರೈಟ್ ಹ್ಯಾಂಡ್ ಬೌಲರ್ ಕೂಡ ಆಗಿದ್ದ! ಆತನ ಆಕ್ರೊಬ್ಯಾಟಿಕ್ ಫೀಲ್ಡಿಂಗ್ ಅಂತೂ ಸೂಪರ್, ಅಮೇಜಿಂಗ್!
2013ರಲ್ಲಿ ಕೆರಿಬಿಯನ್ ಪ್ರೀಮಿಯರ್ ಲೀಗಿನ ಮೂಲಕ ಕ್ರಿಕೆಟ್ ಜಗತ್ತಿಗೆ ಆತನ ಪ್ರವೇಶವು ಅದ್ಭುತ ರೀತಿಯಲ್ಲಿ  ಆಗಿತ್ತು. ಮೊದಲ ಪಂದ್ಯದಲ್ಲಿಯೇ 24 ಎಸೆತಗಳಲ್ಲಿ 54 ರನ್ ಚಚ್ಚಿದ್ದ! ಆಗ ಅವನಿಗೆ ಕೇವಲ 16 ವರ್ಷ ಪ್ರಾಯ!
ಅಂಡರ್ 19 ವಿಶ್ವಕಪ್ ಮಿಂಚು.
—————————————-
ಮುಂದೆ ಅಂಡರ್ 19 ವಿಶ್ವಕಪ್ಪಲ್ಲಿ ವೆಸ್ಟ್ ಇಂಡೀಸ್ ತಂಡದ ಪರವಾಗಿ ಆಡಿ ಆರು ಪಂದ್ಯಗಳಲ್ಲಿ ಬರೋಬ್ಬರಿ 303 ರನ್ ಗುಡ್ಡೆ ಹಾಕಿದ್ದ ನಿಕೋಲಸ್! ಅದರ ಜೊತೆಗೆ ಆತ ವಿಕೆಟ್ ಕೀಪಿಂಗ್ ಕೂಡ ಮಾಡಿದ್ದ. ಆತನ ಸ್ಟ್ರೈಕ್ ರೇಟ್ 145ರ ಕೆಳಗೆ ಬಂದದ್ದೇ ಇಲ್ಲ! ಆಗಲೇ ಆತನ ಬದುಕಿನಲ್ಲಿ ಕರಾಳ ದಿನಗಳು ಬಂದವು.
ಆತನ ಬದುಕಿನ ಕರಾಳ ಅಧ್ಯಾಯ ಆರಂಭ.
———————————————
ಒಂದು ಸಂಜೆ ಕ್ರಿಕೆಟ್ ತರಬೇತು ಮುಗಿಸಿ ಕಾರ್ ಡ್ರೈವ್ ಮಾಡುತ್ತ ಮನೆ ಕಡೆ ಬರುವಾಗ ಭೀಕರವಾದ ಅಪಘಾತವು ನಡೆದುಹೋಯಿತು. ಎರಡೂ ಕಾಲುಗಳು ಹುಡಿ ಆದವು. ಬಲಗಾಲಿನ ಮೊಣಗಂಟು ಹುಡಿ ಆಗಿತ್ತು. ಕಾಲಿನ ಮತ್ತು ಕೈಗಳ ಬೆರಳುಗಳು ಜರ್ಜರಿತ ಆಗಿದ್ದವು. ಮತ್ತೆ ಪ್ರಜ್ಞೆಯು ಬಂದಾಗ ಎರಡೂ ಕಾಲುಗಳಿಗೆ ಬ್ಯಾಂಡೇಜು ಸುತ್ತಿ ಆತ ಆಸ್ಪತ್ರೆಯಲ್ಲಿ ಮಲಗಿದ್ದ! ಕಣ್ಣು ತೆರೆದು ಆತನು ವೈದ್ಯರಿಗೆ ಕೇಳಿದ ಮೊದಲ ಪ್ರಶ್ನೆ – ಡಾಕ್ಟರ್, ನಾನಿನ್ನು ಕ್ರಿಕೆಟ್ ಆಡಬಹುದಾ?
ವೈದ್ಯರು ಯಾವ ಭರವಸೆ ಕೂಡ ಕೊಡಲಿಲ್ಲ. ಆರು ತಿಂಗಳ ಕಾಲ ಆಸ್ಪತ್ರೆಯಲ್ಲಿ ನೋವು ನುಂಗುತ್ತಾ  ಮಲಗಿದ್ದ! ಮತ್ತೆ ಆರು ತಿಂಗಳು ವೀಲ್ ಚೇರ್ ಮೇಲೆ ಉಸಿರು ಕಟ್ಟುವ ಪರಾವಲಂಬಿ ಬದುಕು!  ಹಲವು ಶಸ್ತ್ರಚಿಕಿತ್ಸೆಗಳು ಮತ್ತು ಎಣೆಯಿಲ್ಲದ ನೋವು ನಿಕೋಲಸ್ ಎಂಬ ಅದ್ಭುತ ಹುಡುಗನ ಆತ್ಮವಿಶ್ವಾಸವನ್ನು ಕರಗಿಸಲಿಲ್ಲ ಎಂಬುದು ವಿಶ್ವ ಕ್ರಿಕೆಟಿನ ಅದೃಷ್ಟ ಎಂದೇ ಹೇಳಬಹುದು!
ಅಂಥ ನಿಕೋಲಸ್ ಪೂರನ್ ಮತ್ತೆ ಒಂದೇ ವರ್ಷದೊಳಗೆ ಕ್ರಿಕೆಟ್ ಜಗತ್ತಿಗೆ ಮರಳಿದ್ದ! ತನ್ನ ಆಟದ ಕಸುವನ್ನು ಮತ್ತು ಶಕ್ತಿಯನ್ನು ಹೆಚ್ಚಿಸಿಕೊಂಡಿದ್ದ. ಕೆರಿಬಿಯನ್ ಲೀಗನಲ್ಲಿ ಎಂಟು ಪಂದ್ಯಗಳಲ್ಲಿ 217 ರನ್ ಗಳಿಸಿದ. ಅದೇ ವರ್ಷ ಪಾಕ್ ತಂಡದೊಂದಿಗೆ ವೆಸ್ಟ್ ಇಂಡೀಸ್ T20 ಪಂದ್ಯದಲ್ಲಿ  ಮುಖಾಮುಖಿ ಆದಾಗ ಬಿರುಸಿನ ಆಟವಾಡಿದ. ಎಲ್ಲವೂ  ಮುಗಿದು ಸೆಟ್ಲ್ ಆದ ಅನ್ನುವಾಗಲೆ ಇನ್ನೊಂದು ದುರಂತ ನಡೆಯಿತು.
ಉಸಿರುಕಟ್ಟಿದ ಕ್ರಿಕೆಟ್ ನಿಷೇಧ.
———————————————
ವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡಿನ  ಒಂದು ತೀರ್ಪಿನ ಫಲವಾಗಿ ಆತ 10 ತಿಂಗಳ ಅವಧಿಯ ದೀರ್ಘ  ನಿಷೇಧ ಎದುರಿಸಬೇಕಾಯಿತು.
ಅದಕ್ಕೆ ಕಾರಣ ದೇಸೀ ಕ್ರಿಕೆಟ್ ಸರಣಿಯು ನಡೆಯುತ್ತಿದ್ದ  ಹೊತ್ತಲ್ಲಿ ಅದನ್ನು ನಿರ್ಲಕ್ಷ್ಯ ಮಾಡಿ ಬಾಂಗ್ಲಾ ದೇಶದ ಪ್ರೀಮಿಯರ್ ಲೀಗ್ ಆಡಲು ಹೋದದ್ದು! ಮತ್ತೆ ಹತ್ತು ತಿಂಗಳು ಅವನ ಕ್ರಿಕೆಟ್ ಭವಿಷ್ಯಕ್ಕೆ ಮಂಕು ಕವಿಯಿತು! ಒಬ್ಬ ಸ್ಟಾರ್ ಆಟಗಾರನಿಗೆ ಅದು ಸೆರೆಮನೆಗೆ ಸಮನಾದ ಶಿಕ್ಷೆ.
ಆದರೆ ಇದಕ್ಕೆಲ್ಲ ಸೊಪ್ಪು ಹಾಕುವ ಬಡಪೆಟ್ಟಿಗೆ ಅವನದ್ದು ಅಲ್ಲವೇ ಅಲ್ಲ!
ನಿಕೋಲಸ್ ಒಂತರಾ ಉಡಾಫೆ ಕ್ರಿಕೆಟರ್!
———————————————
ಅಂತಹ ನಿಕೋಲಸ್ 2017ರಿಂದ ನಿರಂತರವಾಗಿ ಭಾರತಕ್ಕೆ ಬಂದು ಐಪಿಎಲ್ ಕ್ರಿಕೆಟ್ ಆಡಿದ್ದಾನೆ. ಮುಂಬೈ ಇಂಡಿಯನ್ಸ್, ಕಿಂಗ್ಸ್ ಇಲೆವೆನ್ ಪಂಜಾಬ್, ಹೈದರಾಬಾದ್ ತಂಡಗಳ ಪರವಾಗಿ ಆತನ ಆಟವು
ಅದ್ಭುತವಾಗಿಯೇ ಇತ್ತು.  2023ರಲ್ಲಿ ಲಕ್ನೋ ಸೂಪರ್ ಜಯಂಟ್ಸ್ ಆತನನ್ನು 16ಕೋಟಿ ಕೊಟ್ಟು ಖರೀದಿ ಮಾಡಿದಾಗ ಎಲ್ಲರ ಹುಬ್ಬುಗಳು ಮೇಲೇರಿದ್ದವು!
ಭುವನೇಶ್ವರ್ ಕುಮಾರ್,  ಚಹಾಲ್, ಬುಮ್ರ, ನಟರಾಜನ್, ರಶೀದ್ ಖಾನ್ ಮೊದಲಾದ ಸ್ಟಾರ್ ಬೌಲರಗಳು ಕೂಡ ಅವನ ಬ್ಯಾಟಿನಿಂದ ಸಿಕ್ಸರ್ ಹೊಡೆಸಿಕೊಂಡಿದ್ದಾರೆ! ಆತನನ್ನು ‘ಮರಿ ಕ್ರಿಸ್ ಗೇಲ್’ ಎಂದು ಈಗಾಗಲೇ ಕ್ರಿಕೆಟ್ ಅಭಿಮಾನಿಗಳು ಕರೆಯಲು ಆರಂಭಿಸಿದ್ದಾರೆ.
ಅವನ ಕಣ್ಣು ಮತ್ತು ಕೈಗಳ ಅದ್ಭುತವಾದ ಹೊಂದಾಣಿಕೆ, ಅಸಾಧಾರಣವಾದ ವೇಗ, ವಿಕೆಟಗಳ ನಡುವಿನ ಚುರುಕಿನ ಓಟ, ಹೊಡೆತಗಳ ಆಯ್ಕೆ, ಚುರುಕಿನ ಪಾದಗಳ ಚಲನೆ, ಪರ್ಫೆಕ್ಟ್ ಟೈಮಿಂಗ್, ಬ್ಯಾಟಿನ ಬೀಸು ಮತ್ತು ಟೆಕ್ನಿಕ್ ಮತ್ತು  ಆತ್ಮವಿಶ್ವಾಸಗಳು ಅವನನ್ನು ಮಹೋನ್ನತವಾದ ಕ್ರಿಕೆಟ್ ಸ್ಟಾರಗಳ ಸಾಲಿನಲ್ಲಿ ತಂದು ನಿಲ್ಲಿಸಿವೆ. ಆತ ಬ್ಯಾಟಿಂಗ್ ಮಾಡುವಾಗ ಆತನ ಕಣ್ಣಲ್ಲಿ ಒಂದಿಷ್ಟು ಭಯವು ಕೂಡ ಕಂಡು ಬರುವುದಿಲ್ಲ. ಸೆಹವಾಗ್ ಹಾಗೆ ಮೊದಲ ಬಾಲಿಗೆ ಸಿಕ್ಸರ್ ಎತ್ತುವ ತಾಕತ್ತು ಮತ್ತು ಧೈರ್ಯ ಆತನಿಗೆ ಇದೆ. ನಿಕೋಲಸ್ ಕ್ರೀಸಿನಲ್ಲಿ ಇದ್ದಷ್ಟೂ ಹೊತ್ತು ಅವನು ತಂಡವನ್ನು ಸೋಲಲು ಬಿಡುವುದಿಲ್ಲ ಎನ್ನುವ ನಂಬಿಕೆ ಇದೆ.
ಒಂಥರಾ ಉಡಾಫೆ ಕ್ರಿಕೆಟರ್ ಆತ! ಅವನ ಪ್ರತಿಭೆಯ ಬಗ್ಗೆ ಎರಡು ಮಾತಿಲ್ಲ. ಆದರೆ ಕೆಲವು ಬಾರಿ ಅನಿಶ್ಚಿತತೆಯು ಆತನ ಪ್ರತಿಭೆಯನ್ನು ಮಸುಕು ಮಾಡಿದ್ದು ಉಂಟು.
ಆತನ ಬದುಕಿನ ಹೋರಾಟವು ಅದಕ್ಕಿಂತ ರೋಮಾಂಚಕ ಎಂದು ಖಂಡಿತವಾಗಿ ಹೇಳಬಹುದು.
Categories
ಕ್ರಿಕೆಟ್ ಯಶೋಗಾಥೆ

ಸಣ್ಣ ಸಣ್ಣ ಕಾರಣಕ್ಕೆ ಸಾಯಲು ಹೊರಟವರು ಈತನ ಕತೆಯನ್ನು ಓದಬೇಕು!

ಮೊಹಮ್ಮದ್ ಶಮ್ಮಿ ಕ್ರಮಿಸಿ ಬಂದ ಹಾದಿ ಅತ್ಯಂತ ದುರ್ಗಮ ಆಗಿತ್ತು.
———————————————
ನಮಗೆ ಭಾರತೀಯರಿಗೆ  ಮೊಹಮ್ಮದ್ ಶಮ್ಮಿ ಅವರ ನಿಜವಾದ ಮೌಲ್ಯ ಗೊತ್ತಾದದ್ದು ಈ ವಿಶ್ವಕಪ್ ಕೂಟದಲ್ಲಿಯೇ! ಅದರಲ್ಲಿಯೂ ನಿನ್ನೆ ವಾಂಖೆಡೆ ಕ್ರೀಡಾಂಗಣದಲ್ಲಿ ಭಾರತದ ಬೇರೆಲ್ಲಾ ಬೌಲರಗಳು ವಿಕೆಟ್ ಪಡೆಯಲು ಪರದಾಡುತ್ತಿದ್ದಾಗ ಮತ್ತು ದುಬಾರಿಯಾದಾಗ ಬರೋಬ್ಬರಿ ಏಳು ವಿಕೆಟ್ ಪಡೆದು ಭಾರತವನ್ನು ಫೈನಲ್ ಪಂದ್ಯಕ್ಕೆ ಕರೆದುಕೊಂಡು ಹೋದದ್ದನ್ನು ಭಾರತವು ಯಾವತ್ತಿಗೂ ಮರೆಯುವುದಿಲ್ಲ.
ಈ ವಿಶ್ವಕಪ್ ಕೂಟದ ಪ್ರತೀ ಪಂದ್ಯದಲ್ಲಿ ಎಂಬಂತೆ ಅವರು ವಿದೇಶದ ಪ್ರತಿಯೊಬ್ಬ ಬ್ಯಾಟರಗಳನ್ನು ಕಾಡಿದ್ದಾರೆ. ಅವರ ಸ್ವಿಂಗ್, ಔಟ್ ಸ್ವಿಂಗ್, ರಿವರ್ಸ್ ಸ್ವಿಂಗ್ ಮತ್ತು ಯಾರ್ಕರ್ ಎಸೆತಗಳಿಗೆ ಬಲಿಷ್ಠ ಆಟಗಾರರು ಶರಣಾಗತ ಆದದ್ದು ನಿಜಕ್ಕೂ ಅದ್ಭುತ! ಮೊಹಮದ್ ಶಮಿ ವಿಶ್ವಕಪ್ ಕೂಟದಲ್ಲಿ 50 ವಿಕೆಟ್ ಪಡೆದ ಮೊದಲ ಭಾರತೀಯ ಎಂಬ ಕೀರ್ತಿ ಪಡೆದಿದ್ದಾರೆ. ಅವರು ಭಾರತಕ್ಕೆ ಕಪಿಲ್ ದೇವ್ ನಂತರ ದೊರೆತ ಅತ್ಯುತ್ತಮ ವೇಗದ ಬೌಲರ್ ಎಂಬುದನ್ನು ನಾವು ಒಪ್ಪದೇ ಇರಲು ಸಾಧ್ಯವೇ ಇಲ್ಲ!
ಅಂತಹ ಶಮ್ಮಿ ಸಾಗಿ ಬಂದ ದಾರಿ..
———————————————
ಮೊಹಮ್ಮದ್ ಶಮ್ಮಿ ಬದುಕಿನ ಹಿನ್ನೆಲೆಯನ್ನು ಗಮನಿಸಿದಾಗ ನೀವು ಖಂಡಿತಾ ಆತನನ್ನು ಹೆಚ್ಚು ಪ್ರೀತಿ ಮಾಡುತ್ತೀರಿ.
1990 ಸೆಪ್ಟೆಂಬರ್ 3ರಂದು ಉತ್ತರ ಪ್ರದೇಶದ ಆಮ್ರೋಹದ ಒಂದು ಹಳ್ಳಿಯಲ್ಲಿ ಒಬ್ಬ ರೈತನ ಮಗನಾಗಿ ಜನಿಸಿದ ಆತನು ಬಡತನ, ಹಸಿವು, ಅಪಮಾನ ಎಲ್ಲವನ್ನೂ ದಾಟಿಕೊಂಡು ಬರಬೇಕಾಯಿತು. 15 ವರ್ಷ ಪ್ರಾಯದಲ್ಲಿ ಬದ್ರುದ್ದೀನ್ ಸಿದ್ದೀಕ್ ಎಂಬ ಕೋಚ್ ಆತನ ಪ್ರತಿಭೆಯನ್ನು ಗುರುತಿಸಿ ತರಬೇತು ಕೊಡಲು ಆರಂಭ ಮಾಡಿದ್ದರು.
ಆತನು ಬಾಲ್ಯದಿಂದಲೂ ಕಠಿಣ ಪರಿಶ್ರಮದ ಹಾಗೂ ದುಡಿಮೆಯ ಮೇಲೆ ನಂಬಿಕೆ ಇಟ್ಟ ಹುಡುಗ. ಕೋಚ್ ಹೇಳಿದ ಎಲ್ಲ ಕೌಶಲಗಳನ್ನು ಶ್ರದ್ಧೆಯಿಂದ ಕಲಿಯುತ್ತಾ ಹೋದ ಶಮ್ಮಿಯ  ಕನಸು ಅಂಡರ್ 19 ವಿಶ್ವಕೂಟದಲ್ಲಿ ಭಾರತಕ್ಕೋಸ್ಕರ ಆಡುವುದು. ಆಗಲೇ ಆತನ ಬೌಲಿಂಗ್ ವೇಗ 140km/h ದಾಟಿತ್ತು ಮತ್ತು ಹೆಚ್ಚಿನ ವಿಕೆಟ್ ಬೌಲ್ಡ್ ಮಾಡಿ ಪಡೆಯುತ್ತಿದ್ದರು.  ಆತನಿಗೆ ಯಾವ ಪ್ರಾಯೋಜಕರೂ
 ಇರಲಿಲ್ಲ. ಒಂದು ಹೊತ್ತಿನ ಊಟಕ್ಕೂ ಆತ ಪರದಾಡುವ ಸ್ಥಿತಿ ಇತ್ತು. ಆದರೆ ಭಾರತದ ಕ್ರಿಕೆಟ್ ರಾಜಕೀಯ ಶಮ್ಮಿಯ ಅಂಡರ್ 19 ಕನಸನ್ನು ನುಚ್ಚುನೂರು ಮಾಡಿತ್ತು!
ಆಗ ಆತನ ಕೋಚ್ ಆತನ ಪ್ರತಿಭೆ ಸಾಯಬಾರದು ಎಂಬ ಕಾರಣಕ್ಕೆ   ಯಾರದೋ ಅಡ್ರೆಸ್ ಹುಡುಕಿ ಆತನನ್ನು ಕೊಲ್ಕತ್ತಾಗೆ ಕರೆದುಕೊಂಡು ಬಂದರು. ಅವಕಾಶಗಳಿಗಾಗಿ ಶಮ್ಮಿ  ಯಾರ್ಯಾರ ಮನೆಬಾಗಿಲು
ಬಡಿಯಬೇಕಾಯಿತು.
‘ಹಸಿವನ್ನಾದರೂ ತಡೆಯಬಹುದು. ಆದರೆ ಅಪಮಾನಗಳ ಅಗ್ನಿದಿವ್ಯ ತಡೆಯುವುದು ಕಷ್ಟ ‘ ಎಂದು ಶಮ್ಮಿ ಒಂದು ಸಂದರ್ಶನದಲ್ಲಿ ಹೇಳಿದ್ದಾರೆ. ಹೆಚ್ಚು ಓದಿಲ್ಲ ಎಂಬ ಕಾರಣಕ್ಕೆ ಕೂಡ ಆತನು ಹಲವು ಬಾರಿ ಬಿಸಿಸಿಐ ಮತ್ತು ಆಯ್ಕೆ ಮಂಡಳಿಯ ಅವಕೃಪೆಗೆ ಪಾತ್ರ ಆಗಬೇಕಾಯಿತು ಅಂದರೆ ನೀವು ನಂಬಲೇಬೇಕು.
ಶಮ್ಮಿ ಬದುಕಿನ ಕರಾಳ ಅಧ್ಯಾಯ ಆರಂಭ ಆದದ್ದು ಮದುವೆಯಿಂದ!
———————————————
ಶಮ್ಮಿ 2014ರಲ್ಲಿ ಹಸೀನ್ ಜಹಾನ್ ಎಂಬ ಹುಡುಗಿಯನ್ನು ಪ್ರೀತಿಸಿ ಮದುವೆಯಾದರು. ಒಂದು ಮಗು ಕೂಡ ಜನಿಸಿತು. ಆದರೆ ಅದೇ ಹಸೀನ್ ಜಹಾನ್ ಆತನ ಬದುಕಿನ ವಿಲನ್ ಆದದ್ದು ದುರಂತ. ಸ್ವತಃ ಹೆಂಡತಿ ಆತನ ಮೇಲೆ ಲೈಂಗಿಕ ಹಿಂಸೆ ಮತ್ತು ವ್ಯಭಿಚಾರದ ಕೇಸ್ ದಾಖಲಿಸಿದಳು! ತನ್ನ ಗಂಡನ ಮಾನಸಿಕ ಆರೋಗ್ಯ ಸರಿ ಇಲ್ಲ ಎಂಬ ಆರೋಪ. ಎಲ್ಲದಕ್ಕೂ ನನ್ನ ಹತ್ತಿರ ಸಾಕ್ಷಿ ಇದೆ ಎನ್ನುವ ಧಿಮಾಕು! ಶಮ್ಮಿ ಬದುಕಿನ ಅತ್ಯಂತ ಕರಾಳ ದಿನಗಳವು. ಒಮ್ಮೆ ವಿದೇಶದ ಪ್ರವಾಸದಲ್ಲಿ ಇದ್ದಾಗ 2018ರಲ್ಲಿ FIR ಆಗಿ ಅರೆಸ್ಟ್ ವಾರಂಟ್ ಹೊರಟಿತ್ತು. ಆದರೆ ತಾಂತ್ರಿಕ ಕಾರಣಗಳಿಂದ ಶಮ್ಮಿ ಅರೆಸ್ಟ್ ಆಗುವುದು ತಪ್ಪಿತು.
ಮೂರು ಬಾರಿ ಆತ್ಮಹತ್ಯೆಗೆ ಪ್ರಯತ್ನ!
——————————————
ಈ ಸಂದರ್ಭದಲ್ಲಿ ತಾನು ಮೂರು ಬಾರಿ ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದೆ ಎಂದು ಶಮ್ಮಿ ಒಪ್ಪಿಕೊಂಡಿದ್ದಾರೆ. ಕ್ರಿಕೆಟ್ ಮೇಲೆ ಫೋಕಸ್ ಔಟ್ ಆಗಿತ್ತು. ತಾನು ನಿರಪರಾಧಿ ಎಂದು ಎಷ್ಟೇ ಬಾರಿ ಹೇಳಿದರೂ ಆತನನ್ನು ಯಾರೂ ನಂಬಲಿಲ್ಲ. ನಿರಂತರ ಕೋರ್ಟ್ ವಿಚಾರಣೆ, ಪೊಲೀಸ್ ಸ್ಟೇಶನ್ ಅಲೆದಾಟ ಶಮ್ಮಿಯನ್ನು ಹೈರಾಣ ಮಾಡಿತ್ತು. ಆಗ ವಿರಾಟ್
ಕೊಹ್ಲಿಯಂತಹ ಸ್ನೇಹಿತರು ಆತನ ಪರವಾಗಿ ನಿಂತು ನೈತಿಕ ಬೆಂಬಲ ನೀಡಿದ್ದನ್ನು ಆತನು ಇಂದಿಗೂ ಮರೆತಿಲ್ಲ. ಆ ಕೇಸಿನಿಂದ ಹೊರಬರಲು ಶಮ್ಮಿಗೆ ತುಂಬಾ ಕಷ್ಟ ಆಯಿತು. ಶಮ್ಮಿ ತುಂಬಾ ಜರ್ಜರಿತ ಆದರು.
ಮ್ಯಾಚ್ ಫಿಕ್ಸಿಂಗ್ ಎಂಬ
ಬೆಂಬಿಡದ ಭೂತ! 
———————————————
‘ಹೋದೆಯಾ ಪಿಶಾಚಿ ಎಂದರೆ ಬಂದೆ ಗವಾಕ್ಷಿಯಲ್ಲಿ’ ಎಂಬ ಗಾದೆ ಮಾತಿನಂತೆ ಶಮ್ಮಿ ಬದುಕಿನಲ್ಲಿ ಎರಡನೇ ಬಿರುಗಾಳಿ ಬೀಸಿತ್ತು. ಅದು ‘ಮ್ಯಾಚ್ ಫಿಕ್ಸಿಂಗ್’  ಆರೋಪ! ದುಡ್ಡು ತೆಗೆದುಕೊಂಡು ವಿದೇಶಗಳ  ತಂಡಕ್ಕೆ ಫೇವರ್ ಮಾಡಿದ್ದಾರೆ ಎನ್ನುವ ದೂರು ಬಂದಾಗ ಶಮ್ಮಿ ಕುಗ್ಗಿಹೋದರು. ಅವರಂತಹ ದೇಶಪ್ರೇಮಿ ಕ್ರಿಕೆಟರಗೆ ಆ ಆರೋಪವು ಸಾವಿಗೆ ಸಮ ಆಗಿತ್ತು. ಬಿಸಿಸಿಐ ಆತನ ಯಾವ ಮಾತನ್ನೂ ಕೇಳದೆ ವಿಚಾರಣಾ ಸಮಿತಿ ರಚನೆ ಮಾಡಿತು. ಪತ್ರಿಕೆಗಳು ಆತನ ವಿರುದ್ಧ ಬರೆದವು. ಹೆಂಡತಿಯ ಕಡೆಯವರು ಆತನ್ನು ಬಹಿರಂಗವಾಗಿ ನಿಂದಿಸಿದರು. ಆಗಲೂ ಆತನ ಪರವಾಗಿ ನಿಂತವರು ವಿರಾಟ್ ಮೊದಲಾದ ಸ್ನೇಹಿತರೇ. ಈ ಆರೋಪವೂ ಮುಂದೆ ಸುಳ್ಳು ಎಂದು ಸಾಬೀತಾಯಿತು. ಆ ಹಂತದಲ್ಲಿ ಶಮ್ಮಿ ಕ್ರಿಕೆಟ್ ಬಿಟ್ಟು ಹೋಗುವ ತೀರ್ಮಾನಕ್ಕೆ ಬಂದಿದ್ದರು. ಆಗಲೂ ನೆರವಿಗೆ ನಿಂತವರು ಚಿನ್ನದಂತಹ ಗೆಳೆಯರೇ!
ನಿಂದನೆಗೆ ನಿಂತ ಟ್ರೊಲ್ ಪೇಜಗಳು! 
——————————————-
2021 ಅಕ್ಟೋಬರ್ ಹೊತ್ತಿಗೆ ಶಮ್ಮಿ ಭಾರತೀಯ ಕ್ರಿಕೆಟ್ ತಂಡದಲ್ಲಿ ಒಬ್ಬರೇ ಮುಸ್ಲಿಂ ಆಟಗಾರ ಆಗಿದ್ದರು. ಆಗ ಪಾಕಿಸ್ತಾನ್ ವಿರುದ್ಧ ಭಾರತವು ಸೋತಿತ್ತು. ದುರ್ದೈವ ಏನೆಂದರೆ ಶಮ್ಮಿ 43 ರನ್ ಕೊಟ್ಟು ದುಬಾರಿ ಆಗಿದ್ದರು. ಯಾವುದೇ ಆಟಗಾರ ಎಲ್ಲಾ ಪಂದ್ಯಗಳನ್ನೂ ಗೆಲ್ಲಿಸಲು ಸಾಧ್ಯವಿಲ್ಲ ಎನ್ನುವ ಸತ್ಯ ನಮಗೆ ಅರ್ಥ ಆಗಬೇಕಲ್ಲಾ?  ಆದರೆ ಕೆಲವು ವಿಕೃತ ಮನಸ್ಸಿನ ಮಂದಿ ಶಮ್ಮಿ ವಿರುದ್ಧ ಟ್ರೊಲ್ ಪುಟಗಳನ್ನು ತೆರೆದರು. ಸಾಮಾಜಿಕ ಜಾಲತಾಣದಲ್ಲಿ ನಿರಂತರ ನಿಂದನೆ ನಡೆಯಿತು. ಭಾರತ ಪಾಕ್ ಪಂದ್ಯಗಳಿಗೆ ಹೈಪ್ ಕ್ರಿಯೇಟ್ ಮಾಡುವ ಕೆಲವು ಮಾಧ್ಯಮಗಳು
‘ಯಾವ ಹುತ್ತದಲ್ಲಿ ಯಾವ ಹಾವೋ! ಯಾರಿಗ್ಗೊತ್ತು?’ ಮೊದಲಾದ ಶೀರ್ಷಿಕೆ ನೀಡಿ ಆತನ ತೇಜೋವಧೆಗೆ ಇಳಿದವು. ಆಗಲೂ ಶಮ್ಮಿ ಪರವಾಗಿ ನಿಂತವರು ವಿರಾಟ್ ಅಂತಹ ಗೆಳೆಯರೇ! ಈ ಅಗ್ನಿದಿವ್ಯವನ್ನು ಗೆಲ್ಲುವುದು
ಶಮ್ಮಿಗೆ ತುಂಬಾ ಕಷ್ಟ ಆಯಿತು.
ಅದೇ ಶಮ್ಮಿ ಇಂದು ಭಾರತಕ್ಕೆ ಚಿನ್ನದಂತಹ ಬೌಲರ್ ಆಗಿದ್ದಾರೆ. 
———————————————
ಶಮ್ಮಿ ಜಾಗದಲ್ಲಿ ಬೇರೆ ಯಾರಿದ್ದರೂ ಕ್ರಿಕೆಟಿಗೆ ವಿದಾಯ ಹೇಳಿ ಓಡಿಹೋಗುತ್ತಿದ್ದರು. ಆದರೆ ಮೊಹಮ್ಮದ್ ಶಮ್ಮಿ ಈ ಸಾಲು ಸಾಲು ಅಗ್ನಿಪರೀಕ್ಷೆಗಳ ನಡುವೆ ಕ್ರಿಕೆಟ್ ಬಿಟ್ಟು ಹೋಗಿಲ್ಲ ಅನ್ನುವುದು ಭಾರತದ ಭಾಗ್ಯ. ಇಂತಹ ದೈತ್ಯ ಪ್ರತಿಭೆ ಇದ್ದರೂ ಆತನಿಗೆ ಕ್ರಿಕೆಟ್ ಆಯ್ಕೆ ಮಂಡಳಿ ತೋರಿದ ಅವಕೃಪೆ, ಮಾಡಿದ ಅನ್ಯಾಯ ಯಾವುದನ್ನೂ ಮನಸ್ಸಿನಲಿ ಇಟ್ಟುಕೊಳ್ಳದೆ ನಗು ನಗುತ್ತ ಭಾರತವನ್ನು ಪ್ರತೀ ಪಂದ್ಯದಲ್ಲಿಯೂ ಗೆಲ್ಲಿಸುವುದು ಇದೆಯಲ್ಲ, ಯಾವ ಬಂಜರು ಕ್ರಿಕೆಟ್ ಪಿಚನಲ್ಲಿಯೂ ಸ್ವಿಂಗ್ ಪಡೆದು ಭಾರತದ ನೆರವಿಗೆ ನಿಲ್ಲುವುದಿದೆಯಲ್ಲಾ ಆ ಕಾರಣಕ್ಕಾದರೂ ನೀವು ಶಮ್ಮಿಗೆ ಹ್ಯಾಟ್ಸಾಫ್ ಹೇಳಬೇಕು!
ಅದರಲ್ಲಿಯೂ ಬೇರೆ ಬೇರೆ ಕ್ರಿಕೆಟರುಗಳ ಹೆಂಡತಿಯರು ಮ್ಯಾಚ್ ನೋಡಲು ಬಂದು ತಮ್ಮ ಗಂಡಂದಿರ ನೆರವಿಗೆ ನಿಲ್ಲುತ್ತಿರುವಾಗ, ಒಂದಿಷ್ಟೂ ಬೇಜಾರು ಮಾಡದೆ ಪ್ರತೀ ವಿಕೆಟ್ ಪಡೆದು ಆಕಾಶ ನೋಡುವ ಶಮ್ಮಿಯ ನೋವು ನಮಗೆ ಅರ್ಥ ಆದರೆ ಸಾಕು!
Categories
ಯಶೋಗಾಥೆ ಸ್ಪೋರ್ಟ್ಸ್

ಎರಡೂ ಕೈಗಳು ಇಲ್ಲದ ಶೀತಲ್ ದೇವಿ ವಿಶ್ವವನ್ನು ಗೆದ್ದ ಕಥೆ.

ಕಾಲುಗಳಿಂದ ಬಿಲ್ಲು ಹಿಡಿದು ಬಾಣ ಬಿಡುವ ಆಕೆ ಈಗ ಭಾರತದ ಕಣ್ಮಣಿ.
ಈ ವಾರ ನಡೆದ ಏಷಿಯನ್ ಪಾರಾ ಕೂಟದಲ್ಲಿ ಆಕೆ ಗೆದ್ದದ್ದು ಎರಡು ಚಿನ್ನ ಮತ್ತು ಒಂದು ಬೆಳ್ಳಿಯ ಪದಕ!
———————————————
ಆಕೆಗೆ ಹುಟ್ಟುವಾಗ ವಿಚಿತ್ರವಾದ ಕಾಯಿಲೆ ‘ ಫೋಕೊ ಮೆಲಿಯಾ’  ಅಮರಿತ್ತು. ದೇಹದ ಪ್ರಮುಖ ಅಂಗಗಳು ಬೆಳೆಯದೆ ಹೋಗುವ ವಿಚಿತ್ರ ಕಾಯಿಲೆ ಅದು. ಅದರ ಪರಿಣಾಮವಾಗಿ ಆಕೆಯ ಎರಡು ತೋಳುಗಳು ಬೆಳೆಯಲೇ ಇಲ್ಲ. ಕೈಗಳಿಂದ ಮಾಡಬೇಕಾದ ಕೆಲಸಗಳನ್ನು ಕಾಲುಗಳಿಂದ ಮಾಡಬೇಕಾದ ಅನಿವಾರ್ಯತೆ ಆಕೆಗೆ. ಅದಕ್ಕಿಂತ ಹೆಚ್ಚಾಗಿ ಸಣ್ಣ ಸಣ್ಣ ಕೆಲಸಗಳಿಗೆ ಬೇರೆಯವರನ್ನು ಅವಲಂಬಿಸಬೇಕಾದ ದೈನೇಸಿ ಬದುಕು. ಅಂತಹ ಹುಡುಗಿ ಇಂದು ಪಾರಾ ಏಷಿಯನ್  ಗೇಮ್ಸ್  ಎಂಬ ದೊಡ್ಡ ಕ್ರೀಡಾ ವೇದಿಕೆಯಲ್ಲಿ  ಬಿಲ್ಗಾರಿಕೆಯಲ್ಲಿ ಎರಡು ಚಿನ್ನ ಮತ್ತು ಒಂದು ಬೆಳ್ಳಿ ಪಡೆದು ವಿಶ್ವದ ಗಮನ ಸೆಳೆದಿದ್ದಾರೆ.
ಆಕೆ ಶೀತಲ್ ದೇವಿ. ವಯಸ್ಸು ಇನ್ನೂ 16! 
—————————————-
ಈ ಪಾರಾ ಆರ್ಚರ್ ತನ್ನ ಒಂದು ಕಾಲಿಂದ ಬಿಲ್ಲು ಹಿಡಿದು ಇನ್ನೊಂದು ಕಾಲಿನ ಬೆರಳುಗಳ ನಡುವೆ ಬಾಣವನ್ನು ಫಿಕ್ಸ್ ಮಾಡಿ ಗುರಿಯೆಡೆಗೆ ದೃಷ್ಟಿ ನೆಟ್ಟು ಬಾಣ ಬಿಟ್ಟರು ಎಂದರೆ ಅದು ನೇರವಾಗಿ ಗುರಿ ಮುಟ್ಟುವುದನ್ನು ನೋಡುವುದೇ ಚೆಂದ. ಪಾರಾ ಕ್ರೀಡೆಗಳು ಇರುವುದೇ ಇಂತಹ ಸಾಧಕರನ್ನು ಗುರುತಿಸಲು. ಆದರೆ ಕ್ರಿಕೆಟ್ ವೈಭವದಲ್ಲಿ ಮುಳುಗಿರುವ ಮಾಧ್ಯಮದ ಮಂದಿಗೆ ಇವೆಲ್ಲವೂ ಟಿ ಆರ್ ಪಿ ಸರಕಾಗಿಲ್ಲ ಅನ್ನೋದು ನನಗೆ ಬೇಜಾರಿನ ಸಂಗತಿ.
ಯಾರೀ ಶೀತಲ್ ದೇವಿ? 
———————————-
ಆಕೆ ಜಮ್ಮು ಕಾಶ್ಮೀರದ ಕ್ರಿಸ್ತ್ವಾರ್ ಎಂಬ ಪ್ರದೇಶದಿಂದ ಬಂದವರು. ಆಕೆಯ ತಂದೆ ಒಬ್ಬ ಸಣ್ಣ ಕೃಷಿಕ. ತಾಯಿ ಮೇಕೆಗಳನ್ನು ಸಾಕುವವರು. ಮನೆಯಲ್ಲಿ ತೀವ್ರವಾದ ಬಡತನ ಕಾಲು ಮುರಿದುಕೊಂಡು ಬಿದ್ದಿತ್ತು. ತನ್ನ ವಿಕಲತೆಯ ಕಾರಣಕ್ಕೆ ಆಕೆ ಕುಸಿದುಹೋದಾಗ ಅಪ್ಪ ಮತ್ತು ಅಮ್ಮ ಆಕೆಯ ನೆರವಿಗೆ ಬರುತ್ತಿದ್ದರು. ಆಕೆಗೆ ಶಿವಾನಿ ಎಂಬ ತಂಗಿ ಇದ್ದು ಆಕೆಯ ಬೆಸ್ಟ್ ಫ್ರೆಂಡ್ ಆಗಿದ್ದಾಳೆ. ಮನೆಯ ಸಮಸ್ಯೆಗಳ ನಡುವೆ ಕೂಡ ಆಕೆ ಹತ್ತನೇ ತರಗತಿಯವರೆಗೆ ಓದುತ್ತಾರೆ. ಆಗ ಬೆಂಗಳೂರಿನ ಪ್ರೀತಿ ರೈ ಅವರು ಸ್ಥಾಪನೆ ಮಾಡಿದ BEING YOU ಎಂಬ NGO ಆಕೆಯ ನೆರವಿಗೆ ನಿಲ್ಲುತ್ತದೆ. ಆಕೆಗೆ ಬೇಕಾದ ತರಬೇತಿಗಳು ಮತ್ತು ಸಪೋರ್ಟ್ ಆ NGO ಮೂಲಕ ದೊರೆಯುತ್ತದೆ. ಆಕೆಯ ಸಂಕಲ್ಪ ಶಕ್ತಿ ಮತ್ತು ಇಚ್ಛಾ ಶಕ್ತಿಗಳು ತುಂಬಾ ಎತ್ತರದಲ್ಲಿ ಇದ್ದವು ಎನ್ನುತ್ತಾರೆ ಆಕೆಯನ್ನು ಭೇಟಿ ಮಾಡಿದವರು.
ಆ ಹಂತದಲ್ಲಿ ಆಕೆಯ ಬದುಕಿನಲ್ಲಿ ಪರಿಣಾಮಕಾರಿ ತಿರುವು ತಂದವರು ಕುಲದೇವ್ ವೆದ್ವಾನ್ ಎಂಬ ಕೋಚ್. ಅವರು ಆಕೆಯನ್ನು ಕರೆದುಕೊಂಡು ಬಂದು ವೈಷ್ಣೋದೇವಿ ದೇವಳದ ಆಡಳಿತಕ್ಕೆ ಒಳಪಟ್ಟ ಬಿಲ್ಗಾರಿಕಾ ಆಕಾಡೆಮಿಗೆ ತಂದು ಸೇರಿಸುತ್ತಾರೆ.
ಖೇಲೋ ಇಂಡಿಯಾ ಫಲಾನುಭವಿ ಆಕೆ.
———————————————
ವೈಷ್ಣೋದೇವಿ ಅಕಾಡೆಮಿಯಲ್ಲಿ ಆಕೆಗೆ ತನ್ನ ನ್ಯೂನತೆಯು ಮರೆತೇ ಹೋಯಿತು. ಆಕೆ ಯಾವುದೇ ನ್ಯೂನತೆ ಇಲ್ಲದ ಬಲಿಷ್ಠ ಬಿಲ್ಗಾರರ ಜೊತೆಗೆ ಸ್ಪರ್ಧೆಯನ್ನು ಮಾಡಬೇಕಾಯಿತು. ಅಲ್ಲಿ ಮ್ಯಾಟ್ ಸ್ಟುಟ್ಸಮನ್ ಎಂಬ ಆರ್ಚರಿ ಲೆಜೆಂಡ್ ಆಕೆಯ ಸೂಕ್ಷ್ಮ  ತಪ್ಪುಗಳನ್ನು ತಿದ್ದಿ ಆಕೆಯನ್ನು ಪುಟವಿಟ್ಟ ಚಿನ್ನವಾಗಿ ರೂಪಿಸಿದರು. ಆಕೆಯ ಉತ್ಸಾಹವನ್ನು ಗಮನಿಸಿದ ಭಾರತೀಯ ಸೇನೆ ಆಕೆಯ ಶಿಕ್ಷಣದ ಮತ್ತು ತರಬೇತಿಯ ಖರ್ಚನ್ನು ಸ್ಪಾನ್ಸರ್ ಮಾಡಿತು. ಎಲ್ಲರ ಬೆಂಬಲ ಪಡೆದ ಶೀತಲ್ ದೇವಿ ಕಳೆದ ವರ್ಷ ಖೇಲೋ ಇಂಡಿಯಾ ಕೂಟದಲ್ಲಿ ಭಾಗವಹಿಸಿ ಬೆಳ್ಳಿಯ ಪದಕವನ್ನು ಗೆದ್ದರು.
ಇದೇ ವರ್ಷ ಝೆಕ್ ಗಣರಾಜ್ಯದಲ್ಲಿ ನಡೆದ ಅಂತಾರಾಷ್ಟ್ರೀಯ ಪಾರಾ ಕೂಟದಲ್ಲಿ ಭಾಗವಹಿಸಿ ಎರಡು ಬೆಳ್ಳಿ ಮತ್ತು ಒಂದು ಕಂಚಿನ ಪದಕ ಗೆದ್ದುಕೊಂಡರು. ಆ ಮೂಲಕ ಪಾರಾ ಕೂಟದಲ್ಲಿ ಪದಕವನ್ನು ಗೆದ್ದ ಮೊದಲ ತೋಳಿಲ್ಲದ ಬಿಲ್ಗಾತಿ ಆಗಿ ಆಕೆ ವಿಶ್ವದಾಖಲೆಯನ್ನೇ ಮಾಡಿದ್ದರು. ಪ್ರಪಂಚದಲ್ಲಿ ತೋಳು ಇಲ್ಲದ ಒಟ್ಟು ಆರು ಜನ ಬಿಲ್ಗಾರರು ಇದ್ದಾರೆ ಮತ್ತು ಆ ಪಟ್ಟಿಯಲ್ಲಿ ಶೀತಲ್ ದೇವಿ ಒಬ್ಬರೇ ಮಹಿಳೆ ಎನ್ನುವಾಗ ರೋಮಾಂಚನ ಆಗುತ್ತದೆ.
ಕೇವಲ ಎರಡು ವರ್ಷಗಳ ತರಬೇತಿಯಿಂದ ಚಿನ್ನದ ಫಸಲು.
——————————————–
ಆಕೆ ಬಿಲ್ಗಾರಿಕೆ ತರಬೇತು ಪಡೆಯಲು ಆರಂಭ ಮಾಡಿ ಕೇವಲ ಎರಡು ವರ್ಷ ಆಗಿದೆ. ತರಬೇತು ಇದ್ದಾಗ ಮಾತ್ರ ಇಡೀ ದಿನ ಮೈದಾನದಲ್ಲಿ ಕಳೆಯುತ್ತಾರೆ. ಆಕೆಯ ಆತ್ಮವಿಶ್ವಾಸ, ಛಲ ಮತ್ತು ಗೆಲ್ಲುವ ಹಂಬಲ ನಿಜವಾಗಿಯೂ ಅದ್ಭುತವಾಗಿ ಇವೆ. ಆಕೆಗಾಗಿ ರೂಪಿಸಲಾದ ವಿಶೇಷವಾದ ಬಿಲ್ಲು ಹಿಡಿದು ಆಕೆ ಗೆಲುವಿನತ್ತ ಗುರಿ ಇಡುವಾಗ ನೀವು ಆಕೆಯನ್ನು ಪ್ರೀತಿ ಮಾಡದೆ ಇರಲು ಸಾಧ್ಯವೇ ಇಲ್ಲ.
” ನನಗೆ ಆರಂಭದಲ್ಲಿ ಬಿಲ್ಲು ಎತ್ತುವ ಶಕ್ತಿ ಕೂಡ ಇರಲಿಲ್ಲ. ಆದರೆ ನನ್ನ ಹೆತ್ತವರು ತಮ್ಮ ಬಡತನದ ನಡುವೆ ಕೂಡ ನನ್ನನ್ನು ಪ್ರೋತ್ಸಾಹಿಸಿ ಈ ಹಂತದವರೆಗೆ ತಂದು ನಿಲ್ಲಿಸಿದ್ದಾರೆ. ನನ್ನನ್ನು ಸ್ಪಾನ್ಸರ್ ಮಾಡಿ ಪ್ರೋತ್ಸಾಹ ನೀಡಿದ ಭಾರತೀಯ ಸೇನೆಗೆ ಮತ್ತು ನನ್ನಂತಹ ಕ್ರೀಡಾಪಟುಗಳ ಆಶಾಕಿರಣ ಆಗಿರುವ ‘ಖೇಲೋ ಇಂಡಿಯಾ ‘ ಯೋಜನೆಗೆ ನಾನು ಚಿರಋಣಿ ” ಎಂದು ಆಕೆ ಹೇಳುವಾಗ ಆಕೆಯ ಕಣ್ಣುಗಳಲ್ಲಿ ಅಮೇಜಾನ್ ನದಿಯ ಪ್ರವಾಹ ಕಂಡು ಬರುತ್ತದೆ.
ಅಂದ ಹಾಗೆ ಈ ಬಾರಿಯ ಏಷಿಯನ್ ಪಾರಾ ಕೂಟದಲ್ಲಿ ಭಾರತದ ಹತ್ತಾರು ವಿಶೇಷ ಚೇತನ ಪ್ರತಿಭೆಗಳು 90+ ಪದಕಗಳನ್ನು ಭಾರತಕ್ಕೆ ತಂದುಕೊಟ್ಟಿದ್ದಾರೆ. ಒಬ್ಬೊಬ್ಬರದ್ದು ಒಂದೊಂದು ನೋವಿನ ಕಥೆ ಇದೆ. ವಿಶ್ವಕಪ್ ಕ್ರಿಕೆಟ್ ಜ್ವರದಲ್ಲಿ ಮಲಗಿರುವ ನಾವು ಒಮ್ಮೆ ಮೈ ಕೊಡಹಿ ಎದ್ದು ಅವರಿಗೆ ಒಂದು ಶುಭಾಶಯ ಹೇಳೋಣವೇ?
Categories
ಯಶೋಗಾಥೆ ಸ್ಪೋರ್ಟ್ಸ್

‘ಕಪ್ಪು ಜಿಂಕೆ’ ಎಂದು ಕೀರ್ತಿ ಪಡೆದ ವಿಲ್ಮಾ ರುಡಾಲ್ಫ್.

ಆಕೆ ಶತಮಾನದ ಕ್ರೀಡಾಪಟು – ವಿಲ್ಮಾ ರುಡಾಲ್ಫ್. 
ನಾನು ತುಂಬಾ ಡಿಪ್ರೆಸ್ ಆದಾಗ ಮೊದಲು ಓದುವುದು ಆಕೆಯ ಕಥೆ!
———————————-
ವರ್ಣ ದ್ವೇಷದ ಬೆಂಕಿಯ  ಕುಲುಮೆಯಲ್ಲಿ ಚಂದವಾಗಿ  ಅರಳಿದ ಒಂದು ಅದ್ಭುತವಾದ  ಕ್ರೀಡಾ ಪ್ರತಿಭೆಯನ್ನು ತಮಗೆ ಇಂದು  ಪರಿಚಯಿಸಲು ತುಂಬಾ ಹೆಮ್ಮೆ ಪಡುತ್ತಿರುವೆ. ಆಕೆಯನ್ನು ಜಗತ್ತು ‘ಕಪ್ಪು ಜಿಂಕೆ’ ಎಂದು ಕರೆಯಿತು. ಆಕೆಯ ಸಾಧನೆಯು ಮುಂದೆ ಸಾವಿರ ಸಾವಿರ ಕಪ್ಪು ವರ್ಣದ ಸಾಧಕರಿಗೆ ಪ್ರೇರಣೆ ನೀಡಿತು. ಆಕೆ ವಿಲ್ಮಾ ರುಡಾಲ್ಫ್.
ಆಕೆಯು ಬಾಲ್ಯದಲ್ಲಿ ಎಲ್ಲರಿಗೂ ಬೇಡವಾದ ಮಗು ಆಗಿದ್ದಳು!
——————————
ಆಕೆ ಹುಟ್ಟಿದ್ದು ಅಮೆರಿಕಾದ ಸೈಂಟ್ ಬೆಥ್ಲೆಹೆಮ್ ಎಂಬ ಪುರಾತನ ಪುಟ್ಟ ನಗರದಲ್ಲಿ. ಅವಳು Premature Baby ಆಗಿ ಹುಟ್ಟಿದವಳು. ಹುಟ್ಟುವಾಗ ಅವಳ ತೂಕ ನಾಲ್ಕೂವರೆ  ಪೌಂಡ್ ಮಾತ್ರ ಆಗಿತ್ತು. ಮಗು ಬದುಕುವ ಭರವಸೆ ವೈದ್ಯರಿಗೆ ಇರಲಿಲ್ಲ! ಅವಳ ಅಪ್ಪ ರೈಲ್ವೆ ನಿಲ್ದಾಣದಲ್ಲಿ ಪೋರ್ಟರ್ ಆಗಿದ್ದರು. ತೀವ್ರ ಬಡತನ. ಜೊತೆಗೆ ಅಪ್ಪನಿಗೆ ಎರಡು ಮದುವೆ ಆಗಿತ್ತು.  ಆತನಿಗೆ ಹುಟ್ಟಿದ್ದು 22 ಮಕ್ಕಳು! ಅದರಲ್ಲಿ ವಿಲ್ಮಾ 20ನೆಯ ಮಗು! ಆದ್ದರಿಂದ ಅವಳು ಅಪ್ಪನಿಗೆ ಬೇಡವಾದ ಮಗಳು. ಅಮ್ಮನ ಮುದ್ದಿನ ಮಗಳು.
ಬಾಲ್ಯದಲ್ಲಿ ಅಮರಿತು ಸಾಲು ಸಾಲು ಕಾಯಿಲೆಗಳು!
——————————
ಅಂತಹ ಹುಡುಗಿಗೆ ಬಾಲ್ಯದಲ್ಲಿ ಸಾಲು ಸಾಲು ಕಾಯಿಲೆಗಳ ಸರಮಾಲೆಯೇ ಎದುರಾಯಿತು. ಎರಡು ವರ್ಷದಲ್ಲಿ ಪುಟ್ಟ ಮಗುವಿಗೆ ನ್ಯೂಮೋನಿಯಾ ಬಂದು ಅವಳ ಅರ್ಧ ಶಕ್ತಿಯನ್ನು ತಿಂದು ಹಾಕಿತ್ತು. ಚೇತರಿಸಲು ಅವಕಾಶ ಕೊಡದೆ ಬೆನ್ನಿಗೆ ಬಂದದ್ದು ಸ್ಕಾರ್ಲೆಟ್ ಜ್ವರ. ಮೈ ಮೇಲೆ ರಕ್ತ ವರ್ಣದ ಗುಳ್ಳೆಗಳು ಬಂದು ಕೀವು ತುಂಬುವ ಖಾಯಿಲೆ ಅದು. ಅಮ್ಮ ಮಗಳ ಆರೈಕೆ ಮಾಡಿ ಹೈರಾಣಾಗಿ ಬಿಟ್ಟರು! ಸರಿಯಾಗಿ ಐದನೇ ವರ್ಷ ತುಂಬುವ ಹೊತ್ತಿಗೆ ಮಗುವಿಗೆ ಮತ್ತೆ ತೀವ್ರ ಜ್ವರ ಬಂತು. ಪರೀಕ್ಷೆ ಮಾಡಿದಾಗ ವೈದ್ಯರು ಪತ್ತೆ ಹಚ್ಚಿದ್ದು ಪೋಲಿಯೋ ಎಂಬ ಮಹಾ ಕಾಯಿಲೆ! ಆಗಿನ ಕಾಲದಲ್ಲಿ ಭಯ ಹುಟ್ಟಿಸುವ ಕಾಯಿಲೆ ಅದು!
ಪೋಲಿಯೋಗ್ರಸ್ತ ತೆವಳುವ ಮಗು.
———————————–
ಅವಳ ವಯಸ್ಸಿನ ಬೇರೆ ಮಕ್ಕಳು ಶಾಲೆಗೆ ಹೋಗಲು ಆರಂಭ ಮಾಡಿದ್ದರು. ಆದರೆ ವಿಲ್ಮಾ ನೆಲದಲ್ಲಿ  ತೆವಳುತಿದ್ದಳು. ವಾಶ್ ರೂಮಿಗೆ ಅವಳನ್ನು ಅಮ್ಮ ಹೊತ್ತುಕೊಂಡು ಹೋಗಬೇಕಾದ ಅನಿವಾರ್ಯತೆ ಇತ್ತು ! ಅವರಿದ್ದ ನಗರದಲ್ಲಿ ಆಗ ನೀಗ್ರೋಗಳಿಗೆ ಆಸ್ಪತ್ರೆಗಳಿಗೆ ಪ್ರವೇಶ ಇರಲಿಲ್ಲ. ಎಲ್ಲ ವೈದ್ಯಕೀಯ ಸೌಲಭ್ಯಗಳೂ ಬಿಳಿ ಚರ್ಮದವರಿಗೆ ಮೀಸಲು!  ಆದ್ದರಿಂದ ಅವಳ ಚಿಕಿತ್ಸೆಗೆ ಅಮ್ಮ ಅವಳನ್ನು 50 ಮೈಲು ದೂರದ ನಗರಕ್ಕೆ ಹೋಗಿ ಬರಬೇಕಾಯಿತು. ಅದೂ ಸತತ ಎರಡು ವರ್ಷ! ಏಳು ವರ್ಷದ ಮಗಳನ್ನು ಆ ಮಹಾ ತಾಯಿಯು ಸೊಂಟದ ಮೇಲೆ ಕೂರಿಸಿ  ಆಸ್ಪತ್ರೆಯ ವಾರ್ಡಿನಿಂದ ವಾರ್ಡಿಗೆ ಎಡತಾಕುವುದನ್ನು ನೋಡಿದವರಿಗೆ ‘ಅಯ್ಯೋ ಪಾಪ’ ಅನ್ನಿಸುತಿತ್ತು.
‘ಅಮ್ಮಾ, ನನ್ನ ಮಂಚವನ್ನು ಕಿಟಕಿಯ ಪಕ್ಕ ಸರಿಸು. ಹೊರಗೆ ಮಕ್ಕಳು ಆಡುವುದನ್ನು ನೋಡಬೇಕು’ ಎಂದು ಹೇಳಿದಾಗ ಪ್ರೀತಿಯ ಅಮ್ಮ ಹಾಗೆ ಮಾಡಿದ್ದರು. ಈ ಹುಡುಗಿಯು ಕಿಟಕಿಯಿಂದ ಹೊರಗೆ ಮೈದಾನದಲ್ಲಿ ಮಕ್ಕಳು ಆಡುವುದನ್ನು, ಓಡುವುದನ್ನು  ನೋಡುತ್ತಾ ಸಂಭ್ರಮಿಸುವುದು, ಖುಷಿ ಪಡುವುದನ್ನು ನೋಡುತ್ತಾ ಅಮ್ಮನ ಮುಖದಲ್ಲಿ ಅಪರೂಪದ ನಗುವಿನ ಗೆರೆಯು ಚಿಮ್ಮುತ್ತಿತ್ತು! ಮನೆಯ ಒಳಗೆ ಗೋಡೆ ಹಿಡಿದುಕೊಂಡು ನಡೆಯಲು ಮೊದಲು ಪ್ರಯತ್ನ ನಡೆಯಿತು. ಅದರೊಂದಿಗೆ ಆರ್ಥೋಪೆಡಿಕ್ ಚಿಕಿತ್ಸೆಗಳು ನಡೆದವು. ದೀರ್ಘ ಕಾಲ ಫಿಸಿಯೋ ತೆರೆಪಿಯು ನಡೆದು ಬಲಗಾಲಿನ ಶಕ್ತಿ ಮರಳಿತು. ಆದರೆ ಎಡಗಾಲಿನ ಶಕ್ತಿಯು ಕುಂಠಿತವಾಗಿತ್ತು. ಇನ್ನೊಂದು ದೊಡ್ಡ ಸಮಸ್ಯೆ ಎಂದರೆ ಅವಳ ಪಾದಗಳು ಅಸಮ ಆಗಿದ್ದವು. ಅವಳ ಸೈಜಿನ ಶೂಗಳು ಎಲ್ಲಿಯೂ ಸಿಗುತ್ತಿರಲಿಲ್ಲ!
ಈ ಸಮಸ್ಯೆಗಳ ನಡುವೆ ಅಮ್ಮನಿಗೆ ಮಗಳ ಶಾಲೆಯ ಚಿಂತೆ. ಅವಳು ಏಳು ವರ್ಷ ಪ್ರಾಯದಲ್ಲಿ ನೇರವಾಗಿ ಎರಡನೇ ತರಗತಿಗೆ ಸೇರ್ಪಡೆ ಆದವಳು.
ಅವಳು ಎಡಗಾಲನ್ನು ಕೊಂಚ ಎಳೆದುಕೊಂಡು ನಡೆಯುವ ರೀತಿಯನ್ನು ನೋಡಿ ಅವಳ ಓರಗೆಯ ಮಕ್ಕಳಿಗೆ ಒಂಥರಾ ತಮಾಷೆ ಅನ್ನಿಸುತ್ತಿತ್ತು. ಅಣಕು, ಕೀಟಲೆ ಮಾಡಿ ಅವಳ ಕಣ್ಣಲ್ಲಿ ನೀರು ತರಿಸುತ್ತಿದ್ದರು.
ಇದರಿಂದ ನೊಂದುಕೊಂಡ ವಿಲ್ಮಾ ತರಗತಿಗಳಿಗೆ ಚಕ್ಕರ್ ಹೊಡೆದು ಮೈದಾನದಲ್ಲಿ ಹೆಚ್ಚು ಹೊತ್ತನ್ನು ಕಳೆಯುವುದನ್ನು ಅಭ್ಯಾಸ ಮಾಡಿದಳು.ಅದೇ  ರೀತಿ ಎಡಗಾಲಿಗೆ ಆಧಾರವನ್ನು  ಕೊಡುವ ಲೆಗ್ ಬ್ರೇಸ್ ಹಾಕಿ ವೇಗವಾಗಿ ನಡೆಯಲು ಆರಂಭ ಮಾಡಿದಳು. ಅವಳ ಒಳಗೆ ಅದಮ್ಯವಾದ ಒಂದು ಚೈತನ್ಯ ಇರುವುದನ್ನು ಒಬ್ಬ ಕೋಚ್ ದಿನವೂ ನೋಡುತ್ತಿದ್ದರು. ಅವರ ಹೆಸರು ಎಡ್ ಟೆಂಪಲ್.
ಓಡು ಕಪ್ಪು ಜಿಂಕೆ,  ಓಡು!
————————-
ಅವಳಿಗೆ ದೇವರು ಅದ್ಭುತವಾದ  ಎತ್ತರವನ್ನು ಕೊಟ್ಟಿದ್ದರು ( 5 ಅಡಿ 11 ಇಂಚು). ಪ್ರೌಢಶಾಲೆಯ ಹಂತಕ್ಕೆ  ಬಂದಾಗ ಎಡಗಾಲಿನ ಶಕ್ತಿಯು ಮರಳಿತ್ತು. ನಡೆಯುವಾಗ ಒಂದು ಸಣ್ಣ ಜರ್ಕ್ ಬಿಟ್ಟರೆ ಬೇರೆ ಯಾವುದೇ ವ್ಯತ್ಯಾಸವೂ  ಕಾಣುತ್ತಿರಲಿಲ್ಲ. ಮೊದಲ ಬಾರಿಗೆ ಪ್ರತಿಷ್ಠಿತ ಕಾಲೇಜಿನ
ಬಾಸ್ಕೆಟಬಾಲ್ ಟೀಮಿಗೆ ಅವಳು ಆಯ್ಕೆ ಆದಾಗ ಕುಣಿದು ಸಂಭ್ರಮ ಪಟ್ಟಿದ್ದಳು. ಇಡೀ
ಬಾಸ್ಕೆಟ್ಬಾಲ್ ಕೋರ್ಟಲ್ಲಿ ಅವಳು ಮಿಂಚಿನಂತೆ ಓಡುವುದನ್ನು ನೋಡಿದ  ಕೋಚ್ ಅವಳನ್ನು ಅಥ್ಲೆಟಿಕ್ಸ ತಂಡಕ್ಕೆ ಸೇರಿಸಿ ಕೋಚಿಂಗ್ ಆರಂಭಿಸಿದರು. ಎಡ್ ಟೆಂಪಲ್ ಎಂಬ ಆ ಕೋಚ್ ಅವಳಲ್ಲಿ ಇದ್ದ ಅದ್ಭುತವಾದ  ಕ್ರೀಡಾ ಪ್ರತಿಭೆಯನ್ನು ಪುಟವಿಟ್ಟ ಚಿನ್ನದಂತೆ ಹೊರತಂದರು. ಅವಳು ಮೊದಲ ಬಾರಿ  ಭಾಗವಹಿಸಿದ ಓಪನ್ ಕ್ರೀಡಾಕೂಟದಲ್ಲಿ ಎಲ್ಲಾ  ಒಂಬತ್ತು ಸ್ಪರ್ದೆಗಳಲ್ಲಿ ಕೂಡ ಚಿನ್ನದ ಪದಕವನ್ನು ಗೆದ್ದಿದ್ದಳು!  ಅವಳ ಒಳಗೆ ಎಂದಿಗೂ ದಣಿಯದ, ಸೋಲನ್ನು ಸುಲಭವಾಗಿ  ಒಪ್ಪಿಕೊಳ್ಳದ, ಬಿದ್ದಲ್ಲಿಂದ ಪುಟಿದು ಮತ್ತೆ ಎದ್ದುಬರುವ ಚೈತನ್ಯ ಶಕ್ತಿ ಇತ್ತು!
ಬಾಲ್ಯದಲ್ಲಿ ತೆವಳುತ್ತಿದ್ದ ಮಗು ಒಲಿಂಪಿಕ್ಸ್ ಮೆಡಲ್ ಪಡೆಯಿತು!
———————————-
1956ರ ಮೆಲ್ಬೋರ್ನ್ ಒಲಿಂಪಿಕ್ಸ್ ಕಣದಲ್ಲಿ ಅವಳು ಅಮೇರಿಕಾವನ್ನು ಪ್ರತಿನಿಧಿಸಿ ರಿಲೇ ಓಟದಲ್ಲಿ ಒಂದು ಕಂಚಿನ ಪದಕ ಮಾತ್ರ ಗೆದ್ದಳು. ಆಗ ಅವಳಿಗೆ ಕೇವಲ 16 ವರ್ಷ!ಮತ್ತೆ ಸ್ಪಷ್ಟ ಗುರಿಯೊಂದಿಗೆ ಪ್ರಾಕ್ಟೀಸ್ ಮಾಡಿ ಮುಂದಿನ ಒಲಿಂಪಿಕ್ಸ್ ಸ್ಪರ್ಧೆಗೆ ಪ್ರವೇಶ ಪಡೆದಳು.
ಅದು 1960ರ ರೋಮ್ ಒಲಿಂಪಿಕ್ಸ್. ಜಗತ್ತಿನಾದ್ಯಂತ ಟಿವಿ ಕವರೇಜ್ ಆಗ ತಾನೆ
ಆರಂಭ ಆಗಿತ್ತು! ಆದ್ದರಿಂದ ಸಹಜವಾಗಿ ಒಲಿಂಪಿಕ್ಸ್ ಕ್ರೇಜ್ ಹೆಚ್ಚಿತ್ತು. ಮೈದಾನದಲ್ಲಿ ಕೂಡ 43 ಡಿಗ್ರಿ ಉಷ್ಣತೆ ಇತ್ತು! ಆ ಒಲಿಂಪಿಕ್ಸ್ ಕಣದಲ್ಲಿ ವಿಲ್ಮಾ ರುಡಾಲ್ಫ್ ಬಿರುಗಾಳಿಯ ಹಾಗೆ ಓಡಿದಳು. 100 ಮೀಟರ್ ಚಿನ್ನದ ಪದಕ ಪಡೆದು ಜಗತ್ತಿನ ಅತ್ಯಂತ ವೇಗದ ಮಹಿಳೆ ಎಂಬ ಕೀರ್ತಿ ಆಕೆ ಪಡೆದರು! ಟೈಮಿಂಗ್ 11.2 ಸೆಕೆಂಡ್ಸ್! ಅದು ಆ ಕಾಲದ  ವಿಶ್ವದಾಖಲೆ ಆಗಿತ್ತು! 200 ಮೀಟರ್ ಓಟದಲ್ಲಿ ಮತ್ತೆ ವಿಶ್ವ ದಾಖಲೆಯ ಜೊತೆಗೆ ಚಿನ್ನದ ಪದಕ! ಟೈಮಿಂಗ್ 22.9 ಸೆಕೆಂಡ್ಸ್! ಮತ್ತೆ 4X100 ಮೀಟರ್ ರಿಲೇ ಓಟದಲ್ಲಿ ಚಿನ್ನದ ಪದಕ! ಹೀಗೆ ಮೂರು ಚಿನ್ನದ ಪದಕ ಒಂದೇ ಕೂಟದಲ್ಲಿ ಪಡೆದ ವಿಶ್ವದ  ಮೊದಲ ಮಹಿಳಾ ಅಥ್ಲೆಟ್ ಎಂಬ ಕೀರ್ತಿಯು ಅವಳಿಗೆ ದೊರೆಯಿತು!
ವಿಲ್ಮಾ ರುಡಾಲ್ಫ್  ಸ್ಥಾಪಿಸಿದ ಎರಡು ವಿಶ್ವಮಟ್ಟದ ದಾಖಲೆಗಳು ಮುಂದೆ  ಹಲವು ವರ್ಷಗಳ ಕಾಲ ಅಬಾಧಿತವಾಗಿ  ಉಳಿದವು. ಆ ಎತ್ತರದ  ಸಾಧನೆಯ ನಂತರ ವಿಲ್ಮಾ
ವಿಶ್ವಮಟ್ಟದ ಹಲವು  ಕೂಟಗಳಲ್ಲಿ ನಿರಂತರವಾಗೀ ಓಡಿದಳು ಮತ್ತು ಓಡಿದ್ದಲ್ಲೆಲ್ಲ ಪದಕಗಳನ್ನು ಸೂರೆ ಮಾಡಿದಳು.
ತನ್ನ 22ನೆಯ ವರ್ಷದಲ್ಲಿ ಕೀರ್ತಿಯ ಶಿಖರದಲ್ಲಿ ಇರುವಾಗಲೇ ವಿಲ್ಮಾ ಕ್ರೀಡೆಗೆ ವಿದಾಯ ಕೋರಿದರು! 1964ರ ಟೋಕಿಯೋ ಒಲಿಂಪಿಕ್ಸನಲ್ಲಿ ಭಾಗವಹಿಸುವ ಅವಕಾಶ ಇದ್ದರೂ ಕೂಡ ಸ್ಪರ್ಧೆ ಮಾಡಲೇ ಇಲ್ಲ!
ವಿಲ್ಮಾ ರುಡಾಲ್ಫ್ – ಶತಮಾನದ ಕ್ರೀಡಾಪಟು.
——————————
ತನ್ನ ಬಾಲ್ಯದಲ್ಲಿ ಪೋಲಿಯೋ ಎಂಬ ಮಾರಿಗೆ  ಪೀಡಿತವಾದ, ಕಪ್ಪುವರ್ಣ ಎಂಬ ಕಾರಣಕ್ಕೆ ಅಪಮಾನ ಮತ್ತು ತಿರಸ್ಕಾರಕ್ಕೆ ಒಳಗಾದ ವಿಲ್ಮಾ ತನ್ನ ಕ್ರೀಡಾ ಸಾಧನೆಗಳ ಮೂಲಕ ಇತಿಹಾಸ ಬರೆದಳು! ಮುಂದೆ ಅವಳನ್ನು ‘ಶತಮಾನದ ಕ್ರೀಡಾಪಟು’ ಎಂದು ಒಂದು ಪತ್ರಿಕೆ ಕರೆಯಿತು. ಅವಳ ಆತ್ಮಚರಿತ್ರೆ ‘ವಿಲ್ಮಾ- The Story of Wilma Rudolph’ ಲಕ್ಷಾಂತರ ಮಂದಿಗೆ ಪ್ರೇರಣೆ ಕೊಟ್ಟಿತು. ಅವಳ ಸಾಧನೆಗಳ ಬಗ್ಗೆ 21 ಪ್ರಸಿದ್ಧ ಲೇಖಕರು ಪುಸ್ತಕಗಳನ್ನು    ಬರೆದಿದ್ದಾರೆ. ಅವಳ ಬದುಕಿನ ಕಥೆ ಅಮೆರಿಕ ಮತ್ತು ಇತರ ದೇಶಗಳ ಕಾಲೇಜಿನ ಪಠ್ಯ ಪುಸ್ತಕಗಳಲ್ಲಿ ಮುಂದೆ ಸ್ಥಾನ ಪಡೆಯಿತು.
ಈಗ ಹೇಳಿ ವಿಲ್ಮಾ ಗ್ರೇಟ್ ಹೌದಾ?
Categories
ಕ್ರಿಕೆಟ್ ಯಶೋಗಾಥೆ

ಸ್ಟುವರ್ಟ್ ಬ್ರಾಡ್ ಎಂಬ ಫೈಟಿಂಗ್ ಸ್ಪಿರಿಟ್.

2007-  ಓವರಿಗೆ ಆರು ಸಿಕ್ಸರ್
2023-  602 ವಿಕೆಟ್ಸ್ ಪಡೆದು ನಿವೃತ್ತಿ!
ವಿಲನ್ ಆಗಿ ಆರಂಭ. ಲೆಜೆಂಡ್ ಆಗಿ ಮುಕ್ತಾಯ!
———————————–
ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್  ನಡುವಿನ ಪ್ರತಿಷ್ಠಿತ ಆಷಸ್ ಸರಣಿಯ ಕೊನೆಯ ಪಂದ್ಯದ ಕೊನೆಯ ದಿನ ಇಡೀ ಮೈದಾನದಲ್ಲಿ ಸ್ಟ್ಯಾಂಡಿಂಗ್ ಓವೇಷನ್ ಪಡೆದು, ತನ್ನ ಸಹ ಆಟಗಾರರಿಂದ ಗಾರ್ಡ್ ಆಫ್ ಆನರ್ ಪಡೆದು ಒಬ್ಬ ಕ್ರಿಕೆಟರ್ ನಿವೃತ್ತಿ ಪಡೆಯುತ್ತಾನೆ ಅಂದರೆ ಆತ ಖಂಡಿತವಾಗಿ ಲೆಜೆಂಡ್ ಆಗಿರಬೇಕು! ಹೌದು, ಈ ಸೋಮವಾರ ಕ್ರಿಕೆಟ್ ಗ್ರೌಂಡ್ ಪೂರ್ತಿ ಎಮೋಷನಲ್ ಆಗಿ ಬದಲಾಗಿತ್ತು. ಅದಕ್ಕೆ ಕಾರಣ ಆದದ್ದು ಇಂಗ್ಲಿಷ್ ಬೌಲರ್ ಸ್ಟುವರ್ಟ್ ಬ್ರಾಡ್ ಅವರ ನಿವೃತ್ತಿ!
ಭಾರತೀಯರಿಗೆ ಈ ಹೆಸರು ಯಾವತ್ತೂ ಮರೆತು ಹೋಗುವುದಿಲ್ಲ!
———————————–
ಅದಕ್ಕೆ ಕಾರಣ  2007ರ ಐಸಿಸಿ T20 ವಿಶ್ವಕಪ್. ಅಂದು ಭಾರತದ ಯುವರಾಜ್ ಸಿಂಗ್ ಮೈಯ್ಯಲ್ಲಿ ಆವೇಶ ಬಂದ ಹಾಗೆ ಒಂದು ಓವರಿನಲ್ಲಿ ಆರು ಸಿಕ್ಸ್ ಚಚ್ಚಿದ್ದು ಇದೇ ಸ್ಟುವರ್ಟ್ ಬ್ರಾಡ್ ಓವರಿಗೆ! ಆ ಒಂದು ಓವರ್ ಮುಗಿದಾಗ ಯುವರಾಜ್ ಹೀರೋ ಆಗಿದ್ದರು ಮತ್ತು ಸ್ಟುವರ್ಟ್ ಬ್ರಾಡ್ ಇಂಗ್ಲೆಂಡಿಗೆ ವಿಲನ್ ಆಗಿದ್ದರು!  ಇಂದು ಅದೇ ಸ್ಟುವರ್ಟ್ ಬ್ರಾಡ್ ಟೆಸ್ಟ್ ಕ್ರಿಕೆಟಿನಲ್ಲಿ 602 ವಿಕೆಟ್ ಪಡೆದು ನಿವೃತ್ತನಾಗುತ್ತಿದ್ದಾನೆ.
ಯುವರಾಜ್ ಅವರಿಂದ ಹಾಗೆ ಚಚ್ಚಿಸಿಕೊಳ್ಳುವಾಗ ಸ್ಟುವರ್ಟ್ ಬ್ರಾಡ್ ವಯಸ್ಸು ಕೇವಲ 21 ಆಗಿತ್ತು. ಆನಂತರ ನಾನು ಕ್ರಿಕೆಟ್ ಮೈದಾನದಲ್ಲಿ ತುಂಬಾ ಕಲಿತೆ ಎಂದು ಸ್ಟುವರ್ಟ್ ಬ್ರಾಡ್ ಹೇಳಿದ್ದಾನೆ.
ಅವನಲ್ಲಿ ನಾನು ಕಂಡ ಆ ಟ್ರಾನ್ಸಫರ್ಮೇಶನ್ ನಿಜಕ್ಕೂ ಅದ್ಭುತ ಎಂದೇ ನನ್ನ ಭಾವನೆ.
ಆತನ ತಂದೆ ಕೂಡ ಟೆಸ್ಟ್ ಕ್ರಿಕೆಟ್ ಆಡಿದ್ದರು.
———————————–
ಸ್ಟುವರ್ಟ್ ಬ್ರಾಡ್ ತಂದೆ ಕ್ರಿಸ್ ಬ್ರಾಡ್ 1984-89ರ ಅವಧಿಯಲ್ಲಿ ಅದೇ ಇಂಗ್ಲೆಂಡ್ ಪರವಾಗಿ ಟೆಸ್ಟ್ ಕ್ರಿಕೆಟ್ ಆಡಿದ್ದರು. ಈ ಸ್ಟುವರ್ಟ್ ಹುಟ್ಟುವಾಗ 12 ವಾರಗಳ ಪ್ರಿಮೆಚ್ಯೂರ್ ಬೇಬಿ ಆಗಿದ್ದವನು. ಆಗ ಅವನನ್ನು ಡಾಕ್ಟರ್ ಜಾನ್ ಎಂಬ ವೈದ್ಯ ಬದುಕಿಸಿಕೊಟ್ಟವರು.  ಅದರಿಂದಾಗಿ ಸ್ಟುವರ್ಟ್ ಬ್ರಾಡ್ ಹೆಸರಿನ ಮಧ್ಯದಲ್ಲಿ ಜಾನ್ ಅಂಟಿಕೊಂಡಿತು. ಹದಿನಾರು ವರ್ಷದವರೆಗೆ ಕೇವಲ ಹಾಕ್ಕಿ ಆಡಿಕೊಂಡು ಇದ್ದವನು ಸ್ಟುವರ್ಟ್. ಆತನು ತಂಡದ ಗೋಲ್ ಕೀಪರ್ ಆಗಿದ್ದನು. ಆದರೆ ಯಾವುದೋ ಒಂದು ಮಾಯೆಗೆ ಒಳಗಾಗಿ ಅಪ್ಪನಿಂದ ಸ್ಫೂರ್ತಿ ಪಡೆದು ಮುಂದೆ ಕ್ರಿಕೆಟ್ ಜಗತ್ತನ್ನು ಪ್ರವೇಶ ಮಾಡಿದ್ದನು. ಮುಂದೆ 2006ರಿಂದ 2023ರ ವರೆಗೆ 17 ವರ್ಷಗಳ ಕಾಲ ಆತನು ಇಂಗ್ಲೆಂಡ್ ಪರವಾಗಿ ಆಡಿದ್ದು ಒಂದು ದಾಖಲೆ.
6 ಅಡಿ ಐದು ಇಂಚು ಎತ್ತರದ ಹುಡುಗ ಸ್ಟುವರ್ಟ್. 
——————————
ಈ ಎತ್ತರವು ಆತನಿಗೆ ದೈವದತ್ತವಾಗಿ ಬಂದಿತ್ತು. ಇನ್ನೂ ಒಂದು ವಿಶೇಷ ಎಂದರೆ ಆತನು ಎಡಗೈ ಬೌಲರ್, ಬಲಗೈ ಬ್ಯಾಟ್ಸಮನ್! ಅವನದ್ದೇ ಇಂಗ್ಲೆಂಡ್ ತಂಡದ ಇನ್ನೊಬ್ಬ ವೇಗದ ಬೌಲರ್ ಜೇಮ್ಸ್ ಆಂಡರ್ಸನ್ ಜೊತೆಗೆ 111 ಟೆಸ್ಟ್ ಪಂದ್ಯ ಆಡಿದ ದಾಖಲೆ ಕೂಡ ಆತನ ಹೆಸರಲ್ಲಿ ಇದೆ. ಜಗತ್ತಿನ ಅತ್ಯಂತ ಯಶಸ್ವೀ ವೇಗದ ಬೌಲರಗಳು ಒಂದೇ ತಂಡದ ಭಾಗವಾಗಿರುವುದು ಕೂಡ ಉಲ್ಲೇಖನೀಯ.  ಸ್ಟುವರ್ಟ್ 165 ಟೆಸ್ಟ್ ಪಂದ್ಯ ಆಡಿ 602 ವಿಕೆಟ್ ಪಡೆದರೆ ಇದೇ ಜೇಮ್ಸ್ ಆಂಡರ್ಸನ್ 689 ವಿಕೆಟ್ ಪಡೆದು ಮೊದಲ ಸ್ಥಾನದಲ್ಲಿ ಇದ್ದಾರೆ.
ಟೆಸ್ಟ್ ಕ್ರಿಕೆಟಿನಲ್ಲಿ 600+ ವಿಕೆಟ್ ಪಡೆದವರು ಕೇವಲ ಐದು ಜನರು. ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ 800 ವಿಕೆಟ್ ಪಡೆದರೆ, ಆಸ್ಟ್ರೇಲಿಯಾದ ಶೇನ್ ವಾರ್ನ್ 708 ವಿಕೆಟ್ ಪಡೆದವರು. ನಮ್ಮದೇ ಭಾರತದ ಅನಿಲ್ ಕುಂಬ್ಳೆ 619 ವಿಕೆಟ್ ಪಡೆದಿದ್ದಾರೆ. ಅವರು ಮೂರೂ ಜನ ಸ್ಪಿನ್ ಬೌಲರಗಳು. ಉಳಿದವರು ಸ್ಟುವರ್ಟ್ ಮತ್ತು ಆಂಡರ್ಸನ್ ಇಬ್ಬರೂ ವೇಗದ ಬೌಲರಗಳು. ಅದರಲ್ಲಿ ಸ್ಟುವರ್ಟ್ ಬ್ರಾಡ್ ಈಗ ಆಶಸ್ ಸರಣಿಯ ಕೊನೆಯಲ್ಲಿ ನಿವೃತ್ತಿ ಘೋಷಣೆ ಮಾಡಿದ್ದಾನೆ.
ಸ್ಟುವರ್ಟ್ ಬ್ರಾಡ್ ವಿಲನ್ ಆದದ್ದು ಅದೇ ಮೊದಲು ಅಲ್ಲ! 
———————————-
ಈ ಸ್ಟುವರ್ಟ್ ಬ್ರಾಡ್ 2007ರಲ್ಲಿ ಯುವರಾಜ್ ಸಿಂಗ್ ಕೈಯ್ಯಲ್ಲಿ ಹೊಡೆಸಿಕೊಂಡು ವಿಲನ್ ಆದದ್ದು ನಮಗೆ ಗೊತ್ತೇ ಇದೆ. ಇನ್ನೊಮ್ಮೆ 2009ರಲ್ಲಿ ದುರ್ಬಲ ನೆದರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಕೊನೆಯ ಓವರ್ ಕೈಗೆ ಎತ್ತಿಕೊಂಡು ಏಳು ರನ್ ಡಿಫೆಂಡ್ ಮಾಡಿಕೊಳ್ಳುವಲ್ಲಿ ಸ್ಟುವರ್ಟ್ ಬ್ರಾಡ್ ವಿಫಲ ಆಗಿದ್ದನು. ಆ ಓವರಿನಲ್ಲಿ ಎರಡು ರನ್ ಔಟ್ ಅವಕಾಶ ಮತ್ತು ಒಂದು ಸುಲಭದ ಕ್ಯಾಚ್ ಕೈ ಚೆಲ್ಲಿ ಆತನು  ಎರಡನೇ ಬಾರಿಗೆ ವಿಲನ್ ಆಗಿದ್ದನು.  ಇಷ್ಟೆಲ್ಲ ಆದರೂ ಆತನ ಟೀಮ್ ಮ್ಯಾನೇಜಮೆಂಟ್  ಆತನನ್ನು 17 ವರ್ಷ ಆಡಿಸಿತು ಎಂದರೆ ಅದು ನಿಜವಾಗಿಯೂ ಗ್ರೇಟ್ ಆಗಿರಬೇಕು.
ಸ್ಟುವರ್ಟ್ ಬ್ರಾಡ್ ದಾಖಲೆಗಳು ನಿಜವಾಗಿಯೂ ಅದ್ಭುತ ಆಗಿವೆ.
——————————
ಆ ಎರಡು ಘಟನೆಗಳನ್ನು ಬಿಟ್ಟರೆ ಸ್ಟುವರ್ಟ್ ಹಲವಾರು ಮ್ಯಾಚ್ ವಿನ್ನಿಂಗ್ ಪರ್ಫಾರ್ಮೆನ್ಸ್ ತೋರಿದ್ದಾನೆ. ಅತ್ಯಂತ ಕಠಿಣವಾದ ಆಶಸ್ ಸರಣಿಯಲ್ಲಿ ಸ್ಟುವರ್ಟ್ ಎಂದಿಗೂ ಹಿಂದೆ ಬಿದ್ದದ್ದು ಇಲ್ಲವೇ ಇಲ್ಲ! 165 ಟೆಸ್ಟ್ ಪಂದ್ಯಗಳಲ್ಲಿ 602 ವಿಕೆಟ್ ಅಂದರೆ ಅದು ನಿಜಕ್ಕೂ ಅದ್ಭುತ ಸಾಧನೆ. 20 ಬಾರಿ ಐದು ವಿಕೆಟ್ ಗೊಂಚಲು, 3 ಬಾರಿ ಹತ್ತು ವಿಕೆಟ್ ಗೊಂಚಲು ಪಡೆದ ದಾಖಲೆಯು ಖಂಡಿತವಾಗಿ ಸಣ್ಣದು ಅಲ್ಲ. 15/8 ಅವರ ಬೆಸ್ಟ್ ಫಿಗರ್. ಭಾರತದ ವಿರುದ್ಧ ಟೆಸ್ಟ್ ಕ್ರಿಕೆಟ್ ಹ್ಯಾಟ್ರಿಕ್ ಸಾಧನೆ ಕೂಡ ಆತನ ಹೆಸರಲ್ಲಿ ಇದೆ. ಪಾಕ್ ವಿರುದ್ಧ ನಂಬರ್ 9 ಬ್ಯಾಟ್ಸಮನ್ ಆಗಿ ಕ್ರೀಸಿಗೆ ಬಂದು 169 ರನ್ ಚಚ್ಚಿದ್ದು ಕೂಡ ಅವನ ದಾಖಲೆಯ ಭಾಗ!
ನಂಬರ್ 9 ಅಥವ ನಂಬರ್ 10 ಬ್ಯಾಟ್ಸಮನ್ ಆಗಿ ಕ್ರೀಸಿಗೆ ಬಂದು ಅತೀ ಹೆಚ್ಚು ಹೊತ್ತು ಕ್ರೀಸಿನಲ್ಲಿ ಒಂದೇ ಒಂದು ಸ್ಕೋರ್ ಮಾಡದೆ ನಿಂತ ( 103 ನಿಮಿಷ) ದಾಖಲೆ ಕೂಡ ಸ್ಟುವರ್ಟ್ ಬ್ರಾಡ್ ಹೆಸರಲ್ಲಿ ಇದೆ. ಡೇವಿಡ್ ವಾರ್ನರನನ್ನು 17 ಬಾರಿ ಔಟ್ ಮಾಡಿದ ದಾಖಲೆ ಕೂಡ ಅದ್ಭುತವಾಗಿದೆ.
ಅಸ್ತಮಾ ಜೊತೆ ಕೂಡಾ ಫೈಟ್
——————————
ಆತನ ಬೌಲಿಂಗ್ ಆಕ್ಷನ್ ತುಂಬಾ ಚಂದ. ಸ್ಟುವರ್ಟ್ ಬ್ರಾಡ್ ತುಂಬಾ ದೂರದಿಂದ ಓಡಿಕೊಂಡು ಬರುವುದಿಲ್ಲ. ಆದರೆ ಆತನು ಅತ್ಯುತ್ತಮ ಸ್ವಿಂಗ್ ಬೌಲರ್. ಹೆಚ್ಚಿನ ಎಸೆತಗಳು ಗುಡ್ ಲೆಂಗ್ತ್ ಆಗಿದ್ದು ಬ್ಯಾಟ್ಸಮನಗಳು  ಗೊಂದಲಕ್ಕೆ ಈಡಾಗುತ್ತಾರೆ  ಅನ್ನುವುದೇ ಆತನ ನಿಖರತೆಯ ಪ್ರಮಾಣ ಪತ್ರ.
ಬಾಲ್ಯದಿಂದಲೂ ಕಾಡುತ್ತಿದ್ದ  ಅಸ್ತಮಾ ಜೊತೆ ಕೂಡ ಅವನು ದೀರ್ಘ ಕಾಲ ಫೈಟ್ ಮಾಡಬೇಕಾಯಿತು. ಎಷ್ಟೋ ಬಾರಿ ಮೈದಾನದಲ್ಲಿ ಉಸಿರು ಕಟ್ಟಿದ  ಅನುಭವ ಆಗಿ ಸ್ಟುವರ್ಟ್ ಕುಸಿದು ಹೋದ ಸಂದರ್ಭಗಳು ಇವೆ .
ಹಾಗೆ ಸ್ಟುವರ್ಟ್ ಬ್ರಾಡ್ ಇಂದು ವಿಶ್ವವಿಜಯೀ ಆಗಿದ್ದಾನೆ. ಇಂಗ್ಲೆಂಡ್ ಗೆದ್ದಿರುವ ಪ್ರತೀ ಕ್ರಿಕೆಟ್ ಸರಣಿಗಳಲ್ಲಿ ಮತ್ತು ವಿಶ್ವಕಪ್ ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡವನ್ನು ಗೆಲ್ಲಿಸಿಕೊಟ್ಟ ಕೀರ್ತಿಯಲ್ಲಿ ಒಂದು ಭಾಗವು ಸ್ಟುವರ್ಟ್ ಬ್ರಾಡಗೆ ಖಂಡಿತ ದೊರೆಯಬೇಕು. ಇನ್ನೂ ತನ್ನಲ್ಲಿ ಒಂದೆರಡು ವರ್ಷ ಕ್ರಿಕೆಟ್ ಇದೆ ಎನ್ನುವಾಗಲೇ ಈ 37 ವರ್ಷದ ವೇಗಿ ನಿವೃತ್ತಿ ಘೋಷಣೆ ಮಾಡಿದ್ದಾನೆ.
ಆತನ ODI ಮತ್ತು T20 ದಾಖಲೆಗಳೂ ತುಂಬಾ ಚೆನ್ನಾಗಿವೆ. ಅಂತಹ ಚಾಂಪಿಯನ್ ಆಟಗಾರ ಇನ್ನು ಇಂಗ್ಲೆಂಡ್ ಪರವಾಗಿ ಆಡುವುದಿಲ್ಲ ಅನ್ನುವಾಗ ಒಂದು ಶೂನ್ಯ ಕ್ರಿಯೇಟ್ ಆಗುತ್ತದೆ. ಆ ಶೂನ್ಯವನ್ನು ಸದ್ಯಕ್ಕೆ ತುಂಬುವುದು ಯಾರು?
ವಿಲನ್ ಆಗಿ ಕ್ರಿಕೆಟ್ ಆರಂಭ, ಲೆಜೆಂಡ್ ಆಗಿ ನಿರ್ಗಮನ ಅನ್ನುವ ಮಾತು ಅದು ಸ್ಟುವರ್ಟ್ ಬ್ರಾಡ್ ಅವನಿಗೆ ಖಂಡಿತವಾಗಿ ಹೊಂದಿಕೆ ಆಗುತ್ತದೆ.
Categories
ಕ್ರಿಕೆಟ್ ಯಶೋಗಾಥೆ

ರವೀಂದ್ರ ಜಡೇಜಾ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಏಕಾಂಗಿಯಾಗಿ ಹೋರಾಡಿದ ಈ ದಿನ…!!!

ರವೀಂದ್ರ ಜಡೇಜಾ ಕಳೆದ 5 ವರ್ಷಗಳಲ್ಲಿ ಭಾರತ ತಂಡಕ್ಕಾಗಿ ಒಂದಕ್ಕಿಂತ ಹೆಚ್ಚು ಪ್ರದರ್ಶನಗಳನ್ನು ನೀಡಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಜಡೇಜಾ ಅವರ ಬ್ಯಾಟಿಂಗ್ ಸಾಕಷ್ಟು ಸುಧಾರಣೆ ಕಂಡಿದೆ. ಅದರಲ್ಲೂ ಟೆಸ್ಟ್ ಕ್ರಿಕೆಟ್‌ನಲ್ಲಿ ಅವರ ಸರಾಸರಿ ವೇಗದಲ್ಲಿ ಏರಿಕೆಯಾಗಿದೆ. ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್‌ನಲ್ಲಿ ಜಡೇಜಾ ತಮ್ಮ ಆಟವನ್ನು ಸಾಕಷ್ಟು ಸುಧಾರಿಸಲು ಶ್ರಮಿಸಿದ್ದಾರೆ.
2019 ರ ಈ ದಿನ ಅಂದರೆ ಜುಲೈ 10 ರಂದು ರವೀಂದ್ರ ಜಡೇಜಾ ಅದ್ಭುತ ಇನ್ನಿಂಗ್ಸ್ ಆಡಿದರು. ಭಾರತ ಮತ್ತು ನ್ಯೂಜಿಲೆಂಡ್ ನಡುವಿನ 2019 ರ ವಿಶ್ವಕಪ್ ಸೆಮಿಫೈನಲ್ ಪಂದ್ಯವು ಅಭಿಮಾನಿಗಳ ಮನಸ್ಸಿನಲ್ಲಿ ಇನ್ನೂ ತಾಜಾವಾಗಿದೆ. ಈ ಪಂದ್ಯದಲ್ಲಿ ಭಾರತ ತಂಡ ಸೋಲನುಭವಿಸಬೇಕಾಯಿತು. ಆದರೆ ರವೀಂದ್ರ ಜಡೇಜಾ ತಮ್ಮ ಬ್ಯಾಟಿಂಗ್ ಮೂಲಕ ಎಲ್ಲರ ಮನಗೆದ್ದರು.
240 ರನ್‌ಗಳ ಗುರಿ ಬೆನ್ನತ್ತಿದ ಭಾರತ ತಂಡ 92 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡಿತ್ತು. ಈ ಮೂಲಕ ರವೀಂದ್ರ ಜಡೇಜಾ 59 ಎಸೆತಗಳಲ್ಲಿ 77 ರನ್‌ಗಳ ಅದ್ಭುತ ಇನ್ನಿಂಗ್ಸ್‌ ಮಾಡಿ ತಂಡವನ್ನು ಮರಳುವಂತೆ ಮಾಡಿದರು. ಅವರ ಇನ್ನಿಂಗ್ಸ್ ಸಮಯದಲ್ಲಿ, ಅವರು 4 ಬೌಂಡರಿ ಮತ್ತು 4 ಸಿಕ್ಸರ್ಗಳನ್ನು ಹೊಡೆದ ಸಾಧನೆ ಮಾಡಿದರು. ಜಡೇಜಾ ಭಾರತವನ್ನು ಗೆಲುವಿನ ಸಮೀಪಕ್ಕೆ ತಂದರು. ಆದರೆ ತಂಡವನ್ನು ಗೆಲ್ಲಲು ಸಾಧ್ಯವಾಗಲಿಲ್ಲ.
ಈ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ಮತ್ತು ರವೀಂದ್ರ ಜಡೇಜಾ ಏಳನೇ ವಿಕೆಟ್ ಗೆ 116 ರನ್ ಗಳ ಜೊತೆಯಾಟ ನೀಡಿದರು. ಪ್ರತಿಕೂಲ ಪರಿಸ್ಥಿತಿಗಳಲ್ಲಿ ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮಾಡಿದ ಜಡೇಜಾ 59 ಎಸೆತಗಳಲ್ಲಿ 77 ರನ್ ಗಳಿಸಿ ಭಾರತವನ್ನು ಮತ್ತೆ ಪಂದ್ಯಕ್ಕೆ ಕರೆತಂದರು. ರವೀಂದ್ರ ಜಡೇಜಾ ಆಗಾಗ್ಗೆ ಒತ್ತಡದ ಸಂದರ್ಭಗಳಲ್ಲಿ ಮಿಂಚುತ್ತಾರೆ.
ಜಡೇಜಾ ಅವರಿಂದ ನಿರೀಕ್ಷೆ ಇದೆ: ಭಾರತ ಈ ವರ್ಷ ತನ್ನದೇ ನೆಲದಲ್ಲಿ ವಿಶ್ವಕಪ್ ಆಡಲಿದೆ. 2011ರ ವಿಶ್ವಕಪ್ ಗೆಲ್ಲುವಲ್ಲಿ ಯುವರಾಜ್ ಸಿಂಗ್ ಪ್ರಮುಖ ಪಾತ್ರ ವಹಿಸಿದ್ದರು. ಯುವರಾಜ್ ಸಿಂಗ್ ಅವರಂತೆ ರವೀಂದ್ರ ಜಡೇಜಾ ಈ ವರ್ಷ ಭಾರತಕ್ಕೆ ಮ್ಯಾಚ್ ವಿನ್ನಿಂಗ್ ಆಟಗಾರ ಎಂದು ಸಾಬೀತುಪಡಿಸಬಹುದು ಎಂದು ಅನೇಕ ಕ್ರಿಕೆಟ್ ದಿಗ್ಗಜರು ನಂಬಿದ್ದಾರೆ.
ಸುರೇಶ್ ಭಟ್ ಮುಲ್ಕಿ
ಟೀಮ್ ಸ್ಪೋರ್ಟ್ಸ್ ಕನ್ನಡ
Categories
ಕ್ರಿಕೆಟ್ ಯಶೋಗಾಥೆ

ಎಂಎಸ್ ಧೋನಿ ಹುಟ್ಟುಹಬ್ಬ: ಧೋನಿ ಹುಟ್ಟುಹಬ್ಬದಂದು 77 ಅಡಿ ಕಟೌಟ್, ಸಂಭ್ರಮಾಚರಣೆಗೆ ತಯಾರಿ ಆರಂಭಿಸಿದ ‘ಮಹಿ’ ಅಭಿಮಾನಿಗಳು

ಎಂಎಸ್ ಧೋನಿ ಜನ್ಮದಿನ, ಸುದ್ದಿ: ಭಾರತ ಕ್ರಿಕೆಟ್ ತಂಡದ ಯಶಸ್ವಿ ನಾಯಕ ಮಹೇಂದ್ರ ಸಿಂಗ್ ಧೋನಿ ಶುಕ್ರವಾರ ಅಂದರೆ 7ರಂದು ತಮ್ಮ 42ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ. ಧೋನಿಗೆ ಕೇವಲ ಭಾರತದಲ್ಲಿ ಮಾತ್ರವಲ್ಲ ವಿಶ್ವದಾದ್ಯಂತ ಅಭಿಮಾನಿಗಳಿದ್ದಾರೆ.
ಧೋನಿ ಬ್ಯಾಟಿಂಗ್ ವೀಕ್ಷಿಸಲು ವಿಶ್ವದ ಮೂಲೆ ಮೂಲೆಯಿಂದ ಜನರು ಕ್ರೀಡಾಂಗಣಕ್ಕೆ ಆಗಮಿಸುತ್ತಾರೆ. ಐಪಿಎಲ್ 2023 ರಲ್ಲಿಯೂ ಸಹ, ಅವರು ಅಭಿಮಾನಿಗಳಿಂದ ಸಾಕಷ್ಟು ಪ್ರೀತಿಯನ್ನು ಪಡೆದರು.
42ನೇ ವರ್ಷಕ್ಕೆ ಕಾಲಿಡಲಿರುವ ಧೋನಿ ಹುಟ್ಟುಹಬ್ಬಕ್ಕೂ ಮುನ್ನವೇ ಅಭಿಮಾನಿಗಳಲ್ಲಿ ಸಿದ್ಧತೆಗಳು ಕಂಡು ಬರುತ್ತಿವೆ. ಹೈದರಾಬಾದ್‌ನಲ್ಲಿ ಧೋನಿಯ 77 ಅಡಿ ಎತ್ತರದ ಕಟ್‌ಔಟ್‌ ಅಳವಡಿಸಲಾಗಿದೆ. ಈ ಕಟ್ ಔಟ್ ನಲ್ಲಿ ಎಂಎಸ್ ಧೋನಿಯ ದೈತ್ಯ ರೂಪ ಕಾಣುತ್ತಿದೆ. ಧೋನಿ ಭಾರತ ತಂಡದ ODI ಜರ್ಸಿಯನ್ನು ಕೈಯಲ್ಲಿ ಬ್ಯಾಟ್‌ನೊಂದಿಗೆ ಧರಿಸಿರುವುದು ಕಂಡುಬಂದಿದೆ. ಧೋನಿಯ ಈ ಚಿತ್ರವು 2011 ರ ವಿಶ್ವಕಪ್ ಫೈನಲ್‌ನದ್ದಾಗಿದೆ.
ಧೋನಿಯ ಈ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಪ್ರತಿ ವರ್ಷದಂತೆ ಧೋನಿ ತಮ್ಮ ಪತ್ನಿ ಮತ್ತು ಮಗಳು ಝಿವಾ ಅವರೊಂದಿಗೆ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಾರೆ ಎಂದು ನಿರೀಕ್ಷಿಸಲಾಗಿದೆ. ಧೋನಿ ಹುಟ್ಟುಹಬ್ಬಕ್ಕಾಗಿ ಅಭಿಮಾನಿಗಳು ಈಗಾಗಲೇ ಕಾಯುತ್ತಿದ್ದಾರೆ. ಧೋನಿ 4 ಜುಲೈ 2010 ರಂದು ಸಾಕ್ಷಿ ರಾವತ್ ಅವರನ್ನು ವಿವಾಹವಾದರು. ಅದೇನೆಂದರೆ, ಹುಟ್ಟುಹಬ್ಬಕ್ಕೆ ಮೂರು ದಿನ ಬಾಕಿ ಇರುವಾಗಲೇ ಧೋನಿ ಮದುವೆಯಾದರು.
ಮಹೇಂದ್ರ ಸಿಂಗ್ ಧೋನಿ 2020 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದರು. ಅವರು 2019 ರ ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ತಮ್ಮ ಕೊನೆಯ ಪಂದ್ಯವನ್ನು ಆಡಿದ್ದರು. ಈ ಪಂದ್ಯದಲ್ಲಿ ಅವರು ರನ್ ಔಟ್ ಆಗಿ ಪೆವಿಲಿಯನ್ ಗೆ ಮರಳಿದ್ದರು. ಅವರ ಚಿತ್ರಗಳು ಅಭಿಮಾನಿಗಳ ಮನಸ್ಸಿನಲ್ಲಿ ಇನ್ನೂ ತಾಜಾವಾಗಿವೆ. ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದರೂ ಧೋನಿ ಐಪಿಎಲ್‌ನಲ್ಲಿ ಅಬ್ಬರಿಸುತ್ತಿದ್ದಾರೆ.
 *ಐಪಿಎಲ್‌ನಲ್ಲಿ ಮತ್ತೊಮ್ಮೆ ಸದ್ದು ಮಾಡಲಿದೆ ಧೋನಿ ಬ್ಯಾಟ್:* ಐಪಿಎಲ್ 2023 ರಲ್ಲಿ ಧೋನಿ ಮತ್ತೊಮ್ಮೆ ಚೆನ್ನೈ ಸೂಪರ್ ಕಿಂಗ್ಸ್‌ಗೆ ಫಿನಿಶರ್ ಪಾತ್ರವನ್ನು ನಿರ್ವಹಿಸಿದರು. ಅವರು ಐಪಿಎಲ್ 2024ರಲ್ಲೂ ಆಡಲಿದ್ದಾರೆ. ಅಭಿಮಾನಿಗಳ ಪ್ರೀತಿಯನ್ನು ನೋಡಿ ಇನ್ನೂ ಒಂದು ಸೀಸನ್‌ಗೆ ಐಪಿಎಲ್‌ನಲ್ಲಿ ಭಾಗವಹಿಸಲು ಬಯಸುತ್ತೇನೆ ಎಂದು ಧೋನಿ ಸ್ವತಃ ಖಚಿತಪಡಿಸಿದ್ದಾರೆ. ಹೀಗಿರುವಾಗ ಮೈದಾನದಲ್ಲಿ ಬೌಂಡರಿ, ಸಿಕ್ಸರ್ ಗಳ ಸುರಿಮಳೆಗೈದ ಮಹಿ ಅವರನ್ನು ಅಭಿಮಾನಿಗಳು ಮತ್ತೊಮ್ಮೆ ಕಣ್ತುಂಬಿಕೊಳ್ಳಲಿದ್ದಾರೆ.
Categories
ಉಡುಪಿ ಜಿಲ್ಲಾ ಟೆನ್ನಿಸ್ಬಾಲ್ ಕ್ರಿಕೆಟ್ ಭರವಸೆಯ ಬೆಳಕು ಯಶೋಗಾಥೆ

ಜುಲೈ 7 ಅನ್ನೋ ದಿನ ವರದಾನಯಾಯಿತೇ ಸ್ಪೋರ್ಟ್ಸ್ ಕನ್ನಡಕ್ಕೆ!!!

ಕೋಟ ರಾಮಕೃಷ್ಣ ಆಚಾರ್ಯ ಎನ್ನುವ ವ್ಯಕ್ತಿ ಕೇವಲ ಕ್ರೀಡಾ ಪ್ರೇಮಿಯಲ್ಲ. ರಾಜ್ಯ ಟೆನಿಸ್ ಬಾಲ್ ಕ್ರಿಕೆಟ್ ವೈಭವೀಕರಣದಲ್ಲಿ ಕೋಟ ರಾಮಕೃಷ್ಣ ಆಚಾರ್ಯ  ಒಂದು ದೊಡ್ಡ ವಿಶ್ವವಿದ್ಯಾಲಯ.
ಯಾರು ಏನೇ ಹೇಳಲಿ ಕ್ರಿಕೆಟ್‌ ಹಾಗೂ ಕ್ರೀಡಾ ಲೋಕ ನೋಡಿದ ಅಪ್ರತಿಮ ಬರಹಗಾರ ಕೆ. ಆರ್.ಕೆ.  ಇವರ ಸ್ಪೋರ್ಟ್ಸ್ ಕನ್ನಡದ ಲೇಖನಗಳನ್ನು ಓದುವುದೆಂದರೆ ಅದೇನೋ ಮನಸ್ಸಿಗೆ ಖುಷಿ.
ಜೂಲೈ 7 ಅನ್ನೋದು ಬಹುಶಃ ಕೋಟ ರಾಮಕೃಷ್ಣ ಆಚಾರ್ಯರಿಗೆ  ಹೇಳಿ ಮಾಡಿಸಿದ ದಿನ. ವಿಶ್ವ ಕ್ರಿಕೆಟ್‌ ಕಂಡ ಮಹಾನ್‌ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಹುಟ್ಟಿದ ದಿನವದು. ಅದೇನೋ ಕಾಕತಾಳೀಯ.  ಜುಲೈ 7, 2019 ರ ವಿಶೇಷ ದಿನದಂದು ಕೆ. ಆರ್.ಕೆ. ಸಾರಥ್ಯದ ಸ್ಪೋರ್ಟ್ಸ್ ಕನ್ನಡ ವೆಬ್ಸೈಟ್ ಲೋಕಾರ್ಪಣೆಗೊಂಡಿತು. ಕ್ರೀಡೆಯ ಮೇಲೆ ತನಗೆ ಇರುವ ಪ್ರೀತಿಯನ್ನು ಸ್ಪೋರ್ಟ್ಸ್ ಕನ್ನಡ ಸಾಮಾಜಿಕ ಮಾಧ್ಯಮದ ಮೂಲಕ ಹಂಚಿಕೊಳ್ಳಲು ಪ್ರಯತ್ನಿಸಿ ಅದರಲ್ಲಿ ಯಶಸ್ವಿಯಾದರು. ಸ್ಪೋರ್ಟ್ಸ್ ಕನ್ನಡದ ಪ್ರಾಮುಖ್ಯತೆಯು ಮತ್ತಷ್ಟು ಬೆಳೆಯುತ್ತಲೇ ಇತ್ತು.
ಇದು ಎಷ್ಟರಮಟ್ಟಿಗೆ ಬೆಳೆಯಿತೆಂದರೆ, ಕೆಲವರಿಗಂತೂ ಇವರ ಪೋಸ್ಟ್ ಗಳನ್ನೂ ನೋಡದೆ ಇದ್ದರೆ ಅದೇನೋ ಮನಸ್ಸಿಗೆ ಅಸಮಾಧಾನ.  ಇದಾದ ಬಳಿಕ  ಈಗ ಮತ್ತೊಮ್ಮೆ  ಜುಲೈ 7, 2023 ರ ಶ್ರೇಷ್ಠ ದಿನದಂದು ಸ್ಪೋರ್ಟ್ಸ್ ಕನ್ನಡ ಯೂಟ್ಯೂಬ್ ಚಾನೆಲ್ ಪ್ರಾರಂಭವಾಗಲಿದೆ. ಮತ್ತೆ ಅದೇ ಜೂಲೈ 7 ಎಂಬ ಈ  ಶುಭ ದಿನಾಂಕವು ಸ್ಪೋರ್ಟ್ಸ್ ಕನ್ನಡದ ಪಯಣದಲ್ಲಿ ಉಡುಗೊರೆಯಾಗಿ ಪ್ರಮುಖ ಪಾತ್ರವನ್ನು ವಹಿಸಲಿದೆ.
ಕ್ರೀಡೆಯ ಮೇಲೆ  ಡಿಜಿಟಲ್ ಮಾಧ್ಯಮದ ಪ್ರಭಾವ ಹೆಚ್ಚುತ್ತಿರುವ ಕಾರಣ ಹೊಸತೊಂದು ಅಭಿಯಾನವನ್ನು ಸ್ಪೋರ್ಟ್ಸ್ ಕನ್ನಡ ಆರಂಭಿಸುತ್ತಿದೆ. ಸ್ಪೋರ್ಟ್ಸ್ ಕನ್ನಡ ಮತ್ತು ಸ್ಟಾರ್ ವರ್ಟೆಕ್ಸ್  ಕಂಪನಿ ಪರಸ್ಪರ ಕೈಜೋಡಿಸಿವೆ. ಬಹುತೇಕ  ಕ್ರೀಡೆಯನ್ನು ದೊಡ್ಡದಾಗಿಸುವ ಗುರಿಯನ್ನು ಇವರುಗಳು ಹೊಂದಿದ್ದಾರೆ. ಕ್ರೀಡಾ ಮಹತ್ವಾಕಾಂಕ್ಷೆ ಉತ್ತೇಜಿಸಲು  ಸ್ಪೋರ್ಟ್ಸ್ ಕನ್ನಡ  ಪರಿಪೂರ್ಣ ವೇದಿಕೆಯಾಗಲು ಹೊರಟಿದೆ.
ಇನ್ನೇನು ಶುಕ್ತವಾರ ಜುಲೈ  7, 2023 ರ ಶುಭ ಮುಹೂರ್ತದಲ್ಲಿ ಸ್ಪೋರ್ಟ್ಸ್ ಕನ್ನಡ ಯೂಟ್ಯೂಬ್ ಚಾನೆಲ್  ಬಿಡುಗಡೆಯಾಗಲಿದೆ. ಜುಲೈ 7 ಎಂಬ ದಿನ ಸ್ಪೋರ್ಟ್ಸ್ ಕನ್ನಡಕ್ಕೆ ಮತ್ತೆ ಅದೃಷ್ಟದ ದಿನವಾಗಲಿ ಹಾಗೂ ಈ  ಚಾನೆಲ್‌ ಗೆಲ್ಲಲಿ.
ಪ್ರಶಂಸೆ ಹಾಗು ಅಭಿನಂದನೆಗಳೊಂದಿಗೆ,
ಸುರೇಶ್ ಭಟ್ ಮೂಲ್ಕಿ
ಸ್ಪೋರ್ಟ್ಸ್ ಕನ್ನಡದ ಅಭಿಮಾನಿ
Categories
ಯಶೋಗಾಥೆ

ಟ್ರಕ್ ಡ್ರೈವರ್ ಆಗಬೇಕೆಂದು ಬಯಸಿದ್ದ ಟರ್ಬನೇಟರ್ ನಂತರ ಕ್ರಿಕೆಟ್ ಜಗತ್ತಿನ ಸೂಪರ್ ಸ್ಟಾರ್

ಹರ್ಭಜನ್ ಸಿಂಗ್( ಭಜ್ಜಿ) ಭಾರತೀಯ ಕ್ರಿಕೆಟ್ ತಂಡಕ್ಕಾಗಿ ದೀರ್ಘಕಾಲ ಕ್ರಿಕೆಟ್ ಆಡಿದ್ದಾರೆ. ಮಹೇಂದ್ರ ಸಿಂಗ್ ಧೋನಿ ಮತ್ತು  ಸೌರವ್ ಗಂಗೂಲಿ ನಾಯಕತ್ವದಲ್ಲಿ, ಹರ್ಭಜನ್ ಭಾರತಕ್ಕಾಗಿ ಸ್ಪಿನ್ ಬೌಲಿಂಗ್ ಅನ್ನು ಬಲಿಷ್ಠವಾಗಿ ನಿರ್ವಹಿಸಿದ್ದಾರೆ.
ಜುಲೈ 3, 1980 ರಂದು ಪಂಜಾಬ್‌ನಲ್ಲಿ ಜನಿಸಿದ ಹರ್ಭಜನ್ ಸಿಂಗ್ ಯಶಸ್ವಿ ಕ್ರಿಕೆಟಿಗನಾದ ಪ್ರಯಾಣ ಸುಲಭವಲ್ಲ.
ಹರ್ಭಜನ್ ಸಿಂಗ್ 1998 ರಲ್ಲಿ ಭಾರತಕ್ಕೆ ಪಾದಾರ್ಪಣೆ ಮಾಡಿದರು. ಅವರು ಆಸ್ಟ್ರೇಲಿಯಾ ವಿರುದ್ಧದ ತಮ್ಮ ಮೊದಲ ಟೆಸ್ಟ್ ಪಂದ್ಯದಲ್ಲಿ ಎರಡು ವಿಕೆಟ್ ಪಡೆದರು. ಅವರು ತಮ್ಮ ಕ್ರಿಕೆಟ್ ವೃತ್ತಿಜೀವನದ ಅವಧಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಅದ್ಭುತ ಪ್ರದರ್ಶನ ನೀಡಿದ್ದಾರೆ. ಚೆಂಡಿನ ಹೊರತಾಗಿ, ಹರ್ಭಜನ್ ಸಿಂಗ್ ಮೈದಾನದಲ್ಲಿ ಆಸ್ಟ್ರೇಲಿಯಾದ ಹೆಚ್ಚಿನ ಆಟಗಾರರೊಂದಿಗೆ ಮಾತಿನ ಸಮರವನ್ನೂ ನಡೆಸಿದರು.
ಕ್ರಿಕೆಟ್ ಲೋಕದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದ ಹರ್ಭಜನ್ ಸಿಂಗ್ ಟ್ರಕ್ ಡ್ರೈವರ್ ಆಗಬೇಕು ಎಂದು ಬಯಸಿದ್ದರು. ಭಾರತದ ಮಾಜಿ ಓಪನರ್ ವೀರೇಂದ್ರ ಸೆಹ್ವಾಗ್ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯ ಮೂಲಕ ಹರ್ಭಜನ್ ಸಿಂಗ್ ಬಗ್ಗೆ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಹರ್ಭಜನ್ ಕೆನಡಾಕ್ಕೆ ಹೋಗಿ ಟ್ರಕ್ ಓಡಿಸಿ ಕುಟುಂಬವನ್ನು ಪೋಷಿಸಲು ಬಯಸಿದ್ದರು ಎಂದು ಸೆಹ್ವಾಗ್ ಹೇಳಿದ್ದಾರೆ. ಆದರೆ ಇಂದು ಅವರು ಕ್ರಿಕೆಟ್‌ನ ಸೂಪರ್‌ಸ್ಟಾರ್.
ಹರ್ಭಜನ್ ಕ್ರಿಕೆಟ್ ಜೀವನ ಅದ್ಭುತವಾಗಿವಾಗಿತ್ತು. ಹರ್ಭಜನ್ ಸಿಂಗ್ ಅವರು 24 ಡಿಸೆಂಬರ್ 2021 ರಂದು ಕ್ರಿಕೆಟ್‌ನ ಎಲ್ಲಾ ಸ್ವರೂಪಗಳಿಂದ ನಿವೃತ್ತಿ ಘೋಷಿಸಿದ್ದರು. ಆದರೆ ಅವರ ವೃತ್ತಿಜೀವನದಲ್ಲಿ ಅವರು ಅನೇಕ ದೊಡ್ಡ ಸಾಧನೆಗಳನ್ನು ಮಾಡಿದ್ದಾರೆ. ಹರ್ಭಜನ್ ಅವರು 103 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಅವರ ಹೆಸರಿನಲ್ಲಿ 417 ವಿಕೆಟ್‌ಗಳಿವೆ. ಮತ್ತೊಂದೆಡೆ, ಹರ್ಭಜನ್ 236 ಏಕದಿನ ಪಂದ್ಯಗಳಲ್ಲಿ 1237 ರನ್ ಮತ್ತು 269 ವಿಕೆಟ್ ಗಳಿಸಿದ್ದಾರೆ. ಭಜ್ಜಿ ಭಾರತ ಪರ 28 ಟಿ20 ಪಂದ್ಯಗಳಲ್ಲಿ 25 ವಿಕೆಟ್ ಪಡೆದಿದ್ದಾರೆ.
ಹರ್ಭಜನ್ ಸಿಂಗ್ ಅವರು ಬಾಲಿವುಡ್ ನಟಿ ಮತ್ತು ರೂಪದರ್ಶಿ ಗೀತಾ ಬಸ್ರಾ ಅವರನ್ನು ವಿವಾಹವಾದರು. ಮದುವೆಗೂ ಮುನ್ನ ಇಬ್ಬರೂ ಸುಮಾರು 8 ವರ್ಷಗಳ ಕಾಲ ಪರಸ್ಪರ ಡೇಟಿಂಗ್ ನಡೆಸಿದ್ದರು. 2008ರಲ್ಲಿ ನಡೆದ ಐಪಿಎಲ್ ಪಂದ್ಯದ ವೇಳೆ ಇವರಿಬ್ಬರ ಅಫೇರ್ ಸುದ್ದಿಗೆ ವೇಗ ಸಿಕ್ಕಿತ್ತು. ಬಾಲಿವುಡ್‌ನಲ್ಲಿ, ಗೀತಾ ಬಸ್ರಾ ‘ದಿ ಟ್ರೈನ್’, ‘ಜಿಲ್ಲಾ ಘಾಜಿಯಾಬಾದ್’ ‘ಭೈಯಾ ಜಿ ಸೂಪರ್‌ಹಿಟ್’ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. 2015 ರಲ್ಲಿ, ಅಕ್ಟೋಬರ್ 29 ರಂದು, ಇಬ್ಬರೂ ಜಲಂಧರ್ನಲ್ಲಿ ವಿವಾಹವಾದರು.
ಜನ್ಮದಿನದ ಶುಭಾಶಯಗಳು ಟರ್ಬನೇಟರ್ ಹರ್ಭಜನ್ ಸಿಂಗ್….
Categories
ಯಶೋಗಾಥೆ

ಮಹಾ ಕ್ರಿಕೆಟರ್ ವಿನೋದ್ ಕಾಂಬ್ಳಿಯು ಎಡವಿದ್ದೆಲ್ಲಿ? ಈ ಭಾರತೀಯ ಕ್ರಿಕೆಟರ್ ಮೂಲೆಗುಂಪು ಆದದ್ದು ಯಾಕೆ?

ಭಾರತದ ಮಾಜಿ ಕ್ರಿಕೆಟರ್ ವಿನೋದ್ ಕಾಂಬ್ಳಿ ಇತ್ತೀಚೆಗಷ್ಟೇ ಟಿವಿ ಕ್ಯಾಮೆರಾದ ಮುಂದೆ ಬಂದು ನನಗೆ ತೀವ್ರ ಆರ್ಥಿಕ ಸಮಸ್ಯೆ ಇದೆ, ಬದುಕು ಸಂಭಾಳಿಸುವುದೆ ಕಷ್ಟ ಆಗ್ತಾ ಇದೆ ಎಂದು ಗಳಗಳನೆ ಅತ್ತರು! ತೀರಾ ಹತಾಶೆ ತೋಡಿಕೊಂಡರು!
ನನ್ನ ಮನಸ್ಸು 34 ವರ್ಷಗಳ ಹಿಂದಕ್ಕೆ ಓಡಿತು.
ಸಚಿನ್ ತೆಂಡೂಲ್ಕರ್ ಮತ್ತು ವಿನೋದ್ ಕಾಂಬ್ಳಿ ಅವರು ಮುಂಬೈಯ ಒಂದೇ ಶಾಲೆಯಲ್ಲಿ ಓದುತ್ತಿದ್ದರು. ಕಾಂಬ್ಳಿಯು ಸಚಿನಗಿಂತ ಎರಡು ವರ್ಷ ದೊಡ್ಡವನು.
1988ರ ಒಂದು ದಿನ ಇಬ್ಬರೂ ಸೇರಿ ತಮ್ಮ ಶಾರದಾಶ್ರಮ ಶಾಲೆಯ ಪರವಾಗಿ ಒಂದು ಪಂದ್ಯದಲ್ಲಿ 664 ರನ್ನುಗಳ ಜೊತೆಯಾಟ ಮಾಡಿ ಇಡೀ ಭಾರತದ ಗಮನ ಸೆಳೆದಿದ್ದರು. ಅಂದು ಇಬ್ಬರದೂ ತ್ರಿಶತಕವು ದಾಖಲು ಆಗಿತ್ತು! ಆಗ ಸಚಿನಗೆ 14 ವರ್ಷ. ಕಾಂಬ್ಳಿಗೆ 16 ವರ್ಷ!
ನಂತರ ಇಬ್ಬರೂ ತಮ್ಮ ಶಾಲೆಯನ್ನು ಬಿಟ್ಟು ಖ್ಯಾತ ಕ್ರಿಕೆಟ್ ಕೋಚ್ ರಮಾಕಾಂತ್ ಆಚರೇಕರ್ ಅವರ ಕೋಚಿಂಗ್ ಕ್ಯಾಂಪ್ ಸೇರಿದರು. ಮಹಾಗುರುಗಳಾದ ಆಚರೇಕರ್ ಸರ್ ತಮ್ಮ ಇಬ್ಬರು ಶಿಷ್ಯರ ಬಗ್ಗೆ ಹೇಳಿದ ಮಾತು ತುಂಬಾ ಮುಖ್ಯ ಆದದ್ದು.
“ಸಚಿನ್ ತುಂಬಾ ಬದ್ಧತೆಯ ಹುಡುಗ. ಹೇಳಿದ ಸಮಯಕ್ಕೆ ಮೊದಲೇ ಕ್ಯಾಂಪಿಗೆ ಬರುತ್ತಿದ್ದ. ನಾನು ಹೇಳಿದ್ದನ್ನು ಚಾಚೂ ತಪ್ಪದೇ ಗಮನಿಸುತ್ತಿದ್ದ. ಹೇಳಿದ್ದನ್ನು ಪೂರ್ತಿಯಾಗಿ ಕಲಿತು  ಬರುತ್ತಿದ್ದ. ಅವನ ಶ್ರದ್ಧೆ ಮತ್ತು ನನ್ನ ಬಗ್ಗೆ ಇದ್ದ ಗೌರವಗಳು  ಎರಡೂ ಅದ್ಭುತ ಆಗಿತ್ತು”
“ಆದರೆ ಈ ವಿನೋದ್ ಕಾಂಬ್ಳಿ ಶಿಸ್ತಿಲ್ಲದ ಹುಡುಗ. ಆಗಲೇ ಶೋಕಿ ಮಾಡುವುದನ್ನು ಕಲಿತಿದ್ದ. ನನ್ನ ತರಗತಿಗೆ ತಡವಾಗಿ ಬರುತ್ತಿದ್ದ. ಕ್ಲಾಸು ಮುಗಿಯುವ ಮೊದಲೇ ಬೈಕನ್ನು ಏರಿ  ಓಡುತ್ತಿದ್ದ. ಸಿಗರೇಟ್, ಕುಡಿತ ಎಲ್ಲ ಚಟಗಳನ್ನು ಕಲಿತಿದ್ದ. ಹುಡುಗಿಯರನ್ನು ಇಂಪ್ರೆಸ್ ಮಾಡಲು ಪ್ರಯತ್ನ ಪಡುತ್ತಿದ್ದ”
“ಪ್ರತಿಭೆಯಲ್ಲಿ ಆತನು ಸಚಿನಗಿಂತ ಒಂದು ತೂಕ ಹೆಚ್ಚೇ ಇದ್ದನು. ಬಲಿಷ್ಠ ಎಡಗೈ ಆಟಗಾರ. ಹೆಚ್ಚು ಆಕ್ರಮಣಕಾರಿ ಆಟಗಾರ. ಆದರೆ ಬದ್ಧತೆ ಮತ್ತು ನಿರಂತರತೆ ಇಲ್ಲ. ಬಹಳ ಮುಖ್ಯವಾಗಿ ಫೋಕಸ್ ಇರಲಿಲ್ಲ. ನನ್ನ ಮಾತು ಕೇಳುತ್ತಲೇ ಇರಲಿಲ್ಲ. ಪರಿಣಾಮವಾಗಿ ಆತ ತನ್ನ ಕ್ರಿಕೆಟ್ ಭವಿಷ್ಯವನ್ನು ಹಾಳು ಮಾಡಿಕೊಂಡ!”
ಮುಂದೆ ಗುರುಗಳು ಹೇಳಿದ ಭವಿಷ್ಯದ ಮಾತು ಅಷ್ಟೂ ನಿಜ ಆಯಿತು.
ಸಚಿನ್ ಮತ್ತು ಕಾಂಬ್ಳಿ ಹೆಚ್ಚು ಕಡಿಮೆ ಒಂದೇ ವರ್ಷದಲ್ಲಿ  ಭಾರತೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾದರು. ಕಾಂಬ್ಳಿ  ಆರಂಭದಲ್ಲಿ  ಭಾರೀ ಅಬ್ಬರಿಸಿದ. ಸತತವಾಗಿ ನಾಲ್ಕು ಶತಕ ಸಿಡಿಸಿದ! ಅದರಲ್ಲಿ ಎರಡು ಡಬ್ಬಲ್ ಸೆಂಚುರಿಗಳು! ಕೇವಲ 14 ಇನ್ನಿಂಗ್ಸಗಳಲ್ಲಿ ಸಾವಿರ ರನ್ ಗಳ ಗಡಿಯನ್ನು ದಾಟಿದ! ಏಕದಿನ ಪಂದ್ಯದಲ್ಲಿ ಕೂಡ ದಾಖಲೆ ಮಾಡಿದ.
ಆತನ ಆರಂಭಿಕ ಅಬ್ಬರ ನೋಡಿದಾಗ ಭಾರತೀಯ ಕ್ರಿಕೆಟ್ ತಂಡಕ್ಕೆ ಒಬ್ಬ ಚಾಂಪಿಯನ್ ಆಟಗಾರ ಸಿಕ್ಕಿದ ಎಂದು ಲೀಡ್ ಪತ್ರಿಕೆಗಳು ಬರೆದವು!
ಆದರೆ ಆತ ಬಹುಬೇಗ ತನ್ನ ಫೋಕಸನ್ನು ಕಳೆದುಕೊಂಡ. ಚಟಗಳು ಮುಂದುವರೆದವು. ಶೋಕಿಯು ಮಿತಿಮೀರಿತು. ಕುಡಿತ, ಜೂಜು, ಸಿಗರೇಟ್ ಎಲ್ಲವೂ ಆತನನ್ನು ಖಾಲಿ ಮಾಡಿದವು. ಪರಿಣಾಮವಾಗಿ ಆತನ ಚಾಪಿಯನ್ ಆಟ ತನ್ನ ಆಕರ್ಷಣೆ ಕಳೆದುಕೊಂಡಿತು! ಕೇವಲ 24ನೆಯ ವಯಸ್ಸಿನಲ್ಲಿ ಟೆಸ್ಟ್ ತಂಡದಿಂದ ಹೊರಬಿದ್ದ! ಒಂದೆರಡು ವರ್ಷಗಳಲ್ಲಿ ಏಕದಿನದ ಅವಕಾಶಗಳು ಬರಿದಾದವು.
ಆತ ಭಾರೀ ಜಗಳಗಂಟ. ಸಹ ಆಟಗಾರರ ಜೊತೆ, ಆಯ್ಕೆ ಸಮಿತಿಯವರ ಜೊತೆಗೆ, ಕೋಚ್ ಜೊತೆ, ಹೀಗೆ ಎಲ್ಲರ ಜೊತೆಗೆ ಕಾಲುಕೆರೆದು ಜಗಳಕ್ಕೆ ನಿಂತ! ಅವನ ಮೇಲೆ ಎಲ್ಲರಿಗೂ ಇದ್ದ ಸಿಂಪೆತಿ ಖಾಲಿ ಆಯ್ತು! ಪರಿಣಾಮವಾಗಿ ತಂಡದಿಂದ ಮತ್ತೆ ಮತ್ತೆ ಹೊರಬಿದ್ದ!
ಅದೇ ಹೊತ್ತಿಗೆ ಸಚಿನ್ ಹೇಗೆ ತನ್ನ ಕ್ರಿಕೆಟ್ ಕೆರಿಯರ್ ಗ್ರಾಫ್ ಏರಿಸಿದ, ಯಾವ ರೀತಿ ದಾಖಲೆಗಳ ಮೇಲೆ ದಾಖಲೆ ಬರೆದ, ಹೇಗೆ ಗಾಡ್ ಆಫ್ ಕ್ರಿಕೆಟ್ ಆದ? ಎಂಬುದನ್ನು ನಾವೆಲ್ಲರೂ ನೋಡಿದ್ದೇವೆ! ಆದರೆ ಅವನಿಗಿಂತ ಹೆಚ್ಚು ಪ್ರತಿಭೆ ಮತ್ತು ತಾಕತ್ತು ಹೊಂದಿದ್ದ ವಿನೋದ್ ಕಾಂಬ್ಳಿ ಹೇಗೆ ದಾರಿ ತಪ್ಪಿದ ಅನ್ನುವುದನ್ನು  ಕೂಡ ಎಂದು ನಾವು ನೋಡಿದ್ದೇವೆ!
ಮುಂದೆ ತನ್ನ ಖಾಸಗಿ ಜೀವನದಲ್ಲಿಯೂ ಕಾಂಬ್ಳಿ ಒಂದರ ಮೇಲೊಂದು ಎಡವಟ್ಟು ಮಾಡಿಕೊಂಡನು! ಹೋಟೆಲ್ ರಿಸೆಪ್ಶನಿಷ್ಟ ಒಬ್ಬಳನ್ನು ಹಾರಿಸಿಕೊಂಡು ಹೋಗಿ ಮದುವೆ ಆದ. ತಾನೂ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಹೊಂದಿದ. ನಂತರ ಆಕೆಗೆ ಡೈವೋರ್ಸ್ ಕೊಟ್ಟು ಎರಡನೇ ಮದುವೆ ಆದ. ಕುಡಿತ, ಜೂಜು, ಸಿಗರೇಟ್ ಎಲ್ಲವೂ ನಿರಂತರವಾಗಿ  ಮುಂದುವರೆದವು. ಚಟಕ್ಕೆ ಬಿದ್ದು ದೊಡ್ಡ ದೊಡ್ಡ ಬ್ಯಾಂಕ್ ಸಾಲ ಮಾಡಿದ. ಬ್ಯಾಂಕಿನವರು ಹುಡುಕಿಕೊಂಡು ಬಂದಾಗ ಅಡಗಿ ಕೂತ!
ಒಂದು ಸಣ್ಣ ರಾಜಕೀಯ ಪಕ್ಷವನ್ನು ಸೇರಿ ಮುಂಬೈಯ ವಿಧಾನಸಭಾ  ಚುನಾವಣೆಗೆ ನಿಂತ. ತುಂಬಾನೆ ಖರ್ಚು ಮಾಡಿದ. ಆದರೆ ಚುನಾವಣೆಯಲ್ಲಿ ಹೀನಾಯವಾಗಿ ಸೋತುಹೋದ! ಒಮ್ಮೆ ಹಾರ್ಟ್ ಅಟ್ಯಾಕ್ ಆಗಿ ಸರ್ಜರಿ ಆಯ್ತು.
ವೈದ್ಯರು ಇನ್ನು ಕುಡಿಯಲೇ ಬಾರದು. ಕುಡಿದರೆ ಆಸ್ಪತ್ರೆಗೆ  ಅಡ್ಮಿಟ್ ಮಾಡುವುದಿಲ್ಲ ಎಂದು ಬೈದು ಕಳಿಸಿದರು! ಆತ ಕುಡಿಯುವುದು ನನ್ನ ಜನ್ಮಸಿದ್ಧ ಹಕ್ಕು ಎಂದು ಅಬ್ಬರಿಸಿ ಹೊರಬಂದ!
ಎರಡು ಹಿಂದೀ, ಒಂದು ಕನ್ನಡ ಸಿನೆಮಾದಲ್ಲಿ ಒಂದು  ಪಾತ್ರ ಮಾಡಿದ. ಅಲ್ಲೂ ಹೆಸರು ಕೆಡಿಸಿಕೊಂಡ. ಈಗ ಕ್ಯಾಮೆರಾದ ಮುಂದೆ ಬಂದು ನನಗೆ ಹೊಟ್ಟೆಪಾಡು ಕಷ್ಟ ಆಗ್ತಾ ಇದೆ ಎಂದು ಕಣ್ಣೀರು ಹಾಕಿದ್ದಾನೆ!
ಪತ್ರಕರ್ತ ಕುಣಾಲ್ ಪುರಂದರೆ ಅವರು ಬರೆದಿರುವ ಆತನ ಬದುಕಿನ ಕತೆಯ ಪುಸ್ತಕದ ಹೆಸರು ಅವನ ದುರಂತ ಬದುಕಿಗೆ ಅನ್ವರ್ಥ ಆಗಿದೆ. ಅದು THE LOST HERO! 
ಒಬ್ಬ ಅತ್ಯಂತ ಪ್ರತಿಭಾವಂತ ಕ್ರಿಕೆಟರ್ ಹೇಗೆಲ್ಲ ತನ್ನ ಬದುಕನ್ನು ಮತ್ತು ಕೆರಿಯರನ್ನು ಕೆಡಿಸಿಕೊಂಡ? ಹೇಗೆ ನೈತಿಕ ಅಧಃಪತನ ಹೊಂದಿದ? ಎಂಬುದಕ್ಕೆ ಒಂದು ಸಮರ್ಪಕ  ನಿದರ್ಶನ ಕೊಡಬೇಕು ಅಂತಾದರೆ ನೀವು ವಿನೋದ್ ಕಾಂಬ್ಳಿ ಹೆಸರು ಹೇಳಬಹುದು!