Categories
ಕಬಡ್ಡಿ ಸ್ಪೋರ್ಟ್ಸ್

ಕೊರವಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಕಬಡ್ಡಿ ತಂಡಕ್ಕೆಉಚಿತ ಶೂ ವಿತರಿಸಿದ ಗೌತಮ್ ಶೆಟ್ಟಿ

ಕುಂದಾಪುರ:ಇಲ್ಲಿನ ಕೊರವಡಿ ಸರ್ಕಾರಿ  ಹಿರಿಯ ಪ್ರಾಥಮಿಕ  ಶಾಲೆಯ ಕಬಡ್ಡಿ ತಂಡಕ್ಕೆ ಉಡುಪಿ ಜಿಲ್ಲಾ ಟೆನಿಸ್ ಬಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಹಾಗೂ ಕರ್ನಾಟಕ ಟೇಬಲ್ ಟೆನಿಸ್ ಅಸೋಸಿಯೇಷನ್ ಉಪಾಧ್ಯಕ್ಷ ಗೌತಮ್ ಶೆಟ್ಟಿ ಕುಂದಾಪುರ 12 ಜೊತೆ ಶೂ ವಿತರಿಸಿದರು.
ಕೊರವಡಿ ಹಿರಿಯ ಪ್ರಾಥಮಿಕ ಶಾಲೆಯು ಕಬಡ್ಡಿ ಜಿಲ್ಲಾ ಮಟ್ಟದಲ್ಲಿ ಜಯಗಳಿಸಿ ನವೆಂಬರ್ 9 ರಂದು ಮಂಡ್ಯದಲ್ಲಿ ಮೈಸೂರು ವಿಭಾಗ ಮಟ್ಟದ ಪಂದ್ಯಾವಳಿಯಲ್ಲಿ ಭಾಗವಹಿಸಲು ಅರ್ಹತೆ ಪಡೆದಿದೆ. ಮೈಸೂರು ವಿಭಾಗ ಮಟ್ಟದಲ್ಲಿ ಭಾಗವಹಿಸಲು ತಂಡದ ಆಟಗಾರರಿಗೆ ಪ್ರಾಯೋಜಿತ 12 ಜೊತೆ ಕಬಡ್ಡಿ ಶೂಗಳನ್ನು ನೀಡಿದರು.
ಈ ಸಂದರ್ಭ ಕಬಡ್ಡಿ ಸ್ಪರ್ಧಿಗಳನ್ನು  ಉದ್ದೇಶಿಸಿ  ಮಾತನಾಡಿದ ಗೌತಮ್ ಶೆಟ್ಟಿ “ಕೊರವಡಿ ಹಿರಿಯ ಪ್ರಾಥಮಿಕ ಶಾಲೆಯು ಸೀಮಿತ ವಿದ್ಯಾರ್ಥಿಗಳನ್ನು ಹೊಂದಿರುವ ಗ್ರಾಮೀಣ ಸರ್ಕಾರಿ ಶಾಲೆಯಾದರೂ ಜಿಲ್ಲಾಮಟ್ಟದ ಕಬಡ್ಡಿ ಸ್ಪರ್ಧೆಯಲ್ಲಿ ಅಸಾಧಾರಣ ಪ್ರದರ್ಶನ ನೀಡಿದೆ. ವಿಭಾಗೀಯ ಮಟ್ಟದಲ್ಲಿ ಮತ್ತು ರಾಜ್ಯ ಮಟ್ಟದಲ್ಲಿ ಗೆಲ್ಲಲು  ನಿಮ್ಮ ಅತ್ಯುತ್ತಮವಾದ ಆಟವನ್ನು ಆಡಿ.  ನಿಮ್ಮಲ್ಲಿ ದೃಢತೆ ಮತ್ತು ಶಿಸ್ತು ಇರಲಿ.  ಅದಕ್ಕಿಂತ ಹೆಚ್ಚಾಗಿ ನೀವು ಆಟವನ್ನು ಪ್ರೀತಿಸಿ ಮತ್ತು ಆಟವನ್ನು ಆನಂದಿಸಿರಿ.  ಅತ್ಯುತ್ತಮ ತಂಡದ ಸಂಯೋಜನೆಯಿಂದಾಗಿ ಯಾವುದೇ ತಂಡವನ್ನು ಸೋಲಿಸಲು ನಿಮ್ಮ ತಂಡ ಸಾಕಷ್ಟು ಪ್ರಬಲವಾಗಿದೆ . ನಿಮಗೆಲ್ಲರಿಗೂ ಶುಭಾಶಯಗಳು,ದೇವರು ನಿಮ್ಮೆಲ್ಲರನ್ನು ಆಶೀರ್ವದಿಸಲಿ” ಎಂದು ಆಟಗಾರರನ್ನು ಹುರಿದುಂಬಿಸಿದರು‌.
ಶಾಲೆಯ ವತಿಯಿಂದ ಗೌತಮ್ ಶೆಟ್ಟಿ ಇವರನ್ನು ಗೌರವಿಸಲಾಯಿತು.ಈ ಸಂದರ್ಭ ಶಾಲಾ ಅಧ್ಯಾಪಕ ವರ್ಗದವರು,ಮಕ್ಕಳು  ಮತ್ತಿತರರು ಉಪಸ್ಥಿತರಿದ್ದರು.
Categories
ಕಬಡ್ಡಿ

ಏಷ್ಯನ್ ಕಬಡ್ಡಿ ಚಾಂಪಿಯನ್‌ಶಿಪ್: ಫೈನಲ್‌ನಲ್ಲಿ ಇರಾನ್ ಅನ್ನು ಸೋಲಿಸುವ ಮೂಲಕ 11 ನೇ ಏಷ್ಯನ್ ಕಬಡ್ಡಿ ಚಾಂಪಿಯನ್‌ಶಿಪ್ ಗೆದ್ದುಕೊಂಡ ಭಾರತ

ಏಷ್ಯನ್ ಕಬಡ್ಡಿ ಚಾಂಪಿಯನ್‌ಶಿಪ್ 2023: ಭಾರತೀಯ ಕಬಡ್ಡಿ ತಂಡವು ಇರಾನ್ ಅನ್ನು ಸೋಲಿಸುವ ಮೂಲಕ ಏಷ್ಯನ್ ಕಬಡ್ಡಿ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಗೆದ್ದಿದೆ. ಎರಡು ದಿನಗಳಲ್ಲಿ ಇರಾನ್ ತಂಡವನ್ನು ಎರಡು ಬಾರಿ ಸೋಲಿಸುವ ಮೂಲಕ ಭಾರತ ಈ ಅದ್ಭುತ ಕಾರ್ಯವನ್ನು ಮಾಡಿದೆ. ಫೈನಲ್‌ನಲ್ಲಿ ಭಾರತ 42-32 ಅಂಕಗಳಿಂದ ಇರಾನ್ ತಂಡವನ್ನು ಸೋಲಿಸಿತು.
ಈ ಹೈ-ವೋಲ್ಟೇಜ್ ಫೈನಲ್‌ನಲ್ಲಿ ಭಾರತವು ಮೊದಲಾರ್ಧದಲ್ಲಿ 23-11 ರಿಂದ ಪ್ರಾಬಲ್ಯ ಸಾಧಿಸಿತು. ಆದರೆ ಇರಾನ್ ನಂತರ ದ್ವಿತೀಯಾರ್ಧದಲ್ಲಿ ತಮ್ಮ ನಾಯಕ ಮೊಹಮ್ಮದ್ರೇಜಾ ಶಾದಲುಯಿ ಚಯಾನೆಹ್ ಅವರ ಉತ್ತಮ ಆಟದಿಂದಾಗಿ ಅಂತರವನ್ನು ಗಣನೀಯವಾಗಿ ಕಡಿಮೆ ಮಾಡಲು ಪ್ರೇರೇಪಿಸಿತು. ಆದರೆ ಕೊನೆಯ ಕ್ಷಣದಲ್ಲಿ ಶಾದಲೂಯಿ ಮಾಡಿದ ತಪ್ಪಿನಿಂದಾಗಿ ಯಾವುದೇ ತೊಂದರೆಗಳಿಲ್ಲದೆ ಭಾರತ ಪ್ರಶಸ್ತಿ ಎತ್ತಿ ಹಿಡಿಯಿತು. ಮುಂಭಾಗದಿಂದ ಮುನ್ನಡೆ ಸಾಧಿಸಿದ ಭಾರತದ ಸ್ಟಾರ್ ಮತ್ತು ತಂಡದ ನಾಯಕ ಪವನ್ ಸೆಹ್ರಾವತ್ ಎದುರಾಳಿ ವಿರುದ್ಧ ಹೆಚ್ಚಿನ ಅಂಕಗಳನ್ನು ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಒಂದು ಹಂತದಲ್ಲಿ ಆಟ ಮುಗಿಯಲು ಎರಡು ನಿಮಿಷ ಬಾಕಿ ಇರುವಾಗ ಇರಾನ್ ಭಾರತದ ಮುನ್ನಡೆಯನ್ನು 38-31ಕ್ಕೆ ಕಡಿತಗೊಳಿಸಿ ಪಂದ್ಯವನ್ನು ಸಸ್ಪೆನ್ಸ್ ಗೆ ತಂದಿತು. ಇದಕ್ಕೂ ಮುನ್ನ ನಡೆದ ಪಂದ್ಯದಲ್ಲಿ ಭಾರತ 64-20 ಅಂತರದಲ್ಲಿ ಹಾಂಕಾಂಗ್ ತಂಡವನ್ನು ಮಣಿಸಿ ಲೀಗ್ ಹಂತವನ್ನು ಅಜೇಯವಾಗಿ ಮುಗಿಸಿತ್ತು.
ಈ ವರ್ಷಾಂತ್ಯದಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್‌ಗೆ ಭಾರತವನ್ನು ಸಜ್ಜುಗೊಳಿಸಿರುವುದರಿಂದ ಭಾರತಕ್ಕೆ ಗೆಲುವು ದೊಡ್ಡದಾಗಿದೆ. ಏಷ್ಯನ್ ಕಬಡ್ಡಿ ಚಾಂಪಿಯನ್‌ಶಿಪ್ ಪ್ರಮಾಣಿತ ಕಬಡ್ಡಿ ಸ್ಪರ್ಧೆಯಾಗಿದೆ. ಇದನ್ನು ಮೊದಲು 1980 ರಲ್ಲಿ ಆಯೋಜಿಸಲಾಯಿತು. ಈ ಟೂರ್ನಿಯಲ್ಲಿ ಭಾರತ ಮತ್ತೊಂದು ಪದಕ ಗೆಲ್ಲುವ ಮೂಲಕ 8ನೇ ಪದಕ ಗೆದ್ದುಕೊಂಡಿದೆ.
Categories
ಕಬಡ್ಡಿ

ಶಿಕ್ಷಣದಷ್ಟೇ ಕ್ರೀಡಾ ಚಟುವಟಿಕೆಯು ಮುಖ್ಯ- ವಾಲ್ಟರ್ ನಂದಳಿಕೆ

ಮಂಗಳೂರು:ಉತ್ತಮ ಕಲಿಕೆಗೆ ವಿದ್ಯಾರ್ಥಿಗಳು ಆರೋಗ್ಯವಂತರಾಗಿರಬೇಕು. ವಿದ್ಯಾರ್ಥಿಗಳು ಓದಿಗಷ್ಟೇ ಸೀಮಿತವಾದರೆ ಮಾನಸಿಕ ಒತ್ತಡ ಹೆಚ್ಚುತ್ತದೆ. ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ಒತ್ತಡ ನಿವಾರಣೆಯಾಗಿ ಸ್ಪರ್ಧಾ ಮನೋಭಾವ ಮೂಡುತ್ತದೆ. ಆದ್ದರಿಂದ ವಿದ್ಯಾರ್ಥಿಗಳಲ್ಲಿ ಕ್ರೀಡಾಸಕ್ತಿ ಬೆಳೆಯಬೇಕು ಎಂದು ದೈಜಿವರ್ಲ್ಡ್ ಮೀಡಿಯಾದ ವ್ಯವಸ್ಥಾಪಕ ನಿರ್ದೇಶಕರಾಗಿರುವ ವಾಲ್ಟರ್ ನಂದಳಿಕೆ ಅಭಿಪ್ರಾಯಪಟ್ಟರು.
ಮಣೇಲ್ ಶ್ರೀನಿವಾಸ್ ನಾಯಕ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಬೊಂದೇಲ್ ನಲ್ಲಿ ಆಯೋಜಿಸಿದ್ದ ಅಂತರ್ ಕಾಲೇಜು ಪದವಿ ಮಟ್ಟದ ಪುರುಷರ ಮತ್ತು ಮಹಿಳೆಯರ ಕಬಡ್ಡಿ ಪಂದ್ಯಾವಳಿಯ ಸಮಾರೋಪ ಸಮಾರಂಭ ಹಾಗೂ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
          ಗೌರವ ಅತಿಥಿಗಳಾಗಿ ಸಿಟಾಡೆಲ್ ಡೆವಲಪರ್ಸ್ ಮಂಗಳೂರಿನ ಪಾಲುದಾರರಾಗಿರುವ ರಾಮ್ ಕುಮಾರ್ ಬೇಕಲ್ ಮಾತನಾಡಿ “ಸೋಲು ಗೆಲುವಿನ ನಿರ್ಣಾಯಕರಾಗದೆ ಪ್ರತಿ ಸ್ಪರ್ಧೆ ಕಲಿಸುವ ಪಾಠವನ್ನು ಜೀವನಕ್ಕೆ ಅನ್ವಯಿಸುವಲ್ಲಿ ಯಶಸ್ವಿಯಾಗೋಣ. ರಾಜ್ಯ, ರಾಷ್ಟ್ರಮಟ್ಟದಲ್ಲಿ ಮಿಂಚುವಂತಹ ಪ್ರತಿಭೆಗಳು ನಮ್ಮ ಜಿಲ್ಲೆಯಿಂದ ಹೊರಹೊಮ್ಮಲಿ “ಎಂದು ಶುಭ ಹಾರೈಸಿದರು.
       ವೇದಿಕೆಯಲ್ಲಿ ವುಮೆನ್ಸ್ ನ್ಯಾಷನಲ್ ಎಜುಕೇಶನ್ ಸೊಸೈಟಿಯ ಅಧ್ಯಕ್ಷರಾಗಿರುವ ಅಣ್ಣಪ್ಪ ನಾಯಕ್, ಮಣೇಲ್ ಶ್ರೀನಿವಾಸ್ ನಾಯಕ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ನ ಸಂಚಾಲಕರಾಗಿರುವ ಜೀವನ್ ದಾಸ್ ನಾರಾಯಣ್, ವಿದ್ಯಾ ಸಂಸ್ಥೆಯ ಆಡಳಿತ ನಿರ್ದೇಶಕರಾಗಿರುವ ಡಾ. ಮೋಲಿ.ಎಸ್ ಚೌಧರಿ, ಉಪನ್ಯಾಸಕ ಸಂಯೋಜಕರಾಗಿರುವ ಡಾ. ಶರಣ್ ಕುಮಾರ್ ಶೆಟ್ಟಿ ಹಾಗೂ ಸುರೇಶ್ ಶೆಣೈ  ಉಪಸ್ಥಿತರಿದ್ದರು.
        ಡಾ.ಶರಣ್ ಕುಮಾರ್ ಶೆಟ್ಟಿ ಸ್ವಾಗತಿಸಿ ಸುರೇಶ್ ಶೆಣೈ ವಂದಿಸಿದರು.ಕಾಲೇಜಿನ ಸಹಾಯಕ ಪ್ರಾಧ್ಯಾಪಕಿಯಾಗಿರುವ ಶ್ರೀಮತಿ ನಂದಿತಾ ಸುನಿಲ್ ಕಾರ್ಯಕ್ರಮ ನಿರೂಪಿಸಿದರು.
     ಪುರುಷರ ವಿಭಾಗದಲ್ಲಿ ಪ್ರೇರಣಾ ಕಾಲೇಜು ಮಂಗಳೂರು ತಮ್ಮ ಅಪ್ರತಿಮ ಕ್ರೀಡಾ ಪ್ರದರ್ಶನದಿಂದ ಪ್ರಥಮ ಸ್ಥಾನಿಯಾಗಿ ಹೊರಹೊಮ್ಮಿದರು. ದ್ವಿತೀಯ ಸ್ಥಾನವನ್ನು ಸಂತ ಫಿಲೋಮಿನಾ ಕಾಲೇಜು ಪುತ್ತೂರು ಪಡೆದುಕೊಂಡರು. ತೃತೀಯ ಸ್ಥಾನಕ್ಕೆ ಗೋಕರ್ಣನಾಥೇಶ್ವರ ಕಾಲೇಜು ಮಂಗಳೂರು ಭಾಜನರಾದರೆ, ಚತುರ್ಥ ಸ್ಥಾನವನ್ನು ನೆಹರು ಮೆಮೋರಿಯಲ್ ಕಾಲೇಜು  ಸುಳ್ಯ ಪಡೆದುಕೊಂಡಿತು. ಅತ್ಯುತ್ತಮ ದಾಳಿಗಾರನಾಗಿ ಪ್ರೇರಣಾ ಕಾಲೇಜು ಮಂಗಳೂರಿನ ಜಾರ್ಜ್ ಹಾಗೂ ಉತ್ತಮ ಹಿಡಿತಗಾರನಾಗಿ ಪ್ರೇರಣಾ ಕಾಲೇಜಿನ ಸುಪ್ರೀತ್ ಗಿಟ್ಟಿಸಿಕೊಂಡರೆ ಸವ್ಯಸಾಚಿ ಆಟಗಾರನಾಗಿ ಸಂತ ಫಿಲೋಮಿನಾ ಕಾಲೇಜಿನ ಮೊಹಮ್ಮದ್ ನಾಜೀರ್ ಕ್ರೀಡಾಭಿಮಾನಿಗಳ ಮನ ಗೆದ್ದರು.
        ಮಹಿಳೆಯರ ವಿಭಾಗದಲ್ಲಿ    ಸರಕಾರಿ ಪ್ರಥಮ ದರ್ಜೆ ಕಾಲೇಜು ಅಜ್ಜರಕಾಡು ತಮ್ಮ ಮಿಂಚಿನಂತಹ ಕ್ರೀಡಾ ಪ್ರದರ್ಶನದಿಂದ ಪ್ರಥಮ   ಸ್ಥಾನಿಯಾಗಿ ಹೊರಹೊಮ್ಮಿದರು.ದ್ವಿತೀಯ ಸ್ಥಾನವನ್ನು ಡಾ.ಪಿ.ದಯಾನಂದ ಪೈ-ಪಿ.ಸತೀಶ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜು ಮಂಗಳೂರು ಪಡೆದುಕೊಂಡಿತು.ತೃತೀಯ ಸ್ಥಾನಕ್ಕೆ ಕೆನರಾ ಇಂಜಿನಿಯರಿಂಗ್ ಕಾಲೇಜು ಬೆಂಜನಪದವು ಭಾಜನರಾದರೆ,ಸಂತ ಅಲೋಶಿಯಸ್ ಕಾಲೇಜು ಮಂಗಳೂರು ಚತುರ್ಥ ಸ್ಥಾನವನ್ನು ಪಡೆದುಕೊಂಡಿತು.
      ಅತ್ಯುತ್ತಮ ದಾಳಿಗಾರ್ತಿಯಾಗಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಅಜ್ಜರಕಾಡಿನ ರಕ್ಷಾ .ಎಸ್ , ಅತ್ಯುತ್ತಮ ಹಿಡಿತಗಾರ್ತಿಯಾಗಿ   ಡಾ.ಪಿ.ದಯಾನಂದ ಪೈ-ಪಿ.ಸತೀಶ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜು ಮಂಗಳೂರಿನ ಅರ್ಪಿತಾ ಹಾಗೂ ಸವ್ಯಸಾಚಿ ಆಟಗಾರ್ತಿಯಾಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅಜ್ಜರಕಾಡಿನ ರುತು ಸುಧಾಕರ ಹೆಗ್ಡೆ ತಮ್ಮ ವಿಭಿನ್ನ ಆಟದ ಪ್ರದರ್ಶನದಿಂದ ಕ್ರೀಡಾಭಿಮಾನಿಗಳ ಮನ ಗೆದ್ದರು.
Categories
ಕಬಡ್ಡಿ

ಅಂತರ್ ಕಾಲೇಜು ಪದವಿ ಮಟ್ಟದ ಕಬಡ್ಡಿ ಪಂದ್ಯಾವಳಿ – 2023

ಮಂಗಳೂರು-ಮಣೇಲ್ ಶ್ರೀನಿವಾಸ್ ನಾಯಕ್ ಸ್ಮಾರಕ ಅಂತರ್ ಕಾಲೇಜು ಪದವಿ ಮಟ್ಟದ ಪುರುಷ ಹಾಗೂ ಮಹಿಳೆಯರ ಕಬಡ್ಡಿ ಪಂದ್ಯಾವಳಿ ಇದೇ ಜನವರಿ 19 ಹಾಗೂ 20 ರಂದು ಮಣೇಲ್ ಶ್ರೀನಿವಾಸ್ ನಾಯಕ್ ಇನ್ಸಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಬೊಂದೇಲ್, ಮಂಗಳೂರಿನಲ್ಲಿ ಆಯೋಜಿಸಲಾಗಿದೆ.

 

ಪ್ರವೇಶ ಶುಲ್ಕವಿಲ್ಲದೆ ನಡೆಯುವ ಈ ಪಂದ್ಯಾವಳಿಯಲ್ಲಿ ಪ್ರಥಮ, ದ್ವಿತೀಯ, ತೃತೀಯ ಹಾಗೂ ಚತುರ್ಥ ಸ್ಥಾನ ಪಡೆಯುವ ತಂಡಗಳಿಗೆ ಎಂ.ಎಸ್.ಎನ್.ಐ ಎಮ್ ಟ್ರೋಫಿ ಹಾಗೂ ನಗದು ಬಹುಮಾನವೂ ದೊರೆಯಲಿದೆ.ಕ್ವಾರ್ಟರ್ ಫೈನಲ್ ಅರ್ಹತಾ ತಂಡಕ್ಕೆ ನಗದು ಬಹುಮಾನವನ್ನು ನೀಡಲಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ವಿದ್ಯಾರ್ಥಿ ಸಂಯೋಜಕರಾದ ವಿಕ್ರಾಂತ್ -9035945366 , ಪ್ರೀತಿಶ್ ಪೈ – 9008738758 ಇವರನ್ನು ಸಂಪರ್ಕಿಸಬಹುದಾಗಿದೆ.

Categories
ಕಬಡ್ಡಿ

ಪ್ರಜ್ವಲ್ ಕುಮಾರ್ ಶೆಟ್ಟಿ-ಉಡುಪಿ ಜಿಲ್ಲಾ ಕಬಡ್ಡಿ ತಂಡಕ್ಕೆ ಆಯ್ಕೆ

ಉಡುಪಿ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ (ರಿ). ಉಡುಪಿ, ವತಿಯಿಂದ ಜರುಗಿದ ಜೂನಿಯರ್ 70 ಕೆಜಿ ತೂಕದ ಬಾಲಕರ ಕಬಡ್ಡಿ ತಂಡದ ಆಯ್ಕೆ ಯಲ್ಲಿ ಭಾಗವಹಿಸಿದ ಶಿರ್ವ ಮುಲ್ಕಿ ಸುಂದರ ರಾಮ್ ಶೆಟ್ಟಿ ಕಾಲೇಜಿನ ಪ್ರಜ್ವಲ್ ಕುಮಾರ್ ಶೆಟ್ಟಿ ಉಡುಪಿ ತಂಡಕ್ಕೆ ಆಯ್ಕೆ ಆಗಿರುತ್ತಾರೆ.
ಉಡುಪಿಯಲ್ಲಿ ಜರುಗುತ್ತಿರುವ ತರಬೇತಿಯಲ್ಲಿ ಭಾಗವಹಿಸಿ, ನವೆಂಬರ್ 11 ರಿಂದ 13 ರ ವರೆಗೆ ಬೆಂಗಳೂರಿನಲ್ಲಿ ನಡೆಯುವ ರಾಜ್ಯ ತಂಡದ ಆಯ್ಕೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಸ್ಪೋರ್ಟ್ಸ್ ಕನ್ನಡ ವೆಬ್ಸೈಟ್ ವತಿಯಿಂದ ಅಭಿನಂದನೆಗಳು ಹಾಗೂ ಶುಭಹಾರೈಕೆಗಳು….
Categories
ಕಬಡ್ಡಿ

ಪ್ರೊ ಕಬಡ್ಡಿ ಪಂದ್ಯಾಟ 2020

 

ಅಕಾಲಿಕವಾಗಿ ಅಗಲಿದ ಚೇತನಗಳಾದ ಭರತ್ ಮತ್ತು ಯತೀಶ್ ಸ್ಮರಣಾರ್ಥ.

“ಸಂಗಮ್ ಫ್ರೆಂಡ್ಸ್ ಸಂಗಮ್” ವತಿಯಿಂದ ಸ್ಪಂದನ ಸೇವಾ ಸಮಿತಿ ಕೋಟ, ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಉಡುಪಿ ಜಿಲ್ಲೆ ಮತ್ತು ಬ್ರಹ್ಮಾವರ ತಾಲೂಕು ಕಬಡ್ಡಿ ಅಸೋಸಿಯೇಷನ್ ಸಹಯೋಗದಲ್ಲಿ ದಿ. ಭರತ್ ಮತ್ತು ದಿ. ಯತೀಶ್ ಸ್ಮರಣಾರ್ಥ ಹೊನಲು ಬೆಳಕಿನ 70 ಕೆ. ಜಿ. ವಿಭಾಗದ ಮ್ಯಾಟ್ ಮಾದರಿಯ ಮುಕ್ತ “ಪ್ರೊ ಕಬಡ್ಡಿ ಪಂದ್ಯಾಟ 2020 ” ಇದೇ ಮಾರ್ಚ್ ತಿಂಗಳ 28 ರಂದು ಶಾಂಭವಿ ಶಾಲೆ ಮೈದಾನ ಕೋಟ ಇಲ್ಲಿ ಸಾಯಂಕಾಲ 6 ಗಂಟೆಯಿಂದ ನಡೆಯಲಿದೆ.

ಪಂದ್ಯಾವಳಿಯಲ್ಲಿ ಭಾಗವಹಿಸುವ ತಂಡಗಳು ಸಂಜೆ 6 ಗಂಟೆಯ ಒಳಗೆ ಕಡ್ಡಾಯವಾಗಿ ಹಾಜರಾಗುವಂತೆ ಕೋರಲಾಗಿದೆ. ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ನಿಯಮಗಳನ್ನು ಆಟಗಾರರು ಪಾಲಿಸಬೇಕು. ಯಾವುದೇ ಚರ್ಚೆಗೆ ಅವಕಾಶ ಇಲ್ಲದೆ ತೀರ್ಪುಗಾರರ ತೀರ್ಪು ಅಂತಿಮವಾಗಿದೆ ಎಂದು ತಿಳಿಸಲಾಗಿದೆ . ಅಶಿಸ್ತು ತೋರಿದ ತಂಡವನ್ನು ಪಂದ್ಯದಿಂದ ಕೈ ಬಿಡಲಾಗುವುದು ಎಂದು ತಿಳಿಸಿದ್ದಾರೆ.

ವಿಜೇತ ತಂಡಕ್ಕೆ ಪ್ರಥಮ ಬಹುಮಾನ ರೂ. 33333
ದ್ವಿತೀಯ ಬಹುಮಾನ ರೂ. 22222
ತೃತೀಯ ಬಹುಮಾನ ರೂ 8888 ಮತ್ತು
ಚತುರ್ಥ ಬಹುಮಾನ ರೂ 8888, ಅಲ್ಲದೆ ಅತ್ಯುತ್ತಮ ದಾಳಿಗಾರ, ಅತ್ಯುತ್ತಮ ಹಿಡಿತಗಾರ, ಮತ್ತು ಅತ್ಯುತ್ತಮ ಸವ್ಯಸಾಚಿ ವಿಶೇಷ ಬಹುಮಾನ ಇದೆ.
“ಬದುಕು ಕತ್ತಲೆಗೆ ಮಿಣುಗು ದೀಪ ಆಗೋಣ ”
ಅನ್ನುವ ಆಶಯದೊಂದಿಗೆ ನಿಮ್ಮ ನೆರವನ್ನು ನೀಡಿ ಸಹಕರಿಸಬೇಕು ಎಂದು ಕೋರಿ ಕೊಳ್ಳುವ,

ಸ್ಪಂದನ ಸೇವಾ ಸಮಿತಿ
ಕರ್ನಾಟಕ ಬ್ಯಾಂಕ್ ಲಿಮಿಟೆಡ್
Ac no :412250010446601
IFSC :KAR0000412

ಕೆ ರಾಮಕೃಷ್ಣ ಆಚಾರ್ಯ
ಸ್ಪೋರ್ಟ್ಸ್ ಕನ್ನಡ ಜಾಲತಾಣ, ಉಡುಪಿ

Categories
ಕಬಡ್ಡಿ

ರಾಷ್ಟ್ರೀಯ ಮಟ್ಟದ ಅಂತರ್ ಯೂನಿವರ್ಸಿಟಿ ಕಬಡ್ಡಿ ಚಾಂಪಿಯನ್ ಶಿಪ್-2019-20

ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ‌‌‌ ಶಿಕ್ಷಣ ವಿಭಾಗ ಹಾಗೂ ಪೂರ್ಣಪ್ರಜ್ಞ ಕಾಲೇಜ್ ಹಾಗೂ ಸ್ನಾತಕೋತ್ತರ ಪದವಿ ಕೇಂದ್ರ ಉಡುಪಿಯ ವಜ್ರಮಹೋತ್ಸವದ ಪ್ರಯುಕ್ತ ಉಡುಪಿಯ ಪಿ.ಪಿ‌.ಸಿ ಕಾಲೇಜು ಅಂಗಣದಲ್ಲಿ
ರಾಷ್ಟ್ರೀಯ ಮಟ್ಟದ ಅಂತರ್ ಯೂನಿವರ್ಸಿಟಿ ಕಬಡ್ಡಿ ಚಾಂಪಿಯನ್ ಶಿಪ್-2019-20,   ಡಿಸೆಂಬರ್ 18 ರಿಂದ 21 ರ ತನಕ 4 ದಿನಗಳ ಕಾಲ ಹೊನಲು ಬೆಳಕಿನಲ್ಲಿ  ನಡೆಯಲಿದೆ.

ವಿಶೇಷ ಆಕರ್ಷಣೆಯಾಗಿ  ಪ್ರೊಕಬಡ್ಡಿ ಯ ಖ್ಯಾತನಾಮ ಆಟಗಾರರಾದ ಮಣಿಂದರ್ ಸಿಂಗ್,ಸುಕೇಶ್ ಹೆಗ್ಡೆ,ರಿಶಾಂಕ್ ದೇವಾಡಿಗ,ಪ್ರಶಾಂತ್ ಕುಮಾರ್ ರೈ,ಸಚಿನ್ ಸುವರ್ಣ ಹಾಗೂ ಇನ್ನಿತರ ಪ್ರಸಿದ್ಧ ಆಟಗಾರರು ಭಾಗವಹಿಸಲಿದ್ದಾರೆ.

Categories
ಕಬಡ್ಡಿ

M.B.C.C ಮಡಿಲಿಗೆ ಥಂಡರ್ಸ್ ಕಪ್-2019

ಟೀಮ್ ಥಂಡರ್ಸ್ ಕೆ.ಆರ್.ಪುರಂ ಬೆಂಗಳೂರು ಇವರ ಆಶ್ರಯದಲ್ಲಿ ಕೆ‌.ಆರ್.ಪುರಂ ನ ಸರಕಾರಿ ಕಾಲೇಜು ಅಂಗಣದಲ್ಲಿ 2 ದಿನಗಳ ಕಾಲ ಹಗಲಿನಲ್ಲಿ ನಡೆದ ರಾಜ್ಯ ಮಟ್ಟದ ಪಂದ್ಯಾಕೂಟವನ್ನು ಎಂ.ಬಿ.ಸಿ.ಸಿ ಬೆಂಗಳೂರು ಜಯಿಸಿದೆ.

24 ತಂಡಗಳು ಭಾಗವಹಿಸಿದ್ದ ಈ ಟೂರ್ನಿಯಲ್ಲಿ ಸೆಮಿಫೈನಲ್ ಹಂತದಲ್ಲಿ ನಾಗಾ ಇಲೆವೆನ್ (ನ್ಯಾಶ್), ಥಂಡರ್ಸ್ ಕೆ.ಆರ್.ಪುರಂ ತಂಡವನ್ನು ಸೋಲಿಸಿ ಹಾಗೂ ಎಂ.ಬಿ.ಸಿ.ಸಿ ತಂಡ ಮೈಟಿ ಬೆಂಗಳೂರನ್ನು ಸೋಲಿಸಿ ಫೈನಲ್ ಗೆ ನೆಗೆದೇರಿದ್ದವು.

ಫೈನಲ್ ನಲ್ಲಿ ಎಂ.ಬಿ.ಸಿ.ಸಿ, ನಾಗಾ ಇಲೆವೆನ್ (ನ್ಯಾಶ್)ತಂಡವನ್ನು ಸೋಲಿಸಿ ಪ್ರಥಮ ಬಹುಮಾನವಾಗಿ  50000 ನಗದು ಸಹಿತ ಆಕರ್ಷಕ ಟ್ರೋಫಿ ಪಡೆದು ಕೊಂಡಿತು. ಹಾಗೂ ರನ್ನರ್ಸ್ ಅಪ್ ನಾಗಾ ಇಲೆವೆನ್ (ನ್ಯಾಶ್) ತಂಡ 25000 ನಗದು ಸಹಿತ ಆಕರ್ಷಕ ಟ್ರೋಫಿ ತನ್ನದಾಗಿಸಿಕೊಂಡಿತು.

ಟೂರ್ನಿಯುದ್ದಕ್ಕೂ ಸರ್ವಾಂಗೀಣ ಪ್ರದರ್ಶನ ತೋರಿದ ಸ್ವಸ್ತಿಕ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರೆ, ಕ್ರಮವಾಗಿ ಅಕ್ಷಯ್ ಸಿ.ಕೆ ಹಾಗೂ ರಕ್ಷಿತ್ ಶೆಟ್ಟಿ, ಬೆಸ್ಟ್ ಬ್ಯಾಟ್ಸ್‌ಮನ್ ಹಾಗೂ ಬೆಸ್ಟ್ ಬೌಲರ್ ಗೌರವಕ್ಕೆ ಪಾತ್ರರಾದರು.

Y Sports ಈ ಪಂದ್ಯಾಕೂಟದ ನೇರಪ್ರಸಾರವನ್ನು ಬಿತ್ತರಿಸಿತ್ತು.

ಆರ್.ಕೆ‌‌.ಆಚಾರ್ಯ ಕೋಟ

Categories
ಕಬಡ್ಡಿ

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಹಿರಿಯ ಕ್ರಿಕೆಟಿಗ ರೋಜರ್ ಬಿನ್ನಿ ಅವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿ

ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಚುನಾವಣೆ ದಿನಾಂಕವು ಗುರುವಾರ ಘೋಷಣೆಯಾದ ಕೂಡಲೇ ಪದಾಧಿಕಾರಿಗಳ ಸ್ಥಾನದ ಆಕಾಂಕ್ಷಿಗಳ ವಲಯದಲ್ಲಿ ತುರುಸಿನ ಚಟುವಟಿಕೆ ಗರಿಗೆದರಿದೆ.

ಪ್ರಮುಖ ಸ್ಥಾನಗಳಿಗೆ ಕೆಲವು ಹೆಸರುಗಳು ಕೇಳಿ ಬರುತ್ತಿವೆ. ಹಿರಿಯ ಕ್ರಿಕೆಟಿಗ ರೋಜರ್ ಬಿನ್ನಿ ಅವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

‘‌1983ರಲ್ಲಿ ವಿಶ್ವಕಪ್ ಗೆದ್ದ ಭಾರತ ತಂಡದಲ್ಲಿ ಬಿನ್ನಿ ಇದ್ದರು. ಕರ್ನಾಟಕದ ಕ್ರಿಕೆಟ್‌ಗೂ ಅವರು ಉತ್ತಮ ಕಾಣಿಕೆ ನೀಡಿದ್ದಾರೆ. ಆದ್ದರಿಂದ ಅವರನ್ನೇ ಕಣಕ್ಕಿಳಿಸಲಾಗುವುದು’ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

ಕಾರ್ಯದರ್ಶಿ ಸ್ಥಾನಕ್ಕೆ ಸುಂದರ್‌ ರಾಜ್ ಅವರು ಕಣಕ್ಕಿಳಿಯಲಿದ್ದಾರೆನ್ನಲಾಗಿದೆ. ಅವರು ಪ್ರಸ್ತುತ ಕರ್ನಾಟಕ ರಾಜ್ಯ ಲಾನ್‌ಟೆನಿಸ್ ಸಂಸ್ಥೆಯ ಕಾರ್ಯದರ್ಶಿಯಾಗಿದ್ದಾರೆ. ಬಿಸಿಸಿಐ ನಿಯಮಾವಳಿಯ ಪ್ರಕಾರ ಒಬ್ಬ ವ್ಯಕ್ತಿಯು ಎರಡು ಹುದ್ದೆಗಳನ್ನು ಹೊಂದುವಂತಿಲ್ಲ. ಆದ್ದರಿಂದ ಅವರು ಕೆಎಸ್‌ಎಲ್‌ಟಿಎ ಹುದ್ದೆಗೆ ರಾಜೀನಾಮೆ ಸಲ್ಲಿಸುವ ಸಾಧ್ಯತೆ ಇದೆ ಎನ್ನಲಾಗಿದೆ.ಹಿರಿಯ ಆಟಗಾರ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸದ್ಯ ಆಯ್ಕೆ ಸಮಿತಿಯ ಸದಸ್ಯರಾಗಿರುವ ಜೆ.ಅಭಿರಾಮ್ ಮತ್ತು ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ಸಂತೋಷ್ ಮೆನನ್ ಅವರು ಸ್ಪರ್ಧಿಸುವ ಸಂಭವ ಇದೆ ಎಂದೂ ಮೂಲಗಳು ಹೇಳಿವೆ.

ಲೋಧಾ ಸಮಿತಿಯ ಶಿಫಾರಸುಗಳ ಪ್ರಕಾರ ಬಿಸಿಸಿಐಗೆ ಹೊಸ ನಿಯಮಾವಳಿ ರಚನೆಗೆ 2017ರಲ್ಲಿ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಅದರ ಪ್ರಕಾರ 70 ವರ್ಷ ವಯಸ್ಸು ದಾಟಿದವರು ಮತ್ತು ಒಂಬತ್ತು ವರ್ಷಗಳಿಗೂ ಹೆಚ್ಚು ಕಾಲ ಪದಾಧಿಕಾರಿಯಾದವರು ಮುಂದುವರಿಯುವಂತಿಲ್ಲ ಎಂದು ಆದೇಶ ನೀಡಲಾಗಿತ್ತು. ಆಗ ಅಧಿಕಾರದಲ್ಲಿದ್ದ ಆಡಳಿತ ಸಮಿತಿಯನ್ನು ರದ್ದು ಮಾಡಲಾಗಿತ್ತು. ಹಂಗಾಮಿ ಸಮಿತಿಯನ್ನು ನೇಮಕ ಮಾಡಲಾಗಿತ್ತು. ಆದ್ದರಿಂದ ಇಲ್ಲಿಯವರೆಗೆ ಸಂಜಯ್ ದೇಸಾಯಿ ಮತ್ತು ಸುಧಾಕರ್ ರಾವ್ ಅವರು ಕ್ರಮವಾಗಿ ಹಂಗಾಮಿ ಅಧ್ಯಕ್ಷ ಮತ್ತು ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದರು.ಹೋದ ತಿಂಗಳು ಚುನಾವಣೆ ದಿನಾಂಕವನ್ನು ಘೋಷಿಸಿದ್ದ ಕ್ರಿಕೆಟ್ ಆಡಳಿತ ಸಮಿತಿ (ಸಿಒಎ) ಸೆ. 28ರೊಳಗೆ ರಾಜ್ಯ ಸಂಸ್ಥೆಗಳ ಚುನಾವಣೆ ಮುಗಿಸಲು ಸೂಚಿಸಿತ್ತು.

Categories
ಕಬಡ್ಡಿ ತಾಲೂಕ

ಬೈಂದೂರು : ತಾಲೂಕು ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಕೊಲ್ಲೂರು ದೇವಳ ಕಾಲೇಜಿನ ಬಾಲಕಿಯರು ಪ್ರಥಮ ಸ್ಥಾನ, ಜಿಲ್ಲಾ ಮಟ್ಟಕ್ಕೆ ಆಯ್ಕೆ

ಬೈಂದೂರು : ಉಡುಪಿ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಬೈಂದೂರು ಸರಕಾರಿ ಪದವಿ ಪೂರ್ವ ಕಾಲೇಜು ಇವರ ಆಶ್ರಯದಲ್ಲಿ ಬೈಂದೂರು ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜು ಬಾಲಕ-ಬಾಲಕಿಯರ ಕಬಡ್ಡಿ ಪಂದ್ಯಾಟ ಗುರುವಾರ ಬೈಂದೂರು ಗಾಂಧಿ ಮೈದಾನದಲ್ಲಿ ನಡೆಯಿತು.

 

ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕಬಡ್ಡಿ ಪಂದ್ಯಾಟದಲ್ಲಿ ಕೊಲ್ಲೂರ ದೇವಳದ ಪದವಿ ಪೂರ್ವ ಕಾಲೇಜಿನ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದು ಉಡುಪಿ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾರೆ.

ಈ ಸಂದರ್ಭದಲ್ಲಿ ವಿಜೇತ ವಿದ್ಯಾರ್ಥಿಗಳೊಂದಿಗೆ ದೈಹಿಕ ಶಿಕ್ಷಣ ಉಪನ್ಯಾಸಕ ಸುಕೇಶ್ ಶೆಟ್ಟಿ ಹೊಸಮಠ, ದೈಹಿಕ ಶಿಕ್ಷಣ ಶಿಕ್ಷಕ ಸಚಿನ್ ಕುಮಾರ್ ಶೆಟ್ಟಿ ಹುಂಚನಿ, ಉಪನ್ಯಾಸಕಿ ಪೂರ್ಣಿಮಾ ಜೋಯಿಸ್ ಹಾಗೂ ಗ್ರಾಮ ಪಂಚಾಯತ್ ಸದಸ್ಯರಾದ ಪ್ರಕಾಶ್ ಪೂಜಾರಿ, ಹಳೆಯ ವಿದ್ಯಾರ್ಥಿಗಳಾದ ಅವಿನಾಶ್ ಆಚಾರ್ಯ, ವಿನಾಯಕ ಆಚಾರ್ಯ ಕೊಲ್ಲೂರು ಪ್ರದೀಪ್ ಭಟ್ ವಿಜೇತ ವಿದ್ಯಾರ್ಥಿಗಳೊಂದಿಗೆ ಇದ್ದರು.

ವರದಿ : ಎಚ್.ಸುಶಾಂತ್ ಬೈಂದೂರು