Categories
ಸಂಪಾದಕರ ಮಾತು

ಕ್ರೀಡಾ ಲೋಕದ ಕಣ್ಮಣಿ- ಟೊರ್ಪೆಡೋಸ್ ಗೌತಮ್ ಶೆಟ್ಟಿ

 

ಪ್ರಯತ್ನದಲ್ಲಿ ಸೋಲಾದರೆ ಪರವಾಗಿಲ್ಲ, ಆದರೆ ಪ್ರಯತ್ನ ಮಾಡದೆ ಇರುವುದು ಜೀವನದ ದೊಡ್ಡ ಸೋಲು.
ಕ್ರೀಡಾಲೋಕದಲ್ಲಿ ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಪ್ರಚಲಿತವಿರುವ ಸಂಸ್ಥೆ,ಪ್ರತಿಷ್ಟಿತ ಹಳೆಯಂಗಡಿಯ ಕ್ರೀಡಾ ತರಬೇತಿ ಸಂಸ್ಥೆ “ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್” ನ ರೂವಾರಿ ಗೌತಮ್ ಶೆಟ್ಟಿಯವರು,ಕ್ರೀಡಾ ಕ್ಷೇತ್ರದ ಸೇವೆಗಾಗಿ “ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ”, ಬಂಟರ ಪ್ರಮುಖ ವಾಹಿನಿ “ಬಂಟರ ಮಿತ್ರ” ಪತ್ರಿಕೆಯಲ್ಲಿ 10 ಸಂಚಿಕೆಗಳಲ್ಲಿ ಪ್ರಕಟವಾದ 500 ಮಿಕ್ಕಿ ಸಾಧಕರಲ್ಲಿ, ಓದುಗರ ಹಾಗೂ ಸಂಪಾದಕೀಯ ಮಂಡಳಿಯ ಆಯ್ಕೆಯಾಗಿ 2019 ರ ಸಾಲಿನ “ಬಂಟ ರತ್ನ” ಪ್ರಶಸ್ತಿ ಹಾಗೂ ಸಮಾಜರತ್ನ ಪ್ರಶಸ್ತಿ ಪುರಸ್ಕೃತರು.

ಮಾವಿನ ಮರದ ಎಲೆಗಳೆಲ್ಲ ಮಾವಿನ ಎಲೆಗಳೆ, ಆದರೆ ಲಕ್ಷ ಲಕ್ಷ ಎಲೆಗಳಲ್ಲಿ ಯಾವ ಎಲೆಯು ಕೂಡ ಒಂದರಂತಿಲ್ಲ. ಪ್ರತಿಯೊಬ್ಬ ವ್ಯಕ್ತಿಯೂ ಕೂಡಾ ಅವರದೆ ಆದ ಕ್ಷೇತ್ರದಲ್ಲಿ ಮೆರೆದು ಸಾಧನೆ ಮಾಡಿರುತ್ತಾರೆ. ಜೀವನ ಅನ್ನುವ ಮೂರು ದಿನದ ಬಾಳುವೆಯಲ್ಲಿ ಅದೆಷ್ಟೋ ಸಾಧನೆಯ ಹೆಗ್ಗುರುತನ್ನು ಮೂಡಿಸುತ್ತ ಮನ್ನಣೆಯನ್ನು ಪಡೆಯುತ್ತಾ ದಾರಿಯ ಬಗ್ಗೆ ಯೋಚಿಸದೆ ಸತತ ಪ್ರಯತ್ನ, ನಿರಂತರ ಕಾರ್ಯಶೀಲತೆಯಿಂದ ಬದುಕುತ್ತಾರೆ. ಅಂಥವರ ಸಾಲಿಗೆ ಸೇರುವ ಒಬ್ಬ ಸಾಧಕ ಗೌತಮ್ ಶೆಟ್ಟಿ.

ಬಾಲ್ಯದಿಂದಲೇ ಕ್ರೀಡೆಯಲ್ಲಿ ಬಹಳಷ್ಟು ಆಸಕ್ತಿ ಹೊಂದಿದ್ದ ಗೌತಮ್ ಶೆಟ್ಟಿ,ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಸಂದರ್ಭದಲ್ಲಿ ಕ್ರಿಕೆಟ್,ಬ್ಯಾಡ್ಮಿಂಟನ್, ಟೇಬಲ್ ಟೆನ್ನಿಸ್, ಬಾಲ್ ಬ್ಯಾಡ್ಮಿಂಟನ್ ,ವಾಲಿಬಾಲ್,ಕಬಡ್ಡಿ,ಲಾನ್ ಟೆನ್ನಿಸ್ ಮುಂತಾದ ಕ್ರೀಡೆಗಳಲ್ಲಿ ತೊಡಗಿಸಿಕೊಂಡು ಬಹಳಷ್ಟು ಪ್ರಶಸ್ತಿಗಳನ್ನು ಜಯಿಸಿದ್ದರು.

ಬಾಹ್ಯ ಬದಲಾವಣೆಗಿಂತ ಅಂತರಂಗದ ಬದಲಾವಣೆ ಜೀವನದಲ್ಲಿ ಮುಖ್ಯ ಅನ್ನುವ ಧ್ಯೇಯಕ್ಕೆ ಬದ್ಧರಾಗಿ
80 ರ ದಶಕದಲ್ಲಿ ಹಿರಿಯರಾದ ದಿನೇಶ್ ಮುನ್ನಾ ನೇತೃತ್ವದಲ್ಲಿ ಸ್ಥಾಪನೆಯಾದ” ಟೊರ್ಪೆಡೋಸ್ ಕ್ರಿಕೆಟ್ ಕ್ಲಬ್”ನಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು.ತಾವು ಭಾಗವಹಿಸಿದ ಪ್ರಥಮ ಪಂದ್ಯಾಕೂಟದಲ್ಲೇ ಪ್ರಶಸ್ತಿ ಬಾಚಿದ ಟೊರ್ಪೆಡೋಸ್ ಸಂಸ್ಥೆ ಹಿರಿಯ ಕ್ರಿಕೆಟಿಗರ ನೇತ್ರತ್ವದಲ್ಲಿ ರಾಜ್ಯದ ಶ್ರೇಷ್ಠ ತಂಡವಾಗಿ ರಾಜ್ಯಾದ್ಯಂತ ಗುರುತಿಸಿಕೊಂಡಿತ್ತು.ಹಿರಿಯರು ತೆರೆಮರೆಗೆ ಸರಿದಂತೆ ತಂಡವನ್ನು ಮುನ್ನಡೆಸುವ ನಾಯಕನ ಜವಾಬ್ದಾರಿ ಗೌತಮ್ ಶೆಟ್ಟಿಯವರ ಪಾಲಿಗೆ ಬಂದಂದಿನಿಂದ ಹಿಂತಿರುಗಿ ನೋಡಿಯೇ ಇಲ್ಲ.

ನಾಯಕನಾಗಿ ಜವಾಬ್ದಾರಿಯುತ ಆಟವಾಡಿ, ಕರ್ನಾಟಕ ರಾಜ್ಯದ ಗಮನ ಸೆಳೆದು 100 ಕ್ಕೂ ಮಿಕ್ಕಿ ರಾಜ್ಯ, ರಾಷ್ಟ್ರಮಟ್ಟದ ಪ್ರಶಸ್ತಿಗಳನ್ನು ಜಯಿಸಿ ತನ್ನ ತಂಡವನ್ನು ರಾಜ್ಯದ ಅಗ್ರಗಣ್ಯ ಸಾಲಿಗೆ ಕೊಂಡೊಯ್ದಿದ್ದರು.90 ರ ದಶಕದಲ್ಲಿ ಹೆಚ್ಚಾಗಿ ನಡೆಯುತ್ತಿದ್ದ ಡಬಲ್ ವಿಕೆಟ್ ಪಂದ್ಯಾಟದಲ್ಲೂ ಟೆನ್ನಿಸ್ ಬಾಲ್ ನ ತೆಂಡುಲ್ಕರ್ ಹರಿಪ್ರಸನ್ನ(ಪುಟ್ಟ)ಜೊತೆಯಾಗಿ ಭಾಗವಹಿಸಿದ ಎಲ್ಲಾ ಟೂರ್ನಿಗಳಲ್ಲೂ ಪ್ರಶಸ್ತಿ ಜಯಿಸಿ,ಶ್ರೇಷ್ಠ ಆರಂಭಿಕ ಜೋಡಿ ಗೌರವಕ್ಕೂ ಪಾತ್ರರಾಗಿದ್ದರು.

ಆತ್ಮ ವಿಶ್ವಾಸ, ಜೀವನ ಆದರ್ಶ, ನಿರ್ದಿಷ್ಟ ಗುರಿ ಇವೆಲ್ಲವನ್ನೂ ಜೀವನದಲ್ಲಿ ಅಳವಡಿಸಿಕೊಂಡು ಇಂದು ಹುಟ್ಟು ಹಬ್ಬದ ಸಂಭ್ರಮ ದಲ್ಲಿರುವ ಗೌತಮ್ ಶೆಟ್ಟಿ ಇವರಿಗೆ,

ಗೌ ರವದ ಬದುಕಿದು ನಿಮದಾಗಲೆಂದು
ತ ರತಮವ ಮರೆತಿರುವ ಜೀವಿತವು ನಿಮದೆಂದು
ಮ ಕ್ಕಳಂದದಿ ಕಲೆತು ಬೆಳಗಿದಿರಿ ನೀವಿಂದು
ಪ್ರ ತಿಭಾಳ ನಂದನವನದಲ್ಲಿ ನಿಂದು
ಪ್ರ ಶಸ್ತಿ ಯು ಪುತ್ರಿಯ ಹಾಗೆ ಬಂದು
ಪ್ರ ಥಮ ಕಿರಣದ ಹಾಗೆ ಬಾಳು ಪ್ರ ವಹಿಸಲಿ ಎಂದೆಂದೂ….

ಅಭಿವಾದನಗಳೊಂದಿಗೆ
ಕೋಟ ರಾಮಕೃಷ್ಣ ಆಚಾರ್ಯ
ಸಂಪಾದಕರು: www.sportskannada.com

Categories
Action Replay ಕ್ರಿಕೆಟ್ ಸಂಪಾದಕರ ಮಾತು

80ರ ದಶಕದ ಟೆನ್ನಿಸ್ ಕ್ರಿಕೆಟ್ ನ ಕೌತುಕದ ಪಂದ್ಯ ಟೆನ್ನಿಸ್ ಕ್ರಿಕೆಟ್ ನಲ್ಲಿ ಪ್ರಭುತ್ವ ಸಾಧಿಸಿದ್ದ, ದಕ್ಷಿಣ ಕನ್ನಡ

80ರ ದಶಕದ ಟೆನ್ನಿಸ್ ಕ್ರಿಕೆಟ್ ನ ಕೌತುಕದ ಪಂದ್ಯ. ಅದಾಗಲೇ ಟೆನ್ನಿಸ್ ಕ್ರಿಕೆಟ್ ನಲ್ಲಿ ಪ್ರಭುತ್ವ ಸಾಧಿಸಿದ್ದ, ದಕ್ಷಿಣ ಕನ್ನಡ ಜಿಲ್ಲೆಯ ಚಾಂಪಿಯನ್ ತಂಡ, ಶಿಸ್ತಿನ‌ ಸಿಪಾಯಿಗಳು, ಟೆನ್ನಿಸ್ ಕ್ರಿಕೆಟ್ ನ ಹುಲಿಗಳಾದ ಪ್ಯಾರಡೈಸ್ ಬನ್ನಂಜೆ ವಿರುದ್ಧವಾಗಿ 15 ವರ್ಷಗಳ ಹಿಂದಷ್ಟೇ ಸ್ಥಾಪನೆಯಾಗಿದ್ದ ಕುಂದಾಪುರದ ಸಂಯೋಜಿತ ತಂಡ ಚಕ್ರವರ್ತಿ ಕುಂದಾಪುರದ ನಡುವಿನ ಬೈಂದೂರಿನ ಗಾಂಧಿಮೈದಾನದಲ್ಲಿ ವಿಕ್ರಂ ಸ್ಪೋರ್ಟ್ಸ್ ಕ್ಲಬ್ ಆಯೋಜಿಸಿದ್ದ ಡಾ|ಪ್ರದೀಪ್ ಕುಮಾರ್ ಶೆಟ್ಟಿ ಸ್ಮರಣಾರ್ಥ ನಡೆದ ಪಂದ್ಯಾಕೂಟದ ಫೈನಲ್ ಪಂದ್ಯಾಟವಾಗಿತ್ತು.

 

20 ಓವರ್ ಗಳ ಎರಡು ಇನ್ನಿಂಗ್ಸ್ ನಲ್ಲಿ ಜರುಗಿದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ್ದ ಪ್ಯಾರಡೈಸ್ ಬನ್ನಂಜೆ ತಂಡ ಪ್ರದೀಪ್ ವಾಜ್,ದಿ|ಪ್ರತಾಪ್ ಚಂದ್ರ ಹೆಗ್ಡೆ,ಗಣೇಶ್ ನಾವುಡರ ನಿಖರ ದಾಳಿಗೆ 37 ರನ್ ಗಳಿಗೆ ಆಲೌಟ್ ಆಗಿತ್ತು. ಆದರೆ ನಂತರ ಬ್ಯಾಟಿಂಗ್ ಮಾಡಿದ್ದ ಚಕ್ರವರ್ತಿ ತಂಡ ಪ್ಯಾರಡೈಸ್ ನ ದಂತಕಥೆ ಶ್ರೀಧರ್ ಶೆಟ್ಟಿ ಹಾಗೂ ಅಂದಿನ ದಿನಗಳಲ್ಲಿ ಭರವಸೆ ಮೂಡಿಸಿದ್ದ ಬೌಲಿಂಗ್ ಮಿಂಚು ಕೋಟೇಶ್ವರ ದಿ|ಸರ್ದಾರ್ ಬಾಬ್ ಜಾನ್ ದಾಳಿ ಎದುರಿಸಲಾಗದೆ 31 ರನ್ ಗಳಿಗೆ ಆಲೌಟ್ ಆಗಿತ್ತು.ಪ್ಯಾರಡೈಸ್ 6 ರನ್ ಗಳ ಮೊದಲ ಇನ್ನಿಂಗ್ಸ್ ಲೀಡ್ ಗಳಿಸಿತ್ತು.

ದ್ವಿತೀಯ ಇನ್ನಿಂಗ್ಸ್ ನಲ್ಲಿ ಮತ್ತೆ ಅತ್ಯುತ್ತಮ ಬೌಲಿಂಗ್ ದಾಳಿ ಸಂಘಟಿಸಿದ ಚಕ್ರವರ್ತಿಗಳ ಅಂದಿನ ದಿನಗಳ ಬೌಲಿಂಗ್ ಬ್ರಹ್ಮಾಸ್ತ್ರ ಸದಾನಂದ ಬನ್ನಾಡಿ,ಗಣೇಶ್ ನಾವುಡ,ಯುವ ಎಸೆತಗಾರ ಮೊಹಮದ್ ಶಫಿ ದಾಳಿ ಎದುರಿಸಲಾಗದೆ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 43 ರನ್ ಗಳಷ್ಟೇ ಗಳಿಸಲು ಶಕ್ತವಾಗಿತ್ತು.

ವಿಜಯ ಗಳಿಸಲು 50 ರನ್ ಗಳ ಕಠಿಣ ಸವಾಲನ್ನು ಚಕ್ರವರ್ತಿ ತಂಡ ಮನಮೋಹಕ ಹೊಡೆತಗಳ ಆಟಗಾರ ಪ್ರಕಾಶ್ ಶಿರಸಿಕರ್ ರ ಆಕರ್ಷಕ ಅಜೇಯ 25 ರನ್ ಗಳ ನೆರವಿನಿಂದ 4 ವಿಕೆಟ್ ಅಂತರದ ಜಯಗಳಿಸಿತ್ತು.

ಅಂದು ಚಕ್ರವರ್ತಿ ತಂಡದ ಬೆನ್ನೆಲುಬಾಗಿದ್ದ ಸ್ಪುರದ್ರೂಪಿ,ಪ್ರತಿಭಾವಂತ ಆಟಗಾರ, ಶ್ರೇಷ್ಠ ಕ್ಷೇತ್ರರಕ್ಷಕ ದಿ| ಬಿ.ಪ್ರತಾಪ್ ಚಂದ್ರ ಹೆಗ್ಡೆ 7 ಕ್ಯಾಚ್ ಹಿಡಿದು ಪಂದ್ಯಾಟದ ಮೇಲೆ ಹಿಡಿತ ಸಾಧಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಪಂದ್ಯಾಕೂಟದ ಶ್ರೇಷ್ಠ ದಾಂಡಿಗ ಪ್ರಶಸ್ತಿಯನ್ನು ಅಂದಿನ ದಿನಗಳ ನಾಯಕ ಶಿವಾನಂದ ಗೌಡ, ಬೌಲಿಂಗ್ ಮಿಂಚು ಪ್ರದೀಪ್ ವಾಜ್ ಶ್ರೇಷ್ಠ ಬೌಲರ್ ಹಾಗೂ ಪ್ರಕಾಶ್ ಸಿರ್ಸಿಕರ್ ಫೈನಲ್ ಪಂದ್ಯದ ಪಂದ್ಯಶ್ರೇಷ್ಟ ಪ್ರಶಸ್ತಿ ಪಡೆದರೆ,ಬೌಲಿಂಗ್,ಬ್ಯಾಟಿಂಗ್ ವಿಭಾಗದಲ್ಲಿ ಶ್ರೇಷ್ಠ ನಿರ್ವಹಣೆ ತೋರಿದ್ದ ಅಂದಿನ ದಿನಗಳ ಶ್ರೇಷ್ಠ ಆಲ್ ರೌಂಡರ್ ಪ್ಯಾರಡೈಸ್ ಬನ್ನಂಜೆಯ ಸರ್ದಾರ್ ಬಾಬ್ ಜಾನ್ ಕೋಟೇಶ್ವರ ಪಡೆದುಕೊಂಡಿದ್ದರು.

ಶ್ರೇಷ್ಠ ಪ್ರದರ್ಶನದ ಮೂಲಕ ಚಕ್ರವರ್ತಿಗಳಿಗೆ ರಾಜ್ಯ,ರಾಷ್ಟ್ರೀಯ ಮಟ್ಟದ ಮನ್ನಣೆ ಕೊಡಿಸಿದ್ದಮೇರು ಕಪ್ತಾನ ಶ್ರೀಪಾದ ಉಪಾಧ್ಯಾಯ, ಟೆನ್ನಿಸ್ ಕ್ರಿಕೆಟ್ ಸಂಜಯ್ ಮಂಜ್ರೇಕರ್ ಸತೀಶ್ ಕೋಟ್ಯಾನ್, ಪ್ರದೀಪ್ ವಾಜ್, ದಿನೇಶ್ ಗಾಣಿಗ ಬೈಂದೂರು, ಮನೋಜ್ ನಾಯರ್, ಕೆ.ಪಿ.ಸತೀಶ್ ರಿಗೆ ಈ ಪಂದ್ಯ ಪ್ರಾರಂಭದ ದಿನಗಳು.

ಅಂದಿನ ದಿನಗಳ ಬೈಂದೂರಿನ ಪರಿಸರದ ಶಿಸ್ತು ಹಾಗೂ ಸಂಯೋಜಿತ ತಂಡ ವಿಕ್ರಂ ತಂಡ ಹಲವಾರು ಪಂದ್ಯಾಕೂಟಗಳನ್ನು ಆಯೋಜಿಸಿದ್ದ ಬೈಂದೂರಿನ ಗಾಂಧಿಮೈದಾನದ ವಿಶಾಲ ಅಂಗಣ ಬೆಂಗಳೂರು, ಮಂಗಳೂರು, ಉಡುಪಿ, ಕುಂದಾಪುರದ ಹಲವು ಯುವ ಕ್ರಿಕೆಟಿಗರ ಭವಿಷ್ಯ ರೂಪಿಸಿತ್ತು‌. ಅಂತರಾಷ್ಟ್ರೀಯ ಕ್ರಿಕೆಟಿಗರಿಗೆ ಇಂಗ್ಲೆಂಡ್ ನ ಲಾರ್ಡ್ಸ್ ಕ್ರಿಕೆಟ್ ಕಾಶಿಯಾದರೆ, ಟೆನ್ನಿಸ್ ಕ್ರಿಕೆಟಿಗರ ಪಾಲಿಗೆ ಬೈಂದೂರಿನ ಗಾಂಧಿಮೈದಾನ ಕ್ರಿಕೆಟ್ ಸ್ವರ್ಗವಾಗಿತ್ತು.

ಈ ಅಂಗಣದಲ್ಲಿ ಹಿರಿಯ ತಂಡ ಜೈ ಕರ್ನಾಟಕ ಬೆಂಗಳೂರು,ಪಡುಬಿದ್ರಿ,ಸನ್ನಿ ಉಡುಪಿ,ವೀರಕೇಸರಿ ಇನ್ನಿತರ ತಂಡಗಳು ಹಲವು ದಾಖಲೆಗಳನ್ನು ಬರೆದಿದೆ.ಇಂದಿಗೆ 30 ವರ್ಷಗಳು ಸರಿದರೂ ರಾಜ್ಯದ ಹಿರಿಯ ಟೆನ್ನಿಸ್ ಕ್ರಿಕೆಟಿಗರು ನೆನಪುಗಳನ್ನು ಸದಾ ಸ್ಮರಿಸುತ್ತಾರೆ. ಆ ಎಲ್ಲಾ ತಂಡಗಳ,ಎಲ್ಲಾ ಗತಕಾಲದ ನೆನಪುಗಳನ್ನು ಮುಂದಿನ ದಿನಗಳಲ್ಲಿ ಪ್ರತಿ ರವಿವಾರ ನಿಮ್ಮೆಲ್ಲರ ಪ್ರೀತಿಯ “ಸ್ಪೋರ್ಟ್ಸ್ ಕನ್ನಡ” ವೆಬ್ಸೈಟ್ ನಲ್ಲಿ ಬರೆಯುವೆ.

ಆರ್.ಕೆ.ಆಚಾರ್ಯ ಕೋಟ

Categories
Action Replay ಕ್ರಿಕೆಟ್ ಸಂಪಾದಕರ ಮಾತು

“ಮಾಸ್ಟರ್ಸ್ ಇಂಡೋರ್ ವರ್ಲ್ಡ್ ಕಪ್,ಭಾರತ ತಂಡದಲ್ಲಿ ಜೈ ಕರ್ನಾಟಕ ಬೆಂಗಳೂರಿನ ಹಿರಿಯ ವೇಗಿ ನಾಗೇಶ್ ಸಿಂಗ್”

ಅಕ್ಟೋಬರ್ 19 ರಿಂದ 26 ರವರೆಗೆ ಸೌತ್ ಆಫ್ರಿಕಾದ ಕೇಪ್ ಟೌನ್ ನಲ್ಲಿ ನಡೆಯಲಿರುವ ಮಾಸ್ಟರ್ಸ್ ಇಂಡೋರ್ ಕ್ರಿಕೆಟ್ ವರ್ಲ್ಡ್ ಕಪ್ ಪಂದ್ಯಾಕೂಟಕ್ಕಾಗಿ ಭಾರತ ತಂಡಕ್ಕೆ ಜೈ ಕರ್ನಾಟಕದ ಹಿರಿಯ ವೇಗಿ ನಾಗೇಶ್ ಸಿಂಗ್ ಆಯ್ಕೆಯಾಗಿರುತ್ತಾರೆ. ನಾಗೇಶ್ ಸಿಂಗ್ ರವರ ಕ್ರಿಕೆಟ್ ಜೀವನ ಪ್ರಾರಂಭವಾಗಿದ್ದು ಕರ್ನಾಟಕ ರಾಜ್ಯ ಟೆನ್ನಿಸ್ ಕ್ರಿಕೆಟ್ ನ ಇತಿಹಾಸದ ಪುಟಗಳಲ್ಲಿ ಸುವರ್ಣ ಇತಿಹಾಸವನ್ನು ಬರೆದ ತಂಡ “ಜೈ ಕರ್ನಾಟಕ” ಬೆಂಗಳೂರಿನಿಂದ.

ಭಾರತೀಯ ಅಂತರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದ್ದ, ಪ್ರಸ್ತುತ ಗೋವಾ ರಣಜಿ ಕೋಚ್ ಆಗಿರುವ ಕರ್ನಾಟಕದ ದೈತ್ಯ ವೇಗಿ ದೊಡ್ಡ ಗಣೇಶ್,ಡೇವಿಡ್ ಜಾನ್ಸನ್,ಎಸ್.ಅರವಿಂದ್ ಹಾಗೂ ಜಸ್ಟ್ ಕ್ರಿಕೆಟ್ ಅಕಾಡೆಮಿ ಬ್ಯಾಟಿಂಗ್ ಕೋಚ್,ವೀಲ್ &ಎಕ್ಸೈಲ್ ನ ಶ್ರೇಷ್ಠ ಕ್ರಿಕೆಟಿಗ ಮುಕೇಶ್ ಇವರೆಲ್ಲರ ಮಾತೃ ಸಂಸ್ಥೆ ಜೈ ಕರ್ನಾಟಕ ತಂಡ.ದಶಕಗಳ ಇತಿಹಾಸದ ಬಳಿಕ ಮತ್ತೆ ಅಂತರಾಷ್ಟ್ರೀಯ ತಂಡವನ್ನು ಪ್ರತಿನಿಧಿಸುವ ಜೈ ಕರ್ನಾಟಕದ 4 ನೇ ಆಟಗಾರರೆಂಬ ಕೀರ್ತಿಗೆ ನಾಗೇಶ್ ಸಿಂಗ್ ಪಾತ್ರರಾಗಿದ್ದಾರೆ.

ಪ್ರಾರಂಭದ ದಿನಗಳಲ್ಲಿ(1988-96) ಇಂದಿರಾ ನಗರದ “ಕ್ಲಾಸಿಕ್ ಕ್ರಿಕೆಟರ್ಸ್” ತಂಡವನ್ನು ಪ್ರತಿನಿಧಿಸುತ್ತಿದ್ದರು. ಲೆದರ್ ಬಾಲ್ ಪ್ರಾಕ್ಟೀಸ್ ಗಾಗಿ “ಹೆಚ್.ಎ.ಎಲ್”ಅಂಗಣದಲ್ಲಿ ನಾಗೇಶ್ ಸಿಂಗ್ ರವರ ಪ್ರತಿಭೆಯನ್ನು ಗುರುತಿಸಿದ ಟೆನ್ನಿಸ್ ಬಾಲ್ ನ ದಂತಕಥೆ “H.A.L”ನ ಸೀನಿಯರ್ ಮೆನೇಜರ್ ಮನೋಹರ್ ರವರು 1996 ರಿಂದ ಜೈ ಕರ್ನಾಟಕ ತಂಡವನ್ನು ಪ್ರತಿನಿಧಿಸುವ ಸುವರ್ಣಾವಕಾಶವನ್ನು ನಾಗೇಶ್ ಸಿಂಗ್ ರವರಿಗೆ ಕಲ್ಪಿಸುತ್ತಾರೆ.

ದಶಕಗಳ ಸಾರಥಿ ಸೆಂಥಿಲ್ ಅಶ್ವಥ್ ಕುಮಾರ್ ಸಾರಥ್ಯದ ” ಜೈ ಕರ್ನಾಟಕ” ಶಿಸ್ತು, ಸಂಘಟಿತ ಹೋರಾಟ ಹಾಗೂ ಕಠಿಣ ಅಭ್ಯಾಸಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದ್ದ ತಂಡ. ಜೈ ಕರ್ನಾಟಕ ತಂಡದಲ್ಲಿ ಒಂದೇ ಕುಟುಂಬದ ಅವಳಿ ಸಹೋದರರ 5 ಜೋಡಿಗಳಾದ ಜೈ ಕರ್ನಾಟಕದ ಬ್ರಹ್ಮಾಸ್ತ್ರಗಳಾದ ಕುಮ್ಮಿ-ರಾಜೇಶ್, ಕರ್ನಾಟಕದ ಕಲಾತ್ಮಕ ಆಟಗಾರ ರಾಜೇಶ್-ಮಂಜು, ಮನೋಹರ್-ಬಾಬು, ಡೇವಿಡ್ ಜಾನ್ಸನ್-ಡಾನ್ ಜಾನ್ಸನ್, ಜಾನಿ-ಮೌನ್ಸಿ ಯ ಬಳಿಕ ಒಂದೇ ಮನೆಯ 4 ಸಹೋದರರಾದ ನಾಗೇಶ್ ಸಿಂಗ್,ಸ್ಪೋಟಕ ಆರಂಭಿಕ ಭಗವಾನ್ ಸಿಂಗ್,ಅಂಬರೀಶ್ ಸಿಂಗ್ ಹಾಗೂ ಅನೀಷ್ ಸಿಂಗ್ ಪ್ರತಿನಿಧಿಸಿರುವುದು‌ ಕ್ರಿಕೆಟ್ ಇತಿಹಾಸದಲ್ಲಿಯೇ ಅತ್ಯಪರೂಪದ ದಾಖಲೆ.

ಅಂದಿನ ದಿನಗಳಲ್ಲಿ ಚೆಂಡಿನ ತೂಕವನ್ನಷ್ಟೇ ತೂಗಿ ಎದುರಾಳಿ ದಾಂಡಿಗನ ಕ್ರೀಸಿನ‌‌ ಆಯುಷ್ಯ ಅಳೆಯುತ್ತಿದ್ದ ಮೆರಿನ್, ದಾಂಡಿಗನ ಎದೆಯನ್ನು ಸೀಳಿದಂತೆ ಭಾಸವಾಗುವಂತೆ ವೇಗ ಕಾಯ್ದುಕೊಳ್ಳುತ್ತಿದ್ದ ಮಂಜುನಾಥ್ (ಮಂಜ),ದಾಂಡು,ಚೆಂಡು ಹಾಗೂ ಕ್ಷೇತ್ರರಕ್ಷಣೆಯಲ್ಲಿ ಪರಿಪೂರ್ಣತೆ ಕಾಯ್ದುಕೊಳ್ಳುತ್ತಿದ್ದ ಮೇರು ಕಪ್ತಾನ ಮನೋಹರ್ ಅವರ ಜೊತೆ ಅದ್ಭುತ ಬೌಲಿಂಗ್ ಪ್ರದರ್ಶನ ತೋರುತ್ತಾ, ಕರಾವಳಿ ಸೇರಿದಂತೆ ಹಲವಾರು ಪ್ರತಿಷ್ಟಿತ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡು ರಾಜ್ಯಾದ್ಯಂತ ಜೈ ಕರ್ನಾಟಕ ತಂಡ,ಮತ್ತು ಆಟಗಾರರು ಕ್ರಿಕೆಟ್ ಪ್ರೇಮಿಗಳ ಮನ ಗೆದ್ದಿದ್ದಾರೆ.

ಬೆಂಗಳೂರಿನ‌ ಶ್ರೇಷ್ಠ ತಂಡ ಶಾಜ್ ತಂಡವನ್ನು ಪ್ರತಿನಿಧಿಸಿ, ಮುಂಬಯಿಯಲ್ಲಿ ನಡೆದ ” ರಾಜ್ ಕಪೂರ್ ಮೆಮೊರಿಯಲ್ ಟ್ರೋಫಿ”ಯಲ್ಲಿ ಅದ್ಭುತ ಪ್ರದರ್ಶನ ತೋರಿ ಕರ್ನಾಟಕದ ಮೆಚ್ಚುಗೆಗೆ ಪಾತ್ರರಾಗಿದ್ದರು.

ಕ್ರಮೇಣ ಬೌಲಿಂಗ್ ಜೊತೆ ಬ್ಯಾಟಿಂಗಲ್ಲೂ ಮಿಂಚತೊಡಗಿದ ಕುಳ್ಳನೆಯ ವಾಮನಮೂರ್ತಿ, ಅಂದಿನ ದಿನಗಳ ದಾಖಲೆಯ 38 ಸರಣಿ ಶ್ರೇಷ್ಟ ಪ್ರಶಸ್ತಿ ವಿಜೇತ ಕರ್ನಾಟಕದ ಕಲಾತ್ಮಕ ಆಟಗಾರ ರಾಜೇಶ್ ರವರ ಜೊತೆ ಕೂಡ ಇನ್ನಿಂಗ್ಸ್ ಆರಂಭಿಸಿರುವರು.2009 ರ ನಂತರ ಲೆದರ್ ಬಾಲ್ ನ ಪಂದ್ಯಗಳಲ್ಲಿ ಭಾಗವಹಿಸುತ್ತಿದ್ದ ನಾಗೇಶ್ ರವರು ಮತ್ತೆ 2016 ರಲ್ಲಿ ತಂಡದಲ್ಲಿ ಮತ್ತೆ ಸ್ಥಾನವನ್ನು ಪಡೆದುಕೊಳ್ಳುತ್ತಾರೆ. ರಾಜ್ಯಾದ್ಯಂತ ಜನಪ್ರಿಯತೆಗೆ ಕಾರಣೀಭೂತವಾದ ಜೈ ಕರ್ನಾಟಕ ತಂಡದ ಅಭಿಮಾನಕ್ಕಾಗಿ ಬಲಗೈ ತೋಳಿನಲ್ಲಿ J.K ಬರಹದ ಟ್ಯಾಟೂ ಕ್ರಿಕೆಟ್ ಪ್ರೇಮಿಗಳ ಹುಚ್ಚೆಬ್ಬಿಸುತ್ತದೆ.

ಪ್ರಸ್ತುತ ಯುವ ಆಟಗಾರರಿಗಾಗಿ ತಂಡದಲ್ಲಿ ಜಾಗ ಬಿಟ್ಟು ಕೊಟ್ಟಿದ್ದರೂ,ರಾಜ್ಯದ ಪ್ರತಿಷ್ಟಿತ ತಂಡಗಳು 50 ರ ಹರೆಯದ ನಾಗೇಶ್ ರವರಿಗೆ ಬುಲಾವ್ ನೀಡುತ್ತಿರುವುದು ಅದ್ಭುತ ಪ್ರದರ್ಶನದ ಕಾರಣ, ಅಧಮ್ಯ ಉತ್ಸಾಹಿ,ಜೀವನದುದ್ದಕ್ಕೂ ಕ್ರಿಕೆಟ್ ಆರಾಧಿಸಿದ ಜೀವ, ಎಲ್ಲಾ ತಂಡಗಳ ಜೊತೆಗೂ ಅತ್ಯುತ್ತಮ ಬಾಂಧವ್ಯ ಹೊಂದಿರುವ ಇವರು ಇಂದಿಗೂ ಪ್ರತಿಷ್ಟಿತ ಪಂದ್ಯಾಟಗಳಲ್ಲಿ ಅಂಪಾಯರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ನಡೆದ “ಹೆಸರಘಟ್ಟ ಪ್ರಿಮಿಯರ್ ಲೀಗ್” ಪಂದ್ಯಾಕೂಟದಲ್ಲಿ ಅನುಜ ಭಗವಾನ್ ಸಿಂಗ್ ಜೊತೆಗೂಡಿ ದಿನವೊಂದಕ್ಕೆ ಸತತ 16 ಗಂಟೆಗಳ ಕಾಲ, ಅಂಪಾಯರಿಂಗ್ ನಡೆಸಿ ಕ್ರಿಕೆಟ್ ಇತಿಹಾಸದಲ್ಲಿಯೇ ದಾಖಲೆಯ ಅಂಪಾಯರಿಂಗ್ ನಡೆಸಿರುತ್ತಾರೆ.

ವಯಸ್ಸು ಅರ್ಧಶತಕದ ಗಡಿ ದಾಟಿದರೂ ಕಠಿಣ ವ್ಯಾಯಾಮದಿಂದ ದೈಹಿಕ ಕ್ಷಮತೆ ಕಾಪಾಡಿಕೊಂಡಿದ್ದು, ಸತತ ಅಭ್ಯಾಸ,ಪರಿಶ್ರಮದ ಮೂಲಕ ಕಾರ್ಪೊರೇಟ್ ಲೀಗ್ ಪಂದ್ಯಗಳಲ್ಲಿ ಜೆ.ಬಿ‌.ಎನ್ ಸಿ.ಸಿ ಹಾಗೂ ವಿ.ಎಸ್.ಎಲ್ ಕ್ರಿಕೆಟ್ ಕ್ಲಬ್ ಪರವಾಗಿ ಆಡಿ ಅತ್ಯುತ್ತಮ ನಿರ್ವಹಣೆ ತೋರಿದ,ನಾಗೇಶ್ ಸಿಂಗ್ ರವರ ಸಾಧನೆಗಳನ್ನು ಗುರುತಿಸಿ ಭಾರತ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.ಸೌತ್ ಆಫ್ರಿಕಾದಲ್ಲಿ ನಡೆಯುತ್ತಿರುವ ವಿಶ್ವಕಪ್ ಪಂದ್ಯಾಕೂಟದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಲಿರುವ ನಾಗೇಶ್ ಸಿಂಗ್ ರವರಿಗೆ ವಿ.ಎಸ್.ಎಲ್ ಕ್ರಿಕೆಟ್ ಕ್ಲಬ್ ನ ಮಾಲೀಕ ಶ್ರೀ ವಿಶ್ವಾಸ್ ಲಾಡ್ ಸಂಪೂರ್ಣ ಸಹಕಾರ ನೀಡಿ ಪ್ರೋತ್ಸಾಹಿಸುತ್ತಿದ್ದಾರೆ.

ಆರ್.ಕೆ.ಆಚಾರ್ಯ ಕೋಟ

Categories
ಸಂಪಾದಕರ ಮಾತು

ಸಂಪಾದಕರ ಮಾತು

ವಿಶ್ವದ ವಿವಿಧ ಕ್ರೀಡಾಸುದ್ದಿಗಳು ಕ್ಷಿಪ್ರ ಗತಿಯಲ್ಲಿ ಕ್ರೀಡಾಭಿಮಾನಿಗಳನ್ನು ತಲುಪಿಸುವುದು,70 ರ ದಶಕದಿಂದ ಹಿಡಿದು ಪ್ರಸ್ತುತ ಕ್ರೀಡಾಪಟುಗಳ,ಪರಿಚಯ ಸಾಧನೆಗಳ ಬಗ್ಗೆ ಬೆಳಕು ಚೆಲ್ಲುವಿಕೆ.

ತೆರೆಮರೆಯಲ್ಲಿರುವ ಕ್ರೀಡಾಪಟುಗಳ ಪ್ರತಿಭೆ ಅನಾವರಣ,ಜೊತೆಯಾಗಿ ಟೆನ್ನಿಸ್ ಬಾಲ್ ಕ್ರಿಕೆಟ್ ನಡೆದು ಬಂದ ದಾರಿ ಹಾಗೂ ದಿಗ್ಗಜ ಆಟಗಾರರ ಸಂಪೂರ್ಣ ಮಾಹಿತಿ ಜೊತೆಯಾಗಿ ತೆರೆಮರೆಯ ಪ್ರತಿಭೆಗಳನ್ನು ಮುಖ್ಯ ವೇದಿಕೆ ತರುವ ನನ್ನ ಕನಸಿನ ಕೂಸು “ಸ್ಪೋರ್ಟ್ಸ್ ಕನ್ನಡ”…

ಕೋಟ ರಾಮಕೃಷ್ಣ ಆಚಾರ್ಯ
(ಆರ್.ಕೆ)