Categories
ಕ್ರಿಕೆಟ್

LCL ಹಿರಿಯರ ಕ್ರಿಕೆಟ್ ಹಬ್ಬ- ಗೆಲುವಿನ ನಗೆ ಬೀರಿದ ರೆಡ್ ಹಾಕ್ಸ್ ಉಳ್ಳಾಲ

ಹಿರಿಯ ಕ್ರಿಕೆಟ್ ಆಟಗಾರರಿಗೆ ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕುವ ನಿಟ್ಟಿನಲ್ಲಿ ಮತ್ತು ಪರಸ್ಪರ ಭಾಂಧವ್ಯ, ಸೌಹಾರ್ದತೆ ಬೆಳೆಸುವ ಉದ್ದೇಶದಿಂದ ಸುರತ್ಕಲ್ಲಿನಲ್ಲಿ 2 ದಿನಗಳ  ಕಾಲ ನಡೆದ ಲೆಜೆಂಡ್ಸ್ ಕ್ರಿಕೆಟ್ ಲೀಗ್ ಸೀಸನ್ 2  ಭರ್ಜರಿ ಯಶಸ್ಸು ಕಂಡಿದೆ.
12 ತಂಡಗಳು ಭಾಗವಹಿಸಿದ ಈ ಟೂರ್ನಮೆಂಟ್ ನಲ್ಲಿ ರೆಡ್ ಹಾಕ್ಸ್ ಉಳ್ಳಾಲ ತಂಡವು ಮಹಾಲಕ್ಷ್ಮಿ ವಾರಿಯರ್ಸ್ ಸೂರಿಂಜೆ ತಂಡವನ್ನು ಸೋಲಿಸುವ ಮೂಲಕ ಚಾಂಪಿಯನ್ ಪ್ರಶಸ್ತಿಯನ್ನು ಗೆದ್ದಿತು. ಸುರತ್ಕಲ್ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಕ್ಲಬ್( ರಿ ) ಸುರತ್ಕಲ್ ಈ ಕ್ರಿಕೆಟ್ ಪಂದ್ಯಾವಳಿಯನ್ನು ಸತತ ಎರಡನೇಯ ಬಾರಿಗೆ 40 ವರ್ಷ ಮೇಲ್ಪಟ್ಟ ಹಿರಿಯ ಆಟಗಾರರಿಗಾಗಿ  ಆಯೋಜಿಸಿತ್ತು. ವಿಜೇತ ತಂಡಕ್ಕೆ 1.01,000 ರೂ. + LCL ಕಪ್ ಮತ್ತು ರನ್ನರ್ ಅಪ್ ತಂಡಕ್ಕೆ 51,005 ರೂ.+ LCL ಕಪ್ ಗಳನ್ನು ನೀಡಿ ಗೌರವಿಸಲಾಯಿತು.
ಸುರತ್ಕಲ್ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಕ್ಲಬ್( ರಿ ) ಸುರತ್ಕಲ್ ಇವರ ಆಶ್ರಯದಲ್ಲಿ “ಎಲ್ ಸಿ ಎಲ್ ಟ್ರೋಫಿ -2023” ಮೇ 27, 28 ರಂದು ಸುರತ್ಕಲ್ ನ  ಗೋವಿಂದದಾಸ್ ಕಾಲೇಜು ಕ್ರಿಕೆಟ್  ಮೈದಾನದಲ್ಲಿ ನಡೆಯಿತು.ಉತ್ತಮ ರೀತಿಯಲ್ಲಿ ಸಂಘಟಿಸಲ್ಪಟ್ಟ ಈ ಪಂದ್ಯಾಕೂಟವು  ದಕ್ಷಿಣ ಕನ್ನಡದಲ್ಲಿ ನೆಲೆಸಿರುವ ಹಿರಿಯ ಕ್ರಿಕೆಟ್ ಪ್ರೇಮಿಗಳನ್ನು ಒಗ್ಗೂಡಿಸುವ ಕಾರ್ಯದಲ್ಲಿ ಯಶಸ್ವಿಯಾಯಿತು.
ಪಂದ್ಯಾವಳಿಯನ್ನು ಸಂಯೋಜಕರಾದ ಮಹಾಬಲ ಪೂಜಾರಿ ಕಡಂಬೋಡಿ , ಸಂಸ್ಥೆಯ ಮಹಾಪೋಷಕರು,  ಟೂರ್ನಮೆಂಟ್ ನ ಮಾರ್ಗದರ್ಶಕರಾದ ಸಹಾಯಕ ಪೊಲೀಸ್ ಆಯುಕ್ತರು ಮಹೇಶ್ ಎಸ ಕುಮಾರ್,  ಕೋರ್ ಕಮಿಟಿ ಸದಸ್ಯರುಗಳಾದ ಸಂದೀಪ್  ಕಡಂಬೋಡಿ, ಅನಂತ್ ರಾಜ್ ಶೆಟ್ಟಿಗಾರ್, ಪದ್ಮನಾಭ್ ಕರ್ಕೇರ, ದಿನೇಶ ಆಚಾರ್ಯ ಕುಳಾಯಿ, ಸುಧಾಕರ ತಡಂಬೈಲ್, ಮುರಳಿ BASF,  ಕೇಶವ, ಅಶ್ವಥ್, ದಯಾನಂದ, ವರುಣ್ ಶೆಟ್ಟಿಗಾರ್, ಹರೀಶ್ ಶೆಟ್ಟಿಗಾರ್, ಕಿರಣ್ ಆಚಾರ್ಯ, ನಾಗರಾಜ ಕಡಂಬೋಡಿ, ಗಿರೀಶ್ ಟಿ ಕಡಂಬೋಡಿ ಹಾಗೂ ಕ್ಲಬ್ ನ ಇನ್ನಿತರ ಸದಸ್ಯರುಗಳು ಸೇರಿ ಯಶಸ್ವಿಯಾಗಿ ಆಯೋಜಿಸಿದರು. ಪಂದ್ಯಾವಳಿಯ ಉತ್ತಮ ಆಯೋಜನೆ, ಸಮಯಪಾಲನೆ ಕುರಿತು ಎಲ್ಲಾ ತಂಡದ ಆಟಗಾರರು ಮೆಚ್ಚುಗೆ ವ್ಯಕ್ತಪಡಿಸಿದರು. ಮುಂದಿನ ವರುಷ ರಾಜ್ಯ ಮಟ್ಟದ ಹಿರಿಯರ  ಕ್ರಿಕೆಟ್ ಟೂರ್ನಮೆಂಟ್ ನಡೆಸುವ ಇರಾದೆಯೂ ಕೂಡಾ ಇದೆ ಎಂದು ಅಧ್ಯಕ್ಷರಾದ ಮಹಾಬಲ ಪೂಜಾರಿ ಕಡಂಬೋಡಿಯವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ತಿಳಿಸಿದರು.
 ಸುರತ್ಕಲ್ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಕ್ಲಬ್( ರಿ ) ಸುರತ್ಕಲ್ ನ  ಉಸ್ತುವಾರಿಕೆಯಲ್ಲಿ ಅದ್ಭುತವಾಗಿ ಮೂಡಿ ಬಂದ ಟೂರ್ನಮೆಂಟ್ ನ ಉತ್ಸಾಹ ಭರಿತ ಕ್ಷಣಗಳನ್ನು ಬೆದ್ರಾ ಮೀಡಿಯಾ  ಸೆರೆ ಹಿಡಿದು ನೇರ ಪ್ರಸಾರ ಗೊಳಿಸಿತು. ಶಿವನಾರಾಯಣ ಐತಾಳ್ ಕೋಟ, ಸೈಯದ್ ಗುರುಕಂಬಳ, ಸುರೇಶ್ ಭಟ್ ಮೂಲ್ಕಿ ಮತ್ತು ಪ್ರವೀಣ್ ಪಾವಂಜೆ ಇವರುಗಳು ಕಾಮೆಂಟ್ರಿಯನ್ನು ನಡೆಸಿಕೊಟ್ಟರು.
ಮಾಜಿ ಕ್ರಿಕೆಟಿಗರಿಗೆ 2 ದಿನಗಳ ಪಂದ್ಯಾವಳಿಯಲ್ಲಿ  ಹಲವು ವರ್ಷದ ಹಿಂದೆ ತಾವೆಲ್ಲರೂ ಒಟ್ಟಿಗೆ ಅನುಭವಿಸಿದ ಕೆಲವು ಮಾಂತ್ರಿಕ ಕ್ಷಣಗಳನ್ನು ಮೆಲುಕು ಹಾಕಲು ಅವಕಾಶ ಸಿಕ್ಕಿತು. ಪ್ರೇಕ್ಷಕರು ಸಾಕಷ್ಟು ಸಂಖ್ಯೆಯಲ್ಲಿ ಬಂದು ಲೆಜೆಂಡ್ಸ್ ಕ್ರಿಕೆಟ್ ಲೀಗ್ ಸೀಸನ್ 2 ನ್ನು ಸಂತಸದಿಂದ ವೀಕ್ಷಿಸಿದರು.ಬಂದಂತಹ ಎಲ್ಲಾ ಪ್ರೇಕ್ಷಕರಿಗೂ ತಂಪು ಪಾನೀಯ, ಐಸ್ ಕ್ರೀಮ್, ತಂಪಾದ ಮಜ್ಜಿಗೆ, ಕಲ್ಲಂಗಡಿ ಹಣ್ಣು ಮತ್ತು  ಊಟವನ್ನು ಉಚಿತವಾಗಿ ವಿತರಿಸಲಾಯಿತು.
ಸ್ಪೋರ್ಟ್ಸ್ ಕನ್ನಡದ ಪ್ರವರ್ತಕ ಕೆ ಆರ್ ಕೆ ಆಚಾರ್ಯ ಅವರು ಪಂದ್ಯಾವಳಿಯನ್ನು ಯಶಸ್ವಿಯಾಗಿ ನಡೆಸಿದ್ದಕ್ಕಾಗಿ ಸಂಘಟಕರನ್ನು ಅಭಿನಂದಿಸಿದ್ದಾರೆ.
ಸುರೇಶ್ ಭಟ್ ಮೂಲ್ಕಿ
ಸ್ಪೋರ್ಟ್ಸ್ ಕನ್ನಡ.
Categories
ಅಥ್ಲೆಟಿಕ್ಸ್

ಮಂಗಳೂರಲ್ಲಿ ಅಂತರ ರಾಷ್ಟ್ರೀಯ ಕ್ರೀಡಾಪಟು ದಿವಂಗತ ಲೋಕನಾಥ್ ಬೋಳಾರ್ ಸ್ಮರಣಾರ್ಥ ರಾಜ್ಯ ಜೂನಿಯರ್ ಅಥ್ಲೆಟಿಕ್ ಕ್ರೀಡಾ ಕೂಟ, ಸೆಪ್ಟೆಂಬರ್ 27 ರಿಂದ 30

2023 ನೇ ಸಾಲಿನ ಕರ್ನಾಟಕ ರಾಜ್ಯ ಜೂನಿಯರ್ ಕ್ರೀಡಾಕೂಟವು ಸೆಪ್ಟೆಂಬರ್ 27 ರಿಂದ 30 ರ ವರೆಗೆ ಮಂಗಳೂರು ನಗರದ ಮಂಗಳಾ ಕ್ರೀಡಾಂಗಣದಲ್ಲಿ ಜರಗಲಿರುವುದು. ಈ ಕ್ರೀಡಾ ಕೂಟವು ಅಂತರಾಷ್ಟ್ರೀಯ ಅತ್ಲೆಟಿಕ್ ದಿವಂಗತ ಲೋಕನಾಥ್ ಬೋಳಾರ್ ರವರ ಸ್ಮರಣಾರ್ಥ ವಾಗಿ ಜರಗಲಿರುವುದು,
ಕ್ರೀಡಾಕೂಟವು ಮೊಗವೀರ ವ್ಯವಸ್ಥಾಪಕ ಮಂಡಳಿ, ದ.ಕ ಮತ್ತು ಉಡುಪಿ ಶಾಖೆ, ಮಂಗಳೂರು ಇವರ ಪ್ರಾಯೋಜಕತ್ವದಲ್ಲಿ ಜರಗಲಿದ್ದು ಕರ್ನಾಟಕ ಅತ್ಲೆಟಿಕ್ ಅಸೋಸಿಯೇಷನ್ ನ ಸಹಕಾರ ಹಾಗ ದ.ಕ ಅತ್ಲೆಟಿಕ್ ಅಸೋಸಿಯೇಷನ್ ರವರ ಸಹಭಾಗಿತ್ವ ಇರುತ್ತದೆ.
ಕ್ರೀಡಾಕೂಟದ ಪೂರ್ವಭಾವಿಯಾಗಿ ಪೋಸ್ಟರ್ ಬಿಡುಗಡೆ ಕಾರ್ಯಕ್ರಮವು ಮಂಗಳೂರಿನ ಖಾಸಾಗಿ ಹೊಟೇಲಿನಲ್ಲಿ ಜರಗಿತು.
ಪೋಸ್ಟರ್ ಬಿಡುಗಡೆ ಮಾಡಿದ ಜನತಾ ಫಿಶಮೀಲ್ ಸಂಸ್ಥೆಯ ಆಡಳಿತ ನಿರ್ದೇಶಕ ಆನಂದ ಸಿ. ಕುಂದರ್ ಮಾತನ್ನಾಡಿ ಲೋಕನಾಥ್ ಬೋಳಾರ್ ನಮ್ಮ ದೇಶ ಕಂಡ ಈ ಭಾಗದ ಅಪ್ರತಿಮ ಕ್ರೀಡಾಪಟುವಾಗಿ ನಮ್ಮ ದೇಶಕ್ಕೆ ಹೆಸರನ್ನು ತಂದಿದ್ದಾರೆ. ಮಾತ್ರವಲ್ಲದೆ ಮೀನುಗಾರ ಸಮಾಜದ ಕಣ್ಮಣಿಯಾಗಿ ಮೀನುಗಾರಿಕೆಯ ಉತ್ತೇಜನಕ್ಕೆ ಹಲವು ಮಹತ್ತರ ಕೊಡುಗೆಯನ್ನು ನೀಡಿದ್ದಾರೆ, ಇಂತಹ ಮಹಾನ್ ವ್ಯಕ್ತಿಯನ್ನು ಸ್ಮರಿಸುತ್ತಾ ನಾಡಿನ ಕ್ರೀಡಾಪಟುಗಳ ಬೆಳವಣಿಗೆಗೆ ಕ್ರೀಡಾಕೂಟವು ನಮ್ಮ ಜಿಲ್ಲೆಯಲ್ಲಿ ಜರಗುತ್ತಿರುವುದು ಹೆಮ್ಮೆಯಾಗುತ್ತಿದೆ. ಈ ಮೂಲಕ ಲೋಕನಾಥ್ ಬೋಳಾರ್ ರವರಿಗೆ ಗೌರವವನ್ನು ಸಮರ್ಪಿಸೋಣ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮೊಗವೀರ ವ್ಯವಸ್ಥಾಪಕ ಮಂಡಳಿ ಇದರ ಅಧ್ಯಕ್ಷ ಭರತ್ ಕುಮಾರ್ ಉಳ್ಳಾಲ್ ಮಾತಾಡುತ್ತಾ ಲೋಕನಾಥ್ ಬೋಳಾರ್ ರವರು ಹೆಚ್ಚಾಗಿ ಸೇವೆ ಮಾಡಿದ ಕ್ಷೇತ್ರವೆಂದರೆ ಕ್ರೀಡೆ ಹಾಗೂ ಮೀನುಗಾರಿಕಾ ಕ್ಷೇತ್ರ, ತಮ್ಮ ಜೀವಿತಾವಧಿಯಲ್ಲಿ ಹಲವು ಕ್ರೀಡಾಪಟುಗಳನ್ನು ಬೆಳೆಸಿದ ಕೀರ್ತಿ ಅವರಿಗಿದೆ‌ . ಮೀನುಗಾರಿಕೆಗೆ ಹಲವು ಆಯಾಮಗಳನ್ನು ಪರಿಚಯಿಸುತ್ತಾ ಮೀನುಗಾರರ ಏಳಿಗೆಗೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ, ಅವರ ಸ್ಮರಣಾರ್ಥ ಜರಗುವ ಈ ಕ್ರೀಡಾಕೂಟದಲ್ಲಿ ಕರ್ಣಾಟಕದಾತ್ಯಂತ 2500 ಕ್ರೀಡಾಳುಗಳು ಭಾಗವಹಿಸಲಿದ್ದಾರೆ, ಕ್ರೀಡಾಕೂಟದ ವಿಜೇತರು ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸುವ ಅರ್ಹತೆಯನ್ನು ಪಡೆಯಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಉದ್ಯಮಿಗಳಾದ ಆನಂದ ಸುವರ್ಣ  ಮಲ್ಪೆ, ಟಿ ಹನೀಫ್ ಮಲ್ಪೆ, ಆನಂದ ಮಾಸ್ಟರ್ ಬೋಳೂರು, ಜಗದೀಶ್ ಬೋಳೂರು, ಮೋಹನ್ ಬೆಂಗ್ರೆ, ನಿತಿನ್ ಕುಮಾರ್, ತೇಜೋಮಯ, ಕಾಶಿನಾಥ್ ಕರ್ಕೇರ, ವಾಲ್ಟರ್ ಡಿಸೋಜ, ಫಾದರ್ ಗೋಮ್ಸ್, ಸಿಂಧೂರಾಂ, ಕ್ಯಾಪ್ಟನ್ ಕೃಷ್ಣಪ್ಪ,ವರದ್ ರಾಜ್ ಬಂಗೇರ, ಮನೋಹರ ಬೋಳಾರ ಮೊಹಮ್ಮದ್ ಬಸೀರ್, ಡಾ| ಶಾಂತರಾಂ ಶೆಟ್ಟಿ, ಡಾ|ದೇವಿ ಲೋಕನಾಥ್ ಬೋಳಾರ್, ಶ್ರೀಮತಿ ಪವನ್ ಬೋಳಾರ್, ಕಾವ್ಯ ಪ್ರಜ್ವಲ್ ಬೋಳಾರ್ , ಸುಭಾಷ್ ಚಂದ್ರ ಕಾಂಚನ್ ರವರು ಉಪಸ್ಥಿತರಿದ್ದರು.
ಮೊಗವೀರ ವ್ಯವಸ್ಥಾಪಕ ಮಂಡಳಿಯ ಪಧಾಧಿಕಾರಿಗಳಾದ ಮೋಹನ್ ಕೋಡಿಕಲ್, ಭರತ್ ಕುಮಾರ್ ಎರ್ಮಾಳ್, ಯತೀಶ್ ಬೈಕಂಪಾಡಿ, ವಿಜಯ ಸುವರ್ಣ ಬೆಂಗ್ರೆ, ಶೋಭೇಂದ್ರ ಸಸಿಹಿತ್ಲು, ಸಂದೀಪ್ ಪುತ್ರನ್ ಉಳ್ಳಾಲ ಹಾಗೂ ಅತ್ಲೆಟಿಕ್ ಅಸೋಸಿಯೇಷನ್ ನ ಪದಾಧಿಕಾರಿಗಳಾದ ಕರುಣಾಕರ ಶೆಟ್ಟಿ,ತಾರನಾಥ ಶೆಟ್ಟಿ, ಸುನೀಲ್ ಕುಮಾರ್ ಶೆಟ್ಟಿ, ಕೃಷ್ಣ ಶೆಣೈ, ಸುಪ್ರೀತ್ ಭಾಗವಹಿಸಿದ್ದರು.
Categories
ಟೆನಿಸ್

ದೇವರೇ, ಹೀಗೇಕೆ ಮಾಡಿದೆ ಎಂದು ನಾನು ಕೇಳುವುದಿಲ್ಲ ಎಂದಿದ್ದರು ಟೆನ್ನಿಸ್ ಆಟಗಾರ ಆರ್ಥರ್ ಆಶ್!

ಮರಣದ ದವಡೆಯಲ್ಲಿ ಕೂಡ ಆತನಿಗೆ ಯಾವ ವಿಷಾದವೂ ಇರಲಿಲ್ಲ!
——————————
ಅಮೆರಿಕಾದ ಈ ಲೆಜೆಂಡರಿ ದೈತ್ಯ ಟೆನ್ನಿಸ್ ಆಟಗಾರನ  ರೋಮಾಂಚನ ಉಂಟುಮಾಡುವ ಬದುಕಿನ  ಹೋರಾಟದ ಕತೆಯನ್ನು ನನ್ನ ತರಬೇತಿಯ ಸಂದರ್ಭ ನೂರಾರು ಬಾರಿ ಹೇಳಿದ್ದೇನೆ. ಈಗ  ನಿಮ್ಮ ಜೊತೆ ಹಂಚಿಕೊಳ್ಳುತ್ತಿರುವೆ.
ಆತನ ಹೆಸರು ಆರ್ಥರ್ ಆಶ್.
———————————–
ಆತ ಒಬ್ಬ ಕರಿಯ ಟೆನ್ನಿಸ್ ಆಟಗಾರ. ತುಳಿತಕ್ಕೆ ಒಳಗಾದ ಸಮುದಾಯದಿಂದ ಎದ್ದು ಬಂದವನು. ಅಮೆರಿಕದ  ಡೇವಿಸ್ ಕಪ್ ತಂಡಕ್ಕೆ ಆಯ್ಕೆ ಆದ ಮೊದಲ ಬ್ಲಾಕ್ ಟೆನ್ನಿಸ್ ಆಟಗಾರ ಆತ. ತನ್ನ ವಿಸ್ತಾರವಾದ ಟೆನ್ನಿಸ್ ಜೀವನದಲ್ಲಿ ಆಸ್ಟ್ರೇಲಿಯನ್ ಓಪನ್, ಫ್ರೆಂಚ್ ಓಪನ್, ವಿಂಬಲ್ಡನ್ ಈ ಮೂರೂ ಗ್ರಾನಸ್ಲಾಮ್ ಪ್ರಶಸ್ತಿಗಳನ್ನು ಗೆದ್ದವನು! ಅವನ ಟೆನ್ನಿಸ್ ಸಾಧನೆಯು ಜಗತ್ತಿನ ಗಮನ ಸೆಳೆದದ್ದು, ಆತನಿಗೆ ಲಕ್ಷ ಲಕ್ಷ  ಪ್ರೀತಿ ಮಾಡುವ ಅಭಿಮಾನಿಗಳು ದೊರೆತದ್ದು ಎಲ್ಲವೂ ಉಲ್ಲೇಖನೀಯ. ಆತ ಬದುಕಿದ್ದಾಗ ಟೆನ್ನಿಸ್ ಲೆಜೆಂಡ್ ಎಂದು ಕರೆಸಿಕೊಂಡಿದ್ದ .
ಆದರೆ ಆತನ ಅಂತಿಮ ದಿನಗಳು ಅತ್ಯಂತ ದಾರುಣ ಆಗಿದ್ದವು. 
———————————–
ಆದರೆ ಅವನ ಜೀವನದ ಕೊನೆಯ 14 ವರ್ಷಗಳು ಅತ್ಯಂತ  ದುಃಖದಾಯಕ ಆಗಿದ್ದವು. ಅವನು ಎರಡು ಬಾರಿ ಅತ್ಯಂತ ಸಂಕೀರ್ಣವಾದ ಬೈಪಾಸ್ ಸರ್ಜರಿಗೆ ಒಳಗಾದನು.  ಮುಂದೆ ಅಷ್ಟೇ ಸಂಕೀರ್ಣವಾದ ಮೆದುಳಿನ ಸರ್ಜರಿಯು ನಡೆಯಿತು. ಆತನ  ದೇಹದ ಅರ್ಧದಷ್ಟು ಭಾಗವು  ಪಾರಾಲೈಸ್ ಆಯಿತು. ಕೊನೆಗೆ ಆಗಿನ ಕಾಲಕ್ಕೆ ಅತ್ಯಂತ ಹೆಚ್ಚು ಅಪಾಯಕಾರಿ ಆಗಿದ್ದ ಏಡ್ಸ್ ಕಾಯಿಲೆಯು ಆತನಿಗೆ ಅಮರಿತು. ಇದರಿಂದ ಆರ್ಥರ್ ಆಶ್ ಪಡಬಾರದ ಪಾಡುಪಟ್ಟನು. ಆಸ್ಪತ್ರೆಯಲ್ಲಿ ರಕ್ತಪೂರಣ ಮಾಡುವಾಗ ಅವನಿಗೆ AIDS ಸೋಂಕು ತಗುಲಿತ್ತು. ಆಗ ನಿಜವಾದ ಸಾವು ಬದುಕಿನ ದೀರ್ಘ ಹೋರಾಟದ ಹದಿನಾಲ್ಕು   ವರ್ಷಗಳನ್ನು ಅವನು ದಾಟಬೇಕಾಯಿತು.
ಒಬ್ಬ ಅಭಿಮಾನಿಯು ಆತನಿಗೆ ಪತ್ರ ಬರೆದಿದ್ದ. 
———————————-
ಆಗ ಒಬ್ಬ ಅಭಿಮಾನಿಯು ತುಂಬಾ ಪ್ರೀತಿಯಿಂದ ಅವನಿಗೆ ಒಂದು ಪತ್ರವನ್ನು ಬರೆದಿದ್ದ. ಅದರ ಒಟ್ಟು ಸಾರಾಂಶವು ಹೀಗೆ ಇತ್ತು – ಅರ್ಥರ್. ಇಷ್ಟೊಂದು ಸಮಸ್ಯೆಗಳು ಬಂದಾಗಲೂ, ದೇವರೇ, ನೀನು ಹೀಗೇಕೆ ಮಾಡಿದೆ ಎಂದು ಯಾಕೆ ಕೇಳುವುದಿಲ್ಲ? ನಿನಗೇಕೆ ವಿಷಾದ ಇಲ್ಲ?
ಅದಕ್ಕೆ ಆರ್ಥರ್ ಕೊಟ್ಟ ಉತ್ತರವು  ಹೆಚ್ಚು ಮಾರ್ಮಿಕ ಆಗಿತ್ತು.
ನಾನೇಕೆ ವಿಷಾದ ಪಡಲಿ ಎಂದು ಬಿಟ್ಟ ಆರ್ಥರ್! 
———————————–
“ಗೆಳೆಯಾ, ನಿನ್ನ ಕಳಕಳಿಗೆ ಥ್ಯಾಂಕ್ಸ್ ಹೇಳುವೆ. ಆದರೆ ಯೋಚನೆ ಮಾಡು. ನಾನು ಟೆನ್ನಿಸ್ ಆಟ ಆಡಲು ಮೊದಲ ಬಾರಿಗೆ ಕೋರ್ಟಿಗೆ ಇಳಿದಾಗ ಜಗತ್ತಿನಲ್ಲಿ ಐದು ಕೋಟಿ ಜನ ಟೆನ್ನಿಸ್ ಆಡ್ತಾ ಇದ್ದರು. ಅದರಲ್ಲಿ 50 ಲಕ್ಷ ಮಂದಿ ಜಿಲ್ಲಾ ಮಟ್ಟವನ್ನು  ದಾಟಿರಬಹುದು. ಅವರಲ್ಲಿ ಐದು ಲಕ್ಷ ಮಂದಿ ಮಾತ್ರ ರಾಜ್ಯಮಟ್ಟಕ್ಕೆ ಆಯ್ಕೆ ಆಗಿರಬಹುದು. ಕೇವಲ ಐವತ್ತು ಸಾವಿರ ಮಂದಿ ರಾಷ್ಟ್ರಮಟ್ಟದ ಸ್ಪರ್ಧೆಗೆ ಅವಕಾಶವನ್ನು ಪಡೆದಿರಬಹುದು.  ಕೇವಲ ಐದು ಸಾವಿರ ಮಂದಿಗೆ ರಾಷ್ಟ್ರವನ್ನು ಪ್ರತಿನಿಧಿಸುವ ಅವಕಾಶವು ದೊರೆತಿರುವ ಸಾಧ್ಯತೆಯು ಇರಬಹುದು. ಅದರಲ್ಲಿ ಐನೂರು ಮಂದಿ ಮಾತ್ರ ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿರಬಹುದು.
ಅವರಲ್ಲಿ ಕೇವಲ ಐವತ್ತು ಮಂದಿ ವಿಂಬಲ್ಡನ್ ಕೂಟದ ಮೊದಲ ಸುತ್ತನ್ನು ತಲುಪಿರುವ ಸಾಧ್ಯತೆ ಇದೆ. ಎಂಟು ಮಂದಿ ಮಾತ್ರ ಕ್ವಾಟರ್ ಫೈನಲ್ ತಲುಪಿರುವ ಸಾಧ್ಯತೆ ಇದೆ. ನಾಲ್ಕು ಮಂದಿ ಮಾತ್ರ ಸೆಮಿಫೈನಲ್ ಆಡುವ ಭಾಗ್ಯ ಪಡೆದಿರುತ್ತಾರೆ.
ಕೇವಲ ಇಬ್ಬರು ಮಾತ್ರ ವಿಂಬಲ್ಡನ್ ಫೈನಲ್ ಸುತ್ತು ತಲುಪುತ್ತಾರೆ. ಗಾಡ್ಸ್ ಗ್ರೇಸ್! ಆ ಇಬ್ಬರಲ್ಲಿ ನಾನೂ ಒಬ್ಬನಾಗಿದ್ದೆ. ಜಗತ್ತಿನ ಕೇವಲ ಇಬ್ಬರು ಶ್ರೇಷ್ಟವಾದ  ಟೆನ್ನಿಸ್ ಆಟಗಾರರು ಪಡೆಯುವ ವಿರಳ  ಅವಕಾಶವು ಅಂದು ನನಗೆ ದೊರಕಿತ್ತು. ನಾನು ಜಗತ್ತಿನ ಕೇವಲ ನಂಬರ್ ಟೂ ಆಟಗಾರನಾಗಿ ಬೆಳ್ಳಿಯ ಹೊಳೆಯುವ ಟ್ರೋಫಿ   ಎತ್ತಿ ಹಿಡಿದು ಭಾರೀ ಖುಷಿ ಪಟ್ಟಿದ್ದೆ! ಆಗ ಅಯ್ಯೋ ದೇವರೇ, ನೀನು ಯಾಕೆ ಹೀಗೆ ಮಾಡಿದೆ ಎಂದು ನಾನು ಕೇಳಲಿಲ್ಲ! ನನ್ನ ಜೀವನದ ಸಂತೋಷದ ಪರಾಕಾಷ್ಠೆಯ ಕ್ಷಣಗಳಲ್ಲಿ ನಾನು ದೇವರನ್ನು ಪ್ರಶ್ನೆ ಮಾಡಲಿಲ್ಲ. ಈಗ ನನಗೆ ತೀವ್ರ ಆರೋಗ್ಯದ ಸಮಸ್ಯೆಗಳು ಎದುರಾದಾಗ ಹೇಗೆ ದೇವರನ್ನು  ಕೇಳಲಿ?”
ಸ್ನೇಹಿತರೇ, ನಮಗೆ ದೇವರು ದೊಡ್ಡ ಹೆಸರು, ಕೀರ್ತಿ, ಹತ್ತಾರು ಪ್ರಶಸ್ತಿ, ಎತ್ತರದ ಪದವಿ, ಅಧಿಕಾರ, ರಾಶಿ ದುಡ್ಡು,  ಭಾರೀ ಪ್ರಭಾವ, ತುಂಬಾ ಹ್ಯಾಪಿನೆಸ್ ಕೊಟ್ಟಾಗ ನಾವು ದೇವರೇ, ಹೀಗೇಕೆ ಮಾಡಿರುವೆ ಎಂದು ಗಟ್ಟಿಯಾಗಿ ಕೇಳಿದ್ದು  ಇದೆಯಾ? ಹಾಗಿರುವಾಗ  ಸಮಸ್ಯೆಗಳು ಬಂದಾಗ, ಆರೋಗ್ಯ ಹಾಳಾದಾಗ, ಹಣ ಕಾಸು ನಷ್ಟ ಆದಾಗ ಯಾಕೆ ದೇವರನ್ನು ಪ್ರಶ್ನೆ ಮಾಡಬೇಕು?
ಅಂದ ಹಾಗೆ 1993ರಲ್ಲಿ ತನ್ನ ಐವತ್ತನೇ ವರ್ಷದಲ್ಲಿ ಆರ್ಥರ್ ಆಶ್ ತನ್ನ ಬದುಕಿಗೆ ಚುಕ್ಕೆ ಇಟ್ಟನು.
ಟೆನ್ನಿಸ್ ಲೆಜೆಂಡ್ ಆರ್ಥರ್ ಆಶ್ ಹೇಳಿದ್ದು ನಿಜ ಎಂದು ನಿಮಗೆ ಅನ್ನಿಸುತ್ತಿದೆಯಾ?
Categories
Uncategorized

ದೀಪಾ ಮಲ್ಲಿಕ್ ಬದುಕು ಎಷ್ಟೊಂದು ಅದ್ಭುತ! ಎಷ್ಟೊಂದು ಸ್ಫೂರ್ತಿದಾಯಕ!

ಈಕೆಯ ಸಾಧನೆಯು ನಿಮಗೆ ಸ್ಫೂರ್ತಿ ಕೊಡದಿದ್ದರೆ ನಾನು ಇನ್ನು ಬರೆಯುವುದಿಲ್ಲ!
———————————-
21 ವರ್ಷಗಳಿಂದ ಉಸಿರುಗಟ್ಟಿಸುವ ವೀಲ್ ಚೇರ್ ಮೇಲಿನ ಪರಾವಲಂಬನೆಯ ಬದುಕು! ಎದೆಯ ಕೆಳಗಿನ ದೇಹದ ಭಾಗ ಪೂರ್ತಿಯಾಗಿ ಜೀವರಹಿತ! ಮಲ, ಮೂತ್ರಗಳ ವಿಸರ್ಜನೆಯ ಮೇಲೆ ನಿಯಂತ್ರಣವೂ  ಇಲ್ಲ! ಮನೆಯಲ್ಲಿ ಇರುವ ಒಬ್ಬಳು  ಮಗಳು ಅಪಘಾತಕ್ಕೆ ಒಳಗಾಗಿ ದೇಹದ ಎಡಭಾಗ ಪೂರ್ತಿ ವಿಕಲತೆ!
ಇಷ್ಟೆಲ್ಲಾ ಕ್ಲಿಷ್ಟ ಸಮಸ್ಯೆಗಳ ನಡುವೆ ಇರುವ ಒಬ್ಬಳು ಹೆಣ್ಣು ಮಗಳು ವಿಶ್ವಮಟ್ಟದ ಪಾರಾ ಒಲಿಂಪಿಕ್ಸ್ ಕೂಟದಲ್ಲಿ ಒಂದು ಪದಕವನ್ನು ಗೆಲ್ಲುವ ಕನಸನ್ನು ಕಾಣುವುದು  ಸಾಧ್ಯವೇ? ಅದರ ಬಗ್ಗೆ ಯೋಚನೆ ಕೂಡ ಮಾಡಲು ಸಾಧ್ಯವೇ?
ಆದರೆ ಭಾರತದ ಅತೀ ಶ್ರೇಷ್ಟವಾದ ಪಾರಾ ಅಥ್ಲೀಟ್ ದೀಪಾ ಮಲ್ಲಿಕ್ ಅದನ್ನು ದಿಟ್ಟ ಹೋರಾಟದ ಮೂಲಕ ಸಾಧಿಸಿ ತೋರಿಸಿದ್ದಾರೆ. ಆಕೆಯ ಬದುಕು, ಛಲ ಮತ್ತು ಅನನ್ಯ ಹೋರಾಟ ನಿಜವಾಗಿಯೂ ಗ್ರೇಟ್!
ದೀಪಾ ಹುಟ್ಟು ಹೋರಾಟಗಾರ್ತಿ!
———————————-
ದೀಪಾ ಹುಟ್ಟಿದ್ದು ಹರ್ಯಾಣದಲ್ಲಿ ಸೆಪ್ಟೆಂಬರ್ 30, 1970ರಂದು. ತಂದೆ, ಅಣ್ಣ ಎಲ್ಲರೂ ಸೈನಿಕರು. ಕೈ ಹಿಡಿದ ಪತಿ ಬಿಕ್ರಂ ಮಲಿಕ್ ಕಾರ್ಗಿಲ್ ಯೋಧರು. ಬಾಲ್ಯದಿಂದ ಕ್ರೀಡೆ ಮತ್ತು ಬೈಕ್ ಸವಾರಿ ಅವರ ಕ್ರೇಜ್. ಯಾವ ಸಾಹಸವನ್ನು ಮಾಡಲು ಕೂಡ ಹಿಂಜರಿಯುವ  ಹುಡುಗಿಯೇ ಅಲ್ಲ. ಮದುವೆಯ ನಂತರ ಬಹಳ ಪ್ರೀತಿ ಮಾಡುವ ಗಂಡನ ಪೂರ್ಣ ಪ್ರಮಾಣದ ಬೆಂಬಲ ಅವರ ಸಾಹಸಗಳಿಗೆ ದೊರೆತಿತ್ತು.
ಆದರೆ ಅವರ ಬದುಕಿನಲ್ಲಿ ಎರಡು ಅಪಘಾತಗಳು ನಡೆದು ಹೋದವು. ಅವುಗಳು ಅವರ ಬದುಕಿನ ಕರಾಳ ಅಧ್ಯಾಯಗಳು!
ಮಗಳು ಬೈಕ್ ಅಪಘಾತದಲ್ಲಿ ಪಾರಾಲೈಸ್ ಆದಳು.
——————————
ಮೊದಲ ಆಘಾತ ನಡೆದದ್ದು ಅವರ ಪುಟ್ಟ ಮಗಳು ದೇವಿಕಾ ಬೈಕ್ ಅಪಘಾತಕ್ಕೆ ಒಳಗಾದಾಗ. ಮಗಳ ತಲೆಗೆ ಪೆಟ್ಟಾಗಿತ್ತು. ದೇಹದ ಎಡಭಾಗವು ಪೂರ್ತಿಯಾಗಿ ಪಾರಾಲೈಸ್ ಆಗಿತ್ತು. ಅದಕ್ಕೆ ವೈದ್ಯಕೀಯದ ಭಾಷೆಯಲ್ಲಿ ‘ಹೆಮಿ ಪ್ಲೆಜಿಯಾ ‘ಎಂದು ಹೆಸರು. ಅದರಿಂದಾಗಿ ದೀಪಾ ಮಲ್ಲಿಕ್ ತನ್ನ ಸಾಹಸದ ಪ್ಯಾಶನಗಳನ್ನು ಮರೆತು ಮಗಳ ಆರೈಕೆ ಮತ್ತು ಶುಶ್ರೂಷೆಯಲ್ಲಿ ಮುಳುಗಿಬಿಟ್ಟರು.
ದೀಪಾ ಬದುಕಿನಲ್ಲಿ ಎರಡನೆಯ ಆಘಾತ ನಡೆದೇ ಬಿಟ್ಟಿತು! 
——————————
ಮುಂದೆ 1999ರ ಕಾರ್ಗಿಲ್ ಯುದ್ದವು ಆರಂಭ ಆದಾಗ ಪತಿ ಬಿಕ್ರಂ ಮಲಿಕ್ ಭಾರತೀಯ ಸೇನೆಯ ಯೋಧನಾಗಿ ರಣಭೂಮಿಯಲ್ಲಿ ಇದ್ದರು. ಪತ್ನಿಗೆ ಅವರ ಸಂಪರ್ಕವು ಸಾಧ್ಯವೇ ಇರಲಿಲ್ಲ. ಅದೇ ಹೊತ್ತಿಗೆ ದೀಪಾ ಬದುಕಿನಲ್ಲಿ ಎರಡನೇ ಬಿರುಗಾಳಿ ಬೀಸಿತು.
ಸುಮಾರು ದಿನಗಳಿಂದ ಅವರ ಬೆನ್ನು ಮೂಳೆಯ ನೋವು ಕಾಡುತ್ತಿತ್ತು. ಪರೀಕ್ಷೆ ಮಾಡಲು ಹೋದಾಗ ವೈದ್ಯರು ಹೇಳಿದ್ದಿಷ್ಟು –  ನಿಮ್ಮ ಬೆನ್ನು ಮೂಳೆಯಲ್ಲಿ ಒಂದು ಅಪಾಯಕಾರಿ ಗಡ್ಡೆ ಬೆಳೆದಿದೆ. ಆಪರೇಷನ್ ಮಾಡದೆ ಹಾಗೆ ಬಿಟ್ಟರೆ ಸಾವು ಖಂಡಿತ. ಆಪರೇಷನ್ ಮಾಡಿದರೆ ನಿಮ್ಮ ದೇಹದ ಒಂದು ಭಾಗ ಪಾರಾಲೈಸ್  ಆಗುವುದು ಖಂಡಿತ! ಆಯ್ಕೆ ನಿಮ್ಮದು!
ಗಂಡ ಯುದ್ಧಭೂಮಿಯಲ್ಲಿ ಇದ್ದ ಕಾರಣ ಅವರ ಅಭಿಪ್ರಾಯವನ್ನು ಪಡೆಯುವುದು ಸಾಧ್ಯವೇ ಇರಲಿಲ್ಲ. ದೀಪಾ ಧೈರ್ಯವಾಗಿ ಆಪರೇಶನ್ ಮಾಡಿಸಿಕೊಳ್ಳುವ ನಿರ್ಧಾರವನ್ನು ತೆಗೆದುಕೊಂಡರು. ಒಂದು ವಾರ ಬಿಟ್ಟು ಆಸ್ಪತ್ರೆಗೆ ಬರುವುದಾಗಿ ತಿಳಿಸಿದರು. ಅದಕ್ಕೆ ಅವರು ಕೊಟ್ಟ ಕಾರಣ ಅದ್ಭುತವಾಗಿ ಇತ್ತು – ಒಂದು ವಾರ ನಾನು ನನ್ನ ಕಾಲ ಮೇಲೆ ಸ್ವಾವಲಂಬಿ ಆಗಿ ಫೀಲ್ ಜೊತೆಗೆ ನಡೆಯಬೇಕು!
ಅತ್ಯಂತ ಯಾತನಾಮಯ ಶಸ್ತ್ರ ಚಿಕಿತ್ಸೆ ಅದು! 
——————————
ನಂತರ ಒಬ್ಬರೇ ಆಸ್ಪತ್ರೆಗೆ ಬಂದು ಶಸ್ತ್ರಚಿಕಿತ್ಸೆಗೆ ಒಳಗಾದರು. ಅತ್ಯಂತ ಯಾತನಾಮಯ ಆದ ಶಸ್ತ್ರಚಿಕಿತ್ಸೆ ಅದು. 183 ಹೊಲಿಗೆಗಳನ್ನು  ಹಾಕಿಸಿಕೊಂಡು ಆಕೆ ಕಣ್ಣು ತೆರೆದಾಗ ಅವರ ದೇಹದ ಎದೆಯ ಕೆಳಗಿನ ಭಾಗ ಪೂರ್ತಿ ಪಾರಾಲೈಜ್ ಆಗಿತ್ತು. ವೀಲ್ ಚೇರ್ ಬದುಕು ಅನಿವಾರ್ಯ ಆಗಿತ್ತು!
ಈ ಸ್ಥಿತಿಗೆ ‘ ಪಾರಾ ಪ್ಲೆಜಿಕ್ ‘ಎಂದು ವೈದ್ಯಕೀಯ ಭಾಷೆಯಲ್ಲಿ ಕರೆಯುತ್ತಾರೆ. ಅಂದರೆ ದೇಹದ ಅರ್ಧ ಭಾಗವು ನಿಯಂತ್ರಣ ಕಳೆದುಕೊಳ್ಳುವುದು ಮಾತ್ರವಲ್ಲ ಮಲ, ಮೂತ್ರಗಳ ಮೇಲೆ ಕೂಡ ನಿಯಂತ್ರಣಗಳು ತಪ್ಪಿ ಹೋಗುವುದು. ಒಂದು ಗ್ಲಾಸ್ ನೀರು ಕುಡಿಯಲು ಕೂಡ ಹಿಂದೆ ಮುಂದೆ ನೋಡಬೇಕಾದ ನೋವಿನ  ಅನಿವಾರ್ಯತೆ! ಯಾವ ಆಹಾರ ಸೇವಿಸಲು ಕೂಡ ವೈದ್ಯರ ಅನುಮತಿಯನ್ನು ಪಡೆಯಬೇಕು! ಆದ್ದರಿಂದ ಪಾರಾಪ್ಲೆಜಿಕ್ ಸಮಸ್ಯೆ ಇದ್ದವರು ತಮ್ಮ ಮನೆಯಿಂದ ಹೊರಗೆ ಬರುವುದೇ ಇಲ್ಲ. ಆದರೆ ದೀಪಾ ಮಲಿಕ್  ಬೇರೆಯವರ ಹಾಗೆ ಯೋಚನೆ ಮಾಡಲೇ ಇಲ್ಲ!
ಗಂಡನ ಬೆಂಬಲ ಪಡೆದು ದೀಪಾ 
ಮತ್ತೆ ಸಾಹಸಕ್ಕೆ ಇಳಿದರು!
——————————
1999ರ ಕಾರ್ಗಿಲ್ ಯುದ್ದವನ್ನು ಗೆದ್ದು ಗಂಡ ಮನೆಗೆ ಬಂದಾಗ ಮನೆಯಲ್ಲಿ ಎರಡೆರಡು ಪಾರಾಲೈಸ್ ಆದ ನೊಂದ ಜೀವಗಳು! ಕಣ್ಣೀರು ಸುರಿಸುತ್ತ ಮಲಗಿದ ಹೆಂಡತಿ. ಆದರೆ ಬಿಕ್ರಂ ಸಿಂಗ್ ಒಬ್ಬ ದಿಟ್ಟ ಸೈನಿಕನಾಗಿ ಹೆಂಡತಿಗೆ ಧೈರ್ಯ ತುಂಬಿದರು. ಬದುಕಿನ ನೋವನ್ನು ಮರೆಯಲು ಅವರ ಬಾಲ್ಯದ ಕ್ರೀಡೆ ಮತ್ತು ಪ್ಯಾಶನಗಳನ್ನು ಮುಂದುವರೆಸುವ ಸಲಹೆ ಕೊಟ್ಟರು. ತಾನು ಪೂರ್ತಿಯಾಗಿ ಬೆಂಬಲಕ್ಕೆ ನಿಲ್ಲುವುದಾಗಿ ಹೇಳಿದರು. ಪತಿಯ ಪೂರ್ಣ ಪ್ರಮಾಣದ ಬೆಂಬಲ ಪಡೆದ ದೀಪಾ ಮಲಿಕ್ ಮತ್ತೆ ಕ್ರೀಡಾ ಜಗತ್ತನ್ನು ಪ್ರವೇಶ ಮಾಡಲು ದಿಟ್ಟ ನಿರ್ಧಾರ ಮಾಡಿದ್ದರು. ಧೈರ್ಯವಾಗಿ ಮನೆಯಿಂದ ಹೊರಗೆ ಕಾಲಿಟ್ಟರು.
ಮುಂದೆ ಆಕೆಯ ಮುಂದೆ ಇದ್ದದ್ದು ಹೋರಾಟದ ಬದುಕು! 
———————————–
ಬೈಕ್ ಮತ್ತು ಕಾರ್ ಓಡಿಸಲು ದೆಹಲಿಯ ಸ್ಪೈನಲ್ ಇಂಜುರಿ ಕೇಂದ್ರದಲ್ಲಿ ಒಂದೂವರೆ ವರ್ಷ ಕಠಿಣವಾದ ತರಬೇತು ಪಡೆದರು. ಈಜು ಕಲಿತರು. ಬೈಕ್ ಮತ್ತು ಕಾರಲ್ಲಿ ಹಲವು ಮಾರ್ಪಾಟು  ಮಾಡಿಸಿದರು. ಡ್ರೈವಿಂಗ್ ಲೈಸೆನ್ಸ್ ಪಡೆಯಲು ಪಡಬಾರದ ಕಷ್ಟವನ್ನು ಪಟ್ಟರು. ಅದೆಲ್ಲವೂ ಹೋರಾಟದ ದಿನಗಳು. ಅರ್ಧ ದೇಹ ಮತ್ತು ಪೂರ್ಣ ಸ್ಥೈರ್ಯಗಳು ಅವರ ಬೆಂಬಲಕ್ಕೆ ನಿಂತಿದ್ದವು!
2006ರಲ್ಲಿ ಕೌಲಾಲಂಪುರದಲ್ಲಿ ನಡೆದ ಈಜುವ ಸ್ಪರ್ಧೆಯಲ್ಲಿ ಅವರಿಗೆ ಮೊದಲ ಅಂತಾರಾಷ್ಟ್ರೀಯ ಪದಕವು  ದೊರೆಯಿತು. 2008ರಲ್ಲಿ ಯಮುನಾ ನದಿಯ ಹರಿವಿಗೆ ವಿರುದ್ದವಾಗಿ ಒಂದು ಕಿಲೋಮೀಟರ್ ದೂರ ಈಜಿ ಅವರು ಲಿಮ್ಕಾ ದಾಖಲೆ ಬರೆದರು. ಅಂತಾರಾಷ್ಟ್ರೀಯ ಪದಕ ಗೆದ್ದ ಕೇವಲ ಭಾರತದ್ದೆ ಅಲ್ಲ ಇಡೀ ಜಗತ್ತಿನ ಮೊತ್ತ ಮೊದಲ ಪಾರಾಪ್ಲೆಜೀಕ್ ಕ್ರೀಡಾಪಟು ದೀಪಾ ಮಲಿಕ್ ಆಗಿದ್ದರು!
ನಂತರ ಅವರು ಹಿಂದೆ ಮುಂದೆ ನೋಡುವ ಪ್ರಸಂಗವೇ ಬರಲಿಲ್ಲ. ಅವರ ಗೆಲುವಿನ ಕೆಲವು ಹೆಜ್ಜೆಗಳು ಹೀಗಿವೆ.
ಎಲ್ಲವೂ ದಾಖಲೆ, ದಾಖಲೆ ಮತ್ತು  ದಾಖಲೆ! 
———————————–
೧) 2009ರಲ್ಲಿ ವಿಶೇಷವಾಗಿ ಮಾರ್ಪಾಡು ಮಾಡಿದ ಬೈಕನ್ನು  58 ಕಿಲೋಮೀಟರ್ ದೂರಕ್ಕೆ ನಿರಂತರ
ಓಡಿಸಿ ದಾಖಲೆ ಬರೆದರು.
೨) ಅದೇ ವರ್ಷ ಜಗತ್ತಿನ ಅತೀ ಎತ್ತರದ ರೈಡ್ ಟು ಹಿಮಾಲಯ ಹೆಸರಿನ ಮೋಟಾರ್ ರಾಲಿಯಲ್ಲಿ ನೇವಿಗೆಟರ್ ಆಗಿ ದೀಪಾ ಮಲಿಕ್  ಭಾಗವಹಿಸಿದರು. ಅದು ಮೈ ಕೊರೆಯುವ ಚಳಿಯಲ್ಲಿ ಎಂಟು ದಿನಗಳ ಸುದೀರ್ಘ ಕಾಲ ಸಾಗಿದ, 1700 ಕಿಲೋಮೀಟರ್ ಪ್ರಯಾಣದ, 18,000 ಅಡಿ ಎತ್ತರದ ದುರ್ಗಮ ರಸ್ತೆಗಳ ರಾಲಿ ಆಗಿತ್ತು. ಇದನ್ನು ಗೆದ್ದ ದೀಪಾ ಎರಡನೇ ಬಾರಿಗೆ ಲಿಮ್ಕಾ ಬುಕ್ ದಾಖಲೆಗೆ ಸೇರಿದರು!
೩) ಮುಂದಿನ ವರ್ಷ ದೀಪಾ ಇನ್ನೊಂದು ಸಾಹಸಕ್ಕೆ ಮುಂದಾದರು. ಅದು 3,000 ಕಿಲೋಮೀಟರ್ ಪ್ರಯಾಣದ ಡಸರ್ಟ್ ಸ್ಟಾರ್ಮ್ ರಾಲಿ. ಅದು ಕೂಡ ಮರುಭೂಮಿ ಸೀಳಿಕೊಂಡು ಹೋಗುವ ರಾಲಿ! ಅಲ್ಲೂ ಅವರ ಆತ್ಮವಿಶ್ವಾಸವು ಅವರನ್ನು ಗೆಲ್ಲಿಸಿತು!
೪) ಮುಂದೆ ಅವರು ಶಾಟ್ ಪುಟ್ ಮತ್ತು ಜಾವೇಲಿನ್ ಥ್ರೋ ಮೇಲೆ ಗಮನವಿಟ್ಟರು. 2010ರ ಏಷಿಯನ್ ಪಾರಾ ಗೇಮ್ಸ್ ಚೀನಾದಲ್ಲಿ ನಡೆದಾಗ ಕಂಚಿನ ಪದಕ ಗೆದ್ದರು. ಮುಂದೆ 2011ರಲ್ಲಿ ನ್ಯೂಜಿಲ್ಯಾಂಡಲ್ಲಿ ಐಪಿಸಿ ವರ್ಲ್ಡ್ ಚಾಂಪಿಯನ್ಶಿಪ್ ಕೂಟದಲ್ಲಿ ಬೆಳ್ಳಿ ಪದಕವನ್ನು ಗೆದ್ದರು.
೫) 2014ರಲ್ಲಿ ದಕ್ಷಿಣ ಕೊರಿಯಾದಲ್ಲಿ ನಡೆದ ಪಾರಾ ಏಷಿಯನ್ ಗೇಮ್ಸಲ್ಲಿ ಜಾವೇಲಿನ್ ಎಸೆತದಲ್ಲಿ ಬೆಳ್ಳಿ ಪದಕ ಗೆದ್ದರು.
೬) 2016ರ ರಿಯೋ ಪಾರಾ ಒಲಿಂಪಿಕ್ಸ್ ಕೂಟದಲ್ಲಿ
ಶಾಟ್ ಪುಟ್ ಸ್ಪರ್ಧೆಯಲ್ಲಿ ಭಾಗವಹಿಸಲು ದೀಪಾ ಭಾರೀ ತಯಾರಿ ನಡೆಸಿದರು. ಆಗ ತೀವ್ರವಾದ ದೈಹಿಕ ತೊಂದರೆಗಳು ಎದುರಾದವು. ಪ್ರತೀ ಬಾರಿ ಶಾಟ್ ಪುಟ್ ಎಸೆದಾಗ ಮಲ ಅಥವ ಮೂತ್ರ ವಿಸರ್ಜನೆ ಆಗಿ ಡಯಪರ್ ಬದಲಾವಣೆ ಮಾಡುವುದು ಅನಿವಾರ್ಯ ಆಗಿತ್ತು. ಆದರೆ ದೀಪಾ ಮಲಿಕ್ ಆತ್ಮವಿಶ್ವಾಸ ಕಳೆದುಕೊಳ್ಳಲಿಲ್ಲ. ಅದರ ನಡುವೆ ಅವರ ಬೆನ್ನ ಹಿಂದೆ ನಡೆದ  ಹಲವು ವಿಶ್ವಾಸದ್ರೋಹದ ಘಟನೆಗಳು, ಕೋರ್ಟು ಅಲೆದಾಟ ಅವರನ್ನು ಹಿಂಡಿ ಹಿಪ್ಪೆ ಮಾಡಿದವು. ಕ್ರೀಡೆಗೆ ಸಿದ್ಧತೆ ಮಾಡಬೇಕಾದ ಪೂರ್ತಿ ಹೊತ್ತು ಕೋರ್ಟನ ಓಡಾಟದಲ್ಲಿ ಕಳೆದುಹೋಗಿತ್ತು. ದೀಪಾ ಕೋರ್ಟಲ್ಲಿ ಕೂಡ ತಮ್ಮ ಪರವಾದ ತೀರ್ಪನ್ನು ಪಡೆದರು ಮತ್ತು ರಿಯೋ ಪಾರಾ ಒಲಿಂಪಿಕ್ಸ್ ಸ್ಪರ್ಧೆಗೆ ಅರ್ಹತೆಯನ್ನು ಪಡೆದಿದ್ದರು.
2016ರ ಸೆಪ್ಟೆಂಬರ್ 14 ರಂದು ರಿಯೋದಲ್ಲಿ ವೀಲ್ ಚೇರ್ ಮೇಲೆ ಕುಳಿತು ತನ್ನ ದೇಹದ ಪೂರ್ಣವಾದ  ಶಕ್ತಿಯನ್ನು ತನ್ನ ಭುಜಗಳಿಗೆ ಬಸಿದು 4.61 ಮೀಟರ್ ದಾಖಲೆಯ ದೂರಕ್ಕೆ ಆಕೆ ಶಾಟ್ ಪುಟನ್ನು ಎಸೆದು ಬಿಟ್ಟಿದ್ದರು! ಆ ದಿನ ದೀಪಾ ಅವರಿಗೆ ದೊರೆತದ್ದು ಹೊಳೆವ ಬೆಳ್ಳಿಯ ಪದಕ! ಭಾರತದ ತ್ರಿವರ್ಣ ಧ್ವಜ ರಿಯೋದಲ್ಲಿ ಹಾರಿದಾಗ ದೀಪಾ ಕಣ್ಣೀರು ಸುರಿಸಿದರು.
ಅದು ಭಾರತವು ಪಾರಾ ಒಲಿಂಪಿಕ್ಸ್ ಕೂಟದಲ್ಲಿ ಗೆದ್ದ ಮೊದಲ ಪದಕ ಆಗಿತ್ತು ಮತ್ತು ಆ ಸಾಧನೆ ಮಾಡಿದ ಜಗತ್ತಿನ ಮೊದಲ ಪಾರಾಪ್ಲೆಜಿಕ್ ಕ್ರೀಡಾಪಟು ಆಗಿ ದೀಪಾ ಮಲಿಕ್ ಮೂಡಿ ಬಂದಿದ್ದರು! ಆಗ ಅವರಿಗೆ 46 ವರ್ಷ!
೭) ಮುಂದೆ ಜಕಾರ್ತದಲ್ಲಿ ನಡೆದ ಏಷಿಯನ್ ಪಾರಾ ಗೇಮ್ಸ್ ಕೂಟದಲ್ಲಿ ಎರಡು ಕಂಚಿನ ಪದಕಗಳನ್ನು ಅವರು ಗೆದ್ದರು.
೮) ಸತತ ಮೂರು ಏಷಿಯನ್ ಪಾರಾ ಕೂಟಗಳಲ್ಲಿ ಪದಕ ಗೆದ್ದ  (2010, 2014, 2018) ಭಾರತದ  ಮೊದಲ ಕ್ರೀಡಾಪಟು ಆಗಿದ್ದರು ದೀಪಾ ಮಲಿಕ್!
೯) ಆಕೆ ಗೆದ್ದಿರುವ ಒಟ್ಟು ಪದಕಗಳ ಸಂಖ್ಯೆ 81. ಅದರಲ್ಲಿ 58 ಪದಕಗಳು ರಾಷ್ಟ್ರ ಮಟ್ಟದ್ದು ಮತ್ತು 23 ಪದಕಗಳು ಅಂತಾರಾಷ್ಟ್ರೀಯ ಮಟ್ಟದ್ದು!
೧೦) ದೀಪಾ ಮಲಿಕ್ ಅವರಿಗೆ ರಾಷ್ಟ್ರಮಟ್ಟದ  ಅತ್ಯುತ್ತಮ ಕ್ರೀಡಾಪಟುವಿಗೆ ನೀಡುವ ಅರ್ಜುನ ಪ್ರಶಸ್ತಿ ಮತ್ತು ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಎರಡೂ ಸಂದಿವೆ.
೧೧) ಭಾರತ ಸರಕಾರವು ಅವರಿಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಿದ್ದು ಅಂದಿನ ಇಡೀ ಕಾರ್ಯಕ್ರಮವು ಭಾವಪೂರ್ಣ ಆಗಿತ್ತು. ಆಕೆಯ ಕತೆಯನ್ನು ಅವರ ಬಾಯಿಂದಲೇ ಕೇಳಿ ಪ್ರಧಾನಿ ನರೇಂದ್ರ ಮೋದಿ ರೋಮಾಂಚನ ಪಟ್ಟಿದ್ದರು!
೧೨) ದೀಪಾ ಅರ್ಧ ದೇಹದ ಪಾರಾಲೈಸ್ ಆದ ತನ್ನ ಮಗಳು ದೇವಿಕಾ ಅವರನ್ನು ಕೂಡ ಓರ್ವ ಭವಿಷ್ಯದ ಪಾರಾ ಅಥ್ಲೀಟ್ ಆಗಿ ರೂಪಿಸುತ್ತಿದ್ದಾರೆ!
ಈಗ ನೀವು ಹೇಳಿ. ದೀಪಾ ಮಲಿಕ್ ಬದುಕು ಸ್ಫೂರ್ತಿಯ ಚಿಲುಮೆ ಹೌದಾ?
Categories
ಕ್ರಿಕೆಟ್

ಶೀಘ್ರದಲ್ಲೇ ಬರಲಿದೆ ಜಿ ಎಸ್ ಬಿಗಳ ಬಹು ನಿರೀಕ್ಷಿತ ಹರಾಜು ಆಧಾರಿತ ಕ್ರಿಕೆಟ್ ಟೂರ್ನಮೆಂಟ್ ‘ವೊಳಲಂಕೆ ಪ್ರೀಮಿಯರ್ ಲೀಗ್’!!!

ಮುಲ್ಕಿ- ಜಿ. ಎಸ್. ಬಿ ಕ್ರಿಕೆಟ್ ಪ್ರಿಯರಿಗೆ ಸಂಭ್ರಮದ ಸುದ್ದಿ. ಈ ಋತುವಿನ ಅತ್ಯಂತ ದೊಡ್ಡ ಕ್ರಿಕೆಟ್ ಹಬ್ಬ ಮುಲ್ಕಿಯಲ್ಲಿ ಶುರುವಾಗಲಿದೆ.
ವೊಳಲಂಕೆ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಅಸೋಸಿಯೇಷನ್ ಇವರು ಅಕ್ಟೋಬರ್ ತಿಂಗಳಿನಲ್ಲಿ  ಜಿ ಎಸ್ ಬಿ ಗಳ   ಶ್ರೀಮಂತ ಕ್ರಿಕೆಟ್ ಲೀಗ್ ಪಂದ್ಯಾವಳಿ ಆಯೋಜಿಸಲು ಮುಂದಾಗಿದ್ದು, ಕ್ರಿಕೆಟ್ ಪ್ರೇಮಿಗಳಲ್ಲಿ ಸಂಭ್ರಮ ಮನೆ ಮಾಡಿದೆ.  ಜಿ ಎಸ್ ಬಿ ಕ್ರಿಕೆಟ್ ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿರುವ ವೊಳಲಂಕೆ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಅಸೋಸಿಯೇಷನ್ ಹಗಲು ರಾತ್ರಿ  ಪಂದ್ಯಾಕೂಟ ಆಯೋಜಿಸಲು ಹಸಿರು ನಿಶಾನೆ ತೋರಿಸಿದೆ. ಜಿ. ಎಸ್. ಬಿ ಕ್ರಿಕೆಟ್ ಇತಿಹಾಸದಲ್ಲಿ ಇದೊಂದು ಮಹತ್ವದ ಮೈಲಿಗಲ್ಲು.
ಗೌಡ ಸಾರಸ್ವತ ಬ್ರಾಹ್ಮಣ (ಜಿಎಸ್ ಬಿ) ಸಮಾಜದ ಇತಿಹಾಸದಲ್ಲಿ  ಐಪಿಎಲ್ ಮಾದರಿಯಲ್ಲಿ ವಿಪಿಎಲ್ ಕ್ರಿಕೆಟ್ ಟೂರ್ನಮೆಂಟ್-2023 ನ್ನು ಹಮ್ಮಿಕೊಳ್ಳಲಾಗಿದೆ.  ಇದು ಹರಾಜು ಆಧಾರಿತ ಕ್ರಿಕೆಟ್ ಪಂದ್ಯಾವಳಿಯಾಗಿರುತ್ತೆ. ವಿಪಿಎಲ್‌ನಲ್ಲಿ ಭಾಗವಹಿಸುವ ತಂಡಗಳಿಗೆ ಆಟಗಾರರನ್ನು ಬಿಡ್ಡಿಂಗ್ ಮೂಲಕ ಖರೀದಿಸಲಾಗುವುದು. ಆಟಗಾರರನ್ನು ಆಯ್ಕೆ ಮಾಡಲು ಹರಾಜು ಆಯೋಜಿಸಲಾಗುವುದು.  ಮುಲ್ಕಿಯಲ್ಲಿರುವ ವಿಜಯಾ ಕಾಲೇಜಿನ  ಮೈದಾನದಲ್ಲಿ ಹೊನಲು ಬೆಳಕಿನ ಕ್ರಿಕೆಟ್ ಸರಣಿಯಲ್ಲಿ ಒಟ್ಟು ಹದಿನಾರು ತಂಡಗಳು ಭಾಗವಹಿಸಲಿವೆ. ವೊಳಲಂಕೆ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಮೆಂಟ್-2023  ಅಕ್ಷರಶ: ಐಪಿಎಲ್ ವಾತಾವರಣವನ್ನೇ ಹೊತ್ತು ತರಲಿದೆ.  ಟೂರ್ನಮೆಂಟ್ ನ ದಿನಾಂಕಗಳನ್ನು ಶೀಘ್ರದಲ್ಲೇ ದೃಢೀಕರಿಸಲಾಗುವುದು.
ಆಯೋಜಕರಲ್ಲಿ ಪ್ರಮುಖರಾದ ಶ್ರೀಯುತ ರಮಾನಾಥ ಪೈ ಎಸ್. ವಿ. ಟಿ ಮುಲ್ಕಿ ಇವರ ಹೇಳಿಕೆ ಪ್ರಕಾರ ಈಗಾಗಲೇ ಮುಂಬೈ, ಕೊಚ್ಚಿನ್, ಹೈದರಾಬಾದ್, ಮಂಗಳೂರು, ಕೋಟೇಶ್ವರ, ಕೆದಿಂಜೆ ಕಾರ್ಕಳದ  ತಂಡಗಳು ಟೂರ್ನಮೆಂಟ್ ಗೆ ತಮ್ಮ ತಂಡಗಳನ್ನು ನೊಂದಾಯಿಸಿವೆ. . ಈ ಲೀಗ್‌ನಲ್ಲಿ ಒಟ್ಟು ಹದಿನಾರು ತಂಡಗಳು ಭಾಗವಹಿಸಲಿವೆ. ವಿಪಿಎಲ್ ಕ್ರಿಕೆಟ್ ಟೂರ್ನಮೆಂಟ್ ಗೆಲ್ಲುವ ತಂಡಕ್ಕೆ ಆಕರ್ಷಕ ಟ್ರೋಫಿಯೊಂದಿಗೆ ನಗದು ದೊರೆಯಲಿದೆ. ಇದರೊಂದಿಗೆ ಪ್ರತಿ ಪಂದ್ಯದ ಪಂದ್ಯಶ್ರೇಷ್ಟ, ಫೈನಲ್ ಪಂದ್ಯದ ಪಂದ್ಯಶ್ರೇಷ್ಟ, ಸರಣಿ ಶ್ರೇಷ್ಠ ಪ್ರಶಸ್ತಿಗಳೊಂದಿಗೆ ಇತರ ವಿಶೇಷ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುವುದು.
ಈ ಲೀಗ್ ನಲ್ಲಿ ಫ್ರ್ಯಾಂಚೈಸಿ ಮಾಲೀಕರಾಗಲು ಬಯಸುವವರು ತಮ್ಮ ಹೆಸರನ್ನು ನೋಂದಾಯಿಸಲು ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳ ವಿವರ ಇಲ್ಲಿದೆ.
ಪ್ರೀತಮ್ ಹೆಗಡೆ- 9945354052
ಶರತ್ ಪ್ರಭು-9538728375
ಸ್ಪೋರ್ಟ್ಸ್ ಕನ್ನಡದ ಪ್ರವರ್ತಕರು ಕೆ ಆರ್ ಕೆ ಆಚಾರ್ಯ ಮಾತನಾಡಿ  ವಿಪಿಎಲ್ ಕ್ರಿಕೆಟ್ ಟೂರ್ನಮೆಂಟ್ ಅದ್ದೂರಿಯಾಗಿ ನಡೆದು ಸಹಸ್ರಾರು ಕ್ರೀಡಾ ಪ್ರೇಮಿಗಳನ್ನು ರಂಜಿಸಲು ಗಮನ ಸೆಳೆಯುವಲ್ಲಿ ಯಶಸ್ವಿಯಾಗಲಿ ಎಂದಿದ್ದಾರೆ. ಆಯೋಜನೆ ಮಾಡುವ ಸಂಘಟಕರಿಗೆ ಅಭಿನಂದನೆ ಎಂದರು.
ವೊಳಲಂಕೆ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಅಸೋಸಿಯೇಷನ್ ಜಿ ಎಸ್ ಬಿ  ಟೆನಿಸ್ ಕ್ರಿಕೆಟ್​ನಲ್ಲಿ ಹೊಸದನ್ನು ಮುಂಚೂಣಿಗೆ ತರಲು ಉತ್ಸುಕರಾಗಿದ್ದಾರೆ. ಇದೀಗ ಮುಲ್ಕಿಯಲ್ಲಿ ಆರಂಭವಾಗುವ  ಜಿಎಸ್ ಬಿ ಸಮುದಾಯದ  ಪ್ರಮುಖ ಕ್ರಿಕೆಟ್ ಟೂರ್ನಿಯನ್ನು ನೋಡಿ ಆನಂದಿಸುವ ಕಾಲ ಕೂಡಿ ಬಂದಿದೆ.
ಶುರುವಾಗಲಿ ವಿಪಿಎಲ್ ಸಂಭ್ರಮ!
ಲೇಖಕರು
ಸುರೇಶ ಭಟ್, ಮುಲ್ಕಿ.
Categories
ಕ್ರಿಕೆಟ್

ಸುರತ್ಕಲ್ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್ (ರಿ.)-ಹಿರಿಯರ ಕ್ರಿಕೆಟ್ ಹಬ್ಬ ಮತ್ತೊಮ್ಮೆ-ಲೆಜೆಂಡ್ಸ್ ಕ್ರಿಕೆಟ್ ಲೀಗ್ ಸೀಸನ್-2

ಮಂಗಳೂರು- ಸುರತ್ಕಲ್ ಕ್ಷೇತ್ರದ ವಿವಿಧ ಕ್ರೀಡಾ ತಂಡ ಮತ್ತು ಸಂಸ್ಥೆಗಳ ಕ್ರೀಡಾಳುಗಳು ಮತ್ತು ಕ್ರೀಡಾ ಪ್ರೋತ್ಸಾಹಕರು ಸೇರಿ ಮಂಗಳೂರು ಉತ್ತರದ ACP ಅಧಿಕಾರಿ ಎಸ್.ಮಹೇಶ್ ಕುಮಾರ್ ರವರ ಚಿಂತನೆ ಮಾರ್ಗದರ್ಶನದೊಂದಿಗೆ ಹಿರಿಯ ಸಮಾಜ ಸೇವಕರು – ಧಾರ್ಮಿಕ ಮುಂದಾಳುಗಳಾದ ಮಹಾಬಲ ಪೂಜಾರಿ ಕಡಂಬೋಡಿಯವರ ಅಧ್ಯಕ್ಷತೆಯಲ್ಲಿ ಹುಟ್ಟು ಹಾಕಿರುವ ಸಂಸ್ಥೆ ಸುರತ್ಕಲ್ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್ (ರಿ.)  ಈ ಸಂಸ್ಥೆಯು ಆಯೋಜಿಸುತ್ತಿರುವ 40 ವರ್ಷ ಮೇಲ್ಪಟ್ಟ ಹಳೆಯ ಕ್ರಿಕೆಟ್ ಕಲಿಗಳ 12 ಅತ್ಯುತ್ತಮ  ಕ್ರಿಕೆಟ್ ತಂಡಗಳ ಲೀಗ್ ಮಾದರಿಯ ಪಂದ್ಯಾಕೂಟದ ಲಾಂಛನ ಮತ್ತು ಅಧಿಕೃತ ಘೋಷಣಾ ಸಮಾರಂಭ ಇತ್ತೀಚಿಗೆ ನಡೆಯಿತು.
40 ವರ್ಷ ಮೇಲ್ಪಟ್ಟ ಹಿರಿಯ ಆಟಗಾರರ ಲೆಜೆಂಡ್ಸ್ ಕ್ರಿಕೆಟ್ ಲೀಗ್  ಸೀಸನ್-2 ಕ್ರಿಕೆಟ್ ಟೂರ್ನಿಯು ಮೇ 27 ರಿಂದ ಶುರುವಾಗಲಿದೆ. ಮಂಗಳೂರು ಮತ್ತು ಸುರತ್ಕಲ್  ಪರಿಸರದ  ಮಾಜಿ ಆಟಗಾರರ ಈ ಟೂರ್ನಿಯಲ್ಲಿ ಹದಿನೆರಡು  ತಂಡಗಳು  ಕಣಕ್ಕಿಳಿಯಲಿವೆ.  ಈ ಟೂರ್ನಿಯು ಮೇ 27  ಮತ್ತು ಮೇ 28 ರಂದು ಸುರತ್ಕಲ್ ನ ಗೋವಿಂದದಾಸ್ ಕಾಲೇಜು ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ.
ಲೆಜೆಂಡ್ಸ್ ಕ್ರಿಕೆಟ್ ಲೀಗ್ ಸೀಸನ್-2 ಇದರ ಸಾಮಾಜಿಕ ಜಾಲತಾಣದ ಅಭಿಯಾನವನ್ನು ಸಂಸ್ಥೆಯ ಮಹಾಪೋಷಕರಾದ ACP ಮಹೇಶ್ ಕುಮಾರ್ ಮತ್ತು ಅಧ್ಯಕ್ಷರಾದ ಮಹಾಬಲ ಪೂಜಾರಿ ಕಡಂಬೋಡಿಯವರು ಬಿಡುಗಡೆಗೊಳಿಸಿದರು.
LCL 2023: ಲೆಜೆಂಡ್ಸ್ ಕ್ರಿಕೆಟ್ ಲೀಗ್ ನಲ್ಲಿ ಭಾಗವಹಿಸಲಿರುವ ಹದಿನೆರಡೂ ತಂಡಗಳ ಘೋಷಣೆಯಾಗಿದೆ. ಅದರಂತೆ ಹದಿನೆರಡೂ ತಂಡಗಳು  ಈ ಕೆಳಗಿನಂತಿವೆ.
ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನ ಸಂಸ್ಥಾಪಕ ಮತ್ತುಅಧ್ಯಕ್ಷರಾದ ಮಹಾಬಲ ಪೂಜಾರಿ ಕಡಂಬೋಡಿ ಈ ಬಗ್ಗೆ ಪ್ರತಿಕ್ರಿಯೆ ನೀಡಿ, “ನಮ್ಮ ಅಭಿಮಾನಿಗಳು ಮತ್ತು ವೀಕ್ಷಕರಿಗೆ ಕಾಯುವಿಕೆ ಮುಗಿದಿದೆ. ವೇಳಾಪಟ್ಟಿಯನ್ನು ಘೋಷಣೆ ಮಾಡಲಾಗಿದೆ. ಪಂದ್ಯಗಳಿಗೆ ಸಾಕ್ಷಿಯಾಗುವ ಬಗ್ಗೆ ಅಭಿಮಾನಿಗಳು ಇನ್ನು ಯೋಚಿಸಬಹುದು. ಶೀಘ್ರದಲ್ಲೇ ಮ್ಯಾಚ್ ಫಿಕ್ಚರ್ಸ್ ಬಗ್ಗೆ ಘೋಷಣೆ ಮಾಡಲಾಗುವುದು.” ಎಂದರು. “ಹೊಸ ಸ್ವರೂಪದಲ್ಲಿ 12 ತಂಡಗಳ ಐಕಾನಿಕ್ ಆಟಗಾರರ ತಂಡದೊಂದಿಗೆ, ಅಭಿಮಾನಿಗಳು ಈ ವರ್ಷ ರೋಚಕ ಪಂದ್ಯಗಳಿಗೆ ಸಾಕ್ಷಿಯಾಗಲಿದ್ದಾರೆ, ಈ ಬಾರಿ ಪಂದ್ಯಾವಳಿ ಮತ್ತಷ್ಟು ಉತ್ತಮವಾಗಿರುತ್ತದೆ ಎಂದು ನನಗೆ ಖಾತ್ರಿಯಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದು  LCLನ ಎರಡನೆಯ ಆವೃತ್ತಿ. ಕಳೆದ ಋತುವಿನಲ್ಲಿ ಮೊದಲನೆಯ ಆವೃತ್ತಿಯು ಯಶಸ್ವಿಯಾಗಿ, ಸಂಭ್ರಮದಿಂದ ನಡೆದಿತ್ತು. ಸೀಸನ್ 1 ನಲ್ಲಿ ಟೀಮ್ ಸೂಪರ್ ಕಾಪ್ಸ್ ಚಾಂಪಿಯನ್ ತಂಡವಾಗಿತ್ತು. ಫ್ರೆಂಡ್ಸ್ ಸರ್ಕಲ್ ಸುರತ್ಕಲ್ ರನ್ನರ್ ಅಪ್ ಪ್ರಶಸ್ತಿಯನ್ನು ಪಡೆದಿತ್ತು. ಕಳೆದ ಬಾರಿ 8 ತಂಡಗಳು ಭಾಗವಹಿಸಿತ್ತು. ಆದರೆ ಈ ಸಲ 12 ತಂಡಗಳ ಹಿರಿಯ ಸೇನಾನಿಗಳ ಕ್ರಿಕೆಟ್ ಆಟದ ಹೋರಾಟ ನೋಡುವ ಒಂದು ಅದ್ಭುತ ಅವಕಾಶ ಇದು ಗತ ವೈಭವದ ಮರು ಸ್ರಷ್ಟಿ.
ಪ್ರಥಮ ಬಹುಮಾನ ಟ್ರೋಫಿ ಹಾಗೂ ನಗದು ₹ 1,00,001/-
ದ್ವಿತೀಯ ಬಹುಮಾನ ಟ್ರೋಫಿ ಹಾಗೂ ನಗದು ₹ 50,005/-
ಲೆಜೆಂಡ್ಸ್ ಲೀಗ್ ಕ್ರಿಕೆಟ್ ಪಂದ್ಯಾವಳಿಯ ಲೈವ್ ಸ್ಟ್ರೀಮಿಂಗ್  ಬೆದ್ರಾ ಮೀಡಿಯಾ ಯೂ ಟ್ಯೂಬ್ ಲೈವ್‌ ನಲ್ಲಿ ವೀಕ್ಷಿಸಬಹುದಾಗಿದೆ..
ಟೂರ್ನಮೆಂಟ್ ಕಮಿಟಿಯ  ಸದಸ್ಯರುಗಳಾದ ಅನಂತ್ ರಾಜ್ ಶೆಟ್ಟಿಗಾರ್ ಮತ್ತು ಪದ್ಮನಾಭ ಕರ್ಕೇರ ತಡಂಬೈಲ್ ಟೂರ್ನಮೆಂಟ್ ನ ಮಾಹಿತಿಗಳನ್ನು ಸ್ಪೋರ್ಟ್ಸ್ ಕನ್ನಡ ಸುದ್ದಿ ವಾಹಿನಿಗೆ ನೀಡಿದರು.
ಸ್ಪೋರ್ಟ್ಸ್ ಕನ್ನಡದ ಪ್ರಧಾನ ಸಂಪಾದಕರು  ಕೋಟ ರಾಮಕೃಷ್ಣ ಆಚಾರ್ಯ ಮಾತನಾಡಿ, ” ಸುರತ್ಕಲ್ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್ (ರಿ.) ಆಶ್ರಯದಲ್ಲಿ ನಡೆಯಲಿರುವ  40 ವರ್ಷ ಮೇಲ್ಪಟ್ಟ ಹಿರಿಯ ಲೆಜೆಂಡ್ಸ್ ಕ್ರಿಕೆಟ್ ಆಟಗಾರರಿಗಾಗಿ ಹಿರಿಯರ ಕ್ರಿಕೆಟ್ ಹಬ್ಬ ಪಂದ್ಯಾವಳಿಯನ್ನು ಏರ್ಪಡಿಸಿರುವುದು ಹೆಮ್ಮೆಯ ವಿಚಾರ ಎಂದು  ಸಂತಸ ವ್ಯಕ್ತಪಡಿಸಿದ್ದಾರೆ.
ಶುಭಾಶಯಗಳೊಂದಿಗೆ,
ಸುರೇಶ ಭಟ್ ಮೂಲ್ಕಿ
LCL ವೀಕ್ಷಕ ವಿವರಣೆಗಾರರು
Categories
ಕ್ರಿಕೆಟ್

ಎ.ಜೆ ಕಾರ್ಪೊರೇಟ್ ಪ್ರೀಮಿಯರ್ ಲೀಗ್-ಮಂಗಳೂರಿನ ಎ.ಜೆ.ರಾಯಲ್ಸ್ ಚಾಂಪಿಯನ್ಸ್

ಮಂಗಳೂರು-ಎ.ಜೆ ಕಾರ್ಪೊರೇಟ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಮೆಂಟ್ 2023 ರ ಮೊದಲನೇಯ ಆವೃತ್ತಿಯು ವಾರಾಂತ್ಯದಲ್ಲಿ ಮಂಗಳೂರಿನ ಎ ಜೆ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಮೈದಾನದಲ್ಲಿ ನಡೆಯಿತು.
ಎ.ಜೆ. ರಾಯಲ್ಸ್ ತಂಡವು ಟೀಮ್ ಮಣಿಪಾಲ ವಿರುದ್ಧದ ಫೈನಲ್‌ನಲ್ಲಿ ವೀರೋಚಿತ ಜಯ ದಾಖಲಿಸಿತು. ಸಂಘಟಕರಾದ ಡಾಕ್ಟರ್ ಶರಣ್ ಜೆ ಶೆಟ್ಟಿಯವರ  ಎ.ಜೆ. ರಾಯಲ್ಸ್  ಸೇರಿದಂತೆ   16 ಕ್ಕೂ ಹೆಚ್ಚು ಕಾರ್ಪೊರೇಟ್ ತಂಡಗಳು ಕಾರ್ಪೊರೇಟ್ ಕ್ರಿಕೆಟ್  ಟೂರ್ನಮೆಂಟ್‌ನಲ್ಲಿ ಚಾಂಪಿಯನ್ ಪ್ರಶಸ್ತಿಗಾಗಿ ಸ್ಪರ್ಧಿಸಿದವು, ಎ.ಜೆ. ರಾಯಲ್ಸ್ ತಂಡ  ತಾನು ಆಡಿದ ಎಲ್ಲಾ ಪಂದ್ಯಗಳನ್ನು ಗೆದ್ದುಕೊಂಡು ಅಂತಿಮ ಸುತ್ತಿಗೆ ಪ್ರವೇಶಿಸಿತು ಮತ್ತು  ಪ್ರತಿಷ್ಠಿತ  ಎ.ಜೆ ಕಾರ್ಪೊರೇಟ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಮೆಂಟ್ ಟ್ರೋಫಿಯನ್ನು ಮುಡಿಗೇರಿಸಿತು.
ವಾರಾಂತ್ಯದಲ್ಲಿ ಎರಡು ದಿನಗಳ ಕಾಲ  ಲೀಗ್ ಪಂದ್ಯಗಳು, ಕ್ವಾರ್ಟರ್ ಫೈನಲ್ ನಾಕೌಟ್ ಪಂದ್ಯಗಳು  ಮತ್ತು ಸೆಮಿ-ಫೈನಲ್‌ಗಳನ್ನು  ಟೂರ್ನಮೆಂಟ್‌ ಒಳಗೊಂಡಿತ್ತು, ಪಂದ್ಯಾವಳಿಯ ಭಾಗವಾಗಿ, ನಾಕೌಟ್ ಸುತ್ತಿಗೆ ಅರ್ಹತೆ ಪಡೆಯಲು ಪ್ರತಿ ಭಾಗವಹಿಸುವ ತಂಡವು ಮೂರು ಲೀಗ್ ಪಂದ್ಯಗಳನ್ನು ಆಡಬೇಕಾಗಿತ್ತು, ನಂತರ ಸೆಮಿಫೈನಲ್ ಮತ್ತು ಗ್ರ್ಯಾಂಡ್ ಫೈನಲ್ ಪಂದ್ಯಕ್ಕೆ ಹೋರಾಡಲು ನಾಲ್ಕು ತಂಡಗಳನ್ನು ಆಯ್ಕೆ ಮಾಡಲಾಯಿತು . ಡಾಕ್ಟರ್ ವಿನೋದ್ ನಾಯಕ್ ನೇತೃತ್ವದ ಟೀಮ್ ಮಣಿಪಾಲ ತಂಡವು ಸೆಮಿ ಫೈನಲ್ ನಲ್ಲಿ ಮಣಿಪಾಲ್ ಟೆಕ್ನಾಲಜೀಸ್ ಲಿಮಿಟೆಡ್ ತಂಡವನ್ನು ರೋಚಕ ಸೆಮಿ ಫೈನಲ್ ಪಂದ್ಯದಲ್ಲಿ ಪರಾಭವಗೊಳಿಸಿತು. ಎ ಜೆ ರಾಯಲ್ಸ್ ತಂಡವು ಎಂ ಸಿ ಎಫ್ ಕ್ರಿಕೆಟ್ ಕ್ಲಬ್ ತಂಡವನ್ನು ಸೋಲಿಸಿ ಫೈನಲ್ ಪ್ರವೇಶಿಸಿತ್ತು. ನಂತರ ನಡೆದ ಫೈನಲ್ ಪಂದ್ಯವು ಪ್ರೇಕ್ಷಕರನ್ನುಮೈದಾನದಲ್ಲಿ  ಬೇರೂರಿಸಿತು. ಎ.ಜೆ. ರಾಯಲ್ಸ್ ನ ಪ್ರಮುಖ ಆಟಗಾರ ಲೋಕೇಶ್ (ಲೋಕಿ ಪುತ್ತೂರು ) ಟೂರ್ನಮೆಂಟ್ನ ಉದ್ದಕ್ಕೂ ಅತ್ಯದ್ಭುತವಾಗಿ ಆಡಿ ತನ್ನ ಸಾಹಸವನ್ನು ತೋರ್ಪಡಿಸಿ ನೆರೆದಿದ್ದ ಪ್ರೇಕ್ಷಕರನ್ನು ಮೂಕ ವಿಸ್ಮಿತರನ್ನಾಗಿ ಮಾಡಿದರು. ಡೇ ಅಂಡ್ ನೈಟ್ ರೂಪದಲ್ಲಿ ನಡೆದ ಟೂರ್ನಮೆಂಟ್ ಅದ್ಭುತವಾಗಿ  ಮುಕ್ತಾಯ ಕಂಡಿತು.
ನೇರ ಪಂದ್ಯಗಳು ಮತ್ತು ಸ್ಕೋರ್‌ಕಾರ್ಡ್ ಅನ್ನು ಪ್ರಸಾರ ಮಾಡಲು ದೊಡ್ಡ ಡಿಜಿಟಲ್ ಪರದೆಯು ಸ್ಥಳದಲ್ಲಿತ್ತು. ಸ್ಥಳಕ್ಕೆ ಬರಲು ಸಾಧ್ಯವಾಗದ ಕ್ರಿಕೆಟ್ ಉತ್ಸಾಹಿಗಳಿಗಾಗಿ ಪಂದ್ಯಗಳನ್ನು M9  ಸ್ಪೋರ್ಟ್ಸ್ ಯೂಟ್ಯೂಬ್‌ನಲ್ಲಿ ನೇರ ಪ್ರಸಾರ ಮಾಡಲಾಯಿತು. ಡ್ಯಾನ್ಸಿಂಗ್ ಅಂಪೈರ್ ಮದನ್ ಮಡಿಕೇರಿ, ದೀಕ್ಷಿತ್ ಮಂಗಳೂರು, ಪ್ರಭಾಕರ್ ಉಜಿರೆ ಮತ್ತು ಸ್ವರೂಪ್ ತೀರ್ಥಹಳ್ಳಿ ಟೂರ್ನಮೆಂಟ್ ನ ತೀರ್ಪುಗಾರರಾಗಿದ್ದರು. ಅರವಿಂದ ಮಣಿಪಾಲ ಮತ್ತು ಸುರೇಶ್ ಭಟ್ ಮುಲ್ಕಿ ವೀಕ್ಷಕ ವಿವರಣೆಯನ್ನು ನೀಡಿದರು.
ಮಹಿಳಾ ತಂಡಗಳ ನಡುವೆ ಕೂಡಾ ರೋಚಕ ಮಹಿಳಾ ಕ್ರಿಕೆಟ್ ಪಂದ್ಯವೂ ನಡೆಯಿತು.
ಪಂದ್ಯಾವಳಿಯ ನಂತರ ಮಾತನಾಡಿದ ಆಯೋಜಕರಲ್ಲಿ ಪ್ರಮುಖರಾದ  ಡಾ. ಶರಣ್ ಜೆ ಶೆಟ್ಟಿ ಭವಿಷ್ಯದಲ್ಲಿ ಪ್ರತಿವರ್ಷವೂ ಕೂಡಾ ಈ ರೀತಿಯ ಟೂರ್ನಮೆಂಟ್ ನಡೆಯಲಿದೆ ಮತ್ತು ಹೆಚ್ಚಿನ ತಂಡಗಳ ಭಾಗವಹಿಸುವಿಕೆಗಾಗಿ ನಾವು ಆಶಿಸುತ್ತೇವೆ ಎಂದರು. ಡಾಕ್ಟರ್ ಸಾಕ್ಷಾತ್ ರೈ ಟೂರ್ನಮೆಂಟ್ ಯಶಸ್ವಿಯಾಗಿ ನಡೆಯುವಲ್ಲಿ ಸಹಕರಿಸಿದರು.
ಸುರೇಶ್ ಭಟ್ ಮೂಲ್ಕಿ
ಸ್ಪೋರ್ಟ್ಸ್ ಕನ್ನಡ.
Categories
ಕ್ರಿಕೆಟ್

ಎಲ್ಲೋ ಆರ್ಮಿ ಮತ್ತು ಧೋನಿ ಎಂಬ ಲೆಜೆಂಡ್!

ಐಪಿಎಲ್ ಕಣದಲ್ಲಿ ಚೆನ್ನೈ ತಂಡ ಈ ಬಾರಿ ಶಿಖರದಲ್ಲಿ! 
———————————-
2023ರ ಐಪಿಎಲ್ ಕೂಟವು ಈಗ ರೋಮಾಂಚನದ ಶಿಖರ ಮುಟ್ಟಿದ್ದು  ಸೋಮವಾರದ ಪಂದ್ಯ ಮುಗಿದಾಗ ಚೆನ್ನೈ ಸೂಪರ್ ಕಿಂಗ್ಸ್( CSK)  ತಂಡವು ಪಾಯಿಂಟ್ ಪಟ್ಟಿಯಲ್ಲಿ ಮೊದಲ ಪ್ಲೇಸಲ್ಲಿ ಬಂದು ಕೂತಿದೆ! ಒಟ್ಟು ಏಳು ಪಂದ್ಯಗಳಲ್ಲಿ ಐದು ಪಂದ್ಯ ಗೆದ್ದಿರುವ ‘ವಿಸಿಲ್ ಪೋಡು’  ತಂಡವು ಹತ್ತು ಅಂಕಗಳ ಜೊತೆಗೆ ಪಾಯಿಂಟ್ ಟೇಬಲಿನ ಟಾಪನಲ್ಲಿ  ಬಂದು ಕೂತಿದೆ!
ಯಾವ ತಂಡವನ್ನು ಅಂಕಲ್ ಗಳ ತಂಡ ಎಂದು ಕ್ರಿಕೆಟ್ ಪಂಡಿತರು ಟೀಕೆ ಮಾಡಿದ್ದರೋ ಆ ತಂಡದಲ್ಲಿ ಈಗ ವಿದ್ಯುತ್ಸಂಚಾರ ಆರಂಭವಾದ ಹಾಗೆ ಕಾಣುತ್ತಿದೆ. ಅದಕ್ಕೆ ಕಾರಣ ಲೆಜೆಂಡ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಅನ್ನುವುದರಲ್ಲಿ ಯಾವ ಸಂದೇಹವೂ ಇಲ್ಲ!
ಚೆನ್ನೈ ತಂಡದಲ್ಲಿ ಯಾವ ಸ್ಟಾರ್ ಆಟಗಾರ ಕೂಡ ಇಲ್ಲ!
——————————
2008ರಿಂದಲೂ ಐಪಿಎಲ್ ಆಡುತ್ತ ಬಂದಿರುವ ಧೋನಿ ಇಂದು ಕ್ರಿಕೆಟಿನ ಆರಾಧ್ಯ ದೇವರಾಗಿ ರೂಪುಗೊಂಡಿದ್ದಾರೆ. ಯಾವುದೇ ದೊಡ್ಡ ಸ್ಟಾರ್ ಆಟಗಾರರು ಇಲ್ಲದ ಕೇವಲ ಸಾಮಾನ್ಯ ಆಟಗಾರರನ್ನು ಹೊಂದಿರುವ CSK ತಂಡವನ್ನು ಧೋನಿ ತನ್ನ ಮಾಂತ್ರಿಕ ಸ್ಪರ್ಶದ ಮೂಲಕ ಕಟ್ಟಿ ನಿಲ್ಲಿಸಿದ್ದು ಸಾಮಾನ್ಯ ಸಂಗತಿ ಅಲ್ಲ! ಇವತ್ತಿಗೂ ಆ ತಂಡಕ್ಕೆ ಧೋನಿಯೇ ಪ್ರೇರಣೆ ಮತ್ತು ಸ್ಫೂರ್ತಿ!
41 ವರ್ಷದ ಧೋನಿ ಇಂದಿಗೂ ಉಳಿಸಿಕೊಂಡಿರುವ ಕ್ರಿಯಾಶೀಲತೆ, ಚರಿಷ್ಮ, ಖದರು ಮತ್ತು ಫಿಟ್ನೆಸ್ ಯಾರಿಗೂ ಸಾಧ್ಯವಾಗದ ಮಾತು. ಧೋನಿಗೆ ಅದು ಸಾಧ್ಯವಾಗಿದೆ ಎಂದರೆ ಅದು ಕ್ರಿಕೆಟ್ ಬಗ್ಗೆ ಅವರಿಗೆ ಇರುವ ಪ್ಯಾಶನ್ ಮತ್ತು ಬದ್ಧತೆಗಳ ಮೊತ್ತ ಎಂದು ನನ್ನ ಭಾವನೆ. ವಿಕೆಟಿನ ಹಿಂದೆ ತಾಳ್ಮೆಯ ಪರ್ವತವಾಗಿ ಧೋನಿ ನಿಂತಿದ್ದಾರೆ ಅಂದರೆ ಇಡೀ CSK ತಂಡದ ಪ್ರತಿಯೊಬ್ಬ ಆಟಗಾರನೂ ತನ್ನ ತಂಡಕ್ಕಾಗಿ 200% ಕೊಡಲು ಸಿದ್ಧವಾಗುತ್ತಾರೆ!
ಐಪಿಎಲ್ ಇತಿಹಾಸದ ಲೆಜೆಂಡ್ ಆಟಗಾರ!
——————————— ಇಷ್ಟೊಂದು ಪ್ರೀತಿ ಮತ್ತು ಗೌರವ ಪಡೆದುಕೊಂಡ ಇನ್ನೊಬ್ಬ ಕ್ರಿಕೆಟರ್ ನಿಮಗೆ, ನಮಗೆ ಸಿಗಲು ಸಾಧ್ಯವೇ ಇಲ್ಲ! ಭಾರತದ ಯಾವ ಸ್ಟೇಡಿಯಮನಲ್ಲಿ CSK ಆಡುತ್ತಿದೆ ಅಂತಾದರೂ ಇಡೀ ಸ್ಟೇಡಿಯಂ ಹಳದಿ ಬಣ್ಣಕ್ಕೆ ತಿರುಗುತ್ತದೆ ಮತ್ತು ಚೆನ್ನೈ ತಂಡದ ಬೆಂಬಲಕ್ಕೆ ನಿಲ್ಲುತ್ತದೆ. ಕೋಲ್ಕತ್ತಾದಲ್ಲಿ ಮೊನ್ನೆ ನಡೆದ ಪಂದ್ಯದಲ್ಲಿ ಸೇರಿದ ಬಹುಪಾಲು ಜನರು ತಮ್ಮದೇ KKR ತಂಡವನ್ನು ಮರೆತು CSK ತಂಡದ ಬೆಂಬಲಕ್ಕೆ ನಿಂತಿದ್ದರು! ಇದಕ್ಕೆ ಕಾರಣ ಧೋನಿ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ!
ಧೋನಿಯ ಈ ರೀತಿಯ ಜನಪ್ರಿಯತೆಗೆ ಕಾರಣವೇನು?
——————————
ಈ ಪ್ರಶ್ನೆಗೆ ನಾವು ನೂರಾರು ಕಾರಣಗಳನ್ನು ಪಟ್ಟಿ ಮಾಡಬಹುದು. ಭಾರತಕ್ಕಾಗಿ 2004ರಿಂದ 2019ರವರೆಗೆ ಧೋನಿ ಆಡಿದ ವೀರೋಚಿತವಾದ  ಇನ್ನಿಂಗ್ಸಗಳನ್ನು ಭಾರತೀಯರು ಮರೆಯಲು ಸಾಧ್ಯವೇ ಇಲ್ಲ. ಭಾರತ ಕಂಡ ಅತ್ಯಂತ ಯಶಸ್ವೀ ಕ್ಯಾಪ್ಟನ್ ಅಂದರೆ ಅದು ಧೋನಿ ಮತ್ತು ಧೋನಿ ಮಾತ್ರ! ಭಾರತಕ್ಕೆ ಮೂರು ವಿಶ್ವಮಟ್ಟದ ಟ್ರೋಫಿಗಳನ್ನು ಗೆಲ್ಲಿಸಿಕೊಟ್ಟ ಏಕೈಕ ಕ್ಯಾಪ್ಟನ್ ಆತ. 2007ರ T20 ವಿಶ್ವ ಕಪ್, 2011ರ ಸ್ಮರಣೀಯ ODI ವಿಶ್ವಕಪ್, 2013ರ ಚಾಂಪಿಯನ್ ಟ್ರೋಫಿ ಇವುಗಳನ್ನು ಗೆಲ್ಲಿಸಿಕೊಟ್ಟ ಕ್ಯಾಪ್ಟನ್ ಧೋನಿ!
ಒಬ್ಬ ಕ್ಯಾಪ್ಟನ್ ಆಗಿ ಆತನು ತನ್ನ ತಂಡದಲ್ಲಿ  ಟೀಮ್ ಸ್ಪಿರಿಟ್ ತುಂಬಿಸುವುದು, ಒತ್ತಡ ನಿರ್ವಹಣೆ ಮಾಡುವುದು, ಎಳೆಯರ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು, ಗೆಲ್ಲುವ ತಂತ್ರಗಾರಿಕೆ ರೂಪಿಸುವುದು, ಕೊನೆಯ ಚೆಂಡಿನವರೆಗೆ ಸೋಲನ್ನು ಒಪ್ಪಿಕೊಳ್ಳದೆ ಇರುವುದು, ಗ್ರೌಂಡಿನಲ್ಲಿ ಒಂದಿಷ್ಟೂ ತಾಳ್ಮೆ ಕೆಡದೇ ಪರ್ವತವಾಗಿ ನಿಲ್ಲುವುದು, ಎದುರಾಳಿ ಆಟಗಾರರನ್ನು ಕೂಡ ಗೌರವದಿಂದ ಕಾಣುವುದು… ಹೀಗೆ ಧೋನಿ ಬೇರೆ ಕ್ಯಾಪ್ಟನಗಳಿಗಿಂತ ಭಾರೀ ಎತ್ತರದಲ್ಲಿ ನಿಲ್ಲುತ್ತಾರೆ.
41ನೆಯ ವಯಸ್ಸಿನಲ್ಲಿ ಆತನ ಫಿಟ್ನೆಸ್ ಅದು ನಿಜಕ್ಕೂ ಅದ್ಭುತ! ವಿಕೇಟಿನ ಹಿಂದೆ ಚಿರತೆಯ ಚುರುಕುತನ ತೋರುವ ಧೋನಿ ರನ್ನಿಗಾಗಿ ವಿಕೆಟ್ ನಡುವೆ ಓಡುವಾಗ ಹದಿಹರೆಯದ ಆಟಗಾರರನ್ನು ನಾಚಿಸುತ್ತಾರೆ! ಅದು ಧೋನಿಯ ಸ್ಪೆಷಾಲಿಟಿ.
DSR ಸಕ್ಸಸ್ ರೇಟನಲ್ಲಿ CSK ತಂಡವು ( 85.15%) ಹೊಂದಿದೆ ಅಂದರೆ ಅದಕ್ಕೆ ಕಾರಣ ಧೋನಿಯೇ! ಯಾವ ಗ್ರೌಂಡಿನಲ್ಲಾದರೂ ಧೋನಿ ಒಂದೆರಡು ಬಾಲ್ ಆದರೂ ಆಡಲಿ, ಒಂದಾದರೂ ಹೆಲಿಕಾಪ್ಟರ್ ಶಾಟ್ ಹೊಡೆಯಲಿ ಎಂದು ಜಗತ್ತಿನಾದ್ಯಂತ ಕ್ರಿಕೆಟ್ ಅಭಿಮಾನಿಗಳು ಕಾಯುತ್ತಾರೆ ಅಂದರೆ ಧೋನಿಯ ಜನಪ್ರಿಯತೆ ಯಾರಿಗಾದರೂ ಅರ್ಥ ಆಗುತ್ತದೆ. ಚೆನ್ನೈ ಆಡುವ ಪ್ರತೀ ಐಪಿಎಲ್ ಪಂದ್ಯದ ಆರಂಭದಿಂದ ಅಂತ್ಯದವರೆಗೆ ಸ್ಟೇಡಿಯಮನಲ್ಲಿ ಸಮುದ್ರದ ಘೋಷದ ಹಾಗೆ ಕೇಳಿ ಬರುವ ಉದ್ಘೋಷ ಅದೊಂದೇ ಧೋನಿ, ಧೋನಿ, ಧೋನಿ!
CSK ತಂಡದ ಕ್ರಿಕೆಟ್ ಯೋಧರು!
——————————
ಧೋನಿ 2008ರಿಂದಲೂ ಕ್ಯಾಪ್ಟನ್ ಆಗಿರುವ CSK ತಂಡದ (ಎರಡು ವರ್ಷ ಧೋನಿ ರೈಸಿಂಗ್ ಪುಣೆ ಸೂಪರ್ ಜಯಂಟ್ಸ್ ತಂಡದ ಪರವಾಗಿ ಆಡಬೇಕಾಯಿತು) ಆತ್ಮಬಲವನ್ನು ಹೆಚ್ಚಿಸುತ್ತ ಬಂದಿದ್ದಾರೆ. 2010, 2011, 2018, 2021ರಲ್ಲಿ ಹೀಗೆ ನಾಲ್ಕು ಬಾರಿ ಐಪಿಎಲ್ ಚಾಂಪಿಯನ್ ಆಗಿರುವ ತಂಡ ಅದು.
2023ರಲ್ಲಿ CSK ತಂಡದ ಸಾಮಾನ್ಯರಲ್ಲಿ ಸಾಮಾನ್ಯ ಆಟಗಾರರೂ ಮಿಂಚುತ್ತಿದ್ದಾರೆ. ಕೇವಲ 50 ಲಕ್ಷಕ್ಕೆ ಖರೀದಿ ಆಗಿದ್ದ  ಅಜಿಂಕ್ಯ ರಹಾನೆ ರನ್ ಮಳೆಯನ್ನೇ ಸುರಿಸುತ್ತಿದ್ದಾರೆ! ಕ್ರಿಕೆಟಿನ ಮೂರೂ ಫಾರ್ಮ್ಯಾಟಗಳಲ್ಲಿ ವಿಫಲ ಆಟಗಾರ ಎಂದೇ ಬಿಂಬಿತವಾಗಿದ್ದ ರಹಾನೆ ಈ ಬಾರಿ ಕಿಚ್ಚು ಹಚ್ಚುವ ಆಟಗಾರ ಆಗಿದ್ದಾರೆ! ಧೋನಿಯ ನಂಬಿಕೆಯ ಓಪನರ್ ಋತುರಾಜ್ ಡ್ರೀಮ್ ಓಪನಿಂಗ್ ಕೊಡುತ್ತಿದ್ದಾರೆ. ಬೇರೆ ಫ್ರಾಂಚೈಸಿ ಟೀಮಗಳಲ್ಲಿ ವಿಫಲರಾಗುತ್ತಿದ್ದ ಶಿವಂ ದುಬೇ, ಅಂಬಾಟಿ ರಾಯುಡು ವಸ್ತುಶಃ ಸುಂಟರಗಾಳಿ ಇನ್ನಿಂಗ್ಸ್ ಕಟ್ಟುತ್ತಿದ್ದಾರೆ. ಮೋಯಿನ್ ಆಲಿ, ರವೀಂದ್ರ ಜಡೇಜಾ, ಡೆವೊನ್ ಕಾನ್ವೆ, ದೀಪಕ್ ಚಹರ್, ಪ್ರೀಟೋರಿಯಸ್, ಸಾನಟ್ನರ್, ತೀಕ್ಷಣ ಎಲ್ಲರೂ ಗೆಲ್ಲುವ ಇನ್ನಿಂಗ್ಸ್ ಆಡುತ್ತಿದ್ದಾರೆ. ತುಷಾರ್ ದೇಶಪಾಂಡೆ, ಪತಿರಾಣಾ ಮೊದಲಾದ ಹೊಸ ಮುಖಗಳು ಧೋನಿ ಕೊಟ್ಟ ಪ್ರತೀ ಒಂದು ಅವಕಾಶವನ್ನು ಸೂಕ್ತವಾಗಿ ಬಳಸಿಕೊಳ್ಳುತ್ತಿದ್ದಾರೆ.
ಒಟ್ಟಿನಲ್ಲಿ ಎಲ್ಲೋ ಆರ್ಮಿಯ ಪ್ರತಿಯೊಬ್ಬ ಆಟಗಾರನೂ ಈ ಬಾರಿ ಐಪಿಎಲ್ ಟ್ರೋಫಿಯನ್ನು  ಗೆಲ್ಲುವುದರ ಮೂಲಕ ಧೋನಿಗೆ ಗೆಲುವಿನ ವಿದಾಯ ಕೊಡಬೇಕು ಎನ್ನುವ ಸಂಕಲ್ಪದ ಜೊತೆಗೆ ಆಡುತ್ತಿದ್ದಾರೆ. ಹಾಗೆ ಈ ಬಾರಿಯ ಅದ್ಭುತ ಫಲಿತಾಂಶಗಳು ನಮ್ಮ ಕಣ್ಣ ಮುಂದಿವೆ.
ಮುಂದೆ ಎಷ್ಟು ವರ್ಷ ಐಪಿಎಲ್ ಕೂಟ ಇರುತ್ತದೆಯೋ ಅಲ್ಲಿಯವರೆಗೆ ಮಹೇಂದ್ರ ಸಿಂಗ್ ದೋನಿ ಹೆಸರು ಶಾಶ್ವತ ಆಗಿರುತ್ತದೆ ಅನ್ನೋದೇ ಭರತ ವಾಕ್ಯ!
Categories
ಕ್ರಿಕೆಟ್

RCB vs RR: ಮತ್ತೆ ಕೊಹ್ಲಿ ನಾಯಕತ್ವದ ಮ್ಯಾಜಿಕ್, ರೋಚಕ ಪಂದ್ಯದಲ್ಲಿ ರಾಜಸ್ಥಾನವನ್ನು ಸೋಲಿಸಿದ RCB; ಹಸಿರು ನೀಡಿತು ಆರ್ ಸಿ ಬಿ ಗೆ ಜಯದ ಉಸಿರು

ಆರ್‌ಸಿಬಿ ತವರು ನೆಲದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಸೋಲಿಸಿತು. ರೋಚಕ ಪಂದ್ಯದಲ್ಲಿ ಆರ್‌ಸಿಬಿ ತಂಡ ರಾಜಸ್ಥಾನ್ ರಾಯಲ್ಸ್ ತಂಡವನ್ನು 7 ರನ್‌ಗಳಿಂದ ಸೋಲಿಸಿತು. ಕೊಹ್ಲಿ ನಾಯಕತ್ವದಲ್ಲಿ ತಂಡಕ್ಕೆ ಈ ಋತುವಿನಲ್ಲಿ ಸತತ ಎರಡನೇ ಗೆಲುವು ದಾಖಲಿಸುವ ಅವಕಾಶ ಸಿಕ್ಕಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ಕಳಪೆ ಆರಂಭ ಪಡೆಯಿತು. ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಖಾತೆ ತೆರೆಯದೆ ಗೋಲ್ಡನ್ ಡಕ್‌ನಲ್ಲಿ ಔಟಾದರು. ಟ್ರೆಂಟ್ ಬೌಲ್ಟ್ ಅವರಿಗೆ ಪೆವಿಲಿಯನ್ ಹಾದಿ ತೋರಿಸಿದರು. ಅವರ ನಂತರ ಶಹಬಾಜ್ ಅಹ್ಮದ್ ಅವರನ್ನು ಬ್ಯಾಟಿಂಗ್‌ಗೆ ಕಳುಹಿಸಲಾಯಿತು ಆದರೆ ಅವರು ಕೂಡ ತಮ್ಮ ವೈಯಕ್ತಿಕ ಸ್ಕೋರ್ 2 ರನ್‌ಗಳಲ್ಲಿ ಮುಂದುವರೆದರು.
ಫಾಫ್ ಡು ಪ್ಲೆಸಿಸ್ ಮತ್ತು ಮ್ಯಾಕ್ಸ್‌ವೆಲ್ ಇಲ್ಲಿಂದ ಸಿಡಿದರು. ಇವರಿಬ್ಬರು ಮೂರನೇ ವಿಕೆಟ್‌ಗೆ ಶತಕದ ಜೊತೆಯಾಟ ನಡೆಸಿದರು. ಡು ಪ್ಲೆಸಿಸ್ ಋತುವಿನ ಐದನೇ ಅರ್ಧಶತಕ ಗಳಿಸಿದರು. 39 ಎಸೆತಗಳಲ್ಲಿ 62 ರನ್ ಗಳಿಸಿ ಔಟಾದರು. ಬಿರುಸಿನ ಬ್ಯಾಟಿಂಗ್ ಮಾಡುವಾಗ ಮ್ಯಾಕ್ಸ್‌ವೆಲ್ 44 ಎಸೆತಗಳಲ್ಲಿ 77 ರನ್ ಗಳಿಸಿದರು. ಇದಾದ ಬಳಿಕ ಆರ್‌ಸಿಬಿ ತತ್ತರಿಸಿತು.ದಿನೇಶ್ ಕಾರ್ತಿಕ್ 13 ಎಸೆತಗಳಲ್ಲಿ 16 ರನ್ ಗಳಿಸಿದರು. ಇತರ ಬ್ಯಾಟ್ಸ್‌ಮನ್‌ಗಳು ಒಬ್ಬರ ನಂತರ ಒಬ್ಬರಂತೆ ಔಟಾಗುತ್ತಲೇ ಇದ್ದರು. ಅಂತಿಮವಾಗಿ ಆರ್‌ಸಿಬಿ 9 ವಿಕೆಟ್‌ಗೆ 189 ರನ್ ಗಳಿಸಿತು. ರಾಜಸ್ಥಾನ್ ರಾಯಲ್ಸ್ ಪರ ಟ್ರೆಂಟ್ ಬೌಲ್ಟ್ ಮತ್ತು ಸಂದೀಪ್ ಶರ್ಮಾ ಹೆಚ್ಚು ವಿಕೆಟ್ ಪಡೆದರು. ಇಬ್ಬರೂ 2-2 ವಿಕೆಟ್ ಪಡೆದರು.
ಗುರಿ ಬೆನ್ನಟ್ಟಿದ ರಾಯಲ್ಸ್ ಕಳಪೆ ಆರಂಭ ಪಡೆಯಿತು. ಮೊದಲ ಓವರ್‌ನ ಮೂರನೇ ಎಸೆತದಲ್ಲಿ ಜೋಸ್ ಬಟ್ಲರ್ ಸಿರಾಜ್‌ಗೆ ಬಲಿಯಾದರು. ಅವರು ತಮ್ಮ ಖಾತೆಯನ್ನು ಕಳೆದುಕೊಳ್ಳಲು ಸಹ ಸಾಧ್ಯವಾಗಲಿಲ್ಲ. ಇಲ್ಲಿಂದ ಯಶಸ್ವಿ ಜೈಸ್ವಾಲ್ ಮತ್ತು ದೇವದತ್ ಪಡಿಕ್ಕಲ್ ಅಧಿಕಾರ ವಹಿಸಿಕೊಂಡರು. ಪಡಿಕ್ಕಲ್ 30 ಎಸೆತಗಳಲ್ಲಿ ಫಿಫ್ಟಿ ಬಾರಿಸಿದರು. 52 ರನ್ ಗಳಿಸಿ ಔಟಾದರು.
ಜೈಸ್ವಾಲ್ ಕೂಡ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದರು. ಕ್ರೀಸ್‌ನಲ್ಲಿ ಉಳಿದುಕೊಂಡ ಅವರು ನಿಧಾನಕ್ಕೆ 37 ಎಸೆತಗಳಲ್ಲಿ 47 ರನ್ ಗಳಿಸಿದರು. ಅವರ ನಂತರ ನಾಯಕ ಸಂಜು ಸ್ಯಾಮ್ಸನ್ ಕೂಡ 22 ರನ್ ಗಳಿಸಿ ಔಟಾದರು ಮತ್ತು ತಂಡದ ಸ್ಥಿತಿ ಹದಗೆಟ್ಟಿತು. RCB ರಾಜಸ್ಥಾನ್ ರಾಯಲ್ಸ್ ಅನ್ನು ಒತ್ತಡಕ್ಕೆ ಸಿಲುಕಿಸಿತು.
ಕೊನೆಯಲ್ಲಿ ಧ್ರುವ್ ಜುರೆಲ್ 16 ಎಸೆತಗಳಲ್ಲಿ ಅಜೇಯ 34 ರನ್ ಗಳಿಸಿದರು ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಕೊನೆಯ ಓವರ್‌ನಲ್ಲಿ ರಾಜಸ್ಥಾನ್ ರಾಯಲ್ಸ್ 20 ರನ್ ಗಳಿಸಲು ಸಾಧ್ಯವಾಗಲಿಲ್ಲ ಮತ್ತು RCB ಪಂದ್ಯವನ್ನು 7 ರನ್‌ಗಳಿಂದ ಗೆದ್ದುಕೊಂಡಿತು. ರಾಯಲ್ಸ್ 6 ವಿಕೆಟ್‌ಗೆ 182 ರನ್ ಗಳಿಸಲಷ್ಟೇ ಶಕ್ತವಾಯಿತು. ಆರ್‌ಸಿಬಿ ಪರ ಹರ್ಷಲ್ ಪಟೇಲ್ 3 ವಿಕೆಟ್ ಪಡೆದರು.
Categories
ಉಡುಪಿ ಜಿಲ್ಲಾ ಟೆನ್ನಿಸ್ಬಾಲ್ ಕ್ರಿಕೆಟ್

ಉಡುಪಿಯ ಪ್ರತಿಭಾನ್ವಿತ ಮಹಿಳಾ ಕ್ರಿಕೆಟ್ ಆಟಗಾರ್ತಿ ವೈಷ್ಣವಿ ಆಚಾರ್ಯ ಕಡಿಯಾಳಿ…!!!

ಉಡುಪಿ-ನಾವು ಭಾರತೀಯರು ಕ್ರಿಕೆಟ್ ಆಟವನ್ನು ಧರ್ಮದಂತೆ ಆಚರಿಸುತ್ತೇವೆ, ಏಕೆಂದರೆ ಕ್ರಿಕೆಟ್‌ಗೆ ಹೆಚ್ಚಿದ ಗೌರವ ಮತ್ತು ಪ್ರೋತ್ಸಾಹದಿಂದಾಗಿ. ಇತ್ತೀಚೆಗೆ ದೇಶದಾದ್ಯಂತ ಕ್ರಿಕೆಟ್ ಪರ ಜೋರಾದ ಗಾಳಿ ಬೀಸುತ್ತಿದೆ.
ಇದು ಇಂದಿನ ದಿನಗಳಲ್ಲಿ ಪುರುಷರಷ್ಟೇ ಅಲ್ಲ ಮಹಿಳೆಯರೂ  ಕೂಡಾ ಆಡುವ ಕ್ರೀಡೆಯಾಗಿದೆ. ಇತ್ತೀಚಿನ ದಿನಗಳನ್ನು  ‘ ದಿ ಗೋಲ್ಡನ್ ಏರಾ ಆಫ್  ದಿ ಇಂಡಿಯನ್ ವಿಮೆನ್’ಸ್ ಕ್ರಿಕೆಟ್ ‘ ಎಂದು ಹೇಳಬಹುದು..  ಇದೀಗ ಭಾರತ ಮಹಿಳಾ ತಂಡದಲ್ಲಿ ಹೊಸ ತಾರೆಯರು ಹುಟ್ಟಿಕೊಳ್ಳುತ್ತಿದ್ದು, ಹೊಸ ಹೊಸ ದಾಖಲೆಗಳು ಸೃಷ್ಟಿಯಾಗುತ್ತಿವೆ. 
 
ಉಡುಪಿ ಮಹಿಳಾ ತಂಡದ ಶ್ರೇಷ್ಠ ಆಟಗಾರ್ತಿಯ ಪರಿಚಯ ಇಲ್ಲಿದೆ.  ಸ್ನೇಹಿತರೇ, ಇಂದು ನಾವು ಉಡುಪಿಯ  ಮಹಿಳಾ ಯುವ ಕ್ರಿಕೆಟ್ ಪ್ರತಿಭೆ  ವೈಷ್ಣವಿ ಆಚಾರ್ಯ ಕಡಿಯಾಳಿ ಬಗ್ಗೆ ಹೇಳಲಿದ್ದೇವೆ. ಈ ಹೆಸರು ಅನೇಕ ಜನರಿಗೆ ಗೊತ್ತಿರಲಿಕ್ಕಿಲ್ಲ ಹೌದು!  ಉಡುಪಿ ಕ್ರಿಕೆಟ್ ಅಸೋಸಿಯೇಷನ್ ನ ಸ್ಟಾರ್ ಮಹಿಳಾ ಆಟಗಾರ್ತಿ ವೈಷ್ಣವಿ ಆಚಾರ್ಯ ಮಹಿಳಾ ಕ್ರಿಕೆಟಿಗರಲ್ಲಿ ಒಬ್ಬರು.  ಆರಂಭದ ದಿನಗಳಲ್ಲಿ 10ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದಾಗ ಕಟಪಾಡಿಯ ಕೆ ಆರ್ ಎಸ್  ಅಕಾಡೆಮಿಯ ಉದಯ ಕುಮಾರ್ ಕಟಪಾಡಿ ಆಕೆಯ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿದವರು. ಇತ್ತೀಚಿನ ದಿನಗಳಲ್ಲಿ ಉಡುಪಿ ಕ್ರಿಕೆಟ್ ಅಸೋಸಿಯೇಷನ್ ನ ಮುಖ್ಯ ತರಬೇತುದಾರ ಶ್ರೀ ಪ್ರಭಾಕರ್ ಶೆಟ್ಟಿ  ಅವರ ಅಡಿಯಲ್ಲಿ ನಿಯಮಿತವಾಗಿ ಅಭ್ಯಾಸ ಮಾಡುತ್ತಿದ್ದಾಳೆ, ಇವರು ತಮ್ಮ ವೇಗದ ಬೌಲಿಂಗ್ ಮತ್ತು ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ನಿಂದ  ಗಮನ ಸೆಳೆದವರು. ಬಲಗೈ ಬ್ಯಾಟರ್ ಆಗಿರುವ ಇವರು ಬಲಗೈನಲ್ಲಿ ಬೌಲಿಂಗ್‌ ಮಾಡುತ್ತಾರೆ. 18 ವರ್ಷ ಪ್ರಾಯದ ವೈಷ್ಣವಿ ಆಚಾರ್ಯ ಪ್ರತಿಷ್ಠಿತ ವನಿತಾ ಕ್ರಿಕೆಟ್ ಕೂಟದಲ್ಲಿ ಭಾಗವಹಿಸುತ್ತಿರುವ  ಆಟಗಾರ್ತಿ. ರಾಜ್ಯದಲ್ಲಿ ನಡೆದ ಅನೇಕ ಮಹಿಳಾ ಕ್ರಿಕೆಟ್ ನಲ್ಲಿ  ಕಾಣಿಸಿಕೊಂಡಿದ್ದಾರೆ. ಅವರು ತನ್ನ ಆಲ್ ರೌಂಡ್  ಪ್ರದರ್ಶನದಿಂದಲೇ ಹೆಚ್ಚು ಸುದ್ದಿಯಲ್ಲಿರುತ್ತಾರೆ. ವೇಗದಲ್ಲಿ ಬೌಲಿಂಗ್‌ ಮಾಡುವ ಸಾಮರ್ಥ್ಯ ಹೊಂದಿರುವ ಅವರ ಬೌಲಿಂಗ್ ಶೈಲಿಗೆ ಅಭಿಮಾನಿಗಳು ಫಿದಾ ಆಗಿದ್ದು, ಇವರು ಭವಿಷ್ಯದ ಭರವಸೆಯ ಬೌಲರ್‌ ಎನಿಸಿದ್ದಾರೆ. ಜೊತೆಗೆ ಅವರ ಬ್ಯಾಟಿಂಗ್ ಸೆನ್ಸ್ ಅದ್ಭುತವಾಗಿದೆ. ಅಮೋಘ ಕ್ರಿಕೆಟ್ ಪ್ರದರ್ಶನಕ್ಕಾಗಿ ಹಲವಾರು ಮಹಿಳಾ ಕ್ರಿಕೆಟಿಗ ಪ್ರಶಸ್ತಿಯನ್ನು ಪಡೆದಿದ್ದಾರೆ. ಕ್ರಿಕೆಟ್ ವಿಷಯ ಬಂದಾಗ ಈಕೆಯ ಆಟಕ್ಕೆ ಅನೇಕರು ಮನಸೋತಿದ್ದುಂಟು. 
 
ಉಡುಪಿಯ ಸ್ನೇಹ  ಟ್ಯೂಟೋರಿಯಲ್  ಕಾಲೇಜಿನಲ್ಲಿ  ದ್ವಿತೀಯ ಪಿ ಯು ಸಿ  ಓದುತ್ತಿರುವ ವೈಷ್ಣವಿ ಆಚಾರ್ಯ 19 ವರ್ಷದೊಳಗಿನ ಕರ್ನಾಟಕ ಮಹಿಳಾ ಟಿ 20 ಕ್ರಿಕೆಟ್ ತಂಡಕ್ಕೆ ಆಯ್ಕೆ ಆಗುವ ಅವಕಾಶ ಪಡೆದಿದ್ದರು.  2022 ರಲ್ಲಿ  ಮೊದಲ ಬಾರಿಗೆ ಅಂಡರ್ 19 ರಾಜ್ಯ ಸಂಭಾವ್ಯರ ಪಟ್ಟಿಯಲ್ಲಿ ಆಡುವ ಅರ್ಹತೆ ಸಂಪಾದಿಸಿದರು.  19 ವರ್ಷದೊಳಗಿನ ಟಿ 20 ತಂಡದ ಪಂದ್ಯಕ್ಕೆ  ಆಯ್ಜೆಯಾಗಿದ್ದ ವೈಷ್ಣವಿ ಆಚಾರ್ಯ, ಇವರು  ಶ್ರೇಷ್ಠ ಆಲ್‌ರೌಂಡರ್‌ಗಳಲ್ಲಿ ಒಬ್ಬರು ಎಂದೂ ಸಹ ಗುರುತಿಸಲ್ಪಟ್ಟಿದ್ದಾರೆ. ವನಿತಾ ವಿಭಾಗದಲ್ಲಿ ನಾಮ ನಿರ್ದೇಶನಗೊಂಡ ವೈಷ್ಣವಿ ಆಚಾರ್ಯ ರಾಜ್ಯ ವಲಯ ಸ್ಥಳೀಯ ಮಹಿಳಾ ಕ್ರಿಕೆಟ್ ಟೂರ್ನಿಯಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದರು.. ರಾಜ್ಯಾದ್ಯಂತ ನಡೆದ ಹಲವು ಟೂರ್ನಮೆಂಟ್  ನಲ್ಲಿ ಪ್ರಮುಖ ಪಾತ್ರ ವಹಿಸಿ ಹಲವಾರು ಪಂದ್ಯಾವಳಿಗಳಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.
 
 
ಇದುವರೆಗಿನ ಸಾಧನೆ:
 
2022ರ  ಅಕ್ಟೋಬರ್ ನಲ್ಲಿ ಅಂಡರ್ 19 ಕರ್ನಾಟಕ  ತಂಡಕ್ಕೆ ಸೆಲೆಕ್ಟ್ ಆದ ವೈಷ್ಣವಿ ಆಚಾರ್ಯ  19 ವರ್ಷದೊಳಗಿನ ರಾಜ್ಯ ಸಂಭವನೀಯರು ಪಂದ್ಯದಲ್ಲಿ ರಾಜ್ಯ ಕ್ರಿಕೆಟ್‌ಗೆ ಚೊಚ್ಚಲ ಪ್ರವೇಶ ಮಾಡಿದರು.
 
ನಂತರ ರಾಜ್ಯ ವಲಯ ಸ್ಥಳೀಯ  ಪಂದ್ಯಗಳಲ್ಲಿ ಆಡುವ ಅವಕಾಶ ಪಡೆದು, ಎರಡು ಬಾರಿ ಅವರು ಪ್ರತಿನಿಧಿಸಿದ ತಂಡ ವಿಜೇತರಾಗಿ  ಹೊರಹೊಮ್ಮಿತು. ಬೌಲಿಂಗ್‌ನಲ್ಲಿ ವಿಶೇಷವಾಗಿ ಗುರುತಿಸಿಕೊಂಡಿದ್ದ ವೈಷ್ಣವಿ ಆಚಾರ್ಯ ನಂತರ ಆಲ್‌ರೌಂಡರ್‌ ಆಗಿ ಮಿಂಚುತ್ತಿದ್ದಾರೆ.
 
2022 ರಲ್ಲಿ ನೆನಪು ಟ್ರೋಫಿ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ಆಡಿ ಇವರ ತಂಡ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು.
 
ಮೈಸೂರ್ ನಲ್ಲಿ ನಡೆದ ಮಾಫ್ಯೂಸಿಲ್ ವಿಮೆನ್’ಸ್ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಅತ್ಯಧಿಕ ವಿಕೆಟ್‌ಗಳ  ಸಾಧನೆಗೈದು  ವುಮನ್  ಆಫ್  ದಿ ಮ್ಯಾಚ್ ಪ್ರಶಸ್ತಿಯನ್ನು  ಗಿಟ್ಟಿಸಿಕೊಂಡರು. 
 
ಸಿ  ಸಿ ಎಲ್ 2023 ರಲ್ಲಿ ರನ್ನರ್ ಅಪ್ ಪ್ರಶಸ್ತಿ
 
ಸಿ ಪಿ ಎಲ್ 2023 ರಲ್ಲೂ ಬ್ಯಾಕ್ ಟು ಬ್ಯಾಕ್ 5 ಬೌಂಡರಿಗಳನ್ನು ಬಾರಿಸಿ, ಅತ್ಯಧಿಕ ರನ್‌ ಹೊಡೆದು ವುಮನ್  ಆಫ್  ದಿ ಮ್ಯಾಚ್ ಪ್ರಶಸ್ತಿ  ಗಳಿಸಿದರು.
 
ಉಡುಪಿ ಸಿಂಗರ್ಸ್ ಟ್ರೋಫಿ 2023 ರಲ್ಲಿ ವಿನ್ನರ್ಸ್
 
ವೇಗದಲ್ಲಿ ಚೆಂಡೆಸೆಯುವ ಸಾಮರ್ಥ್ಯ‌ ಹೊಂದಿದ್ದು ಸ್ಥಳೀಯ ಮಟ್ಟದ ಟೂರ್ನಿಗಳಲ್ಲಿ ಮಿಂಚುತ್ತಿರುವ ಯುವ ವೇಗದ ಬೌಲರ್‌.
 
 
” ಕ್ರಿಕೆಟ್ ಮೇಲಿನ ಆಸಕ್ತಿಯಿಂದ, ಕಠಿಣ ಪರಿಶ್ರಮದಿಂದ ಮತ್ತು  ಹಿರಿಯರ ಪ್ರೇರಣೆ, ಹಾಗೂ ಕೋಚ್ ಗಳ ಮಾರ್ಗದರ್ಶನದಿಂದ ಕ್ರಿಕೆಟ್‌ಪಟು ಆಗಿದ್ದೇನೆ. ಕ್ರಿಕೆಟ್  ಪ್ರತಿಭೆಗಳಿಗೆ  ಪ್ರೋತ್ಸಾಹ ಸಿಕ್ಕರೆ ಖಂಡಿತವಾಗಿಯೂ  ಹೆಚ್ಚಿನ ಸಾಧನೆಗೆ ಅನುಕೂಲವಾಗುತ್ತದೆ. ಸಾಧನೆಗೆ  ನಿರಂತರ ಅಭ್ಯಾಸ  ಹಾಗೂ ಶ್ರಮ ಮುಖ್ಯ. ಮೊದಲ ಬಾರಿ ಅಂಡರ್ 19 ರಾಜ್ಯ ತಂಡದ ಪಂದ್ಯದಲ್ಲಿಆಯ್ಕೆ ಆದಾಗ ಬಹಳಷ್ಟು ಸಂತಸ ತಂದಿತ್ತುಎಂದು ವೈಷ್ಣವಿ ಹೇಳಿದರು. ರಾಜ್ಯ  ತಂಡಕ್ಕೆ ಆಯ್ಕೆಯಾಗುವ ಗುರಿ ಹೊಂದಿದ್ದು, ಹಲವು ಟೂರ್ನಿಗಳಲ್ಲಿಉತ್ತಮ ಪ್ರದರ್ಶನ ನೀಡುತ್ತಿದ್ದೇನೆ ”  ಎಂದು ಸ್ಪೋರ್ಟ್ಸ್ ಕನ್ನಡದ ಜೊತೆ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡರು.
 
 
ಕಳೆದ ಎರಡು ವರ್ಷಗಳಿಂದ ವಿವಿಧ ವಯೋಮಿತಿಯ  ಟೂರ್ನಿಗಳಲ್ಲಿ ಗಮನಾರ್ಹ ಪ್ರದರ್ಶನ ನೀಡಿರುವ ವೇಗಿ ವೈಷ್ಣವಿ ರಾಜ್ಯ ಕಿರಿಯರ ತಂಡದ ಆಯ್ಕೆಯಾಗುವ ನಿರೀಕ್ಷೆಯಲ್ಲಿದ್ದಾರೆ.  ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದ ಅವರ ತಂದೆ ಸತೀಶ್ ಆಚಾರ್ಯ ಅಕ್ಕಸಾಲಿಗರಾಗಿದ್ದಾರೆ ಮತ್ತು ಅವರ ತಾಯಿ ಗೀತಾ ಎಸ್ ಆಚಾರ್ಯ ಅವರು ಟೈಲರಿಂಗ್ ಅಂಗಡಿಯನ್ನು ನಡೆಸುತ್ತಿದ್ದಾರೆ.  ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಕ್ರಿಕೆಟ್ ತಂಡವನ್ನು ಪ್ರತಿನಿಧಿಸುವ ಆಸೆ ಅವಳಲ್ಲಿ ಬೇರೂರಿದೆ.  ಮುಂದೆ ಬೆಂಗಳೂರಿನ ಪ್ರಸಿದ್ಧ ಕ್ರಿಕೆಟ್ ಸಂಸ್ಥೆಗಳಲ್ಲಿ ಒಂದಾದ ಜಸ್ಟ್ ಕ್ರಿಕೆಟ್ ಅಕಾಡೆಮಿಯಲ್ಲಿ ವೃತ್ತಿಪರ ಕ್ರಿಕೆಟ್ ತರಬೇತಿ ಪಡೆಯುವ ಆಸೆ ಇದ್ದು, ಸೂಕ್ತ ಪ್ರೋತ್ಸಾಹದ ನಿರೀಕ್ಷೆಯಲ್ಲಿದ್ದಾರೆ . ಉಡುಪಿಯ ಈ  ಮಹಿಳಾ ಕ್ರಿಕೆಟ್  ಪ್ರತಿಭೆಗೆ ಈಗ ನೆರವಿನ ಹಸ್ತ ಬೇಕಿದೆ .  
 
ವೈಷ್ಣವಿ ಆಚಾರ್ಯ ಸಾಧನೆಗೆ ಸ್ಪೋರ್ಟ್ಸ್ ಕನ್ನಡದ ಪ್ರವರ್ತಕರಾದ ಕೆ ಆರ್  ಕೆ ಆಚಾರ್ಯ ಅಭಿನಂದಿಸಿದ್ದು, ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲೂ ಸಾಧನೆ ತೋರಿ, ಭಾರತೀಯ ಮಹಿಳಾ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿ, ತಾರೆಯಾಗಿ ಬೆಳೆದು ಉಡುಪಿ ಜಿಲ್ಲೆಯ ಕೀರ್ತಿಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಹಾರಿಸುವ ಸಾಧನೆ ಮಾಡುವಂತೆ ಹಾರೈಸಿದ್ದಾರೆ.
 
ವೈಷ್ಣವಿ ಬೌಲಿಂಗ್ ವೀಡಿಯೋ

 
 
ಆಲ್ ದಿ ಬೆಸ್ಟ್  ವೈಷ್ಣವಿ ಆಚಾರ್ಯ…
 
 
ಸುರೇಶ್ ಭಟ್ ಮೂಲ್ಕಿ  &
ಟೀಮ್ ಸ್ಪೋರ್ಟ್ಸ್ ಕನ್ನಡ