Categories
Action Replay ಕ್ರಿಕೆಟ್

ನಿಕೋಲ್ಸ್‌ ತಾಳ್ಮೆಯ ಆಟ: ಕಿವೀಸ್‌ ಹೋರಾಟದ ಮೊತ್ತ

ಲಾರ್ಡ್ಸ್‌: ಆತಿಥೇಯ ಇಂಗ್ಲೆಂಡ್‌ನ ಕ್ರಿಸ್ ವೋಕ್ಸ್‌ ಮತ್ತು  ಲಿಯಾಮ್ ಪ್ಲಂಕೆಟ್ ಅವರ ಬಿರುಗಾಳಿ ಬೌಲಿಂಗ್‌ ನಡುವೆಯೂ ನ್ಯೂಜಿಲೆಂಡ್‌ ತಂಡವು ಹೋರಾಟದ ಮೊತ್ತ ಗಳಿಸಿತು.

 ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಈ ಪಂದ್ಯದಲ್ಲಿಯೂ ತಂಡಕ್ಕೆ ಉತ್ತಮ ಆರಂಭ ಲಭಿಸಲಿಲ್ಲ. ಅದರಿಂದಾಗಿ ತಂಡಕ್ಕೆ 50 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 241 ರನ್‌ ಮಾತ್ರ ಗಳಿಸಲು ಸಾಧ್ಯವಾಯಿತು.

ಕ್ರಿಸ್ ವೋಕ್ಸ್‌ (37ಕ್ಕೆ3) ಮತ್ತು ಲಿಯಾಮ್ ಪ್ಲಂಕೆಟ್ (42ಕ್ಕೆ3) ಅವರ ಶಿಸ್ತಿನ ದಾಳಿಯ ನಡುವೆಯೂ ಕಿವೀಸ್‌ ತಂಡದ ಹೆನ್ರಿ ನಿಕೋಲ್ಸ್‌ (55; 77ಎಸೆತ, 4ಬೌಂಡರಿ) ತಾಳ್ಮೆಯ ಅರ್ಧಶತಕ ಗಳಿಸಿದರು. ಹೆನ್ರಿ ಜೊತೆಗೆ ಇನಿಂಗ್ಸ್‌ ಆರಂಭಿಸಿದ ಅನುಭವಿ ಬ್ಯಾಟ್ಸ್‌ಮನ್ ಮಾರ್ಟಿನ್ ಗಪ್ಟಿಲ್ (19 ರನ್) ಈ ಪಂದ್ಯದಲ್ಲಿಯೂ ವೈಫಲ್ಯ ಅನುಭವಿಸಿದರು. ಅವರು ತಾವು ಎದುರಿಸಿದ 18 ಎಸೆತಗಳಲ್ಲಿ ಎರಡು ಬೌಂಡರಿ ಮತ್ತು ಒಂದು ಸಿಕ್ಸರ್ ಹೊಡೆದರು. ಅದರಿಂದಾಗಿ ಅವರು ಭರ್ಜರಿ ಆರಂಭ ನೀಡುವ ಭರವಸೆ ಮೂಡಿಸಿದ್ದರು.

ಅವರು ಏಳನೇ ಓವರ್‌ನಲ್ಲಿಯೇ ಅವರು ಕ್ರಿಸ್‌ ವೋಕ್ಸ್‌ ಬೀಸಿದ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು.

ಕಳೆದ ಕೆಲವು ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿದ್ದ ಹೆನ್ರಿ ಇಲ್ಲಿ ಉತ್ತಮವಾಗಿ ಆಡಿದರು. ಭಾರತದ ಎದುರಿನ ಸೆಮಿಫೈನಲ್‌ನಲ್ಲಿ ಅರ್ಧಶತಕ ಗಳಿಸಿದ್ದ ಕಿವೀಸ್ ನಾಯಕ ಕೇನ್ ವಿಲಿಯಮ್ಸನ್ (30; 53ಎಸೆತ, 2ಬೌಂಡರಿ) ಅವರು ಹೆನ್ರಿ ಜೊತೆಗೆ ಎರಡನೇ ವಿಕೆಟ್ ಜೊತೆಯಾಟವನ್ನು ಬೆಳೆಸಿದರು. 74 ರನ್ ಸೇರಿಸಿದ ಅವರು ತಂಡದ ಮೊತ್ತವನ್ನು ನೂರರ ಗಡಿ ದಾಟಿಸಿದರು. ಆದರೆ, ರನ್‌ ಗಳಿಕೆಯ ವೇಗ ಕಡಿಮೆಯಿತ್ತು.

ಈ ಹಂತದಲ್ಲಿ 23ನೇ ಓವರ್‌ ಬೌಲಿಂಗ್ ಮಾಡಿದ ಲಿಯಾಮ್ ಪ್ಲಂಕೆಟ್ ಅವರ ಎಸೆತದ ಚಲನೆಯನ್ನು ಗುರುತಿಸುವಲ್ಲಿ ಎಡವಿದ ಕೇನ್ ವಿಲಿಯಮ್ಸನ್ ವಿಕೆಟ್‌ ಕೀಪರ್ ಜೋಸ್ ಬಟ್ಲರ್‌ಗೆ ಕ್ಯಾಚಿತ್ತರು. ಆದರೆ ಅಂಪೈರ್ ಔಟ್ ನೀಡಲಿಲ್ಲ. ಆ ಸಂದರ್ಭದಲ್ಲಿ ಅಂಪೈರ್ ತೀರ್ಪು ಮರುಪರಿಶೀಲನೆ ವ್ಯವಸ್ಥೆ (ಯುಡಿಆರ್‌ಎಸ್) ಗೆ ಮೊರೆ ಹೋದ ಇಂಗ್ಲೆಂಡ್ ನಾಯಕ ಇಯನ್ ಮಾರ್ಗನ್ ಯಶಸ್ವಿಯಾದರು. ಕೇನ್ ನಿರ್ಗಮಿಸಿದರು.

27ನೇ ಓವರ್‌ನಲ್ಲಿ ಪ್ಲಂಕೆಟ್ ಅವರು ಮತ್ತೊಂದು ಆಘಾತ ನೀಡಿದರು. ಅರ್ಧಶತಕ ಗಳಿಸಿದ್ದ ಹೆನ್ರಿಗೆ ಆಘಾತ ನೀಡಿದರು. ಅವರು ಹಾಕಿದ ಗುಡ್‌ಲೆಂಗ್ತ್ ಎಸೆತವನ್ನು ಕೆಣಕಿದ ಹೆನ್ರಿ ಬ್ಯಾಟ್‌ನ ಒಳಅಂಚಿಗೆ ಬಡಿದ ಚೆಂಡು ಸ್ಟಂಪ್‌ಗಳಿಗೆ ಮುತ್ತಿಕ್ಕಿತು. ರಾಸ್ ಟೇಲರ್ ಕೂಡ ನಿರೀಕ್ಷೆ ಹುಸಿ ಮಾಡಿದರು.

ಅವರು 15 ರನ್‌ ಗಳಿಸಿದ್ದಾಗ ಮಾರ್ಕ್‌ ವುಡ್ ಹಾಕಿದ ಎಸೆತದಲ್ಲಿ ಔಟಾದರು. ಇದರಿಂದಾಗಿ ತಂಡವು ದೊಡ್ಡ  ಮೊತ್ತ ಗಳಿಸುವುದು ಕಠಿಣವಾಯಿತು.

ಆದರೂ ತಂಡವು ತೀರಾ ಅಲ್ಪಮೊತ್ತಕ್ಕೆ ಕುಸಿಯದಂತೆ ಟಾಮ್ ಲಥಾಮ್ (47; 56ಎಸೆತ, 2ಬೌಂಡರಿ 1ಸಿಕ್ಸರ್) ನೋಡಿಕೊಂಡರು. ಆಲ್‌ರೌಂಡರ್ ಜಿಮ್ಮಿ ನಿಶಾಮ್ (19 ರನ್) ಮತ್ತು  ಕಾಲಿನ್ ಡಿ ಗ್ರ್ಯಾಂಡ್‌ಹೋಮ್ (16 ರನ್) ಅವರು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲದಂತೆ ಪ್ಲಂಕೆಟ್ ಮತ್ತು ವೋಕ್ಸ್‌ ನೋಡಿಕೊಂಡರು.

ಆದರೂ ಕೊನೆಯ ಹತ್ತು ಓವರ್‌ಗಳಲ್ಲಿ 62 ರನ್‌ಗಳು ಕಿವೀಸ್ ತಂಡದ ಖಾತೆ ಸೇರಿವು ಮೂರು ವಿಕೆಟ್‌ಗಳೂ ಪತನವಾದವು.

ಈ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್ ಬೌಲರ್‌ಗಳು ಮೂವತ್ತು ಇತರೆ ರನ್‌ಗಳನ್ನು ಬಿಟ್ಟುಕೊಟ್ಟರು. ಅದರಲ್ಲಿ ವೈಡ್‌ಬಾಲ್‌ಗಳಿಂದ ಗಳಿಕೆಯಾದ 17 ರನ್‌ಗಳೂ ಸೇರಿವೆ.

Categories
Action Replay ಕ್ರಿಕೆಟ್

ಗೆಲುವಿನ ಅಮಲು ನೆತ್ತಿಗೇರಿದರೇ ನಂತರದ ಬದುಕು ಇಳಿಜಾರೇ : ಬೇಕರ್

ಮೊದಲ ಬಾರಿಗೆ ಅವನು ಗೆಲುವಿನ ಟ್ರೋಫಿಯನ್ನೆತ್ತಿದಾಗ ವಿಂಬಲ್ಡನ್ ಗೆದ್ದ ಅತಿಕಿರಿಯನೆನ್ನುವ ಖ್ಯಾತಿ ಅವನದ್ದಾಗಿತ್ತು. 17 ವರ್ಷಕ್ಕೆ ಆತ ವಿಂಬಲ್ಡನ್ ಗೆದ್ದಾಗ,’ಇಷ್ಟು ದಿನ ಈ ದೇಶಕ್ಕೆ ಟೆನ್ನಿಸ್‌ನಲ್ಲಿ ಒಬ್ಬ ರೋಲ್ ಮಾಡಲ್ ಇರಲಿಲ್ಲವೆಂಬುದು ಜನರಿಗೆ ಬೇಸರ ತಂದಿತ್ತು.ಆದರೆ ಈಗ ಒಬ್ಬನಿದ್ದಾನೆ’ ಎಂದು ತನ್ನ ಬಗ್ಗೆಯೇ ತಾನು ಆತ್ಮವಿಶ್ವಾಸದಿಂದ ಹೇಳಿಕೊಂಡಿದ್ದ.ಅವನ ಹೇಳಿಕೆಯನ್ನು ಜರ್ಮನ್ನರು ಮನಪೂರ್ವಕವಾಗಿ ಒಪ್ಪಿಕೊಂಡಿದ್ದರು.

ಮುಂದೆ ಆತ ಮತ್ತೆರಡು ವಿಂಬಲ್ಡನ್,ಒಂದು ಯು.ಎಸ್ ಓಪನ್,ಎರಡು ಆಸ್ಟ್ರೆಲಿಯನ್ ಓಪನ್ ಗೆದ್ದಾಗ ಆತ ದೇಶದ ದಂತಕತೆಗಳಲ್ಲಿ ಒಬ್ಬನಾದ. ಆದರೇನು ಮಾಡುವುದು..? ಖ್ಯಾತಿ ಬಂದಿತ್ತು.ವಯಸ್ಸಿನ ಸೊಕ್ಕಿಗೆ ಖ್ಯಾತಿಯ ಜೊತೆಗೂಡಿ ಶೋಕಿಯೂ ಬೆನ್ನು ಹತ್ತಿತ್ತು. ಗೆಲುವಿನ ಮೇಲೆ ಗೆಲುವು ಕಾಣುತ್ತಿದ್ದವನು, ವೃತ್ತಿಜೀವನದ ಉತ್ತುಂಗದಲ್ಲಿದ್ದಾಗಲೇ ಪ್ಲೇಯ್ ಬಾಯ್ ಎಂದು ಗುರುತಿಸಿಕೊಂಡಿದ್ದ.ಆದರೆ ಅವನ ಪ್ಲೇಯ್ ಬಾಯ್‌ತನ ತನ್ನನ್ನೇ ನುಂಗಿ ನೀರು ಕುಡಿಯಲಿದೆ ಎಂಬ ಸತ್ಯದರಿವು ಅವನಿಗಾಗಲಿಲ್ಲ. ಅತಿಯಾದ ಸ್ತ್ರೀ ವ್ಯಾಮೋಹ ಆಟದ ಮೇಲಿನ ಅವನ ಏಕಾಗ್ರತೆಯನ್ನು ಕೆಡಿಸಿತ್ತು. ನಿಧಾನಕ್ಕೆ ತನಗಿಂತ ತೀರ ಕೆಳಮಟ್ಟದ ಆಟಗಾರರ ಕೈಯಲ್ಲಿ ಅವನು ಸೋಲತೊಡಗಿದ್ದ.

1984 ರಲ್ಲಿ ವೃತ್ತಿಜೀವನ ಆರಂಭಿಸಿದ್ದ ಬೋರಿಸ್‌ನಿಗೆ ಅದೆಂಥಹ ಸ್ತ್ರೀ ವ್ಯಾಮೊಹ ಅಂಟಿಕೊಂಡಿತೆಂದರೆ 1987ರ ಹೊತ್ತಿಗಾಗಲೇ ವಿಂಬಲ್ಡನ್ ಮತ್ತು ಆಸ್ಟ್ರೇಲಿಯನ್ ಓಪನ್‌ಗಳಲ್ಲಿ ತೀರ ಅಪರಿಚಿತ ಮತ್ತು ಶ್ರೇಯಾಂಕರಹಿತ ಆಟಗಾರರ ಕೈಯಲ್ಲಿ ಸೋತುಬಿಟ್ಟ. ಆಸ್ಟ್ರೇಲಿಯನ್ ಓಪನ್ ಸೋಲಿನಿಂದ ಅದ್ಯಾವ ಪರಿ ಹತಾಶನಾಗಿದ್ದನೆಂದರೆ ವಿನಾಕಾರಣ ತೀರ್ಪುಗಾರರ ಮೇಲೆ ಕೂಗಾಡಿ,ಅವರೆಡೆಗೆ ಉಗಿದು ವಿವಾದ ಮಾಡಿಕೊಂಡಿದ್ದ ಈ ಜರ್ಮನ್ ಆಟಗಾರ. ‘ಶ್ರೇಯಾಂಕರಹಿತ ಆಟಗಾರರಲ್ಲ,ಬೋರಿಸ್‌ನನ್ನು ಸೋಲಿಸುತ್ತಿರುವುದು ಅವನ ಅತಿಯಾದ ಲೋಲುಪತೆ’ ಎಂಬ ವರದಿಯಿತ್ತು ಪತ್ರಿಕೆಯಲ್ಲಿ. ಬೇಕರ್ ಪ್ರತಿಕ್ರಿಯಿಸಲಿಲ್ಲ.ಪತ್ರಿಕಾ ವರದಿ ಸುಳ್ಳಂತೂ ಅಲ್ಲ ಎಂದಿದ್ದ ಅವನ ತರಬೇತುದಾರ ಗುಂಥೇರ್ ಬಾಷ್.

1990ರ ವೇಳೆಗೆ ಬಾರ್ಬರಾ ಫೆಲ್ಟಸ್ ಎನ್ನುವ ಮಾಡಲ್ ನನ್ನು ಮದುವೆಯಾದ ಬೇಕರ್ ನ ವೈಯಕ್ತಿಕ ಬದುಕು ಕೊಂಚ ಹಾದಿಗೆ ಬಂದಿತು ಎಂದುಕೊಂಡರು ಜನ.ಆದರೆ ಕತೆ ಬೇರೆಯಿತ್ತು.ಮಡದಿ ಗರ್ಭಿಣಿಯಾಗಿ ಆಸ್ಪತ್ರೆ ಸೇರಿಕೊಂಡಾಗ ಇವನಿಲ್ಲಿ ಎಂಜೆಲಾ ಆರ್ಮಕೋವಾ ಎನ್ನುವ ರಷ್ಯನ್ ಮಾಡಲ್‌ಳೊಂದಿಗೆ ಅನೈತಿಕ ಸಂಬಂಧ ಬೆಳೆಸಿದ್ದ.’ಆಕೆ ಪದೇ ಪದೇ ನನ್ನತ್ತ ನೋಡುತ್ತಿದ್ದಳು.ನನ್ನ ಎದುರುಗಡೆ ಹತ್ತಾರು ಸಲ ಸುಳಿದಾಡಿದ್ದ ಅವಳ ಕಣ್ಗಳಲ್ಲಿ ನನಗೆ ನೀನು ಬೇಕು ಎನ್ನುವ ಶುದ್ದಾನುಶುದ್ಧ ಬೇಟೆಗಾರನ ಹಪಾಹಪಿಯಿತ್ತು’ ಎನ್ನುತ್ತ ತನ್ನದೇ ಆತ್ಮಚರಿತ್ರೆಯಲ್ಲಿ ಬರೆದುಕೊಂಡ ವಿಲಕ್ಷಣ ವ್ಯಕ್ತಿ ಬೇಕರ್ಬಹುಶ: ಅದೊಂದು ಘಟನೆ ತನ್ನ ವೃತ್ತಿಜೀವನವನ್ನು ಕಬಳಿಸಿಬಿಡುತ್ತದೆನ್ನುವ ಊಹೆಯೂ ಅವನಿಗಿರಲಿಕ್ಕಿಲ್ಲ.ಅವನ ಹೆಣ್ಣುಬಾಕತನಕ್ಕೆ ನೊಂದುಕೊಂಡ ಅವನ ಮಡದಿ ಬಾರ್ಬರಾ ಅವನಿಂದ ವಿಚ್ಷೇದನ ಪಡೆದುಕೊಂಡಳು. ಪರಿಹಾರವಾಗಿ ಅವಳು ಅವನಿಂದ ಕಿತ್ತುಕೊಂಡಿದ್ದು ಬರೋಬ್ಬರಿ 25 ಮಿಲಿಯನ್ ಡಾಲರುಗಳು.ವಿಷಯ ಇಷ್ಟಕ್ಕೆ ನಿಲ್ಲಲಿಲ್ಲ.ಅದೇ ಹೊತ್ತಿಗೆ ಎಂಜೆಲಾ ಇವನಿಂದಾಗಿ ಗರ್ಭಿಣಿಯಾಗಿಹೋಗಿದ್ದಳು.ಅವಳಿಗೂ ಜೀವನಾಂಶವೆಂಬಂತೆ ಸುಮಾರು 1.5 ಮಿಲಿಯನ್ ಡಾಲರುಗಳನ್ನು ಅವನು ಕೊಡಬೇಕಾಗಿ ಬಂತು.ವೈಯಕ್ತಿಕ ಹಗರಣಗಳಿಂದ ಜರ್ಜರಿತನಾದವನಿಗೆ 1991ರ ನಂತರ ಸತತ ಐದು ವರ್ಷಗಳ ಕಾಲಾವಧಿಯಲ್ಲಿ ಒಂದೇ ಒಂದು ಗ್ರಾಂಡ್‌ಸ್ಲಾಮ್ ಗೆಲ್ಲುವುದು ಶಕ್ಯವಾಗಲಿಲ್ಲ.

ಮುಂದೆ 1996ರಲ್ಲಿ ಒಂದು ಆಸ್ಟ್ರೇಲಿಯನ್ ಓಪನ್ ಗೆದ್ದನಾದರೂ ನಂತರ ಅವನ ಆಟದಲ್ಲಿ ಮೊದಲಿನ ಸ್ಥಿರತೆ ಕಾಣಲಿಲ್ಲ. 1999ರ ವೇಳೆಗೆ ವೃತ್ತಿಜೀವನದಿಂದ ನಿವೃತ್ತಿ ಘೋಷಿಸಿದ ಬೇಕರ್ ವೈಯಕ್ತಿಕ ಬದುಕಿನಲ್ಲಿ ತನ್ನ ಬೇಜವಾಬ್ದಾರಿತನವನ್ನು ಮುಂದುವರೆಸಿದ್ದ. ಪರಿಣಾಮವಾಗಿ 2002ರಲ್ಲಿ 20 ಮಿಲಿಯನ್ ಡಾಲರ್ ತೆರಿಗೆ ಹಗರಣವೊಂದು ಕತ್ತಿಗೆ ಬಿದ್ದಿತ್ತು.ಶವಪೆಟ್ಟಿಗೆಯ ಕೊನೆಯ ಮೊಳೆಯೆನ್ನುವಂತೆ ಅವನ ದೊಡ್ಡ ಮೊತ್ತದ ಹೂಡಿಕೆಯಿದ್ದ ನೈಜೀರಿಯಾದ ತೈಲ ಕಂಪನಿಯೊಂದು ದಿವಾಳಿಯೆದ್ದು ಬಾಗಲು ಮುಚ್ಚಿಕೊಂಡಿತ್ತು.ಮಾಡಿಕೊಂಡ ಸಾಲ ತೀರದೇ ಮುಗಿಲು ಮುಟ್ಟಿತ್ತು.ಕಟ್ಟಿಸಿಕೊಂಡಿದ್ದ ಐಶಾರಾಮಿ ಮನೆ,ಎಕರೆಗಟ್ಟಲೆ ಜಮೀನು ಎಲ್ಲವನ್ನೂ ಮಾರಿಕೊಂಡು ಸಾಧ್ಯವಾದಷ್ಟು ಸಾಲ ತೀರಿಸಿದ್ದ ಬೇಕರ್.ಅಷ್ಟಾಗಿಯೂ ಅವನ ಪೂರ್ತಿ ಸಾಲ ತೀರಲಿಲ್ಲ.

ಇಂದು ಜೀವನದ ಅತ್ಯಂತ ಕೆಳಮಟ್ಟದ ಬಿಂದುವನ್ನು ತಲುಪಿಕೊಂಡಿದ್ದಾನೆ ಬೇಕರ್.ಅವನು ಗೆದ್ದ ಅಷ್ಟೂ ಟ್ರೋಫಿಗಳನ್ನು ಹರಾಜಿಗಿಡುವಂತೆ ಆದೇಶಿಸಿದೆ ಕೋರ್ಟು.ತನಗೊಂದಷ್ಟು ಕಾಲಾವಕಾಶ ನೀಡಬೇಕೆನ್ನುವ ಅವನ ಅರ್ಜಿಯನ್ನು ತಿರಸ್ಕರಿಸಿರುವ ನ್ಯಾಯಾಲಯ,’ಹಲವಾರು ಅವಕಾಶಗಳನ್ನು ಕೊಟ್ಟ ನಂತರವೂ ಪ್ರಜ್ಞಾವಂತರಂತೆ ವರ್ತಿಸದೇ, ಮರಳಿನಲ್ಲಿ ಮುಖ ಹುದುಗಿಸಿಕೊಂಡು ಜವಾಬ್ದಾರಿಗಳಿಂದ ನುಣುಚಿಕೊಳ್ಳುವ ಬೇಜವಾಬ್ದಾರಿಯುತ ವ್ಯಕ್ತಿಯಾಗಿ ಗೋಚರಿಸುತ್ತಿದ್ದಾನೆ ಬೇಕರ್’ ಎಂದು ಛೀಮಾರಿ ಹಾಕಿದೆ.

ವಿಚಿತ್ರ ನೋಡಿ,ಯಾವ ಗ್ರಾಂಡ್‌ಸ್ಲಾಮ್‌ ಟ್ರೋಫಿಗಳು ಬದುಕಿನಲ್ಲಿ ಅವನಿಗೆ ಖ್ಯಾತಿ ಮತ್ತು ಹಣವನ್ನು ತಂದುಕೊಟ್ಟವೋ,ಇಂದು ಸೋತ ನಿಂತವನು ಉಳಿವಿಗಾಗಿ ಅವುಗಳನ್ನೇ ಮಾರುತ್ತಿದ್ದಾನೆ.ಗೆಲುವಿಗಾಗಿ ವರ್ಷಗಟ್ಟಲೇ ಕನಸು ಕಂಡು ಗೆದ್ದು ನಿಂತು, ಗೆಲುವಿನ ಅಮಲಿನಡಿ ಮಾಡಿಕೊಂಡ ಎಡವಟ್ಟುಗಳಿಗೆ ಗೆಲುವಿನ ಪ್ರತೀಕಗಳನ್ನೇ ಮಾರಿಕೊಳ್ಳುವ ಪರಿಸ್ಥಿತಿ ಅವನದ್ದು.ಜರ್ಮನಿಯ ಒಂದು ಕಾಲದ ಚಿನ್ನದ ಹುಡುಗನಿಗೆ ಗೆದ್ದ ಚಿನ್ನದ ಪದಕ ಮಾರಿಕೊಳ್ಳುವ ಅನಿವಾರ್ಯತೆ.

ಇಂಥಹ ಘಟನೆಗಳ ಕುರಿತು ಓದಿದಾಗಲೆಲ್ಲ ಬದುಕಿನೆಡೆಗೆ ಮತ್ತೆ ಮತ್ತೆ ಅಚ್ಚರಿಯಿಂದ ನೋಡುತ್ತೇನೆ ನಾನು.ಬದುಕಿಗಿಂತ ದೊಡ್ಡ ಆಟಗಾರನೇ ಇಲ್ಲವೆನೋ ಎನ್ನಿಸಿಬಿಡುತ್ತದೆ ಒಮ್ಮೊಮ್ಮೆ.ಕೊಂಚ ಪ್ರಯತ್ನಿಸಿದರೆ ಇಲ್ಲಿ ಗೆಲುವು ಸಿಗುವುದು ಕಷ್ಟವಿಲ್ಲ.ಆದರೆ ಸಿಕ್ಕ ಗೆಲುವನ್ನು ಕಾಪಿಟ್ಟುಕೊಳ್ಳುವುದು, ತಲೆಗೇರದಂತೆ ಸಂಭಾಳಿಸುವುದಿದೆಯಲ್ಲ,ಅದು ಬಲುಕಷ್ಟ.ಎತ್ತರಕ್ಕೆ ಏರಿಸಿ ನಿಲ್ಲಿಸಿ ಗೆಲುವಿನ ಶೃಂಗವನ್ನು ತೋರಿಸುವ ಬದುಕಿಗೆ ಕೊಂಚ ಯಾಮಾರಿದರೆ ನಮ್ಮನ್ನು ಸೋಲಿನ ಪ್ರಪಾತಕ್ಕೆ ತಳ್ಳುವುದು ಕಷ್ಟವೇ ಅಲ್ಲ.ಅದಕ್ಕೆ ಇರಬೇಕು ಬದುಕಿಗಿಂತ ದೊಡ್ಡ ಗುರುವಿಲ್ಲ ಎಂದಿದ್ದು ತಿಳಿದವರು. ಅವರ ಮಾತನ್ನು ಒಪ್ಪಿಕೊಳ್ಳುತ್ತಲೇ ಬದುಕೆನ್ನುವ ಮಹಾಗುರುವಿಗೆ ಶಿರಸಾಷ್ಟಾಂಗ ನಮಸ್ಕಾರ ಮಾಡುತ್ತೇನೆ ನಾನು.

Categories
ಕಾಫಿ ವಿತ್ ಅರ್ ಕೆ ಗ್ರಾಮೀಣ

ನೃತ್ಯ ಹಾಗೂ ಯೋಗ ಸಾಧನೆಯ ಮೂಲಕ ವಿಶ್ವವನ್ನೇ ಗಮನ ಸೆಳೆದ : ತನುಶ್ರೀ ಪಿತ್ರೋಡಿ

ಉಡುಪಿ : ಕಳೆದ ತಿಂಗಳಿನಲ್ಲಿ ಉಡುಪಿಯ ಸೈಂಟ್ ಸಿಸಿಲಿಸ್ ವಿದ್ಯಾಸಂಸ್ಥೆಯ ಕ್ರೀಡಾಂಗಣದ ಏಕಕಾಲದಲ್ಲಿ 2 ವಿಶ್ವದಾಖಲೆಗೆ ಸಾಕ್ಷಿಯಾಯಿತು.ಸಾವಿರಾರು ಪ್ರೇಕ್ಷಕರ ಈ ಅಸಾಧಾರಣ 10 ರ ಪೋರಿ ತನುಶ್ರೀ ಪಿತ್ರೋಡಿಯ ಪ್ರದರ್ಶನ ನೋಡಿ ಬೆಕ್ಕಸಬೆರಗಾದರು.

ನೃತ್ಯ ಹಾಗೂ ಯೋಗ ಸಾಧನೆಯ ಮೂಲಕ ವಿಶ್ವವನ್ನೇ ಗಮನ ಸೆಳೆದ ಬಹುಮುಖ ಪ್ರತಿಭೆಯ,ವಿಶ್ವದಾಖಲೆಗಳ ಸರದಾರಿಣಿ,ನಾಟ್ಯ ಮಯೂರಿ ಬಿರುದಾಂಕಿತೆ ತನುಶ್ರೀ ಪಿತ್ರೋಡಿ 15/3/2009 ರಂದು ಸಂಧ್ಯಾ,ಉದಯ್ ಕುಮಾರ್ ದಂಪತಿಗಳಿಗೆ ಮೊದಲ ಮಗಳಾಗಿ ಜನಿಸಿದರು.ಪ್ರಸ್ತುತ ಸೈಂಟ್ ಸಿಸಿಲಿಸ್ ಕನ್ನಡ ಮಾಧ್ಯಮ ಶಾಲೆಯಲ್ಲಿ 5 ನೇ ತರಗತಿಯಲ್ಲಿ ಕಲಿಯುತ್ತಿರುವ ತನುಶ್ರೀ 3 ವರ್ಷ ಪ್ರಾಯದಲ್ಲಿ ಮಾಸ್ಟರ್ ಡ್ಯಾನ್ಸ್ ಗ್ರೂಪ್ ಉಡುಪಿ ಇವರಲ್ಲಿ ನೃತ್ಯ ತರಬೇತಿಯನ್ನು ಆರಂಭಿಸಿ,ಸತತವಾಗಿ ಮುದ್ದು ಕೃಷ್ಣ ಸ್ಪರ್ಧೆ,ರಾಜ್ಯಮಟ್ಟದ ನೃತ್ಯ ಸ್ಪರ್ಧೆಗೆ ಕಾರ್ಯಕ್ರಮ ನೀಡುವುದರ ಮೂಲಕ ಇದುವರೆಗೆ 342 ವೇದಿಕೆಯಲ್ಲಿ ನೃತ್ಯ ಪ್ರದರ್ಶನ ನೀಡಿ ಮೆಚ್ಚುಗೆ ಗಳಿಸಿರುತ್ತಾರೆ.

ನೃತ್ಯ ಗುರುಗಳಾದ ಶ್ರೀ ರಾಮಕೃಷ್ಣ ಕೊಡಂಚ ಇವರಿಂದ ಭರತನಾಟ್ಯ ತರಬೇತಿಯನ್ನು, ಯೋಗ ತರಬೇತಿಯನ್ನು ಶ್ರೀ ಹರಿರಾಜ್ ಕಿನ್ನಿಗೋಳಿ ಇವರಿಂದಲೂ,ಹಾಗೂ ಆದಿತ್ಯ ಅಂಬಲಪಾಡಿ ಇವರಿಂದ ಯಕ್ಷಗಾನ ತರಬೇತಿಯನ್ನು ಪಡೆಯುತ್ತಿರುವ ತನುಶ್ರೀ ಕಳೆದೆರಡು ವರ್ಷಗಳಿಂದ ಕೃಷ್ಣಾಷ್ಟಮಿಯ ಸಂದರ್ಭದಲ್ಲಿ ಹುಲಿವೇಷ ಹಾಕಿ ಅದರಲ್ಲೂ ಸೈ ಎನಿಸಿಕೊಂಡಿದ್ದಾರೆ.ಕಲರ್ಸ್ ಕನ್ನಡ ವಾಹಿನಿಯ ಮಜಾಟಾಕೀಸ್ ನ ಎರಡು ಸಂಚಿಕೆಯಲ್ಲಿ ನೃತ್ಯ ಪ್ರದರ್ಶನ ನೀಡಿ ಮೆಚ್ಚುಗೆಗೆ ಪಾತ್ರರಾಗಿದ್ದಾಳೆ.

ತಾ 21/6/2018 ರಂದು ಯೋಗ ದಿನಾಚರಣೆಯ ಸಂದರ್ಭದಲ್ಲಿ ಕರ್ನಾಟಕದ ಹೆಸರಾಂತ ಚಾನೆಲ್ ಪಬ್ಲಿಕ್ ಟಿ.ವಿಯಲ್ಲಿ ಪಬ್ಲಿಕ್ ಹೀರೋ ಆಗಿ ಗುರುತಿಸಿಕೊಂಡಿದ್ದರು.ತಾ 14/11/2018 ರಂದು ಇಟಲಿಯ ರೋಮ್ ನಗರದಲ್ಲಿ ಆಯೋಜಿಸಲಾಗಿದ್ದ ಯೋಗ ಪ್ರದರ್ಶನದಲ್ಲಿ
ವಿಶ್ವ ಗಿನ್ನಿಸ್ ದಾಖಲೆಯ ಸಾಧಕರೊಂದಿಗೆ ಗುರುತಿಸಿಕೊಂಡಿರುವುದು ಶ್ರೇಷ್ಠ ಸಾಧನೆ.

ವಿಶ್ವ ದಾಖಲೆಗಳ ಸವಿವರ :  ತಾ 11-11-2017 ರಂದು ಉಡುಪಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ “ನಿರಾಲಾಂಭ ಪೂರ್ಣ ಚಕ್ರಾಸನ” ಎಂಬ ಕಠಿಣ ಯೋಗಾಸನವನ್ನು 1 ನಿಮಿಷದಲ್ಲಿ 19 ಬಾರಿ ಮಾಡುವ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ ರೆಕಾರ್ಡ್ ಪುಟದಲ್ಲಿ ದಾಖಲೆಯ ಮೊದಲ ಅಧ್ಯಾಯ ಬರೆದರು.

ತಾ 7/4/2018 ರಂದು ವೆಂಕಟರಮಣ ಸ್ಪೋರ್ಟ್ಸ್&ಕಲ್ಚರಲ್ ಕ್ಲಬ್ ರಿ.ಪಿತ್ರೋಡಿ ಇವರ ನೇತೃತ್ವದಲ್ಲಿ “Most full body revolution maintaining a chest stand position” ಭಂಗಿಯನ್ನು 1 ನಿಮಿಷದಲ್ಲಿ 42 ಬಾರಿ ಮಾಡುವ ಮೂಲಕ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಮಾಡಿ ದೇಶಕ್ಕೆ ಕೀರ್ತಿ ತಂದಿರುತ್ತಾರೆ.

ತಾ 23/2/2019 ರಂದು “Most no of rolls in one minute in dhanurasana posture”ಯೋಗಾಸನದ ಭಂಗಿಯಲ್ಲಿ 1 ನಿಮಿಷದಲ್ಲಿ 62 ರೋಲ್ ಹಾಗೂ 100 ರೋಲ್ ಗಳನ್ನು ಕೇವಲ 1.40 ನಿಮಿಷದಲ್ಲಿ ಉರುಳಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಬುಕ್ ನಲ್ಲಿ ಏಕಕಾಲದಲ್ಲಿ 2 ವಿಶ್ವದಾಖಲೆ ಸ್ಥಾಪಿಸಿ ಒಂದಿನಿತೂ ಸುಸ್ತಾದಂತೆ ಕಾಣದ ತನುಶ್ರೀ ಈ ದಾಖಲೆಯನ್ನು ಪುಲ್ವಾಮದಲ್ಲಿ ಮಡಿದ ಸೈನಿಕರಿಗೆ ಸಮರ್ಪಿಸಿರುತ್ತಾರೆ.

ಈ ಎಲ್ಲಾ ಸಾಧನೆಯ ಹಿಂದೆ ಕರ್ನಾಟಕ ರಾಜ್ಯ ಟೆನ್ನಿಸ್ ಕ್ರಿಕೆಟ್ ಇತಿಹಾಸದಲ್ಲಿ ಮೂರು ದಶಕಗಳ ಅತಿ,ಶಿಸ್ತು ಮಾದರಿಯ ಇತಿಹಾಸವನ್ನು ಬರೆದ ” ವೆಂಕಟರಮಣ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್ (ರಿ)” ನ ಸಹಕಾರವನ್ನು ತನುಶ್ರೀ ಹಾಗೂ ಪೋಷಕರು ಸದಾ ಸ್ಮರಿಸುತ್ತಾರೆ‌. ತಂದೆ ಉದಯ್ ಕುಮಾರ್ ವೆಂಕಟರಮಣ ಸಂಸ್ಥೆಯ ಸಕ್ರಿಯ ಸದಸ್ಯರಾಗಿರುತ್ತಾರೆ.

ಇತ್ತೀಚೆಗಷ್ಟೇ ಚಲನಚಿತ್ರಗಳಲ್ಲಿ ಅವಕಾಶವು ಗಿಟ್ಟಿಸಿಕೊಂಡಿದ್ದು,ಅನೇಕರ ಪ್ರಶಂಸೆಗೆ ಪಾತ್ರರಾಗಿದ್ದಾಳೆ.
ತನುಶ್ರೀ ಪಿತ್ರೋಡಿಯ ಸಾಧನೆ ಇನ್ನಷ್ಟು ಎತ್ತರಕ್ಕೇರಲಿ ಎಂದು “ಸ್ಪೋರ್ಟ್ಸ್ ಕನ್ನಡ” ವೆಬ್ಸೈಟ್ ನ ಪರವಾಗಿ ಆಶಿಸುತ್ತೇವೆ.

– ಆರ್.ಕೆ.ಆಚಾರ್ಯ ಕೋಟ

Categories
Action Replay ಕ್ರಿಕೆಟ್ ತಾಲೂಕ

ಕುಂದಾಪುರ : ಫ್ರೆಂಡ್ಸ್ ಬೆಂಗಳೂರು ಹಿರಿಯರ ಸಾಹಸಕ್ಕೆ ಒಲಿದ ಸ್ಪೋರ್ಟ್ಸ್ ಕನ್ನಡ ಟ್ರೋಫಿ

ಕುಂದಾಪುರ : ಹಲವು ದಶಕಗಳ ಬಳಿಕ ಕರ್ನಾಟಕ ರಾಜ್ಯ ಟೆನ್ನಿಸ್ ಕ್ರಿಕೆಟ್ ಇತಿಹಾಸದಲ್ಲಿ ಐತಿಹಾಸಿಕ ಪಂದ್ಯಾಕೂಟವೊಂದು ದಾಖಲಾಯಿತು. ಸ್ಪೋರ್ಟ್ಸ್ ಕನ್ನಡ ಲೋಕಾರ್ಪಣಾ ಕಾರ್ಯಕ್ರಮದ ಪ್ರಯುಕ್ತ ಟೆನ್ನಿಸ್ ಕ್ರಿಕೆಟನ್ನು ಇನ್ನಿಲ್ಲದಂತೆ ಆಳಿ ಮೆರೆದ ದಂತಕಥೆಗಳ ನಡುವೆ ಹಣಾಹಣಿ ಕ್ರಿಕೆಟ್ ಕಾಶಿ ಕುಂದಾಪುರದ ಗಾಂಧಿಮೈದಾನದಲ್ಲಿ ಏರ್ಪಡಿಸಲಾಗಿತ್ತು.

ಬೆಂಗಳೂರಿನ ಹಿರಿಯ ತಂಡಗಳಾದ ಮನೋಹರ್ ನೇತೃತ್ವದ ಜೈ ಕರ್ನಾಟಕ,ರೇಣು ಗೌಡ ನೇತೃತ್ವದ ಫ್ರೆಂಡ್ಸ್ ಬೆಂಗಳೂರು,ಶ್ರೀಪಾದ ಉಪಾಧ್ಯ ಸಾರಥ್ಯದ ಚಕ್ರವರ್ತಿ ಕುಂದಾಪುರ ಹಾಗೂ ಸಫ್ದರ್ ಆಲಿ ನೇತೃತ್ವದ ಉಡುಪಿ ಕ್ರಿಕೆಟರ್ಸ್ ನಡುವೆ ನಡೆದ ರೋಚಕ ಹಣಾಹಣಿಯಲ್ಲಿ ಫ್ರೆಂಡ್ಸ್ ತಂಡ ಚಕ್ರವರ್ತಿ ತಂಡವನ್ನು, ಉಡುಪಿ ಕ್ರಿಕೆಟರ್ಸ್ ಜೈ ಕರ್ನಾಟಕ ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿತು.

ಫೈನಲ್ ಪಂದ್ಯಾಟದಲ್ಲಿ ಟಾಸ್ ಜಯಿಸಿ ಫೀಲ್ಡಿಂಗ್ ಆಯ್ದುಕೊಂಡ ಫ್ರೆಂಡ್ಸ್ ತಂಡ ಎದುರಾಳಿ ಉಡುಪಿ ತಂಡವನ್ನು 8 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 61 ರನ್ ಗಳಿಗೆ ನಿಯಂತ್ರಿಸಿತು‌.

ಸವಾಲಿನ ಮೊತ್ತವನ್ನು ಬೆನ್ನಟ್ಟಿದ ಫ್ರೆಂಡ್ಸ್ ನ ಆರಂಭಿಕ ಹಿರಿಯ ಆಟಗಾರ ಶ್ರೀಕಾಂತ್ ಅಮೂಲ್ಯ 15 ರನ್ ಹಾಗೂ ಗಂಗಾ, ನಿತಿನ್ ಮೂಲ್ಕಿ ಎಸೆತದಲ್ಲಿ ಸಿಡಿದ ಭರ್ಜರಿ 3 ಸಿಕ್ಸರ್ ಸಹಿತ 7 ಎಸೆತಗಳಲ್ಲಿ 21 ರನ್ ಸಿಡಿಸಿ 7 ವಿಕೆಟ್ ಗಳ ಭರ್ಜರಿ ಗೆಲುವು ದಾಖಲಿಸಿದರು.

“ಸ್ಪೋರ್ಟ್ಸ್ ಕನ್ನಡ” ವೆಬ್ಸೈಟ್ ನ ವರ್ಣರಂಜಿತ ಉದ್ಘಾಟನಾ ಸಮಾರಂಭದ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಆಕರ್ಷಕ ಟ್ರೋಫಿಗಳನ್ನು ವಿತರಿಸಲಾಯಿತು.

ಫೈನಲ್ ಪಂದ್ಯದ ಪಂದ್ಯಶ್ರೇಷ್ಟ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಗಂಗಾ,ಬೆಸ್ಟ್ ಬೌಲರ್ ನಿತಿನ್ ಮೂಲ್ಕಿ,ಬೆಸ್ಟ್ ಕೀಪರ್ ಕೆ.ಪಿ.ಸತೀಶ್ ,ಬೆಸ್ಟ್ ಕ್ಯಾಚ್ ಪ್ರೇಮೇಂದ್ರ ಶೆಟ್ಟಿ ,ಬೆಸ್ಟ್ ಬ್ಯಾಟ್ಸ್‌ಮನ್‌ ಫ್ರೆಂಡ್ಸ್ ನ ಶ್ರೀಕಾಂತ್ ಪಡೆದುಕೊಂಡರು.ಹಿರಿಯ ಕ್ರಿಕೆಟಿಗರನ್ನು ಹುರಿದುಂಬಿಸಲು ರಾಜ್ಯದ ಯುವ ಕ್ರಿಕೆಟಿಗರು ಅಪಾರ ಸಂಖ್ಯೆಯಲ್ಲಿ ನೆರೆದಿದ್ದರು.ಹಿರಿಯ ಕ್ರಿಕೆಟಿಗರನ್ನು ಅತಿಥಿಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಬೆಳಗ್ಗಿನ ಪಂದ್ಯಾಕೂಟಕ್ಕಾಗಿ ಕರ್ನಾಟಕ ರಾಜ್ಯದ ಹಿರಿಯ ತಂಡಗಳಾದ ಬೆಂಗಳೂರಿನ ಜೈ ಕರ್ನಾಟಕದ ದಂತಕಥೆಗಳಾದ ಮನೋಹರ್, ಮ್ಯಾಜಿಕಲ್ ಸ್ಪಿನ್ನರ್ ಮೆರ್ವಿನ್,ನಂಬುಗೆಯ ದಾಂಡಿಗ ಕೀಪರ್ ನಾಗಿ,ಬಾಬು,ನಾಗೇಶ್ ಸಿಂಗ್,ಭಗವಾನ್ ಸಿಂಗ್,ಜಾನ್ಸನ್ ಶ್ರೀಧರ್,ಸಾಂಬಾಜಿ ಪ್ರತಿನಿಧಿಸಿದರೆ,
ಫ್ರೆಂಡ್ಸ್ ನ ರೇಣು ಗೌಡ, ಶ್ರೀಕಾಂತ್, ಸುನಿಲ್ ಬಿರಾದರ್,ಚಂದಿ,ಸೀನ,ಗಂಗಾ ಆಡಿದ್ದರೆ, ಉಡುಪಿ ಕ್ರಿಕೆಟರ್ಸ್ ನಿಂದ ನಾಯಕ ಸಪ್ಧರ್ ಆಲಿ,ನಿತಿನ್ ಮೂಲ್ಕಿ,ವಿನ್ಸೆಂಟ್, ಪ್ರವೀಣ್ ಪಿತ್ರೋಡಿ, ವಿಲ್ಫ್ರೆಡ್,ವಿಶ್ವನಾಥ್ ಹಾಗೂ ಚಕ್ರವರ್ತಿ ಕುಂದಾಪುರ ತಂಡ ನಾಯಕ ಶ್ರೀಪಾದ ಉಪಾಧ್ಯಾಯ ರ ಅನುಪಸ್ಥಿತಿಯಲ್ಲಿ ಸತೀಶ್ ಕೋಟ್ಯಾನ್ ರ ನಾಯಕತ್ವದಲ್ಲಿ ಮನೋಜ್ ನಾಯರ್,ಪ್ರದೀಪ್ ವಾಜ್,ಕೆ.ಪಿ.ಸತೀಶ್, ರಂಜಿತ್ ಶೆಟ್ಟಿ, ರಾಜಾ ಇನ್ನಿತರ ಹಿರಿಯ ದಂತಕಥೆಗಳು ದಶಕಗಳ ಬಳಿಕ ಮತ್ತೆ ಕಣಕ್ಕಿಳಿದಿದ್ದರು.

ಬೆಳಗ್ಗಿನ ಪಂದ್ಯಾಕೂಟ ಹಾಗೂ ಸಂಜೆಯ ವೆಬ್ಸೈಟ್ ಲೋಕಾರ್ಪಣಾ ಕಾರ್ಯಕ್ರಮದ ನೇರ ಪ್ರಸಾರವನ್ನು ಸಚಿನ್ ಮಹಾದೇವ್ ನೇತೃತ್ವದ M.SPORTS ವಿಶ್ವದಾದ್ಯಂತ ಪ್ರಸಾರ ಮಾಡಿದ್ದು,ಸಹಸ್ರಾರು ಮಂದಿ ವೀಕ್ಷಕರು ಅಪರೂಪದ ಸಮ್ಮಿಲನ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

                                                                                                                                         – ಆರ್.ಕೆ‌.ಆಚಾರ್ಯ ಕೋಟ

Categories
ಕ್ರಿಕೆಟ್

ಐಸಿಸಿ ವಿಶ್ವಕಪ್ ಕ್ರಿಕೆಟ್ ಭಾರತಕ್ಕೆ ವಿರೋಚಿತ ಸೋಲು!

2 ನೇ ಭಾರಿಗೆ ಫೈನಲ್ ಗೆ ಏರಿದ ನ್ಯೂಜಿಲ್ಯಾಂಡ್. ಮ್ಯಾಂಚೆಸ್ಟರ್ ನಲ್ಲಿ ಭಾರತ ಮತ್ತು ನ್ಯೂಜಿಲ್ಯಾಂಡ್ ತಂಡದ ನಡುವೆ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಭಾರತ ವಿರೋಚಿತ ಸೋಲು ಕಂಡಿದೆ.

ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಕಿವೀಸ್,ರಾಸ್ ಟೇಲರ್ ಮತ್ತು ನಾಯಕ ಕೇನ್ ವಿಲಿಯಮ್ಸನ್ ಅವರ ಆಕರ್ಷಕ ಅರ್ಧ ಶತಕಗಳ ನೆರವಿನಿಂದ ನ್ಯೂಜಿಲ್ಯಾಂಡ್ 50 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 239 ರನ್ ಪೇರಿಸಿತು.

ಶಿಸ್ತುಬದ್ಧ ಬೌಲಿಂಗ್ ಸಂಘಟಿಸಿದ ಭಾರತೀಯ ಬೌಲರ್ ಗಳು ನ್ಯೂಜಿಲ್ಯಾಂಡ್ ತಂಡವನ್ನು 250 ರ ಗಡಿ ಧಾಟದಂತೆ ನೋಡಿಕೊಂಡರು.ಭಾರತದ ಪರ ಉತ್ತಮ ದಾಳಿ ಸಂಘಟಿಸಿದ ಭುವನೇಶ್ವರ್ ಕುಮಾರ್ 3 ವಿಕೆಟ್ ಕಬಳಿಸಿದರೆ ಬುಮ್ರಾ,ಚಹಲ್,ಹಾರ್ದಿಕ ಪಾಂಡ್ಯ ಹಾಗೂ ಜಡೇಜಾ ತಲಾ ಒಂದು ವಿಕೆಟ್ ಪಡೆದು ಭುವಿ ಗೆ ಉತ್ತಮ ಸಾಥ್ ಕೊಟ್ಟರು.

240 ರನ್ ಗಳ ಗುರಿ ಬೆನ್ನತಿದ ಭಾರತ ತಂಡ ಆರಂಭಿಕದಲ್ಲೇ ಆಘಾತ ಅನುಭವಿಸಿತು.ಆರಂಭಿಕರಾಗಿ ಕ್ರೀಸ್ ಗೆ ಧಾವಿಸಿದ ರೋಹಿತ್ ಮತ್ತು ರಾಹುಲ್ ಬಂದ ದಾರಿಯಲ್ಲೇ ವಾಪಸಾದರು. ಭರ್ಜರಿ ಫಾರ್ಮ್ ನಲ್ಲಿದ್ದ ರೋಹಿತ್ ಕೇವಲ ಒಂದು ರನ್ ಗಳಿಸಿ ನಿರಾಸೆ ಮೂಡಿಸಿದರು.

ರಾಹುಲ್ ಕೂಡ ಬಂದಷ್ಟೆ ವೇಗವಾಗಿ ಪೆವಿಲಿಯನ್ ಗೆ ಹೋದರು.ನಾಯಕ ವಿರಾಟ್ ಕೊಹ್ಲಿ ಕೂಡ ಕೇವಲ ಒಂದು ರನ್ ಗಳಿಸಿ ಬೌಲ್ಟ್ ಗೆ ವಿಕೆಟ್ ಒಪ್ಪಿಸಿ ನಿರ್ಗಮಿಸಿದರು.ಒಂದು ಹಂತದಲ್ಲಿ 24 ರನ್ ಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಪಂತ್ ಮತ್ತು ಹಾರ್ದಿಕ್ ಪಾಂಡ್ಯ ಆಸರೆ ಆದರು.ಆದರೆ ಅವರ ಜೊತೆಯಾಟ ಕೂಡ ಬೇಗನೆ ಅಂತ್ಯಗೊಂಡು ಮತ್ತೊಮ್ಮೆ ತಂಡ ಸಂಕಷ್ಟದತ್ತವಾಲಿತು.

ಆದರೆ ನಂತರ ಬಂದ ರವೀಂದ್ರ ಜಡೇಜಾ ಮತ್ತು ಧೋನಿ ಅವರ ಉತ್ತಮ ಜೊತೆಯಾಟದ ನೆರವಿನಿಂದ ಭಾರತ ಗೆಲ್ಲುವ ಸಮೀಪ ಬಂದಿತ್ತು. ಇವರ ಇಬ್ಬರ ಜೊತೆಯಾಟದಲ್ಲಿ ತಂಡಕ್ಕೆ 116 ರನ್ ಹರಿದು ಬಂದಿತ್ತು.ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಜಡೇಜಾ 59 ಎಸೆತದಲ್ಲಿ 77 ರನ್ ಗಳಿಸಿದರು ಇದರಲ್ಲಿ 4 ಸಿಕ್ಸರ್ ಮತ್ತು 4 ಆಕರ್ಷಕ ಬೌಂಡರಿಕೂಡ ಗಳಿಸಿದ್ದರು ಬೌಲ್ಟ್ ಎಸೆತದಲ್ಲಿ ಸಿಕ್ಸರ್ ಬಾರಿಸಲು ಹೋಗಿ ವಿಲಿಯಮ್ಸನ್ ಗೆ ಕ್ಯಾಚಿತ್ತು ನಿರ್ಗಮಿಸಿದರು.ತಾಳ್ಮೆಯುತ ಆಟ ಪ್ರದರ್ಶಿಸಿದ ಧೋನಿ 72 ಎಸೆತಗಳಲ್ಲಿ 50 ರನ್ ಗಳಿಸಿ ರನ್ ಔಟ್ ಆಗಿ ಪೆವಿಲಿಯನ್ ಗೆ ವಾಪಸಾದರು.

ಕಿವೀಸ್ ಪರ ಹೆನ್ರಿ 3 ವಿಕೆಟ್ ಪಡೆದರೆ ಸ್ಯಾಂಟ್ನರ್,ಬೌಲ್ಟ್, 2 ವಿಕೆಟ್ ಕಬಳಿಸಿದರೆ ನೀಶಮ್ ಮತ್ತು ಫರ್ಗಿಸನ್ ತಲಾ ಒಂದು ವಿಕೆಟ್ ಪಡೆದು ಭಾರತೀಯ ಬ್ಯಾಟ್ಸಮನ್ ಗಳಿಗೆ ಕಡಿವಾಣ ಹಾಕಿದರು. ಅಂತಿಮವಾಗಿ ಭಾರತ 18 ರನ್ ಗಳಿಂದ ಪರಾಭವಗೊಂಡು ಈ ಭಾರಿಯ ವಿಶ್ವಕಪ್ ರೇಸ್ ನಿಂದ ಹೊರಬಿದ್ದಿತು.

Categories
ಕ್ರಿಕೆಟ್

ಭಾರತದ ಕ್ರಿಕೆಟ್ ನ ದಂತಕಥೆ ‘ಯುವರಾಜ’ ಇನ್ನು ಬ್ಲೂ ಜರ್ಸಿಯಲ್ಲಿ ನೆನೆಪು ಮಾತ್ರ

ಯುವರಾಜ್ ಸಿಂಗ್ ಎಂದೊಡನೆ ನಮಗೆಲ್ಲಾ ನೆನಪಿಗೆ ಬರುವುದೇ ಆ ೬ ಸಿಕ್ಸರ್ ಗಳು ಮತ್ತು ಮಹೇಂದ್ರ ಸಿಂಗ್ ಧೋನಿ ಅವರ ನಾಯಕತ್ವದಲ್ಲಿ ೨೦೦೭ರ ಟಿ೨೦ ವಿಶ್ವಕಪ್ ಮತ್ತು ೨೦೧೧ರ  ಏಕದಿನ ವಿಶ್ವಕಪ್ ಟೂರ್ನಿಯನ್ನು ಗೆಲ್ಲಲು ಯುವರಾಜ್ ಸಿಂಗ್ ಪ್ರಮುಖ ಪಾತ್ರ ವಹಿಸಿದ್ದರು.

ಯುವರಾಜ್ ಸಿಂಗ್  ಯೋಗರಾಜ್ ಸಿಂಗ್ ಮತ್ತು ಶಬ್ನಮ್ ಸಿಂಗ್ ಅವರ ಪುತ್ರನಾಗಿ ೧೨ ಡಿಸೆಂಬರ್ ೧೯೮೧ರಂದು ಚಂಡೀಗಡ್ ನಲ್ಲಿ ಜನಿಸಿದರು. ೩೦ ನವೆಂಬರ್ ೨೦೧೬ ರಂದು ಹಜೆಲ್ ಕೀಚ್ ಅವರನ್ನು ಯುವಿ ವಿವಾಹವಾಗಿದ್ದಾರೆ.

ಯುವರಾಜ್ ಸಿಂಗ್ ತಮ್ಮ ೧೩ ನೇ ವಯಸ್ಸಿಗೆ ಪಂಜಾಬ್ ತಂಡದ ಪರವಾಗಿ ೧೬ರ ವಯೋಮಿತಿಯ ತಂಡದಲ್ಲಿ ಆಡಿ ಜಮ್ಮು ಕಾಶ್ಮೀರ ತಂಡದ ವಿರುದ್ಧ ತಮ್ಮ  ಕ್ರಿಕೆಟ್ ಪಯಣವನ್ನು ಪ್ರಾರಂಭಿಸಿದರು. ಅದಾದ ನಂತರ ೧೯ ರ ವಯೋಮಿತಿಯಲ್ಲಿ ಹಿಮಾಚಲ ತಂಡ ವಿರುದ್ಧ  ಆಕರ್ಷಕ ೧೩೭ರನ್ ಗಳಿಸಿ ರಾಷ್ಟ್ರೀಯ ತಂಡಕ್ಕೆ ಸೇರ್ಪಡೆ ಆಗುವ ಎಲ್ಲಾ ಮುನ್ಸೂಚನೆಯನ್ನು ನೀಡಿದರು

೧೯೯೭ ರಲ್ಲಿ ಒಡಿಸ್ಸಾ ವಿರುದ್ಧ ತಮ್ಮ ಪ್ರಥಮ ದರ್ಜೆ ಪಂದ್ಯವನ್ನಾಡಿದ ಯುವಿ ಆಮೇಲೆ ಇಂದಿಗೂ ಹಿಂದಿರುಗಿ ನೋಡಲೇ ಇಲ್ಲ.ಅದಾದ ನಂತರ ಕೂಚ್ ಬಿಹಾರ್ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು.

೧೯೯೯-೨೦೦೦ ನೇ ಸಾಲಿನಲ್ಲಿ ರಣಜಿ ಟ್ರೋಫಿಯಲ್ಲಿ ಹರಿಯಾಣ ತಂಡದ ವಿರುದ್ಧ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿ ೧೪೯ ರನ್ ಗಳಿಸಿದ್ದರು.ಯುವಿ ೨೦೦೦ನೇ ಸಾಲಿನಲ್ಲಿ ೧೯ರ ವಯೋಮಿತಿಯ ವಿಶ್ವಕಪ್ ನಲ್ಲಿ ಮೊಹಮ್ಮದ್ ಕೈಫ್ ನೇತೃತ್ವದ ತಂಡದಲ್ಲಿ ಸ್ಥಾನ  ಗಿಟ್ಟಿಸಿದ್ದ ಯುವ ಭರ್ಜರಿ ಪ್ರದರ್ಶನದ ಮೂಲಕ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರರಾಗಿದ್ದರು. ೨೦೦೨ ರ ನಾಟ್ ವೆಸ್ಟ್ ಸರಣಿ ಗೆಲ್ಲಲು ಯುವರಾಜ್ ಸಿಂಗ್ ಪ್ರಮುಖ ಪಾತ್ರ ವಹಿಸಿದ್ದರು.

ಯುವರಾಜ್ ಸಿಂಗ್ 2000ನೇ ಇಸವಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದರು. 304 ಏಕದಿನ ಪಂದ್ಯಗಳನ್ನಾಡಿದ್ದು 8,701 ರನ್ ಹೊಡೆದಿದ್ದಾರೆ. ಇನ್ನು 52 ಅರ್ಧ ಶತಕ ಹಾಗೂ 14 ಶತಕ ಸಿಡಿಸಿದ್ದಾರೆ. 2003ರಲ್ಲಿ ಟೆಸ್ಟ್ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದ ಯುವಿ ಇಂಗ್ಲೆಂಡ್ ವಿರುದ್ಧ ಮೊದಲ ಪಂದ್ಯವನ್ನಾಡಿದ್ದರು. 40 ಟೆಸ್ಟ್ ಆಡಿರುವ ಯುವಿ 1900 ರನ್ ಬಾರಿಸಿದ್ದಾರೆ. ಇನ್ನು 11 ಅರ್ಧ ಶತಕ ಹಾಗೂ 3 ಶತಕ ಬಾರಿಸಿದ್ದಾರೆ.

ಯುವಿಯ ನಿವೃತ್ತಿಯ ಮಾತು:

25 ವರ್ಷಗಳ ಕಾಲದಿಂದ 22 ಯಾರ್ಡ್ ಪಿಚ್‌ನ ಆಚೀಚೆ, ಸುಮಾರು 17 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಒಳಗೆ, ಹೊರಗೆ ಇದ್ದ ನಾನು ನಿವೃತ್ತಿ ಘೋಷಿಸುತ್ತಿದ್ದೇನೆ. ಹೇಗೆ ಹೋರಾಡಬೇಕು, ಹೇಗೆ ಬೀಳಬೇಕು, ಹೇಗೆ ಧೂಳು ಕೊಡವಿಕೊಳ್ಳಬೇಕು ಮತ್ತು ಪುನಃ ಎದ್ದು ಮುನ್ನಡೆಯಬೇಕು ಎಂಬುದನ್ನೆಲ್ಲ ಈ ಆಟವು ನನಗೆ ಕಲಿಸಿಕೊಟ್ಟಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಯುವರಾಜ್ ಸಿಂಗ್ ಹೇಳಿದರು. ನಿವೃತ್ತಿ ಬಳಿಕ ಜಿಟಿ20 (ಕೆನಾಡಾ), ಐರ್ಲೆಂಡ್ ಮತ್ತು ಹಾಲೆಂಡ್ ನಲ್ಲಿನ ಯೂರೋ ಟಿ20ಯಂತ ಟೂರ್ನಿಗಳಲ್ಲಿ ಪಾಲ್ಗೊಳ್ಳುವ ಬಗ್ಗೆ ಅವರು ಬಿಸಿಸಿಐ ಜೊತೆ ಚರ್ಚಿಸಿ, ಸ್ಪಷ್ಟ ನಿರ್ಧಾರಕ್ಕೆ ಬರಲಿದ್ದಾರೆ.

ಯುವರಾಜ್ ಅವರಿಗೆ 2012 ರಲ್ಲಿ ಅರ್ಜುನ ಪ್ರಶಸ್ತಿ, ಭಾರತದ ಎರಡನೇ ಅತ್ಯುನ್ನತ ಕ್ರೀಡಾ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. 2014 ರಲ್ಲಿ, ಅವರಿಗೆ ಪದ್ಮಶ್ರೀ, ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಗೌರವ ನೀಡಿ ಗೌರವಿಸಲಾಯಿತು

ಕ್ಯಾನ್ಸರ್ ವಿರುದ್ಧ ಹೋರಾಡುತ್ತಲೇ ಭಾರತಕ್ಕೆ ತಂಡ ಸಾಕಷ್ಟು ಕೊಡುಗೆ ನೀಡಿರುವ ಯುವಿ, ಯುವಿಕ್ಯಾನ್ ಫೌಂಡೇಶನ್ ಮೂಲಕ ಹಲವು ಸಾಮಾಜಿಕ ಕೆಲಸಗಳನ್ನು ಮಾಡುತ್ತಿದ್ದಾರೆ. ಹಾಗೂ 2014ರಲ್ಲಿ ಯುವರಾಜ್ ಸಿಂಗ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ವಿಶ್ವಕಪ್ ಹೀರೊ :

1996ರಲ್ಲಿ ಅಂಡರ್ 15 ವಿಶ್ವಕಪ್, 2000ರಲ್ಲಿ ಅಂಡರ್ 19 ವಿಶ್ವಕಪ್, 2007ರಲ್ಲಿ ಟಿ20 ವಿಶ್ವಕಪ್, 2011ರ ವಿಶ್ವಕಪ್ ನಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ ಗೆದ್ದಿರುವ ಯುವರಾಜ್ ಸಿಂಗ್ ಅವರು ವಿಶ್ವಕಪ್ ಹೀರೋ ಆಗಿ, 2007ರಲ್ಲಿ ಇಂಗ್ಲೆಂಡಿನಲ್ಲಿ 6 ಎಸೆತಗಳಲ್ಲಿ 6 ಸಿಕ್ಸರ್ ಬಾರಿಸಿ ವಿಶ್ವ ದಾಖಲೆಯನ್ನು ಸ್ಥಾಪಿಸಿದರು

ಯುವಿ ಕ್ರಿಕೆಟ್ ನ ಅಂಕಿ ಅಂಶಗಳು :

  • ಟೆಸ್ಟ್ : 40 ಪಂದ್ಯ, 1900ರನ್, 33.92ರನ್ ಸರಾಸರಿ, 3 ಶತಕ, 11 ಅರ್ಧಶತಕ, 169 ಗರಿಷ್ಠ ರನ್ ಗಳಿಕೆ, 9ವಿಕೆಟ್
  • ಏಕದಿನ ಕ್ರಿಕೆಟ್ : 304 ಪಂದ್ಯ, 8,701 ರನ್, 36.55 ರನ್ ಸರಾಸರಿ, 14 ಶತಕ, 52 ಅರ್ಧ ಶತಕ, 150 ಗರಿಷ್ಠ ಮೊತ್ತ, 111 ವಿಕೆಟ್
  • ಟಿ20ಐ: 58 ಪಂದ್ಯ, 1177 ರನ್, 28.02 ರನ್ ಸರಾಸರಿ, 77ಅಜೇಯ ಗರಿಷ್ಠ ಮೊತ್ತ, 28 ವಿಕೆಟ್
  • ಪ್ರಥಮ ದರ್ಜೆ: 139 ಪಂದ್ಯ, 8965ರನ್, 44.16ರನ್ ಸರಾಸರಿ, 26ಶತಕ, 36 ಅರ್ಧಶತಕ, 260ಗರಿಷ್ಠ ಮೊತ್ತ, 41 ವಿಕೆಟ್. ಪಡೆದುಕೊಂಡಿದ್ದಾರೆ.– ಪ್ರೀತಮ್ ಹೆಬ್ಬಾರ್
Categories
ಕ್ರಿಕೆಟ್

ಲಂಕಾ ವಿರುದ್ಧ ರೋಹಿತ್ ಸೆಂಚುರಿ; ಸಚಿನ್, ಸಂಗಕ್ಕಾರ ದಾಖಲೆ ಪುಡಿ ಪುಡಿ!

ಲೀಡ್ಸ್(ಜು.06): ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ 5ನೇ ಶತಕ ದಾಖಲಿಸಿದ್ದಾರೆ. ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಅಬ್ಬರಿಸಿದ ರೋಹಿತ್ 92 ಎಸೆತದಲ್ಲಿ ಸೆಂಚುರಿ ಪೂರೈಸಿದರು. ಈ ಮೂಲಕ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಹಾಗೂ ಶ್ರೀಲಂಕಾದ ಕುಮಾರ  ಸಂಗಕ್ಕಾರ ದಾಖಲೆಯನ್ನು ಪುಡಿ ಮಾಡಿದ್ದಾರೆ.

ಲಂಕಾ ವಿರುದ್ಧದ ಶತಕದೊಂದಿಗೆ ರೋಹಿತ್, ವಿಶ್ವಕಪ್ ಟೂರ್ನಿಯೊಂದರಲ್ಲಿ ಗರಿಷ್ಠ ಶತಕ ಸಿಡಿಸಿದ ಕ್ರಿಕೆಟಿಗ ಅನ್ನೋ ದಾಖಲೆ ಬರೆದಿದ್ದಾರೆ. ಈ ಮೂಲಕ ಶ್ರೀಲಂಕಾದ ಕುಮಾರ ಸಂಗಕ್ಕಾರ ದಾಖಲೆಯನ್ನು ಪುಡಿ ಮಾಡಿದ್ದಾರೆ. 2015ರ ವಿಶ್ವಕಪ್ ಟೂರ್ನಿಯಲ್ಲಿ ಸಂಗಕ್ಕಾರ 4 ಸೆಂಚುರಿ ಸಿಡಿಸಿದ್ದರು. ಇದೀಗ ರೋಹಿತ್ 5 ಶತಕ ಸಿಡಿಸಿ ದಾಖಲೆ ಪುಡಿ ಮಾಡಿದ್ದಾರೆ.

2003 ರ ವಿಶ್ವಕಪ್ ಟೂರ್ನಿಯ ಲೀಗ್ ಹಂತದಲ್ಲಿ  ಸಚಿನ್ ತೆಂಡುಲ್ಕರ್ 586  ರನ್ ಸಿಡಿಸೋ ಮೂಲಕ ಗರಿಷ್ಠ ರನ್ ಸಿಡಿಸಿದ ಕ್ರಿಕೆಟಿಗ ಅನ್ನೋ ದಾಖಲೆ ಬರೆದಿದ್ದರು.  ಇದೀಗ ರೋಹಿತ್ ಈ ದಾಖಲೆ ಮುರಿದಿದ್ದಾರೆ. 2019 ವಿಶ್ವಕಪ್ ಟೂರ್ನಿಯಲ್ಲಿ ಸದ್ಯ ರೋಹಿತ್ ಗರಿಷ್ಠ ರನ್ ಸಿಡಿಸಿದ ಪಟ್ಟಿಯಲ್ಲಿ ಮೊದಲ ಸ್ಥಾನ ಅಲಂಕರಿಸಿದ್ದಾರೆ. ವಿಶ್ವಕಪ್ ಟೂರ್ನಿಯಲ್ಲಿ ಸಚಿನ್ ತೆಂಡುಲ್ಕರ್ ಒಟ್ಟು 6 ಶತಕ ಸಿಡಿಸಿದ್ದಾರೆ. ಇದೀಗ ರೋಹಿತ್ ಶರ್ಮಾ ವಿಶ್ವಕಪ್ ಟೂರ್ನಿಯಲ್ಲಿ ಒಟ್ಟು 6 ಶತಕ ಸಿಡಿಸೋ ಮೂಲಕ ಸಚಿನ್ ದಾಖಲೆ ಸರಿಗಟ್ಟಿದ್ದಾರೆ.

Categories
ಕ್ರಿಕೆಟ್ ಯಶೋಗಾಥೆ

ಟೆನಿಸ್ ಬಾಲ್ ಕ್ರಿಕೆಟ್ ನಲ್ಲಿ ಸಚಿನ್ “ಮಹಾದೇವ”

“DON’T CELEBRATE UNTIL U WIN”

ಇಂಗ್ಲೀಷ್ ನ ಈ ಮಾತು ಎಷ್ಟರ ಮಟ್ಟಿಗೆ ಸತ್ಯ ಎನ್ನುವುದನ್ನು,ಕ್ರಿಕೆಟ್ ಜಗತ್ತು ಹಿಂದೆಂದೂ ಕಾಣದ ರೋಚಕ ಪಂದ್ಯವೊಂದು ಸಮರ್ಥಿಸಿ ತೋರಿಸಿತ್ತು.

ಹೌದು ಆತ್ಮೀಯ ಕ್ರಿಕೆಟ್ ಪ್ರೇಮಿಗಳೇ,ಕ್ರಿಕೆಟ್ ಕೇವಲ ಮೂರ್ಖರ ಆಟವಷ್ಟೇ ಎಂದು ತಿಳಿದವರು ಸ್ವಯಂ ಮೂರ್ಖರು ಎನ್ನೋ ವಾದ ನನ್ನದು. ಶಿಸ್ತುಸಂಯಮ,ಸಂಯೋಜನೆ,ಹೋರಾಟ,ಸೋಲು ಗೆಲುವಿನ ಸಮಭಾವದ ಸ್ವೀಕೃತಿ ಕ್ರಿಕೆಟ್ ನಿಂದ ನಾವು  ಜೀವನದಲ್ಲಿ  ಅಳವಡಿಸಿಕೊಳ್ಳಬೇಕಾದ ಮಹತ್ತರ ಅಂಶಗಳು.

2013 ರ ಮಾರ್ಚ್ ನ ಸಮಯ.ಮಹಾಶಿವರಾತ್ರಿಯಂದು ಬಿ.ಜೆ.ಪಿ ಯುವಮೋರ್ಚಾ ವತಿಯಿಂದ ಯಲಹಂಕ ಉಪನಗರದ ಹೊಯ್ಸಳ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 2 ಲಕ್ಷ ಮೊತ್ತದ ಅದ್ಧೂರಿ Y.P.L(ಯಲಹಂಕ ಪ್ರಿಮಿಯರ್ ಲೀಗ್)ಐತಿಹಾಸಿಕ ಟೂರ್ನಿಯು,ರಾಜ್ಯ ಟೆನ್ನಿಸ್ ವಲಯವನ್ನು ನಿಬ್ಬೆರಗಾಗಿಸಿತ್ತು ಫೈನಲ್ ಪಂದ್ಯಾಟ.ಉಡುಪಿ,ದ.ಕ ಜಿಲ್ಲೆ ಸಹಿತ ರಾಜ್ಯದ ವಿವಿಧೆಡೆಯಿಂದ ಬಲಿಷ್ಟ ತಂಡಗಳು  ಬಾಗವಹಿಸಿದ್ದ ಈ ಟೂರ್ನಿಯಲ್ಲಿ ಅಂತಿಮವಾಗಿ ಬೆಂಗಳೂರಿನ ಯುವಕರ ಪಡೆ “ಎಸ್ ಝಡ್‌‌.ಸಿ.ಸಿ” ತಂಡ, ಟೆನ್ನಿಸ್ ಕ್ರಿಕೆಟ್ ನ (ಹಿರಿಯಣ್ಣ),ಸರಿ ಸುಮಾರು 5 ದಶಕಕ್ಕೂ ಮಿಗಿಲಾದ ಸುವರ್ಣ ಇತಿಹಾಸ ಬರೆದ “ಜೈ ಕರ್ನಾಟಕ ಬೆಂಗಳೂರು” ತಂಡವನ್ನು ಎದುರಿಸಲು ಸಜ್ಜಾಗಿದ್ದವು. ಜೈ ಕರ್ನಾಟಕ ಈ ಪಂದ್ಯಾಟದಲ್ಲಿ ನಿವೃತ್ತಿಯ ಹೊಸ್ತಿಲಲ್ಲಿದ್ದ ದಂತಕಥೆಗಳಾದ(ಸಾಂಬಾಜಿ,ಮನೋಹರ್,ಭಗವಾನ್,ನಾಗೇಶ್ ಸಿಂಗ್,ಮಹೇಶ್ (ಮ್ಯಾಕ್))ಹಿರಿಯ ಆಟಗಾರರನ್ನೇ ಕಣಕ್ಕಿಳಿಸಿತ್ತು‌.ಈ ಪಂದ್ಯಾಟದಲ್ಲಿ ಅದ್ಭುತ ಸವ್ಯಸಾಚಿ ಆಟಗಾರರಾದ ಜಾನ್,ಪ್ರದೀಪ್ ಗೌಡ ಹಾಗೂ ಕೀಪರ್ ಆಗಿ “ಕ್ರಿಕ್ ಸೇ ಗಿರೀಶ್ ರಾವ್, ಸಚಿನ್ ಮಹಾದೇವ್ ಯುವ ಆಟಗಾರರಾಗಿ ಪ್ರತಿನಿಧಿಸಿದ್ದರು.
ಮೊದಲು ಬ್ಯಾಟಿಂಗ್ ಮಾಡಿದ್ದ ಜೈ ಕರ್ನಾಟಕ 5 ಓವರ್ ನಲ್ಲಿ 18 ರನ್ ಗಳಿಸಿ 3 ವಿಕೆಟ್ ಕಳೆದುಕೊಂಡು ಶೋಚನೀಯ ಹಂತ ತಲುಪಿದಾಗ ,ನಂಬುಗೆಯ ಆಲ್ ರೌಂಡರ್ ಜಾನ್ ಹಾಗೂ ಸಚಿನ್ ಮಹಾದೇವ್ ರ ಬಿರುಸಿನ ಅಜೇಯ 30 ರನ್ನಿನ ಭಾಗೇದಾರೀಕೆಯ ಆಟ ಎದುರಾಳಿಗೆ 8 ಓವರ್ ಗೆ 49 ರನ್ ಗಳ ಸ್ಪರ್ಧಾತ್ಮಕ ಮೊತ್ತವನ್ನು ನಿಗದಿಗೊಳಿಸಿತ್ತು. ಬೆಂಬತ್ತಿದ “ಎಸ್.ಝಡ್.ಸಿ.ಸಿ” ಆಲ್ ರೌಂಡರ್ ಫಾರ್ಮ್ ನ ಉಚ್ಛ್ರಾಯ ಹಂತದಲ್ಲಿದ್ದ ಸ್ವಸ್ತಿಕ್ ನಾಗರಾಜ್ ರವರ ಅಮೂಲ್ಯ ಆಟದ ನೆರವಿನಿಂದ ಕೊನೆಯ 2 ಓವರ್ ಗಳಲ್ಲಿ ಕೇವಲ 4 ರನ್ ಗಳಷ್ಟೇ ಗಳಿಸಬೇಕಾದ ಹಂತಕ್ಕೆ ತಲುಪಿಸಿ ಔಟಾಗಿದ್ದರು.ಬಹುತೇಕ ವಿಜಯದ ಹೊಸ್ತಿಲಲ್ಲಿದ್ದ ಎಸ್‌.ಝಡ್.ಸಿ.ಸಿ
ಪಾಳಯದಲ್ಲಿ ಎಲ್ಲಿಲ್ಲದ ಸಂಭ್ರಮ ಮೂಡಿತ್ತು.ಮೈದಾನದ ಒಳ,ಹೊರಗೆ ಸಿಡಿಮದ್ದುಗಳ ಪ್ರದರ್ಶನ,ಬೆಂಬಲಿಗರು,ನೆರೆದಿದ್ದ ಪ್ರೇಕ್ಷಕರ ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು.
7 ನೇ ಓವರ್  ಅರುಣ್ ಎಸೆತಗಾರಿಕೆಯಲ್ಲಿ 3 ರನ್ ಹರಿದು ಬಂತು.ಕೊನೆಯ ಓವರ್ ನ ಜವಾಬ್ದಾರಿ ಯುವ ಸವ್ಯಸಾಚಿ “ಸಚಿನ್ ಮಹಾದೇವ್” ಹೆಗಲ ಮೇಲಾಯಿತು.ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ ಸಚಿನ್ ಮೇಡನ್ ಓವರ್ ಎಸೆದು 3 ವಿಕೆಟ್ ಉರುಳಿಸಿ,ನೆರೆದಿದ್ದ ಪ್ರೇಕ್ಷಕರನ್ನು ಮೂಕ  ವಿಸ್ಮಿತರನ್ನಾಗಿಸಿದ್ದರು.”ಜೈ ಕರ್ನಾಟಕ ಬೆಂಗಳೂರು” ಟ್ರೋಫಿ ಜಯಿಸಿತ್ತು. ಫೈನಲ್ ನ ಪಂದ್ಯಶ್ರೇಷ್ಠ ಪ್ರಶಸ್ತಿ ಅರ್ಹವಾಗಿ ಸಚಿನ್ ಪಡೆದಿದ್ದರು. ಈ ಪಂದ್ಯಾಟದ ಯಶಸ್ಸು ಸಚಿನ್ ರನ್ನು ರಾಜ್ಯಾದ್ಯಂತ ಪ್ರಸಿದ್ಧಿಗೊಳಿಸಿತ್ತು.
Categories
ಕ್ರಿಕೆಟ್ ಯಶೋಗಾಥೆ

ಕನಸುಗಳ ಬೆನ್ನಟ್ಟಿ ಗೆದ್ದ ನಂತರವಷ್ಟೇ ನಿಂತ ಕ್ರೀಡಾಳು ಈತ…

ಅವನೊಬ್ಬನಿದ್ದ ಕ್ರೊಯೇಷಿಯನ್ ಆಟಗಾರ.ಹೆಸರು ಗೊರಾನ್ ಇವಾನಿಸವಿಚ್.ಸರಿಸುಮಾರು ಆರುವರೆ ಅಡಿಯ ಸ್ಪುರದ್ರೂಪಿ ಕ್ರೀಡಾಳು.ತನ್ನ ಹದಿನೇಳನೆಯ ವಯಸ್ಸಿನಲ್ಲಿ ಟೆನ್ನಿಸ್ ಲೋಕಕ್ಕೆ ವೃತ್ತಿಪರನಾಗಿ ಕಾಲಿಟ್ಟಿದ್ದ.ಮೊದಮೊದಲ ವರ್ಷಗಳಲ್ಲಿ ಸೋಲುಗಳನ್ನು ಕಂಡವನು,ಅತಿ ವೇಗವಾಗಿ ಆಟದಲ್ಲಿ ಸುಧಾರಣೆಗಳನ್ನು ತಂದುಕೊಂಡ.ಹಾಗೆ ಸುಧಾರಿಸಿಕೊಂಡು ವೃತ್ತಿ ಜೀವನದ ನಾಲ್ಕನೇ ವರ್ಷದ ವೇಳೆಗೆ ತನ್ನ ಬದುಕಿನ ಮೊದಲ ವಿಂಬಲ್ಡನದ ಫೈನಲ್ಲಿಗೇರಿದ.

ನಿಮಗೆ ಗೊತ್ತಿರಲಿ.ಟೆನ್ನಿಸ್ ರಂಗದಲ್ಲಿ ವಿಂಬಲ್ಡನ್‌ಗೆ ತನ್ನದೇ ಆದ ಮೌಲ್ಯವಿದೆ.ಉಳಿದ ಅದೆಷ್ಟೇ ಗ್ರಾಂಡ್ಸ್ಲಾಮ್‌ಗಳನ್ನು ಗೆದ್ದರೂ ಟೆನ್ನಿಸ್ ಕಾಶಿಯೆನ್ನಿಸಿಕೊಂಡಿರುವ ವಿಂಬಲ್ಡನ್‌ನಲ್ಲಿ ಪ್ರಶಸ್ತಿ ಗೆಲ್ಲದಿದ್ದರೆ ಆಟಗಾರ ಶ್ರೇಷ್ಟನೆಂದು ಪರಿಗಣಿತನಾಗಲಾರ. ಸಾಲುಸಾಲು ಪ್ರಶಸ್ತಿಗಳನ್ನು ಗೆದ್ದನಂತರವೂ ವಿಂಬಲ್ಡನ್ ಗೆದ್ದ ನಂತರವಷ್ಟೇ ರಾಫೆಲ್ ನಡಾಲ್‌ನನ್ನು ವಿಶ್ವ ಟೆನ್ನಿಸ್ ದಿಗ್ಗಜನೆಂದು ಗುರುತಿಸಿತ್ತು ಎನ್ನುವುದು ಅದಕ್ಕೊಂದು ಉದಾಹರಣೆ .ಹಾಗಿರುವ ವಿಂಬಲ್ಡನ್ ಟೆನ್ನಿಸ್‌ನ ಫೈನಲ್ ಪ್ರವೇಶಿಸಿದ್ದ ಗೊರಾನ್‌ಗೆ ಮೊದಲ ಬಾರಿ ಅನುಭವ ಕೊರತೆಯಿತ್ತು. ಎದುರಾಳಿಯಾಗಿದ್ದ ಅಗಾಸ್ಸಿಗೂ ಅದು ಮೊದಲ ವಿಂಬಲ್ಡನ್ ಫೈನಲ್ ಅನುಭವವೇ.ಆದರೆ ಅದಕ್ಕೂ ಮುನ್ನ ಮೂರು ಬಾರಿ ಪ್ರತಿಷ್ಟಿತ ಗ್ರಾಂಡ್‌ಸ್ಲಾಮ್ ಫೈನಲ್ ತಲುಪಿದ ಅನುಭವ ಅಗಾಸ್ಸಿಗಿತ್ತು.ಅಷ್ಟಾಗಿಯೂ ಇಬ್ಬರ ನಡುವಣ ಫೈನಲ್ ಪೂರ್ತಿ ಐದು ಸೆಟ್‌ಗಳವರೆಗೆ ನಡೆದಿತ್ತು.ಕೊನೆಗೆ ರೋಚಕ ಫೈನಲ್ಲಿನಲ್ಲಿ ಅಗಾಸ್ಸಿ ಗೆಲುವಿನ ನಗೆ ಬೀರಿದ್ದ.

ಗೆದ್ದ ಅಗಾಸಿಗೆ ಗೆಲುವಿನ ಸಂಭ್ರಮವಾದರೆ ಸೋತ ಗೊರಾನ್‌ಗೆ ನಿರಾಸೆ.ಆದರೆ ಗೋರಾನ್ ಸ್ಪೂರ್ತಿಯುತವಾಗಿಯೇ ಸೋಲನ್ನು ಸ್ವೀಕರಿಸಿದ್ದ.1992ರಲ್ಲಿ ಸೋತವನು ಪುನ: 1994ರಲ್ಲಿ ವಿಂಬಲ್ಡನ್ ಫೈನಲ್ ಪ್ರವೇಶಿಸಿದ್ದ ಗೋರಾನ್.ಈ ಬಾರಿ ಎದುರಿಗಿದ್ದವನು ದೈತ್ಯ ಪ್ರತಿಭೆ ಅಮೇರಿಕಾದ ಪೀಟ್ ಸಾಂಪ್ರಾಸ್.ಅದಾಗಲೇ ಪೀಟ್‌ಗೆ ಒಂದು ವಿಂಬಲ್ಡನ್ ಸೇರಿದಂತೆ ನಾಲ್ಕು ಗ್ರಾಂಡ್‌ಸ್ಲಾಮ್ ಗೆದ್ದ ಅನುಭವವಿತ್ತು.ಸಹಜವಾಗಿಯೇ ಪೀಟ್ ಆ ಬಾರಿಯ ಗೆಲುವಿಗೆ ನೆಚ್ಚಿನ ಆಟಗಾರನಾಗಿದ್ದ.ಸುಲಭವಾಗಿ ಸಾಂಪ್ರಾಸ್ ಗೆದ್ದು ಬಿಡುತ್ತಾನೆನ್ನುವುದು ಎಲ್ಲರ ಎಣಿಕೆಯಾಗಿತ್ತು.ನಿರೀಕ್ಷೆಯಂತೆ ಪೀಟ್ ಗೆದ್ದು ಬೀಗಿದ್ದ.ತೀವ್ರ ಹೋರಾಟ ನೀಡಿದ್ದ ಗೋರಾನ್‌ಗೆ ಮತ್ತೆ ಸೋಲಿನ ಆಘಾತ.ಮುಂದೆ ನಾಲ್ಕು ವರ್ಷಗಳ ಕಾಲ ಹೇಳಿಕೊಳ್ಳುವಂತಹ ಗೆಲುವು ಗೋರಾನ್‌ಗಿರಲಿಲ್ಲ.ಆದರೆ ಸತತ ಪ್ರಯತ್ನದಿಂದ 1998ರಲ್ಲಿ ಮತ್ತೊಮ್ಮೆ ಆತ ವಿಂಬಲ್ಡನ್ ಫೈನಲ್ ತಲುಪಿಕೊಂಡ.ಎದುರಿಗಿದ್ದವನು ಮತ್ತದೇ ಪೀಟ್ ಸಾಂಪ್ರಾಸ್. ಅಷ್ಟೊತ್ತಿಗಾಗಲೇ ಸಾಂಪ್ರಾಸ್ ,ಟೆನ್ನಿಸ್ ಲೋಕದ ದಂತಕತೆಯಾಗಿದ್ದವನು,ನಾಲ್ಕು ವಿಂಬಲ್ಡನ್ ಸೇರಿದಂತೆ ಒಟ್ಟು ಹತ್ತು ಗ್ರಾಂಡ್‌ಸ್ಲಾಮ್ ಗೆದ್ದು ಅಗ್ರಸ್ಥಾನಿಯಾಗಿದ್ದವನು.ಈ ಬಾರಿ ಇವಾನೆಸವಿಚ್ ಅವನಿಗೊಬ್ಬ ಶಕ್ತ ಎದುರಾಳಿಯೂ ಅಲ್ಲ ಎನ್ನುವುದು ಎಲ್ಲರ ಎಣಿಕೆಯಾಗಿತ್ತು.ಎಲ್ಲರ ಎಣಿಕೆ ಸುಳ್ಳಾಗುವಂತೆ ಆಡಿದವನು ಗೋರಾನ್.ಐದು ಸೆಟ್ಟುಗಳಲ್ಲಿ ಸಾಂಪ್ರಾಸ್ಸ‌ನಿಗೆ ಅಕ್ಷರಶ: ಬೆವರಿಳಿಸಿಬಿಟ್ಟಿದ್ದ ಗೋರಾನ್.ಇನ್ನೇನು ಗೆಲ್ಲುತ್ತಾನೇನೋ ಎನ್ನುವ ಹಂತದಲ್ಲಿ ಅನಗತ್ಯ ತಪ್ಪುಗಳನ್ನೆಸಗಿ ಸೋತು ಹೋಗಿದ್ದ.

ಮೂರು ಮೂರು ಫೈನಲ್ ಸೋಲುಗಳ ನಂತರ ಅಧೀರನಾಗಿದ್ದ ಗೋರಾನ್.ಗೆಲುವು ತುಂಬ ಸಮೀಪ ಬಂದು ಮೋಸ ಮಾಡಿತ್ತು. ನಿರಾಶನಾಗಿದ್ದ ಗೋರಾನ್,ದೇಹ ಪ್ರಕೃತಿ ಹದಗೆಟ್ಟಿತ್ತು.ಪದೇ ಪದೇ ಗಾಯದ ಸಮಸ್ಯೆಯಿಂದ ಆತ ಬಳಲಾರಂಭಿಸಿದ್ದ.ಅನೇಕ ಟೂರ್ನಿಗಳಲ್ಲಿ ಗೈರು ಹಾಜರಾದ ಅವನ ರ‌್ಯಾಂಕಿಂಗ್ ಸಹಜವಾಗಿಯೇ  ಪಾತಾಳಕ್ಕಿಳಿದಿತ್ತು.ತೀರ 125ನೇ ರ‌್ಯಾಂಕಿಗಿಳಿದು ಹೋದ ಅವನೆಡೆಗೆ ಅಭಿಮಾನಿಗಳಿಗೊಂದು ವಿಷಾದವಿತ್ತು.ಆವತ್ತಿನ ಕ್ರೀಡಾಭಿಮಾನಿಗಳ ಪ್ರಕಾರ ಅವನ ಕ್ರೀಡಾ ಜೀವನ ಮುಗಿದು ಹೋಗಿತ್ತು.

ಇಲ್ಲ, ಮುಗಿದಿಲ್ಲ ಎನ್ನುತ್ತ ಮತ್ತೆ ಎದ್ದು ನಿಂತಿದ್ದ ಗೋರಾನ್ 2001ರಲ್ಲಿ.ಆ ವರ್ಷ ವಿಂಬಲ್ಡನ್ ಮಂಡಳಿ ಆತನಿಗೆ ಆತನ ಹಿಂದಿನ ಪ್ರದರ್ಶನವನ್ನು ಪರಿಗಣಿಸಿ ವೈಲ್ಡ್ ಕಾರ್ಡ್ ಪ್ರವೇಶ ನೀಡಿತ್ತು. ತನಗಿದು ಕೊನೆಯ ಅವಕಾಶವೆಂದರಿತ ಗೋರಾನ್, ರಣಗಂಭೀರವಾಗಿ ಸೆಣದಾಡಿದ್ದ.ಎಲ್ಲರ ನಿರೀಕ್ಷೆ ಮೀರಿ ಆತ ಮಗದೊಮ್ಮೆ ಫೈನಲ್ ತಲುಪಿಕೊಂಡಿದ್ದ.ಈ ಬಾರಿ ಅವನ ಎದುರಾಳಿ ಆವತ್ತಿನ ಅಗ್ರಸ್ಥಾನಿ ಪ್ಯಾಟ್ರಿಕ್ ರಾಪ್ಟರ್.ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಮದಗಜಗಳಂತೆ ಸೆಣಸಿದ್ದರು ಇಬ್ಬರು.ಮೊದಲ ಮತ್ತು ಮೂರನೇ ಸೆಟ್ ಗೋರಾನ್ ಗೆದ್ದರೆ ಎರಡನೇ ಮತ್ತು ನಾಲ್ಕನೇ ಸೆಟ್ ರಾಪ್ಟರ್ ಗೆದ್ದಿದ್ದ.ನಿರ್ಣಾಯಕ ಸೆಟ್ ಅಕ್ಷರಶ: ಯುದ್ಧವೇ.ಇನ್ನೇನು ಕೊನೆಯ ಕ್ಷಣಗಳಲ್ಲಿ ಗೊರಾನ್ ಗೆಲ್ಲುತ್ತಾನೇನೋ ಎನ್ನಿಸುವಷ್ಟರಲ್ಲಿ ಮತ್ತೊಮ್ಮೆ ಅನಗತ್ಯ ತಪ್ಪುಗಳನ್ನು ಮಾಡಿಬಿಟ್ಟಿದ್ದ ಗೋರಾನ್.ಬಹುಶ: ಆ ಹೊತ್ತಿಗೆ ಗತಕಾಲದ ಸೋಲುಗಳ ನೆನಪು ಅವನ ಏಕಾಗ್ರತೆಯನ್ನು ತಾತ್ಕಾಲಿಕವಾಗಿ ಭಂಗಗೊಳಿಸಿತ್ತು.ಥತ್..!! ಮತ್ತೆ ಸೋತ ಎಂದುಕೊಂಡರು ಜನ.ಊಹುಂ.. ಬಾರಿ ಬಾಗಲಿಲ್ಲ ಅವನು.ಕೊನೆಯ ಹಂತಕ್ಕೆ ರ‌್ಯಾಪ್ಟರ್‌ನನ್ನು ಬಗ್ಗು ಬಡಿದು ಚೊಚ್ಚಲ ಗ್ರಾಂಡ್‌ಸ್ಲಾಮ್ ಮುಡಿಗೇರಿಸಿಕೊಂಡುಬಿಟ್ಟ ಏಸ್‌ಗಳ ರಾಜನೆಂದು ಬಿರುದಾಂಕಿತನಾಗಿದ್ದ ಗೋರಾನ್ ಇವಾನೆಸವಿಚ್.

ಸೋಲುಗಳ ಮೇಲೆ ಸೋಲು,ಗಾಯದ ಸಮಸ್ಯೆ ಎಲ್ಲವನ್ನೂ ಮೆಟ್ಟಿನಿಂತು ತನ್ನ ವೃತ್ತಿ ಬದುಕಿನ ಸಂಜೆಯಲ್ಲಿ ಗ್ರಾಂಡ್‌ಸ್ಲಾಮ್ ಗೆದ್ದ ಗೋರಾನ್‌ನ ಕತೆ ಇಂದಿಗೂ ಅನೇಕರಿಗೆ ದಾರಿದೀಪ. ತನ್ನ ಹದಿನೇಳನೆಯ ವಯಸ್ಸಲ್ಲಿ ಕರಿಯರ್ ಆರಂಭಿಸಿದ ಗೋರಾನ್, ಪ್ರತಿಷ್ಟಿತ ಪ್ರಶಸ್ತಿ ಗೆದ್ದಿದ್ದು ತನ್ನ ಮೂವತ್ತೊಂದನೇ ವಯಸ್ಸಿನಲ್ಲಿ. ಸರಿಸುಮಾರು ಒಂದೂವರೆ ದಶಕಗಳ ಕಾಲದ ನಂತರ ಕನಸನ್ನು ನನಸಾಗಿಸಿಕೊಂಡ ಗೋರಾನ್‌ನ ಕತೆ ಯಾವತ್ತಿಗೂ ಸ್ಪೂರ್ತಿದಾಯಕವೇ. ಕನಸುಗಳ ಬೆನ್ನಟ್ಟಿ ಹೋದರೆ ಗೆಲ್ಲುವವರೆಗೂ ನಿಲ್ಲಬಾರದು ಎನ್ನುವುದಕ್ಕೆ ಇವಾನೆಸವಿಚ್ ಒಂದು ಉದಾಹರಣೆ.ಕ್ರೀಡಾ ಜಗತ್ತೇ ಹಾಗೆ.ಇಲ್ಲಿ ಸೋಲು ಗೆಲವುಗಳು ಮಾತ್ರವಲ್ಲ,ಬದುಕಿನ ಗೆಲುವಿಗೂ ಅನೇಕ ಚಂದದ ಪಾಠಗಳಿವೆ.ನೋಡುವುದನ್ನು ನಾವು ಕಲಿಯಬೇಕಷ್ಟೇ.

ಗುರುರಾಜ್ ಕೋಡ್ಕಣಿ 

Categories
ಕ್ರಿಕೆಟ್ ರಾಜ್ಯ

ಕೆ.ಎಸ್.ಸಿ.ಎ 3 ನೇ ಡಿವಿಜನ್ : ಆಕರ್ಷಕ ಶತಕ ಸಿಡಿಸಿದ ನಿತಿನ್.ಜಿ.ಮೂಲ್ಕಿ

ಬೆಂಗಳೂರಿನ ರೇವೋ ಯೂನಿವರ್ಸಿಟಿ ಅಂಗಣದಲ್ಲಿ ” ನಸ್ಸೂರ್ ಸ್ಮಾರಕ‌ ಟ್ರೋಫಿ”ಗಾಗಿ ನಡೆಯುತ್ತಿರುವ  ಕೆ.ಎಸ್.ಸಿ.ಎ 3 ನೇ ಡಿವಿಜನ್ ಪಂದ್ಯಾಕೂಟದಲ್ಲಿ B.E.L ಕಾಲನಿ ರಿಕ್ರಿಯೇಶನ್ ಕ್ಲಬ್ ವಿರುದ್ದ 83 ಎಸೆತಗಳಲ್ಲಿ 14 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ ಬಿರುಸಿನ ಶತಕ 106 ರನ್ ಗಳಿಸುವ ಮೂಲಕ ತಾನಾಡಿದ ತಂಡ ವಿಶ್ವೇಶ್ವರಪುರಂ ಕ್ರಿಕೆಟ್ ಕ್ಲಬ್ ತಂಡಕ್ಕೆ 215 ರನ್ ಅಂತರದ ದಾಖಲೆಯ ಗೆಲುವನ್ನು ತಂದಿತ್ತಿದ್ದಾರೆ.

ಕರ್ನಾಟಕ ರಾಜ್ಯ ಟೆನ್ನಿಸ್ ಕ್ರಿಕೆಟ್ ಇತಿಹಾಸದ ಆದರ್ಶ ಕಪ್ತಾನ ಶರತ್ ಶೆಟ್ಟಿ ಪಡುಬಿದ್ರಿ ನೇತೃತ್ವದ ಪ್ರತಿಷ್ಠಿತ ತಂಡ “ಪಡುಬಿದ್ರಿ ಫ್ರೆಂಡ್ಸ್” ತಂಡದ ಮೂಲಕ ತನ್ನ ಕ್ರಿಕೆಟ್ ಜೀವನ ಪ್ರಾರಂಭಿಸಿದ್ದ ಇವರು,ಕ್ರಿಕೆಟ್ ಜೀವನದುದ್ದಕ್ಕೂ ರಾಜ್ಯದ ಅತ್ಯಂತ ಶಿಸ್ತುಬದ್ಧ ಆಟಗಾರನಾಗಿ ಗುರುತಿಸಿಕೊಂಡಿದ್ದು ನಿತಿನ್.ಜಿ‌.ಮೂಲ್ಕಿ ಯವರ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿ.

ಟೆನ್ನಿಸ್ ಕ್ರಿಕೆಟ್ ನಿಂದ ಪ್ರಾರಂಭವಾದ ಇವರ ಕೀರ್ತಿ ಅಂತರಾಷ್ಟ್ರೀಯ ಮಟ್ಟದವರೆಗೂ ವ್ಯಾಪಿಸಿದೆ. ಯು.ಎ.ಇ ಯ ಅಂತರಾಷ್ಟ್ರೀಯ ತಂಡದಲ್ಲಿ ವಿಶ್ವಕಪ್‌ ಅರ್ಹತಾ ಸುತ್ತಿನ ಪಂದ್ಯಗಳನ್ನು ಆಡಿ ಗಮನಾರ್ಹ ನಿರ್ವಹಣೆ ತೋರಿದ್ದರು.

ರಾಜ್ಯದ ಪ್ರತಿಷ್ಠಿತ ಕೆ.ಪಿ.ಎಲ್ ಪಂದ್ಯಾವಳಿಗಳಲ್ಲಿ ಮಂಗಳೂರು ಯುನೈಟೆಡ್,ಬೆಳಗಾವಿ ಪ್ಯಾಂಥರ್ಸ್ ಹಾಗೂ ಬಿಜಾಪುರ ಬುಲ್ಸ್ ನ ಪರವಾಗಿ‌ ಆಡಿದ ಅನುಭವ ಹೊಂದಿದ್ದಾರೆ.

M.P.L ನ ಈ ಬಾರಿಯ ಆವೃತ್ತಿಯಲ್ಲಿ ಕಾರ್ಕಳ ಗ್ಲಾಡಿಯೇಟರ್ಸ್ ಪರವಾಗಿ ಆಡಿ ಸರ್ವಾಂಗೀಣ ಪ್ರದರ್ಶನ ತೋರಿ ಸರಣಿ ಶ್ರೇಷ್ಠ ಪ್ರಶಸ್ತಿಯಾಗಿ “ರೆನಿಗೇಡ್ ಕಮಾಂಡೋ 300 ಸಿ.ಸಿ” ದುಬಾರಿ ದ್ವಿಚಕ್ರ ವಾಹನವನ್ನು ಪಡೆದಿದ್ದು,ತಂಡಕ್ಕೆ ಚಾಂಪಿಯನ್ ಪಟ್ಟ ತೊಡಿಸುವಲ್ಲಿ ಬಹುಮುಖ್ಯ ಪಾತ್ರ ನಿರ್ವಹಿಸಿದ್ದರು.

(ಮುಂದಿನ ದಿನಗಳಲ್ಲಿ “ಸ್ಪೋರ್ಟ್ಸ್ ಕನ್ನಡ” ವೆಬ್ ಸೈಟ್ ನಲ್ಲಿ  ನಿತಿನ್.ಜಿ‌.ಮೂಲ್ಕಿ ಯವರ ಕ್ರೀಡಾ ಜೀವನದ ಸಾಧನೆಗಳನ್ನು ಬರೆಯಲಿದ್ದೇನೆ).

ಆರ್.ಕೆ.ಆಚಾರ್ಯ ಕೋಟ