ಶಿಖರ್ ಶೆಟ್ಟಿ ಮೈಸೂರು ವಾರಿಯರ್ಸ್ ತಂಡಕ್ಕೆ ಆಯ್ಕೆ: ಕುಂದಾಪುರದ ಪ್ರತಿಭೆಗೆ ಮಹಾರಾಜ ಟ್ರೋಫಿಯಲ್ಲಿ ಮಹತ್ವದ ಅವಕಾಶ

ಶಿಖರ್ ಶೆಟ್ಟಿ ಮೈಸೂರು ವಾರಿಯರ್ಸ್ ತಂಡಕ್ಕೆ ಆಯ್ಕೆ: ಕುಂದಾಪುರದ ಪ್ರತಿಭೆಗೆ ಮಹಾರಾಜ ಟ್ರೋಫಿಯಲ್ಲಿ ಮಹತ್ವದ ಅವಕಾಶ

 

ಕುಂದಾಪುರದ ಯುವ ಕ್ರಿಕೆಟಿಗ ಶಿಖರ್ ಶೆಟ್ಟಿ ಅವರು ಈ ವರ್ಷದ ಮಹಾರಾಜ ಟ್ರೋಫಿ ಟಿ20 ಲೀಗ್‌ಗಾಗಿ ಆಯೋಜಿಸಲಾದ ಹರಾಜಿನಲ್ಲಿ ಶಕ್ತಿಯುತ ಮೈಸೂರು ವಾರಿಯರ್ಸ್ ತಂಡದ ಭಾಗವಾಗಿ ಆಯ್ಕೆಯಾಗಿದ್ದಾರೆ. ಇವರು ಸ್ಲೋ ಲೆಫ್ಟ್ ಆರ್ಮ್ ಆರ್ಥೋಡಾಕ್ಸ್ ಬೌಲರ್.

ಕಳೆದ ಬಾರಿಯ ಚಾಂಪಿಯನ್ ಮೈಸೂರು ವಾರಿಯರ್ಸ್ ತಂಡವು ಶಿಖರ್ ಶೆಟ್ಟಿಗೆ ಚಾನ್ಸ್ ನೀಡಿದ್ದು, ಈ ವರ್ಷದ ಮಹಾರಾಜ ಟ್ರೋಫಿಗೆ ಅವರು ತಂಡದ ಪ್ರಮುಖ ಆಟಗಾರರಾಗಿದ್ದಾರೆ. ಹರಾಜಿನಲ್ಲಿ ಮೈಸೂರು ವಾರಿಯರ್ಸ್ ತಂಡವು ಶಿಖರ್ ಶೆಟ್ಟಿಯನ್ನು ರೂ. 4.75 ಲಕ್ಷ ಮೊತ್ತಕ್ಕೆ ಖರೀದಿಸಿದೆ. 

ಹಿಂದಿನ ವರ್ಷ ಶಿಖರ್ ಬೆಂಗಳೂರು ಮೂಲದ ಕಲ್ಯಾಣಿ ಬ್ಲಾಸ್ಟರ್ಸ್ ತಂಡದ ಪರವಾಗಿ ಆಡಿದ್ದರು. ಅವರು ಬೌಲರ್‌ಗಿಂತಲೂ ಉತ್ತಮ ಫೀಲ್ಡರ್‌ ಆಗಿ ಗಮನ ಸೆಳೆದಿದ್ದರು. ಮೈದಾನದಲ್ಲಿ ಅವರ ಚುರುಕುತನ ಹಾಗೂ ಸಾಮರ್ಥ್ಯತೆಯಿಂದ ಅವರು ಪ್ರೇಕ್ಷಕರ ಮನಸೆಳೆಯುವಲ್ಲಿ ಯಶಸ್ವಿಯಾಗಿದ್ದರು. ಈ ಬಾರಿ ಮೈಸೂರಿನ ಪರ ಅವರು ಇನ್ನಷ್ಟು ಸ್ಫೂರ್ತಿದಾಯಕ ಪ್ರದರ್ಶನ ನೀಡಲಿದ್ದಾರೆ ಎಂಬ ನಿರೀಕ್ಷೆಯಿದೆ.

ಕರಾವಳಿ ಕ್ರಿಕೆಟರ್ಸ್ ಕುಂದಾಪುರದ ರಾಜೇಶ್ ಶೆಟ್ಟಿಯವರ ಪುತ್ರರಾದ ಶಿಖರ್, ತಮ್ಮ ಉಜ್ವಲ ಪ್ರದರ್ಶನದಿಂದಲೇ ಮುಂದೆ ಬಂದವರು. ತಮ್ಮ ಶ್ರದ್ಧೆ, ಪರಿಶ್ರಮ ಹಾಗೂ ನಿರಂತರ ಅಭ್ಯಾಸದಿಂದ ಈ ಸಾಧನೆ ಸಾಧ್ಯವಾಗಿದೆ. ಶಿಖರ್ ಶೆಟ್ಟಿಯವರ ತಂದೆ ರಾಜೇಶ್ ಶೆಟ್ಟಿ ಇವರು ಟೆನಿಸ್ಬಾಲ್ ಕ್ರಿಕೆಟ್ ನ ಪ್ರಸಿದ್ಧ ತಂಡಗಳಾದ ಕರಾವಳಿ ಕುಂದಾಪುರ, ಚಕ್ರವರ್ತಿ ಕುಂದಾಪುರ ಹಾಗೂ ಟೊರ್ಪೆಡೋಸ್ ಕುಂದಾಪುರ ತಂಡಗಳನ್ನು ಪ್ರತಿನಿಧಿಸಿದ್ದರು.

ಸ್ಪೋರ್ಟ್ಸ್ ಕನ್ನಡದ ಪರವಾಗಿ ಶಿಖರ್ ಶೆಟ್ಟಿಗೆ ಹಾರ್ದಿಕ ಅಭಿನಂದನೆಗಳು. ಮುಂಬರುವ ಮಹಾರಾಜ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡಿ ನಮ್ಮೂರ ಕೀರ್ತಿ ಹೆಚ್ಚಿಸಲಿ ಎಂಬ ಹಾರೈಕೆ!

 

 

Leave a Reply

Your email address will not be published. Required fields are marked *