
ನಿಜವಾಯ್ತು ಸ್ಪೋರ್ಟ್ಸ್ ಕನ್ನಡ ವರದಿ, ರಣಜಿ ಟ್ರೋಫಿಗೆ ಅಭಿಲಾಷ್ ಶೆಟ್ಟಿ ಪಾದಾರ್ಪಣೆ!
ಉಡುಪಿ ಜಿಲ್ಲೆಯ ಕೋಟಾದ ಮೂಡು ಗಿಳಿಯಾರಿನ ಅಭಿಲಾಷ್ ಶೆಟ್ಟಿ ರಣಜಿ ಟ್ರೋಫಿಗೆ ಪಾದಾರ್ಪಣೆ ಮಾಡಿದ್ದಾರೆ.ಬಂಗಾಳ ವಿರುದ್ಧ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ಆರಂಭಗೊಂಡ ರಣಜಿ ಪಂದ್ಯದ ಮೂಲಕ ಅಭಿಲಾಷ್ ಶೆಟ್ಟಿ ಪ್ರಥಮದರ್ಜೆ ಕ್ರಿಕೆಟ್’ಗೆ ಕಾಲಿಟ್ಟರು.
ಬಂಗಾಳ ವಿರುದ್ಧ ರಣಜಿ ಟ್ರೋಫಿಗೆ ಅಭಿಲಾಷ್ ಶೆಟ್ಟಿ ಪಾದಾರ್ಪಣೆ ಮಾಡಲಿದ್ದಾರೆ ಎಂದು ‘ಸ್ಪೋರ್ಟ್ಸ್ ಕನ್ನಡ’ ವಾರದ ಹಿಂದೆಯೇ ವರದಿ ಮಾಡಿತ್ತು. ಆ ವರದಿ ನಿಜವಾಗಿದೆ.


ಮನೆಯಂಗಳದಲ್ಲೇ ರಣಜಿ ಪಾದಾರ್ಪಣೆಯ ಅದ್ಭುತ ಅವಕಾಶ ಪಡೆದ ಅಭಿಲಾಷ್ ಶೆಟ್ಟಿ, ಮೊದಲ ಪಂದ್ಯದಲ್ಲಿ 15 ಓವರ್ ಬೌಲಿಂಗ್ ಮಾಡಿ, 52 ರನ್ನಿತ್ತು 1 ವಿಕೆಟ್ ಪಡೆದರು. ಬಂಗಾಳದ ಅಲ್ವಿನ್ ಘೋಷ್ ಪ್ರಥಮದರ್ಜೆ ಕ್ರಿಕೆಟ್’ನಲ್ಲಿ ಕರಾವಳಿ ಹುಡುಗನ ಮೊದಲ ಬಲಿಯಾದರು.

ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿರುವ ಬಂಗಾಳ ತಂಡ ಪ್ರಥಮ ದಿನದಂತ್ಯಕ್ಕೆ 78 ಓವರ್’ಗಳಲ್ಲಿ 5 ವಿಕೆಟ್ ನಷ್ಟಕ್ಕೆ 249 ರನ್ ಕಲೆ ಹಾಕಿದೆ. ಬಂಗಾಳ ಪರ ಅನುಸ್ತೂಪ್ ಮಂಜುಮ್ದಾರ್ ಅಮೋಘ ಶತಕ (101) ಬಾರಿಸಿದ್ರೆ, ಕರ್ನಾಟಕ ಪರ ಬಲಗೈ ಮಧ್ಯಮ ವೇಗಿ ವಿ.ಕೌಶಿಕ್ 18 ಓವರ್’ಗಳಲ್ಲಿ ಕೇವಲ 29 ರನ್ನಿತ್ತು 3 ವಿಕೆಟ್ ಪಡೆದಿದ್ದಾರೆ.






