
ಇದರ ಹಿಂದೆ ಒಂದು ದೊಡ್ಡ ಕಥೆಯೇ ಇದೆ..!
2008ರಲ್ಲಿ ಐಪಿಎಲ್ ಆರಂಭಗೊಂಡಾಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಯಾರು ಎಂಬ ಪ್ರಶ್ನೆಗೆ 2ನೇ ಮಾತೇ ಇಲ್ಲದೆ ಉತ್ತರವಾದವರು ರಾಹುಲ್ ದ್ರಾವಿಡ್. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಇತಿಹಾಸದ ಮೊದಲ ಪಂದ್ಯ.. ನಾನಾ ಕಾರಣಗಳಿಗೆ ಇತಿಹಾಸದ ಪುಟ ಸೇರಿದ್ದ ಪಂದ್ಯವದು. ಬ್ರೆಂಡನ್ ಮೆಕ್ಕಲಂ ಬಾರಿಸಿದ್ದ ವಿಧ್ವಂಸಕ ಶತಕ.. ಕೋಲ್ಕತಾ ನೈಟ್ ರೈಡರ್ಸ್ ತಂಡ ನಿರ್ಮಿಸಿದ್ದ 222 ರನ್’ಗಳ ಪರ್ವತ..
ಆ ಪರ್ವತದ ಮುಂದೆ ರಾಯಲ್ ಚಾಲೆಂಜರ್ಸ್ ಪರ ರಾಹುಲ್ ದ್ರಾವಿಡ್ ಜೊತೆ ವಸೀಮ್ ಜಾಫರ್ ಇನ್ನಿಂಗ್ಸ್ ಆರಂಭಿಸಲು ಬಂದಾಗ ಪಂದ್ಯ ನೋಡುತ್ತಿದ್ದವರಿಗೆ ಅಚ್ಚರಿಯಾಗಿತ್ತು. 20 ಓವರ್’ಗಳಲ್ಲಿ 223 ರನ್ ಗಳಿಸಬೇಕಾದ ಹೊತ್ತಲ್ಲಿ ಇಬ್ಬರು ಟೆಸ್ಟ್ ಸ್ಪೆಷಲಿಸ್ಟ್’ಗಳು ಬ್ಯಾಟ್ ಹಿಡಿದು ಬಂದರೆ ಅಚ್ಚರಿಯಾಗದೆ ಇರಲು ಹೇಗೆ ಸಾಧ್ಯ..? ನಿರೀಕ್ಷೆಯಂತೆ rcb 140 ರನ್’ಗಳ ಭಾರೀ ಅಂತರದಿಂದ ಪಂದ್ಯ ಸೋತಿತು.

ದ್ರಾವಿಡ್ ಅವರ ನಾಯಕತ್ವದಲ್ಲಿ ರಾಯಲ್ ಚಾಲೆಂಜರ್ಸ್ ತಂಡ ಕೊನೆಯಿಂದ 2ನೇ ಸ್ಥಾನ ಪಡೆದಿತ್ತು. ಹಾಗಂತ ಅದರಲ್ಲಿ ದ್ರಾವಿಡ್ ಅವರ ದೋಷವಿರಲಿಲ್ಲ.ವಿಜಯ್ ಮಲ್ಯ ಆಯ್ಕೆ ಮಾಡಿದ್ದ ತಂಡವೇ ಹಾಗಿತ್ತು. ಟೆಸ್ಟ್ ಸ್ಪೆಷಲಿಸ್ಟ್’ಗಳನ್ನು ಹುಡುಕಿ ಹುಡುಕಿ ತಂಡಕ್ಕೆ ಆಯ್ಕೆ ಮಾಡಿದ್ದರು.

ಮುಂದಿನ ವರ್ಷಕ್ಕೆ ತಂಡಕ್ಕೆ ಸರ್ಜರಿ ಮಾಡುವ ಬದಲು ದ್ರಾವಿಡ್ ಅವರನ್ನೇ ನಾಯಕ ಪಟ್ಟದಿಂದ ಕೆಳಗಿಳಿಸಲಾಯಿತು. ದ್ರಾವಿಡ್ ಹಲ್ಲು ಕಚ್ಚಿ ಸಹಿಸಿಕೊಂಡರು. ನಾಯಕನಾಗಿ ಬಂದ ಕೆವಿನ್ ಪೀಟರ್ಸನ್ ತಂಡವನ್ನು ಉದ್ಧಾರ ಮಾಡಿದ್ದು ಅಷ್ಟರಲ್ಲೇ ಇದೆ. ತಂಡ ಸೋತು ಸೋತು ಸುಣ್ಣಾವಾಗುತ್ತಿದ್ದಾಗ ವಿಜಯ್ ಮಲ್ಯ ಕರೆದು ಪಟ್ಟ ಕಟ್ಟಿದ್ದ ಪೀಟರ್ಸನ್ ಟೂರ್ನಿಯನ್ನು ಅರ್ಧದಲ್ಲೇ ತೊರೆದು ವಾಪಸ್ ಹೋಗಿದ್ದ. ನಂತರ ತಂಡವನ್ನು ಫೈನಲ್’ಗೆ ಮುನ್ನಡೆಸಿದವರು ಮತ್ತೊಬ್ಬ ಕನ್ನಡಿಗ ಅನಿಲ್ ಕುಂಬ್ಳೆ.
2010ರಲ್ಲೂ ದ್ರಾವಿಡ್ ಆಟಗಾರನಾಗಿ rcb ಪರ ಆಡಿದರು. ದ್ರಾವಿಡ್ ಅವರ ಒಂದು ವಿಶೇಷತೆ ಏನೆಂದರೆ.. ಯಾವುದೇ ತಂಡದ ಪರ, ಯಾವುದೇ ಫಾರ್ಮ್ಯಾಟ್’ನಲ್ಲಿ, ಯಾವುದೇ ಕ್ರಮಾಂಕದಲ್ಲಿ ಆಡಿದರೂ ತಂಡಕ್ಕೆ ಅವರು ಯಾವತ್ತೂ ಹೊರೆಯಾದವರಲ್ಲ. ತಮ್ಮ ಜವಾಬ್ದಾರಿಯನ್ನು ಅತ್ಯಂತ ಅಚ್ಚುಕಟ್ಟಾಗಿ ನಿಭಾಯಿಸಿದವರು ದ್ರಾವಿಡ್. ಆದರೆ 2009ರಲ್ಲಿ ನಾಯಕತ್ವದಿಂದ ದ್ರಾವಿಡ್ ಅವರನ್ನು ಕಿತ್ತು ಹಾಕಿದವರು ಈ ಬಾರಿ ತಂಡದಿಂದಲೇ ಕಿತ್ತು ಹಾಕಿದರು. ಇಲ್ಲಿ ಕತ್ತಲು ಕವಿದರೆ ಇನ್ನೆಲ್ಲೋ ಬೆಳಕು ಮೂಡಿದೆ ಎಂದೇ ಅರ್ಥ.

ರಾಯಲ್ ಚಾಲೆಂಜರ್ಸ್ ತಂಡದ ಮಾಲೀಕರು ದ್ರಾವಿಡ್ ಅವರಿಗೆ ಮಾಡಿದ್ದು ಅವತ್ತು ಅವಮಾನ ಮಾಡಿದ್ದರು. ಅವರಲ್ಲಿ ಆಟವಿತ್ತು, ಹಸಿವಿತ್ತು. ಆದರೆ #rcb ಮಾಲೀಕರಿಗೆ ಅದಾವುದೂ ಬೇಕಿರಲಿಲ್ಲ. ದ್ರಾವಿಡ್ ಎದ್ದು ನಡೆದರು. ಹಾಗೆ ನಡೆದವರನ್ನು ಗೌರವ ಕೊಟ್ಟು ಆಲಿಂಗಿಸಿಕೊಂಡದ್ದು ರಾಜಸ್ಥಾನ್ ರಾಯಲ್ಸ್.
ಅವಕಾಶ ಕೊಟ್ಟದ್ದಷ್ಟೇ ಅಲ್ಲ.. ತಂಡದ ನಾಯಕತ್ವದ ಚುಕ್ಕಾಣಿಯನ್ನೂ ದ್ರಾವಿಡ್ ಅವರ ಕೈಗೆ ಕೊಟ್ಟರು.
ರಾಜಸ್ಥಾನ್ ರಾಯಲ್ಸ್ ಪರ ರಾಹುಲ್ ದ್ರಾವಿಡ್ ಆಡಿದ ಆಟ, ತಂಡವನ್ನು ಮುನ್ನಡೆಸಿದ ಪರಿ ಅದ್ಭುತ. ಟಿ20 ಕ್ರಿಕೆಟ್’ಗೆ ಲಾಯಕ್ಕಿಲ್ಲ ಎನಿಸಿಕೊಂಡಿದ್ದ ಮುಂಬೈನ ಅಜಿಂಕ್ಯ ರಹಾನೆಗೆ ಅವಕಾಶಗಳನ್ನು ಕೊಟ್ಟರು. ಸಂಜು ಸ್ಯಾಮ್ಸನ್, ಕರುಣ್ ನಾಯರ್’ರಂತ ಹುಡುಗರನ್ನು ಬೆಳೆಸಿದರು. 2013ರ ಐಪಿಎಲ್’ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಪ್ಲೇ ಆಫ್’ಗೆ ಮುನ್ನಡೆಸಿದ್ದ ದ್ರಾವಿಡ್, ಅದೇ ವರ್ಷ ನಡೆದ ಚಾಂಪಿಯನ್ ಲೀಗ್ ಟಿ20 ಟೂರ್ನಿಯಲ್ಲಿ ಪಾಯಲ್ಸ್ ಪಡೆಯನ್ನು ಫೈನಲ್’ಗೆ ಮುನ್ನಡೆಸಿದ್ದರು. 2013ರಲ್ಲಿ ಐಪಿಎಲ್’ಗೂ ನಿವೃತ್ತಿ ಘೋಷಿಸಿದ್ದ ದ್ರಾವಿಡ್ 2014 ಮತ್ತು 2015ರಲ್ಲಿ ರಾಯಲ್ಸ್ ತಂಡದ ಮಾರ್ಗದರ್ಶಕರಾಗಿದ್ದರು. ಇದೀಗ 9 ವರ್ಷಗಳ ನಂತರ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಹೆಡ್ ಕೋಚ್ ಆಗಿ ಮರಳಿದ್ದಾರೆ.




