
ಕೌಶಿಕ್ ಬೆಂಕಿ ಬೌಲಿಂಗ್ಗೆ ಉದುರಿ ಹೋದ ಉತ್ತರ ಪ್ರದೇಶ!
ಉತ್ತರ ಪ್ರದೇಶ ವಿರುದ್ಧ ಲಕ್ನೋದ ಏಕನಾ ಕ್ರೀಡಾಂಗಣದಲ್ಲಿ ಆರಂಭಗೊಂಡ ರಣಜಿ ಟ್ರೋಫಿ ಎಲೈಟ್ ಸಿ ಗುಂಪಿನ ಪಂದ್ಯದಲ್ಲಿ ಕರ್ನಾಟಕ ತಂಡ ಮೊದಲ ದಿನವೇ ಮೇಲುಗೈ ಸಾಧಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಉತ್ತರ ಪ್ರದೇಶ, ಕರ್ನಾಟಕ ಅನುಭವಿ ಬಲಗೈ ವೇಗದ ಬೌಲರ್ ವಾಸುಕಿ ಕೌಶಿಕ್ ದಾಳಿಗೆ ತತ್ತರಿಸಿತು. ಆತಿಥೇಯರ ಮೇಲೆ ಮಾರಕವಾಗಿ ಎರಗಿದ ಕೌಶಿಕ್ 16 ಓವರ್’ಗಳಲ್ಲಿ ಕೇವಲ 20 ರನ್ನಿತ್ತು 5 ವಿಕೆಟ್ ಕಬಳಿಸಿದರು. ಬಂಗಾಳ ವಿರುದ್ಧ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ಪ್ರಥಮ ಇನ್ನಿಂಗ್ಸ್’ನಲ್ಲೂ ಕೌಶಿಕ್ ಐದು ವಿಕೆಟ್ ಪಡೆದಿದ್ದರು.


ವಿ.ಕೌಶಿಕ್ ಅವರ ಮಾರಕ ದಾಳಿಗೆ ತತ್ತರಿಸಿದ ಉತ್ತರ ಪ್ರದೇಶ ತಂಡ, ತನ್ನ ಪ್ರಥಮ ಇನ್ನಿಂಗ್ಸ್’ನಲ್ಲಿ ಕೇವಲ 89 ರನ್ನಿಗೆ ಆಲೌಟಾಯಿತು. ಕರ್ನಾಟಕ ಪರ ಕೌಶಿಕ್’ಗೆ ಉತ್ತಮವಾಗಿ ಸಾಥ್ ಕೊಟ್ಟ ಯುವ ಬಲಗೈ ವೇಗದ ಬೌಲರ್ ವಿದ್ಯಾಧರ ಪಾಟೀಲ್ 22 ರನ್ನಿಗೆ 2 ವಿಕೆಟ್ ಪಡೆದರೆ, ರಣಜಿ ಟ್ರೋಫಿಗೆ ಪದಾರ್ಪಣೆ ಮಾಡಿದ ಯುವ ಆಲ್ರೌಂಡರ್ ಯಶೋವರ್ಧನ್ ಪರಂತಪ್ 1 ವಿಕೆಟ್ ಹಾಗೂ ಯುವ ಆಫ್’ಸ್ಪಿನ್ನರ್ ಮೊಹ್ಸಿನ್ ಖಾನ್ ಒಂದು ವಿಕೆಟ್ ಕಬಳಿಸಿದರು.
ನಂತರ ತನ್ನ ಪ್ರಥಮ ಇನ್ನಿಂಗ್ಸ್ ಆರಂಭಿಸಿದ ಕರ್ನಾಟಕ ತಂಡ ಪ್ರಥಮ ದಿನದಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 127 ರನ್ ಗಳಿಸಿ, 38 ರನ್’ಗಳ ಮುನ್ನಡೆ ಸಾಧಿಸಿದೆ. ಕರ್ನಾಟಕ ಪರ ಆರಂಭಿಕ ಆಟಗಾರ ನಿಕಿನ್ ಜೋಸ್ ಮತ್ತು ಸ್ಮರಣ್ ಆರ್. ಶೂನ್ಯಕ್ಕೆ ಔಟಾದರೆ, ನಾಯಕ ಮಯಾಂಕ್ ಅಗರ್ವಾಲ್ 30, ಮಾಜಿ ನಾಯಕ ಮನೀಶ್ ಪಾಂಡೆ 6 ಹಾಗೂ ಅಭಿನವ್ ಮನೋಹರ್ 6 ರನ್ನಿಗೆ ವಿಕೆಟ್ ಒಪ್ಪಿಸಿದ್ದಾರೆ. ಆರಂಭಿಕ ಆಘಾತ ಎದುರಿಸಿದ ಕರ್ನಾಟಕ ತಂಡಕ್ಕೆ ಪದಾರ್ಪಣೆಯ ರಣಜಿ ಪಂದ್ಯದಲ್ಲಿ ಮಿಂಚಿದ ವಿಕೆಟ್ ಕೀಪರ್ ಕೃಷ್ಣನ್ ಶ್ರೀಜಿತ್ ಅಜೇಯ ಅರ್ಧಶತಕದೊಂದಿಗೆ ಆಸರೆಯಾದರು. ಶ್ರೀಜಿತ್ ಅಜೇಯ 68 ಹಾಗೂ ಆಲ್ರೌಂಡರ್ ಶ್ರೇಯಸ್ ಗೋಪಾಲ್ ಅಜೇಯ 14 ರನ್’ಗಳೊಂದಿಗೆ ಎರಡನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.




