
RCBಗೆ ಬೇಡವಾದರೇನಂತೆ.. ಕನ್ನಡಿಗನಿಗೆ ಮಣೆ ಹಾಕಿದ ಡೆಲ್ಲಿ ಕ್ಯಾಪಿಟಲ್ಸ್!
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ scouting ತಂಡ, ಅಂದರೆ ಪ್ರತಿಭಾನ್ವೇಷಣೆ ತಂಡದ ಮುಖ್ಯಸ್ಥನಾಗಿ ಕುಳಿತಿರುವವನು ತಮಿಳುನಾಡಿನ average ಕ್ರಿಕೆಟರ್ ಮಲೋಲನ್ ರಂಗರಾಜನ್. ಕರ್ನಾಟಕದ ಕ್ರಿಕೆಟ್ ದಿಗ್ಗಜರನ್ನು ಕಡೆಗಣಿಸಿದ ತಮಿಳುನಾಡಿನ ಮಹಾಶಯನಿಗೆ ಮಣೆ ಹಾಕಿದ ತಪ್ಪಿಗೆ ಆರ್.ಸಿ.ಬಿ ತಂಡ ಕಪ್ ಗೆಲ್ಲುತ್ತಿಲ್ಲ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕನ್ನಡಿಗರನ್ನು ಕಡೆಗಣಿಸಿದರೇನಂತೆ? ಡೆಲ್ಲಿ ಕ್ಯಾಪಿಟಲ್ಸ್ ನಮ್ಮ ಕನ್ನಡಿಗನನ್ನು ಕೈ ಬೀಸಿ ಕರೆದಿದೆ. ಹೌದು. ಕರ್ನಾಟಕದ ರಣಜಿ ಹೀರೋಗಳಲ್ಲಿ ಒಬ್ಬರಾಗಿರುವ ರಾಜ್ಯದ ದಿಗ್ಗಜ ಕ್ರಿಕೆಟಿಗ ವಿಜಯ್ ಭಾರದ್ವಾಜ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ತನ್ನ ಸ್ಕೌಟಿಂಗ್ ತಂಡದ ಮುಖ್ಯಸ್ಥರನ್ನಾಗಿ ನೇಮಕ ಮಾಡಿದೆ.

ವಿಜಯ್ ಮಲ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಲೀಕರಾಗಿದ್ದಾಗ ಕರ್ನಾಟಕ ಆಟಗಾರರಿಗೆ ಹೆಚ್ಚು ಹೆಚ್ಚು ಅವಕಾಶಗಳನ್ನು ಕೊಟ್ಟಿದ್ದರು. ಐಪಿಎಲ್’ನ ಆರಂಭದ ದಿನಗಳಲ್ಲಿ ವಿಜಯ್ ಭಾರದ್ವಾಜ್ ಆರ್.ಸಿ.ಬಿ ತಂಡದ ಅಸಿಸ್ಟೆಂಟ್ ಕೋಚ್ ಆಗಿದ್ದರು.
ಬಲಗೈ ಬ್ಯಾಟ್ಸ್’ಮನ್ ಮತ್ತು ಬಲಗೈ ಆಫ್’ಸ್ಪಿನ್ನರ್ ಆಗಿದ್ದ 49 ವರ್ಷದ ವಿಜಯ್ ಭಾರದ್ವಾಜ್ ಭಾರತ ಪರ 3 ಟೆಸ್ಟ್ ಹಾಗೂ 10 ಏಕದಿನ ಪಂದ್ಯಗಳನ್ನಾಡಿದ್ದಾರೆೆ. 1999ರಲ್ಲಿ ನೈರೋಬಿಯಲ್ಲಿ ನಡೆದ ತ್ರಿಕೋನ ಸರಣಿಯ ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದ ವಿಜಯ್ ಭಾರದ್ವಾಜ್ ಮೊದಲ ಸರಣಿಯಲ್ಲೇ ಮ್ಯಾನ್ ಆಫ್ ದಿ ಸೀರೀಸ್ ಆಗಿ ಮೂಡಿ ಬಂದಿದ್ದರು. ದೇಶೀಯ ಕ್ರಿಕೆಟ್’ನ ಅತ್ಯುತ್ತಮ ಆಲ್ರೌಂಡರ್ ಆಗಿದ್ದ ಭಾರದ್ವಾಜ್ 90ರ ದಶಕದಲ್ಲಿ ಕರ್ನಾಟಕ ರಣಜಿ ತಂಡದ ಹೀರೊಗಳಲ್ಲಿ ಒಬ್ಬರಾಗಿದ್ದರು.




