
ರಣಜಿ ಚಾಂಪಿಯನ್ ಮುಂಬೈ ತಂಡ, 15ನೇ ಬಾರಿ ಇರಾನಿ ಕಪ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ. ಲಕ್ನೋದ ಅಟಲ್ ಬಿಹಾರಿ ವಾಜಪೇಯಿ – ಏಕನಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ರೆಸ್ಟ್ ಆಫ್ ಇಂಡಿಯಾ ವಿರುದ್ಧ ಇನ್ನಿಂಗ್ಸ್ ಮುನ್ನಡೆ ಆಧಾರದಲ್ಲಿ ಮುಂಬೈ ಇರಾನಿ ಕಪ್’ನಲ್ಲಿ ಚಾಂಪಿಯನ್ ಪಟ್ಟಕ್ಕೇರಿದೆ.
ಮುಂಬೈ ತಂಡದ ಎರಡನೇ ಇನ್ನಿಂಗ್ಸ್’ನಲ್ಲಿ ಮಂಗಳೂರು ಮೂಲದ ಆಟಗಾರ ತನುಷ್ ಕೋಟ್ಯಾನ್ ಅಮೋಘ ಶತಕದೊಂದಿಗೆ ಮಿಂಚಿದ್ದಾರೆ. ಮುಂಬೈ ಪರ ಆಡುತ್ತಿರುವ ತನುಷ್ ಕೋಟ್ಯಾನ್ 2ನೇ ಕ್ರಮಾಂಕದಲ್ಲಿ ಕ್ರೀಸ್’ಗಿಳಿದು 150 ಎಸೆತಗಳಲ್ಲಿ 10 ಬೌಂಡರಿ ಮತ್ತು ಒಂದು ಸಿಕ್ಸರ್ ನೆರವಿನಿಂದ ಅಜೇಯ 114 ರನ್ ಗಳಿಸಿದರು.

25 ವರ್ಷದ ತನುಷ್ ಕೋಟ್ಯಾನ್ ಪ್ರತಿಭಾವಂತ ಆಲ್ರೌಂಡರ್. ಆಫ್ ಸ್ಪಿನ್ನರ್ ಆಗಿರುವ ತನುಷ್ ಉತ್ತಮ ಬ್ಯಾಟ್ಸ್’ಮನ್ ಕೂಡ ಹೌದು.
2018ರಲ್ಲಿ ಮುಂಬೈ ಪರ ಪ್ರಥಮದರ್ಜೆ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದದ ತನುಷ್ ಕೋಟ್ಯಾನ್ ಇಲ್ಲಿವರೆಗೆ ಒಟ್ಟು 30 ಪ್ರಥಮದರ್ಜೆ ಪಂದ್ಯಗಳನ್ನಾಡಿದ್ದಾರೆ. 30 ಪಂದ್ಯಗಳಿಂದ 88 ವಿಕೆಟ್’ಗಳನ್ನು ಪಡೆದಿರುವ ತನುಷ್ 2 ಶತಕಗಳು ಹಾಗೂ 13 ಅರ್ಧಶತಕಗಳ ಸಹಿತ 45.34ರ ಸರಾಸರಿಯಲ್ಲಿ 1451 ರನ್ ಗಳಿಸಿದ್ದಾರೆ. 19 ಲಿಸ್ಟ್ ಎ ಪಂದ್ಯಗಳನ್ನಾಡಿರುವ ತನುಷ್ ಕೋಟ್ಯಾನ್ 20 ವಿಕೆಟ್ ಹಾಗೂ 90 ರನ್ ಗಳಿಸಿದ್ದಾರೆ. ಐಪಿಎಲ್ ಸಹಿತ ಆಡಿರುವ 24 ಟಿ20 ಪಂದ್ಯಗಳಿಂದ 24 ವಿಕೆಟ್ ಪಡೆದಿರುವ ತನುಷ್ ಕೋಟ್ಯಾನ್ 86 ರನ್ ಗಳಿಸಿದ್ದಾರೆ.

ತನುಷ್ ಕೋಟ್ಯಾನ್ ಹುಟ್ಟಿದ್ದು ದೇಶದ ವಾಣಿಜ್ಯ ನಗರಿ ಮುಂಬೈನಲ್ಲಿ. ಅವರ ತಂದೆ ಕರುಣಾಕರ್ ಕೋಟ್ಯಾನ್ ಮಂಗಳೂರು ಮೂಲದವರು. ಕರಾವಳಿಯಿಂದ ಮುಂಬೈಗೆ ಹೋಗಿ ಅಲ್ಲೇ ನೆಲೆಸಿರುವ ಕರುಣಾಕರ್, ಪುತ್ರನನ್ನು ಕ್ರಿಕೆಟಿಗನನ್ನಾಗಿ ರೂಪಿಸುವಲ್ಲಿ ಯಶಸ್ವಿಯಾಗಿದ್ದಾರೆ.




