
ಆರ್.ಸಿ.ಬಿ ಯಾವತ್ತೂ ಮರೆಯದ..ಮರೆಯಲಾಗದ.. ಮರೆಯಬಾರದ ಮಾಣಿಕ್ಯ..!

ಅವನ ಜೀವನವೇ ಹೋರಾಟ.. ಕೈ ಹಿಡಿದ ಪತ್ನಿಯಿಂದ ಮೋಸ..
ಪ್ರಾಣ ಸ್ನೇಹಿತನಿಂದ ನಂಬಿಕೆ ದ್ರೋಹ.. ಜೀವನವನ್ನೇ ಕೊನೆಗಾಣಿಸಿ ಬಿಡಬೇಕೆಂಬ ಜಿಗುಪ್ಸೆ.. ಹತಾಶೆ.. ಮನೆಯ ನಾಲ್ಕು ಗೋಡೆಗಳ ಮಧ್ಯೆ ತನ್ನನ್ನು ಬಂಧಿಸಿಕೊಂಡು ಪ್ರತೀ ದಿನ ಮಾನಸಿಕ ಚಿತ್ರಹಿಂಸೆ ಅನುಭವಿಸಿದ್ದವನು ಅಲ್ಲಿಂದ ಎದ್ದು ಬಂದು ಇಟ್ಟ ಒಂದೊಂದು ಹೆಜ್ಜೆಯೂ ಚರಿತ್ರೆ..
ಆಟಗಾರನಾಗಿ ಕ್ರಿಕೆಟ್ ಬದುಕಿನ ಕೊನೆಯ ಅಧ್ಯಾಯ ಆರಂಭಿಸಿದ್ದವನಿಗೆ ಅವಕಾಶ ಕೊಟ್ಟದ್ದು ರಾಯಲ್ ಚಾಲೆಂಜರ್ಸ್..

ಬೆಂಗಳೂರು ಬಳಗ ಸೇರಿಕೊಂಡವನು ಹೊಸ ಇತಿಹಾಸವನ್ನೇ ಬರೆದು ಬಿಟ್ಟ. ಅಲ್ಲಿಂದ ಒಂದು ಹೆಜ್ಜೆ ಮುಂದಿಟ್ಟವನು ನಂಬಲಸಾಧ್ಯ ರೀತಿಯಲ್ಲಿ ಭಾರತ ಪರ 12 ವರ್ಷಗಳ ನಂತರ ಟಿ20 ವಿಶ್ವಕಪ್ ಆಡಿದ.. ಮತ್ತೆರಡು ವರ್ಷ ಆರ್.ಸಿ.ಬಿ ಪರ ಆಟ.. ಕಳೆದ ವರ್ಷ ನಿವೃತ್ತಿ ಘೋಷಿಸಿದವನು ರಾಯಲ್ ಚಾಲೆಂಜರ್ಸ್ ತಂಡದ ಮಾರ್ಗದರ್ಶಕ ಜವಾಬ್ದಾರಿ ಹೊತ್ತುಕೊಳ್ಳುತ್ತಾನೆ.
ಆ ಕ್ಷಣ ಮತ್ತದೇ ಕುಹಕ, ಮತ್ತದೇ ಮೂದಲಿಕೆ..
‘’17 ವರ್ಷಗಳಲ್ಲಿ ಎಂತೆಂಥವರ ಕೈಯಲ್ಲಿ ಏನೂ ಆಗಲಿಲ್ಲ, ಈಗ ಇವನೇನು ಮಾಡಿಯಾನು..?’ ಎಂದವರಿಗೆ ಉತ್ತರ ಕೊಟ್ಟಿದ್ದಾನೆ ಅವನು.. ಅಂದ ಹಾಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸಾಗುತ್ತಿದ್ದ ದಿಕ್ಕನ್ನೇ ಬದಲಿಸಿದವನ ಹೆಸರು ಡಿ.ಕೆ.. ದಿನೇಶ್ ಕಾರ್ತಿಕ್..

ರಾಯಲ್ ಚಾಲೆಂಜರ್ಸ್’ನ ಯಶೋಗಾಥೆಯ ಶ್ರೇಯಸ್ಸು ನಿಸ್ಸಂದೇಹವಾಗಿ ಆಟಗಾರರದ್ದು. ಆದರೆ ಒಬ್ಬ ಡಿ.ಕೆ ಸಾಹೇಬನ ಪಾತ್ರವನ್ನು ಮರೆತು ಬಿಟ್ಟರೆ ಅದು ಸಾಧುವಲ್ಲ.
‘’17 ವರ್ಷಗಳಲ್ಲಿ ಆಗದ್ದು ಈಗೇಕೆ ಸಾಧ್ಯವಾಯಿತು’’ ಎಂಬ ಪ್ರಶ್ನೆಗೆ ಉತ್ತರ ದಿನೇಶ್ ಕಾರ್ತಿಕ್.
ಮೆಂಟರ್ ಆಗಿ ಆರ್.ಸಿ.ಬಿ ತಂಡದಲ್ಲಿ ಹೊಸ ಜವಾಬ್ದಾರಿಗೆ ಹೆಗಲಾಗಿದ್ದ ಡಿ.ಕೆ ಪ್ಲಾನ್ ಆಫ್ ಆ್ಯಕ್ಷನ್ ಸ್ಪಷ್ಟ ಇತ್ತು. ಪ್ರತೀ ಬಾರಿ ದೊಡ್ಡ ಸ್ಟಾರ್’ಗಳ ಹಿಂದೆ ಬಿದ್ದು ಅವರಿಗೆ ಕೋಟಿ ಕೋಟಿ ಸುರಿದು ಕೈ ಸುಟ್ಟುಕೊಳ್ಳುತ್ತಿದ್ದ ಆರ್.ಸಿ.ಬಿ ಈ ಬಾರಿ ಆ ತಪ್ಪು ಮಾಡಲಿಲ್ಲ. ಕಾರಣ, ಅಲ್ಲಿ ದಿನೇಶ್ ಕಾರ್ತಿಕ್ ಕುಳಿತಿದ್ದ.

‘’ಖ್ಯಾತಿಗಿಂತ ಕೌಶಲ್ಯ ಮುಖ್ಯ’’ ಎಂಬ ಸತ್ಯವೇ ಆರ್.ಸಿ.ಬಿಯನ್ನು ಈ ಬಾರಿ ಚಾಂಪಿಯನ್ ಆಗಿಸಿದ್ದು. ಅದಿಲ್ಲದೇ ಹೋಗಿದ್ದರೆ ಒಬ್ಬ ಕೃಣಾಲ್ ಪಾಂಡ್ಯ, ಒಬ್ಬ ಭುವನೇಶ್ವರ್ ಕುಮಾರ್, ಒಬ್ಬ ಜಿತೇಶ್ ಶರ್ಮಾ, ಒಬ್ಬ ಫಿಲ್ ಸಾಲ್ಟ್, ಒಬ್ಬ ಸುಯಾಶ್ ಶರ್ಮಾ ಆರ್.ಸಿ.ಬಿ ತಂಡ ಸೇರಿಕೊಳ್ಳಲು ಸಾಧ್ಯವೇ ಇರಲಿಲ್ಲ.
ಇದರ ಸಂಪೂರ್ಣ ಶ್ರೇಯ ಸಲ್ಲಬೇಕಿರುವುದು ದಿನೇಶ್ ಕಾರ್ತಿಕ್’ಗೆ.

ಮತ್ತೊಂದು ವಿಚಾರವನ್ನು ಇಲ್ಲಿ ಹೇಳಲೇಬೇಕು. ಹಿಂದೊಮ್ಮೆ ಆರ್.ಸಿ.ಬಿ ಪರ ಆಡಿ 2016ರ ಫೈನಲ್ ಸೋಲಿಗೆ ಕಾರಣನಾಗಿದ್ದ ಶೇನ್ ವಾಟ್ಸನ್ 2021ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್’ಗೆ ಕಪ್ ಗೆಲ್ಲಿಸುತ್ತಾನೆ. ‘ಆರ್.ಸಿ.ಬಿಗೂ ಸಿ.ಎಸ್.ಕೆಗೂ ಏನು ವ್ಯತ್ಯಾಸ’ ಎಂದು ಕೇಳಿದ ಪ್ರಶ್ನೆಗೆ ಆತ ಕೊಟ್ಟ ಉತ್ತರವೇನು ಗೊತ್ತೇ..? ‘’ಅಲ್ಲಿ ನನ್ನ ಪಾತ್ರದ ಬಗ್ಗೆ, ಜವಾಬ್ದಾರಿ ಬಗ್ಗೆ ಸ್ಪಷ್ಟತೆ ಇರಲಿಲ್ಲ. ಇಲ್ಲಿ ಆ ಸ್ಪಷ್ಟತೆ ಇದೆ’’ ಎಂದು.
ಈ ಬಾರಿ ಆರ್.ಸಿ.ಬಿ ಆಟಗಾರರಿಗೆ ಆ ಸ್ಪಷ್ಟತೆಯನ್ನು ದಿನೇಶ್ ಕಾರ್ತಿಕ್ ಸ್ಪಷ್ಟವಾಗಿ ಕೊಟ್ಟು ಬಿಟ್ಟಿದ್ದ. ಫಲಿತಾಂಶ ಕಣ್ಣ ಮುಂದೆಯೇ ಇದೆ.




