
ಮಾನವೀಯತೆಯ ಮೆರಗು: ಬಹುಮಾನ ಮೊತ್ತವನ್ನೆಲ್ಲಾ ಗಾಯಾಳು ಕ್ರಿಕೆಟಿಗನ ಚಿಕಿತ್ಸೆಗೆ ನೀಡಿದ ಕಟ್ಟೆ ಫ್ರೆಂಡ್ಸ್ ಕಾಳಾವರ ತಂಡ
ಉಡುಪಿ: ಕ್ರೀಡಾ ಕ್ಷೇತ್ರದಲ್ಲಿ ಕ್ರಿಕೆಟ್ ಆಟಗಾರನ ಸಂಕಷ್ಟಕ್ಕೆ ಸ್ಪಂದಿಸಿ ಮಾನವೀಯತೆಯ ಅಪೂರ್ವ ಮಾದರಿಯನ್ನು ಪ್ರದರ್ಶಿಸಿರುವ ಕಟ್ಟೆ ಫ್ರೆಂಡ್ಸ್ ಕಾಳಾವರತಂಡದ ಕಾರ್ಯ ಇದೀಗ ಎಲ್ಲೆಡೆಯಿಂದ ಪ್ರಶಂಸೆಗೆ ಪಾತ್ರವಾಗಿದೆ.

ಆದಿ ಉಡುಪಿ ತಂಡದ ಪರ ಗುರುತಿಸಿಕೊಂಡಿದ್ದ ಆಶೋಕ್ ಮೂಡುಬೆಟ್ಟು ಅವರು ಕರಾವಳಿ ಭಾಗದ ಕ್ರಿಕೆಟ್ ವಲಯದಲ್ಲಿ ಚಿರಪರಿಚಿತ ಹೆಸರಾಗಿದ್ದಾರೆ. ಎ.ಕೆ. ಸ್ಪೋರ್ಟ್ಸ್ ಉಡುಪಿ, ಬಿ.ಜಿ. ಬಾಯ್ಸ್, ಉಡುಪಿ ಫ್ರೆಂಡ್ಸ್, ಬಿ.ಬಿ.ಸಿ. ಸೇರಿದಂತೆ ಹಲವು ತಂಡಗಳ ಪರ ರಾಜ್ಯಮಟ್ಟದ ಟೂರ್ನಿಗಳಲ್ಲಿ ಅವರು ತಮ್ಮ ಪ್ರತಿಭೆಯನ್ನು ಮೆರೆದಿದ್ದರು. ಅಲ್ಲದೆ ನಿಸರ್ಗ ಕಿದಿಯೂರು ತಂಡದ ಪರ 30 ಯಾರ್ಡ್ ಕ್ರಿಕೆಟ್ ಟೂರ್ನಿಗಳಲ್ಲಿಯೂ ಗಮನಾರ್ಹ ಪ್ರದರ್ಶನ ನೀಡಿದ್ದರು.

ಇತ್ತೀಚೆಗೆ ಮನೆಗೆ ಬಣ್ಣ ಹಚ್ಚುವ ಕೆಲಸದ ವೇಳೆ ಆಕಸ್ಮಿಕವಾಗಿ ಮೇಲಿನಿಂದ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಆಶೋಕ್ ಮೂಡುಬೆಟ್ಟು ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತದಲ್ಲಿ ಅವರ ಎರಡೂ ಕಾಲುಗಳಿಗೆ ತೀವ್ರ ಗಾಯಗಳಾಗಿದ್ದು, ಶಸ್ತ್ರಚಿಕಿತ್ಸೆ ಅಗತ್ಯವಾಗಿದೆ. ಇದಕ್ಕಾಗಿ ಹೆಚ್ಚಿನ ಚಿಕಿತ್ಸಾ ವೆಚ್ಚದ ಅವಶ್ಯಕತೆ ಎದುರಾಗಿರುವ ಹಿನ್ನೆಲೆಯಲ್ಲಿ ಕುಟುಂಬ ಸಂಕಷ್ಟದಲ್ಲಿದೆ.
ಇಂತಹ ಸಂದರ್ಭದಲ್ಲಿ ಕ್ರೀಡಾ ಬಂಧುತ್ವ ಹಾಗೂ ಮಾನವೀಯತೆಯ ಮೌಲ್ಯವನ್ನು ಎತ್ತಿ ಹಿಡಿದಿರುವ ಕಟ್ಟೆ ಫ್ರೆಂಡ್ಸ್ ಕಾಳಾವರ ತಂಡ ಮಾದರಿಯ ಹೆಜ್ಜೆ ಇಟ್ಟಿದೆ. ಕಳೆದ ಭಾನುವಾರ ಹೆಮ್ಮಾಡಿಯಲ್ಲಿ ನಡೆದ ಕ್ರಿಕೆಟ್ ಟೂರ್ನಿಯಲ್ಲಿ ರನ್ನರ್-ಅಪ್ ಸ್ಥಾನ ಪಡೆದಿದ್ದ ಈ ತಂಡಕ್ಕೆ ನಗದು ಬಹುಮಾನವಾಗಿ ದೊರೆತ ₹40,000 ಮೊತ್ತವನ್ನು ಸಂಪೂರ್ಣವಾಗಿ ಆಶೋಕ್ ಮೂಡುಬೆಟ್ಟು ಅವರ ಚಿಕಿತ್ಸೆಗೆ ದೇಣಿಗೆಯಾಗಿ ನೀಡಿದೆ.

ರಕ್ಷಿತ್ ಶೆಟ್ಟಿ ಕಾಳಾವರ ಮತ್ತು ತಂಡದ ಸದಸ್ಯರು ಉಡುಪಿಯ ಹೈಟೆಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಶೋಕ್ ಮೂಡುಬೆಟ್ಟು ಅವರನ್ನು ಭೇಟಿ ನೀಡಿ ಆಶೋಕ್ ಮೂಡುಬೆಟ್ಟು ಅವರಿಗೆ ನೇರವಾಗಿ ಹಣ ಹಸ್ತಾಂತರಿಸಿ, ಶೀಘ್ರ ಗುಣಮುಖರಾಗುವಂತೆ ಹಾರೈಸಿದರು. ಬಹುಮಾನವಾಗಿ ಪಡೆದ ಸಂಪೂರ್ಣ ಮೊತ್ತವನ್ನು ಯಾವುದೇ ಹಿಂಜರಿಕೆ ಇಲ್ಲದೆ ಸಂಕಷ್ಟದಲ್ಲಿರುವ ಕ್ರೀಡಾಪಟುವಿನ ಚಿಕಿತ್ಸೆಗೆ ನೀಡಿರುವ ಈ ಕಾರ್ಯ ಕ್ರೀಡಾ ವಲಯದಲ್ಲಿ ಅಪಾರ ಮೆಚ್ಚುಗೆಗೆ ಪಾತ್ರವಾಗಿದೆ.
ಇಂದಿನ ಸ್ವಾರ್ಥಮಯ ಸಮಾಜದಲ್ಲಿ ಸಹ ಮಾನವೀಯ ಮೌಲ್ಯಗಳು ಜೀವಂತವಾಗಿವೆ ಎಂಬುದನ್ನು ಕಟ್ಟೆ ಫ್ರೆಂಡ್ಸ್ ಕಾಳಾವರ ತಂಡ ತಮ್ಮ ಕೃತಿಯ ಮೂಲಕ ಸಾಬೀತುಪಡಿಸಿದೆ. ಅವರ ಈ ಉದಾತ್ತ ಕಾರ್ಯ ಇತರರಿಗೂ ಪ್ರೇರಣೆಯಾಗಿದ್ದು, ಕ್ರೀಡಾ ಕ್ಷೇತ್ರದಲ್ಲಿ ಗೆಲುವಿಗಿಂತಲೂ ಮಾನವೀಯತೆಯೇ ದೊಡ್ಡದು ಎಂಬ ಸಂದೇಶವನ್ನು ಸಾರಿದೆ.




