
ವಿಜಯ್ ಹಜಾರೆ ಟ್ರೋಫಿ: ಬರೋಡ ಬೆಂಡೆತ್ತಿ ಸೆಮಿಫೈನಲ್ ಪ್ರವೇಶಿಸಿದ ಕರ್ನಾಟಕ
ಮಯಾಂಕ್ ಅಗರ್ವಾಲ್ ನಾಯಕತ್ವದ ಕರ್ನಾಟಕ ತಂಡ, ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿಯಲ್ಲಿ ಸೆಮಿಫೈನಲ್’ಗೆ ಲಗ್ಗೆ ಇಟ್ಟಿದೆ.
ವಡೋದರದಲ್ಲಿ ಶನಿವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ ಆತಿಥೇಯ ಬರೋಡ ವಿರುದ್ಧ 5 ರನ್’ಗಳ ರೋಚಕ ಗೆಲುವು ಸಾಧಿಸಿತು.


ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಕರ್ನಾಟಕ ತಂಡ ದೇವದತ್ತ್ ಪಡಿಕ್ಕಲ್ ಅವರ ಅಮೋಘ ಶತಕದ ನೆರವಿನಿಂದ ನಿಗದಿತ 50 ಓವರ್’ಗಳಲ್ಲಿ 8 ವಿಕೆಟ್ ನಷ್ಟಕ್ಕೆ 281 ರನ್’ಗಳ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಿತು. ಆಸ್ಟ್ರೇಲಿಯಾ ಪ್ರವಾಸದಿಂದ ವಾಪಸ್ಸಾಗಿ ಕರ್ನಾಟಕ ತಂಡ ಸೇರಿಕೊಂಡ ದೇವದತ್ತ್ ಪಡಿಕ್ಕಲ್ ನಾಯಕ ಮಯಾಂಕ್ ಅಗರ್ವಾಲ್ ಜೊತೆ ಇನ್ನಿಂಗ್ಸ್ ಆರಂಭಿಸಿದರು. ಮಯಾಂಕ 6 ರನ್ನಿಗೆ ಔಟಾದರೂ, ಜವಾಬ್ದಾರಿಯುತ ಆಟವಾಡಿದ ಪಡಿಕ್ಕಲ್ 99 ಎಸೆತಗಳಲ್ಲಿ 15 ಬೌಂಡರಿ ಹಾಗೂ 2 ಸಿಕ್ಸರ್’ಗಳ ನೆರವಿನಿಂದ 102 ರನ್ ಗಳಿಸಿ ತಂಡಕ್ಕೆ ಆಸರೆಯಾದರು. 2ನೇ ವಿಕೆಟ್’ಗೆ ಕೆ.ವಿ ಅನೀಶ್ (64 ಎಸೆತಗಳಲ್ಲಿ 52 ರನ್) ಜೊತೆ 133 ರನ್ ಸೇರಿಸಿದ ಪಡಿಕ್ಕಲ್ ಕರ್ನಾಟಕದ ಸ್ಪರ್ಧಾತ್ಮಕ ಮೊತ್ತಕ್ಕೆ ಕಾರಣರಾದರು.

ನಂತರ 282 ರನ್’ಗಳ ಗುರಿ ಬೆನ್ನಟ್ಟಿದ ಬರೋಡ ಶಾಶ್ವತ್ ರಾವತ್ ಅವರ ಅಮೋಘ ಶತಕದ (126 ಎಸೆತಗಳಲ್ಲಿ 104 ರನ್) ನೆರವಿನಿಂದ ಒಂದು ಹಂತದಲ್ಲಿ ಸುಲಭ ಗೆಲುವಿನತ್ತ ಮುನ್ನಡೆದಿತ್ತು. ಆದರೆ ಕೊನೆಯ ಕ್ಷಣದಲ್ಲಿ ಕರ್ನಾಟಕ ಬೌಲರ್’ಗಳ ಸಂಘಟಿತ ದಾಳಿಗೆ ತತ್ತರಿಸಿ 49.5 ಓವರ್’ಗಳಲ್ಲಿ 276 ರನ್ನಿಗೆ ಆಲೌಟಾಗಿ 5 ರನ್ನಿಂದ ಸೋಲೊಪ್ಪಿಕೊಂಡಿತು. ಕರ್ನಾಟಕ ಪರ ಮಧ್ಯಮ ವೇಗಿ ವಿ.ಕೌಶಿಕ್ 10 ಓವರ್’ಗಳಲ್ಲಿ 39 ರನ್ನಿತ್ತು 2 ವಿಕೆಟ್ ಪಡೆದರೆ, ಆಲ್ರೌಂಡರ್ ಶ್ರೇಯಸ್ ಗೋಪಾಲ್ 10 ಓವರ್’ಗಳಲ್ಲಿ 38 ರನ್ನಿತ್ತು 2 ವಿಕೆಟ್ ಪಡೆಯುವ ಮೂಲಕ ಕರ್ನಾಟಕದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. ಪ್ರಸಿದ್ಧ್ ಕೃಷ್ಣ 60ಕ್ಕೆ 2 ಹಾಗೂ ಅಭಿಲಾಷ್ ಶೆಟ್ಟಿ 70ಕ್ಕೆ 2 ವಿಕೆಟ್ ಉರುಳಿಸಿದರು.

ಜನವರಿ 15ರಂದು ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ ಗುಜರಾತ್ ಮತ್ತು ಹರಿಯಾಣ ನಡುವಿನ ಕ್ವಾರ್ಟರ್ ಫೈನಲ್ ವಿಜೇತರನ್ನು ಎದುರಿಸಲಿದೆ.




