
ಕಾಡಿನೊಳಗಿನ ಗುರುಕುಲದಲ್ಲಿ ದಿನಕ್ಕೆ 12 ಗಂಟೆ ಕ್ರಿಕೆಟ್ ಅಭ್ಯಾಸ.. ಐಪಿಎಲ್’ನಲ್ಲಿ ಸಿಡಿಲಬ್ಬರದ ಶತಕ.. ಯಾರು ಈ ಪ್ರಿಯಾನ್ಷ್ ಆರ್ಯ?
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸಿಡಿಲಬ್ಬರದ ಶತಕ ಬಾರಿಸಿದ ಪಂಜಾಬ್ ಕಿಂಗ್ಸ್ ಪಡೆಯ ಪ್ರಿಯಾನ್ಷ್ ಆರ್ಯಾ ಈಗ ಕ್ರಿಕೆಟ್ ಜಗತ್ತಿನ ಟಾಕ್ ಆಫ್ ದಿ ಟೌನ್. ಹಾಗಾದರೆ ಯಾರು ಈ ಪ್ರಿಯಾನ್ಷ್ ಆರ್ಯ? ಎಲ್ಲಿದ್ದ ಇಷ್ಟು ದಿನ?
24 ವರ್ಷದ ಎಡಗೈ ದಾಂಡಿಗ ಪ್ರಿಯಾನ್ಷ್ ಆರ್ಯ ದೆಹಲಿಯ ಪ್ರತಿಭಾವಂತ ಕ್ರಿಕೆಟರ್. ಐದು ಬಾರಿಯ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮುಲ್ಲಾನ್ಪುರದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಅಬ್ಬರಿಸಿದ್ದ ಪ್ರಿಯಾನ್ಷ್ ಆರ್ಯ ಕೇವಲ 39 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಇದು ಐಪಿಎಲ್ ಇತಿಹಾಸದಲ್ಲಿ ದಾಖಲಾದ ನಾಲ್ಕನೇ ಅತೀ ವೇಗದ ಶತಕ ಮತ್ತು ಐಪಿಎಲ್’ನಲ್ಲಿ ವೇಗದ ಶತಕ ಬಾರಿಸಿದ 2ನೇ ಭಾರತೀಯ.


ಐಪಿಎಲ್’ಗೂ ಮೊದಲು ಪ್ರಿಯಾನ್ಶ ಆರ್ಯ ಮಧ್ಯಪ್ರದೇಶದ ಭೋಪಾಲ್’ನ ಹೊರಭಾಗದಲ್ಲಿರುವ ರತಪಾನಿ ಕಾಡಿನೊಳಗೆ ಗುರುಕುಲ ಶೈಲಿಯ ಕ್ರಿಕೆಟ್ ಶಿಬಿರದಲ್ಲಿ ಪಾಲ್ಗೊಂಡಿದ್ದ. ಅಲ್ಲಿ ಟೀಮ್ ಇಂಡಿಯಾದ ಹಾಲಿ ಕೋಚ್ ಆಗಿರುವ ಗೌತಮ್ ಗಂಭೀರ್ ಅರ ಮಾಜಿ ಕೋಚ್ ಭಾರದ್ವಾಜ್ ಎಂಬವರು ಗುರುಕುಲ ಶೈಲಿಯ ಕ್ರಿಕೆಟ್ ಶಿಬಿರ ನಡೆಸುತ್ತಿದ್ದಾರೆ. ಈ ಹಿಂದೆ ನಿತೀಶ್ ರಾಣಾ, ಉನ್ಮುಕ್ತ್ ಚಾಂದ್, ಖುಲ್ವಂತ್ ಕೆಜ್ರೋಲಿಯಾ ಇದೇ ಕ್ಯಾಂಪ್’ನಲ್ಲಿ ಅಭ್ಯಾಸ ನಡೆಸಿದ್ದರು.

ರತಪಾನಿ ಕಾಡಿನೊಳಗೆ ಗುರುಕುಲ ಶೈಲಿಯ ಕ್ರಿಕೆಟ್ ಶಿಬಿರದಲ್ಲಿ ಆಟಗಾರರು ಮೊಬೈಲ್ ಫೋನ್ ಬಳಸುವಂತಿಲ್ಲ. ಹೊರ ಜಗತ್ತಿನೊಂದಿಗೆ ಸಂಪೂರ್ಣವಾಗಿ ಸಂಪರ್ಕ ಕಳೆದುಕೊಂಡು ಅಭ್ಯಾಸ ನಡೆಸಬೇಕು. ಕ್ರಿಕೆಟಿಗರಲ್ಲಿ ಏಕಾಗ್ರತೆ ಮೂಡಿಸಲು ಕೋಚ್ ಭಾರದ್ವಾಜ್ ಈ ವ್ಯವಸ್ಥೆ ಮಾಡಿದ್ದಾರೆ.

ಅಂತಹ ರಿಮೋಟ್ ಏರಿಯಾದಲ್ಲಿ ಪ್ರಿಯಾನ್ಷ್ ಆರ್ಯ ಪ್ರತೀ ದಿನ 12 ಗಂಟೆಗಳ ಕಾಲ ಅಭ್ಯಾಸ ನಡೆಸಿದ್ದಾರೆ. ಬೆಳಗ್ಗೆ 6.30ಕ್ಕೆ ಅಭ್ಯಾಸ ಆರಂಭಿಸುತ್ತಿದ್ದ ಪ್ರಿಯಾನ್ಷ್ ಸಂಜೆ ಆರು ಗಂಟೆಯವರೆಗೂ ತಾಲೀಮು ನಡೆಸಿದ್ದರು. ಆ ಪರಿಶ್ರಮಕ್ಕೆ ಪ್ರತಿಫಲವೆಂಬಂತೆ ಇದೀಗ ಐಪಿಎಲ್’ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಅಬ್ಬರದ ಶತಕ ಬಾರಿಸಿದ್ದಾರೆ.
ಐಪಿಎಲ್’ನಲ್ಲಿ ಆಡಿದ ಮೊದಲ ಪಂದ್ಯದಲ್ಲೇ ಗುಜರಾತ್ ಟೈಟನ್ಸ್ ವಿರುದ್ಧ ಪ್ರಿಯಾನ್ಷ್ 47 ರನ್ ಗಳಿಸಿದ್ದರು.

ಐಪಿಎಲ್ ಟೂರ್ನಿಗೂ ಮುನ್ನ ದೆಹಲಿ ಪರ 7 ಲಿಸ್ಟ್ ಎ ಪಂದ್ಯಗಳನ್ನಾಡಿರುವ ಪ್ರಿಯಾನ್ಷ್ ಆರ್ಯ 77 ರನ್ ಗಳಿಸಿದ್ದಾರೆ. ನಾಲ್ಕು ಐಪಿಎಲ್ ಪಂದ್ಯಗಳು ಸೇರಿದಂತೆ ಒಟ್ಟು 22 ಟಿ20 ಪಂದ್ಯಗಳನ್ನಾಡಿರುವ ದೆಹಲಿ ತಾರೆ 731 ರನ್ ಕಲೆ ಹಾಕಿದ್ದಾರೆ.





