
70,80ರ ದಶಕ ಟೆನ್ನಿಸ್ ಕ್ರಿಕೆಟ್ ಪ್ರವರ್ಧಮಾನಕ್ಕೆ ಅಡಿಯಿಡುತ್ತಿದ್ದ ಕಾಲ. ಉಡುಪಿ ಪರಿಸರದಲ್ಲಿ M.C.C (ಮಿಷನ್ ಕಾಂಪೌಂಡ್ ಕ್ರಿಕೆಟರ್ಸ್), ಮಹಾದೇವಿ ಕಾಪು, ಚೇತನಾ ಕಲಾ ಹಾಗೂ ಕ್ರೀಡಾರಂಗ ಕೋಟೇಶ್ವರ,ಕುಂದಾಪುರ ಪರಿಸರದಲ್ಲಿ ಇಲೆವೆನ್ ಸ್ಟಾರ್ ಹಾಗೂ ಆಗತಾನೇ ಜನ್ಮ ತಳೆದಿದ್ದ ಚಕ್ರವರ್ತಿ ಹಾಗೂ ಟೊರ್ಪೆಡೋಸ್, ಅಂತೆಯೇ ಸಾಲಿಗ್ರಾಮ ಪರಿಸರದಲ್ಲಿನ ಶ್ರೇಷ್ಠ ತಂಡ ಗುರು ಕ್ರೀಡಾರಂಗ.ಈ ತಂಡದ ಅಂದಿನ ದಿನಗಳ ಪ್ರಮುಖ ಆಟಗಾರರು ತ್ರಿವಳಿ ಉಡುಪ ಸಹೋದರರು (ದಿ|ಶ್ರೀಕಾಂತ್ ಉಡುಪ, ರಮೇಶ್ ಉಡುಪ, ಉಮೇಶ್ ಉಡುಪ), ಕೋಟೇಶ್ವರ ಸನ್ ರೈಸ್ ಪೈಪ್ ಇಂಡಸ್ಟ್ರೀಸ್ ಮಾಲೀಕ ದಿನೇಶ್ ಕಾಮತ್, ಸಾಲಿಗ್ರಾಮ ಪರಿಸರದ ಬಹುಮುಖ ಪ್ರತಿಭೆಯ ಕ್ರಿಕೆಟಿಗ ವಿಶ್ವನಾಥ್ ಆಚಾರ್, ಕೋಟೇಶ್ವರದ ಶ್ರೇಷ್ಠ ಆಲ್ ರೌಂಡರ್ ದಿ| ಬಾಬ್ ಜಾನ್ ಇನ್ನಿತರ ಆಟಗಾರರ ಸಂಯೋಜಿತ, ಸಂಘಟಿತ ಪ್ರದರ್ಶನ ಜಿಲ್ಲೆಯಾದ್ಯಂತ ಮನೆಮಾತಾಗಿದ್ದ ಕಾಲವದು.

ಪರಿಪೂರ್ಣ ಪ್ರದರ್ಶನ ನೀಡುವುದರ ಮೂಲಕ ಉಡುಪಿ, ದ.ಕ ಜಿಲ್ಲೆಯ ಶ್ರೇಷ್ಠ ತಂಡವೆಂಬ ಮುಕುಟವನ್ನು ಧರಿಸಿತ್ತು. ಗುರು ಕ್ರೀಡಾರಂಗದ ಅತ್ಯಂತ ಪ್ರಸಿದ್ಧ ಆಟಗಾರರಾಗಿ ಹೊರಹೊಮ್ಮಿದ ಆಟಗಾರರು ಶ್ರೀ ಪಾರಂಪಳ್ಳಿ ನಾಗೇಂದ್ರ ನಾವುಡರು.

ಶಾಲಾ ದಿನಗಳಲ್ಲಿ ಉತ್ತಮ ಟೆನ್ನಿಸ್ ಬಾಲ್ ಕ್ರಿಕೆಟ್ ನ ಆಲ್ ರೌಂಡರ್ ಆಗಿ ಬೆಳೆದು ಬಂದ ವ್ಯಕ್ತಿ ನಾವುಡರು. ಡಿಫೆನ್ಸ್ ಮತ್ತು ಬಿರುಸಿನ ಆಟಕ್ಕೂ ಹೆಸರುವಾಸಿ. ಎಸೆತಗಾರಿಕೆಯಲ್ಲಿ ಫಾಸ್ಟ್ ಹಾಗೂ ಸ್ಪಿನ್ ಎರಡೂ ವಿಭಾಗದಲ್ಲಿ ಸ್ಪಿನ್ ಮಾಡಬಲ್ಲ ಉತ್ತಮ ಬೌಲರ್ ಆಗಿ ಬೆಳೆದು ಕಾಲೇಜಿನಲ್ಲಿ ಲೆದರ್ ಬಾಲ್ ಕ್ರಿಕೆಟಿಗೆ ಹೆಸರಾಗಿ ಯುನಿವರ್ಸಿಟಿ ಮಟ್ಟಕ್ಕೆ ಆಯ್ಕೆಯಾಗುವ ಮಟ್ಟಕ್ಕೆ ಬೆಳೆದ ಕ್ರಿಕೆಟಿಗರು.

ತಾಂತ್ರಿಕ ಕಾರಣಗಳಿಂದ ಯುನಿವರ್ಸಿಟಿಗೆ ಆಯ್ಕೆಯಾಗದೆ ಉಳಿದರು.ತದ ನಂತರ 80 ರ ದಶಕದ ಶ್ರೇಷ್ಠ ತಂಡ ಸಾಲಿಗ್ರಾಮದ ಗುರು ಕ್ರೀಡಾರಂಗದಲ್ಲಿ ಸರ್ವಾಂಗೀಣ ಆಟಗಾರರಾಗಿ ಪ್ರಸಿದ್ಧಿ ಪಡೆದರು. ಮುಂದಿನ ದಿನಗಳಲ್ಲಿ ಪಾರಂಪಳ್ಳಿ ಕ್ರಿಕೆಟರ್ಸ್ ನಲ್ಲೂ ಬಹಳಷ್ಟು ಪಂದ್ಯಗಳನ್ನಾಡಿ,ಬಹು ಖ್ಯಾತಿ ಪಡೆದು ರಾಜ್ಯ ಮಟ್ಟದವರೆಗೆ ಗುರುತಿಸಿಕೊಂಡು ಪಾರಂಪಳ್ಳಿ ಕ್ರಿಕೆಟರ್ಸ್ ನ ಸರ್ವತೋಮುಖ ಏಳಿಗೆಗೆ ಕಾರಣರಾದ ವ್ಯಕ್ತಿ.
ಸರಳ ವಿನಯ ಸ್ವಭಾವದ ನಾವುಡರಿಗೆ ಸಣ್ಣ ಮಕ್ಕಳಿಗೆ ಕ್ರಿಕೆಟ್ ಬಗ್ಗೆ ಮಾರ್ಗದರ್ಶನ ನೀಡುವುದೆಂದರೆ ಬಹಳ ಆಸಕ್ತಿ. ಅದೆಷ್ಟೋ ಯುವ ಕ್ರಿಕೆಟಿಗರನ್ನು ತರಬೇತಿ ನೀಡಿ ಪರಿಪೂರ್ಣ ಕ್ರಿಕೆಟಿಗನಾಗಿ ಮಾರ್ಪಡಿಸಿದ ಖ್ಯಾತಿ ನಾವುಡರಿಗೆ ಸಲ್ಲುತ್ತದೆ. ಕಾಲೇಜು ದಿನಗಳಲ್ಲಿ ಕುಂದಾಪುರದಲ್ಲಿ ಲೆದರ್ ಬಾಲ್ ಕ್ರಿಕೆಟ್ ನಲ್ಲಿ ಬಹಳಷ್ಟು ಪ್ರಸಿದ್ಧಿ ಪಡೆದ ಹೆಗ್ಗಳಿಕೆ ಇವರದ್ದು. ಎದುರಾಳಿ ದಾಂಡಿಗರ ದೌರ್ಬಲ್ಯ ವನ್ನು ಗುರುತಿಸಿ ಬೌಲಿಂಗ್ ವ್ಯೂಹ ರಚಿಸುತ್ತಿದ್ದ ಚಾಕ ಚಕ್ಯತೆಯ ಎಸೆತಗಾರರಾಗಿದ್ದರು.
ಪ್ರಸ್ತುತ ಕೋಡಿ ಕನ್ಯಾಣದಲ್ಲಿ ವಾಸಿಸುತ್ತಿದ್ದು. ಅಲ್ಲಿನ ಅಂಚೆ ಕಛೇರಿಯಲ್ಲಿ ಬಹಳಷ್ಟು ವರ್ಷಗಳಿಂದ ಮುಖ್ಯ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
– ಆರ್.ಕೆ.ಆಚಾರ್ಯ ಕೋಟ




