
ಹಿರಿಯ ಕ್ರಿಕೆಟ್ ಆಟಗಾರ ಯಾದವ್ ನಾಯ್ಕ್ ಕೆಮ್ಮಣ್ಣು ಅವರಿಗೆ ಸನ್ಮಾನ
ಮಲ್ಪೆ:
ತೋನ್ಸೆ ಹೆಲ್ತ್ ಸೆಂಟರ್ ಹಾಗೂ ಬೈಕಾಡಿ ಹಸನ್ ಸಾಹೇಬ್ ಮೆಮೊರಿಯಲ್ ಚಾರಿಟಬಲ್ ಟ್ರಸ್ಟ್ (ರಿ) ಇವರ ಸಂಯುಕ್ತ ಆಶ್ರಯದಲ್ಲಿ ಹೆಲ್ತ್ ಸೆಂಟರ್ ಸಭಾಭವನದಲ್ಲಿ ಇತ್ತೀಚೆಗೆ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಯಿತು.


ಈ ಕಾರ್ಯಕ್ರಮದಲ್ಲಿ ಸಿಂಡಿಕೇಟ್ ಬ್ಯಾಂಕ್ ಮಂಗಳೂರು ವಲಯದ ಮಾಜಿ ಕ್ರಿಕೆಟ್ ಆಟಗಾರರಾಗಿರುವ ಹಿರಿಯ ಕ್ರೀಡಾಪಟು ಯಾದವ್ ನಾಯ್ಕ್ ಕೆಮ್ಮಣ್ಣು ಅವರನ್ನು ವಿಶೇಷವಾಗಿ ಗೌರವಿಸಲಾಯಿತು. ಪ್ಯಾರಡೈಸ್ ಬನ್ನಂಜೆ, ಕೆಮ್ಮಣ್ಣು ಕ್ರಿಕೆಟರ್ಸ್, ಸಿಂಡಿಕೇಟ್ ಬ್ಯಾಂಕ್ ಹಾಗೂ ಮಂಗಳೂರು ವಿಶ್ವವಿದ್ಯಾಲಯ ತಂಡಗಳನ್ನು ಪ್ರತಿನಿಧಿಸಿ ಯಶಸ್ವಿಯಾಗಿ ಕ್ರಿಕೆಟ್ ಆಡಿದ ಅನುಭವ ಹೊಂದಿರುವ ಯಾದವ್ ನಾಯ್ಕ್ ಕೆಮ್ಮಣ್ಣು ಅವರನ್ನು ಶಾಲು ಹೊದಿಸಿ ಗೌರವ ಪತ್ರದೊಂದಿಗೆ ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಸ್ಥಾಪಕರಾದ ಬಿ. ಎಂ. ಜಾಫರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಾಜಿ ಜಿಲ್ಲಾ ಪರಿಷತ್ ಸದಸ್ಯ ಜನಾರ್ಧನ ತೋನ್ಸೆ, ಕೆಮ್ಮಣ್ಣು ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಕುಸುಮ ರವೀಂದ್ರ, ನಿವೃತ್ತ ಪ್ರಿನ್ಸಿಪಾಲ್ ಡಾ. ಜೆರಾಲ್ಡ್ ಪಿಂಟೋ, ಮುಸ್ತಾಕ್ ಬೆಳ್ವೆ, ಮೊಹಮ್ಮದ್ ಇಮ್ತಿಯಾಜ್, ಮಾಹೆ–ಮಣಿಪಾಲದ ರಮೇಶ್ ಕಾಮತ್, ಬೈಕಾಡಿ ಹುಸೈನ್ ಸಾಹೇಬ್ ಹಾಗೂ ಸಂಸ್ಥೆಯ ಮುಖ್ಯ ವೈದ್ಯಾಧಿಕಾರಿ ಡಾ. ಶ್ರುತಿ ಅವರು ಉಪಸ್ಥಿತರಿದ್ದರು.

ಗೌರವಿತರ ಪರಿಚಯ ಹಾಗೂ ಗೌರವ ಪತ್ರದ ವಾಚನವನ್ನು ಡಾ. ಶ್ರುತಿ ಅವರು ನೆರವೇರಿಸಿದರು. ಇದೇ ಸಂದರ್ಭದಲ್ಲಿ ಸಂಸ್ಥೆಯ ಐದು ಉದ್ಯೋಗಿಗಳನ್ನು ಅವರ ಉತ್ತಮ ಸೇವೆಯನ್ನು ಗುರುತಿಸಿ ವರ್ಷದ ಉದ್ಯೋಗಿ ಪ್ರಮಾಣಪತ್ರ ಹಾಗೂ ನಗದು ಬಹುಮಾನಗಳೊಂದಿಗೆ ಗಣ್ಯರ ಉಪಸ್ಥಿಯಲ್ಲಿ ಸನ್ಮಾನಿಸಲಾಯಿತು.

ಇದೇ ಸಂಧರ್ಭ ಕೆಮ್ಮಣ್ಣು ಕ್ರಿಕೇಟರ್ಸ್ನ ಆಸಿಫ್, ನೆಲ್ಸನ್, ಖ್ಯಾತ ಕ್ರಿಕೆಟರ್ ಸದಾಕತ್, ಊರ ಪರವೂರಿನ ಅಭಿಮಾನಿಗಳು ಹಾಗೂ ಸಂಸ್ಥೆಯ ಸಿಬ್ಬಂದಿಗಳ ಸಮ್ಮುಖದಲ್ಲಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಶ್ರೀಮಾನ್ ರಮೇಶ್ ತಿಂಗಳಾಯ, ಡಾ. ಹಾಜಿ ಅಬ್ದುಲ್ ವಾಹಿದ್ ಹಾಗೂ ರೆಜಿನಾಲ್ಡ್ ಫುರ್ಟಾಡೋ ಇವರನ್ನೂ ಈ ಸಂದರ್ಭದಲ್ಲೇ ಶಾಲು ಹೊದಿಸಿ ಗೌರವ ಪತ್ರದೊಂದಿಗೆ ಗೌರವಿಸಲಾಯಿತು.

ಕಾರ್ಯಕ್ರಮದ ನಿರೂಪಣೆ ಹಾಗೂ ಧನ್ಯವಾದ ಅರ್ಪಣೆಯನ್ನು ಸಂಸ್ಥೆಯ ಮ್ಯಾನೇಜರ್ ಹರೀಶ್ ಶೆಟ್ಟಿ ಅವರು ನಿರ್ವಹಿಸಿದರು.




