
ತಂಗಿಗಾಗಿ ಅಣ್ಣನ ತ್ಯಾಗ.. ಒಡ ಹುಟ್ಟಿದವನ ತ್ಯಾಗ ವ್ಯರ್ಥವಾಗಲು ಬಿಡದ ತಂಗಿ ದೇಶಕ್ಕೆ ವಿಶ್ವಕಪ್ ಗೆಲ್ಲಿಸಿದಳು..!
ಉತ್ತರ ಪ್ರದೇಶದ ಆಗ್ರಾದಿಂದ 9 ಕಿ.ಮೀ ದೂರದ ಶಹಗಂಜ್’ನಲ್ಲೊಂದು ಅವಧ್’ಪುರಿ ಎಂಬ ಪುಟ್ಟ ಹಳ್ಳಿ. ಆ ಹಳ್ಳಿಗೆ ಪ್ರವೇಶಿಸುತ್ತಿದ್ದಂತೆ ಒಂದು ರಸ್ತೆ. ಆ ರಸ್ತೆಯ ಹೆಸರು ‘Arjuna Awardee Cricketer Deepti Sharma Marg’. ಆ ಊರಿಗೆ ಅವಳ ಹೆಸರೇ ಲ್ಯಾಂಡ್ ಮಾರ್ಕ್..
ಅವಧ್’ಪುರಿಯ ಕೆಳ ಮಧ್ಯಮ ವರ್ಗದ ಮನೆಯಲ್ಲೊಂದು ಅಣ್ಣ ತಂಗಿ ಜೋಡಿ. ಮಧ್ಯಮ ವೇಗದ ಬೌಲರ್ ಆಗಿದ್ದ ಅಣ್ಣ ಭಾರತ ಪರ ಆಡುವ ಕನಸು ಕಂಡಿದ್ದ. ಕನಸು ಕೈಗೂಡುವುದು ಅಸಂಭವ ಎಂಬುದು ಅರಿವಾಗುತ್ತಿದ್ದಂತೆ ತನ್ನ ಕನಸನ್ನು ತಂಗಿಯ ಮೂಲಕ ನನಸು ಮಾಡಲು ನಿಂತು ಬಿಟ್ಟ.. ಜೀವನಕ್ಕೆ ಆಧಾರವಾಗಿದ್ದ ಕೆಲಸಕ್ಕೆ ತಿಲಾಂಜಲಿ ಇಟ್ಟು ತಂಗಿಯ ತರಬೇತಿಗೆ ತನ್ನನ್ನು ಸಮರ್ಪಿಸಿಕೊಂಡ.


ಸಹೋದರನ ಪ್ರತಿಜ್ಞೆ ಮತ್ತು ತ್ಯಾಗದ ಪ್ರತೀಕವಾಗಿ ನಿಂತಿರುವ ಅದೇ ಹುಡುಗಿ ಇವತ್ತು ದೇಶಕ್ಕೆ ಮೊಟ್ಟ ಮೊದಲ ಮಹಿಳಾ ವಿಶ್ವಕಪ್ ಗೆಲ್ಲಿಸಿದ್ದಾಳೆ. ಅವಳು ದೀಪ್ತಿ ಶರ್ಮಾ..
ವಿಶ್ವಕಪ್ ಫೈನಲ್’ನಲ್ಲಿ 58 ರನ್, 5 ವಿಕೆಟ್, ಒಂದು ರನೌಟ್.. ಇಡೀ ಟೂರ್ನಿಯಲ್ಲಿ 215 ರನ್ ಮತ್ತು 22 ವಿಕೆಟ್.. ಸಾಧನೆಗೆ ಕಳಶವಿಟ್ಟಂತೆ ‘ಪ್ಲೇಯರ್ ಆಫ್ ದಿ ಸೀರೀಸ್’ ಕಿರೀಟ..

ದೀಪ್ತಿ ಶರ್ಮಾಳ ಅಣ್ಣ ಸುಮಿತ್ ಶರ್ಮಾ ಉತ್ತರ ಪ್ರದೇಶದ ಕ್ರಿಕೆಟಿಗ… ಅಣ್ಣನ ಜೊತೆ ಸಣ್ಣ ವಯಸ್ಸಲ್ಲೇ ಕ್ರಿಕೆಟ್ ಅಭ್ಯಾಸಕ್ಕೆ ಹೋಗುತ್ತಿದ್ದ ದೀಪ್ತಿ ಶರ್ಮಾ ಅಣ್ಣನ ಕನಸನ್ನು ನನಸು ಮಾಡಿದ ತಂಗಿ.
ಸಹೋದರನ ಜೊತೆ ಕ್ರಿಕೆಟ್ ಅಭ್ಯಾಸಕ್ಕೆ ತೆರಳಿದ್ದ ದೀಪ್ತಿ ಶರ್ಮಾ ಒಂದು ದಿನ ಭಾರತದ ಮಾಜಿ ಕ್ರಿಕೆಟರ್ ಹೇಮಲತಾ ಕಲಾ ಅವರ ಕಣ್ಣಿಗೆ ಬೀಳುತ್ತಾಳೆ. ಅದೂ ಕೂಡ ಆಕಸ್ಮಿಕವಾಗಿ.. ಅಣ್ಣ ಮತ್ತು ಆತನ ಸ್ನೇಹಿತರು ಅಭ್ಯಾಸ ನಡೆಸುತ್ತಿದ್ದಾಗ ಈಕೆ ಅವರಿಗೆ ಕ್ಷೇತ್ರರಕ್ಷಕಿ. 50 ಮೀಟರ್ ದೂರದಿಂದ ಇವಳು ಎಸೆದ ಚೆಂಡೊಂದು ನೇರವಾಗಿ ಸ್ಟಂಪ್’ಗೆ ಬಂದಪ್ಪಳಿಸುತ್ತದೆ. ಅದನ್ನು ನೋಡಿದ ಹೇಮಲತಾ ಕಲಾ ಅವರಿಗೆ ಅಚ್ಚರಿ.. 
ಹುಡುಗಿಯ ಕೌಶಲ್ಯವನ್ನು ಆರಂಭದಲ್ಲೇ ಗುರುತಿಸಿದ ಹೇಮಲತಾ, ದೀಪ್ತಿಯನ್ನು ತನ್ನ ಗರಡಿಗೆ ಸೇರಿಸಿಕೊಳ್ಳುತ್ತಾರೆ. ದೀಪ್ತಿ ಶರ್ಮಾಳ ಕ್ರಿಕೆಟ್ ಆಸಕ್ತಿಗೆ ಬೆಂಬಲವಾಗಿ ನಿಲ್ಲುವಂತೆ ಅಣ್ಣ ಸುಮಿತ್ ಶರ್ಮಾಗೆ ಸೂಚಿಸುತ್ತಾರೆ. ತನ್ನ ಕನಸನ್ನು ಬದಿಗೊತ್ತಿದ ಅಣ್ಣ, ಉದ್ಯೋಗವನ್ನು ತ್ಯಜಿಸಿ ತಂಗಿಯ ಕ್ರಿಕೆಟ್ ಬದುಕಿಗೆ ಬೆನ್ನೆಲುಬಾಗಿ ನಿಂತು ಬಿಡುತ್ತಾನೆ. ಆಕೆಯ ಪಾಲಿಗೆ ಅಣ್ಣನೇ ಮೊದಲ ಕ್ರಿಕೆಟ್ ಗುರು.
13ನೇ ವಯಸ್ಸಿಗೆ ಉತ್ತರ ಪ್ರದೇಶ ಅಂಡರ್-19 ತಂಡ.. 17ನೇ ವಯಸ್ಸಿಗೆ ಭಾರತ ತಂಡಕ್ಕೆ ಪದಾರ್ಪಣೆ. ಅದೇ ಹುಡುಗಿ ಈಗ ಭಾರತದ ವಿಶ್ವಕಪ್ ಗೆಲುವಿನ ವಿಜಯಶಿಲ್ಪಿ. ಹೌದು.. ಸಹೋದರನ ತ್ಯಾಗ ವ್ಯರ್ಥವಾಗಲು ಬಿಡದ ತಂಗಿ ದೇಶಕ್ಕೆ ವಿಶ್ವಕಪ್ ಗೆಲ್ಲಿಸಿದ್ದಾಳೆ.

ಅಂದ ಹಾಗೆ ದೀಪ್ತಿ ಶರ್ಮಾಳ ಕ್ರಿಕೆಟ್ ರೋಲ್ ಮಾಡೆಲ್ ಉತ್ತರ ಪ್ರದೇಶದ ಮತ್ತೊಬ್ಬ ವಿಶ್ವಕಪ್ ಹೀರೋ ಸುರೇಶ್ ರೈನಾ..!





