
ಪಂಜಾಬ್ ವಿರುದ್ಧ ಭರ್ಜರಿ ದ್ವಿಶತಕ ಬಾರಿಸಿದ ಸ್ಮರಣ್ ರವಿಚಂದ್ರನ್

ವಿಜಯ್ ಹಜಾರೆ ಟ್ರೋಫಿ ಫೈನಲ್ ಪಂದ್ಯದಲ್ಲಿ ಅಮೋಘ ಶತಕ ಬಾರಿಸಿ ಕರ್ನಾಟಕ ತಂಡ ಚಾಂಪಿಯನ್ ಪಟ್ಟಕ್ಕೇರಲು ಕಾರಣವಾಗಿದ್ದ ಎಡಗೈ ದಾಂಡಿಗ ಸ್ಮರಣ್ ರವಿಚಂದ್ರನ್ ರಣಜಿ ಟ್ರೋಫಿಯಲ್ಲಿ ಭರ್ಜರಿ ದ್ವಿಶತಕ ಸಿಡಿಸಿದ್ದಾರೆ.
ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂಜಾಬ್ ವಿರುದ್ಧದ ಪಂದ್ಯದ 2ನೇ ದಿನ ಸ್ಮರಣ್ ರವಿಚಂದ್ರನ್ ರಣಜಿ ವೃತ್ತಿಜೀವನದಲ್ಲಿ ಚೊಚ್ಚಲ ದ್ವಿಶತಕ ಸಿಡಿಸಿದರು. 4ನೇ ಕ್ರಮಾಂಕದಲ್ಲಿ ಕ್ರೀಸ್’ಗಿಳಿದ ಸ್ಮರಣ್ 277 ಎಸೆತಗಳನ್ನೆದುರಿಸಿ 25 ಬೌಂಡರಿ ಹಾಗೂ 3 ಸಿಕ್ಸರ್’ಗಳ ನೆರವಿನಿಂದ 203 ರನ್ ಗಳಿಸಿ ಔಟಾದರು.

ವಡೋದರದಲ್ಲಿ ನಡೆದ ವಿಜಯ್ ಹಜಾರೆ ಟ್ರೋಫಿ ಫೈನಲ್ ಪಂದ್ಯದಲ್ಲಿ ವಿದರ್ಭ ವಿರುದ್ಧ ಸ್ಮರಣ್ ರವಿಚಂದ್ರನ್ 101 ರನ್ ಸಿಡಿಸಿ ಕರ್ನಾಟಕದ ಗೆಲುವಿಗೆ ಕಾರಣರಾಗಿದ್ದರು. ತಮ್ಮ ಭರ್ಜರಿ ಫಾರ್ಮನ್ನು ರಣಜಿ ಟ್ರೋಫಿಗೂ ಮುಂದುವರಿಸಿದ ಸ್ಮರಣ್ ಚೊಚ್ಚಲ ರಣಜಿ ಶತಕವನ್ನು ದ್ವಿಶತಕವನ್ನಾಗಿ ಪರಿವರ್ತಿಸಿ ತವರು ನೆಲದಲ್ಲಿ ಮಿಂಚಿದ್ದಾರೆ.
ಸ್ಮರಣ್ ಅವರ ದ್ವಿಶತಕದ ನೆರವಿನಿಂದ ಕರ್ನಾಟಕ ತಂಡ ತನ್ನ ಪ್ರಥಮ ಇನ್ನಿಂಗ್ಸ್’ನಲ್ಲಿ 475 ರನ್ ಗಳಿಸಿ ಆಲೌಟಾಯಿತು. ಈ ಮೂಲಕ ಮಯಾಂಕ್ ಅಗರ್ವಾಲ್ ಬಳಗ 420 ರನ್’ಗಳ ಭಾರೀ ಇನ್ನಿಂಗ್ಸ್ ಮುನ್ನಡೆ ಸಂಪಾದಿಸಿತು. ಶುಭಮನ್ ಗಿಲ್ ನಾಯಕತ್ವದ ಪಂಜಾಬ್ ತಂಡ ತನ್ನ ಪ್ರಥಮ ಇನ್ನಿಂಗ್ಸ್’ನಲ್ಲಿ ಕೇವಲ 55 ರನ್’ಗಳಿಗೆ ಆಲೌಟಾಗಿತ್ತು.
420 ರನ್’ಗಳ ದೊಡ್ಡ ಹಿನ್ನಡೆಯೊಂದಿಗೆ ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ಪಂಜಾಬ್ ತಂಡ, 2ನೇ ದಿನದಾಟದ ಅಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 24 ರನ್ ಗಳಿಸಿದೆ.




