
ಮೈಕ್ ಹಿಡಿದು ಕೂತ ಕಾಮೆಂಟೇಟರ್ ಹೇಳಿಕೆಯಿಂದ ಜೀವನ ಬದಲಾಗದು-ರೋಹಿತ್ ಶರ್ಮಾ
‘’ಮೈಕ್ ಹಿಡಿದು ಕೂತ ಕಾಮೆಂಟೇಟರ್ ಏನು ಹೇಳುತ್ತಾನೆ ಎಂಬುದರಿಂದ ನನ್ನ ಜೀವನ ಬದಲಾಗದು. ಅಥವಾ ಲ್ಯಾಪ್ ಟ್ಯಾಪ್ ಮುಂದೆ ಕೂತ, ಪೆನ್ ಹಿಡಿದ ಪತ್ರಕರ್ತನ ಅಭಿಪ್ರಾಯದಿಂದಲೂ ನನ್ನಲ್ಲೇನೂ ಬದಲಾವಣೆಯಾಗದು. ನಾವು ಯಾವಾಗ ನಿವೃತ್ತಿಯಾಗಬೇಕು, ಯಾವಾಗ ಹೊರಗೆ ಕೂರಬೇಕು, ಯಾವಾಗ ನಾಯಕತ್ವ ವಹಿಸಬೇಕು ಎಂಬುದನ್ನು ಅವರು ನಿರ್ಧರಿಸಲು ಸಾಧ್ಯವಿಲ್ಲ. ನಾನು ಸೂಕ್ಷ್ಮತೆ ಇರುವ ಪ್ರಬುದ್ಧ ಮನುಷ್ಯ, ಎರಡು ಮಕ್ಕಳ ತಂದೆ, ನನಗೂ ಬುದ್ಧಿಯಿದೆ’’.
ರೋಹಿತ್ ಶರ್ಮಾ ಆಡಿರುವ ಮಾತುಗಳಿವು.


ಹೌದು.. ‘ಮೈಕ್ ಹಿಡಿದವರಾಗಲೀ, ಲ್ಯಾಪ್ ಟಾಪ್ ಮುಂದೆ ಕೂತವರಾಗಲೀ, ಪೆನ್ ಹಿಡಿದವರಾಗಲೀ ನಿಮ್ಮ ಭವಿಷ್ಯವನ್ನು ನಿರ್ಧರಿಸಲು ಸಾಧ್ಯವಿಲ್ಲ ರೋಹಿತ್ ಶರ್ಮಾ ಅವರೇ.. ನೀವು ಎರಡು ಮಕ್ಕಳ ತಂದೆ ಎಂಬುದು ಎಷ್ಟು ಸತ್ಯವೋ, ಭಾರತ ಟೆಸ್ಟ್ ತಂಡಕ್ಕೆ ನೀವು ಎಲ್ಲಾ ರೀತಿಯಿಂದಲೂ ಹೊರೆಯಾಗಿದ್ದೀರಿ ಎಂಬುದೂ ಅಷ್ಟೇ ಸತ್ಯ ಮತ್ತು ಅದೇ ಸತ್ಯ. ಆ ಸತ್ಯ ಹೇಳಿದವರ ವಿರುದ್ಧ ಉರಿದು ಬಿದ್ದಿದ್ದೀರಿ. ಆಡುವುದು ನಿಮ್ಮ ಕೆಲಸ.. ಮಾತನಾಡುವುದು, ಬರೆಯುವುದು ಅವರ ಕೆಲಸ.
ಅಂದ ಹಾಗೆ, ನೀವು ಚೆನ್ನಾಗಿ ಆಡಿದಾಗ ನಿಮ್ಮನ್ನು ಹೊಗಳಿದಾಗಲೂ ಈ ಮಾತು ಆಡಿದ್ದೀರಾ..? ನಿಮ್ಮ ಅಭಿಪ್ರಾಯಗಳಿಂದ, ನಿಮ್ಮ ಅಕ್ಷರಗಳಿಂದ ನಮ್ಮಲ್ಲೇನೂ ಬದಲಾವಣೆಯಾಗದು ಎಂದಿದ್ದೀರಿ. ಹೊಗಳಿಕೆಯನ್ನು ಆನಂದಿಸುವವರು ಟೀಕೆಗಳನ್ನು ಸ್ವೀಕರಿಸಲೂ ಸಿದ್ಧರಿರಬೇಕು. ಮಾತನಾಡುವುದು ಮೈಕ್ ಹಿಡಿದವರ ಕೆಲಸ, ಬರೆಯುವುದೇ ಪೆನ್ ಹಿಡಿದವರ ಕಾಯಕ. ನೀವು ಜವಾಬ್ದಾರಿಯಿಂದ ಆಡಿದ್ದರೆ, ಅವರೇಕೆ ಮಾತನಾಡುತ್ತಿದ್ದರು..? ಅವರೇಕೆ ಬರೆಯುತ್ತಿದ್ದರು..?

ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಭಾರತ ಸೋತ ನಂತರ ಬ್ಯಾಟಿಂಗ್ ದಿಗ್ಗಜ ಸುನೀಲ್ ಗವಾಸ್ಕರ್ ಆಡಿರುವ ಮಾತೊಂದನ್ನು ಕೇಳಿ.
ಪ್ರಶ್ನೆ: ಭಾರತ ತಂಡ ಹೆಚ್ಚು ಹೆಚ್ಚು ಅಭ್ಯಾಸ ಪಂದ್ಯಗಳನ್ನಾಡುವ ಮೂಲಕ ವಿದೇಶ ಪ್ರವಾಸಗಳಿಗೆ ತಯಾರಿ ನಡೆಸಬೇಕೆ..?
ಗವಾಸ್ಕರ್: ಈ ಪ್ರಶ್ನೆ ಉತ್ತರಿಸಲು ನಾವು ಯಾರು..? ನಮಗೆ ಕ್ರಿಕೆಟ್ ಬಗ್ಗೆ ಗೊತ್ತಿಲ್ಲ. ನಾವು ಕೇವಲ ಟಿವಿಗಾಗಿ ಮಾತನಾಡಿ ದುಡ್ಡು ಸಂಪಾದಿಸುವವರು. ನಮ್ಮ ಮಾತನ್ನು ಕೇಳಬೇಡಿ ಒಂದೊಮ್ಮೆ ಕೇಳಿಸಿಕೊಂಡರೂ, ಮತ್ತೊಂದು ಕಿವಿಯಿಂದ ಅದನ್ನು ಬಿಟ್ಟು ಬಿಡಿ.
ರೋಹಿತ್ ಶರ್ಮಾ ಆಡಿರುವ ಮಾತಿನ ನಂತರ ಸುನೀಲ್ ಗವಾಸ್ಕರ್ ಈ ಮಾತುಗಳನ್ನು ಹೇಳಿದ್ದಾರೆ.
ಇನ್ನು ರೋಹಿತ್ ಶರ್ಮಾ ಸಿಡ್ನಿ ಟೆಸ್ಟ್ ಪಂದ್ಯದಿಂದ ಹೊರಗುಳಿದ ವಿಚಾರ. ಅದೇ ಮಹಾ ತ್ಯಾಗ ಎಂಬಂತೆ ಕೆಲ ಸಿನಿಮಾ ನಟ-ನಟಿಯರು ಟ್ವೀಟ್ ಮಾಡಿದ್ದಾರೆ. ಎಲ್ಲಿದ್ದರು ಇವರೆಲ್ಲಾ..? ಈಗ ಯಾಕೆ ಬಂದರು..? ಉತ್ತರ ತುಂಬಾ ಸರಳ. ಇದು PR management. ರೋಹಿತ್ ಶರ್ಮಾನ ಪತ್ನಿ ರಿತಿಕಾ ಸಜ್’ದೇ cornerstone ಎಂಬ ಸೆಲೆಬ್ರಿಟಿ ಮ್ಯಾನೇಜ್ಮೆಂಟ್ ಕಂಪನಿಯನ್ನು ನಡೆಸುತ್ತಿದ್ದಾರೆೆ. ರೋಹಿತ್ ಶರ್ಮಾ ಬಗ್ಗೆ ಟ್ವೀಟ್ ಮಾಡುತ್ತಿರುವ ಬಹುತೇಕ ಸಿನಿಮಾ ಮಂದಿಯನ್ನು ಮ್ಯಾನೇಜ್ ಮಾಡುತ್ತಿರುವುದು ಇದೇ cornerstone ಕಂಪನಿ. ಗಂಡನ ಪರವಾಗಿ ಇವರಿಂದ ಟ್ವೀಟ್ ಮಾಡಿಸಿರುವುದು ರೋಹಿತ್ ಶರ್ಮಾನ ಪತ್ನಿ ಎಂಬುದು ಗುಟ್ಟಾಗಿ ಉಳಿದಿಲ್ಲ.
ಇವೆಲ್ಲದರಿಂದ ಹಾನಿಯಾಗುತ್ತಿರುವುದು ರೋಹಿತ್ ಶರ್ಮಾ ವ್ಯಕ್ತಿತ್ವಕ್ಕೆ ಮತ್ತು ಹಾನಿ ಮಾಡಿರುವುದು ಸ್ವತಃ ಪತ್ನಿ. ಹೇಳಿ ಕೊಟ್ಟ ಮಾತು, ಕಟ್ಟಿ ಕೊಟ್ಟ ಬುತ್ತಿ ಬಹಳ ಕಾಲ ಉಳಿಯದು. ಉಳಿಯುವುದೊಂದೇ.. ನೈಜ ವ್ಯಕ್ತಿತ್ವ.





