ವಿರಾಟ್ ಕೊಹ್ಲಿಯನ್ನು ಕಂಡರೆ ಈ ಮುಂಬೈಕರ್’ಗಳಿಗೆ ಅದೇಕೆ ಇಷ್ಟೊಂದು ಉರಿ..? ಮೊದಲು ಸುನೀಲ್ ಗವಾಸ್ಕರ್, ಈಗ ಸಂಜಯ್ ಮಾಂಜ್ರೇಕರ್.
ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಆಡಿದ ಇನ್ನಿಂಗ್ಸ್’ಗೆ ಇಡೀ ಜಗತ್ತೇ ಬೆರಗಾಗಿದೆ. ಎಲ್ಲರೂ ಕಿಂಗ್ ಕೊಹ್ಲಿಯ ಆಟವನ್ನು ಮೆಚ್ಚಿಕೊಂಡಿದ್ದಾರೆ. ಆದರೆ ಒಬ್ಬ ನಂಜಿನ ಮನುಷ್ಯ ಸಂಜಯ್ ಮಾಂಜ್ರೇಕರ್’ನನ್ನು ಬಿಟ್ಟು.
ದಕ್ಷಿಣ ಆಫ್ರಿಕಾ ವಿರುದ್ಧ ವಿರಾಟ್ ಕೊಹ್ಲಿ ಬಾರಿಸಿದ 76 ರನ್’ಗಳ ಮಹತ್ವ ಏನು ಎಂಬುದು ಕನಿಷ್ಠ ಕ್ರಿಕೆಟ್ ಜ್ಞಾನವಿರುವವರಿಗೂ ಅರ್ಥವಾಗುತ್ತದೆ. ಭಯಂಕರ ಫಾರ್ಮ್’ನಲ್ಲಿದ್ದ ಕ್ಯಾಪ್ಟನ್ ರೋಹಿತ್ ಶರ್ಮಾ ಫೈನಲ್’ನಲ್ಲಿ 2ನೇ ಓವರ್’ನಲ್ಲೇ ಔಟಾಗಿದ್ದ. “ಜವಾಬ್ದಾರಿ ಎಂಬ ಪದದ ಅರ್ಥವೇ ಗೊತ್ತಿಲ್ಲ” ಎಂಬಂತೆ ಆಡುವ ರಿಷಭ್ ಪಂತ್ ಸೊನ್ನೆ ಸುತ್ತಿದ್ದ.. ಜಗತ್ತಿನ ನಂ.1 ಟಿ20 ಬ್ಯಾಟರ್ ಸೂರ್ಯಕುಮಾರ್ ಯಾದವ್ 3 ರನ್ನಿಗೆ ಸುಸ್ತು ಹೊಡೆದಿದ್ದ.

4.3 ಓವರ್.. 34 ರನ್.. 3 ವಿಕೆಟ್.. ಏನು ಮಾಡಬೇಕಿತ್ತು ವಿರಾಟ್..? ನೆಲ ಕಚ್ಚಿ ಆಡಬೇಕಿತ್ತಾ ಅಥವಾ ತಾನೂ ಕೂಡ ಜವಾಬ್ದಾರಿ ಮರೆತು ವಿಕೆಟ್ ಕೈಚೆಲ್ಲಿ ತಂಡವನ್ನು ನಡು ನೀರಿನಲ್ಲಿ ಕೈಬಿಟ್ಟು ನಡೆಯಬೇಕಿತ್ತಾ..? ಕಿಂಗ್ ಕೊಹ್ಲಿಯದ್ದು ಆ ಜಾಯಮಾನವೇ ಅಲ್ಲ. ಆತ ತನ್ನ ಅಷ್ಟೂ ಅನುಭವವನ್ನು ಆ ದಿನ ತಂಡಕ್ಕಾಗಿ ಒರೆಗೆ ಹಚ್ಚಿ ನಿಂತು ಬಿಟ್ಟ. ಅಪಾಯಕಾರಿಯಾಗಿದ್ದ ದಕ್ಷಿಣ ಆಫ್ರಿಕಾ ಬೌಲರ್’ಗಳಿಗೆ ಸಡ್ಡು ಹೊಡೆದು ನಿಂತ. ಒಂದು ತುದಿಯಲ್ಲಿ ವಿರಾಟ್ ಕೊಹ್ಲಿ ಇದ್ದಾನೆ ಎಂಬ ಧೈರ್ಯವೇ, ಅಕ್ಷರ್ ಪಟೇಲ್’ಗೆ ಬೀಡು ಬೀಸಾಗಿ ಬ್ಯಾಟ್ ಬೀಸಲು ಸಾಧ್ಯವಾಗಿದ್ದು, ಶಿವಂ ದುಬೆ ಅಬ್ಬರಿಸಲು ಕಾರಣವಾಗಿದ್ದು.
ಕೊನೆಯಲ್ಲಿ 59 ಎಸೆತಗಳಲ್ಲಿ 128.81ರ ಸ್ಟ್ರೈಕ್’ರೇಟ್’ನಲ್ಲಿ 76 ರನ್. ಇಡೀ ತಂಡ ಗಳಿಸಿದ 176 ರನ್’ಗಳಲ್ಲಿ 43% ಕೊಡುಗೆ ವಿರಾಟ್ ಕೊಹ್ಲಿಯದ್ದೇ. ಅದೂ ಎಂಥಾ ಸಂದರ್ಭದಲ್ಲಿ.. ಟಾಪ್ ಆರ್ಡರ್ ಕಂಪ್ಲೀಟ್ collapse ಆದಾಗ. ಹೀಗಾಗಿ ಕೊಹ್ಲಿಯ ಇನ್ನಿಂಗ್ಸ್ priceless. ಆ ದಿನ ಕೊಹ್ಲಿ ಆಟಿದ ಆಟವನ್ನು ನೋಡಿ ಆತನನ್ನೂ ದ್ವೇಷಿಸುವವರೂ ಶಹಬ್ಬಾಸ್ ಹೇಳಿದ್ದಾರೆ. ಆದರೆ ಮುಂಬೈನ ಮಾಜಿ ಕ್ರಿಕೆಟಿಗ, ಸೋಕಾಲ್ಡ್ ಕ್ರಿಕೆಟ್ ಪಂಡಿತ ಸಂಜಯ್ ಮಾಂಜ್ರೇಕರ್ ಮಾತ್ರ ಮೊಸರಲ್ಲಿ ಕಲ್ಲು ಹುಡುಕುತ್ತಿದ್ದಾನೆ.

ಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿಗೆ “ಮ್ಯಾನ್ ಆಫ್ ದಿ ಮ್ಯಾಚ್” ಪ್ರಶಸ್ತಿ ಕೊಟ್ಟದ್ದು ಸಂಜಯ್ ಮಾಂಜ್ರೇಕರನಿಗೆ ಸರಿ ಕಾಣುತ್ತಿಲ್ಲವಂತೆ. ಕಾರಣ, ಸ್ಟ್ರೈಕ್’ರೇಟ್ ಅಂತೆ. ಕೊಹ್ಲಿ 19ನೇ ಓವರ್’ವರೆಗೆ ಆಡಿದ್ದರಿಂದ ಹಾರ್ದಿಕ್ ಪಾಂಡ್ಯನಿಗೆ ಬ್ಯಾಟ್ ಬೀಸಲು ಸಿಕ್ಕಿದ್ದು ಕೇವಲ ಎರಡು ಎಸೆತವಂತೆ. ಕೊಹ್ಲಿಯ ನಿಧಾನಗತಿಯ ಆಟದಿಂದ ಭಾರತ 90% ಸೋಲುವ ಹಂತ ತಲುಪಿತ್ತಂತೆ. ಹೀಗಾಗಿ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಯಾರಾದರೂ ಬೌಲರ್’ಗೆ ಸಿಗಬೇಕಿತ್ತು ಎಂದಿದ್ದಾನೆ ಸಂಜಯ್ ಮಾಂಜ್ರೇಕರ್.
ಹೌದು, ಕೈ ತಪ್ಪಿ ಹೋಗಿದ್ದ ಪಂದ್ಯವನ್ನು ಭಾರತ ಮಡಿಲಿಗೆ ಎಳೆದ ತಂದದ್ದು ನಮ್ಮ ಬೌಲರ್’ಗಳೇ. ಅದರಲ್ಲಿ ಎರಡು ಮಾತೇ ಇಲ್ಲ. ಹಾಗಂತ ವಿರಾಟ್ ಕೊಹ್ಲಿ ಆಟವನ್ನು ಪ್ರಶ್ನಿಸುವುದು ಶುದ್ಧ ಮೂರ್ಖತನ. ಕೊಹ್ಲಿ ಏನಾದರೂ ನೆಲ ಕಚ್ಚಿ ನಿಂತು ಆಡದೇ ಇದ್ದಿದ್ದರೆ, ಭಾರತ ತಂಡ ಫೈನಲ್’ನಲ್ಲಿ 140-150 ರನ್ನಿಗೆ ಪ್ಯಾಕಪ್ ಆಗುತ್ತಿತ್ತೇನೋ.. ಆಗ ತಂಡವನ್ನು ಗೆಲ್ಲಿಸಲು ಬೌಲರ್’ಗಳಿಗೆಲ್ಲಿ ಸಾಧ್ಯವಾಗುತ್ತಿತ್ತು..?
ಅಯ್ಯಾ ಸಂಜಯ..,
ವಿರಾಟ್ ಕೊಹ್ಲಿ ಬ್ಯಾಟಿಂಗ್ ತಾಕತ್ತಿನಿಂದ ಭಾರತವನ್ನು ಗೆಲ್ಲಿಸಿದ್ದಾನೆ ಎಂದ ಮೇಲೆ, ಭಾರತ ವಿಶ್ವಕಪ್ ಗೆದ್ದಿದೆ ಎಂದ ಮೇಲೆ ಈ ಸ್ಟ್ರೈಕ್’ರೇಟ್ ತೆಗೆದುಕೊಂಡು ಏನಾಗಬೇಕಿದೆ..? ಕೊಹ್ಲಿ ಬಗ್ಗೆ ಇನ್ನೂ ಉರಿಯುತ್ತಾ, ಮನಸ್ಸಿನ ವಿಷವನ್ನು ಕಾರುತ್ತಾ ಆ ಸ್ಟ್ರೈಕ್’ರೇಟ್’ಗೆ ಉಪ್ಪಿನಕಾಯಿ ಹಾಕಿ ನೆಕ್ಕಬೇಕಷ್ಟೇ. ಅದನ್ನು ಬಿಟ್ಟು ನಿಮ್ಮಿಂದ ಏನೂ ಮಾಡಲು ಸಾಧ್ಯವಿಲ್ಲ.