
ಭಾರತ ಅಂಧರ ಮಹಿಳಾ ತಂಡದಲ್ಲಿ ಕರ್ನಾಟಕದ ಮೂವರು ಪ್ರತಿಭೆಗಳು- ಕನ್ನಡತಿ ದೀಪಿಕಾ ನಾಯಕಿ
ಬೆಂಗಳೂರು: ಅಂಧರ ಮಹಿಳಾ ಟಿ20 ವಿಶ್ವಕಪ್ ಟೂರ್ನಮೆಂಟ್ನಲ್ಲಿ ಭಾರತವನ್ನು ಪ್ರತಿನಿಧಿಸಲು ಕರ್ನಾಟಕದ ಮೂವರು ಪ್ರತಿಭಾವಂತ ಕ್ರಿಕೆಟಿಗರು ಆಯ್ಕೆಯಾಗಿದ್ದಾರೆ.

ದೀಪಿಕಾ ಟಿ.ಸಿ., ಕಾವ್ಯ ವಿ. ಹಾಗೂ ಕಾವ್ಯ ಎನ್.ಆರ್. ಈ ಮಹತ್ವದ ಸ್ಪರ್ಧೆಯಲ್ಲಿ ಭಾರತದ ತಂಡದ ಭಾಗವಾಗುತ್ತಿದ್ದಾರೆ. ಕರ್ನಾಟಕ ಕ್ರಿಕೆಟ್ನಲ್ಲಿ ತಮಗೆ ವಿಶಿಷ್ಟ ಸ್ಥಾನ ನಿರ್ಮಿಸಿಕೊಂಡಿರುವ ಈ ಮೂವರು, ದೇಶದ ಪ್ರತಿಷ್ಠಿತ ವೇದಿಕೆಯಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಸಜ್ಜಾಗಿದ್ದಾರೆ.ಕನ್ನಡತಿ ದೀಪಿಕಾ ಚೊಚ್ಚಲ ಆವೃತ್ತಿಯ ಅಂಧರ ಮಹಿಳಾ ವಿಶ್ವಕಪ್ ಟಿ ೨೦ ಕ್ರಿಕೆಟ್ ನಲ್ಲಿ ಭಾರತವನ್ನು ಮುನ್ನಡೆಸಲಿದ್ದಾರೆ.


“ಈ ಬಾರಿ ಆಯ್ಕೆಯಾದ ತಂಡವು ಅತ್ಯಂತ ಶಕ್ತಿಯುತವಾಗಿದ್ದು, ಭಾರತಕ್ಕೆ ಕಿರೀಟ ತರುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ,” ಎಂದು ಭಾರತೀಯ ಅಂಧರ ಮಹಿಳಾ ತಂಡದ ಅಧ್ಯಕ್ಷ ಡಾಕ್ಟರ್ ಮಹಾಂತೇಶ್ ಹೇಳಿದರು.

ದೇಶಾದ್ಯಂತ ನಡೆದ ತೀವ್ರವಾದ ಆಯ್ಕೆ ಪ್ರಕ್ರಿಯೆಯಲ್ಲಿ ಒಟ್ಟು 56 ಆಟಗಾರ್ತಿಯರಲ್ಲಿಂದ ಅಂತಿಮ 16 ಮಂದಿಯನ್ನು ಆರಿಸಲಾಗಿದ್ದು, ಕರ್ನಾಟಕದ ಈ ಮೂವರು ಆಟಗಾರ್ತಿಯರು ರಾಜ್ಯದ ಕ್ರೀಡಾಭಿಮಾನಿಗಳಿಗೆ ಹೆಮ್ಮೆ ತಂದಿದ್ದಾರೆ.




