
ಭಾರತ ತಂಡದ ಕ್ರಿಕೆಟಿಗನೊಬ್ಬ ಸ್ಮಶಾನ ವಾಸಿಯ ಕಾಲಿಗೆರಗಿದ ಕ್ಷಣ..!
ಅವನೆಂದರೆ ಕ್ರಿಕೆಟಿಗರು ಕೈಯೆತ್ತಿ ಮುಗಿಯುತ್ತಾರೆ, ಕಾಲಿಗೂ ನಮಸ್ಕರಿಸುತ್ತಾರೆ..! ಅವನು ದೇವರಲ್ಲ.. ಆಟವನ್ನೇ ದೇವರೆಂದುಕೊಂಡವನು…

ನಂಬಿಕೆ ಇಟ್ಟದ್ದು ತನ್ನ ಕೆಲಸದ ಮೇಲೆ.. ಬದ್ಧತೆ ಕ್ರಿಕೆಟ್ ಮೇಲೆ.. ಪ್ರಾಮಾಣಿಕತೆ ಅವನ ಟ್ರೇಡ್ ಮಾರ್ಕ್.. ಕ್ರಿಕೆಟ್ ಅವನ ಲ್ಯಾಂಡ್ ಮಾರ್ಕ್.

ಕ್ರಿಕೆಟಿಗರು ಬರುತ್ತಾರೆ, ಹೋಗುತ್ತಾರೆ. ಆದರೆ ಅವನಂತಹ ಮತ್ತೊಬ್ಬ ವ್ಯಕ್ತಿ ಭಾರತ ಕ್ರಿಕೆಟ್ ತಂಡಕ್ಕೆ ಯಾವತ್ತೂ ಸಿಗಲಾರ, ಯಾವತ್ತಿಗೂ..

ಜಗತ್ತೇ ಆರಾಧಿಸುವ ಆಧುನಿಕ ಕ್ರಿಕೆಟ್ ದಿಗ್ಗಜ ವಿರಾಟ್ ಕೊಹ್ಲಿ ಅವನ ಬಗ್ಗೆ ಕೃತಜ್ಞತಾ ಭಾವದಿಂದ ಮಾತನಾಡುತ್ತಾನೆ. ಜಸ್ಪ್ರೀತ್ ಬುಮ್ರಾನಂತಹ ವಿಶ್ವಶ್ರೇಷ್ಠ ವೇಗಿ ಅವನ ಮುಂದೆ ನಡು ಬಗ್ಗಿಸಿ ಕೈ ಮುಗಿಯುತ್ತಾನೆ. ತಿಲಕ್ ವರ್ಮಾನಂತೂ ಎಲ್ಲರ ಮುಂದೆ ಅವನ ಕಾಲಿಗೆ ಎರಗಿಯೇ ಬಿಡುತ್ತಾನೆ. ಅದು ಅವನ ವ್ಯಕ್ತಿತ್ವಕ್ಕೆ, ಅವನ ಪ್ರಾಮಾಣಿಕತೆಗೆ, ಅವನ ಬದ್ಧತೆಗೆ ಭಾರತ ಕ್ರಿಕೆಟ್ ತಂಡದಲ್ಲಿ ಸಿಗುತ್ತಿರುವ ಗೌರವ.

ಮಾಡುವ ಕೆಲಸದ ಮೇಲೆ ಶ್ರದ್ಧೆಯಿದ್ದರೆ, ಕಾಯಕವನ್ನೇ ದೇವರೆಂದುಕೊಂಡರೆ ನಿಮ್ಮನ್ನು ತಡೆಯಲು ಈ ಜಗತ್ತಿನಲ್ಲಿ ಯಾವ ಶಕ್ತಿಗೂ ಸಾಧ್ಯವಿಲ್ಲ ಎಂಬುದಕ್ಕೆ ಅತ್ಯಂತ ದೊಡ್ಡ ಉದಾಹರಣೆ ಭಾರತ ಕ್ರಿಕೆಟ್ ತಂಡದ ಥ್ರೋಡೌನ್ ಸ್ಪೆಷಲಿಸ್ಟ್ ರಾಘವೇಂದ್ರ ದಿವಗಿ.

ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಒಬ್ಬ ಸಾಮಾನ್ಯ ಶಾಲಾ ಶಿಕ್ಷಕನ ಮಗ.. ಕ್ರಿಕೆಟ್ ಹುಚ್ಚು ಹಿಡಿಸಿಕೊಂಡು ಕೇವಲ 21 ರೂಪಾಯಿಗಳೊಂದಿಗೆ ಮನೆ ಬಿಟ್ಟವನು ಬಂದು ಸೇರಿದ್ದು ಹುಬ್ಬಳ್ಳಿಗೆ. ಮಲಗಲು ಸೂರು ಸಿಗದಾಗ ಸೇರಿದ್ದು ಸ್ಮಶಾನ.. ಮಳೆ, ಗಾಳಿ, ಬಿಸಿಲು, ಚಳಿ.. ಎಷ್ಟೋ ದಿನಗಳನ್ನು ಹೊಟ್ಟೆಗೆ ಹಿಟ್ಟಿಲ್ಲದೆ ಕಳೆದದ್ದಿದೆ.. ಹೀಗೆ ಸ್ಮಶಾನದಲ್ಲೇ ಸಾಗಿದ್ದು ನಾಲ್ಕೂವರೆ ವರ್ಷ.

25 ವರ್ಷಗಳ ಹಿಂದೆ ಹುಬ್ಬಳ್ಳಿಯ ಸ್ಮಶಾನದಲ್ಲಿ ಮಲಗುತ್ತಿದ್ದ ರಾಘವೇಂದ್ರ ದಿವಗಿ ಭಾರತ ಕ್ರಿಕೆಟ್ ತಂಡದ ಹೃದಯ, ಉಸಿರಾಗಿ ಬೆಳೆದು ನಿಂತಿದ್ದಾನೆ ಎಂದರೆ, ಇದೇನು ಸಾಮಾನ್ಯ ಪ್ರಯಾಣವಲ್ಲ.. ಅವನ ಜೀವನವೇ ಒಂದು ಚರಿತ್ರೆ.. ಆ ಚರಿತ್ರೆಯ ಪ್ರತಿಯೊಂದು ಅಧ್ಯಾಯವೂ ಅದ್ಭುತ..
-ಸುದರ್ಶನ್
PC: BCCI





