Categories
ಭರವಸೆಯ ಬೆಳಕು

ಆಗಸ್ಟ್ 06 ರಂದು ಬೆಂಗಳೂರಿನಲ್ಲಿ ಕರಾವಳಿ ಸಿರಿ ಕ್ಲಬ್ ಉದ್ಘಾಟನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ!!

ಸಣ್ಣದೊಂದು ಕನಸು ದೊಡ್ಡ ಯೋಚನೆ ಮೂಲಕ ಚಿಕ್ಕ ತಂಡದೊಂದಿಗೆ ಕರಾವಳಿ ಸಿರಿ ಕ್ಲಬ್ ಬೆಂಗಳೂರು ಎನ್ನುವ ನಾಮ-ಧ್ಯೇಯದೊಂದಿಗೆ ಭರವಸೆಯ ಬೆಳಕಾಗಿ  ಒಂದು ಸಂಘಟನೆ ಪ್ರಾರಂಭವಾಗುತ್ತಾ ಇದೆ.
ಇದರ ಉಧ್ಘಾಟನಾ ಸಮಾರಂಭ ಮತ್ತು ಸಾಂಸ್ಕ್ರತಿಕ ಕಾರ್ಯಕ್ರಮ ನಾಳೆಯ ದಿನ ತಾರೀಕು  6 ಆಗಸ್ಟ್ ಭಾನುವಾರದಂದು ಬೆಂಗಳೂರಿನ ಶೆಫ್ ಟಾಕ್ ಅಂಡ್ ಹಾಸ್ಪಿಟಾಲಿಟಿಸ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್, N1&2,5ನೇ ವಾರ್ಡ್, 8ನೇ ಅಡ್ಡ ರಸ್ತೆ, ಮುನಿರೆಡ್ಡಿ ಬಡಾವಣೆ, ಮಂಗಮ್ಮನ ಪಾಳ್ಯ ದಲ್ಲಿರುವ ನಾರಾಯಣ ಗುರು ಸಭಾಭವನ  ಇಲ್ಲಿ ನಡೆಯಲಿದೆ.
ಮಧ್ಯಾಹ್ನ 2 ಗಂಟೆಗೆ ಶ್ರೀ ಮಹಾಲಕ್ಷ್ಮಿ ಟ್ರಸ್ಟ್ (ರಿ) ಉಪ್ಪುಂದ ಇದರ ಅಧ್ಯಕ್ಷರು ಮತ್ತು ಶೆಫ್ ಟಾಕ್ ಅಂಡ್ ಹಾಸ್ಪಿಟಾಲಿಟಿಸ್ ಸರ್ವಿಸಸ್ ಪ್ರೈ.ಲಿ.ನ ವ್ಯವಸ್ಥಾಪಕ ನಿರ್ದೇಶಕರು ಆಗಿರುವಂತಹ ಶ್ರೀ ಗೋವಿಂದ ಬಾಬು ಪೂಜಾರಿ ಇವರು ಕರಾವಳಿ ಸಿರಿ ಕ್ಲಬ್ ಬೆಂಗಳೂರುನ ಉದ್ಘಾಟನೆ ಮಾಡಲಿರುವರು. ಇವರೊಂದಿಗೆ ಅನೇಕ ಚಲನ ಚಿತ್ರ ನಟರು,  ಸಿನಿಮಾ ನಿರ್ಮಾಪಕರು, ಚಲನ ಚಿತ್ರ ನಿರ್ದೇಶಕರು ಮತ್ತು  ಹೆಸರಾಂತ ನಿರೂಪಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ವಿಶೇಷ ಆಹ್ವಾನಿತರಾಗಿ ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಗುರುರಾಜ ಗಂಟಿಹೊಳೆ ಭಾಗವಹಿಸಲಿದ್ದಾರೆ.  ಸ್ಪೋರ್ಟ್ಸ್ ಕನ್ನಡ ವೆಬ್ ಸೈಟ್ ನ ಪ್ರಧಾನ ಸಂಪಾದಕ  ಕೋಟ ಶ್ರೀ ರಾಮಕೃಷ್ಣ ಆಚಾರ್ಯ ಇವರ ಗೌರವ ಉಪಸ್ಥಿತಿಯಲ್ಲಿ, ಪತ್ರಕರ್ತ ಮತ್ತು ಅಭಿಮತ ತಂಡದ ಸಂಸ್ಥಾಪಕ ವಸಂತ ಗಿಳಿಯಾರ್, ಬೆಂಗಳೂರಿನ ಹೋಟೆಲ್ ಉದ್ಯಮಿ ರಘುರಾಮ ಶೆಟ್ಟಿ ಮತ್ತು ಚಲನಚಿತ್ರ ನಟಿ ಅನುಷಾ ರೈ ಉಪಸ್ಥಿತರಿರುವರು. ಈ ಸಂದರ್ಭ ಸಮಾಜಸೇವೆ, ಸಂಗೀತ, ಯಕ್ಷಗಾನ  ಕಲಾಕ್ಷೇತ್ರಗಳಲ್ಲಿ  ಸಾಧನೆಯನ್ನು ಮಾಡಿದಂತಹ ಕರಾವಳಿಯ ಸಾಧಕರನ್ನು ಗೌರವಿಸಿ ಸನ್ಮಾನಿಸುವ ಗೌರವಾರ್ಪಣೆ ಕಾರ್ಯಕ್ರಮವು ಕೂಡ ನಡೆಯಲಿದೆ.
ಉದ್ಘಾಟನಾ ಕಾರ್ಯಕ್ರಮ ಮತ್ತು ಸಭಾ ಕಾರ್ಯಕ್ರಮದ ನಂತರ ನಂತರ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ನೈಗಿ ನಾಗಣ್ಣ ಖ್ಯಾತಿಯ ನಾಗರಾಜ್ ತೆಕ್ಕಟ್ಟೆ ಸಾರಥ್ಯದ ಕಲಾಶಕ್ತಿ ಕನ್ನುಕೆರೆ ತೆಕ್ಕಟ್ಟೆ ಇವರಿಂದ ‘ನಗೆ ಕೊಪ್ಪರಿಗೆ’ ಎಂಬ ಹಾಸ್ಯ ಕಾರ್ಯಕ್ರಮ ನಡೆಯಲಿದೆ. ಇದಾದ ಬಳಿಕ ‘ಯಕ್ಷಗಾನ ನಾಟ್ಯ ವೈಭವ’ ಎಂಬ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಕರಾವಳಿ ಸಿರಿ ಕ್ಲಬ್  ನ  ಈ ಎಲ್ಲಾ ಕಾರ್ಯಕ್ರಮಗಳಿಗೆ ಸ್ಪೋರ್ಟ್ಸ್ ಕನ್ನಡ ಮೀಡಿಯಾ ಪಾರ್ಟ್ನರ್ ಆಗಿ ಕಾರ್ಯನಿರ್ವಹಿಸಲಿದ್ದು, ಸ್ಪೋರ್ಟ್ಸ್ ಕನ್ನಡ ಸಂಪೂರ್ಣ ಕಾರ್ಯಕ್ರಮವನ್ನು ನೇರ ಪ್ರಸಾರ ಮಾಡಲಿದೆ.
ಜಾತಿ, ಧರ್ಮದ ಭೇದವಿಲ್ಲದೆ ಸಮಾಜಮುಖಿ ಕಾರ್ಯಗಳಿಗೆ ಸದಾ ಸಿದ್ಧರಾಗಿ, ಸಂಘಟನೆಯ ಮೂಲಕ ಸಮಾಜಸೇವೆ, ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಕರಾವಳಿ ಸಿರಿ ಕ್ಲಬ್ ನ ಎಲ್ಲಾ ಉದ್ದೇಶಗಳು, ಯೋಜನೆಗಳು ಈಡೇರಲಿ. ನಮ್ಮ ನುಡಿ, ನಮ್ಮ ಸಂಸ್ಕೃತಿ ಬೆಳೆಸುವ ಕಾರ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಯೋಚನೆಗಳೊಂದಿಗೆ ಮುಂದಿನ ಹೆಜ್ಜೆ ಇಡುವಂತಾಗಲಿ.
Categories
ಭರವಸೆಯ ಬೆಳಕು ಸ್ಪೋರ್ಟ್ಸ್

ಕರಾವಳಿ ಸಿರಿ ಕ್ಲಬ್ ಬೆಂಗಳೂರು ಉದ್ಘಾಟನಾ ಕಾರ್ಯಕ್ರಮ.

ಕರಾವಳಿ ಎನ್ನುವುದೇ ಒಂದು ಸೊಬಗು. ಪರಶುರಾಮನ ಈ ನಾಡು ಅನ್ನುವುದೇ ಒಂದು ಆಕರ್ಷಣೆ….!
ಇಲ್ಲಿನ ಕಡಲು, ಮತ್ತದರ ಕಿನಾರೆಗಳು, ನದಿ, ಗುಡ್ಡಗಳು, ವಿಭಿನ್ನ ಸಂಸ್ಕೃತಿ, ಆಚಾರ ವಿಚಾರ ಎಲ್ಲವೂ ಬಣ್ಣಿಸಲಾಗದಷ್ಟು ಅಧ್ಭುತ. ಕರಾವಳಿಯ ಗಂಡುಕಲೆ ಯಕ್ಷಗಾನ,ಭೂತಾರಾಧನೆ, ಕಂಬಳ,ತೇರು, ಜಾತ್ರೆ ಹೀಗೆ ಬೆಳೆಯುತ್ತಲೇ ಸಾಗುತ್ತದೆ ಪಟ್ಟಿ.  ಈ ಕರಾವಳಿ ಎನ್ನುವ ಬೆರಗಿನೊಳಗೆ ಯಾವುದೂ ಇಲ್ಲ ಹೇಳಿ?? ಅದನ್ನೆಷ್ಟು ಕಣ್ತುಂಬಿ ಕೊಂಡರೂ ಅದು ಕಮ್ಮಿಯೇ.. ಬೆಂಗಳೂರು ನಗರದಲ್ಲೂ ಸಾಕಷ್ಟು ಕರಾವಳಿಗರು ನೆಲೆಸಿದ್ದಾರೆ. ನಮ್ಮ ಕನ್ನಡ ಭಾಷೆ ಮತ್ತು ಸಾಹಿತ್ಯ, ಸಂಸ್ಕೃತಿ, ಪರಂಪರೆಯ ಕ್ಷೇತ್ರಗಳಲ್ಲಿ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಂಸ್ಕ್ರತಿಕ ಹೀಗೆ ವಿವಿಧ ಪ್ರಕಾರಗಳಲ್ಲಿ ಚಟುವಟಿಕೆ ನಡೆಸಲು ಕರಾವಳಿ ಸಿರಿ ಕ್ಲಬ್ ಬೆಂಗಳೂರು ಎನ್ನುವ ನಾಮದೇಯದೊಂದಿಗೆ ಒಂದು  ವಿಶೇಷ  ಸಂಸ್ಥೆ  ಹುಟ್ಟಿಕೊಂಡಿದೆ. ಸಣ್ಣದೊಂದು ಕನಸು ದೊಡ್ಡ ಯೋಚನೆಯೊಂದಿಗೆ ಚಿಕ್ಕ ತಂಡದೊಂದಿಗೆ ನಮ್ಮ ನಿಮ್ಮೆಲ್ಲರ  ಮುಂದೆ ಭರವಸೆಯ ಬೆಳಕಾಗಿ ಇದು ಬರಲಿದೆ….
ಬರುವ ಆಗಸ್ಟ್ 6 ರಂದು  ಚೆಫ್ ಟಾಕ್  ಫುಡ್ ಅಂಡ್ ಹಾಸ್ಪಿಟಾಲಿಟಿ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್, ಮುನಿರೆಡ್ಡಿ ಬಡಾವಣೆ, ಮಂಗಮ್ಮನ ಪಾಳ್ಯ ಬೆಂಗಳೂರು ಇಲ್ಲಿನ ನಾರಾಯಣ ಗುರು ಸಭಾಭವನದಲ್ಲಿ  ಈ ಸಂಸ್ಥೆಯ  ಉದ್ಘಾಟನಾ ಕಾರ್ಯಕ್ರಮ. ಸಾಂಸ್ಕ್ರತಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ. ಕರಾವಳಿ ಸಿರಿ ಕ್ಲಬ್ ನಡೆಸುವ ಚಟುವಟಿಕೆಗಳು ಬೆಂಗಳೂರು ನಗರದಲ್ಲಿ ನೆಲೆಸಿರುವ ಕರಾವಳಿಯ ಯುವ ಪ್ರತಿಭೆಗಳಿಗೆ ತಮ್ಮ ಪ್ರತಿಭಾ ಪ್ರದರ್ಶನವನ್ನು ನೀಡಲು ಒದಗಿಸಲಾಗಿರುವ ಒಂದು ವೇದಿಕೆ.  ಸುಪ್ತ ಕಲಾಪ್ರತಿಭೆಯನ್ನು ಗುರುತಿಸಿ ಅವರ ಪ್ರತಿಭೆಯ ಅಭಿವ್ಯಕ್ತಿಗೆ ನಿರಂತರ ವೇದಿಕೆಯೊಂದನ್ನು ನಿರ್ಮಿಸುವ ಸಲುವಾಗಿ ಬೆಂಗಳೂರಿನಲ್ಲಿರುವ ಉದಯೋನ್ಮುಖ ಹಾಗೂ ಪ್ರತಿಭಾವಂತ ಕರಾವಳಿಯ ಮಕ್ಕಳಿಂದ ವಿವಿಧ ರೀತಿಯ  ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುವುದು. ಸಾಂಸ್ಕೃತಿಕ ಪರಂಪರೆ ಮತ್ತು ಎಲ್ಲಾ ಸಂಸ್ಕೃತಿಗಳ ಸಮಾನ ಘನತೆಯನ್ನು ಉತ್ತೇಜಿಸುವ ಮೂಲಕ,  ಬೆಂಗಳೂರಲ್ಲಿ ವಾಸವಾಗಿರುವ ಕರಾವಳಿಗರ ನಡುವಿನ ಬಾಂಧವ್ಯವನ್ನು ಈ ಸಂಸ್ಥೆ ಬಲಪಡಿಸಲಿದೆ,
ಕರಾವಳಿ ಸಿರಿ ಕ್ಲಬ್ ಬೆಂಗಳೂರಿನ  ಗುರಿ “ಶಾಂತಿ ನಿರ್ಮಾಣಕ್ಕೆ ಕೊಡುಗೆ ನೀಡುವುದು, ಬಡತನದ ನಿರ್ಮೂಲನೆ, ಉದಯೋನ್ಮುಖ ಸಾಮಾಜಿಕ ಮತ್ತು ನೈತಿಕ ಸವಾಲುಗಳನ್ನು ಪರಿಹರಿಸುವುದು, ಸಾಂಸ್ಕೃತಿಕ ವೈವಿಧ್ಯತೆಯನ್ನು ಬೆಳೆಸುವುದು. ಬೆಂಗಳೂರು ನಗರದಲ್ಲಿ ಈ ಸಂಸ್ಥೆಯು ಏರ್ಪಡಿಸುವ ನಿರಂತರ  ಕಾರ್ಯಕ್ರಮಗಳು ಬೆಂಗಳೂರು ಕರಾವಳಿಗರ ಸಂರಕ್ಷಣೆ ಮತ್ತು ಅಭಿವೃದ್ಧಿಯ ದೃಷ್ಟಿಯಿಂದ ಮುಂದಿನ ಯೋಜನೆಗಳನ್ನು ರೂಪಿಸಿ, ಅನುಷ್ಠಾನಗೊಳಿಸಲಿದೆ. ಈ ಸಂಸ್ಥೆಯೇ ಹೇಳುವ ಪ್ರಕಾರ  ಕೀರ್ತಿ ಸಂಪಾದಿಸುವ ಯೋಚನೆ ಅವರದಲ್ಲ , ಆಸೆ ಆಕಾಂಕ್ಷಿಗಳನ್ನ ಹೊತ್ತು ಬರುವ ತಂಡ  ಕರಾವಳಿ ಸಿರಿ ಕ್ಲಬ್ ನದ್ದಲ್ಲ..
ಯೋಚನೆಗಳು ಇಂತಿವೆ…
1) ರಕ್ತದಾನ ಶ್ರೇಷ್ಠದಾನ ಅಮೂಲ್ಯ ದಾನವಂತೆ  ಮಂಗಳೂರು, ಉಡುಪಿ, ಕುಂದಾಪುರ ಭಾಗದವರು ಬೆಂಗಳೂರಿನ ಕಡೆ ಬಂದಾಗ ರಕ್ತದ ಅವಶ್ಯಕತೆ ಇದ್ದಾಗ ಅಂತವರ ನೆರವಿಗೆ  ಒಂದು ತಂಡವಾಗಿ ಬರುವ ಕಲ್ಪನೆಯೊಂದಿಗೆ….
2) ಸ್ವಚ್ಛ ಭಾರತ್ ಕನಸಿನೊಂದಿಗೆ ಮುಂದಿರುವ ಹಾದಿಯೊಂದಿಗೆ ಮುಂದಿರುವ ಯೋಚನೆಗಳೊಂದಿಗೆ….
3) ಕರಾವಳಿಯ  ನಮ್ಮ ನುಡಿಯನ್ನ ,ನಮ್ಮ ಸಂಸ್ಕೃತಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಯೋಚನೆಗಳೊಂದಿಗೆ…
4) ಕ್ರೀಡೆಗಳಲ್ಲಿ ಪ್ರತಿಬಿಂಬಿಸುವ ಹಾಗೆ
5)  ಆರ್ಥಿಕವಾಗಿ ಸಾಮಾಜಿಕವಾಗಿ ಯೋಚನೆಗೂ ಮಿಲುಕದ ಅತಿ ಹೀನ ಪರಿಸ್ಥಿತಿಯಲ್ಲಿರುವ  ವಿದ್ಯಾರ್ಥಿಗಳಿಗೆ ಕುಟುಂಬದ ಸದಸ್ಯರಾಗಿ ನೆರವಾಗುವ ಬಗ್ಗೆ…
6) ನೆರೆ ಹೊರೆ ಹಾನಿಗಳ ವಿಚಾರವಾಗಿ ಸ್ವಯಂಸೇವಕರಂತೆ ತೊಗಡಗಿಸಿಕೊಳ್ಳುವ ಬಗ್ಗೆ…
7) ದೂರದ ಊರಿಂದ ಬಂದು ಬೆಂಗಳೂರಿನಲ್ಲಿ ಸಣ್ಣಪುಟ್ಟ ಕನಸಿನೊಂದಿಗೆ   ಹೋಟೆಲ್ , ಬೇಕರಿ ಮಾಡಿಕೊಂಡು ಜೀವನ ನಡೆಸುವವರಿಗೆ ಸಮಸ್ಯೆ ಬಂದಾಗ ಅವರ ಪರವಾಗಿ ನಿಲ್ಲುವ ಬಗ್ಗೆ  …
8) ಕರಾವಳಿಯ ಸಂಸ್ಕೃತಿಯನ್ನಎತ್ತಿ ಹಿಡಿಯುವ ಬಗ್ಗೆ
ಇವರಲ್ಲಿರುವ ಕನಸುಗಳು ನೂರೊಂದು. ಹೀಗೆ ಹಲವು ಕನಸುಗಳು ಕೂಡಿಕೊಳ್ಳಲಿದೆ … ಕರಾವಳಿ ಸಿರಿ ಕ್ಲಬ್ ಕನಸನ್ನ ಕಂಡಿದೆ. ಇದು ಅವರಿಗಾಗಿ ಕಂಡ ಕನಸಲ್ಲ.  ನಮ್ಮವರಿಗಾಗಿ ಕಂಡಂತ ಕನಸು ….
ಪ್ರೋತ್ಸಾಹಿಸುವ ವಿಚಾರ ನಮ್ಮೆಲ್ಲ ಕರಾವಳಿಗರದ್ದು , ನಾವೂ ಕೂಡ ಅವರಲ್ಲಿಲ್ಲಿ ಒಬ್ಬರು ಎನ್ನುವ ಹಾಗೆ ಹರಸಿ ಹಾರೈಸಿ ಆಶೀರ್ವದಿಸೋಣ….