
ಸುರತ್ಕಲ್ನಲ್ಲಿ ನಡೆದ ಲೆಜೆಂಡ್ಸ್ ಕ್ರಿಕೆಟ್ ಲೀಗ್ ಟೂರ್ನಿಯಲ್ಲಿ ಮೆರೆದ ದುರ್ಗಾಂಬ ತಂಡ
ಸುರತ್ಕಲ್, ಎಪ್ರಿಲ್ 6: ಸುರತ್ಕಲ್ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಕ್ಲಬ್ (ರಿ.) ಸಂಸ್ಥೆಯ ಆಶ್ರಯದಲ್ಲಿ ಏಪ್ರಿಲ್ 5 ಮತ್ತು 6ರಂದು ಸುರತ್ಕಲ್ನ ಗೋವಿಂದ ದಾಸ ಕಾಲೇಜು ಕ್ರೀಡಾಂಗಣದಲ್ಲಿ ಚತುರ್ಥ ಆವೃತ್ತಿಯ ಲೆಜೆಂಡ್ಸ್ ಕ್ರಿಕೆಟ್ ಲೀಗ್ — ಹಿರಿಯರ ಕ್ರಿಕೆಟ್ ಹಬ್ಬ ಭರ್ಜರಿಯಾಗಿ ನಡೆಯಿತು.
ಸುರತ್ಕಲ್ ಸ್ಪೋರ್ಟ್ಸ್& ಕಲ್ಚರಲ್ ಕ್ಲಬ್(ರಿ) ಇವರ ಆಶ್ರಯದಲ್ಲಿ, ಹಿರಿಯ ಧಾರ್ಮಿಕ ಮುಂದಾಳು ಹಾಗೂ ಸಂಸ್ಥೆಯ ಅಧ್ಯಕ್ಷರಾದ ಮಹಾಬಲ ಪೂಜಾರಿ ಕಡಂಬೋಡಿ ಮತ್ತು ಮಹಾಪೋಷಕರಾದ ಮಡಿಕೇರಿ ಡಿ.ವೈ.ಎಸ್.ಪಿ ಮಹೇಶ್ ಕುಮಾರ್ ಸರ್ ಇವರ ಮಾರ್ಗದರ್ಶನದಲ್ಲಿ ನಡೆದ ರಾಜ್ಯ ಮಟ್ಟದ ಲೆಜೆಂಡ್ಸ್ ಕಪ್ ಸೀಸನ್-4 ಕ್ರಿಕೆಟ್ ಪಂದ್ಯಾಟದಲ್ಲಿ ಕರ್ನಾಟಕದ ವಿವಿಧ ಜಿಲ್ಲೆಗಳಿಂದ 45 ವರ್ಷ ಮೇಲ್ಪಟ್ಟ ಆಟಗಾರರನ್ನು ಒಳಗೊಂಡ 14 ತಂಡಗಳು ಭಾಗವಹಿಸಿ ತಮ್ಮ ಕ್ರಿಕೆಟ್ ಕೌಶಲ್ಯ ಪ್ರದರ್ಶಿಸಿದವು. ಎರಡು ದಿನಗಳ ಕಾಲ ನಡೆದ ಈ ಸ್ಪರ್ಧೆಯಲ್ಲಿ, ಕ್ರಿಕೆಟ್ ಆಟವನ್ನಾಡಿದ ಹಿರಿಯ ಆಟಗಾರರಿಗೆ ತಮ್ಮ ಹಳೆಯ ಕ್ರಿಕೆಟ್ ದಿನಗಳನ್ನು ಮತ್ತೆ ನೆನೆಸಿಕೊಳ್ಳುವ ಉತ್ತಮ ವೇದಿಕೆಯಾಗಿತ್ತು. ಹಿರಿಯ ಆಟಗಾರರ ಆಟ ಪ್ರೇಕ್ಷಕರ ಮನಸ್ಸನ್ನು ಕದ್ದುಕೊಂಡಿತು. ಪಂದ್ಯಾವಳಿಗೆ ಸ್ಥಳೀಯ ಜನತೆ ಹಾಗೂ ಕ್ಲಬ್ಬಿನ ಸದಸ್ಯರಿಂದ ಉತ್ತಮ ಬೆಂಬಲ ವ್ಯಕ್ತವಾಯಿತು.


ದುರ್ಗಾಂಬ ತಂಡದ ಜಯಭೇರಿ
ಟೂರ್ನಿಯ ಅತ್ಯಂತ ನಿರೀಕ್ಷಿತ ಅಂತಿಮ ಪಂದ್ಯದಲ್ಲಿ, ದುರ್ಗಾಂಬ ತಂಡಂಬೈಲ್ ತಂಡವು ಸುರತ್ಕಲ್ನ ಪ್ರತಿಷ್ಠಿತ ವೀರಕೇಸರಿ ತಂಡಂಬೈಲ್ ವಿರುದ್ಧ ತೀವ್ರ ಹೋರಾಟ ನಡೆಸಿ ಜಯ ಸಾಧಿಸಿ, 2025ರ ಲೆಜೆಂಡ್ಸ್ ಲೀಗ್ ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡಿತು.
ಭಾನುವಾರ ಸಂಜೆ ನಡೆದ ಬಹುಮಾನ ವಿತರಣಾ ಸಮಾರಂಭದಲ್ಲಿ ವಿಜೇತ ಹಾಗೂ ಉಪವಿಜೇತ ತಂಡಗಳಿಗೆ ಪ್ರಶಸ್ತಿ ಫಲಕಗಳು, ಟ್ರೋಫಿಗಳು ಮತ್ತು ಸ್ಮರಣಿಕೆಗಳನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ಗಣ್ಯ ಅತಿಥಿಗಳಾಗಿ ಆಗಮಿಸಿದ್ದ ಕ್ರೀಡಾ ಸಂಘಗಳ ಪದಾಧಿಕಾರಿಗಳು, ಉದ್ಯಮಿಗಳು ಮತ್ತು ಮಾಜಿ ಕ್ರಿಕೆಟಿಗರು ತಮ್ಮ ಅನುಭವ ಹಂಚಿಕೊಳ್ಳುವ ಮೂಲಕ ಕ್ರೀಡಾಕೂಟಕ್ಕೆ ಮೆರಗು ನೀಡಿದರು. ಸುರತ್ಕಲ್ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಕ್ಲಬ್ ಅಧ್ಯಕ್ಷರು ಮಾತನಾಡುತ್ತಾ, “ಹಿರಿಯ ಆಟಗಾರರಿಗೆ ಮತ್ತೊಮ್ಮೆ ಮೈದಾನಕ್ಕೆ ಇಳಿಯುವ ಅವಕಾಶ ನೀಡುವಲ್ಲಿ ನಮ್ಮ ಸಂಸ್ಥೆಗೆ ಪಾತ್ರವಾದ ಹೆಮ್ಮೆ ಅಪಾರ” ಎಂದು ಹೇಳಿದರು. ಕ್ರಿಕೆಟ್ ಕ್ರೀಡೆಗೆ ಜೀವನವನ್ನೇ ಅರ್ಪಿಸಿದ ಆಟಗಾರರಿಗೆ ಇಂತಹ ವೇದಿಕೆಗಳು ಇನ್ನಷ್ಟು ಪ್ರೇರಣೆಯಾಗಲಿ ಎಂಬುದು ಸ್ಪೋರ್ಟ್ಸ್ ಕನ್ನಡದ ಆಶಯ.

ಈ ರೀತಿಯ ಲೆಜೆಂಡ್ಸ್ ಲೀಗ್ಗಳು ಹಿರಿಯರಿಗೂ ಮತ್ತೊಂದು ಕ್ರೀಡಾ ಜೀವನದ ಅನುಭವ ನೀಡುತ್ತವೆ ಎಂಬುದು ಈ ಕಾರ್ಯಕ್ರಮದಿಂದ ಮತ್ತೊಮ್ಮೆ ಸಾಬೀತಾಯಿತು. ಕ್ರಿಕೆಟ್ ಪ್ರೀತಿಗೆ ವಯಸ್ಸಿಲ್ಲ ಎಂಬುದನ್ನು ಹಿರಿಯ ಆಟಗಾರರು ತಮ್ಮ ಕ್ರೀಡಾ ಶಕ್ತಿಯಿಂದ ಪ್ರದರ್ಶಿಸಿದ್ದಾರೆ.




