
ದುಬೈ:ರಾಹುಲ್ ದ್ರಾವಿಡ್ ಕಪ್ ಪಂದ್ಯಾಟಕ್ಕೆ ಸಾಮಾಜಿಕ ಜಾಲತಾಣದಲ್ಲಿ ದಾಖಲೆ ಸಂಖ್ಯೆಯ ವೀಕ್ಷಕರು.

ಅರಬ್ ಸಂಯುಕ್ತ ರಾಷ್ಟ್ರದ ದುಬೈನಲ್ಲಿ ಉಡುಪಿ ಸೂರಾಲು ಮೂಲದ ರಾಹುಲ್ ದ್ರಾವಿಡರ ಮಹಾನ್ ಅಭಿಮಾನಿ ವಿಠಲ್ ರಿಶಾನ್ ನಾಯಕ್ ಆಯೋಜಿಸುತ್ತಿರುವ ಮಿಸ್ಟರ್ ರಾಹುಲ್ ದ್ರಾವಿಡ್ ಕ್ರಿಕೆಟ್ ಕಪ್ ಲೀಗ್ ಹಂತದ ಅಂತಿಮ ಪಂದ್ಯಗಳು ತೀವ್ರ ಜಿದ್ದಾಜಿದ್ದಿನ ಹೋರಾಟದೊಂದಿಗೆ ಜರುಗಿ ನಿರೀಕ್ಷೆಗೂ ಮೀರಿದ ವೀಕ್ಷಣೆಯೊಂದಿಗೆ ಪಂದ್ಯಾಟವು ಇದೀಗ ನಾಕೌಟ್ ಹಂತ ತಲುಪುತ್ತಿದೆ.


ಲೀಗ್ ಹಂತದ ಕೊನೆಯ ಸುತ್ತಿನ ಮೊದಲ ಪಂದ್ಯದಲ್ಲಿ ದುಬೈನ ಸ್ಪೈಕರ್ಸ್ xl ಹಾಗೂ ಬ್ಲೂ ಸ್ಕೈ xl ನಡುವಿನ ಪಂದ್ಯವು ರೋಚಕ ಕದನದೊಂದಿಗೆ ಜರಗಿತು.ಮೊದಲು ಬ್ಯಾಟ್ ಮಾಡಿದ ಸ್ಪೈಕರ್ಸ್ xl ತಂಡವು 15 ಓವರ್ ಗಳಲ್ಲಿ ಎಂಟು ವಿಕೆಟ್ ಕಳೆದುಕೊಂಡು 173 ರನ್ ಪೇರಿಸಿತು.ಈ ಗುರಿಯನ್ನು ಬೆಂಬತ್ತಿದ ಬ್ಲೂ ಸ್ಕೈ xl ತಂಡವು ಉತ್ತಮ ಪ್ರತಿ ಹೋರಾಟದೊಂದಿಗೆ ಸಾಗಿ ಅಂತಿಮವಾಗಿ 6 ವಿಕೆಟ್ ಕಳೆದುಕೊಂಡು 172 ರನ್ ಗಳಿಸಿ ಕೇವಲ ಒಂದು ರನ್ನಿನ್ನಿಂದ ಶರಣಾಯಿತು. 17ಚೆಂಡುಗಳಲ್ಲಿ ಮೂರು ಭರ್ಜರಿ ಸಿಕ್ಸರ್ ಹಾಗೂ ಮೂರು ಬೌಂಡ್ರಿಯೊಂದಿಗೆ 38 ರನ್ ಭಾರಿಸಿದ ಸ್ಪೈಕರ್ಸ್ ತಂಡದ ಎಂ ಇರ್ಫಾನ್ ಪಂದ್ಯಶ್ರೇಷ್ಠ ಪ್ರಶಸ್ತಿ ಗಳಿಸಿದರು.

ಎರಡನೇ ಪಂದ್ಯವು ಓಜಿಎಸ್ ಮೆಡಿಕಲ್ಸ್ ಹಾಗೂ ಸಿಯಾಲ್ಕೊಟ್ ರೈಸಿಂಗ್ ಸ್ಟಾರ್ ಕ್ರಿಕೆಟರ್ಸ್ ತಂಡದ ನಡುವೆ ಜರಗಿತು.ಮೊದಲು ಬ್ಯಾಂಟಿಂಗ್ ನಡೆಸಿದ ಓಜಿಎಸ್ ಮೆಡಿಕಲ್ಸ್ ತಂಡವು ಶಾರ್ಜಾದ ಸಿಯಾಲ್ಕೊಟ್ ರೈಸಿಂಗ್ ಸ್ಟಾರ್ಸ್ ತಂಡದ ವಿರುದ್ಧ ತಂಡದ 138 ರನ್ ಗಳಿಸಿದರೆ ಈ ಮೊತ್ತವನ್ನು ಬೆಂಬತ್ತಿದ್ದ ಸಿಯಾಲ್ಕೋಟ್ ತಂಡವು 13.5 ಓವರಗಳಲ್ಲಿ 5 ವಿಕೆಟ ಕಳೆದುಕೊಂಡು ನಿಶ್ಚಿಂತೆಯಿಂದ 139 ರನ ಗಳಿಸಿ ವಿಜಯದ ಪತಾಕೆ ಹಾರಿಸಿತು.ಸಿಯಾಲ್ಕೋಟ್ ತಂಡದ ಎಂಝಾಕೀ 3 ಓವರ್ ಗಳಲ್ಲಿ ಮೂರು ಅಮೂಲ್ಯ ವಿಕೆಟ್ ಪಡೆಯುವುದರ ಜೊತೆಗೆ ಕೇವಲ 10 ಚೆಂಡುಗಳಲ್ಲಿ 3 ಬೃಹತ್ ಸಿಕ್ಸರನೊಂದಿಗೆ ಮಿಂಚಿನವೇಗದಲ್ಲಿ 26 ರನ್ ಸಿಡಿಸಿ ಸವ್ಯಸಾಚಿತ್ವವನ್ನು ಪ್ರದರ್ಶಿಸಿ ಪಂದ್ಯದವ್ಯಕ್ತಿ ಪುರಸ್ಕಾರಕ್ಕೆ ಭಾಜನರಾದರು.

ಮೂರನೇಪಂದ್ಯವು ಫ್ರೆಂಡ್ಸ್ ಕ್ಲಬ್ ದುಬೈ ತಂಡ ಹಾಗೂ ಟೀಮ್ ಲಿವಿಂಗ್ ಸ್ಟೋನ್ ತಂಡದ ನಡುವೆ ನಡೆಯಿತು.
ಫ್ರೆಂಡ್ಸ್ ಕ್ಲಬ್ ದುಬೈ ಮೊದಲು ಬ್ಯಾಟ್ ಮಾಡಿ 204 ರನ್ನುಗಳ ಬೃಹತ್ ಮೊತ್ತವನ್ನು ಕಲೆಹಾಕಿತು.ಈ ಗುರಿಯನ್ನು ಬೆನ್ನಟ್ಟಿದ ಟೀಮ್ ಲಿವಿಂಗಸ್ಟೋನ್ ತಂಡವು ದಿಟ್ಟ ಪ್ರತಿಸ್ಪರ್ಧೆ ನೀಡಿ ವಿಜಯದ ಸನಿಹಕ್ಕೆ ಬಂದು ಕೊನೆಕ್ಷಣದ ಎಡವಟ್ಟಿನಿಂದ ಎಂಟುವಿಕೆಟ್ ಕಳೆದುಕೊಂಡು 186 ರನ್ನಿಗೆ ತನ್ನ ಹೋರಾಟವನ್ನು ಕೊನೆಗೊಳಿಸಿತು.ಫ್ರೆಂಡ್ಸ್ ಕ್ಲಬ್ ದುಬೈ ತಂಡದ ಯಾಸಿನ್ 25 ಚೆಂಡುಗಳಲ್ಲಿ 4ಭರ್ಜರಿ ಸಿಕ್ಸರ್ 5ಬೌಂಡರಿಯೊಂದಿಗೆ ಶರವೇಗದ 51 ರನ್ ಸಿಡಿಸಿ 2 ಪ್ರಮುಖ ವಿಕೆಟ್ ಪಡೆದು ಪಂದ್ಯಪುರುಷೋತ್ತಮ ಪ್ರಶಸ್ತಿ ಪಡೆದರು.

ದುಬೈನಲ್ಲಿ ಜರಗುತ್ತಿರುವ ರಾಹುಲ್ ದ್ರಾವಿಡ್ ಕ್ರಿಕೆಟ್ ಕಪ್ ಪಂದ್ಯಾಟದ ಚೊಚ್ಚಲ ಪಂದ್ಯದಲ್ಲಿ ಶ್ರೇಷ್ಠ ಗುಣಮಟ್ಟದ ಕ್ರಿಕೆಟ್ ಆಟವನ್ನು ಪ್ರದರ್ಶಿಸಿದ ಗಲ್ಫ್ ಗೆಳೆಯರು ತಂಡವು ಈ ಪಂದ್ಯಾಕೂಟದ ಆಯೋಜಕರಾದ ವಿಠಲ್ ರಿಶಾನ್ ನಾಯಕರಿಂದ ಪ್ರತಿಭಾನ್ವಿತ ಉದಯೋನ್ಮುಖ ತಂಡವೆಂಬ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.

ಉಡುಪಿ ಮೂಲದ ವಿಠಲ ರಿಶಾನ್ ನಾಯಕರು ದುಬೈನಲ್ಲಿ ಆಯೋಜಿಸುತ್ತಿರುವ ರಾಹುಲ್ ದ್ರಾವಿಡ್ ಕ್ರಿಕೆಟ್ ಕಪ್ ಪಂದ್ಯಾಟವು ಉಡುಪಿ ಮಂಗಳೂರು ಕುಂದಾಪುರ ಕರಾವಳಿಯ ಅನೇಕ ಯುವ ಪ್ರತಿಭೆಗಳಿಗೆ ಆಸರೆಯಾಗಿದೆ. ಹೀಗಾಗಿ ಅವಿಭಜಿತ ದಕ್ಷಿಣಕನ್ನಡ ಜಿಲ್ಲೆ ಹಾಗೂ ಗಲ್ಫ್ ರಾಷ್ಟ್ರದಲ್ಲಿ ನೆಲೆಸಿರುವ ಕರಾವಳಿ ಮೂಲದ ಸಹಸ್ರಾರು ಕ್ರೀಡಾಭಿಮಾನಿಗಳು ಸಾಮಾಜಿಕ ಜಾಲತಾಣ ಸೇರಿದಂತೆ ವಿವಿಧ ಮಾಧ್ಯಮಗಳ ಮೂಲಕ ಪ್ರಕಟವಾಗುತ್ತಿರುವ ಈ ಕ್ರಿಕೆಟ್ ಪಂದ್ಯಾಟದ ಫಲಿತಾಂಶ ಹಾಗೂ ವೀಕ್ಷಣೆಯನ್ನು ಭಾರೀ ಕುತೂಹಲದೊಂದಿಗೆ ವೀಕ್ಷಿಸುತ್ತಿದ್ದಾರೆ.
ಬರಹ:ಪಿ.ಲಾತವ್ಯ ಆಚಾರ್ಯ ಉಡುಪಿ.




