
ಅವಳು ಸಿಗದೇ ಇದ್ದಿದ್ದರೆ ಬಹುಶಃ ಅವನು ಆತ್ಮಹತ್ಯೆ ಮಾಡಿಕೊಂಡಿರುತ್ತಿದ್ದ..!
ನಾಲ್ಕು ಗೋಡೆಗಳ ಮಧ್ಯೆ ತನ್ನನ್ನು ತಾನೇ ಬಂಧಿಯಾಗಿಸಿಕೊಂಡಿದ್ದ ಆ ಕ್ರಿಕೆಟಿಗ.. ಅವನಿಗೆ ವಿಶ್ವಾಸದ್ರೋಹವಾಗಿತ್ತು.. ಶಾಲಾ ದಿನಗಳಿಂದಲೂ ಒಟ್ಟೊಟ್ಟಿಗೇ ಆಡಿ ಬೆಳೆದಿದ್ದ ಪ್ರಾಣಸ್ನೇಹಿತನೇ ಬೆನ್ನಿಗೆ ಚೂರಿ ಹಾಕಿದ್ದ, ನಂಬಿಕೆ ದ್ರೋಹ ಮಾಡಿ ಬಿಟ್ಟಿದ್ದ.. ಅದು ಅಂತಿಂಥಾ ದ್ರೋಹವಲ್ಲ.. ವಿಲಕ್ಷಣ, ವಿಚಿತ್ರ.. ನಂಬಿಕೆ ಎಂಬ ಪದಕ್ಕೆ ಅರ್ಥವೇ ಇಲ್ಲದಂತೆ ಮಾಡಿದ್ದ ದ್ರೋಹ..
ಮನಸ್ಸಿಗೆ ಅಳಿಸಲಾಗದ ಗಾಯವಾಗಿತ್ತು.. ಹೃದಯ ಛಿದ್ರ ಛಿದ್ರವಾಗಿತ್ತು. ತನಗೆ ತಾನೇ ಗೃಹ ಬಂಧನದ ಶಿಕ್ಷೆ ವಿಧಿಸಿಕೊಂಡವನಿಗೆ ಆತ್ಮಹತ್ಯೆಯ ಯೋಚನೆಯೂ ಬಂದಿತ್ತು. ಅಂಥಾ ಸ್ಥಿತಿಯಿಂದ ಅವನನ್ನು ಹೊರ ತಂದು ಮತ್ತೆ ಮನುಷ್ಯನನ್ನಾಗಿ ಮಾಡಿದ್ದು ಆ ಹೆಣ್ಣು ಮಗಳು.. ದೇಶ ಕಂಡ ಅಗ್ರಮಾನ್ಯ ಸ್ಕ್ವಾಷ್ ತಾರೆ ದೀಪಿಕಾ ಪಳ್ಳಿಕಲ್.. ಅಂದ ಹಾಗೆ ಒಬ್ಬ ಹೆಣ್ಣಿನಿಂದ ದ್ರೋಹಕ್ಕೊಳಗಾಗಿ ಮತ್ತೊಬ್ಬ ಹೆಣ್ಣಿನ ಕಾರಣದಿಂದಲೇ ಹೊಸ ಜೀವನ ಕಟ್ಟಿಕೊಂಡ ಆ ಕ್ರಿಕೆಟಿಗನ ಹೆಸರು ಕಾರ್ತಿಕ್.. ದಿನೇಶ್ ಕಾರ್ತಿಕ್.


ದಿನೇಶ್ ಕಾರ್ತಿಕ್”ಗೆ ಆಗಿನ್ನೂ 22 ವರ್ಷ. ಭಾರತ ತಂಡದಲ್ಲಿ ಧೋನಿ ಪ್ರವರ್ಧಮಾನಕ್ಕೆ ಬಂದಿದ್ದ ಕಾರಣ, ಡಿಕೆ ಸ್ಥಾನಕ್ಕೆ ಕುತ್ತು ಬಂದಿತ್ತು. ವೈಯಕ್ತಿಕ ಜೀವನದಲ್ಲಾದರೂ ಹುಡುಗ settle ಆಗಲಿ ಎಂದುಕೊಂಡ ತಂದೆ, ಮಗನಿಗೆ ಮದುವೆ ಮಾಡಲು ನಿರ್ಧರಿಸುತ್ತಾರೆ. ಹುಡುಗಿ ಯಾರು ಗೊತ್ತೇ..? ದಿನೇಶ್ ಕಾರ್ತಿಕ್’ನ ಬಾಲ್ಯದ ಗೆಳತಿ ನಿಕಿತಾ ವಂಜಾರ. ಎರಡೂ ಕುಟುಂಬಗಳು ಅಕ್ಕ ಪಕ್ಕ ವಾಸಿಸುತ್ತಿದ್ದ ಕಾರಣ, ಜೊತೆ ಜೊತೆಗೇ ಬೆಳೆದವರು ದಿನೇಶ್ ಮತ್ತು ನಿಕಿತಾ.
ಹೆತ್ತವರ ಒತ್ತಾಸೆಯಂತೆ ಬಾಲ್ಯದ ಗೆಳತಿಯನ್ನೇ ಮದುವೆಯಾಗಿ ಬಿಟ್ಟ ದಿನೇಶ್ ಕಾರ್ತಿಕ್. ಅದೇ ಪತ್ನಿ ಮದುವೆಯಾದ ಒಂದೇ ವರ್ಷಕ್ಕೆ ಗಂಡನ ಆಪ್ತಮಿತ್ರನನ್ನು ಪ್ರೀತಿಸಿ ಬಿಟ್ಟಳು. ಅದೆಂಥಾ ‘ಪ್ರೀತಿ’ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ ಬಿಡಿ. ಆ ಆಪ್ತಮಿತ್ರನ ಹೆಸರು ಮುರಳಿ ವಿಜಯ್.

ದಿನೇಶ್ ಕಾರ್ತಿಕ್ ಮತ್ತು ಮುರಳಿ ವಿಜಯ್ ಬಾಲ್ಯ ಸ್ನೇಹಿತರು. ವಿಪರ್ಯಾಸ ಏನೆಂದರೆ ಆ ಸ್ನೇಹಿತನೇ ಕಾರ್ತಿಕ್ ಬದುಕಿಗೆ ಖಳನಾಯಕನಾಗಿ ಬಿಟ್ಟ. ದಿನೇಶ್ ಕಾರ್ತಿಕ್ ಕುಗ್ಗಿ ಹೋದ. ಸಣ್ಣ ವಯಸ್ಸಲ್ಲೇ ದೊಡ್ಡ ಆಘಾತ. ಮಾನಸಿಕ ಖಿನ್ನತೆಗೊಳಗಾದ. ಮನೆ ಸೇರಿಕೊಂಡವನು ನಾಲ್ಕು ಗೋಡೆಗಳ ಮಧ್ಯೆ ತನ್ನನ್ನು ಬಂಧಿಯಾಗಿಸಿಕೊಂಡು ಬಿಟ್ಟ.. ಆ ದಿನಗಳಲ್ಲಿ ಅವನಿಗೆ ಆತ್ಮಹತ್ಯೆಯ ಯೋಚನೆಯೂ ಬಂದಿತ್ತಂತೆ..
ಮನೆಯಿಂದ ಹೊರ ಬರುವುದಕ್ಕೂ ಹೆದರುತ್ತಿದ್ದ ದಿನಗಳು. ದಿನೇಶ್ ಕಾರ್ತಿಕ್’ನ ಪರಿಸ್ಥಿತಿಯನ್ನು ಅರಿತ ರಾಜಮಣಿ ಪ್ರಭು ಎಂಬ ಫಿಟ್ನೆಸ್ ಕೋಚ್ ಅವನನ್ನು ಮನೆಯಿಂದ ಹೊರ ತರುವಲ್ಲಿ ಯಶಸ್ವಿಯಾಗುತ್ತಾರೆ. ನಿಧಾನವಾಗಿ ಸುಧಾರಿಸಿದ ಡಿಕೆ, ದೈಹಿಕ ಕಸರತ್ತಿಗಾಗಿ ಒಂದು ಜಿಮ್’ಗೆ ಸೇರಿಕೊಳ್ಳುತ್ತಾನೆ. ಅಲ್ಲಿ ಪರಿಚಯವಾದವಳು ಖ್ಯಾತ ಸ್ಕ್ವಾಷ್ ಆಟಗಾರ್ತಿ ದೀಪಿಕಾ ಪಳ್ಳಿಕಲ್.

ಇಬ್ಬರ ಮಧ್ಯೆ ಗೆಳೆತನ ಬೆಳೆಯಿತು. ದೀಪಿಕಾಳ ಸ್ನೇಹ ದಿನೇಶ್ ಕಾರ್ತಿಕ್’ನನ್ನು ಸಂಪೂರ್ಣವಾಗಿ ಬದಲಿಸಿ ಬಿಟ್ಟಿತು. ದಿನೇಶ್ ಕಾರ್ತಿಕ್ ಪಾಲಿಗೆ ಆಕೆ ಅದೃಷ್ಟ ದೇವತೆಯಾಗಿ ಬಂದಿದ್ದಳು. ಆಕೆಯ ಸಹವಾಸ ಅವನನ್ನು ಹೊಸ ಮನುಷ್ಯನನ್ನಾಗಿ ಮಾಡಿತು. ಕೊನೆಗೆ ಅವಳನ್ನೇ ಮದುವೆಯಾಗಿ ಬಿಟ್ಟ ಡಿಕೆ. ಅಲ್ಲಿಂದ ದಿನೇಶ್ ಕಾರ್ತಿಕ್’ನದ್ದು ಹೊಸ ಬದುಕು.

ಅಷ್ಟಕ್ಕೂ ಈಗ ಏಕೆ ದಿನೇಶ್ ಕಾರ್ತಿಕ್ ನೆನಪು..? ಕಾರಣ, ಕರ್ನಾಟಕ ರಾಜ್ಯೋತ್ಸವ.
ಹೌದು.. ತಮಿಳುನಾಡಿನ ದಿನೇಶ್ ಕಾರ್ತಿಕ್ ಕರ್ನಾಟಕ ರಾಜ್ಯೋತ್ಸವದ ದಿನ ‘‘ನಾನು ಕರ್ನಾಟಕದ ದತ್ತುಪುತ್ರ.. ಕರ್ನಾಟಕ ನನಗಿಷ್ಟ, ಕನ್ನಡದ ಜನ ನನಗಿಷ್ಟ.. ಈ ನೆಲ ನನಗೆ ಎಲ್ಲವನ್ನೂ ಕೊಟ್ಟಿದೆ. Today, I just want to say Thank you. Happy ಕರ್ನಾಟಕ ರಾಜ್ಯೋತ್ಸವ..’’ ಎಂದಿದ್ದಾನೆ.
ಕರ್ನಾಟಕದ ದತ್ತುಪುತ್ರನಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು..




