
ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ.. ಅಷ್ಟಕ್ಕೂ ವಿರಾಟ್ ಕೊಹ್ಲಿ ಮಾಡಿದ ತಪ್ಪೇನು..?
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ನಡೆದ ಕಾಲ್ತುಳಿತ ದುರದೃಷ್ಟಕರ. ಅದಕ್ಕೆ ಸರ್ಕಾರದಿಂದ ಹಿಡಿದು ಅತಿರೇಕದ ಅಭಿಮಾನಿಗಳವರೆಗೆ.. ಎಲ್ಲರೂ ಹೊಣೆಗಾರರು.
ಆದರೆ ಆ ದುರಂತಕ್ಕೆ ಕೆಲ ವಿಕೃತರು ವಿರಾಟ್ ಕೊಹ್ಲಿಯನ್ನು ಹೊಣೆ ಮಾಡುತ್ತಿರುವುದು ನಿಜಕ್ಕೂ ದುರದೃಷ್ಟಕರ.

ಕಾಮಾಲೆ ಕಣ್ಣುಗಳಿಗೆ ಎಲ್ಲವೂ ಹಳದಿಯಾಗಿಯೇ ಕಾಣುತ್ತದೆ. ಅದರಲ್ಲೂ ವಿರಾಟ್ ಕೊಹ್ಲಿಯನ್ನು ನೋಡಿ ಉರಿದು ಬೀಳುವವರು.. ಅವರಿಗೆ ಉರಿಯದೇ ಇರಲು ಹೇಗೆ ಸಾಧ್ಯ..?
‘ಕ್ರಿಕೆಟ್ ನಮ್ಮ ಜಹಗೀರು’ ಎಂದವರ ಮುಂದೆಯೇ ಕ್ರಿಕೆಟ್ ಸಾಮ್ರಾಟನಾಗಿ ಮೆರೆದವನು ವಿರಾಟ್..!

ಅಭೇದ್ಯವಾಗಿದ್ದ ಕ್ರಿಕೆಟ್ ಕೋಟೆಗಳಿಗೆ ನುಗ್ಗಿ ಹೊಡೆದವನು ವಿರಾಟ್..!
ಅತೀ ಕಡಿಮೆ ಅವಧಿಯಲ್ಲಿ, ಅತೀ ಕಡಿಮೆ ಪಂದ್ಯಗಳಲ್ಲಿ ವಿಶ್ವದಾಖಲೆಗಳನ್ನು ಧೂಳೀಪಟ ಮಾಡಿದವನು ವಿರಾಟ್..!

ದಾಖಲೆಗಳಿಗಾಗಿ ಆಡಿದವರ ಮುಂದೆ ಸ್ವಾರ್ಥವಿಲ್ಲದ ಆಟದ ಮಹತ್ವವನ್ನು ತೋರಿಸಿಕೊಟ್ಟವನು ವಿರಾಟ್..!
ವೈಯಕ್ತಿಕ ಸ್ವಾರ್ಥಕ್ಕಿಂತ ತಂಡದ ಹಿತವೇ ಮುಖ್ಯ ಎಂಬುದನ್ನು ಸಾರಿ ಸಾರಿ ಹೇಳಿದವನು ವಿರಾಟ್..!
Shot of the Century ಬಾರಿಸಿದವನು.. ಆಟದಿಂದಲೇ ಕ್ರಿಕೆಟ್’ಗೆ ಘನತೆ ತಂದು ಕೊಟ್ಟವನು..!

ಇದೇ ಕಾರಣಕ್ಕೆ ಅವನು ಆಡಿದ ಒಂದೊಂದು ಇನ್ನಿಂಗ್ಸ್’ಗಳೂ ಮಾಸ್ಟರ್ ಪೀಸ್..!
ಇದನ್ನೆಲ್ಲಾ ಒಬ್ಬ ವ್ಯಕ್ತಿ ನಿರಂತರವಾಗಿ ಮಾಡುತ್ತಾ ಬಂದಿದ್ದಾನೆ ಎಂದರೆ ‘ಅವರು’ ಹೇಗೆ ಸಹಿಸಿಯಾರು..? ಉರಿ ಹತ್ತಿಕೊಂಡಿದೆ.. ಉರಿಯಲಿ ಬಿಡಿ..

ಈ ವಿರಾಟ್ ಕೊಹ್ಲಿ ಆಕಾಶ.. ಆಕಾಶಕ್ಕೆ ಉಗುಳಿದರೆ ಅದು ಎಲ್ಲಿ ಬೀಳುತ್ತದೆ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ.
Number of runsಗಿಂತ number of impactful runs ಮುಖ್ಯ. ಎಷ್ಟು ರನ್ ರಾಶಿ ಹಾಕಿದ್ದೀರಿ ಎನ್ನುವುದಕ್ಕಿಂತ ಆ ರಾಶಿ ಹಾಕಿದ ರನ್ನುಗಳಲ್ಲಿ ತಂಡದ ಗೆಲುವಿಗೆ ಕೊಡುಗೆಯೆಷ್ಟು ಎಂಬುದು ಮುಖ್ಯವಾಗುತ್ತದೆ. ಶ್ರೇಷ್ಠರು ಯಾರು ಎಂಬುದನ್ನು ಅಳೆಯಲು ಇದೇ ಮಾನದಂಡವಾದರೆ ವಿರಾಟ್ ಕೊಹ್ಲಿಯೇ ಅಗ್ರಗಣ್ಯ. ವೈಟ್ ಬಾಲ್ ಕ್ರಿಕೆಟ್’ನಲ್ಲಿ ರೋಹಿತ್ ಶರ್ಮಾನೂ ಇದೇ ಸಾಲಿನಲ್ಲಿ ನಿಲ್ಲುತ್ತಾನೆ. ತಂಡದ ಗೆಲುವಿಗೆ ಕಾರಣವಾದ ಇನ್ನಿಂಗ್ಸ್’ಗಳ ವಿಚಾರಕ್ಕೆ ಬಂದರೆ ರೋಹಿತ್ ಶರ್ಮಾ ವೈಟ್ ಬಾಲ್ ಕ್ರಿಕೆಟ್’ನಲ್ಲಿ ಈ ಜಗತ್ತು ಕಂಡ ಶ್ರೇಷ್ಠ ಓಪನರ್.
ಅಂಡರ್-19 ವಿಶ್ವಕಪ್, ಏಕದಿನ ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ, ಟಿ20 ವಿಶ್ವಕಪ್, ಐಪಿಎಲ್ ಕಪ್..
ಕ್ರಿಕೆಟ್ ಇತಿಹಾಸದಲ್ಲಿ ಇಷ್ಟೂ ಟ್ರೋಫಿಗಳನ್ನು ಗೆದ್ದ ಭಾರತೀಯರು ಇಬ್ಬರೇ ಇಬ್ಬರು. ಒಬ್ಬ ಯುವರಾಜ, ಮತ್ತೊಬ್ಬ ವಿರಾಟ. ಇದು ಕ್ರಿಕೆಟ್ ಮೇಲಿನ ಬದ್ಧತೆಗೆ, ಸ್ವಾರ್ಥವಿಲ್ಲದ ಆಟಕ್ಕೆ ಸಿಕ್ಕ ಪ್ರತಿಫಲ.
ನನಗೆ ವಿರಾಟ್ ಕೊಹ್ಲಿ ಮೇಲೆ ವಿಶೇಷ ಅಭಿಮಾನ ಏಕೆಂದರೆ ಅವನು ಯಾವ ಹಿನ್ನೆಲೆಯೂ ಇಲ್ಲದೆ, ಯಾವ ಲಾಬಿಯೂ ಇಲ್ಲದೆ, ಯಾರ ಕೃಪಾಕಟಾಕ್ಷದ ಶ್ರೀರಕ್ಷೆಯೂ ಇಲ್ಲದೆ ಕೇವಲ ಪ್ರತಿಭೆಯಿಂದಲೇ ಕ್ರಿಕೆಟ್ ಸಾಮ್ರಾಟನಾದವನು.

ಆನೆ ನಡೆಯುವಾಗ ಶ್ವಾನಗಳು ಬೊಗಳುತ್ತವೆ. ಅದು ಆನೆಯ ಮೇಲೆ ಯಾವ ಪರಿಣಾಮವನ್ನೂ ಬೀರದು. ಅದು ರಾಜಗಾಂಭೀರ್ಯದಿಂದ ನಡೆಯುತ್ತಲೇ ಇರುತ್ತದೆ.
-ಸುದರ್ಶನ್





