
ಸಾವನ್ನು ಗೆದ್ದು ಬಂದ ಶಿವ-GAME INSIGHT ಕಾರ್ಯಕ್ರಮದಲ್ಲಿ ಶಿವ ಭಾವುಕ…!!!
35 ವರ್ಷದ ಕಾಮೆಂಟ್ರಿ ಸಾಧನೆಗೆ ಕ್ರಿಕೆಟ್ ಟೂರ್ನಿ
ಸ್ಪೋರ್ಟ್ಸ್ ಕನ್ನಡ ಗೇಮ್ ಇನ್ಸೈಟ್ ಕಾರ್ಯಕ್ರಮದಲ್ಲಿ ಅಚ್ಚರಿಯ ಸಂಗತಿಯೊಂದು ಬಹಿರಂಗವಾಗಿದೆ. ಜನಪ್ರಿಯ ಕನ್ನಡ ಕ್ರಿಕೆಟ್ ಕಾಮೆಂಟೇಟರ್ ಶಿವನಾರಾಯಣ ಐತಾಳ್, ತಮ್ಮ ಬದುಕಿನ ಗಂಭೀರ ಹಂತವನ್ನು ಎದುರಿಸಿ, ಸಾವನ್ನೇ ಗೆದ್ದು ಬಂದ ಕಥೆಯನ್ನು ಹಂಚಿಕೊಂಡಿದ್ದಾರೆ.

ಕೆಲ ವರ್ಷಗಳ ಹಿಂದೆ ತೀವ್ರ ಆರೋಗ್ಯ ಸಮಸ್ಯೆಯಿಂದ ಹಾಸಿಗೆ ಹಿಡಿದಿದ್ದ ಶಿವನಾರಾಯಣ ಐತಾಳ್, ವೈದ್ಯರು ಜೀವದಾಸೆ ಕಡಿಮೆ ಎಂದು ಹೇಳಿದ ಸಂದರ್ಭದಲ್ಲೂ ಹೋರಾಟ ಬಿಡದೆ ಬದುಕನ್ನು ಮತ್ತೆ ಗೆದ್ದರು. 2024 ಜುಲೈನಲ್ಲಿ ಗಂಭೀರ ಚಿಕನ್ ಫಾಕ್ಸ್ ಇನ್ಫೆಕ್ಷನ್ ಮತ್ತು ಫ್ರಾಂಕ್ ರಿಯಾಸಿಸ್ ಸಮಸ್ಯೆಯಿಂದ ತೀವ್ರವಾಗಿ ಅಸ್ವಸ್ಥರಾದ ಅವರು, ಪ್ಲೇಟ್ಲೆಟ್ ಪ್ರಮಾಣವು ತೀವ್ರವಾಗಿ ಇಳಿದಿತ್ತು ಮತ್ತು ಶುಗರ್ ಮಟ್ಟವು 400ಕ್ಕಿಂತ ಹೆಚ್ಚಾಗಿತ್ತು. ಈ ಕಾರಣದಿಂದ ಅವರು 12 ದಿನಗಳ ಕಾಲ ಆಸ್ಪತ್ರೆಗೆ ದಾಖಲಾಗಿ, ಅದರಲ್ಲಿ 4 ದಿನ ಕೋಮಾ ಸ್ಥಿತಿಯಲ್ಲಿ ಇದ್ದರು. ವೈದ್ಯರು ಜೀವದಾಸೆ ಕಡಿಮೆ ಎಂದಿದ್ದರೂ, ಶಿವನಾರಾಯಣ ಅಸಾಧಾರಣ ಹೋರಾಟ ನಡೆಸಿ ಬದುಕಿಗೆ ಮರಳಿದರು.ಆ ಅನುಭವವೇ ಅವರಿಗೆ ಮತ್ತಷ್ಟು ಶಕ್ತಿ ನೀಡಿದ್ದು, ಕ್ರಿಕೆಟ್ ಕಾಮೆಂಟ್ರಿಯ ಮೂಲಕ ಅಭಿಮಾನಿಗಳಿಗೆ ಹರ್ಷ, ಉತ್ಸಾಹ ಮತ್ತು ಪ್ರೇರಣೆ ನೀಡುವ ಕೆಲಸವನ್ನು ಮುಂದುವರಿಸಲು ಕಾರಣವಾಯಿತು.

ಈ ವರ್ಷ, ತಮ್ಮ 35 ವರ್ಷದ ಯಶಸ್ವಿ ಕಾಮೆಂಟ್ರಿ ಪಯಣವನ್ನು ಸಂಭ್ರಮಿಸಲು ಅವರು ವಿಶೇಷ ಕ್ರಿಕೆಟ್ ಟೂರ್ನಿಯನ್ನು ಆಯೋಜಿಸುತ್ತಿದ್ದಾರೆ. ಶೀಘ್ರದಲ್ಲೇ ನಡೆಯಲಿರುವ ಈ ಟೂರ್ನಿಯಲ್ಲಿ ಕರಾವಳಿ ಹಾಗೂ ಕರ್ನಾಟಕದ ಹಲವು ಪ್ರಮುಖ ತಂಡಗಳು ಭಾಗವಹಿಸಲಿದ್ದು, ಇದು ಕೇವಲ ಕ್ರಿಕೆಟ್ ಹಬ್ಬವಷ್ಟೇ ಅಲ್ಲ, ಶಿವನಾರಾಯಣ ಅವರ ಬದುಕಿನ ಹೋರಾಟಕ್ಕೆ ಸಮರ್ಪಣೆ ಆಗಿದೆ.
“ಈ ಟೂರ್ನಿ ನನಗೆ ಕೇವಲ ಆಟವಲ್ಲ, ಬದುಕಿನ ಜಯವನ್ನು ಆಚರಿಸುವ ಕ್ಷಣ. ನನ್ನ ಅಭಿಮಾನಿಗಳು, ಸ್ನೇಹಿತರು ಹಾಗೂ ಕ್ರಿಕೆಟ್ ಸಮುದಾಯ ನನಗೆ ಕೊಟ್ಟ ಬೆಂಬಲಕ್ಕೆ ಇದು ನನ್ನ ಉತ್ತರ,” ಎಂದು ಭಾವುಕರಾದ ಶಿವನಾರಾಯಣ ಹೇಳಿದರು




