
ಕೆನರಾ ಬ್ಯಾಂಕ್ ಆಫೀಸರ್ಸ್ ಅಸೋಸಿಯೇಷನ್(ರಿ) ಮಂಗಳೂರು ವತಿಯಿಂದ ಯಶಸ್ವಿಯಾಗಿ ಆಯೋಜಿಸಿದ ಕ್ರಿಕೆಟ್ ಪಂದ್ಯಾವಳಿ
ಮಡಿಕೇರಿ ಮಾರ್ವೆಲ್ಸ್ ತಂಡಕ್ಕೆ ಚಾಂಪಿಯನ್ ಪಟ್ಟ

ಮಂಗಳೂರು: ಕೆನರಾ ಬ್ಯಾಂಕ್ ಅಧಿಕಾರಿಗಳ ಸಂಘ (ನೋಂದಾಯಿತ), ಮಂಗಳೂರು ಇವರ ಆಶ್ರಯದಲ್ಲಿ ಬ್ಯಾಂಕ್ ಉದ್ಯೋಗಿಗಳಿಗಾಗಿ ಆಯೋಜಿಸಲಾಗಿದ್ದ ಎರಡು ದಿನಗಳ ಕ್ರಿಕೆಟ್ ಪಂದ್ಯಾವಳಿ ಫೆಬ್ರವರಿ 10 ಮತ್ತು 11 ರಂದು ಮಂಗಳೂರಿನ ನೆಹರು ಮೈದಾನದಲ್ಲಿ ಯಶಸ್ವಿಯಾಗಿ ನಡೆಯಿತು.
ಈ ಕ್ರೀಡಾಕೂಟದಲ್ಲಿ ಮಂಗಳೂರು, ಉಡುಪಿ, ಹಾಸನ, ಚಿತ್ರದುರ್ಗ, ಮಡಿಕೇರಿ, ದಾವಣಗೆರೆ, ಮಣಿಪಾಲ್, ಪುತ್ತೂರು ಸೇರಿದಂತೆ ವಿವಿಧ ಸ್ಥಳಗಳಿಂದ ಒಟ್ಟು 16 ತಂಡಗಳು ಭಾಗವಹಿಸಿ ಕ್ರೀಡಾಭಿಮಾನಿಗಳ ಗಮನ ಸೆಳೆದವು.


ಪಂದ್ಯಾವಳಿಯನ್ನು ರಮೇಶ್ ನಾಯ್ಕ್ ಅವರ ನಾಯಕತ್ವದಲ್ಲಿ ಅತ್ಯಂತ ಶಿಸ್ತಿನಿಂದ ಹಾಗೂ ವ್ಯವಸ್ಥಿತವಾಗಿ ಆಯೋಜಿಸಲಾಗಿದ್ದು, ಸಮಾರೋಪ ಸಮಾರಂಭದಲ್ಲಿ ಉಪಸ್ಥಿತರಿದ್ದ ಗಣ್ಯರು ಅವರ ಸಂಘಟನಾ ಸಾಮರ್ಥ್ಯ ಮತ್ತು ನಾಯಕತ್ವ ಗುಣಗಳನ್ನು ಮನದಟ್ಟುಮಾಡಿಕೊಂಡು ಶ್ಲಾಘಿಸಿದರು. ಈ ಸಿಬಿಒಎ ಕ್ರೀಡಾ ಕೂಟವನ್ನು ಯಶಸ್ವಿಗೊಳಿಸಿದಲ್ಲಿ ಅವರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಗಣ್ಯರು ಅಭಿಪ್ರಾಯಪಟ್ಟರು.
ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಮಡಿಕೇರಿ ಮಾರ್ವೆಲ್ಸ್ ತಂಡ ರೋಚಕ ಹೋರಾಟದಲ್ಲಿ ಮಂಗಳೂರು ಮಾನ್ಸ್ಟರ್ಸ್ ತಂಡವನ್ನು ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿ ಟ್ರೋಫಿ ಮುಡಿಗೇರಿಸಿಕೊಂಡಿತು. ಹಾಸನ್ ರೈಸಿಂಗ್ ಸ್ಟಾರ್ಸ್ ಹಾಗೂ ಪುತ್ತೂರು ಡ್ರ್ಯಾಗನ್ಸ್ ತಂಡಗಳು ಸೆಮಿಫೈನಲ್ ಹಂತದಲ್ಲಿ ಸೋಲನುಭವಿಸಿದವು.

ವೈಯಕ್ತಿಕ ಪ್ರಶಸ್ತಿಗಳಲ್ಲಿ, ಫೈನಲ್ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಮಡಿಕೇರಿ ಮಾರ್ವೆಲ್ಸ್ ತಂಡದ ಸುರೇಂದ್ರ ‘ಮ್ಯಾನ್ ಆಫ್ ದಿ ಮ್ಯಾಚ್’ ಪ್ರಶಸ್ತಿಗೆ ಭಾಜನರಾದರು. ಅದೇ ತಂಡದ ಅರುಣ್ ಅವರಿಗೆ ‘ಅತ್ಯುತ್ತಮ ಬ್ಯಾಟ್ಸ್ಮನ್’ ಪ್ರಶಸ್ತಿ ಲಭಿಸಿತು. ಮಂಗಳೂರು ಮಾನ್ಸ್ಟರ್ಸ್ ತಂಡದ ರೋಹಿತ್ ‘ಅತ್ಯುತ್ತಮ ಬೌಲರ್’ ಪ್ರಶಸ್ತಿ ಪಡೆದುಕೊಂಡರು. ಸಂಪೂರ್ಣ ಪಂದ್ಯಾವಳಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ ಮಡಿಕೇರಿ ಮಾರ್ವೆಲ್ಸ್ ತಂಡದ ಗೋಪಾಲ್ ‘ಮ್ಯಾನ್ ಆಫ್ ದಿ ಸಿರೀಸ್’ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಚಿತ್ರದುರ್ಗ ಕೋಟೆ ಕಿಂಗ್ಸ್ ತಂಡದ ವಿಕೆಟ್ ಕೀಪರ್ ರಣವೀರ್ ಕುಮಾರ್ ಅವರಿಗೆ ‘ಅತ್ಯುತ್ತಮ ವಿಕೆಟ್ ಕೀಪರ್’ ಪ್ರಶಸ್ತಿ ನೀಡಲಾಯಿತು.

ಕ್ರಿಕೆಟ್ ಪಂದ್ಯಾವಳಿಗೆ ಪೂರಕವಾಗಿ ಮಕ್ಕಳು, ಪುರುಷರು ಹಾಗೂ ಮಹಿಳೆಯರಿಗಾಗಿ ವಿಭಿನ್ನ ಆಟೋಟ ಮತ್ತು ಕ್ರೀಡಾ ಸ್ಪರ್ಧೆಗಳನ್ನು ಸಹ ಆಯೋಜಿಸಲಾಗಿದ್ದು, ಅವುಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ಪ್ರದಾನಿಸಲಾಯಿತು.
ಪಂದ್ಯಾವಳಿ ಬಹುಮಾನ ವಿತರಣಾ ಸಮಾರಂಭ ಹಾಗೂ ವಂದನಾರ್ಪಣೆಯೊಂದಿಗೆ ಸಮಾರೋಪಗೊಂಡಿತು. ಈ ಸಂದರ್ಭದಲ್ಲಿ ರಮೇಶ್ ನಾಯ್ಕ್ ಅವರು ಪಂದ್ಯಾವಳಿ ಯಶಸ್ಸಿಗೆ ನೇರವಾಗಿ ಹಾಗೂ ಪರೋಕ್ಷವಾಗಿ ಶ್ರಮಿಸಿದ ಎಲ್ಲಾ ಸಹಯೋಗಿಗಳಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸಿದರು.

ಈ ವರ್ಷದ ಸಿಬಿಒಎ ಕ್ರೀಡಾಕೂಟವು ಅತ್ಯಂತ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಕ್ರೀಡಾಭಿಮಾನಿಗಳಿಂದ ವ್ಯಾಪಕ ಪ್ರಶಂಸೆಗೆ ಪಾತ್ರವಾಯಿತು.
ಈ ಎರಡು ದಿನಗಳ ಪಂದ್ಯಾವಳಿಗೆ ಸುರೇಶ್ ಭಟ್ (ಮುಲ್ಕಿ), ಯಶವಂತ ಹೆಗ್ಡೆ (ಬೆಂಗಳೂರು), ತ್ರಿವಿಕ್ರಮ್ ಶೆಣೈ (ಮಂಗಳೂರು) ಹಾಗೂ ಜೈಪುರದ ಭಗೀರಥ್ ಅವರು ಕಾಮೆಂಟೇಟರ್ ಗಳಾಗಿ ಕಾರ್ಯನಿರ್ವಹಿಸಿದರು.




