
ಎಸ್ವಿಎಸ್ ಮೈದಾನದಲ್ಲಿ ಚಾರಿಟಿ ಕ್ರಿಕೆಟ್: ವಿಜೇತರಿಂದ ದೇಣಿಗೆಯ ಮಹತ್ವದ ಹೆಜ್ಜೆ
ಬಂಟ್ವಾಳ: ಅರ್ಜುನ್ ಭಂಡಾರ್ಕರ್ ಅವರ ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ (ರಿ) ವತಿಯಿಂದ ಆಶಕ್ತ ಕುಟುಂಬಗಳಿಗೆ ಸಹಾಯಾರ್ಥವಾಗಿ ಬಂಟ್ವಾಳದ ಎಸ್ವಿಎಸ್ ಮೈದಾನದಲ್ಲಿ ಎಸ್ಎಲ್ಸಿಟಿ ಟ್ರೋಫಿ 2026 ಚಾರಿಟಿ ಕ್ರಿಕೆಟ್ ಪಂದ್ಯಾವಳಿ ಭರ್ಜರಿಯಾಗಿ ನಡೆಯಿತು.

ಸಮಾಜಮುಖಿ ಉದ್ದೇಶವನ್ನು ಹೊಂದಿಕೊಂಡು ಹಮ್ಮಿಕೊಳ್ಳಲಾದ ಈ ಕ್ರೀಡಾ ಕಾರ್ಯಕ್ರಮ ಕ್ರೀಡೆ ಮತ್ತು ಮಾನವೀಯತೆಯ ಸುಂದರ ಸಂಯೋಜನೆಯಾಗಿ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಈ ಟೂರ್ನಿಯಲ್ಲಿ ಹಲವು ತಂಡಗಳು ಭಾಗವಹಿಸಿ ರೋಚಕ ಪೈಪೋಟಿ ನೀಡಿದವು.


ಅಂತಿಮ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬಂಟ್ವಾಳ ತಂಡವು ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡರೆ, ವೊಳಲಂಕೆ ಫೈಟರ್ಸ್ ಮುಲ್ಕಿ ತಂಡವು ರನ್ನರ್ಸ್-ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿತು.

ವಿಜೇತ ತಂಡವಾದ ರಾಯಲ್ ಚಾಲೆಂಜರ್ಸ್ ಬಂಟ್ವಾಳವು ₹15,000 ನಗದು ಬಹುಮಾನಕ್ಕೆ ಜೊತೆಗೆ ಇನ್ನೂ ₹15,000 ಸೇರಿಸಿ ಒಟ್ಟು ₹30,000ನ್ನು ಆಶ್ರಮಗಳು/ವಿಶೇಷ ಶಾಲೆಗಳ ನೆರವಿಗಾಗಿ ದಾನ ಮಾಡಿದ್ದು ಶ್ಲಾಘನೀಯವಾಗಿದೆ. ತಂಡದ ಮಾಲೀಕರಾದ ಅವಿನಾಶ್ ಕಾಮತ್ ಜಿ ಹಾಗೂ ಸದಸ್ಯರು ಇಂತಹ ಉದಾತ್ತ ಕಾರ್ಯದ ಮೂಲಕ ಇತರ ತಂಡಗಳಿಗೆ ಮಾದರಿಯಾಗಿದ್ದಾರೆ.

ರನ್ನರ್ಸ್-ಅಪ್ ತಂಡವಾದ ವೊಳಲಂಕೆ ಫೈಟರ್ಸ್ ಮುಲ್ಕಿ ತಂಡವು ಸಹ ₹10,000ನ್ನು ಆಶ್ರಮಗಳು/ವಿಶೇಷ ಶಾಲೆಗಳ ನೆರವಿಗಾಗಿ ದೇಣಿಗೆಯಾಗಿ ನೀಡಿದ್ದು, ಸಮಾಜಮುಖಿ ಕಾರ್ಯದಲ್ಲಿ ತಮ್ಮ ಪಾಲನ್ನು ನೀಡಿದ್ದಾರೆ. ಇವರ ಈ ನಡೆ ಭವಿಷ್ಯದಲ್ಲಿ ಇನ್ನಷ್ಟು ತಂಡಗಳಿಗೆ ಪ್ರೇರಣೆಯಾಗಲಿದೆ.

ಕಾರ್ಯಕ್ರಮದ ಆಯೋಜಕರಾದ ಅರ್ಜುನ್ ಭಂಡಾರ್ಕರ್ ಅವರು, ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಹೃದಯಪೂರ್ವಕವಾಗಿ ಬೆಂಬಲ ನೀಡಿದ ಎಲ್ಲಾ ದಾನಿಗಳು ಹಾಗೂ ಸಹಯೋಗಿಗಳಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. “ನಿಮ್ಮ ನಿರಂತರ ಬೆಂಬಲವೇ ನಮ್ಮ ಶಕ್ತಿ. ನಿಮ್ಮ ಸಹಕಾರದಿಂದ ಅನೇಕ ಕುಟುಂಬಗಳ ಬದುಕಿನಲ್ಲಿ ಬದಲಾವಣೆ ತರಲು ಸಾಧ್ಯವಾಗಿದೆ,” ಎಂದು ಅವರು ಅಭಿಪ್ರಾಯಪಟ್ಟರು.

ಈ ರೀತಿಯ ಚಾರಿಟಿ ಕ್ರೀಡಾ ಕಾರ್ಯಕ್ರಮಗಳು ಸಮಾಜದಲ್ಲಿ ಸಹಾಯ ಮನೋಭಾವವನ್ನು ಹೆಚ್ಚಿಸುವುದರ ಜೊತೆಗೆ, ಅಗತ್ಯವಿರುವವರಿಗೆ ನೆರವಾಗುವ ಮಹತ್ವದ ವೇದಿಕೆಯಾಗಿವೆ.




