
ಹೆಮ್ಮಾಡಿ ಟ್ರೋಫಿ ದ್ವಿತೀಯ ಪ್ರಶಸ್ತಿ ನಗದನ್ನು ಗಾಯಾಳು ಕ್ರಿಕೆಟಿಗನ ಚಿಕಿತ್ಸೆಗೆ ನೀಡಿದ ವಿ.ಎಮ್.ಕಟ್ಟೆ ಫ್ರೆಂಡ್ಸ್ ಕಾಳಾವರ
ಉಡುಪಿ: ಕ್ರೀಡೆಯ ಜೊತೆಗೆ ಮಾನವೀಯ ಮೌಲ್ಯಗಳಿಗೂ ಆದ್ಯತೆ ನೀಡುವ ಅಪರೂಪದ ಉದಾಹರಣೆಯೊಂದು ಹೆಮ್ಮಾಡಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಕಂಡುಬಂದಿದೆ.

ಹಾರಿಸ್ ಹೆಮ್ಮಾಡಿ ಅವರ ನೇತೃತ್ವದಲ್ಲಿ ಯಶಸ್ವಿಯಾಗಿ ಆಯೋಜಿಸಲಾದ ಹೆಮ್ಮಾಡಿ ಟ್ರೋಫಿ-2026ರ ಫೈನಲ್ ಪಂದ್ಯದಲ್ಲಿ ದ್ವಿತೀಯ ಸ್ಥಾನ ಅಲಂಕರಿಸಿದ ರಕ್ಷಿತ್ ಶೆಟ್ಟಿ ಕಾಳಾವರ ನಾಯಕತ್ವದ ವಿ.ಎಮ್.ಕಟ್ಟೆ ಫ್ರೆಂಡ್ಸ್ ಕಾಳಾವರ ತಂಡವು ತಮಗೆ ದೊರೆತ 40 ಸಾವಿರ ನಗದು ಬಹುಮಾನವನ್ನು ಉಡುಪಿ ಜಿಲ್ಲೆಯ ಯುವ ಕ್ರಿಕೆಟಿಗ ಅಶೋಕ್ ಮೂಡುಬೆಟ್ಟು ಅವರ ಚಿಕಿತ್ಸೆಗೆ ದೇಣಿಗೆಯಾಗಿ ನೀಡಿದೆ.


ಅಶೋಕ್ ಮೂಡುಬೆಟ್ಟು ಅವರು ಇತ್ತೀಚೆಗೆ ಕಟ್ಟಡವೊಂದರ ಪೇಂಟಿಂಗ್ ಕೆಲಸ ನಿರ್ವಹಿಸುತ್ತಿದ್ದ ವೇಳೆ ಸುಮಾರು 40 ಅಡಿ ಎತ್ತರದಿಂದ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಅಪಘಾತದಲ್ಲಿ ಎರಡೂ ಕಾಲುಗಳಿಗೆ ತೀವ್ರ ಗಾಯಗಳಾಗಿದ್ದು, ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆಗಾಗಿ ಹೆಚ್ಚಿನ ವೆಚ್ಚ ಎದುರಾಗಿದೆ.
ಈ ಸಂಕಷ್ಟದ ಸಂದರ್ಭದಲ್ಲಿ ಅಶೋಕ್ ಅವರ ನೆರವಿಗೆ ಧಾವಿಸಿರುವ ವಿ.ಎಮ್.ಕಟ್ಟೆ ಫ್ರೆಂಡ್ಸ್ ಕಾಳಾವರ ತಂಡದ ಈ ನಡೆ ಕ್ರೀಡಾ ವಲಯದಲ್ಲಿ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ. ಗೆಲುವಿನ ಸಂಭ್ರಮವನ್ನು ಆಚರಿಸುವ ಬದಲು, ತಮ್ಮ ಬಹುಮಾನ ಮೊತ್ತವನ್ನೇ ಗಾಯಾಳು ಕ್ರಿಕೆಟಿಗನ ಚಿಕಿತ್ಸೆಗೆ ನೀಡುವ ಮೂಲಕ ತಂಡವು ನಿಜವಾದ ಕ್ರೀಡಾಸ್ಫೂರ್ತಿ ಮತ್ತು ಮಾನವೀಯತೆಯನ್ನು ಮೆರೆದಿದೆ.

ಕ್ರೀಡೆ ಕೇವಲ ಗೆಲುವು-ಸೋಲಿನ ವೇದಿಕೆಯಲ್ಲ, ಸಮಾಜದ ನೋವಿಗೆ ಸ್ಪಂದಿಸುವ ಮಾಧ್ಯಮವೂ ಆಗಿದೆ ಎಂಬುದನ್ನು ಈ ಕಾರ್ಯ ಮತ್ತೊಮ್ಮೆ ಸಾಬೀತುಪಡಿಸಿದೆ. ವಿ.ಎಮ್.ಕಟ್ಟೆ ಫ್ರೆಂಡ್ಸ್ ಕಾಳಾವರ ತಂಡದ ಈ ಮಾನವೀಯ ಸೇವೆ ಇತರರಿಗೂ ಮಾದರಿಯಾಗಿದ್ದು, ಕ್ರೀಡಾ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.




