
ಗಂಭೀರನ ಒಡ್ಡೋಲಗದಲ್ಲಿ ಕಳೆದೇ ಹೋದ ಮೊಹಮ್ಮದ್ ಶಮಿ..!
ಕ್ರಿಕೆಟ್ ಜಗತ್ತು ರೋಹಿತ್ ಶರ್ಮಾ ಬಗ್ಗೆ ಮಾತನಾಡುತ್ತಿದೆ.. ವಿರಾಟ್ ಕೊಹ್ಲಿ ಬಗ್ಗೆ ಕುತೂಹಲದ ಕಣ್ಣುಗಳಿಂದ ನೋಡುತ್ತಿದೆ. ದಿಗ್ಗಜರಿಬ್ಬರನ್ನು ನಡೆಸಿಕೊಂಡ ರೀತಿ ಸರಿಯಿಲ್ಲ ಎಂಬ ಅಭಿಪ್ರಾಯವೂ ಇದೆ. ಇದರ ಮಧ್ಯೆ ಒಬ್ಬ ಸೈಲೆಂಟ್ ವಾರಿಯರ್ ಮರೆತೇ ಹೋಗಿದ್ದಾನೆ. ಅವನ ಅಂತರಾಷ್ಟ್ರೀಯ ಕ್ರಿಕೆಟ್ ಕರಿಯರ್ ಸದ್ದೇ ಇಲ್ಲದೆ ಮುಗಿದೇ ಬಿಟ್ಟಿದೆ. ಅಲ್ಲ, ಮುಗಿಸಿ ಬಿಟ್ಟಿದ್ದಾರೆ.
ಅವನು ಮೊಹಮ್ಮದ್ ಶಮಿ.

ಹೌದು.. ಮೊಹಮ್ಮದ್ ಶಮಿಗೆ ವಯಸ್ಸಾಗುತ್ತಿದೆ. ಆದರೆ ‘ಗಂಭೀರನ ಶಿಷ್ಯ’ ಎಂಬ ಏಕೈಕ ಮಾನದಂಡದ ಕಾರಣದಿಂದ ಭಾರತ ತಂಡದಲ್ಲಿ ಪದೇ ಪದೇ ಸ್ಥಾನ ಪಡೆಯುತ್ತಿರುವ ಹರ್ಷಿತ್ ರಾಣಾಗಿಂತ 35ನೇ ಹರೆಯದಲ್ಲೂ ಮೊಹಮ್ಮದ್ ಶಮಿ ನೂರಲ್ಲ, ಸಾವಿರ ಪಾಲು ವಾಸಿ.
ಟೆಸ್ಟ್ ಕಂಬ್ಯಾಕ್, ಏಕದಿನ ಕ್ರಿಕೆಟ್’ಗೆ ಮರಳಲು ಮೊಹಮ್ಮದ್ ಶಮಿ ಪ್ರಯತ್ನಿಸುತ್ತಲೇ ಇದ್ದಾನೆ. ಆದರೆ ಸಾಧ್ಯವಾಗುತ್ತಿಲ್ಲ. ಅದರಲ್ಲೂ ಈಗಿನ ಗಂಭೀರ್ ಒಡ್ಡೋಲಗದಲ್ಲಿ..? ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಅಶ್ವಿನ್’ರಂಥಾ ದಿಗ್ಗಜರನ್ನೇ ಲೆಕ್ಕಕ್ಕಿಡದವರಿಗೆ ಈ ಪಾಪದ ಶಮಿ ಯಾವ ಲೆಕ್ಕ..?

ಮೊಹಮ್ಮದ್ ಶಮಿಯೂ ಭಾರತೀಯ ಕ್ರಿಕೆಟ್’ನ ದಿಗ್ಗಜನೇ.. ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ ತಂಡ ಟೆಸ್ಟ್ ಕ್ರಿಕೆಟ್’ನಲ್ಲಿ ಅಧಿಪತ್ಯ ಸಾಧಿಸಿದ್ದರ ಹಿಂದಿನ ರೂವಾರಿಗಳಲ್ಲಿ ಒಬ್ಬ ಶಮಿ. ವಿರಾಟ್ ಕೊಹ್ಲಿ ಯುಗದಲ್ಲಿ ಜಸ್ಪ್ರೀತ್ ಬುಮ್ರಾ ಜೊತೆಗೂಡಿ ಭಾರತದ ವೇಗದ ಬೌಲಿಂಗ್’ನ ನೊಗ ಎಳೆದ ಜೋಡೆತ್ತು.
ಚೆಂಡಿನ ಸೀಮ್ ಮೇಲೆ ಮೊಹಮ್ಮದ್ ಶಮಿಯಷ್ಟು ನಿಯಂತ್ರಣ ಇದ್ದ ವೇಗದ ಬೌಲರ್ ಈ ಕಾಲಘಟ್ಟದಲ್ಲಿ ಇನ್ನೊಬ್ಬನಿಲ್ಲ.
ರಿವರ್ಸ್ ಸ್ವಿಂಗ್ ಎಲ್ಲರಿಗೂ ಸಿದ್ಧಿಸುವ ಅಸ್ತ್ರ ಅಲ್ಲ. ಕ್ರಿಕೆಟ್ ಮೈದಾನದಲ್ಲಿ ಅದನ್ನು ಅತ್ಯಂತ ಪರಿಣಾಮಕಾರಿಯಾಗಿ ಪ್ರಯೋಗಿಸಿದವನು ಶಮಿ.
He was lethal, He was accurate, He was effective, He was extremely good.
ಮೊಹಮ್ಮದ್ ಶಮಿ ಬಂಗಾಳದಿಂದ ಭುಗಿಲೆದ್ದು ಬಂದಿದ್ದ ಜ್ವಾಲಾಮುಖಿ. ಪೂರ್ವ ರಾಜ್ಯದಲ್ಲಿ ಕ್ರಿಕೆಟ್ ಬದುಕು ಕಟ್ಟಿಕೊಂಡವನ ಹುಟ್ಟೂರು ಉತ್ತರಪ್ರದೇಶದ ಅಮ್ರೋಹದ ಸಾಹಸಪುರ. ಊರಿನ ಹೆಸರಲ್ಲೇ ಸಾಹಸ.. ಅಂಥಾ ಮಣ್ಣಿನಿಂದ ಬಂದಿದ್ದ ಮೊಹಮ್ಮದ್ ಶಮಿ ಭಾರತದ ಭಯಾನಕ ಬೌಲರ್ ಆಗಿ ಬೆಳೆದು ನಿಂತದ್ದೇ ಒಂದು ರೋಚಕ ಕಥೆ.

ಆಗಿನ್ನೂ ಶಮಿ 15 ವರ್ಷದ ಹುಡುಗ. ಸ್ವತಃ ವೇಗದ ಬೌಲರ್ ಆಗಿದ್ದ ತಂದೆ ತೌಸಿಫ್ ಅಲಿಗೆ ಮಗನನ್ನು ಭಾರತ ತಂಡಕ್ಕೆ ಆಡಿಸುವ ಆಸೆ.. ಊರಲ್ಲಿ ಕ್ರಿಕೆಟ್ ಅಭ್ಯಾಸಕ್ಕೆ ವ್ಯವಸ್ಥೆಯಿಲ್ಲ.. ಇಲ್ಲೇ ಇದ್ದರೆ ಮಗ ಬೂದಿ ಮುಚ್ಚಿದ ಕೆಂಡದ ಹಾಗೆ ಆಗಿ ಬಿಡುತ್ತಾನೆ ಎಂದುಕೊಂಡವರೇ ಮನೆಯಿಂದ 22 ಕಿ.ಮೀ ದೂರದ ಮೊರಾದಾಬಾದ್’ಗೆ ಶಮಿಯನ್ನು ಕರೆದೊಯ್ಯುತ್ತಾರೆ. ಅಲ್ಲಿ ಮೊಹಮ್ಮದ್ ಶಮಿಗೆ ಗುರುವಾಗಿ ಸಿಕ್ಕವರು ಬದ್ರುದ್ದೀನ್ ಸಿದ್ದಿಕಿ. ಅವರ ಗರಡಿಯಲ್ಲಿ ಆರಂಭವಾಗಿದ್ದು ಬೌಲಿಂಗ್ ಅಭ್ಯಾಸವಲ್ಲ, ಅದೊಂದು ಯಜ್ಞ…
22 ಯಾರ್ಡ್ ಪಿಚ್’ನಲ್ಲಿ ಒಂದೇ ಒಂದು ಸ್ಟಂಪ್. ಇದೇ ನಿನ್ನ ಗುರಿ ಎಂದಿದ್ದರಂತೆ ಸಿದ್ದಿಕಿ. ದ್ರೋಣಾಚಾರ್ಯನ ಗುರುಕುಲದಲ್ಲಿ ಅರ್ಜುನ ಹಕ್ಕಿಯ ಕಣ್ಣಿಗೆ ಗುರಿಯಿಟ್ಟು ಬಾಣ ಬಿಟ್ಟಂತೆ ಶಮಿ ಆ ಸಿಂಗಲ್ ಸ್ಟಂಪ್ ಅನ್ನು ಲಕ್ಷ್ಯವಾಗಿಸಿಕೊಂಡ.
ಪ್ರತೀ ದಿನ ನೂರಾರು ಎಸೆತಗಳನ್ನು ಗುರಿ ಇಟ್ಟು ಹೊಡೆಯುತ್ತಿದ್ದ. ಆ ದಿನಗಳಲ್ಲಿ ಮೊಹಮ್ಮದ್ ಶಮಿಯ ಕಿಚ್ಚಿಗೆ ಮುರಿದು ಬಿದ್ದ ಸ್ಟಂಪ್’ಗಳು ನೂರಾರು.
ಚೆಂಡು ಸ್ಟಂಪ್’ಗೆ ಬಡಿದಾಗ ಅದರಿಂದ ಬರುವ ಶಬ್ದ ಅವನಿಗೆ ಅಚ್ಚುಮೆಚ್ಚು. ಅದು ಅವನಿಗೆ ನಶೆಯೂ ಹೌದು, ಮತ್ತೆ ಮತ್ತೆ ಸ್ಟಂಪ್ ಉರುಳಿಸಲು ಕೊಡುತ್ತಿದ್ದ ಸ್ಫೂರ್ತಿಯೂ ಹೌದು.
ಉತ್ತರ ಪ್ರದೇಶ ಪರ ಆಡಬೇಕೆಂದಿದ್ದವನಿಗೆ ಅಂಡರ್-19 ಹಂತದಲ್ಲೇ ಅಲ್ಲಿನ ಕ್ರಿಕೆಟ್ ರಾಜಕೀಯ ಅಡ್ಡಗಾಲು ಹಾಕಿತ್ತು. ಶಿಷ್ಯನನ್ನು ಟ್ರೈನ್ ಹತ್ತಿಸಿ ಕೋಲ್ಕತಾಗೆ ಕಳುಹಿಸಿ ಬಿಟ್ಟರು ಕೋಚ್ ಬದ್ರುದ್ದೀನ್ ಸಿದ್ದಿಕಿ.

ಮೊಹಮ್ಮದ್ ಶಮಿಯ ಕ್ರಿಕೆಟ್ ಬದುಕಿಗೆ ದೊಡ್ಡ ತಿರುವು ಕೊಟ್ಟ ನಿರ್ಧಾರವದು. ಕೋಲ್ಕತಾಗೆ ಬಂದಿಳಿದ ಶಮಿ ತುಂಬಾ ಕಷ್ಟ ಪಟ್ಟು ಬಿಡುತ್ತಾನೆ. ಇರಲು ಒಂದು ಮನೆಯಿಲ್ಲ.ಡಾಲ್ ಹೌಸಿ ಅಥ್ಲೆಟಿಕ್ ಕ್ಲಬ್ ಪರ ಆಡುತ್ತಿದ್ದ ಹುಡುಗರ ಸ್ನೇಹ ಸಂಪಾದಿಸಿ ಕೆಲ ದಿನಗಳ ಕಾಲ ಅವರ ಮನೆಯಲ್ಲೇ ಇದ್ದು ಬಿಡುತ್ತಾನೆ.
ಮೊಹಮ್ಮದ್ ಶಮಿಯ ವೇಗ, ಆತ ಸ್ಟಂಪ್ ಛಿದ್ರ ಮಾಡುತ್ತಿದ್ದ ರೀತಿ ಎಲ್ಲರನ್ನೂ ಬೆಕ್ಕಸ ಬೆರಗಾಗಿಸಿ ಬಿಟ್ಟಿತ್ತು. ಹಾಗೆ ಬೆರಗಾದವರಲ್ಲಿ ಬಂಗಾಳ ಕ್ರಿಕೆಟ್ ಸಂಸ್ಥೆಯ ದೇವವ್ರತ ದಾಸ್ ಕೂಡ ಒಬ್ಬರು. ಹುಡುಗನಲ್ಲಿದ್ದ ಕಿಚ್ಚನ್ನು ಗುರುತಿಸಿದ ದೇವವ್ರತ ನೇರವಾಗಿ ಶಮಿಯನ್ನು ತಮ್ಮ ಟೌನ್ ಕ್ರಿಕೆಟ್ ಕ್ಲಬ್’ಗೆ ಸೇರಿಸುತ್ತಾರೆ. ಶಮಿಯನ್ನು ತಮ್ಮ ಮನೆಯಲ್ಲೇ ಇರಿಸಿಕೊಂಡು ಸ್ವಂತ ಮಗನಂತೆ ನೋಡಿಕೊಳ್ಳುತ್ತಾರೆ. ‘’ಕ್ರಿಕೆಟ್ ಆಡೋ ನೀನು, ನಿನಗೆ ಏನು ಬೇಕು ನಾನು ಕೊಡುತ್ತೇನೆ’’ ಎಂದಿದ್ದರು ದೇವವ್ರತ ದಾಸ್. ಮೊಹಮ್ಮದ್ ಶಮಿ ನಿರ್ಧಾರ ಮಾಡಿ ಬಿಟ್ಟಿದ್ದ. ‘’ಕ್ರಿಕೆಟ್ ಅಡಿದರೆ ಇಲ್ಲೇ.. ಇಲ್ಲಿಂದಲೇ ಭಾರತ ಪರ ಆಡುತ್ತೇನೆ’’ ಎಂದು.
ಮೋಹನ್ ಬಗಾನ್ ಕ್ಲಬ್ ಪರ ಆಡಲು ಆರಂಭಿಸಿದಾಗ ಮೊಹಮ್ಮದ್ ಶಮಿ ಜೀವನದಲ್ಲಿ ಘಟಿಸಿ ಬಿಟ್ಟಿತೊಂದು ಅದ್ಭುತ. ಯಾರ ಹೆಸರು ಕೇಳಿದರೆ ಭಾರತೀಯ ಕ್ರಿಕೆಟ್ ಪ್ರಿಯರ ನರನಾಡಿಗಳಲ್ಲಿ ಮಿಂಚಿನ ಸಂಚಾರವಾಗುತ್ತಿತ್ತೋ.. ಯಾರನ್ನು ಬಂಗಾಳದ ಅಸ್ಮಿತೆ ಎಂದು ಕರೆಯಲಾಗುತ್ತಿತ್ತೋ.. ಯಾವ ವ್ಯಕ್ತಿಯ ಹೆಸರು ಭಾರತೀಯ ಕ್ರಿಕೆಟ್ ಪಾಲಿಗೆ ಉಸಿರಾಗಿ ಬಿಟ್ಟಿತೋ.. ಅದೇ ವ್ಯಕ್ತಿಯ ಮುಂದೆ ಆ ದಿನ ನಿಂತು ಬಿಟ್ಟಿದ್ದ ಮೊಹಮ್ಮದ್ ಶಮಿ. ಅಂದ ಹಾಗೆ, ಅವರು ಹೆಸರು ಬಂಗಾಳದ ಹುಲಿ, ದಿ ಗ್ರೇಟ್ ಸೌರವ್ ಗಂಗೂಲಿ.
ಭಾರತೀಯ ಕ್ರಿಕೆಟ್’ನ ಭವಿಷ್ಯವನ್ನೇ ಬದಲಿಸಿದ ನಾಯಕ ಸೌರವ್ ಗಂಗೂಲಿ ಆ ದಿನ ಈಡನ್ ಗಾರ್ಡನ್ಸ್’ಗೆ ಬ್ಯಾಟಿಂಗ್ ಅಭ್ಯಾಸಕ್ಕೆ ಬಂದಿದ್ದರು. ದಾದಾಗೆ ಬೌಲಿಂಗ್ ಮಾಡಲು ಒಂದಷ್ಟು ಹುಡುಗರನ್ನು ಕರೆಸಲಾಗಿತ್ತು. ಹಾಗೆ ಬಂದವರಲ್ಲೊಬ್ಬ ಮೊಹಮ್ಮದ್ ಶಮಿ.
ಜಾರ್ಖಂಡ್’ನ ಮಹೇಂದ್ರ ಸಿಂಗ್ ಧೋನಿ, ಚಂಡೀಗಢದ ಯುವರಾಜ್ ಸಿಂಗ್, ಪ್ರಯಾಗರಾಜ್’ನ (ಹಿಂದಿನ ಅಲಹಾಬಾದ್) ಮೊಹಮ್ಮದ್ ಕೈಫ್, ನಝಾಫ್’ಗಢದ ವೀರೇಂದ್ರ ಸೆಹ್ವಾಗ್, ದೆಹಲಿ ಕಂಟೋನ್ಮೆಂಟ್’ನ ಆಶಿಶ್ ನೆಹ್ರಾ.. ಹೀಗೆ ಪ್ರತಿಭೆಗಳೂ ಎಲ್ಲೇ ಇದ್ದರೂ ಹುಡುಕಿ ತೆಗೆದ ನಾಯಕನ ಮುಂದೆ ಪ್ರತಿಭಾ ಪರ್ವತದಂತಿದ್ದ ಹುಡುಗನೊಬ್ಬ ನಿಂತಿದ್ದರೆ ಸುಮ್ಮನಿರಲು ಹೇಗೆ ಸಾಧ್ಯ..?
ದಾದಾ ಹೇಳಿದ ಒಂದೇ ಮಾತಿಗೆ ಮೊಹಮ್ಮದ್ ಶಮಿ ಬಂಗಾಳ ರಣಜಿ ತಂಡದಲ್ಲಿದ್ದ. 3-4 ರಣಜಿ ಸೀಸನ್.. ಶಮಿ ಟೀಮ್ ಇಂಡಿಯಾದಲ್ಲಿದ್ದ.. ಮುಂದಿನದ್ದು ಚರಿತ್ರೆ.
18 ವಿಶ್ವಕಪ್ ಪಂದ್ಯಗಳು, 55 ವಿಕೆಟ್.. ಏಕದಿನ ವಿಶ್ವಕಪ್ ಟೂರ್ನಿಗಳಲ್ಲಿ ಮೊಹಮ್ಮದ್ ಶಮಿ ಭಾರತ ತಂಡ ಗ್ರೇಟೆಸ್ಟ್ ಬೌಲರ್. 64 ಟೆಸ್ಟ್ ಪಂದ್ಯಗಳಿಂದ 229 ವಿಕೆಟ್, 108 ಏಕದಿನ ಪಂದ್ಯಗಳಿಂದ 206 ವಿಕೆಟ್..
ಆಡಿದ ಪ್ರತೀ ಪಂದ್ಯವನ್ನೂ ಕಿಚ್ಚಿನಿಂದ ಆಡಿದವನು.. ಎಸೆದ ಪ್ರತೀ ಎಸೆತವನ್ನೂ ಕೆಚ್ಚಿನಿಂದ ಎಸೆದವನು.. ಪಾಕಿಸ್ತಾನ ವಿರುದ್ಧದ ಪಂದ್ಯವೊಂದರಲ್ಲಿ ಹೆಚ್ಚಿನ ರನ್ ಬಿಟ್ಟುಕೊಟ್ಟ ಎಂಬ ಕಾರಣಕ್ಕಾಗಿ ಕೆಲ ಅವಿವೇಕಿಗಳು ಇವನನ್ನು ದೇಶದ್ರೋಹಿ ಎಂದು ಜರಿದದ್ದೂ ಇದೆ. ಮೊಹಮ್ಮದ್ ಶಮಿ ಅದೆಂಥಾ ದೇಶಪ್ರೇಮಿ ಕ್ರಿಕೆಟಿಗನೆಂಬುದು ಆ ವಿಷಜಂತುಗಳಿಗೇನು ಗೊತ್ತು.!

ಪ್ರೀತಿಯ ಶಮಿ..
ಭಾರತ ಎಂದಿಗೂ ಮರೆಯಲಾಗದ, ಮರೆಯಬಾರದ ಮಾಣಿಕ್ಯ ನೀನು. ಭಾರತ ಕ್ರಿಕೆಟ್ ತಂಡದಲ್ಲಿ ಮತ್ತೆ ಕಾಣಿಸಿಕೊಳ್ಳುವ ನಿನ್ನ ಕನಸಿಗೆ ಅವರು ಕೊಳ್ಳಿ ಇಟ್ಟಿರಬಹುದು. ಆದರೆ ನೀನು ಕಟ್ಟಿಕೊಟ್ಟ ನೆನಪುಗಳನ್ನು ಮಾತ್ರ ಯಾರೂ ಅಳಿಸಲು ಸಾಧ್ಯವಿಲ್ಲ.
-ಸುದರ್ಶನ್




