
ಒಂದೇ ಪಂದ್ಯದ ನಂತರ ರಣಜಿ ಪ್ಲೇಯಿಂಗ್ XIನಿಂದ ಅಭಿಲಾಷ್ ಶೆಟ್ಟಿ ಔಟ್, ಇದು ಯಾವ ನ್ಯಾಯ?
ಕರ್ನಾಟಕ ತಂಡ ರಣಜಿ ಟ್ರೋಫಿ ಟೂರ್ನಿಯ ತನ್ನ 5ನೇ ಲೀಗ್ ಪಂದ್ಯದಲ್ಲಿ ಉತ್ತರ ಪ್ರದೇಶ ತಂಡವನ್ನು ಎದುರಿಸಿ ನಿಂತಿದೆ. ರಣಜಿ ಟ್ರೋಫಿ ಎಲೈಟ್ ಸಿ ಗುಂಪಿನ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿರುವ ಉತ್ತರ ಪ್ರದೇಶ ತಂಡ ವಿ.ಕೌಶಿಕ್ರಂ ದಾಳಿಗೆ ತತ್ತರಿಸಿ ಆರಂಭದಲ್ಲೇ ಮೂರು ವಿಕೆಟ್ ಕಳೆದುಕೊಂಡಿದೆ.
ಉತ್ತರ ಪ್ರದೇಶ ವಿರುದ್ಧ ಕಣಕ್ಕಿಳಿದಿರುವ ಕರ್ನಾಟಕ ತಂಡದ ಪ್ಲೇಯಿಂಗ್ ಇಲೆವೆನ್’ನಿಂದ ಪ್ರತಿಭಾವಂತ ಎಡಗೈ ಮಧ್ಯಮ ವೇಗದ ಬೌಲರ್ ಅಭಿಲಾಷ್ ಶೆಟ್ಟಿಯವರನ್ನು ಕೈಬಿಡಲಾಗಿದೆ. ಅಭಿಲಾಷ್ ಶೆಟ್ಟಿ ಬದಲು ಮತ್ತೊಬ್ಬ ಯುವ ಮಧ್ಯಮ ವೇಗಿ ಯಶೋವರ್ಧನ್ ಪರಂಟಪ್ ಕರ್ನಾಟಕ ಪರ ರಣಜಿ ಟ್ರೋಫಿ ಕ್ರಿಕೆಟ್’ಗೆ ಪಾದಾರ್ಪಣೆ ಮಾಡಿದ್ದಾರೆ.
26 ವರ್ಷದ ಅಭಿಲಾಷ್ ಶೆಟ್ಟಿ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಬಂಗಾಳ ವಿರುದ್ಧದ ಪಂದ್ಯದ ಮೂಲಕ ರಣಜಿ ಕ್ರಿಕೆಟ್’ಗೆ ಪಾದಾರ್ಪಣೆ ಮಾಡಿದ್ದರು. ಆಡಿದ ಮೊದಲ ಪಂದ್ಯದಲ್ಲಿ ಮೂರು ವಿಕೆಟ್ ಪಡೆದಿದ್ದರು. ಆದರೆ ಒಂದೇ ಪಂದ್ಯದ ನಂತರ ಉತ್ತರ ಪ್ರದೇಶ ವಿರುದ್ಧದ ಪಂದ್ಯಕ್ಕೆ ತಂಡದ ಪ್ಲೇಯಿಂಗ್ ಇಲೆವೆನ್’ನಿಂದ ಅಭಿಲಾಷ್ ಶೆಟ್ಟಿಯವರನ್ನು ಕೈಬಿಟ್ಟಿರುವುದು ಅಚ್ಚರಿಗೆ ಕಾರಣವಾಗಿದೆ. ಗಾಯದ ಕಾರಣ ಅಭಿಲಾಷ್ ಶೆಟ್ಟಿಯವರನ್ನು ಆಡುವ ಬಳಗದಿಂದ ಹೊರಗಿಡಲಾಗಿದೆಯೇ ಅಥವಾ ಬೇರೆ ಕಾರಣಗಳಿವೆಯೇ ಎಂಬುದು ಖಚಿತ ಪಟ್ಟಿಲ್ಲ.

