Site icon SportsKannada ಸ್ಪೋರ್ಟ್ಸ್ ಕನ್ನಡ

ಐವರು ಪಾಂಡವರು ಒಬ್ಬ ಕರ್ಣನ ಮುಂದೆ ಸೋತಂತಿತ್ತು ಆ ಕ್ಷಣ..!

ಐವರು ಪಾಂಡವರು ಒಬ್ಬ ಕರ್ಣನ ಮುಂದೆ ಸೋತಂತಿತ್ತು ಆ ಕ್ಷಣ..!

ಅನುಮಾನವೇ ಬೇಡ..
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಹುಲ್ ವೃತ್ತ ಬರೆದು ಬ್ಯಾಟನ್ನು ನೆಲಕ್ಕೆ ಗುದ್ದಿ, ಎದೆ ಮುಟ್ಟಿ ‘ಇದು ನನ್ನ ನೆಲ’ ಎಂದದ್ದು ರಾಯಲ್ ಚಾಲೆಂಜರ್ಸ್ ಮಾಲೀಕರಿಗೆ ಮತ್ತು ಆ ತಂಡದ ಮ್ಯಾನೇಜ್ಮೆಂಟ್’ಗೆ.

ರಾಹುಲ್ ಹಾಗೆಲ್ಲಾ ಮನಸ್ಸಿನ ಭಾವನೆಗಳನ್ನು ಹೊರ ಹಾಕುವವನಲ್ಲ, ಭಾವೋದ್ವೇಗಕ್ಕೆ ಒಳಗಾಗುವವನೂ ಅಲ್ಲ. ಅವನು ಶಾಂತಮೂರ್ತಿ. ಅಂಥ ವ್ಯಕ್ತಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್.ಸಿ.ಬಿಯನ್ನು ಸೋಲಿಸಿ ‘ಇದು ನನ್ನ ನೆಲ’ ಎಂದು ಎದೆ ಮುಟ್ಟಿ ಸನ್ನೆ ಮಾಡಿ ತೋರಿಸುತ್ತಾನೆ ಎಂದರೆ ಅದು ಅವನೊಳಗೆ ಮಡುಗಟ್ಟಿದ್ದ ಸಾತ್ವಿಕ ಸಿಟ್ಟು ಅಷ್ಟೇ.

‘’ನಾನು ಬೆಂಗಳೂರು ಹುಡುಗ, ನಮ್ಮ ನೆಲದ ತಂಡದ ಪರ ಆಡುವುದು ಯಾವಾಗಲೂ ಅದ್ಭುತ ಅನುಭವ ನೀಡುತ್ತದೆ’’.

ಆರ್.ಸಿ.ಬಿ ಪರ ಆಡಲು ರಾಹುಲ್ ಅದೆಷ್ಟು ಉತ್ಸುಕನಾಗಿದ್ದಾನೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಅವನಾಡಿದ್ದ ಇದೊಂದು ಮಾತು ಸಾಕಿತ್ತು.

ಅಶ್ವಿನ್ ಜೊತೆಗಿನ ಯೂಟ್ಯೂಬ್ ಸಂದರ್ಶನದಲ್ಲಿ ರಾಹುಲ್ ಈ ಮಾತು ಹೇಳಿದ್ದ.“ರಾಯಲ್ ಚಾಲೆಂಜರ್ಸ್’ಗೆ ಮರಳಿ ಬರಲು ನು ಸಿದ್ಧ” ಎಂಬ ಸಂದೇಶ ಕೊಟ್ಟಿದ್ದ. ತಂಡದ ಅಭಿಮಾನಿಗಳಂತೂ ‘ರಾಹುಲ್’ನನ್ನು ಮರಳಿ ಆರ್.ಸಿ.ಬಿಗೆ ಕರೆ ತನ್ನಿ’ ಎಂದು ಗೋಗರೆದದ್ದೆಷ್ಟೋ..

ಆದರೆ ಆರ್.ಸಿ.ಬಿ ಮಾಲೀಕರಿಗೆ, ತಂಡ ಕಟ್ಟುವ ಜವಾಬ್ದಾರಿ ಹೊತ್ತಿದ್ದವರಿಗೆ ರಾಹುಲ್’ನ ಮಾತೂ ಕೇಳಿಸಲಿಲ್ಲ, ಅಭಿಮಾನಿಗಳ ಆಸೆಯೂ ಕಾಣಲಿಲ್ಲ.

ನಿಜ.. ಈ ಬಾರಿ ರಾಹುಲ್ ಬೆಂಗಳೂರು ಪರ ಆಡಲು ಬಯಸಿದ್ದ.. ಅಂದುಕೊಂಡದ್ದು ಸಾಕಷ್ಟು ಬಾರಿ ನಿಜವಾಗುವುದಿಲ್ಲ. ಆಟಗಾರರನ್ನು ಖರೀದಿಸುವ, ಕೈ ಬಿಡುವ ಅಧಿಕಾರ ತಂಡದ ಮಾಲೀಕರದ್ದೇ ಆಗಿರುತ್ತದೆ. ಕಾರಣ, ಕೋಟಿ ಕೋಟಿ ಸುರಿಯುವವರು ಅವರೇ.

ಆರ್.ಸಿ.ಬಿ ಪರ ಆಡುವ ಅವಕಾಶ ಸಿಗಲಿಲ್ಲ ಎಂಬ ಕಾರಣಕ್ಕೆ ರಾಹುಲ್’ಗೆ ನಿರಾಸೆಯಾಗಿತ್ತು ನಿಜ. ಆ ನಿರಾಸೆಯೇ ನಿನ್ನೆ ಬ್ಯಾಟನ್ನು ನೆಲಕ್ಕೆ ಗುದ್ದಿ ಆಕ್ರೋಶ ಹೊರ ಹಾಕುವಂತೆ ಮಾಡಿತಾ..? ಖಂಡಿತಾ ಇಲ್ಲ. ಇದರ ಹಿಂದೆ ಕನ್ನಡಿಗರನ್ನು ಕಡೆಗಣಿಸುತ್ತಾ ಬಂದಿರುವ ಸಾತ್ವಿಕ ಸಿಟ್ಟು ಕಾಣುತ್ತಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಸಲಿ ಶಕ್ತಿ ವಿರಾಟ್ ಕೊಹ್ಲಿಯೂ ಅಲ್ಲ, ಅಥವಾ ಇನ್ಯಾರೋ ಅಲ್ಲ. ಆರ್.ಸಿ.ಬಿ ಶಕ್ತಿ ಆ ತಂಡದ ಅಭಿಮಾನಿಗಳು. 18 ವರ್ಷಗಳಿಂದ ಕಪ್ ಗೆಲ್ಲದೇ ಇದ್ದರೂ, ಆರ್.ಸಿ.ಬಿ ಮೇಲಿನ ಅಭಿಮಾನಿಗಳ ಪ್ರೀತಿ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆಯೇ ಹೊರತು ಕಿಂಚಿತ್ತೂ ಕಮ್ಮಿಯಾಗಿಲ್ಲ. ಕನ್ನಡಿಗರಂತೂ ‘ಇದು ನಮ್ಮ ನೆಲದ ತಂಡ’ ಎಂಬ ಕಾರಣಕ್ಕೆ ಆರ್.ಸಿ.ಬಿಯನ್ನು ತಲೆಯ ಮೇಲೆ ಹೊತ್ತು ಮೆರೆಸುತ್ತಾರೆ. ಅಭಿಮಾನಿಗಳ ಆ ಪ್ರೀತಿಯೇ ಆರ್.ಸಿ.ಬಿಯ ಅಸಲಿ ಬಂಡವಾಳ.

ಆದರೆ ಕನ್ನಡಿಗರಿಗೆ ಅವಕಾಶ ಕೊಡುವ ವಿಷಯಕ್ಕೆ ಬಂದರೆ ಆರ್.ಸಿ.ಬಿಯವರು ಯಾವಾಗಲೂ ಒಂದು ಹೆಜ್ಜೆ ಹಿಂದೆ. ಅವರಿಗೆ ಕನ್ನಡಿಗರ ಬೆಂಬಲ ಬೇಕು, ಕರ್ನಾಟಕದ ಆಟಗಾರರು ಬೇಡ. ಕನ್ನಡಿಗರ ಆಕ್ರೋಶವನ್ನು ತಪ್ಪಿಸಿಕೊಳ್ಳುವ ಏಕೈಕ ಕಾರಣಕ್ಕೆ ಎಲ್ಲೋ ಅಲ್ಲೊಬ್ಬ ಇಲ್ಲೊಬ್ಬನನ್ನು ದೃಷ್ಠಿಗೊಂಬೆಯಂತೆ ಇಟ್ಟುಕೊಳ್ಳುತ್ತಾರೆ ಅಷ್ಟೇ.

ಈ ವರ್ಷ ಕೆ.ಎಲ್ ರಾಹುಲ್’ನನ್ನು ತಂಡಕ್ಕೆ ಕರೆ ತರುವ ಅವಕಾಶವಿತ್ತು. ಈಗಿನ ತಂಡದಲ್ಲಿ ರಾಹುಲ್’ನಂಥಾ ಒಬ್ಬ ಆಟಗಾರ ಇದ್ದಿದ್ದರೆ ಹೇಗಿರುತ್ತಿತ್ತು..? ಯಾವುದೇ ಕ್ರಮಾಂಕಗಳಲ್ಲಿ ಆಡಬಲ್ಲ ಬ್ಯಾಟರ್, ವಿಕೆಟ್ ಕೀಪರ್, ಕ್ಯಾಪ್ಟನ್ ಮೆಟೀರಿಯಲ್. ಇವೆಲ್ಲಕ್ಕಿಂತ ಮೊದಲು ಅವನು ಕನ್ನಡಿಗ. ಆದರೆ ರಾಹುಲ್ ಇವರಿಗೆ ಬೇಡವಾಗಿ ಬಿಟ್ಟ.

ವೆಂಕಟೇಶ್ ಅಯ್ಯರ್ ಎಂಬ ಒಬ್ಬ ಕ್ರಿಕೆಟಿಗನಿಗೆ ಐಪಿಎಲ್ ಹರಾಜಿನಲ್ಲಿ ಆರ್.ಸಿ.ಬಿ 20 ಕೋಟಿಯವರೆಗೆ ಬಿಡ್ ಮಾಡಿತ್ತು. ಕೊನೆಗೆ ಅವನು ಸಿಗಲಿಲ್ಲ ಬೇರೆ ಮಾತು.

ಆದರೆ ಹರಾಜಿನಲ್ಲಿ ರಾಹುಲ್ ಹೆಸರು ಬಂದಾಗ ವೆಂಕಟೇಶ್ ಅಯ್ಯರ್’ನನ್ನು ಖರೀದಿಸಲು ತೋರಿಸಿದ ಉತ್ಸಾಹವನ್ನು ಆರ್.ಸಿ.ಬಿಯವರು ತೋರಿಸಲೇ ಇಲ್ಲ. 10.75 ಕೋಟಿಯವರೆಗೆ ಬಿಡ್ ಕೂಗಿದವರು ‘ಅದಕ್ಕಿಂತ ದೊಡ್ಡ ಮೊತ್ತಕ್ಕೆ ಅವನು ಅರ್ಹನಲ್ಲ’ ಎಂಬಂತೆ ಬಿಡ್ ಕ್ಲೋಸ್ ಮಾಡಿ ಬಿಟ್ಟರು. ರಾಹುಲ್ 14 ಕೋಟಿಗೆ ಡೆಲ್ಲಿ ತಂಡದ ಪಾಲಾದ.

ಎಲ್ಲಿಯ ವೆಂಕಟೇಶ್ ಅಯ್ಯರ್.. ಎಲ್ಲಿಯ ರಾಹುಲ್..? ರಾಹುಲ್’ನಂತಹ versatile ಕ್ರಿಕೆಟರ್ ಯಾವುದೇ ತಂಡಕ್ಕಾದರೂ ಆಸ್ತಿ. ಮೊನ್ನೆ ಚೆನ್ನೈನಲ್ಲಿ ಇನ್ನಿಂಗ್ಸ್ ಆರಂಭಿಸಿ 77 ರನ್ ಚಚ್ಚಿ ಬಂದವನು ನಿನ್ನೆ ಚಿನ್ನಸ್ವಾಮಿಯಲ್ಲಿ 4ನೇ ಕ್ರಮಾಂಕದಲ್ಲಿ ಕ್ರೀಸ್’ಗಿಳಿದು ಅಜೇಯ 93 ರನ್ ಚಚ್ಚಿದ್ದಾನೆ.

ಎಲ್ಲಿ ಬೇಕು ಅಲ್ಲಿ.. ಹೇಗೆ ಬೇಕು ಹಾಗೆ.. ಸೂತ್ರಧಾರರು ಹೇಳುವಂತೆ ಪಾತ್ರ ಬದಲಿಸುವ, ಆ ಪಾತ್ರವನ್ನು ಅದ್ಭುತವಾಗಿ ನಿಭಾಯಿಸುವ ಕ್ರಿಕೆಟ್ ಕಲಾವಿದ ರಾಹುಲ್. ಓಪನರ್, ಮಿಡಲ್ ಅರ್ಡರ್ ಬ್ಯಾಟರ್, ಫಿನಿಷರ್, ವಿಕೆಟ್ ಕೀಪರ್.. ಇದು ಎಷ್ಟು ಮಂದಿಗೆ ಸಾಧ್ಯ..? ಭಾರತ ತಂಡದ ಪರ ಮಾಡಿದ್ದನ್ನು ಈಗ ಜಗತ್ತಿನ ಅತೀ ದೊಡ್ಡ ಟಿ20 ಲೀಗ್’ನಲ್ಲೂ ಮಾಡುತ್ತಿದ್ದಾನೆ.

ಇನ್ನು ಚಿನ್ನಸ್ವಾಮಿಯಲ್ಲಿ ನಿನ್ನೆ ರಾಹುಲ್ ಆಡಿದ ಆಟ one of the best. ಸಾಮಾನ್ಯವಾಗಿ ರನ್ ಹೊಳೆ ಹರಿಯುವ ಚಿನ್ನಸ್ವಾಮಿ ವಿಕೆಟ್ ನಿನ್ನೆ ಸ್ವಲ್ಪ tricky ಆಗಿತ್ತು. ಪಿಚ್ slow ಆಗಿದ್ದ ಕಾರಣ ಅಡ್ಡ ಹೊಡೆತಗಳನ್ನು ಬಾರಿಸಿದವರೆಲ್ಲಾ ಔಟಾಗಿದ್ದರು. ವಿಕೆಟ್ ಹಿಂದೆ ನಿಂತು ಪಿಚ್’ನ ಮರ್ಮವನ್ನು ಅರಿತಿದ್ದ ರಾಹುಲ್ ತನ್ನ ಸರದಿ ಬಂದಾಗ ಬ್ಯಾಟಿಂಗ್ ಕೌಶಲ್ಯವನ್ನು ತೋರಿಸಿ ಬಿಟ್ಟ. ಇಂತಹ ಪಿಚ್’ಗಳಲ್ಲಿ ಹೇಗೆ ಆಡಬೇಕೆಂದು ಬ್ಯಾಟಿಂಗ್ ಪಾಠ ಮಾಡಿದಂತಿತ್ತು ರಾಹುಲ್ ಆಟ.

ರಾಹುಲ್ ಆಟಕ್ಕೆ, ಅವನು ‘ನೆಲ ಗುದ್ದಿ, ಎದೆ ಮುಟ್ಟಿ’ ಮಾಡಿದ ಸನ್ನೆಗೆ ಆರ್.ಸಿ.ಬಿ ಅಭಿಮಾನಿಗಳೇ ಭೇಷ್ ಎಂದಿದ್ದಾರೆ. ‘ಆರ್.ಸಿ.ಬಿ ಸೋತರೂ ಸೋಲಿಸಿದವನು ನಮ್ಮವನೇ’ ಎಂಬ ಸಮಾಧಾನ ಅವರಿಗೆ.

ಕೊನೆಯಲ್ಲಿ ಒಂದು ಮಾತು.
ಅದು ರಾಯಲ್ ಚಾಲೆಂಜರ್ಸ್ ವಿರುದ್ಧ ‘ಹೊಯ್ಸಳ’ನ ವಿಜಯ.
ಕರ್ನಾಟಕ ಆಟಗಾರರ ಅಸಲಿ ಶಕ್ತಿ ಏನೆಂಬುದನ್ನು ರಾಹುಲ್ ತೋರಿಸಿದ್ದಾನೆ.

 

Exit mobile version