
ಪೆಟ್ಟು ಬಿದ್ದಷ್ಟೂ ಗಟ್ಟಿಯಾಗಿ ನಿಂತಿರುವ ಗರುಡಗಂಬ ಅವನು.. ಆ ಗರುಡಗಂಬ ಅಷ್ಟು ಸುಲಭದಲ್ಲಿ ಉರುಳದು..!
ನೀವು ಅವನನ್ನು ನಡು ಸಮುದ್ರಕ್ಕೆ ತಳ್ಳಿ.. ಈಜಿ ದಡ ಸೇರುತ್ತಾನೆ..
ನೀವು ಅವನನ್ನು ಪ್ರಪಾತಕ್ಕೆ ತಳ್ಳಿ ಬಿಡಿ.. ಮೇಲೆದ್ದು ನಿಲ್ಲುತ್ತಾನೆ..
ಅವನನ್ನು ಮುಗಿಸಿ ಬಿಡಲು ಅದೆಷ್ಟೇ ಷಡ್ಯಂತ್ರ, ಕುತಂತ್ರಗಳು ನಡೆಯಲಿ.. ಅರ್ಜುನನಂತೆ ಚಕ್ರವ್ಯೂಹವನ್ನು ಭೇದಿಸಿ ಬಿಡುತ್ತಾನೆ.
ಅವನೆಡೆಗೆ ಅದೆಷ್ಟೇ ಕಲ್ಲುಗಳನ್ನು ಎಸೆಯಲಿ.. ಆ ಕಲ್ಲುಗಳನ್ನೇ ಮೈಲುಗಲ್ಲುಗಳಾಗಿ ನೆಟ್ಟು ಬಿಡುತ್ತಾನೆ. ಅದೇ ಕಲ್ಲುಗಳಿಂದ ಮೆಟ್ಟಿಲುಗಳನ್ನು ಕಟ್ಟಿ ಯಶೋಶಿಖರ ಏರಿ ನಿಲ್ಲುತ್ತಾನೆ.
ಅವನು ಎದುರಿಸಿದ ಟೀಕೆಗಳೆಷ್ಟೋ, ಮೂದಲಿಕೆಗಳೆಷ್ಟೋ..
ಬಹುಶಃ ಇತ್ತೀಚಿನ ವರ್ಷಗಳಲ್ಲಿ ರಾಹುಲ್’ನಷ್ಟು ದ್ವೇಷಕ್ಕೊಳಗಾದ ಕ್ರಿಕೆಟಿಗ ಈ ಜಗತ್ತಿನಲ್ಲಿ ಮತ್ತೊಬ್ಬ ಇರಲಾರ..
ಮುಗಿಸಲು ಹತ್ತಾರು ಮಂದಿ ನಿಂತು ಬಿಟ್ಟರೆ ಕಾಯಲು ಒಬ್ಬ ಇದ್ದೇ ಇರುತ್ತಾನೆ. ದ್ವೇಷ, ನೋವು, ಅವಮಾನ, ಅಸೂಯೆ, ಬೆನ್ನು ಬಿಡದ ಬೇತಾಳನಂತೆ ಕಾಡಿದ ಅತೃಪ್ತ ಆತ್ಮಗಳ ಕಾಟದ ಮಧ್ಯೆ
ರಾಹುಲ್’ನನ್ನು ಇಲ್ಲಿಯವರೆಗೆ ತಂದು ನಿಲ್ಲಿಸಿರುವುದು ಅವನ ಬದ್ಧತೆ, ಡೃಢತೆ, ನಿಯತ್ತು ಮತ್ತು ಪರಿಶ್ರಮ..
ರಾಹುಲ್ ಆಟಕ್ಕೆ, ಅವನೊಳಗೆ ಅಡಗಿರುವ ಅಸಾಧಾರಣ ಪ್ರತಿಭೆಗೆ ‘ಶಹಬ್ಬಾಸ್’ ಎಂಬ ಸರ್ಟಿಫಿಕೇಟ್ ಕೊಟ್ಟವರು ಸಾಮಾನ್ಯರಲ್ಲ, ಕ್ರಿಕೆಟ್ ಕಂಡ ಅಸಾಮಾನ್ಯರು.
‘ನಿಮ್ಮ ನೆಚ್ಚಿನ ಭಾರತೀಯ ಬ್ಯಾಟ್ಸ್’ಮನ್ ಯಾರು’ ಎಂದು ಕೇಳಿದರೆ ವೆಸ್ಟ್ ಇಂಡೀಸ್ ದಿಗ್ಗಜ ಬ್ರಯಾನ್ ಲಾರಾ, ದಕ್ಷಿಣ ಆಫ್ರಿಕಾ ಲೆಜೆಂಡ್ ಡೇಲ್ ಸ್ಟೇನ್, ನ್ಯೂಜಿಲೆಂಡ್’ನ ಸರ್ವೋತ್ತಮ ಕೇನ್ ವಿಲಿಯಮ್ಸನ್ ರಾಹುಲ್ ಹೆಸರು ಹೇಳುತ್ತಾರೆ. ದೇಶಕ್ಕೆ ಮೊಟ್ಟ ಮೊದಲ ಕ್ರಿಕೆಟ್ ವಿಶ್ವಕಪ್ ಗೆದ್ದುಕೊಟ್ಟ ನಾಯಕ ದಿ ಗ್ರೇಟ್ ಕಪಿಲ್ ದೇವ್ ಅವರು ರಾಹುಲ್ ಪ್ರತಿಭೆಗೆ ತಲೆದೂಗುತ್ತಾರೆ. ಇದುವೇ ಅಲ್ಲವೇ ರಾಹುಲ್ ಸಾಮರ್ಥ್ಯಕ್ಕೆ ಸಿಕ್ಕ ಸರ್ಟಿಫಿಕೇಟ್..?
ಸಮಯ, ಸಂದರ್ಭ ಏನೇ ಇರಲಿ.. ಆಪತ್ತಿನ ಕಾಲದಲ್ಲಿ ಭಾರತ ಕ್ರಿಕೆಟ್ ತಂಡಕ್ಕೆ ನೆನಪಾಗುವವನು ರಾಹುಲ್. ಕಾರಣ, ಅವನು ಆಪತ್ಕಾಲದ ನೆಂಟ.. ಅವನಿಗೆ ವೈಯಕ್ತಿಕ ಸ್ವಾರ್ಥವಿಲ್ಲ. ತಂಡಕ್ಕಾಗಿ ಆಡುವ ನಿಸ್ವಾರ್ಥಿಯವನು. ಇಲ್ಲಿಯವರೆಗೆ ತನಗೆ ವಹಿಸಿದ ಪಾತ್ರಗಳನ್ನು ನಿರೀಕ್ಷೆಗೂ ಮೀರಿ ಅಚ್ಚುಕಟ್ಟಾಗಿ ನಿಭಾಯಿಸುತ್ತಾ ಬಂದವನನ್ನು ನಾಯಕತ್ವ ಮತ್ತೊಮ್ಮೆ ಹುಡುಕಿ ಬಂದಿದೆ.
ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಕೆ.ಎಲ್ ರಾಹುಲ್ ಭಾರತ ತಂಡದ ನಾಯಕ.
ಹಾಗೆ ನೋಡಿದರೆ ರೋಹಿತ್ ಶರ್ಮಾ ನಂತರ ನ್ಯಾಯವಾಗಿ ಭಾರತ ತಂಡದ ನಾಯಕನಾಗಬೇಕಿದ್ದವನು ರಾಹುಲ್.
ಧೋನಿ ನಾಯಕತ್ವದಲ್ಲಿ ಭಾರತ ತಂಡಕ್ಕೆ ಕಾಲಿಟ್ಟು, ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಪಳಗಿ, ರೋಹಿತ್ ಶರ್ಮಾ ಸಾರಥ್ಯದಲ್ಲಿ
ಪ್ರಬುದ್ಧನೆನಿಸಿಕೊಂಡವನು ನಾಯಕತ್ವದ ಜವಾಬ್ದಾರಿಗೆ ಹೆಗಲು ಕೊಡಲು ಸರ್ವ ಸನ್ನದ್ಧನಾಗಿ ನಿಂತಿದ್ದ.
ವಯಸ್ಸಿನ ಕಾರಣವೋ, ಕಾಣದ ಕೈಗಳ ಆಟವೋ..? ರಾಹುಲ್ ನಾಯಕತ್ವದ ಸ್ಪರ್ಧೆಯಿಂದಲೇ ಹೊರ ಬಿದ್ದು ಬಿಟ್ಟ.. ‘ಹೊರ ಬಿದ್ದ’ ಎನ್ನುವುದಕ್ಕಿಂತಲೂ ‘ಹೊರ ಹಾಕಿದರು’ ಎನ್ನುವುದೇ ಸೂಕ್ತ.
ಅವನನ್ನು ಯಾವ ರೀತಿ ಕಾಡಿದರೆಂದರೆ, ಅವನ ನೆಚ್ಚಿನ ಬ್ಯಾಟಿಂಗ್ ಕ್ರಮಾಂಕಗಳನ್ನು ಅವನಿಂದ ಕಿತ್ತುಕೊಳ್ಳಲಾಯಿತು. ಅವನದ್ದಲ್ಲದ ಜಾಗಗಳಲ್ಲಿ ಆಡಿಸಲಾಯಿತು.
ಆಟ ಬಲ್ಲವನಿಗೆ ಜಾಗ ಯಾವುದಾದರೇನು..? ಆಟಕ್ಕೆ ನಿಂತವನು ಕ್ರಿಕೆಟ್ ಜಗತ್ತೇ ತನ್ನೆಡೆಗೆ ತಿರುಗಿ ನೋಡುವಂತೆ ಆಡಿದ.. ಶರಂಪರ ದ್ವೇಷಿಸಿದವರೇ ಪ್ರೀತಿಸುವಂತೆ ಮಾಡಿದ.. ವೈಯಕ್ತಿಕ ತೇಜೋವಧೆಗಿಳಿದು ಟೀಕಿಸಿದವರು ‘ಬಿಲ’ ಸೇರುವಂತೆ ಬ್ಯಾಟ್ ಬೀಸಿದ.. ಅವನು ಮಾತನಾಡಲಿಲ್ಲ.. ಅವನ ಆಟ ಮಾತನಾಡಿತು.
ರಾಹುಲ್’ನನ್ನು ಮತ್ತೆ ಭಾರತ ತಂಡದ ನಾಯಕನಾಗಿ ನೋಡುವುದು ‘ಕನಸು’ ಎಂದುಕೊಂಡಿದ್ದೆ. ಕ್ರಿಕೆಟ್ ದೇವತೆ ಅವನಿಗೆ ಮತ್ತೊಂದು ಅವಕಾಶ ಕೊಟ್ಟಿದ್ದಾಳೆ. ದೊಡ್ಡ ದೊಡ್ಡ ಆಟಗಾರರಿಲ್ಲದ ಅನನುಭವಿ ತಂಡವನ್ನು ಮುನ್ನಡೆಸಿ ದಕ್ಷಿಣ ಆಫ್ರಿಕಾದಲ್ಲಿ ಏಕದಿನ ಸರಣಿ ಗೆದ್ದವನು ಈಗ ಮತ್ತದೇ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡದ ನಾಯಕನಾಗಿ ಆಯ್ಕೆಯಾಗಿದ್ದಾನೆ.
ರಾಹುಲ್ ಮತ್ತೆ ಮತ್ತೆ ಪ್ರಸ್ತುತನಾಗುತ್ತಲೇ ಇದ್ದಾನೆ..!
-ಸುದರ್ಶನ್
