
ಐದು ವರ್ಷಗಳ ನಂತರ ವಿಜಯ್ ಹಜಾರೆ ಟ್ರೋಫಿಯಲ್ಲಿ ಕರ್ನಾಟಕ ವಿಜಯ ಪತಾಕೆ, ಇತಿಹಾಸ ನಿರ್ಮಿಸಿದ ಮಯಾಂಕ್ ಪಡೆ
ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿಯಲ್ಲಿ ಮಯಾಂಕ್ ಅಗರ್ವಾಲ್ ನಾಯಕತ್ವದ ಕರ್ನಾಟಕ ತಂಡ ದಾಖಲೆಯ ಐದನೇ ಬಾರಿ ಚಾಂಪಿಯನ್ ಪಟ್ಟಕ್ಕೇರಿದೆ. ಈ ಮೂಲಕ ಅತೀ ಹೆಚ್ಚು ಬಾರಿ ವಿಜಯ್ ಹಜಾರೆ ಟ್ರೋಫಿ ಗೆದ್ದ ತಮಿಳುನಾಡು ತಂಡದ ದಾಖಲೆಯನ್ನು ಕರ್ನಾಟಕ ತಂಡ ಸರಿಗಟ್ಟಿದೆ.
ವಡೋದರದಲ್ಲಿ ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ ವಿದರ್ಭ ತಂಡವನ್ನು 36 ರನ್’ಗಳಿಂದ ಸೋಲಿಸಿ ಐದು ವರ್ಷಗಳ ನಂತರ ಚಾಂಪಿಯನ್ ಪಟ್ಟಕ್ಕೇರಿತು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಕರ್ನಾಟಕ ಸ್ಮರಣ್ ರವಿಚಂದ್ರನ್ ಬಾರಿಸಿದ ಅಮೋಘ ಶತಕ, ಕಷ್ಣನ್ ಶ್ರೀಜಿತ್ ಅರ್ಧಶತಕ ಹಾಗೂ ಅಭಿನವ್ ಮನೋಹರ್ ಅವರ ಸಿಡಿಲಬ್ಬರದ ಬ್ಯಾಟಿಂಗ್ ನೆರವಿನಿಂದ ನಿಗದಿತ 50 ಓವರ್’ಗಳಲ್ಲಿ 6 ವಿಕೆಟ್ ನಷ್ಟಕ್ಕೆ 348 ರನ್’ಗಳ ಬೃಹತ್ ಮೊತ್ತ ಕಲೆ ಹಾಕಿತು. ಶತಕವೀರ ಸ್ಮರಣ್ 92 ಎಸೆತಗಳಲ್ಲಿ 101 ರನ್, ವಿಕೆಟ್ ಕೀಪರ್ ಶ್ರೀಜಿತ್ 74 ಎಸೆತಗಳಲ್ಲಿ 78 ರನ್ ಮತ್ತು ಅಭಿನವ್ ಮನೋಹರ್ ಕೇವಲ 42 ಎಸೆತಗಳಲ್ಲಿ 79 ರನ್ ಸಿಡಿಸಿದರು.
ನಂತರ 349 ರನ್’ಗಳ ಕಠಿಣ ಗುರಿ ಬೆನ್ನಟ್ಟಿದ ಕರುಣ್ ನಾಯರ್ ನಾಯಕತ್ವದ ವಿದರ್ಭ 48.2 ಓವರ್’ಗಳಲ್ಲಿ 312 ರನ್’ಗಳಿಗೆ ಆಲೌಟಾಯಿತು. ಟೂರ್ನಿಯಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನವಿತ್ತ ಕರುಣ್ ನಾಯರ್ ಫೈನಲ್’ನಲ್ಲಿ ಕೇವಲ 27 ರನ್ನಿಗೆ ಔಟಾದರು. ಟೂರ್ನಿಯಲ್ಲಿ 8 ಇನ್ನಿಂಗ್ಸ್’ಗಳಿಂದ 5 ಶತಕಗಳ ಸಹಿತ 779 ರನ್ ಕಲೆ ಹಾಕಿದ ಕರುಣ್ ನಾಯರ್ ಸರಣಿಶ್ರೇಷ್ಠ ಪ್ರಶಸ್ತಿ ಪಡೆದರೆ, ಫೈನಲ್ ಪಂದ್ಯದ ಶತಕವೀರ ಸ್ಮರಣ್ ಪಂದ್ಯಶ್ರೇಷ್ಠರಾಗಿ ಮೂಡಿ ಬಂದರು.
