
ಕರಾವಳಿಗೆ ಕೀರ್ತಿ ತಂದ ಮೂಡು ಗಿಳಿಯಾರಿನ ಹುಡುಗ ಅಭಿಲಾಷ್ ಶೆಟ್ಟಿ
ಕರ್ನಾಟಕ ತಂಡ ಐದು ವರ್ಷಗಳ ನಂತರ ವಿಜಯ್ ಹಜಾರೆ ಟ್ರೋಫಿ ಗೆಲ್ಲಲು ತಂಡದ ಸಂಘಟಿತ ಪ್ರದರ್ಶನವೇ ಕಾರಣ. ಬ್ಯಾಟಿಂಗ್’ನಲ್ಲಿ ನಾಲ್ಕು ಶತಕಗಳನ್ನು ಬಾರಿಸಿದ ನಾಯಕ ಮಯಾಂಕ್ ಅಗರ್ವಾಲ್, ಸ್ಮರಣ್ ಆರ್, ದೇವದತ್ತ್ ಪಡಿಕ್ಕಲ್, ಅನೀಶ್ ಕೆ.ವಿ, ಅಭಿನವ್ ಮನೋಹರ್, ಕೆ.ಎಲ್ ಶ್ರೀಜಿತ್ ಅಮೋಘ ಪ್ರದರ್ಶನ ತೋರಿದರೆ, ಬೌಲಿಂಗ್’ನಲ್ಲಿ ವೇಗಿ ಕೌಶಿಕ್, ಪ್ರಸಿದ್ಧ್ ಕೃಷ್ಣ, ಉಪನಾಯಕ ಶ್ರೇಯಸ್ ಗೋಪಾಲ್ ಜೊತೆಗೆ ಮಿಂಚಿದ್ದಉಡುಪಿ ಜಿಲ್ಲೆಯ ಕೋಟಾದ ಮೂಡು ಗಿಳಿಯಾರಿನ ಹುಡುಗ ಅಭಿಲಾಷ್ ಶೆಟ್ಟಿ. ಎಡಗೈ ವೇಗದ ಬೌಲರ್ ಆಗಿರುವ ಅಭಿಲಾಷ್ ಶೆಟ್ಟಿ ಒಂದು ಬಾರಿ ಐದು ವಿಕೆಟ್ ಸಹಿತ ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಆಡಿದ 7 ಪಂದ್ಯಗಳಿಂದ 17 ವಿಕೆಟ್ ಪಡೆದು ಕರ್ನಾಟಕದ ಯಶಸ್ಸಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ವಿದರ್ಭ ವಿರುದ್ಧದ ಫೈನಲ್’ನಲ್ಲಿ ಮೂರು ವಿಕೆಟ್ ಪಡೆಯುವ ಮೂಲಕ ಕರ್ನಾಟಕ ತಂಡ ಚಾಂಪಿಯನ್ ಪಟ್ಟಕ್ಕೇರಲು ಕಾರಣರಾಗಿದ್ದರು. ಅಭಿಲಾಷ್ ಶೆಟ್ಟಿ ಈ ವರ್ಷ ಕರ್ನಾಟಕ ತಂಡಕ್ಕೆ ಪದಾರ್ಪಣೆ ಮಾಡಿದ್ದರು. ನವೆಂಬರ್ 6ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬಂಗಾಳ ವಿರುದ್ಧದ ಪಂದ್ಯದ ಮೂಲಕ ರಣಜಿ ಕ್ರಿಕೆಟ್’ಗೆ ಅಭಿಲಾಷ್ ಶೆಟ್ಟಿ ಕಾಲಿಟ್ಟಿದ್ದರು.
25 ವರ್ಷದ ಅಭಿಲಾಷ್ ಶೆಟ್ಟಿ 2023ರ ಮಹಾರಾಜ ಟ್ರೋಫಿ ಟೂರ್ನಿಯಲ್ಲಿ 11 ಪಂದ್ಯಗಳಿಂದ 22 ವಿಕೆಟ್ ಪಡೆದು ಟೂರ್ನಿಯಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಸಾಧನೆ ಮಾಡಿದ್ದರು. ಈ ವರ್ಷದ ಮಹಾರಾಜ ಟ್ರೋಫಿ ಟೂರ್ನಿಯಲ್ಲಿ ಮಂಗಳೂರು ಡ್ರಾಗನ್ಸ್ ಪರ 10 ಪಂದ್ಯಗಳಿಂದ 11 ವಿಕೆಟ್ ಪಡೆದು ಮಿಂಚಿದ್ದರು.
ಅಭಿಲಾಷ್ ಶೆಟ್ಟಿಗೆ ಕರ್ನಾಟಕ ಮಾಜಿ ವೇಗದ ಬೌಲರ್, ಪೀಣ್ಯ ಎಕ್ಸ್’ಪ್ರೆಸ್ ಖ್ಯಾತಿಯ ಅಭಿಮನ್ಯು ಮಿಥುನ್ ಬೌಲಿಂಗ್ ಗುರು. ಬೆಂಗಳೂರಿಗೆ ಬಂದ ನಂತರ ಮಿಥುನ್ ಅವರ ಗರಡಿಯಲ್ಲಿ ಅಭಿಲಾಷ್ ಶೆಟ್ಟಿ ಪಳಗುತ್ತಿದ್ದಾರೆ.
