SportsKannada | ಸ್ಪೋರ್ಟ್ಸ್ ಕನ್ನಡ

ಆ್ಯಕ್ಸಿಡೆಂಟಲ್ ಸ್ಪಿನ್ನರ್ 500 ಟೆಸ್ಟ್ ವಿಕೆಟ್ ಪಡೆದ ಕಥೆ..! ಈತ ಸ್ಪಿನ್ ವಿಜ್ಞಾನವನ್ನು ಪುನರ್ ನಿರ್ಮಿಸಿದ ‘ಪ್ರೊಫೆಸರ್’

“ವೇಗದ ಬೌಲರ್ ಆಗಬೇಕೆಂದು ಚೆನ್ನೈನ MRF ಪೇಸ್ ಫೌಂಡೇಶನ್’ಗೆ ಹೋಗಿದ್ದ ಸಚಿನ್ ತೆಂಡೂಲ್ಕರ್ ಬ್ಯಾಟಿಂಗ್ ದಿಗ್ಗಜನೆನಿಸಿಕೊಂಡರು”.
“ಮಧ್ಯಮ ವೇಗದ ಬೌಲರ್ ಆಗಿದ್ದ ಕನ್ನಡಿಗ ಅನಿಲ್ ಕುಂಬ್ಳೆ ಜಗತ್ತಿನ ಸಾರ್ವಕಾಲಿಕ ಶ್ರೇಷ್ಠ ಸ್ಪಿನ್ನರ್’ಗಳಲ್ಲಿ ಒಬ್ಬರು ಎನಿಸಿಕೊಂಡರು”.
ಆರಂಭಿಕ ಬ್ಯಾಟ್ಸ್’ಮನ್ ಆಗುವ ಕನಸು ಹೊತ್ತು ಕ್ರಿಕೆಟ್ ಆಡಲು ಆರಂಭಿಸಿದ್ದ ರವಿಚಂದ್ರನ್ ಅಶ್ವಿನ್ ಸ್ಪಿನ್ ಗಾರುಡಿಗನೆಂದು ಕರೆಸಿಕೊಂಡದ್ದಷ್ಟೇ ಅಲ್ಲ,  ಟೆಸ್ಟ್ ಕ್ರಿಕೆಟ್’ನಲ್ಲಿ 500 ವಿಕೆಟ್’ಗಳ ಐತಿಹಾಸಿಕ ಸಾಧನೆ ಮಾಡಿದ್ದಾರೆ.
ರಾಜ್’ಕೋಟ್’ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ ಪಂದ್ಯದ 2ನೇ ದಿನ, 500ನೇ ಟೆಸ್ಟ್ ವಿಕೆಟ್ ಮೈಲುಗಲ್ಲು ನೆಟ್ಟ ಅಶ್ವಿನ್, ದಿನದಾಟದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, “ನಾನೊಬ್ಬ ಆ್ಯಕ್ಸಿಡೆಂಟಲ್ ಸ್ಪಿನ್ನರ್” ಎಂದರು.
ಹೌದು. ರವಿಚಂದ್ರನ್ ಅಶ್ವಿನ್ ಒಬ್ಬ ಆ್ಯಕ್ಸಿಡೆಂಟಲ್ ಸ್ಪಿನ್ನರ್. ಬ್ಯಾಟ್ಸ್’ಮನ್ ಆಗಬೇಕೆಂದು ಕ್ರಿಕೆಟ್ ಆಡಿದವ ಜಗತ್ತೇ ನಿಬ್ಬೆರಗಾಗುವಂಥಾ ಆಫ್ ಸ್ಪಿನ್ನರ್ ಆಗಿ ಬಿಟ್ಟ. 500 ಟೆಸ್ಟ್ ವಿಕೆಟ್ಸ್..! ಅಬ್ಬಾ.. ಸಾಮಾನ್ಯ ಮಾತಲ್ಲ ಬಿಡಿ..!
2009ರ ಐಪಿಎಲ್ ಟೂರ್ನಿಯವರೆಗೆ ಅಶ್ವಿನ್ ಕ್ರಿಕೆಟ್ ಜಗತ್ತಿಗೆ ಅಪರಿಚಿತ. ಅಶ್ವಿನ್ ಕ್ರಿಕೆಟ್ ಬದುಕಿಗೆ ದೊಡ್ಡ ತಿರುವು ಕೊಟ್ಟದ್ದೇ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಆ ತಂಡದ ದಿಗ್ಗಜ ನಾಯಕ ಎಂ.ಎಸ್ ಧೋನಿ. ಅಶ್ವಿನ್ csk ಡ್ರೆಸ್ಸಿಂಗ್ ರೂಮ್’ಗೆ ಕಾಲಿಟ್ಟಾಗ  ಆ ಡ್ರೆಸ್ಸಿಂಗ್ ರೂಮ್’ನಲ್ಲಿ ಮುತ್ತಯ್ಯ ಮುರಳೀಧರನ್ ಎಂಬ ಚಾಂಪಿಯನ್ ಆಫ್ ಸ್ಪಿನ್ನರ್ ಇದ್ದರು. ಮುರಳಿ ನೆರಳಲ್ಲಿ ಅಶ್ವಿನ್ ಎದ್ದು ನಿಂತದ್ದೇ ಒಂದು ಅಚ್ಚರಿ. ಅಂತಹ ಅಚ್ಚರಿಗೆ ಕಾರಣವಾಗಿದ್ದು ಅಶ್ವಿನ್’ನೊಳಗೆ ಅಡಗಿದ್ದ ಕಿಚ್ಚು.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಧೋನಿ ಆಗ ಮುತ್ತಯ್ಯ ಮುರಳೀಧರನ್ ಅವರ ಬಳಿ ಹೊಸ ಚೆಂಡಿನಲ್ಲಿ ಬೌಲಿಂಗ್ ಆರಂಭಿಸುವಂತೆ ಕೇಳಿಕೊಳ್ತಾರೆ. ಚೆಂಡು ಶೈನಿಂಗ್ ಕಳೆದುಕೊಂಡ ನಂತರವೇ ಸ್ಪಿನ್ ಮೋಡಿ ತೋರಿಸುತ್ತಿದ್ದ ಮುರಳೀಧರನ್, CSK ಟೀಮ್ ಮ್ಯಾನೇಜ್ಮೆಂಟ್ ತಮ್ಮ ಮುಂದಿಟ್ಟ ಪ್ರಶ್ನೆಗೆ no ಅಂದು ಬಿಡ್ತಾರೆ. ಅವತ್ತು ಆ ಸವಾಲನ್ನು ಸ್ವೀಕರಿಸಿ ಹೊಸ ಚೆಂಡಿನಲ್ಲಿ ಆಫ್ ಸ್ಪಿನ್ ಬೌಲಿಂಗ್ ಶುರು ಮಾಡಿದವರು ಅಶ್ವಿನ್. ಕ್ಯಾಪ್ಟನ್ ಧೋನಿ ಆಗಲೇ ನಿರ್ಧರಿಸಿ ಬಿಟ್ಟಿದ್ದರು, “ಮುಂದಿನ ಆರೇಳು ವರ್ಷ ನನ್ನ ಬತ್ತಳಿಕೆಯ ಸ್ಪಿನ್ ಬ್ರಹ್ಮಾಸ್ತ್ರ ಇವನೇ” ಎಂದು.
ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಧೋನಿ ಅವರ ನಂಬಿಕೆಯನ್ನು ಉಳಿಸಿಕೊಂಡ ಅಶ್ವಿನ್, ವಿಶ್ವಾಸವನ್ನೂ ಗೆದ್ದರು. ಮುಂದೆ ಭಾರತ ಪರ ಟೆಸ್ಟ್ ಆಡುವ ಅವಕಾಶವೂ ಸಿಕ್ಕಿತು. ಆಗ ಪಂಜಾಬ್’ನ ಸ್ಪಿನ್ ಮಾಂತ್ರಿಕ ಹರ್ಭಜನ್ ಸಿಂಗ್ ಭಾರತ ತಂಡದ ಫ್ರಂಟ್ ಲೈನ್ ಸ್ಪಿನ್ನರ್ ಆಗಿದ್ದರು. ಸ್ಪೆಷಲ್ ಟ್ಯಾಲೆಂಟ್ ಇಲ್ಲದೆ ಹರ್ಭಜನ್ ಸಿಂಗ್ ಅಂಥವರನ್ನು ಹಿಂದಿಕ್ಕಿ ಮುಂದೆ ಸಾಗಲು ಸಾಧ್ಯವೇ ಇರಲಿಲ್ಲ.
ಅಶ್ವಿನ್ ಬಳಿ ಅಂಥಾ ಸ್ಪೆಷಲ್ ಟ್ಯಾಲೆಂಟ್ ಇತ್ತು. ಜೊತೆಗೆ ಧೋನಿ ಶ್ರೀರಕ್ಷೆ. ಹರ್ಭಜನ್ ಸಿಂಗ್’ರಂಥಾ ದಿಗ್ಗಜನನ್ನು ಪಕ್ಕಕ್ಕೆ ಸರಿಸಿ ಅಶ್ವಿನ್’ಗೆ ಭಾರತ ತಂಡದಲ್ಲಿ ಅವಕಾಶ ನೀಡಿದವರು ಆಗಿನ ಬಿಸಿಸಿಐ ಚೀಫ್ ಸೆಲೆಕ್ಟರ್ ಆಗಿದ್ದ ಕೃಷ್ಣಮಾಚಾರಿ ಶ್ರೀಕಾಂತ್. ಧೋನಿ ಶ್ರೀರಕ್ಷೆ, ಶ್ರೀಕಾಂತ್ ಬೆಂಬಲ ಇಲ್ಲದೇ ಹೋಗಿದ್ದರೆ ಅಶ್ವಿನ್ ಆ ಕಾಲಕ್ಕೆ ಭಾರತ ತಂಡದಲ್ಲಿ ಸ್ಥಾನ ಪಡೆಯುವುದು ಸಾಧ್ಯವಿರಲಿಲ್ಲ.
ಅಶ್ವಿನ್’ಗೆ ಅವಕಾಶಗಳು ಸಿಗಲು ಧೋನಿ ಕಾರಣರಾದರು ನಿಜ. ಆದರೆ ಪ್ರತಿಭೆಯಿಲ್ಲದೇ ಹೋಗಿದ್ದರೆ ಆ ಅವಕಾಶಗಳನ್ನು ಬಳಸಿಕೊಳ್ಳಲು ಸಾಧ್ಯವಿತ್ತೇ? ಅವಕಾಶ ಸಿಕ್ಕಂತೆಲ್ಲಾ ಅಶ್ವಿನ್ ತಮ್ಮ ಸ್ಪಿನ್ ಕೌಶಲ್ಯಗಳನ್ನು ತೋರಿಸುತ್ತಲೇ ಹೋದರು. ಭಾರತ ತಂಡದ ಯಶಸ್ಸಿಗೆ ಕೈ ಜೋಡಿಸುತ್ತಾ ಸಾಗಿದರು. ಏಷ್ಯಾ ಉಪಖಂಡದಲ್ಲಿ ಆಡುವ ಸಂದರ್ಭದಲ್ಲಂತೂ ತಂಡದ ವಿಜಯಶಿಲ್ಪಿಯೇ ಆಗಿ ಹೋದರು. ಕ್ರಮಣ ಎಂ.ಎಸ್ ಧೋನಿ ಪ್ರಭಾವಳಿಯಿಂದ ಹೊರ ಬಂದು ವಿಶ್ವದ ಶ್ರೇಷ್ಠ ಆಫ್ ಸ್ಪಿನ್ನರ್’ಗಳಲ್ಲಿ ಒಬ್ಬರು ಎನ್ನುವಷ್ಟರ ಮಟ್ಟಿಗೆ ಬೆಳೆದು ನಿಂತದ್ದು ಅಶ್ವಿನ್ greatness.
He is the Professor of spin bowling.
ಸ್ರಿನ್ ಬೌಲಿಂಗ್’ನಲ್ಲಿ ಅಶ್ವಿನ್ ಗಳಿಸಿದ ಪಾಂಡಿತ್ಯ ನಿಜಕ್ಕೂ ಬೆರಗು ಹುಟ್ಟಿಸುತ್ತದೆ. ಅಶ್ವಿನ್ ಬೌಲಿಂಗ್ ಅಂದ್ರೆ ಅದು ಸದಾ ಹರಿಯುವ ನೀರು. ಸಾಂಪ್ರದಾಯಿಕ ಆಫ್ ಸ್ಪಿನ್ನರ್ ಆಗಿ ಉಳಿಯದೆ, ಬೌಲಿಂಗ್’ನಲ್ಲಿ ಕಂಡುಕೊಂಡ ವೈವಿಧ್ಯತೆ ಅಶ್ರಿನ್ versatile ಸ್ಪಿನ್ನರ್ ಆಗಲು ಕಾರಣವಾಯಿತು.
ಭಾರತ ತಂಡದ ಡ್ಯೂಟಿ ಇಲ್ಲದ ಸಮಯದಲ್ಲಿ ಅಶ್ವಿನ್ ಈಗಲೂ ಚೆನ್ನೈನಲ್ಲಿ ಕ್ಲಬ್ ಕ್ರಿಕೆಟ್ ಆಡುತ್ತಾರೆ. ಅಲ್ಲೇ ಆಡುತ್ತಾ ಕೇರಂ ಬಾಲ್ ಎಂಬ ಅಸ್ತ್ರವನ್ನು ಕರಗತ ಮಾಡಿಕೊಂಡು ಮುಂದಿನ ಟೆಸ್ಟ್ ಸರಣಿಯಲ್ಲಿ ಅದನ್ನು ಪ್ರಯೋಗಿಸಿ ಸೈ ಎನಿಸಿಕೊಂಡಿದ್ದರು.
ಅಶ್ವಿನ್ ಆಫ್ ಸ್ಪಿನ್ ಬೌಲಿಂಗ್’ನ ಎಲ್ಲಾ ಪರಿಧಿಗಳನ್ನು ಮೀರಿ ಬೆಳೆದ ಸ್ಪಿನ್ನರ್. ಮೈದಾನದಲ್ಲಿರಲಿ, ಡ್ರೆಸ್ಸಿಂಗ್ ರೂಮ್’ನಲ್ಲಿ ಅಥವಾ ಮನೆಯಲ್ಲಿ ಕೂತು ಕ್ರಿಕೆಟ್ ಪಂದ್ಯಗಳನ್ನು ವೀಕ್ಷಿಸುತ್ತಿರಲಿ.. ಅಶ್ವಿನ್ ಮೆದುಳು ಕೆಲಸ ಮಾಡುತ್ತಲೇ ಇರುತ್ತದೆ. ತನ್ನ ಬೌಲಿಂಗ್’ನ್ನು ಹೇಗೆ improvise ಮಾಡಬಹುದು ಎಂದು ಅಶ್ವಿನ್ ಯೋಚಿಸುತ್ತಲೇ ಇರುತ್ತಾರೆ.
He’s a student of the game His strength is he always needs to re-learn, re-develop and try out new things,”
ಇದೇ ರವಿಚಂದ್ರನ್ ಅಶ್ವಿನ್ ಯಶಸ್ಸಿನ ಗುಟ್ಟು.
#RavichandranAshwin
Exit mobile version