Site icon SportsKannada ಸ್ಪೋರ್ಟ್ಸ್ ಕನ್ನಡ

ರಣಜಿ ಪಾದಾರ್ಪಣೆ ಪಂದ್ಯದಲ್ಲೇ ಮಿಂಚಿದ ಕುಂದಾಪುರದ ಶಿಖರ್ ಶೆಟ್ಟಿ

ರಣಜಿ ಪಾದಾರ್ಪಣೆ ಪಂದ್ಯದಲ್ಲೇ ಮಿಂಚಿದ ಕುಂದಾಪುರದ ಶಿಖರ್ ಶೆಟ್ಟಿ

ರಣಜಿ ಟ್ರೋಫಿಗೆ ಪಾದಾರ್ಪಣೆ ಮಾಡಿರುವ ಕುಂದಾಪುರದ ಯುವ ಎಡಗೈ ಸ್ಪಿನ್ನರ್ ಶಿಖರ್ ಶೆಟ್ಟಿ ಆಡಿದ ಚೊಚ್ಚಲ ಪಂದ್ಯದಲ್ಲೇ ಬ್ಯಾಟಿಂಗ್’ನಲ್ಲಿ ಮಿಂಚಿದ್ದಾರೆ.

ಸೌರಾಷ್ಟ್ರ ವಿರುದ್ಧ ರಾಜ್’ಕೋಟ್’ನಲ್ಲಿ ನಡೆಯುತ್ತಿರುವ ಪಂದ್ಯದ 2ನೇ ದಿನ 9ನೇ ಕ್ರಮಾಂಕದಲ್ಲಿ ಕ್ರೀಸ್’ಗಿಳಿದ ಶಿಖರ್ ಶೆಟ್ಟಿ 57 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್’ಗಳ ನೆರವಿನಿಂದ 41 ರನ್ ಗಳಿಸಿದರು. 10ನೇ ವಿಕೆಟ್’ಗೆ ಕುಂದಾಪುರದ ಮತ್ತೊಬ್ಬ ಹುಡುಗ ಅಭಿಲಾಷ್ ಶೆಟ್ಟಿ ಜೊತೆ 47 ರನ್’ಗಳ ಜೊತೆಯಾಟವಾಡಿದ ಶಿಖರ್ ಶೆಟ್ಟಿ ಕರ್ನಾಟಕದ ಮೊತ್ತ 370ರ ಗಡಿ ದಾಟಲು ಕಾರಣರಾದರು. ದೇವದತ್ ಪಡಿಕಲ್ 96 ರನ್, ಕರುಣ್ ನಾಯರ್ 73 ರನ್, ಸ್ಮರಣ್ ರವಿಚಂದ್ರನ್ 77 ರನ್, ಶ್ರೇಯಸ್ ಗೋಪಾಲ್ 56 ರನ್ ಮತ್ತು ಶಿಖರ್ ಶೆಟ್ಟಿ ಗಳಿಸಿದ 41 ರನ್’ಗಳ ನೆರವಿನಿಂದ ಕರ್ನಾಟಕ ತಂಡ ತನ್ನ ಪ್ರಥಮ ಇನ್ನಿಂಗ್ಸ್’ನಲ್ಲಿ 373 ರನ್’ಗಳಿಗೆ ಆಲೌಟಾಯಿತು. 

ಇದಕ್ಕೆ ಪ್ರತಿಯಾಗಿ ಆತಿಥೇಯ ಸೌರಾಷ್ಟ್ರ ತಂಡ 2ನೇ ದಿನದಂತ್ಯಕ್ಕೆ ತನ್ನ ಪ್ರಥಮ ಇನ್ನಿಂಗ್ಸ್’ನಲ್ಲಿ 4 ವಿಕೆಟ್ ನಷ್ಟಕ್ಕೆ 200 ರನ್ ಗಳಿಸಿದೆ. 

ಸೌರಾಷ್ಟ್ರ ವಿರುದ್ಧದ ರಣಜಿ ಟ್ರೋಫಿ ಪಂದ್ಯದ ಮೂಲಕ ಪ್ರಥಮದರ್ಜೆ ಕ್ರಿಕೆಟ್’ಗೆ ಪಾದಾರ್ಪಣೆ ಮಾಡಿದ 20 ವರ್ಷದ ಶಿಖರ್ ಶೆಟ್ಟಿ ಎಡಗೈ ಸ್ಪಿನ್ನರ್ ಹಾಗೂ ಬಲಗೈ ಬ್ಯಾಟರ್. ಅಂಡರ್-19 ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ತೋರಿ ಇದೀಗ ಕರ್ನಾಟಕ ಸೀನಿಯರ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಆ ಬಾರಿಯ ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಶಿಖರ್ ಶೆಟ್ಟಿ ಮೈಸೂರು ವಾರಿಯರ್ಸ್ ತಂಡದ ಪರ ಆಡಿದ್ದರು. ಅದಕ್ಕೂ ಮುನ್ನ ಬೆಂಗಳೂರು ಬ್ಲಾಸ್ಟರ್ಸ್ ಮತ್ತು ಹುಬ್ಬಳ್ಳಿ ಟೈಗರ್ಸ್ ತಂಡದಲ್ಲಿದ್ದರು.

ಶಿಖರ್ ಶೆಟ್ಟಿ ಕುಂದಾಪುರದ ಸೌಡ ಗ್ರಾಮದ ರಾಜೇಶ್ ಶೆಟ್ಟಿ ಹಾಗೂ ಮಂಗಳೂರು ಮೂಲದ ವಚನಾ ದಂಪತಿಯ ಪುತ್ರ. ರಾಜೇಶ್ ಶೆಟ್ಟಿ ಬೆಂಗಳೂರಿನಲ್ಲಿ ಕ್ರೀಡಾ ಸಲಕರಣೆಗಳ ಉದ್ಯಮ ನಡೆಸುತ್ತಿದ್ದಾರೆ.

Exit mobile version