SportsKannada | ಸ್ಪೋರ್ಟ್ಸ್ ಕನ್ನಡ

” ನವ” ಕಿರಣದ ಆಶಾಕಿರಣ- ಬ್ರಹ್ಮಾವರದ ಉಮೇಶ್ ಪೂಜಾರಿ

ಮಾನವೀಯ ಮೌಲ್ಯ ಮೆರೆದ ವೀಕ್ಷಕ ವಿವರಣೆಕಾರರು

“ಪರೋಪಕಾರಂ ಮಿದಂ ಶರೀರಂ”
ಜೀವನ ಅಂದರೆ ಅದು ನನಗಾಗಿ ಅಥವಾ ನಮಗಾಗಿ ಮಾತ್ರ ಅಲ್ಲ ಬೇರೊಬ್ಬರಿಗೆ ಸಹಾಯ ಮಾಡುತ್ತಲೇ ಬದುಕುವುದು ನಿಜವಾದ ಬದುಕು ಅನ್ನುವುದನ್ನು ತೋರಿಸಿ ಕೊಟ್ಟ ಆಪತ್ಭಾಂಧವ ಬ್ರಹ್ಮಾವರ ಮೂಲದ ಚಾಂತಾರಿನ ಉಮೇಶ್ ಪೂಜಾರಿ.

ಆರು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಉದ್ಯೋಗದಲ್ಲಿ ಇದ್ದಾಗ ಫ್ಲೈ ಓವರ್ ಒಂದರಲ್ಲಿ ನವದಂಪತಿಗಳು ಬೈಕನ್ನು ತಳ್ಳಿಕೊಂಡು ಹೋಗುವುದನ್ನು ನೋಡಿ ಮನ ಮರುಗಿ ಅಸಹಾಯಕ ಸ್ಥಿತಿಯಲ್ಲಿ ಕೂಡ ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿದ ಇವರಿಗೆ ಆಗ ಯೋಚನೆಗೆ ಬಂದ ವಿಷಯವೇ ಇನ್ನು ಮುಂದೆ ತನ್ನ ಬೈಕ್ ನಲ್ಲಿ ಹೆಚ್ಚುವರಿಯಾಗಿ ಪೆಟ್ರೋಲ್ ಇಟ್ಟು ಕೊಳ್ಳಬೇಕು ಅನ್ನುವ ಯೋಚನೆ.
ಅಂತಹ ಯೋಚನೆಯಿಂದಲೇ ಇಂದು ಪೆಟ್ರೋಲ್ ದಾನಿಯಾಗಿ ಒಬ್ಬ “ಪೆಟ್ರೋಲ್ ಆಪತ್ಭಾಂಧವ” ಅನ್ನಿಸಿಕೊಂಡಿದ್ದಾರೆ.
ಪೆಟ್ರೋಲ್ ಖಾಲಿಯಾಗಿ ಬೈಕ್ ನ್ನು ತಳ್ಳಿಕೊಂಡು ಹೋಗಬೇಕು ಅನ್ನುವಷ್ಟರಲ್ಲಿ ಬಾಟಲಿಯಲ್ಲಿ ಪೆಟ್ರೋಲ್ ಹಿಡಿದು ಬರುವ ಒಬ್ಬ ಸಮಾಜ ಸೇವಕ. ಉಚಿತವಾಗಿ ಪೆಟ್ರೋಲ್ ನೀಡುವ ಇವರು ಅರ್ಧ ಲೀಟರ್ ಪೆಟ್ರೋಲ್ ನ್ನು ತನ್ನ ಬೈಕ್ ನಲ್ಲಿ ಸದಾ ಇಟ್ಟು ಕೊಂಡಿರುತ್ತಾರೆ.

ಬೆಂಗಳೂರಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ 100 ಜನರಿಗೂ ಮಿಕ್ಕಿ ಸಹಾಯ ಮಾಡಿದ್ದು ಅಲ್ಲದೆ ಅದೇ ಪ್ರೇರಣೆಯಿಂದ ಊರಿಗೆ ಬಂದ ಸಂದರ್ಭದಲ್ಲಿ 300 ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಜನರಿಗೆ ಉಚಿತವಾಗಿ ನೆರವು ನೀಡಿದ ಹೆಮ್ಮೆ ಇವರದ್ದು.
ವೃತ್ತಿಯಲ್ಲಿ ಬಾವಿ ಗುತ್ತಿಗೆ ಕೆಲಸ ಮಾಡುವ ಇವರು ಕೆಲಸದ ನಿಮಿತ್ತ ಹೊರಗೆ ಹೋದಾಗ ಗ್ರಾಮಾಂತರ ಪ್ರದೇಶದ ಅದೆಷ್ಟೋ ಮಂದಿಗೆ ಸಹಾಯ ಮಾಡಿದ್ದು ಅಲ್ಲದೆ, ಸೇವೆಯನ್ನು ಅಷ್ಟಕ್ಕೆ ನಿಲ್ಲಿಸದೆ ಅನೇಕ ಬಡ ಕುಟುಂಬಗಳಿಗೆ ರೇಷನ್ ವಸ್ತುಗಳನ್ನು ಅವರ ಮನೆಗೆ ತಮ್ಮ ಬೈಕ್ ನಲ್ಲಿ ತಲುಪಿಸುವಲ್ಲಿ ಸಹಾಯ ಮಾಡಿರುತ್ತಾರೆ. ಅಲ್ಲದೆ ಬಡ ಕುಟುಂಬಗಳಿಗೆ ಸರಕಾರದಿಂದ ಸೌಲಭ್ಯ ದೊರಕಿಸುವಲ್ಲಿ ನೆರವಾಗುತ್ತ ಅದರ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಸಹಾಯಕರಾಗಿದ್ದಾರೆ.

ರಕ್ತದಾನ, ನೇತ್ರದಾನ ಮೂಲಕ ಸಹಾಯ ಮಾಡುವ ಅನೇಕ ಜನರ ನಡುವೆ ವಿಭಿನ್ನ ರೀತಿಯಲ್ಲಿ ಉಚಿತವಾಗಿ ಪೆಟ್ರೋಲ್ ನೀಡುವ ಮೂಲಕ ಆಪತ್ಭಾಂಧವ ಅನಿಸಿಕೊಂಡಿರುವ ಇವರು ಬಹುಮುಖ ಪ್ರತಿಭೆ.

ಕ್ರಿಕೆಟ್ ಕ್ಷೇತ್ರದಲ್ಲಿ ವೀಕ್ಷಕ ವಿವರಣೆಕಾರರಾಗಿ ಕರ್ನಾಟಕ, ಗೋವಾ, ಮಹಾರಾಷ್ಟ್ರ ಸೇರಿದಂತೆ ದೂರದ ಮಲೇಷ್ಯಾದಲ್ಲಿ ಕಾಮೆಂಟ್ರಿ ನೀಡಲು ತೆರಳಿದ ಮೊದಲ ಕನ್ನಡಿಗ ಅನ್ನುವ ಕೀರ್ತಿ ಇವರಿಗೆ ಸಲ್ಲುತ್ತದೆ.
ನಾಟಕದಲ್ಲಿ ಸಕ್ರಿಯ ಪಾತ್ರ ವಹಿಸಿದ ಇವರು ಯಕ್ಷಗಾನ ಕ್ಷೇತ್ರದಲ್ಲಿ ಹಾಸ್ಯ ಕಲಾವಿದರಾಗಿ ಗುರುತಿಸಿಕೊಂಡು ಯಕ್ಷಗಾನದ ಮೈಕ್ ಪ್ರಚಾರಕರಾಗಿ
ತೊಡಗಿಸಿಕೊಂಡವರು.

“ಒಂಬತ್ತು ” ಅಂದರೆ “ನವ” ಅದನ್ನೇ ಗುರುತರವಾಗಿ ಇಟ್ಟುಕೊಂಡು ಒಂಬತ್ತು ಜನರಿಂದ ಸ್ಥಾಪಿತಗೊಂಡು, ಪ್ರತಿ ವರ್ಷ ಒಂಬತ್ತು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಅದರ ಜೊತೆಗೆ ಒಂಬತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಮಾಡುವ ಮೂಲಕ ಗುರುತಿಸಿ ಕೊಂಡ ಇವರು “ನವ ಕಿರಣ್” ಕ್ರೀಡಾ ಹಾಗೂ ಸಾಂಸ್ಕೃತಿಕ ಸಂಘದ ಸ್ಥಾಪಕ. ಕಳೆದ 25 ವರ್ಷಗಳಿಂದ ತನ್ನನ್ನು ತಾನು ಈ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಇವರು ಕ್ರಿಕೆಟ್ ನ 54 ನಿಯಮಗಳನ್ನು ನಿರರ್ಗಳ ವಾಗಿ ಹೇಳುವ ಸಾಮರ್ಥ್ಯ ಹೊಂದಿರುವ ಇವರು ಪ್ರತಿ ವರ್ಷ ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ ದಿವಂಗತ ಶಂಕರ್ ನಾಗ್ ಮತ್ತು ದಿವಂಗತ ವಿಷ್ಣುವರ್ಧನ್ ಸ್ಮರಣಾರ್ಥ ನಡೆಯುವ” ವಿಷ್ಣು ಶಂಕರ್” ಟ್ರೋಫಿಯ ವೀಕ್ಷಕ ವಿವರಣೆಕಾರರಾಗಿ ಸೇವೆ ಮಾಡಿದವರು. ಬಡ ಸಂಸ್ಥೆಗಳಿಗೆ ಉಚಿತ ಕಾಮೆಂಟ್ರಿ ಸೇವೆ ಸಲ್ಲಿಸುತ್ತಿರುವ ಇವರು ವಿಕಲಚೇತನರು, ಅಂಧರು ಮಂಗಳಮುಖಿಯರು ಮಕ್ಕಳಿಗಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿದವರು.


ಸಮಾಜಕ್ಕೆ ತಾನು ಇನ್ನೇನು ಮಾಡಬಹುದು ಅನ್ನುವ ನಿಟ್ಟಿನಲ್ಲಿ ಯೋಚಿಸುವ ಜನ ಸೇವಕ. ಜನಸ್ನೇಹಿ ಕಾರ್ಯಗಳನ್ನು ಕನಸಾಗಿ ಇಟ್ಟು ಕೊಂಡ ಇವರು ಮುಂದಿನ ದಿನಗಳಲ್ಲಿ ಶಾಲಾ ಮಕ್ಕಳಿಗೆ ಉಚಿತವಾಗಿ ಸೈಕಲ್ ಗೆ ಗಾಳಿ ಹಾಕಲು ಪಂಪ್ ಒದಗಿಸುವ ಯೋಜನೆಯನ್ನು ಇಟ್ಟುಕೊಂಡಿದ್ದಾರೆ.


ಅನೇಕ ಕಾರ್ಯಕ್ರಮಗಳನ್ನು ಸಂಘಟಿಸಿದ ಇವರು ಈಗ ಕೊರೋನ ಪೀಡಿತ ಪ್ರದೇಶಗಳಲ್ಲಿ ಅಲ್ಲಿಯ ಜನರಿಗೆ ಹಾಲು, ತರಕಾರಿ, ಬಿಸ್ಕತ್ತು ಹಿಡಿದುಕೊಂಡು ಹೋಗುವ ಹೃದಯ ವೈಶಾಲ್ಯ ಹೊಂದಿರುವ ವ್ಯಕ್ತಿ.
ಅವರೇ ಹೇಳುವ ಹಾಗೆ ಯಾವುದೇ ಕೆಲಸವನ್ನೇ ಆಗಲಿ ಪ್ರೀತಿಯಿಂದ ಮನಸು ತುಂಬಿ ಮಾಡಿದಾಗ ಅದರ ಪರಿಣಾಮ ಉತ್ತಮವಾಗಿರುತ್ತದೆ. ಇಂತಹ ಇನ್ನಷ್ಟು ಉತ್ತಮ ಕೆಲಸಗಳು ಇವರಿಂದ ಸಮಾಜಕ್ಕೆ ದೊರಕುವಂತಾಗಲಿ. ಇವರ ಪ್ರೇರಣೆ ಪಡೆದು ಮತ್ತಷ್ಟು ಸಮಾಜ ಸೇವಕರು ಮೂಡಿ ಬರಲಿ ಅನ್ನುವ ಹಾರೈಕೆ.

Exit mobile version