
ಸಭ್ಯ ಕ್ರಿಕೆಟಿಗನ ವಿಚಿತ್ರ ಸೆಲೆಬ್ರೇಷನ್
ವಿರಾಟ್ ಕೊಹ್ಲಿ ಬಿಟ್ಟರೆ ಕರ್ನಾಟಕದ ಕೆ.ಎಲ್.ರಾಹುಲ್ ನನ್ನ ಪ್ರೀತಿಯ ಆಟಗಾರ. ಕೊಹ್ಲಿಯಂತೆ ಪ್ರತಿಭೆಯ ಗಣಿ ಈತ. ಆಡುವ ಶೈಲಿಯಂತೂ ಅತ್ಯಂತ ಆಕರ್ಷಕ. ಎಲ್ಲಾ ಮಾದರಿಯ ಕ್ರಿಕೆಟ್ ಗೆ ಹೇಳಿ ಮಾಡಿಸಿದ ಆಟಗಾರ. ಅಷ್ಟೇ ಅಲ್ಲ ಅಪ್ಪಟ ಟೀಂ ಮ್ಯಾನ್ ಕೂಡ. ತಂಡದ ಸಲುವಾಗಿ ಯಾವ ಕೆಲಸವನ್ನೂ ಮಾಡಬಲ್ಲ ಆಟಗಾರ.ವಿಕೆಟ್ ಕೀಪರ್ ಆಗಿ ಕರ್ತವ್ಯ ನಿರ್ವಹಿಸಿ,ಓಪನಿಂಗ್ ಗೂ ಸೈ ಅನ್ನುವವ, ಮಾದ್ಯಮ ಕ್ರಮಾಂಕಕ್ಕೂ ಸೈ, ಫಿನಿಶರ್ ಆಗಿ ಬರಬೇಕು, ಅದಕ್ಕೆ ಕೂಡ ಅಸ್ತು ಎನ್ನುವವ.ಕ್ರಿಕೆಟ್ ಜಗತ್ತಿನಲ್ಲಿ ಇಷ್ಟು ಫ್ಲೆಕ್ಸಿಬಲ್ ಆಟಗಾರ ಮತ್ತೊಬ್ಬ ಇರಲಿಕ್ಕಿಲ್ಲ.ಈ ದಿಶೆಯಲ್ಲಿ ನೋಡಿದರೆ ಕೊಹ್ಲಿಗಿಂತ ಒಂದು ಹಿಡಿ ಜಾಸ್ತಿಯೇ ತೂಗುವವ ಈ ರಾಹುಲ್.
ಪ್ರತಿ ಐಪಿಎಲ್ ಸೀಸನ್ ನಲ್ಲಿ ಆರೆಂಜ್ ಕ್ಯಾಪ್ ಗೆ ಇವನೊಬ್ಬ ಸ್ಪರ್ಧಿ. ಇನ್ನೂರಕ್ಕೂ ಮಿಕ್ಕಿ ರನ್ ಗಳನ್ನು ಹೆಚ್ಚು ಕಡಿಮೆ ಎಲ್ಲಾ ಸೀಸನ್ ನಲ್ಲಿ ಹೊಡೆಯುತ್ತಾ ಬಂದವಾ.
ಈ ಹಿಂದೆ ಆರ್ಸಿಬಿ ಪರವಾಗಿ ಕೂಡ ಆಡಿದವ.ಗೈಲ್, ಎಬಿಡಿ, ಇರುವಾಗ ಕೊಹ್ಲಿ ಜೊತೆಗೆ ಓಪನಿಂಗ್ ಬಂದು ಪರಿಣಾಮಕಾರಿ ಆಟ ಆಡಿದವ.ಇಷ್ಟೆಲ್ಲಾ ಹಿನ್ನೆಲೆ ಇದ್ದ ರಾಹುಲ್ ನಿನ್ನೆಯ ದಿನ ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಅದ್ಭುತವಾಗಿ ಆಡಿ ತಂಡವನ್ನು ಜಯಿಸಿ ಕೊಟ್ಟ ಬಳಿಕ ಮಾಡಿದ ವಿಚಿತ್ರ ಸೆಲೆಬ್ರೇಷನ್ ನನಗಂತೂ ಬೇಸರ ತರಿಸಿದೆ.
ಈ ಬಾರಿ ಆರ್ಸಿಬಿ ಪರವಾಗಿ ಆಡುವ ಆಕಾಂಕ್ಷೆ ಇತ್ತಂತೆ ರಾಹುಲ್ ಗೆ. ಆದರೆ ಆಕ್ಷನ್ ನಲ್ಲಿ ರಾಹುಲ್ ಅನ್ನು ಆರ್ಸಿಬಿಯವರಿಗೆ ಪಡೆಯಲಾಗಲಿಲ್ಲ. ಅದನ್ನು ಈ ರೀತಿಯಾಗಿ ಪ್ರದರ್ಶಿಸುವ ಅಗತ್ಯ ಖಂಡಿತಾ ಇರಲಿಲ್ಲ.
ಆತನೊಳಗೊಂದು ಕಿಚ್ಚಿತ್ತು..ಅದು ಹೊರಗೆ ಬಂತು ಅಂತ ಅವನನ್ನು ಸಮರ್ಥಿಸುವವರು ಆಡಬಹುದು. ಆದರೆ ಇದೇ ರಾಹುಲ್ ಬೇಕಾದ ಸಂದರ್ಭದಲ್ಲಿ ಕೈ ಕೊಟ್ಟ ಸಂದರ್ಭಗಳನ್ನು ಅವರು ನೆನಪು ಮಾಡಿಕೊಳ್ಳಬೇಕು.
2016 ಆರ್ಸಿಬಿ ಅಪರೂಪಕ್ಕೆ ಫೈನಲ್ ಗೆ ಬಂದಿತ್ತು.. ಫೈನಲ್ ಪಂದ್ಯ ನಡೆದಿದ್ದು ಕೂಡ ಇದೇ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ.
ಹೈದರಾಬಾದ್ ವಿರುದ್ಧದ ಆ ಪಂದ್ಯದಲ್ಲಿ ಚೇಸಿಂಗ್ ವೇಳೆ ಕ್ರಿಸ್ ಗೇಲ್ ಅಬ್ಬರಿಸಿ ಬೊಬ್ಬಿರುತ್ತಿರುವ ಕಾಲಕ್ಕೆ ಇದೇ ರಾಹುಲ್ ಸಹಕಾರ ನೀಡಿ ಆರ್ಸಿಬಿ ಯನ್ನು ಗೆಲ್ಲಿಸಿ ಆರ್ಸಿಬಿ ಗೆ ಮೊದಲ ಐಪಿಎಲ್ ದೊರಕಿಸಿ ಕೊಟ್ಟು ಬ್ಯಾಟ್ ನಿಂದ ಗೆರೆ ಹಾಕಿ, ಅದನ್ನು ಹುಗಿದು ಈ ಅಡ್ಡಾ ನನ್ನದು ಅಂದಿದ್ದರೇ ಇಡೀ ಕ್ರೀಡಾ ಲೋಕ ಶಾಶ್ವತವಾಗಿ ನೆನಪಿಟ್ಟುಕೊಳ್ಳುತಿತ್ತು.
ಕಳೆದ ವರ್ಷ ನಡೆದ ಏಕದಿನ ವಿಶ್ವಕಪ್ ನಲ್ಲಿ ಅರ್ಧ ಶತಕ ಗಳಿಸಿದ ಬಳಿಕ ನಿಂತು ಆಡಿ
ಶತಕ ಗಳಿಸಿ ಒಂದು ಗೌರವಾರ್ಹ ಮೊತ್ತ ಗಳಿಸಿಕೊಟ್ಟು ಗೆರೆ ಹಾಕಿ ಬ್ಯಾಟ್ ಊರಿ ಆಸ್ಟ್ರೇಲಿಯಾ ಆಟಗಾರರಿಗೆ ಅಹಮದಾಬಾದ್ ನನ್ನ ದೇಶದ ಕ್ರೀಡಾಂಗಣ ಎಂದು ತೋರಿಸಿದ್ದರೇ, ಆಗ ಕೂಡಾ ಕ್ರಿಕೆಟ್ ಪ್ರೇಮಿಗಳು ನೆನಪಿಟ್ಟುಕೊಂಡು ರಾಹುಲ್ ನನ್ನು ಕೊಂಡಾಡುತ್ತಿದ್ದರು.
ಹಾಗೇ ತೀರಾ ಇತ್ತೀಚೆಗೆ ನಡೆದ ಭಾರತ ನ್ಯೂಜಿಲೆಂಡ್ ನಡುವಣ ಟೆಸ್ಟ್ ಸರಣಿ.
ಇದೇ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ನಡೆದ ಪ್ರಥಮ ಟೆಸ್ಟ್.
ಮೊದಲ ಇನಿಂಗ್ಸ್ ನಲ್ಲಿ ನಿಕೃಷ್ಟವಾಗಿ ಆಡಿದ ಭಾರತ ಕೇವಲ 46 ಕ್ಕೆ ಆಲೌಟ್.. ಅದರಲ್ಲಿ ಈ ಮಹಾನುಭಾವನ ಕೊಡುಗೆ ಸೊನ್ನೆ.
ಅದಕ್ಕೆ ಉತ್ತರವಾಗಿ ನ್ಯೂಜಿಲೆಂಡ್ 402 ಗಳಿಸಿತು. ಎರಡನೇ ಇನ್ನಿಂಗ್ಸ್ ನಲ್ಲಿ ದಿಟ್ಟ ಉತ್ತರ ನೀಡಿದ ಭಾರತ ಸರ್ಫರಾಜ್ ಖಾನ್ ಮತ್ತು ರಿಷಭ್ ಪಂತರ ಅದ್ಭುತ ಆಟದಿಂದ ಒಂದು ಹಂತದಲ್ಲಿ 408 /4 ರ ಸ್ಥಿತಿಯಲ್ಲಿ ಇತ್ತು. ರಿಷಭ್ 99 ರನ್ ಗಳಿಸಿ ಔಟಾದಾಗ ಇದೇ ರಾಹುಲ್ ಕ್ರೀಸ್ ಗೆ ಬಂದಿದ್ದು.ನಾಲ್ಕನೆ ದಿನದ ಕೊನೆಯ ಸೆಷನ್ ಅದು.
ವಿಕೆಟ್ ಕಳೆದುಕೊಳ್ಳದೇ ಆ ಸೆಷನ್ ಪೂರ್ಣವಾಗಿ ನಿಂತು ಮಾರನೆಯ ದಿನ ಅಂದರೆ ಟೆಸ್ಟ್ ನಾ ಕೊನೆಯ ದಿನಕ್ಕೆ ತರುವ ಜವಾಬ್ದಾರಿ ಇದೇ ರಾಹುಲ್ ಮೇಲಿತ್ತು. ಈತ ಮಾಡಿದ್ದಾದರೂ ಏನು !!?
ಅನಗತ್ಯ ಹೊಡೆತಕ್ಕೆ ಕೈ ಹಾಕಿ ವಿಕೆಟ್ ಒಪ್ಪಿಸಿ 408/4 ರಲ್ಲಿ ಭಾರತ 462 ಕ್ಕೆ ಆಲೌಟ್ ಆಗುವಂತೆ ಮಾಡಿದ. ಭಾರತ ಆ ಟೆಸ್ಟ್ ಅನ್ನು ಡ್ರಾ ಮಾಡಿಕೊಂಡಿದ್ದರೆ ನ್ಯೂಜಿಲೆಂಡ್ ಎದುರು ತವರಿನ ಸರಣಿ ಸೋಲುತ್ತಿರಲಿಲ್ಲ.
ಅಷ್ಟೇ ಅಲ್ಲ ಬರುವ ಜೂನ್ ನಲ್ಲಿ ನಡೆಯುವ ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್ ನ ಫೈನಲ್ ನಲ್ಲಿ ಆಡುವ ಅವಕಾಶವನ್ನು ಪಡೆದುಕೊಳ್ಳುತಿತ್ತು.
ಅಂದು ಚಿನ್ನಸ್ವಾಮಿಯಲ್ಲಿ ಶತಕವೋ, ಅರ್ಧ ಶತಕವೋ ಗಳಿಸಿ, ಮ್ಯಾಚ್ ಉಳಿಸಿ .. ಗೆರೆ ಹಾಕಿ, ಬ್ಯಾಟ್ ಅನ್ನು ಗ್ರೌಂಡ್ ನಲ್ಲಿ ಹುಗಿದು
ಇದು ನನ್ನ ಅಡ್ಡ..ನಾನಿಲ್ಲೇ ಆಡಿ ಬೆಳೆದವನು ಎಂದು ನ್ಯೂಜಿಲೆಂಡ್ ತಂಡದ ಆಟಗಾರರಿಗೆ ತೋರಿಸಿದ್ದರೇ ಭಾರತದ ಕ್ರಿಕೆಟ್ ಪ್ರೇಮಿಗಳು ಸದಾ ನೆನಪಿಟ್ಟುಕೊಳ್ಳುತ್ತಿದ್ದರು.
ಅಂತಹ ಅಗತ್ಯ ಸಂದರ್ಭಗಳಲ್ಲಿ ಮಾಡದೇ ಐಪಿಎಲ್ ನ ಒಂದು ಲೀಗ್ ಪಂದ್ಯವನ್ನು ಜಯಿಸಿದ ಬಳಿಕ ಮಾಡಿದ ಸೆಲೆಬ್ರೇಷನ್ ನಿಜಕ್ಕೂ ರಾಹುಲ್ ಅಂತಹ ಕ್ರಿಕೆಟ್ ನ ನೈಜ ಪ್ರತಿಭೆಗೆ ಶೋಭೆ ತರುವಂತಹದ್ದಲ್ಲಾ.
ಡಾ.ಜಗದೀಶ್
#hilights
#ipl
