Site icon SportsKannada ಸ್ಪೋರ್ಟ್ಸ್ ಕನ್ನಡ

ಕೌಡೂರು ಮೈದಾನದಲ್ಲಿ ಉಡುಪಿ ಅಂಡರ್-15 ಟಿ-20 ಕ್ರಿಕೆಟ್ ಟೂರ್ನಿ: ಅಕ್ಷಯ ಕ್ರಿಕೆಟ್ ಅಕಾಡೆಮಿ ಚಾಂಪಿಯನ್

ಕೌಡೂರು ಮೈದಾನದಲ್ಲಿ ಉಡುಪಿ ಅಂಡರ್-15 ಟಿ-20 ಕ್ರಿಕೆಟ್ ಟೂರ್ನಿ: ಅಕ್ಷಯ ಕ್ರಿಕೆಟ್ ಅಕಾಡೆಮಿ ಚಾಂಪಿಯನ್

ಮಟ್ಟು ಅಸೋಸಿಯೇಟ್ಸ್, ಉಡುಪಿ, ಇವರ ಪ್ರಾಯೋಜಕತ್ವದಲ್ಲಿ, ಅಕ್ಷಯ ಕ್ರಿಕೆಟ್ ಅಕಾಡೆಮಿ ಉಡುಪಿ ಹಾಗೂ ಸನ್ ರೈಸ್ ಕ್ರಿಕೆಟ್ ಅಕಾಡೆಮಿ ರಂಗನಪಲ್ಕೆ ಜಂಟಿಯಾಗಿ, ಉಡುಪಿ ಕ್ರಿಕೆಟ್ ಅಸೋಸಿಯೇಷನ್ ಸಹಯೋಗದಲ್ಲಿ ಕೌಡೂರು ಸ್ಟೇಡಿಯಂ, ಗ್ಲಾರಿಡ ಎಸ್ಟೇಟ್ ರಂಗನಪಲ್ಕೆ ಇಲ್ಲಿ ಆಯೋಜಿಸಲಾಗಿದ್ದ 15 ವರ್ಷದೊಳಗಿನ ಟಿ-20 ಕ್ರಿಕೆಟ್ ಪಂದ್ಯಾವಳಿ ನಿನ್ನೆ ಯಶಸ್ವಿಯಾಗಿ ಸಮಾಪನಗೊಂಡಿತು.

ಮೊದಲ ಸೆಮಿಫೈನಲ್‌ನಲ್ಲಿ ಅಕ್ಷಯ ಕ್ರಿಕೆಟ್ ಅಕಾಡೆಮಿ ಉಡುಪಿ ತಂಡವು ಬೆಳ್ಳಿಪಾಡಿ ಆಳ್ವಾಸ್ ಕ್ರಿಕೆಟ್ ಅಕಾಡೆಮಿ ಬ್ರಹ್ಮಾವರ ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿತು. ಇನ್ನೊಂದೆಡೆ, ಕೆ.ಆರ್.ಎಸ್ ಕಟಪಾಡಿ ತಂಡವು ಎಚ್.ಜೆ.ಸಿ ತಂಡವನ್ನು ಸೋಲಿಸಿ ಫೈನಲ್‌ಗೆ ಲಗ್ಗೆ ಇಟ್ಟಿತು.

ರೋಚಕ ಫೈನಲ್ ಪಂದ್ಯದಲ್ಲಿ ಅಕ್ಷಯ ಕ್ರಿಕೆಟ್ ಅಕಾಡೆಮಿ ತಂಡವು ಕೆ.ಆರ್.ಎಸ್ ಕಟಪಾಡಿ ತಂಡವನ್ನು ಮಣಿಸಿ ವಿಜಯ ಕಿರೀಟವನ್ನು ತಮ್ಮದಾಗಿಸಿಕೊಂಡಿತು. ಕೆ.ಆರ್.ಎಸ್ ತಂಡವು ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿತು.

ಟೂರ್ನಮೆಂಟ್‌ನ ವೈಯಕ್ತಿಕ ಪ್ರಶಸ್ತಿಗಳಲ್ಲಿ ಎಚ್.ಜೆ.ಸಿ ತಂಡದ ಅನುಷ್ ಅವರು 3 ಪಂದ್ಯಗಳಲ್ಲಿ 179 ರನ್ ಗಳಿಸಿ “ಬೆಸ್ಟ್ ಬ್ಯಾಟ್ಸ್‌ಮನ್” ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಜೊತೆಗೆ ಕೂಟದಲ್ಲಿ ಅತಿ ಹೆಚ್ಚು ಬೌಂಡರಿಗಳು (34 ಫೋರ್‌ಗಳು) ಗಳಿಸಿದ ಸಾಧನೆಯನ್ನೂ ಮಾಡಿದರು.

ಕೆ.ಆರ್.ಎಸ್ ತಂಡದ ಪ್ರೀತ್ ಅವರು ಎರಡನೇ ಸೆಮಿಫೈನಲ್ ಪಂದ್ಯದಲ್ಲಿ “ಮ್ಯಾನ್ ಆಫ್ ದಿ ಮ್ಯಾಚ್” ಆಗಿ ಹೊರಹೊಮ್ಮಿದರಲ್ಲದೆ, “ಬೆಸ್ಟ್ ಬೌಲರ್” ಪ್ರಶಸ್ತಿಗೂ ಭಾಜನರಾದರು.

ಅಕ್ಷಯ ಕ್ರಿಕೆಟ್ ಅಕಾಡೆಮಿಯ ಆಯುಷ್ ಕುಮಾರ್ ಮಟ್ಟು ಅವರು 3 ಪಂದ್ಯಗಳಲ್ಲಿ 133 ರನ್ ಗಳಿಸಿ “ಮ್ಯಾನ್ ಆಫ್ ದಿ ಸೀರೀಸ್” ಪ್ರಶಸ್ತಿಯನ್ನು ಪಡೆದರು. ಜೊತೆಗೆ ಅತಿ ಹೆಚ್ಚು ಸಿಕ್ಸರ್‌ಗಳು (10), ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳ “ಮ್ಯಾನ್ ಆಫ್ ದಿ ಮ್ಯಾಚ್” ಪ್ರಶಸ್ತಿಗಳನ್ನೂ ತಮ್ಮದಾಗಿಸಿಕೊಂಡು ಗಮನಾರ್ಹ ಸಾಧನೆ ಮಾಡಿದರು.

ಸಮಾರೋಪ ಸಮಾರಂಭದಲ್ಲಿ ವಕೀಲರಾದ ಶ್ರೀ ಗಣೇಶ್ ಕುಮಾರ್ ಮಟ್ಟು ಅವರು ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಎಲ್ಲರನ್ನು ಉದ್ದೇಶಿಸಿ ಮಾತನಾಡಿ 16 ವರ್ಷ ಕೆಳಗಿನ ಮಯೋಮಿತಿಯ ಮಕ್ಕಳಿಗೆ ಮುಂದಿನ ದಿನಗಳಲ್ಲಿ ಉಡುಪಿ ಡಿಸ್ಟ್ರಿಕ್ಟ್ ಕ್ರಿಕೆಟ್ ಅಸೋಸಿಯೇಷನ್ ಅವರ ಮುಂದಾಳತ್ವದಲ್ಲಿ ಉಡುಪಿ ಜಿಲ್ಲೆಯ ಕ್ರಿಕೆಟ್ ತರಬೇತು ನೀಡುವ ಎಲ್ಲಾ ತರಬೇತುದಾರರನ್ನು ಸೇರಿಸಿಕೊಂಡು ದೊಡ್ಡಮಟ್ಟದ ಲೆದರ್ ಬಾಲ್ ಟೂರ್ನಮೆಂಟನ್ನು ಮಾಡುವ ಇರಾದೆ ಇದ್ದು ಅಂತಹ ಪಂದ್ಯಾಕೂಟದಲ್ಲಿ ಭಾಗವಹಿಸಿ ಉತ್ತಮ ಸಾದನೆಯನ್ನು ತೋರಿಸಿದ್ದಲ್ಲಿ ಕ್ರಿಕೆಟ್ ನಲ್ಲಿ ಭವಿಷ್ಯವನ್ನು ರೂಪಿಸಿಕೊಳ್ಳಬಹುದು ಎಂದರು. ಸದಾನಂದ ಶಿರ್ವ ಅವರು ಸ್ವಾಗತಿಸಿದರು ಹಾಗೂ ಅಕ್ಷಯ ಕ್ರಿಕೆಟ್ ಅಕಾಡೆಮಿಯ ದಯಾನಂದ ಬಂಗೇರ ಅವರು ವಂದಿಸಿದರು.

ಪಂದ್ಯಗಳ ನಿರ್ವಹಣೆಯಲ್ಲಿ ಅಂಪೈರ್‌ಗಳಾಗಿ ನಮಿತ್ ಶೆಟ್ಟಿ ಮತ್ತು ನಿಶಾಂತ್ ನೊರೂಂನ್ಹ ಸೇವೆ ಸಲ್ಲಿಸಿದರು. ಸ್ಕೋರರ್ ಆಗಿ ಅಮೃತ ಅವರು ತಮ್ಮ ಸಹಕಾರ ನೀಡಿದರು.

ಹೆಚ್ಚಿನ ಸಂಖ್ಯೆಯ ಕ್ರಿಕೆಟ್ ಆಸಕ್ತರು, ಮಕ್ಕಳ ಪೋಷಕರು ಬಾಗವಹಿಸಿದ ಈ ಟೂರ್ನಮೆಂಟ್ ಕ್ರೀಡಾ ಮನೋಭಾವ, ಶಿಸ್ತು ಹಾಗೂ ಪ್ರತಿಭೆಗಳ ಪ್ರದರ್ಶನಕ್ಕೆ ಉತ್ತಮ ವೇದಿಕೆಯಾಗಿ ಯಶಸ್ವಿಯಾಗಿ ನೆರವೇರಿತು

Exit mobile version