SportsKannada | ಸ್ಪೋರ್ಟ್ಸ್ ಕನ್ನಡ

ಕ್ರೀಡಾ ಕ್ಷೇತ್ರದ ಧ್ರುವತಾರೆ” ದಾಖಲೆಗಳ ಸರದಾರ ಉಡುಪಿಯ ಧ್ರುವ ಬಲ್ಲಾಳ್

ಹೆಸರೇ ಹೇಳುವಂತೆ ಈತ ಧ್ರುವ ನಕ್ಷತ್ರದಂತೆ ಕ್ರೀಡಾಕ್ಷೇತ್ರದಲ್ಲಿ ಮಿನುಗುವ ಧ್ರುವತಾರೆ.
ಹೌದು 2009ರಲ್ಲಿ ಬೆಂಗಳೂರಿನಲ್ಲಿ ಯುವಕರ ರಾಜ್ಯ ಒಲಿಂಪಿಕ್ ಸಂಸ್ಥೆ ನಡೆಸಿದ ಕ್ರೀಡಾಕೂಟದಲ್ಲಿ 100 ಮತ್ತು 400 ಮೀಟರ್ ಓಟದಲ್ಲಿ ಚಿನ್ನದ ಪದಕ ಪಡೆದುದಲ್ಲದೆ ವೈಯಕ್ತಿಕ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾನೆ.
ಅದೇ ವರ್ಷದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ನಡೆದ ಅಥ್ಲೆಟಿಕ್ ಮೀಟ್ ನಲ್ಲಿ ಭಾಗವಹಿಸಿದ್ದಲ್ಲದೆ 100, 200 ಮತ್ತು 400 ಮೀಟರ್ ಓಟದಲ್ಲಿ ವೈಯಕ್ತಿಕ ಚಾಂಪಿಯನ್ ಜೊತೆಗೆ ಚಿನ್ನದ ಪದಕ ಪಡೆದ ಈತ 200 ಮೀಟರ್ ಓಟದಲ್ಲಿ ರಾಜ್ಯ ಮಟ್ಟದಲ್ಲಿ 23.85 ಸೆಕೆಂಡುಗಳಲ್ಲಿ ಕ್ರಮಿಸಿ ದಾಖಲೆಯನ್ನು ಬರೆದಿದ್ದಾನೆ. ಅಲ್ಲದೆ ಪಂಜಾಬ್ ನ ಸಂಗ್ರೂರ್ ನಲ್ಲಿ ನಡೆದ ರಾಜ್ಯ ಮಟ್ಟದ ಕ್ರೀಡಾ ಕೂಟದಲ್ಲಿ ಭಾಗವಹಿಸಿದ್ದಾನೆ.
2020 ಜನವರಿ ತಿಂಗಳಲ್ಲಿ. ಮುಂಬಯಿಯ ರಿಲಯನ್ಸ್ ಫೌಂಡೇಶನ್  ವತಿಯಿಂದ ಏರ್ಪಡಿಸಿದ್ದ ರಾಜ್ಯ ಮಟ್ಟದ ಕ್ರೀಡಾ ಕೂಟದಲ್ಲಿ ಭಾಗವಹಿಸುವ ಅವಕಾಶ ಪಡೆದಿದ್ದಾನೆ.
2020 ಫೆಬ್ರವರಿ ತಿಂಗಳಲ್ಲಿ ಕರ್ನಾಟಕ ಸರ್ಕಾರದ ವತಿಯಿಂದ ನಡೆದ ಭಾರತದ ಮೊದಲ ಮಿನಿ ಒಲಿಂಪಿಕ್ಸ್ ನಲ್ಲಿ ಭಾಗವಹಿಸಿ 400 ಮೀಟರ್ ಓಟದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.
2021 ಜನವರಿ ತಿಂಗಳಲ್ಲಿ ಮೂಡಬಿದರೆಯಲ್ಲಿ ನಡೆದ 36 ನೆಯ ಕರ್ನಾಟಕ ರಾಜ್ಯ ಜ್ಯೂನಿಯರ್ ಅಥ್ಲೆಟಿಕ್ ಚಾಂಪಿಯನ್ ಶಿಪ್ ನಡೆದಿದ್ದು ಅದರಲ್ಲಿ ಧ್ರುವ 16 ವರ್ಷದೊಳಗಿನ ಮಕ್ಕಳಿಗೆ ನಡೆದ 300 ಮೀಟರ್ ಓಟದಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ.
2021 ಫೆಬ್ರವರಿ ತಿಂಗಳ 6 ರಂದು ಅಸ್ಸಾಂ ನ ಗುವಾಹಟಿಯಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸುವ ಅವಕಾಶ ಪಡೆದಿದ್ದಾನೆ‌. ಕರಾಟೆಯಲ್ಲಿ ಬ್ರೌನ್ ಬೆಲ್ಟ್ ಪಡೆದ ಈತ ಉತ್ತಮ ಚೆಸ್ ಆಟಗಾರ ಕೂಡ ಹೌದು.
ಉಡುಪಿಯ ಸೈಂಟ್ ಸಿಸಿಲೀಸ್ ಪ್ರೌಢಶಾಲೆಯಲ್ಲಿ 9ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಈತ  ಉಡುಪಿಯ ಎನ್.ಪ್ರಹ್ಲಾದ್ ಬಲ್ಲಾಳ್ ಮತ್ತು  ಎನ್. ಸವಿತಾ ಬಲ್ಲಾಳ್ ದಂಪತಿಯ ಪುತ್ರ. ಪ್ರಸ್ತುತ ಉಡುಪಿಯ ಕೋಚ್ ಜಾಹಿರ್ ಅಬ್ಬಾಸ್ ಇವರಲ್ಲಿ ಹೆಚ್ಚಿನ ತರಬೇತಿ ಪಡೆಯುತ್ತಿದ್ದಾರೆ.
ಧ್ರುವ ಕ್ರೀಡಾಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡುತ್ತಾ ಇನ್ನಷ್ಟು ಮಿನುಗಲಿ ಎಂದು
ಸ್ಪೋರ್ಟ್ಸ್ ಕನ್ನಡ ಜಾಲತಾಣದ ವತಿಯಿಂದ ಧ್ರುವ ಅವರಿಗೆ ಶುಭಹಾರೈಕೆಗಳು.
Exit mobile version