
A father’s faith❤️ daughter’s fir
ಮೊಹಾಲಿಯ ಬಡ ಬಡಗಿಯ ಮಗಳು ವಿಶ್ವ ಚಾಂಪಿಯನ್ ಆದ ಕಥೆ..!
ಕಪಿಲ್ ದೇವ್ ಹಿಡಿದ ಒಂದು ಕ್ಯಾಚ್ 1983ರಲ್ಲಿ ದೇಶಕ್ಕೆ ಮೊದಲ ವಿಶ್ವಕಪ್ ಗೆಲ್ಲಿಸಿತು..
ಶಾಂತಕುಮಾರನ್ ಶ್ರೀಶಾಂತ್ ಹಿಡಿದ ಒಂದು ಕ್ಯಾಚ್ ಭಾರತಕ್ಕೆ ಮೊದಲ ಟಿ20 ವಿಶ್ವಕಪ್ ಗೆದ್ದು ಕೊಟ್ಟಿತು..
ಸೂರ್ಯಕುಮಾರ್ ಯಾದವ್ ಹಿಡಿದ ಒಂದು ಕ್ಯಾಚ್ 17 ವರ್ಷಗಳ ನಂತರ ದೇಶಕ್ಕೆ ಮತ್ತೊಂದು ಟಿ20 ವಿಶ್ವಕಪ್ ತಂದು ಕೊಟ್ಟಿತು.
ಮೊನ್ನೆ ನವೀ ಮುಂಬೈನಲ್ಲಿ ಆ ಹುಡುಗಿ ಹಿಡಿದ ಅದೊಂದು ಕ್ಯಾಚ್ ಮಹಿಳಾ ಕ್ರಿಕೆಟ್’ನಲ್ಲಿ ಮೊತ್ತ ಮೊದಲ ವಿಶ್ವಕಪ್ ಭಾರತದ ಮುಡಿಗೇರುವಂತೆ ಮಾಡಿತು.
ಪಂಜಾಬ್’ನ ಮೊಹಾಲಿಯ ಒಬ್ಬ ಬಡ ಬಡಗಿಯ ಮಗಳು ಅವಳು.. ಇವತ್ತು ಅದೇ ಮಗಳು ವಿಶ್ವ ಚಾಂಪಿಯನ್ ಆಗಿ ನಿಂತಿದ್ದಾಳೆ. ತನಗಾಗಿ ತಂದೆ ಪಟ್ಟ ಅಷ್ಟು ಕಷ್ಟಗಳಿಗೆ, ತನ್ನ ಕಾರಣಕ್ಕೆ ತಂದೆ ಎದುರಿಸಿದ ಅವಮಾನಗಳಿಗೆ ಉತ್ತರ ಕೊಟ್ಟಿದ್ದಾಳೆ. ಆ ಹೆಣ್ಣು ಹುಲಿಯ ಹೆಸರು ಅಮನ್’ಜೋತ್ ಕೌರ್.
ಭಾರತಕ್ಕೆ ಮೊದಲ ಮಹಿಳಾ ವಿಶ್ವಕಪ್ ಗೆದ್ದು ಕೊಟ್ಟ ಹುಡುಗಿಯರ ಪೈಕಿ ಒಬ್ಬೊಬ್ಬರದ್ದು ಒಂದೊಂದು ಕಥೆ.
ಅಮನ್’ಜೋತ್ ಕೌರ್ ಎಂಬ ಹೆಣ್ಣು ಮಗಳ ಕಥೆ ಒಂದೊಳ್ಳೆ ಸಿನಿಮಾಗೆ ಕಥಾವಸ್ತುವಾಗಹುದು.
ದೇಶಕ್ಕೆ ನೂರಾರು ವೀರ ಯೋಧರನ್ನು ಕೊಟ್ಟ ನೆಲದಿಂದ ಬಂದವಳು ಅಮನ್.. ತಂದೆ ಭೂಪಿಂದರ್ ಕೌರ್ ವೃತ್ತಿಯಲ್ಲಿ ಬಡಗಿ. ದಿನಕ್ಕೆ ನೂರಿನ್ನೂರು ಲೆಕ್ಕದಲ್ಲಿ ಸಂಪಾದನೆ. ಪುಟ್ಟ ಮನೆ.. ಮನೆಯ ಯಜಮಾನನ ದಿನದ ದುಡಿಮೆಯ ಮೇಲೆ ನಿಂತಿದ್ದ ಕುಟುಂಬ.. ಅಂಥದ್ದರಲ್ಲಿ ಆ ಮನೆಯಲ್ಲಿ ಹುಟ್ಟಿದ ಹೆಣ್ಣು ಮಗಳು ‘ನಾನು ಕ್ರಿಕೆಟ್ ಆಡುತ್ತೇನೆ’ ಎಂದು ಬಿಟ್ಟಳು.
ಅದೇನು ಅದೃಷ್ಟ ಮಾಡಿದ್ದಳೋ ಆ ಹುಡುಗಿ. ‘ಆಡು ಮಗಳೇ’ ಎಂದು ಬೆನ್ನು ತಟ್ಟಿ ಬಿಟ್ಟರು ತಂದೆ ಭೂಪಿಂದರ್ ಕೌರ್. ಮೊಮ್ಮಗಳ ಆಸೆಗೆ ಅಜ್ಜಿಯೂ ಒತ್ತಾಸೆಯಾಗಿ ನಿಂತು ಬಿಟ್ಟರು.
ಹುಟ್ಟಿದ ಊರು ಸಣ್ಣದು ನಿಜ.. ದೊಡ್ಡ ಕನಸು ಕಾಣಲು ದುಡ್ಡು ಕೊಡಬೇಕಿಲ್ಲ, ತೆರಿಗೆ ಕಟ್ಟ ಬೇಕಿಲ್ಲ. ಅಂಥದ್ದೊಂದು ದೊಡ್ಡ ಕನಸನ್ನು ಬೆನ್ನತ್ತಿ ಹೊರಟೇ ಬಿಟ್ಟಳು ಅಮನ್’ಜೋತ್ ಕೌರ್.
ಮಗಳ ಕನಸನ್ನು ಈಡೇರಿಸುವುದು ತಂದೆಯ ಜವಾಬ್ದಾರಿ ಮತ್ತು ಕರ್ತವ್ಯ. ಅದನ್ನು ನಿಭಾಯಿಸಲು ನಿಂತಾಗ ಸುತ್ತಮುತ್ತಲಿನ ಜನ ಹಂಗಿಸಿದರು, ಹೀಯಾಳಿಸಿದರು.
ಓರಗೆಯ ಹುಡುಗರೊಂದಿಗೆ ಮಗಳು ಕ್ರಿಕೆಟ್ ಆಡುತ್ತಿದ್ದಾಗ ಕೇಳಬಾರದ್ದನ್ನೆಲ್ಲಾ ಕೇಳಿದರು. ಹೆಜ್ಜೆ ಹೆಜ್ಜೆಗೂ ಬರೀ ಮೂದಲಿಕೆಯ ಮಾತುಗಳೇ..
‘’ಈ ಬಡಗಿಯ ಮಗಳಿಗೆ ಬೇಕಾ ಕ್ರಿಕೆಟ್..? ಅವಳಿಗೆ ಬುದ್ಧಿಯಿಲ್ಲ, ಈ ಮನುಷ್ಯನಿಗಾದರೂ ಬುದ್ಧಿ ಇರಬೇಕಲ್ಲ.. ಹೆಣ್ಣು ಮಕ್ಕಳು ಈ ದೇಶದಲ್ಲಿ ಕ್ರಿಕೆಟ್ ಆಡುವುದೆಂದರೆ ಸುಲಭವೇ..’’ ಹೀಗೆಂದು ಮೂದಲಿಸಿದರು.. ಚುಚ್ಚು ಮಾತುಗಳಿಂದ ಚುಚ್ಚಿದರು..
ಆ ತಂದೆ ಮಗಳಿಗಾಗಿ ಏಕಕಾಲದಲ್ಲಿ ಎರಡು ಯುದ್ಧಗಳನ್ನು ಮಾಡಬೇಕಿತ್ತು. ಒಂದು, ಹೀಯಾಳಿಸುತ್ತಿದ್ದ ಸಮಾಜದ ವಿರುದ್ಧ.. ಇನ್ನೊಂದು ಮಗಳಿಗೊಂದು ಬ್ಯಾಟ್ ಕೊಡಿಸಲಾಗದ ತನ್ನ ಅಸಹಾಯಕತೆಯ ವಿರುದ್ಧ..
ಹೌದು.. ಒಂದು ಬ್ಯಾಟ್’ಗಾಗಿ ಇಡೀ ತಿಂಗಳ ಅನ್ನವನ್ನೇ ತ್ಯಾಗ ಮಾಡಬೇಕಿತ್ತು. ಅದು ಸಾಧ್ಯವಾಗದ ಮಾತು..
ಕೊನೆಗೆ ರಾತ್ರೋ ರಾತ್ರಿ ತಾವೇ ಒಂದು ಮರದ ಬ್ಯಾಟ್ ಕೆತ್ತಿ ಮಗಳಿಗೆ ಕೊಟ್ಟಿದ್ದರು ಭೂಪಿಂದರ್ ಕೌರ್. ಅವತ್ತು ಅವರು ಬ್ಯಾಟ್ ರೂಪದಲ್ಲಿ ಮಗಳ ಕನಸಿನ ಗೋಪುರವನ್ನೇ ಕೆತ್ತಿದ್ದರು..
ಅಪ್ಪ ಕೆತ್ತಿದ್ದ ಮರದ ಬ್ಯಾಟ್ ಒಂದೇ ತಿಂಗಳಲ್ಲಿ ಮುರಿದು ಹೋಯಿತು. ಕ್ರಿಕೆಟ್ ಆಡಬೇಕೆಂದರೆ ಒಳ್ಳೆಯ ಬ್ಯಾಟ್ ಬೇಕೇಬೇಕು. ಹೇಗೋ ಹಣ ಹೊಂದಿಸಿ ಮಗಳಿಗೊಂದು ಬ್ಯಾಟ್ ಕೊಡಿಸುವಲ್ಲಿ ತಂದೆ ಯಶಸ್ವಿಯಾಗುತ್ತಾರೆ.
ಒಂದು ತಿಂಗಳ ದುಡಿಮೆಯಲ್ಲಿ ಬ್ಯಾಟ್ ಬಂದರೆ, ಶೂಸ್ ಅಥವಾ ಇತರ ಕ್ರಿಕೆಟ್ ಸಲಕರಣೆಗಳಿಗಾಗಿ ಮತ್ತೊಂದು ತಿಂಗಳು ಕಾಯಬೇಕಿತ್ತು ಆ ಹುಡುಗಿ. ಮನೆಯಿಂದ 60 ಕಿ.ಮೀ ದೂರದ ಕ್ರಿಕೆಟ್ ಅಕಾಡೆಮಿಯಲ್ಲಿ ಅಭ್ಯಾಸ.. ಪ್ರತೀ ದಿನ ಮಗಳನ್ನು ಅಭ್ಯಾಸಕ್ಕೆ ಕರೆದೊಯ್ಯುತ್ತಿದ್ದದ್ದು ತಂದೆ ಭೂಪಿಂದರ್ ಕೌರ್.. ಉಳಿದ ಸಮಯದಲ್ಲಿ ಬಡಗಿಯ ಕೆಲಸ.. ಮಗಳ ಕ್ರಿಕೆಟ್ ಕನಸಿನ ಜೊತೆ ಜೀವನವೂ ಸಾಗಬೇಕಿತ್ತು.
ಅದೇ ಮಗಳು ಈಗ ಕ್ರಿಕೆಟ್ ವಿಶ್ವಚಾಂಪಿಯನ್ ಮಗಳು.. ದೇಶದ ಹೆಮ್ಮೆಯ ಮಗಳು.. ಅವಳ ಯಶಸ್ಸಿನ ಪ್ರತೀ ಹೆಜ್ಜೆಯಲ್ಲೂ ತಂದೆಯ ಬೆವರ ಹನಿಗಳ ಶ್ರಮವಿದೆ. ಭಾನುವಾರ ನಡೆದ ವಿಶ್ವಕಪ್ ಫೈನಲ್ ಪಂದ್ಯಕ್ಕಾಗಿ ಅಮನ್’ಜೋತ್ ಕೌರ್ ಹುಟ್ಟೂರಲ್ಲಿ ಊರವರೇ ಸೇರಿ ದೊಡ್ಡ ಟಿವಿ ಪರದೆಯನ್ನು ಹಾಕಿದ್ದರು.
ಅಮನ್ ಜೋತ್ ತಂದೆ ಭೂಪಿಂದರ್ ಕೌರ್ ಊರಿನ ಜನರ ಜೊತೆ ಕುಳಿತು (ಬಹಶಃ 15 ವರ್ಷಗಳ ಹಿಂದೆ ತಂದೆ-ಮಗಳನ್ನು ಮೂದಲಿಸಿದ್ದವರು, ಹೀಯಾಳಿಸಿದ್ದವರೂ ಅಲ್ಲಿ ಇದ್ದರೇನೋ) ಅದೇ ಪರದೆಯಲ್ಲಿ ಮಗಳು ವಿಶ್ವಕಪ್ ಎತ್ತಿ ಹಿಡಿದಿದ್ದನ್ನು ನೋಡಿ ಕಣ್ಣೀರಿಟ್ಟಿದ್ದಾರೆ.
ತಂದೆಯ ನಂಬಿಕೆ ಸುಳ್ಳಾಗಲಿಲ್ಲ.. ಮಗಳ ವಿಶ್ವಾಸ ಹುಸಿಯಾಗಲಿಲ್ಲ… ಮಗಳು ತಾನೂ ಗೆದ್ದು ತಂದೆಯನ್ನೂ ಗೆಲ್ಲಿಸಿದಳು..
Amanjot Kaur.. What a story..!
-ಸುದರ್ಶನ್
