SportsKannada | ಸ್ಪೋರ್ಟ್ಸ್ ಕನ್ನಡ

ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ದೇವದತ್ ಪಡಿಕಲ್ ಆಕರ್ಷಕ ಶತಕ ಕರ್ನಾಟಕಕ್ಕೆ 5 ವಿಕೆಟ್ ಗಳ ಜಯ

ದೇಶೀಯ ಕ್ರಿಕೆಟ್​ನ ಮಹತ್ವದ ಟಿ20 ಟೂರ್ನಿ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯ 3 ನೇ ಪಂದ್ಯದಲ್ಲಿ ಕರ್ನಾಟಕ ಆಂಧ್ರಪ್ರದೇಶದ ವಿರುದ್ಧ ಭರ್ಜರಿ ಜಯಗಳಿಸಿದೆ. ವಿಶಾಖಪಟ್ಟಣದ ವೈ.ಎಸ್.ರಾಜಶೇಖರ್ ರೆಡ್ಡಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಕರುಣನಾಯರ್ ಪಡೆ ಆಂಧ್ರಪ್ರದೇಶಕ್ಕೆ ಆರಂಭದಲ್ಲೇ ಆಘಾತನೀಡಿತು. 5 ರನ್ ಗ್ರ ಒಂದು ವಿಕೆಟ್ ಕಳೆದು ಸಂಕಷ್ಟದಲ್ಲಿದ್ದಾಗ ಆಂಧ್ರಪ್ರದೇಶಕ್ಕೆ ಅಶ್ವಿನ್ ಹೆಬ್ಬಾರ್ ಮತ್ತು ಪ್ರಶಾಂತ್ ಕುಮಾರ್ ಉತ್ತಮ ಅಡಿಪಾಯ ಹಾಕಿಕೊಟ್ಟರು. ಇವರಿಬ್ಬರ ನಡುವೆ ಬರೋಬ್ಬರಿ 141 ರನ್ ಗಳ ಜೊತೆಯಾಟ ಹರಿದು ಬಂದಿತ್ತು. ಅಂತಿಮವಾಗಿ ಆಂಧ್ರಪ್ರದೇಶ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 184 ರನ್ ಗಳಿಸಿತು. ಕರ್ನಾಟಕ ಪರ ವಿ. ಕೌಶಿಕ್ 3 ವಿಕೆಟ್ ಪಡೆದು ಆಂಧ್ರಪ್ರದೇಶಕ್ಕೆ ಕಡಿವಾಣ ಹಾಕಿದರು.

ಇದಕ್ಕೆ ಪ್ರತುತ್ಯರವಾಗಿ ಇನ್ನಿಂಗ್ಸ್ ಆರಂಭಿಸಿದ ಕರ್ನಾಟಕ ಆರಂಭದಲ್ಲೇ ಮುಗ್ಗರಿಸಿತು. ಆರಂಭಿಕ ದಾಂಡಿಗರದ ರೋಹನ್ ಕದಂಬ ಮತ್ತು ಸಿಸೋಡಿಯಾ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು. 7 ರನ್ ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಕೆ ಗೌತಮ್ ಬಿರುಸಿನ ಆಟವಾಡಿ 35 ರನ್ ಗಳಿಸಿ ಸಸಿಕಾಂತ್ ಗೆ ವಿಕೆಟ್ ಕೊಟ್ಟು ಹೊರನಡೆದರು.

ಈ ಸಂದರ್ಭದಲ್ಲಿ ಕರ್ನಾಟಕಕ್ಕೆ ಯುವ ಪ್ರತಿಭೆ ದೇವದತ್ ಪಡಿಕಲ್ ಆಸರೆ ಆದರು. ದೇವದತ್ ಪಡಿಕಲ್ ಎದುರಿಸಿದ 60 ಎಸೆತಗಳಲ್ಲಿ 7 ಸಿಕ್ಸರ್ ಮತ್ತು 13 ಬೌಂಡರಿ ಗಳ ನೆರವಿನಿಂದ ಆಕರ್ಷಕ 122 ರನ್ ಗಳಿಸಿ ಕರ್ನಾಟಕವನ್ನು ಗೆಲುವಿನತ್ತ ಕೊಂಡೊಯ್ದರು. ಆಂಧ್ರಪ್ರದೇಶ ಪರ ಸಿ. ಸ್ಟೆಪನ್ 2 ವಿಕೆಟ್ ಪಡೆದು ಕೊಂಡರು. ಅಂತಿಮವಾಗಿ ಕರ್ನಾಟಕ 18.5 ಓವರ್ ಗಳಲ್ಲಿ 5 ವಿಕೆಟ್ ಗಳನ್ನು ಪಡೆದುಕೊಂಡು ಗೆಲುವಿನ ನಗೆ ಬೀರಿತು.

– ಪ್ರೀತಮ್ ಹೆಬ್ಬಾರ್.

Exit mobile version