
ಪುತ್ತೂರು -ಸಾಮೆತ್ತಡ್ಕ ಯುವಕ ಮಂಡಲ ಹಾಗೂ ಸಿಝ್ಲರ್ ಸಾಫ್ಟ್ ಡ್ರಿಂಕ್ಸ್ ಸಾಮೆತ್ತಡ್ಕ ಇವರ ಜಂಟಿ ಆಶ್ರಯದಲ್ಲಿ,ಸಾಮೆತ್ತಡ್ಕ ಯುವಕ ಮಂಡಲದ ಮಾಜಿ ಅಧ್ಯಕ್ಷ ದಿ.ಶ್ರೀನಾಥ್ ಆಚಾರ್ಯ ಸ್ಮರಣಾರ್ಥ,ಉದ್ಯಮಿ ಹಾಗೂ ಕ್ರೀಡಾ ಸಂಘಟಕ ಪ್ರಸನ್ನ ಕುಮಾರ್ ಶೆಟ್ಟಿ ಇವರ ದಕ್ಷ ಸಾರಥ್ಯದಲ್ಲಿ ರಾಷ್ಟ್ರೀಯ ಮಟ್ಟದ ಹೊನಲು ಬೆಳಕಿನ ಅದ್ಧೂರಿಯ “ಸಿಝ್ಲರ್ ಟ್ರೋಫಿ-2024” ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಲಾಗಿದೆ.
ಜನವರಿ 20 ಮತ್ತು 21 ರಂದು ಪುತ್ತೂರಿನ ಸಂತ ಫಿಲೋಮಿನಾ ಕಾಲೇಜ್ ಕ್ಯಾಂಪಸ್ ನಲ್ಲಿನ ಕ್ರೀಡಾಂಗಣದಲ್ಲಿ ಅಹರ್ನಿಶಿ ನಡೆಯಲಿರುವ ಈ ಕ್ರಿಕೆಟ್ ಪಂದ್ಯಾಟದಲ್ಲಿ ರಾಷ್ಟ್ರೀಯ ಮಟ್ಟದ ಆಹ್ವಾನಿತ 8 ತಂಡಗಳು ಭಾಗವಹಿಸಲಿವೆ.
ಸಾಮೆತ್ತಡ್ಕ ಯುವಕ ಮಂಡಲದ ಹಿನ್ನೆಲೆ
1976 ರಲ್ಲಿ ಸಾಮೆತ್ತಡ್ಕ ಯುವಕ ಮಂಡಲ ಸ್ಥಾಪನೆಯಾಗಿದ್ದು,ಪುತ್ತೂರುವತಾಲೂಕಿನ ಮೊದಲ ರಿಜಿಸ್ಟರ್ಡ್ ಯುವಕ ಮಂಡಲವೆಂಬ ಹೆಗ್ಗಳಿಕೆಯನ್ನು ಹೊಂದಿದೆ.
ಕ್ರೀಡೆ,ಸಾಂಸ್ಕೃತಿಕ,ಶೈಕ್ಷಣಿಕ ಹೀಗೆ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿರುವ ಸಾಮೆತ್ತಡ್ಕ ಯುವಕ ಮಂಡಲ(ರಿ)1999 ರಿಂದ ಮೂರು ವರ್ಷಕ್ಕೊಮ್ಮೆ ಹೊನಲು ಬೆಳಕಿನ ರಾಷ್ಟ್ರೀಯ ಮಟ್ಟದ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸುತ್ತಾ ಬಂದಿದ್ದಾರೆ.
ಉಚಿತ ಪ್ರವೇಶಾತಿ-ಆಕರ್ಷಕ ನಗದು -ಅದ್ಧೂರಿಯ ಕ್ರಿಕೆಟ್ ಜಾತ್ರೆ
ವಿಶೇಷವಾಗಿ ಉಚಿತ ಪ್ರವೇಶಾತಿಯ ಪಂದ್ಯಾಟ ಇದಾಗಿದ್ದು,ಚಾಂಪಿಯನ್ ತಂಡಕ್ಕೆ 2 ಲಕ್ಷ ರೂ,ದ್ವಿತೀಯ ಸ್ಥಾನಿ 1 ಲಕ್ಷ ರೂ ನಗದು ಸಹಿತ ಆಕರ್ಷಕ ಪಾರಿತೋಷಕಗಳನ್ನು ಪಡೆಯಲಿದ್ದಾರೆ.ವಿಶೇಷವಾಗಿ ಸರಣಿ ಶ್ರೇಷ್ಠ ಆಟಗಾರನಿಗೆ 1 ಲಕ್ಷ ರೂ ಮೌಲ್ಯದ ಬೈಕ್ ಉಡುಗೊರೆ ರೂಪದಲ್ಲಿ ನೀಡಲಿದ್ದು,ವೈಯಕ್ತಿಕ ಶ್ರೇಷ್ಠ ಪ್ರದರ್ಶನ ನೀಡುವ ಆಟಗಾರರಿಗೆ ವಿಶೇಷ ಬಹುಮಾನ ಪಡೆಯಲಿದ್ದಾರೆ.
ಅಹರ್ನಿಶಿ ಕ್ರಿಕೆಟ್ ಪಂದ್ಯಾಟಕ್ಕೆ ಕ್ರೀಡಾಂಗಣದ ಸುತ್ತ ಎಂಟು ಟವರ್ ಗಳಲ್ಲಿ ಹೈ ವೋಲ್ಟೇಜ್ ಬೆಳಕಿನ ಬಲ್ಬ್ ಗಳನ್ನು ಅಳವಡಿಸಲಾಗಿದೆ.
ಸಮಾರಂಭದ ವೇದಿಕೆಯಲ್ಲಿ ರಾಜಕೀಯ ಧುರೀಣರು,ಉದ್ಯಮಿಗಳು ಚಲನಚಿತ್ರ ನಟ,ನಟಿಯರು ಹಾಗೂ ಕ್ರಿಕೆಟ್ ತಾರೆಯರ ದಂಡೇ ಆಗಮಿಸಲಿದ್ದು ಪಂದ್ಯಾಟದ ಮೆರುಗನ್ನು ಹೆಚ್ಚಿಸಲಿದ್ದು,ಬಿಲ್ಲಿ ಬೌಡೆನ್ ಖ್ಯಾತಿಯ ಡ್ಯಾನ್ಸಿಂಗ್ ಅಂಪಾಯರ್ ಮದನ್ ಮಡಿಕೇರಿ ತೀರ್ಪುಗಾರರಾಗಿ ಭಾಗವಹಿಸಲಿದ್ದು,M9 sports ಯೂಟ್ಯೂಬ್ ಚಾನೆಲ್ ನಲ್ಲಿ ನೇರ ಪ್ರಸಾರ ಬಿತ್ತರಗೊಳ್ಳಲಿದೆ.
ಭಾಗವಹಿಸುವ 8 ಪ್ರತಿಷ್ಠಿತ ತಂಡಗಳು
ಸಿಝ್ಲರ್ ಟ್ರೋಫಿ-2024 ಪ್ರತಿಷ್ಠಿತ ಪ್ರಶಸ್ತಿಗಾಗಿ ರಾಷ್ಟ್ರೀಯ ಮಟ್ಟದ ಪ್ರಸಿದ್ಧ ತಂಡಗಳಾದ ಪ್ರಕೃತಿ ನ್ಯಾಶ್ ಬೆಂಗಳೂರು, ಮೈಟಿ ಬೆಂಗಳೂರು, ಡ್ರೀಮ್ ಇಲೆವೆನ್ ಚೆನ್ನೈ, ರಿಯಲ್ ಫೈಟರ್ಸ್ ಮಲ್ಪೆ,ಇಝಾನ್ ಸ್ಪೋರ್ಟ್ಸ್ ಉಡುಪಿ,ಜೈ ಕರ್ನಾಟಕ ಬೆಂಗಳೂರು, ಜಾನ್ಸನ್ ಕುಂದಾಪುರ ಮತ್ತು ಫ್ರೆಂಡ್ಸ್ ಬೆಂಗಳೂರು ಹೀಗೆ 8 ಬಲಿಷ್ಠ ತಂಡಗಳು ಸೆಣಸಾಡಲಿದ್ದು ಕ್ರೀಡಾಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ.

