Site icon SportsKannada ಸ್ಪೋರ್ಟ್ಸ್ ಕನ್ನಡ

ದಾವಣಗೆರೆಯಲ್ಲಿ 17 ನೇ ಬಾರಿ ಟೆನಿಸ್ಬಾಲ್ ಕ್ರಿಕೆಟ್ ವಿಶ್ವಕಪ್ ಶಾಮನೂರು ಡೈಮಂಡ್,ಶಿವಗಂಗಾ ಕಪ್

ದಾವಣಗೆರೆಯಲ್ಲಿ 17 ನೇ ಬಾರಿ ಟೆನಿಸ್ಬಾಲ್ ಕ್ರಿಕೆಟ್ ವಿಶ್ವಕಪ್ ಶಾಮನೂರು ಡೈಮಂಡ್,ಶಿವಗಂಗಾ ಕಪ್

ದಾವಣಗೆರೆ ದಕ್ಷಿಣ ಶಾಸಕರಾದ ಡಾ.ಶಾಮನೂರು ಶಿವಶಂಕರಪ್ಪ ಇವರ ಧರ್ಮಪತ್ನಿ ದಿ.ಶ್ರೀಮತಿ ಶಾಮನೂರು ಪಾರ್ವತಮ್ಮ ಶಿವಶಂಕರಪ್ಪ ಇವರ ಸವಿನೆನಪಿಗಾಗಿ,ದಾವಣಗೆರೆ ಇಲೆವೆನ್ ಕ್ರಿಕೆಟ್ ಕ್ಲಬ್ ಹಾಗೂ ಜಿಲ್ಲಾ ಕ್ರೀಡಾಪಟುಗಳ ಸಂಘ ಆಶ್ರಯದಲ್ಲಿ 17 ನೇ ಬಾರಿ ಹೊನಲು ಬೆಳಕಿನ ರಾಷ್ಟ್ರೀಯ ಮಟ್ಟದ ಶಾಮನೂರು ಡೈಮಂಡ್ ಶಿವಗಂಗಾ ಟ್ರೋಫಿ-2024 ಆಯೋಜಿಸಲಾಗಿದೆ.

ರಾಜ್ಯ ಸರಕಾರದ ಭೂ ವಿಜ್ಞಾನ ಮತ್ತು ಗಣಿಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ದಾವಣಗೆರೆ ಸಂಸದೆ ಶ್ರೀಮತಿ ಪ್ರಭಾ ಮಲ್ಲಿಕಾರ್ಜುನ,ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ದಿನೇಶ್ ಕೆ ಶೆಟ್ಟಿ,ಉದ್ಯಮಿ ಶಿವಗಂಗಾ ಶ್ರೀನಿವಾಸ್,ಕುರುಡಿ ಗಿರೀಶ್ ಮತ್ತು ದಾವಣಗೆರೆಯ ಯಶಸ್ವಿ ಸಂಘಟಕ,ಕ್ರೀಡಾ ಪ್ರೋತ್ಸಾಹಕರಾದ ಜಯಪ್ರಕಾಶ್ ಗೌಡ(ಜೆಪಿ)ಇವರೆಲ್ಲರ ಒಗ್ಗೂಡುವಿಕೆಯಲ್ಲಿ ಕಳೆದ 16 ವರ್ಷಗಳಿಂದ ಯಶಸ್ವಿಯಾಗಿ ಆಯೋಜಿಸುತ್ತಾ ಬಂದಿದ್ದು,ಶಾಮನೂರು ಡೈಮಂಡ್ ಮತ್ತು ಶಿವಗಂಗಾ ಕಪ್ ಟೆನಿಸ್ಬಾಲ್ ಕ್ರಿಕೆಟ್ ವಿಶ್ವಕಪ್ ಎಂದೇ ಪ್ರಸಿದ್ಧಿ ಪಡೆದಿದೆ.

ದಾವಣಗೆರೆ ಜಿಲ್ಲಾ ಕ್ರೀಡಾಂಗಣದಲ್ಲಿ ನವೆಂಬರ್ ದಿನಾಂಕ 28 ರಿಂದ ಡಿಸೆಂಬರ್ 01ರ ತನಕ ನಡೆಯಲಿರುವ ದಾವಣಗೆರೆ ಕ್ರಿಕೆಟ್ ಹಬ್ಬದಲ್ಲಿ ರಾಷ್ಟ್ರೀಯ ಮಟ್ಟದ 50 ಕ್ಕೂ ಹೆಚ್ಚಿನ ತಂಡಗಳು ಭಾಗವಹಿಸಲು ಉತ್ಸುಕರಾಗಿದ್ದು,ಪ್ರಥಮ ಬಹುಮಾನ 5,00,555, ದ್ವಿತೀಯ 3,00,555, ತೃತೀಯ 155555 ರೂ ನಗದು ಬಹುಮಾನ‌ ಸಹಿತ ಅತ್ಯಾಕರ್ಷಕ ಪಾರಿತೋಷಕಗಳನ್ನು ನೀಡಲಾಗುತ್ತಿದ್ದು, ಗಣ್ಯಾತಿಗಣ್ಯರು,ಚಲನಚಿತ್ರ ತಾರೆಯರು,ಉದ್ಯಮಿಗಳು ಆಗಮಿಸಲಿದ್ದು ಪಂದ್ಯಾಟದ ಮೆರುಗನ್ನು ಹೆಚ್ಚಿಸಲಿದ್ದಾರೆ ಎಂದು ಪ್ರಮುಖ ಸಂಘಟಕ ಜಯಪ್ರಕಾಶ್ ಗೌಡ ಜೆ.ಪಿ ಸ್ಪೋರ್ಟ್ಸ್ ಕನ್ನಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version